Tuesday, August 25, 2015

ಪ್ರಾಚೀನ ಕರ್ನಾಟಕದ ಅರಸು ಮನೆತನಗಳ ಮೂಲವನ್ನು ಸಾರುವ ಬಿರುದಾವಳಿಗಳು
ಡಾ. ಎಸ್.ವೈ. ಸೋಮಶೇಖರ್
ಕರ್ನಾಟಕದಲ್ಲಿ ವಿವಿಧ ಅರಸು ಮನೆತನಗಳು ಆಳ್ವಿಕೆ ನಡೆಸಿರುವುದು ತಿಳಿದ ವಿಷಯ. ಈ ಮನೆತನಗಳ ಆಳ್ವಿಕೆಯ ಅವಧಿಯಲ್ಲಾದ ಅನೇಕ ಸಂಗತಿಗಳು ಚರಿತ್ರೆಯಲ್ಲಿ ದಾಖಲಾಗಿವೆ. ಅವುಗಳ ಮೂಲಕ ಪ್ರಾಚೀನ ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಅಂಶಗಳನ್ನು ಕಟ್ಟಿಕೊಡುವ ಪ್ರಯತ್ನ ನಡೆಯುತ್ತಾ ಬಂದಿದೆ. ಅಂತೆಯೇ ಕರ್ನಾಟಕದ ಪ್ರಾಚೀನ ಅರಸು ಮನೆತನಗಳ ಮೂಲವನ್ನು ಕುರಿತ ಚರ್ಚೆಗಳು ನಡೆದಿವೆ ಮತ್ತು ಇಂದಿಗೂ ನಡೆಯುತ್ತಲಿವೆ. ಅದರಲ್ಲೂ ಪ್ರಾಚೀನ ಅರಸು ಮನೆತನಗಳ ಮೂಲ ಕುರಿತ ಮಾಹಿತಿಯನ್ನು ಹೊರಹಾಕಲು ಬಿರುದಾವಳಿಗಳು ಪ್ರಮುಖ ಆಕರಗಳಾಗಿ ಕಂಡುಬಂದಿರುವುದು ಗಮನಾರ್ಹ. ಪ್ರಾಚೀನ ಅರಸರು ತಮ್ಮನ್ನು ಅನೇಕ ಬಗೆಯ ಬಿರುದುಗಳಿಂದ ಬಣ್ಣಿಸಿಕೊಂಡಿರುವುದನ್ನು ಕಾಣಬಹುದು. ಕರ್ನಾಟಕದ ಪ್ರಾಚೀನ ಶಾಸನ-ಸಾಹಿತ್ಯಗಳಲ್ಲಿ ಉಲ್ಲೇಖಗೊಂಡಿರುವ ಬಿರುದುಗಳನ್ನು ಗಮನಿಸಿದರೆ ಬಿರುದಾವಳಿಗಳು ಪ್ರಾಚೀನರ ಬದುಕಿನ ಅವಿಭಾಜ್ಯ ಅಂಗಗಳೇನೋ ಎಂಬಂತೆ ಭಾಸವಾಗುತ್ತದೆ. ಈ ಬಗೆಯ ಬಿರುದುಗಳು ಹೆಚ್ಚಾಗಿ ವಿಶೇಷಣಗಳೇ ಆಗಿವೆ. ಹಾಗಿದ್ದೂ ಮನೆತನಗಳ ಮೂಲವನ್ನು ಕುರಿತಂತೆ ಹೇಳುವುದಾದರೆ ಇವು ಅಧಿಕೃತ ಆಕರಗಳಾಗಿಯೇ ನಿಲ್ಲುತ್ತಿರುವುದು ಗಮನೀಯ ಅಂಶ. ಬಿರುದಾವಳಿಗಳಲ್ಲಿ ಅರಸು ಮನೆತನ, ಕುಲಮೂಲ, ವಂಶ, ರಾಜಧಾ£ ಮೊದಲಾದ ವಿವರಗಳಿವೆ. ಅವುಗಳನ್ನು ಗುರುತಿಸಿ ವಿಶ್ಲೇಷಿಸುವ ಪ್ರಯತ್ನ ಪ್ರಸ್ತುತ ಪ್ರಬಂಧದ್ದು.
ಆಕರಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಕರ್ನಾಟಕದಲ್ಲಿ ಮನೆತನಗಳನ್ನು ಕುರಿತ ಬಿರುದಾವಳಿಗಳು ಕಂಡುಬರುವುದು ಕದಂಬರ ಕಾಲದಿಂದ. ತಮ್ಮ ಕುಲಮೂಲ, ವಂಶ, ಮನೆತನ, ರಾಜಧಾನಿ ಪ್ರದೇಶಗಳನ್ನು ತಿಳಿಸುವ ಬಿರುದುಗಳು ಕದಂಬರಿಂದ ಆರಂಭವಾಗಿ ಪಾಳೆಯಗಾರರ ಕಾಲದವರೆಗೂ ಮುಂದುವರಿದಿವೆ.
ಕದಂಬ ಮನೆತನದ ಆರಂಭದ ಅರಸರು ತಾವು ಆಳುತ್ತಿದ್ದ ಪ್ರದೇಶವನ್ನೂ ಬಿರುದುಗಳ ಮೂಲಕ ಪ್ರಕಟಪಡಿಸಿದ್ದಾರೆ. ಆರಂಭದ ಅರಸ ಕಂಗವರ್ಮನು ತನ್ನನ್ನು ಕುಂತಲ ಭೂವಲ್ಲಭನೆಂದು ಕರೆದುಕೊಂಡಿದ್ದಾನೆ. ಇದರಿಂದ ಕುಂತಲನಾಡು ಇವರ ಆಳ್ವಿಕೆಯ ನೆಲೆವೀಡಾಗಿದ್ದುದು ಸ್ಪಷ್ಟವಾಗುತ್ತದೆ. ಹಾಗೆಯೇ ಇವರ ಮನೆತನವನ್ನು ಕುರಿತ ಬಿರುದುಗಳು ಕಾಕುಸ್ಥವರ್ಮನ ಕಾಲದಿಂದ ಕಂಡುಬರುತ್ತವೆ. ಇವನನ್ನು ಶಾಸನಗಳಲ್ಲಿ ಕದಂಬಕುಲ ಶಿರೋಮಣಿ, ಕದಂಬಕುಲ ಭೂಷಣನೆಂದು ಹೊಗಳಿವೆ. ರವಿವರ್ಮನನ್ನು ಕದಂಬತೃಣೀತ, ಕದಂಬ ಕಂಠೀರವನೆಂದು ಕರೆಯುವ ಜೊತೆಗೆ ಅವನ ರಾಜಧಾನಿ ವಿವರವುಳ್ಳ ಕುಂತಲ ಭೂವಲ್ಲಭ, ಬನವಾಸಿ ಪುರವರಾಧೀಶ್ವರ, ಬನವಾಸಿ ವಿಷಯಾಧೀಶ್ವರ ಎಂಬ ಬಿರುದುಗಳು ಕಾಣಬರುತ್ತವೆ. ಈ ಬಗೆಯ ಬಿರುದುಗಳನ್ನು ಕದಂಬರು ಸ್ವತಂತ್ರವಾಗಿ ಆಳ್ವಿಕೆ ಮಾಡುವಾಗಲೂ, ಸಾಮಂತ, ಮಾಂಡಲಿಕರಾಗಿ ಆಳುತ್ತಿದ್ದಾಗಲೂ ಧರಿಸಿರುವರು. ಕದಂಬರಲ್ಲಿ ಅನೇಕ ಶಾಖೆಗಳಿವೆ. ಅವು ಗೋವಾ ಕದಂಬರು, ಹಾನಗಲ್ಲು ಕದಂಬರು ಇತ್ಯಾದಿ. ಈ ಎಲ್ಲ ಶಾಖೆಗಳವರೂ ತಮ್ಮ ಮನೆತನದ ಮೂಲ ಬಿರುದುಗಳನ್ನು ಧರಿಸುವ ಪರಿಪಾಠವನ್ನು ಮುಂದುವರಿಸಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸಾಮಂತ, ಮಾಂಡಲಿಕರಾಗಿ ಆಳುತ್ತಿದ್ದ ಆದಿತ್ಯವರ್ಮರಸ (ಕ್ರಿ.ಶ. 992), ಹರಿಕೇಶ್ವರದೇವ (ಕ್ರಿ.