Monday, September 16, 2013

ಶ್ರೀ ಚಾಮುಂಡೇಶ್ವರಿ ನಾಟಕ ಸಭೆ

 ಶ್ರೀ ಚಾಮುಂಡೇಶ್ವರಿ ನಾಟಕ ಸಭೆ ಪ್ರಾರಂಭ ಹಾಗೂ ಅಂತ್ಯ
ಎಂ. ನರಸಿಂಹಮೂರ್ತಿ


“ಶ್ರೀ ಚಾಮುಂಡೇಶ್ವರಿ ನಾಟಕ ಸಭೆ’’ ಎಂಬ ನಾಟಕ ಕಂಪನಿ ಸುಮಾರು ೧೯೨೦-೨೧ರ ಸಮಯದಲ್ಲಿ ಮೈಸೂರಿನಲ್ಲಿ ಪ್ರಾರಂಭವಾಯಿತು. ಇದನ್ನು ಪ್ರಾರಂಭಿಸಿದವರು ‘ಗೋಪಾರಾಜೇ ಅರಸ್ರವರು. ಇವರು ಮೈಸೂರು ಅರಸರ ಹತ್ತಿರದ ಸಂಬಂಧಿಯಾಗಿದ್ದು ಮಹಾರಾಜರಿಗೆ ಆಪ್ತ ಅಧಿಕಾರಿಯಾಗಿದ್ದರು..
ಮಹಾರಾಜರು ದರ್ಬಾರಿಗೆ ಬರುವ ಸಮಯದಲ್ಲಿ ಅವರ ಹಸ್ತವನ್ನು, ನೇಮಿಸಿದ ವ್ಯಕ್ತಿ (ಆಸ್ಥಾನದಲ್ಲಿ ಪ್ರಮುಖರಾಗಿರಬೇಕು) ತಮ್ಮ ಕೈಯಲ್ಲಿ ಹಿಡಿದುಕೊಂಡು ಸಿಂಹಾಸನದ ಬಳಿಗೆ ಕರೆದೊಯ್ಯುವುದು ಸಂಪ್ರದಾಯ. ಇದಕ್ಕೆ ‘ಹಸ್ತಲಾಘವ ಎಂದು ಕರೆಯುತ್ತಾರೆ. ಸಿಂಹಾಸನದಲ್ಲಿ ಮಹಾರಾಜರು ಕುಳಿತ ಮೇಲೆ ಅವರ ಹಿಂದೆ ಹೋಗಿ ನಿಲ್ಲುವುದು ಈ ಎರಡು ಕಾರ್ಯವನ್ನು ‘ಸರ್ದಾರ್ ಗೋಪಾಲರಾಜೇ ಅರಸ್ ಮಾಡುತ್ತಿದ್ದರು.
ಕುಸ್ತಿ ಸ್ಪರ್ಧೆ ನಡೆಸುವುದು, ಉತ್ತಮ ನಾಟಕಗಳನ್ನು ತಮ್ಮ ಕಂಪನಿಯ ಮೂಲಕ ಪ್ರದರ್ಶಿಸುವುದು ಇವುಗಳಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಗೋಪಾಲರಾಜೇ ಅರಸ್‌ರವರು ಈ ಎರಡು ಕಲೆಗಳನ್ನು ಬೆಳೆಸಲು ಬಹಳವಾಗಿ ಶ್ರಮಿಸಿದರು.
ನಾಟಕಕ್ಕೆ ಆಸಕ್ತಿ ತೋರುವವರು ಬೇಕು, ಕಲಾವಿದರಿಗೆ ಅನುಕೂಲವಾಗಬೇಕು, ನಾಟಕರಂಗ ಬೆಳೆಯಬೇಕು ಇದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಮೈಸೂರಿನ ಸಂತೆಪೇಟೆ ವರ್ತಕರನ್ನೆಲ್ಲಾ ಸೇರಿಸಿದರು. ನಾಟಕ ಕಂಪನಿ ಮಾಡುವ ಉದ್ದೇಶ ಕಾರ್ಯಕ್ರಮ ನಡೆಸುವ ರೀತಿ ಎಲ್ಲವನ್ನು ವಿವರಿಸಿ ಅವರೆಲ್ಲರ ಸಹಕಾರ ತೆಗೆದುಕೊಂಡು ನಾಟಕ ಕಂಪನಿ (ಶ್ರೀ ಚಾಮುಂಡೇಶ್ವರಿ ನಾಟಕ ಸಭೆ) ಪ್ರಾರಂಭಿಸಿ ಹಲವಾರು ನಾಟಕಗಳು ಪ್ರದರ್ಶನವಾಗಲು ಕಾರಣರಾಗಿದ್ದರು. ಈ ಕಂಪನಿಯಲ್ಲಿ ಹಲವಾರು ಪ್ರತಿಭಾನ್ವಿತ ನಟ, ನಟಿಯರು ಇದ್ದರು. ಮುಖ್ಯರಾದವರು ಸುಬ್ಬಣ್ಣ, ಆಸ್ಥಾನದ ಸಂಗೀತ ವಿದ್ವಾನ್ ಬಿ. ರಾಚಪ್ಪನವರು, ನಾಗೇಂದ್ರರಾಯರು.