ಶ. 1055) ಬನವಾಸಿ ಪುರವರಾಧೀಶ್ವರರೆಂದು ಕರೆದುಕೊಂಡಿದ್ದಾರೆ. ಹರಿಕೇಶ್ವರದೇವನು ಕದಂಬ ಚಕ್ರವರ್ತಿ. ಕದಂಬಕುಳಕಮಳ ಮಾರ್ತಾಂಡ, ಕಾದಂಬ ಚಕ್ರಿಯೆಂದೂ1 ತೋಯಿಮರಸದೇವ (ಕ್ರಿ.ಶ. 1067) ಕದಂಬಕುಲ ಭೂಷಣ,2 ನಾಗವರ್ಮರಸ (ಕ್ರಿ.ಶ. 1077) ಕದಂಬಾಭರಣ,3 ನಾಚಿದೇವರಸ (ಕ್ರಿ.ಶ. 1085) ಕದಂಬಕುಲಕಮಲ ಮಾರ್ತಾಂಡ,4 ವೀರಪೆರ್ಮಾಡಿದೇವರಸÀ (ಕ್ರಿ.ಶ. 1173) ಕದಂಬವಂಶ ಮಹೋದಯ, ಕಾದಂಬ ಚೂಡಾಮಣಿ ಎಂದು ವಿಶಿಷ್ಟವಾಗಿ ಬಣ್ಣಿಸಿಕೊಂಡಿದ್ದಾನೆ.5 ಹಾಗೆಯೇ ಹಾನಗಲ್ಲಿನ ಕದಂಬರಾದ 2ನೇ ಶಾಂತಿವರ್ಮ (ಕ್ರಿ.ಶ.1075) ಕದಂಬ ಕಂಠೀರವನೆಂದೂ,6 1ನೇ ಕೀರ್ತಿವರ್ಮ ಕಾದಂಬಚಕ್ರಿ, ಕಾದಂಬರಾಭರಣನೆಂದು ಕರೆದುಕೊಂಡಿದ್ದಾರೆ.7 ವಿಜಯನಗರ ಕಾಲದಲ್ಲಿ ಬನವಾಸಿ ಪ್ರದೇಶವನ್ನು ನೋಡಿಕೊಳ್ಳುತ್ತಿದ್ದ ಬಿಕ್ಕಿದೇವ ಒಡೆಯ (ಕ್ರಿ.ಶ.1369)ನನ್ನು ಕದಂಬರಾಯ ಕುಲಾಚಾರ್ಯನೆಂದು ಕರೆಯಲಾಗಿದೆ.8 ಒಟ್ಟಿನಲ್ಲಿ ಈ ಮೇಲಿನ ಬಿರುದಾವಳಿಗಳಿಂದ ಕದಂಬ ಮನೆತನ ಕುರಿತು ಹಾಗೂ ಅವರ ಆಳ್ವಿಕೆ ಕ್ರಿ.ಶ. 4ನೆಯ ಶತಮಾನದಿಂದ ಹಿಡಿದು 14ನೆಯ ಶತಮಾನದ ವರೆಗೆ ಒಂದಲ್ಲಾ ಒಂದು ಬಗೆಯಲ್ಲಿ ಕರ್ನಾಟಕದಲ್ಲಿ ಮುಂದುವರಿದದ್ದು ಸ್ಪಷ್ಟವಾಗುತ್ತದೆ.
ಕದಂಬರ ಬಳಿಕ ಕಾಣಬರುವ ಅರಸು ಮನೆತನ ಗಂಗರದು. ಗಂಗರು ಕರ್ನಾಟಕದಲ್ಲಿ ಸುದೀರ್ಘ ಆಳ್ವಿಕೆ ನಡೆಸಿದ್ದಾರೆ. ಕೊಂಗಣಿವರ್ಮ ಈ ಮನೆತನದ ಮೂಲಪುರುಷ. ಈತನಿಗೆ ಪ್ರಥಮ ಗಂಗನೆಂಬ ಬಿರುದಿತ್ತು. ಅಲ್ಲದೆ ಮೂಲಪುರುಷನಾದ ಇವನ ಹೆಸರನ್ನು ನಂತರ ಬಂದ ಈ ಮನೆತನದ ಅರಸರು ವಿಶೇಷಣವಾಗಿ ಧರಿಸಿದ್ದುದು ಕಂಡುಬರುತ್ತದೆ. ಅಂತೆಯೇ ಅವರು ಕೊಂಗಣಿವÀರ್ಮ ಧರ್ಮಮಹಾರಾಜ, ಸ್ಥಿರಪೃಥಿವೀ ಕೊಂಗಣಿ ಎಂಬುದಾಗಿ ತಮ್ಮನ್ನು ಕರೆದುಕೊಂಡಿದ್ದಾರೆ. ಹಾಗೆಯೇ ಗಂಗ ಎಂಬುದನ್ನು ಬಹಳ ವಿಶಿಷ್ಟವಾಗಿ ಬಿರುದುಗಳಲ್ಲಿ ಬಳಸಿದ್ದಾರೆ. 1ನೇ ನೀತಿಮಾರ್ಗ ಎರೆಯಂಗÀ (ಕ್ರಿ.ಶ. 843-870)ನು ಗಂಗಚಕ್ರಾಯುಧಾಂಕ, ಗಂಗನಾರಾಯಣ ನೆಂದು9 ಕರೆದುಕೊಂಡರೆ, ಸಾಮಂತ, ಮಾಂಡಲಿಕರಾಗಿ ಆಳ್ವಿಕೆ ನಡೆಸಿದ 2ನೇ ಬೂತುಗÀ (ಕ್ರಿ.ಶ. 936-961)ನು ಗಂಗಗಾಂಗೇಯ, ನನ್ನಿಯಗಂಗ, ಗಂಗಾನ್ವಯ ಕುಲತಿಲಕನೆಂದೂ,10 ಮರುಳದೇವನು ಗಂಗಮಾರ್ತಾಂಡ, 2ನೇ ಮಾರಸಿಂಹನು ಗಂಗಕಂದರ್ಪ, ಗಂಗಚೂಡಾಮಣಿ, ಗಂಗರಸಿಂಹ, ಗಂಗವಜ್ರ, ಗುತ್ತಿಯಗಂಗನೆಂದೂ11 ಬಣ್ಣಿಸಿಕೊಂಡಿದ್ದಾರೆ. ಕಲ್ಯಾಣ ಚಾಲುಕ್ಯ ಅವಧಿಯಲ್ಲಿದ್ದ ಗಂಗರಸ (ಕ್ರಿ.ಶ. 1120)ನನ್ನು ಕೊಳಾಲ ಪುರವರಾಧೀಶ್ವರ, ನನ್ನಿಯ ಗಂಗನೆಂದು ಶಾಸನದಲ್ಲಿ ಕರೆಯಲಾಗಿದೆ.12 ಹೀಗೆ ತಮ್ಮ ಮನೆತನವನ್ನು ಸೂಚಿಸುವ ಗಂಗ ಪದವನ್ನು ಹಾಗೂ ತಮ್ಮ ಮೂಲ ರಾಜಧಾನಿ ಕೋಳಾಲಪುರ(ಕೋಲಾರ)ವನ್ನು ಬಿರುದಿನಲ್ಲಿ ಧರಿಸುವ ಮೂಲಕ ತಮ್ಮ ಮೂಲವನ್ನು ಉಲ್ಲೇಖಿಸುವ ಪ್ರಯತ್ನ ಮಾಡಿರುವುದು ಗಮನಾರ್ಹ.
ಕರ್ನಾಟಕದ ಚರಿತ್ರೆಯಲ್ಲಿ ಚಾಲುಕ್ಯ ಮನೆತನದ ಪಾತ್ರ ಮಹತ್ವದ್ದು. ಇವರು ಬಾದಾಮಿ, ವೆಂಗಿ ಹಾಗೂ ಕಲ್ಯಾಣದ ಚಾಲುಕ್ಯರೆಂದೇ ಪ್ರಸಿದ್ಧರಾಗಿದ್ದಾರೆ. ಈ ಮನೆತನಗಳ ಅರಸರು ತಮ್ಮ ಮೂಲವನ್ನು ಚಲುಕ್ಯ, ಚಳುಕ್ಯ, ಚಾಲುಕ್ಯ ಎಂಬುದಾಗಿ ಸ್ಪಷ್ಟಪಡಿಸಿರುವರು. ಇದಕ್ಕೆ ಅನೇಕ ಬಿರುದುಗಳು ಸಾಕ್ಷ್ಯಗಳಾಗಿವೆ.
ಬಾದಾಮಿ ಚಾಲುಕ್ಯ ಮನೆತನದ ಆರಂಭಿಕ ಅರಸನಾದ ಜಯಸಿಂಹನು ವಲ್ಲಭೇಶ್ವರನೆಂದು ಕರೆದುಕೊಂಡಿದ್ದರೆ, 1ನೇ ಪುಲಕೇಶಿ (ಕ್ರಿ.ಶ. 543-567) ಚಾಳುಕ್ಯ ವಲ್ಲಭೇಶ್ವರನೆಂದು ಬಣ್ಣಿಸಿಕೊಂಡಿದ್ದಾನೆ.13 1ನೇ ಕೀರ್ತಿವರ್ಮನನ್ನು ಚಾಲುಕ್ಯ ವಂಶಾಂಬರನೆಂದು ಕರೆದರೆ,14 ಇಮ್ಮಡಿ ಪುಲಕೇಶಿಯನ್ನು ಚಲುಕಿ ಕುಲಾಲಂಕಾರನೆಂದೂ ವರ್ಣಿಸಲಾಗಿದೆ.15 ಈ ಬಿರುದುಗಳನ್ನು ಮುಂದೆ ಬಂದ ಅರಸರು ಸಾಮಾನ್ಯವಾಗಿ ಧರಿಸಿದ್ದಾರೆ.