ನಂತರ ಈ ಕಂಪನಿ ‘ಧರ್ಮರತ್ನಾಕರ ಎಂದೇ ಪ್ರಸಿದ್ಧರಾಗಿದ್ದ ನಂದಿ ಬಸಪ್ಪ ಹಾಗೂ ಮಳವಳ್ಳಿ ಸುಂದರಮ್ಮನವರ ಆಡಳಿತಕ್ಕೆ ಹೋಯಿತು. ಈ ಕಂಪನಿ ಕೆಲ ಕಾಲ ನಡೆದು ನಿಂತುಹೋಯಿತು.
ಹಿಂದೆ ನಡೆಸಿಕೊಂಡು ಬಂದಂತೆ ಬರುವ ಉತ್ಪತ್ತಿಯನ್ನು ನಟ, ನಟಿಯರಿಗೆ ಹಂಚದೆ ಅವರಿಗೆ ಮಾಹೆಯಾನ ವೇತನ ವ್ಯವಸ್ಥೆ ಮಾಡಿದುದಾಗಿ ಪ್ರಕಟಿತ ಪತ್ರದ ಮುಖೇನ ತಿಳಿದುಬರುತ್ತದೆ.
ಇದಾದ ಬಹಳ ವರ್ಷಗಳ ನಂತರ ೧೯೫೫ರ ಸಮಯದಲ್ಲಿ ಹಿಂದಿನ ಶ್ರೀ ಚಾಮುಂಡೇಶ್ವರಿ ಕಂಪನಿಯಲ್ಲಿ ಹೆಸರಾಂತ ನಟರಾಗಿದ್ದ ಬಸವರಾಜುರವರ ಸಹೋದರರ ನೇತೃತ್ವದಲ್ಲಿ ‘ಶ್ರೀ ಚಾಮುಂಡೇಶ್ವರಿ ಸಂಗೀತ ನಾಟಕ ಮಂಡಲಿ ಎಂಬ ನಾಮಾಂಕಿತದಲ್ಲಿ ಕಂಪನಿ ಮತ್ತೆ ಪ್ರಾರಂಭವಾಯಿತು. ಇದಕ್ಕೆ ತಿಗುಳರ ಪೇಟೆಯಲ್ಲಿದ್ದ ಪ್ರೊ. ಅಣ್ಣಯ್ಯಪ್ಪನವರ ಸಹಕಾರವಿತ್ತು.
ಆ ಸಮಯದಲ್ಲಿ ಪ್ರೊ. ಅಣ್ಣಯ್ಯಪ್ಪನವರು ಅತ್ಯಂತ ಶ್ರೀಮಂತಿಕೆಯ ನಾಟಕದ ಸೆಟ್‌ಗಳನ್ನು ಹೊಂದಿದ್ದರು. ಆ ಸಮಯದಲ್ಲೇ ಈ ಎಲ್ಲಾ ಸೆಟ್‌ಗಳಿಗೆ ೭೫೦೦ ರೂ.ಗಳು ಖರ್ಚಾಗಿತ್ತೆಂದು ಪತ್ರದ ಮುಖೇನ ತಿಳಿದುಬರುತ್ತದೆ.
‘ಶ್ರೀ ಚಾಮುಂಡೇಶ್ವರಿ ಸಂಗೀತ ನಾಟಕ ಮಂಡಲಿಯ ಮೂಲಕ ಆಸ್ಥಾನ ವಿದ್ವಾ ಬೆಳ್ಳಾವೆ ನರಹರಿ ಶಾಸ್ತ್ರಿಗಳ ವಿರಚಿತ ‘ದಶಾವತಾರ ನಾಟಕವನ್ನು ಬೆಂಗಳೂರಿನ ಸುಭಾಷ್ ನಗರ ಕೆರೆಯ ಆವರಣದಲ್ಲಿ (ಕೆಂಪೇಗೌಡ ಬಸ್‌ಸ್ಟ್ಟಾಂಡ್) ಪ್ರದರ್ಶಿಸಲಾಗಿತ್ತು. ದಶಾವತಾರ ನಾಟಕದ ಉದ್ಘಾಟನೆಯನ್ನು ಆಗಿನ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ಮಾಡಿದ್ದರು.
ಈ ನಾಟಕದ ಸೆಟ್‌ಗಳನ್ನು ನೋಡಲೆಂದೇ ಜನ ಮುಗಿಬಿದ್ದು ಬರುತ್ತಿದ್ದರು. ಕೆಲವು ನಾಟಕಗಳನ್ನು ಪ್ರದರ್ಶಿಸಿದ ಈ ಕಂಪನಿ ನಂತರದ ದಿನಗಳಲ್ಲಿ ನಿಂತೇ ಹೋಯಿತು.

೨೫೦/ಐ, ೨ನೇ ‘ಸಿ ಮುಖ್ಯರಸ್ತೆ, ಹೇಮಾವತಿ ರಸ್ತೆ, ಗಿರಿನಗರ, ಬೆಂಗಳೂರು-೫೬೦೦೮೫.










No comments:

Post a Comment