ರಾಷ್ಟ್ರಕೂಟರ ಅವಧಿಯಲ್ಲಿ ಮಹಾಸಾಮಂತನಾಗಿ ಕೋಗಳಿ-500ನ್ನು ಆಳುತ್ತಿದ್ದ ಕತ್ಯೆರ (ಕ್ರಿ.ಶ.944)ನು ತನ್ನನ್ನು ಚಾಳುಕ್ಯ ವಂಶೋದ್ಭವನೆಂದೂ,16 ಅದೇ ಅವಧಿಯ ಧೋರಪಯ್ಯ (ಕ್ರಿ.ಶ. 954)ನು ಚಾಳುಕ್ಯ ನಾರಾಯಣನೆಂದು ಕರೆದುಕೊಂಡಿದ್ದಾರೆ.17 ಇದರಿಂದ ರಾಷ್ಟ್ರಕೂಟರ ಅವಧಿಯಲ್ಲಿ ಚಾಲುಕ್ಯರು ಸ್ವತಂತ್ರವಾಗಿ ಆಳ್ವಿಕೆ ನಡೆಸದಿದ್ದರೂ ಸಾಮಂತರಾಗಿ ಅಧಿಕಾರದಲ್ಲಿ ಮುಂದುವರಿದುದು ದೃಢವಾಗುತ್ತದೆ. ಹಾಗೆಯೇ ರಾಷ್ಟ್ರಕೂಟರನ್ನು ಹತ್ತಿಕ್ಕಿಬಂದ ಕಲ್ಯಾಣ ಚಾಲುಕ್ಯರು ತಮ್ಮ ಮೂಲವನ್ನು ಹೆಮ್ಮೆಯಿಂದ ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಕಲ್ಯಾಣ ಚಾಲುಕ್ಯ ಮನೆತನದ ಮೊದಲ ಅರಸ 2ನೇ ತೈಲಪನು ಚಾಳುಕ್ಯ ರಾಮ, ಚಾಳುಕ್ಯಾಭರಣ, ಚಾಳುಕ್ಯ ವಂಶೋದ್ಭವನೆಂದು ಕರೆಯುವ ಮೂಲಕ ಚಾಳುಕ್ಯ ಮನೆತನದವನೆಂದು ತನ್ನನ್ನು ಸ್ಪಷ್ಟಪಡಿಸಿಕೊಂಡಿದ್ದಾನೆ.18 ಹಾಗೆಯೇ ಇವನು ರಾಷ್ಟ್ರಕೂಟರನ್ನು ಅಧಿಕಾರದಿಂದ ಕಿತ್ತೊಗೆದು ರಟ್ಟಘರಟ್ಟನೆಂದು ಕರೆದುಕೊಂಡಿದ್ದಾನೆ. ಇವನ ನಂತರ ಬಂದ ಸತ್ಯಾಶ್ರಯ (ಕ್ರಿ.ಶ. 997-1008)ನು ಚಾಳುಕ್ಯ ಕಂದರ್ಪ, ಚಾಳುಕ್ಯ ಮಾರ್ತಾಂಡನೆಂದೂ,19 5ನೇ ವಿಕ್ರಮಾದಿತ್ಯ ಸತ್ಯಾಶ್ರಯ ಕುಳತಿಳಕ,20 1ನೇ ಸೋಮೇಶ್ವರ ಚಾಳುಕ್ಯ ಚೂಡಾಮಣಿ,21 ವಿಜಯಾದಿತ್ಯ ಚಾಳುಕ್ಯ ಮಾಣಿಕ್ಯ,22 6ನೇ ವಿಕ್ರಮಾದಿತ್ಯ ಚಾಳುಕ್ಯ ನಾರಾಯಣ, ಚಾಳುಕ್ಯಾಭರಣ, ಚಾಳುಕ್ಯ ಚಕ್ರೇಶ್ವರ ಎಂದು ಕರೆದುಕೊಂಡಿದ್ದಾರೆ.23 2ನೇ ಜಗದೇಕಮಲ್ಲನು ಮುಂದುವರಿದು ಚಾಳುಕ್ಯ ಪ್ರತಾಪಚಕ್ರವರ್ತಿ, ಚಾಲುಕ್ಯ ವಂಶಲಲಾಮನೆಂದೂ,24 3ನೇ ತೈಲಪನು ಶ್ರೀಮದ್ವಿಕ್ರಮ ಚಕ್ರವರ್ತಿಯೆಂದೂ ಕರೆದುಕೊಂಡಿರುವರು.25 ಕಲ್ಯಾಣ ಚಾಲುಕ್ಯ ಮನೆತನದ ಕೊನೆಯ ಅರಸನಾದ 4ನೇ ಸೋಮೇಶ್ವರನು ಈ ಮೇಲಿನ ಬಿರುದುಗಳಲ್ಲದೆ ಕಲಚೂರ್ಯರಿಂದ ಸಾಮ್ರಾಜ್ಯವನ್ನು ವಶಮಾಡಿಕೊಂಡ ನೆನಪಿಗೆ ಕಲಚೂರ್ಯ ಕುಲನಾಶಕನೆಂಬ ಬಿರುದನ್ನು ಧರಿಸಿದ್ದಾನೆ.26 ಹಾಗೆಯೇ ಚಾಲುಕ್ಯ ಸಾಮ್ರಾಜ್ಯವನ್ನು ಪುನರ್‍ಸ್ಥಾಪಿಸಿದ ಹಿನ್ನೆಲೆಯಲ್ಲಿ ಚಾಲುಕ್ಯರಾಜ ಸಮುದ್ದರಣನೆಂದೂ ತನ್ನನ್ನು ಕರೆದುಕೊಂಡಿರುವನು.
ಚಾಲುಕ್ಯ ಮನೆತನವು ಕಲ್ಯಾಣ ಚಾಲುಕ್ಯರ ಕಾಲಕ್ಕೇ ಕೊನೆಗೊಳ್ಳಲಿಲ್ಲ. ವಿಜಯನಗರ ಕಾಲದಲ್ಲಿ (ಕ್ರಿ.ಶ. 1387) ಆಳುತ್ತಿದ್ದ ವಲ್ಲಭರಾಯ ಮಹಾರಾಜ ಎಂಬುವವನು ತನ್ನನ್ನು ಚಾಳುಕಿ ಚಕ್ರವರ್ತಿ, ಚಾಳುಕಿ ನಾರಾಯಣನೆಂದು ಕರೆದುಕೊಂಡಿದ್ದಾನೆ.27 ಇದರಿಂದ ಚಾಲುಕ್ಯ ಮನೆತನದ ಅಸ್ತಿತ್ವ ಕ್ರಿ.ಶ. 6ನೇ ಶತಮಾನದಿಂದ 14ನೇ ಶತಮಾನದವರೆಗೂ ಕರ್ನಾಟಕದ ಇತಿಹಾಸದಲ್ಲಿ ವಿರಾಜಮಾನರಾಗಿ ಇದ್ದುದನ್ನು ಬಿರುದಾವಳಿಗಳಿಂದ ಗುರುತಿಸಬಹುದಾಗಿದೆ.
ಕರ್ನಾಟಕದಲ್ಲಿ ಚಾಲುಕ್ಯರಂತೆಯೇ ರಾಷ್ಟ್ರಕೂಟರು ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ್ದಾರೆ. ಇವರಲ್ಲಿ ಒಬ್ಬೊಬ್ಬ ಅರಸ ಒಂದೊಂದು ಬಗೆಯ ವಿಶಿಷ್ಟ ಬಿರುದಿನ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. 1ನೇ ಕೃಷ್ಣನು ಅಕಾಲವರ್ಷನೆಂದೂ, 2ನೇ ಗೋವಿಂದನು ಪ್ರಭೂತವರ್ಷ, ಧ್ರುವನು ಧಾರಾವರ್ಷ, ಅಮೋಘವರ್ಷನು ನಿತ್ಯವರ್ಷ, 4ನೇ ಗೋವಿಂದನು ಸುವರ್ಣವರ್ಷ ಎಂದು ಬಣ್ಣಿಸಿಕೊಂಡಿರುವುದು ಗಮನಾರ್ಹ. ಹಾಗೆಯೇ ಈ ಮನೆತನದವರು ತಮ್ಮ ಮನೆತನ, ವಂಶ, ರಾಜಧಾನಿಗಳನ್ನೂ ಬಿರುದಾವಳಿಗಳ ಮೂಲಕ ದಾಖಲಿಸಿದ್ದಾರೆ. ಅದರಲ್ಲೂ ತಮ್ಮ ಮೂಲ ರಾಜಧಾನಿ ಲಟ್ಟಲೂರೆಂದೂ, ತಾವು ರಟ್ಟರು ಹಾಗೂ ಯಾದವ ವಂಶದವರೆಂದು ಗುರುತಿಸಿಕೊಂಡಿದ್ದಾರೆ. 1ನೇ ಕೃಷ್ಣನು ತನ್ನನ್ನು ಯಾದವ ವಂಶೋದ್ಭವನೆಂದು28 ಕರೆದುಕೊಳ್ಳುವ ಮೂಲಕ ಯಾದವ ವಂಶದವನೆಂದು ದಾಖಲಿಸುತ್ತಾನೆ. ಅಮೋಘವರ್ಷನು ತನ್ನ ಮೂಲ ರಾಜಧಾನಿ ಕುರಿತಂತೆ ಲಟ್ಟಲೂರ ಪುರವರಾಧೀಶ್ವರನೆಂದೂ ಕರೆದುಕೊಂಡಿದ್ದಾನೆ. ಹಾಗೆಯೇ ತನ್ನ ಕುಲಮೂಲವನ್ನು ಕುರಿತಂತೆ ಯದುಕುಳನರಪಾಳನೆಂದೂ ಕರೆದುಕೊಂಡಿರುವನು.29 3ನೇ ಇಂದ್ರನು ರಟ್ಟಕಂದರ್ಪ, ರಟ್ಟರ ಮೇರು, ಲತ್ತಲೂರ ಪುರಪರಮೇಶ್ವರನೆಂದೂ,30 3ನೇ ಕೃಷ್ಣನು ರಟ್ಟಕುಲ ಚಕ್ರವರ್ತಿ, ರಟ್ಟಕುಲಾನ್ವಯನೆಂದೂ,31 ಕೊಟ್ಟಿಗದೇವನು ರಟ್ಟತಿಲಕನೆಂದೂ,32 ಬನವಾಸಿಯ ಸಾಮಂತನಾಗಿದ್ದ ಶಂಕರಗಂಡನು (ಕ್ರಿ.ಶ. 924) ರಟ್ಟರ ಮೇರು ಎಂಬುದಾಗಿ ಕರೆದುಕೊಂಡಿದ್ದಾರೆ.33 4ನೇ ಕೃಷ್ಣನು ಮಾನ್ಯಖೇಟ ಪುರಭೂಷಣನೆಂದು ಕರೆದುಕೊಳ್ಳುವ ಮೂಲಕ ಲತ್ತಲೂರಿನಿಂದ ರಾಜಧಾನಿಯನ್ನು ಮಾನ್ಯಖೇಟಕ್ಕೆ ವರ್ಗಾಯಿಸಿದ್ದುದು ತಿಳಿಯುತ್ತದೆ.34 ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಅವಧಿಯಲ್ಲಿ ರಾಷ್ಟಕೂಟರು ಸಾಮಂತರಾಗಿ ಆಳಿದ ವಿವರಗಳು ಶಾಸನಗಳಲ್ಲಿ ಗೋಚರಿಸುತ್ತದೆ. ಕ್ರಿ.ಶ. 1062ರಲ್ಲಿ ಮಹಾರಾಷ್ಟ್ರ ಭಾಗದಲ್ಲಿ ಮಹಾಸಾಮಂತನಾಗಿದ್ದ ಕಾಳಸೇನರಸನನ್ನು ರಟ್ಟಕುಲಭೂಷಣನೆಂದು ಶಾಸನವೊಂದರಲ್ಲಿ  ಕರೆಯಲಾಗಿದೆ.35 ಈ ಮೇಲಿನ ಬಿರುದುಗಳಿಂದ ರಾಷ್ಟ್ರಕೂಟರು ತಮ್ಮನ್ನು ರಟ್ಟರು, ರಾಷ್ಟ್ರಕೂಟರು, ರಟ್ಟ ಕುಲದವರೆಂದೂ, ಹಾಗೆಯೇ ಯಾದವ ಅಥವಾ ಯದುಂಶದವರೆಂದು ಕರೆದುಕೊಂಡಿರುವುದು ಗಮನೀಯ ಸಂಗತಿ.
ಕಲ್ಯಾಣ ಚಾಲುಕ್ಯರ ಬಳಿಕ ಆಳಿದ ಕಲ್ಯಾಣದ ಕಲಚೂರಿಗಳು ತಮ್ಮ ಮನೆತನದ ಮೂಲವನ್ನು ಬಿರುದುಗಳಲ್ಲಿ ದಾಖಲಿಸಿದ್ದಾರೆ. ಇಮ್ಮಡಿ ಬಿಜ್ಜಳದೇವ ತನ್ನನ್ನು ಕಳಚೂರ್ಯ ಚಕ್ರವರ್ತಿ, ಕಳಚೂರ್ಯ ಕುಳಕಮಳಮಾರ್ತಾಂಡ, ಕಾಳಂಜರ ಪುರವರಾಧೀಶ್ವರನೆಂದು ಕರೆದುಕೊಂಡಿದ್ದಾನೆ. ಹಾಗೆಯೇ ತನ್ನ ರಾಜಧಾನಿ ಕುರಿತಂತೆ ಕಲ್ಯಾಣ ಪುರವರಾಧೀಶನೆಂದೂ ಬಣ್ಣಿಸಿಕೊಂಡಿರುವನು.36 ಇವೇ ಬಿರುದುಗಳನ್ನು ಈ ಮನೆತನದ ಮುಂದಿನ ಅರಸರೂ ಧರಿಸಿದ್ದಾರೆ. ಮಲ್ಲುಗಿದೇವನು ಕಳಚೂರ್ಯ ಪ್ರತಾಪಚಕ್ರವರ್ತಿಯೆಂದು ತನ್ನನ್ನು ಕರೆದುಕೊಂಡಿರುವನು.
ನೊಳಂಬ ಅರಸರ ಆಳ್ವಿಕೆಯನ್ನು ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ ಕಾಣುತ್ತೇವೆ. ಇವರಲ್ಲಿ ಸಿಂಹಪೋತಕಲಿಯು ತನ್ನನ್ನು ನೊಳಂಬಾಧಿರಾಜ, ಪಲ್ಲವಾನ್ವಯ, ಪಲ್ಲವ ಕುಲತಿಲಕನೆಂದು ಕರೆದುಕೊಂಡಿದ್ದಾನೆ.37 ಇದರಿಂದ ನೊಳಂಬರು ಪಲ್ಲವ ವಂಶಕ್ಕೆ ಸೇರಿದವರೆಂದು ಗೊತ್ತಾಗುತ್ತದೆ. ನೊಳಂಬ ದಿಲೀಪನು ನೊಳಂಬ ನಾರಾಂiÀiಣ, ಪಲ್ಲವರಮ, ಪಲರೊಡೆಗಂಡ, ಪಲ್ಲವಮುರಾರಿ, ಪಲ್ಲವಾದಿತ್ಯ, ಪಲ್ಲವೋಳ್ಗಂಡ ಎಂಬ ವಿಶಿಷ್ಟ ಬಿರುದುಗಳಿಂದ ಖ್ಯಾತಿ ಹೊಂದಿದ್ದುದಲ್ಲದೆ ಅವನು ತಾನು ಪಲ್ಲವ ಮನೆತನದವನೆಂಬುದನ್ನು ಒತ್ತಿ ಹೇಳಿಕೊಂಡಿದ್ದಾನೆ. ಹಾಗೆಯೇ 2ನೇ ಮಹೇಂದ್ರನು ಪಲ್ಲವಾಭರಣ,38 2ನೇ ಇರಿವ ನೊಳಂಬನು ಕಾಂಚೀಪುರವರೇಶ್ವರ, ಉದಯಾದಿತ್ಯ ಕಾಂಚಿಪುರವರೇಶ್ವರ, ನೊರೆಯೂರು ಪುರವರಾಧೀಶ್ವರ, ಪಲ್ಲವ ಕುಲಾನ್ವಯನೆಂದು ಕರೆದುಕೊಂಡಿದ್ದಾರೆ.39 ಹೀಗೆ ನೊಳಂಬರು ತಾವು ಮೂಲತಃ ತಮಿಳುನಾಡಿನ ಕಂಚಿಯವರಾಗಿದ್ದು ಪಲ್ಲವ ಮನೆತನಕ್ಕೆ ಸೇರಿದವರೆಂಬುದನ್ನು ದಾಖಲಿಸಿರುವುದು ಗಮನಾರ್ಹ.
ಕಲ್ಯಾಣ ಚಾಲುಕ್ಯರ ನಂತರ ಬಂದ ದೇವಗಿರಿ ಯಾದವರು ಅಥವಾ ಸೇವುಣರು ತಮ್ಮನ್ನು ಯಾದವರೆಂದೇ ಗುರುತಿಸಿಕೊಂಡಿದ್ದಾರೆ. ಈ ಮನೆತನದ 5ನೇ ಭಿಲ್ಲಮ ಯಾದವ ನಾರಾಯಣ, ಯಾದವ ಚಕ್ರವರ್ತಿ, ವಿಷ್ಣು ವಂಶೋದ್ಭವನೆಂಬ ಬಿರುದುಗಳನ್ನು ಹೊಂದಿದ್ದನು.40 ಜೈತುಗಿಯು ದ್ವಾರಾವತಿ ಪುರವರಾಧೀಶ್ವರ, ಯಾದವ ವಂಶಾಂಬರದ್ಯುಮಣಿ, ಯಾದವಕುಳಕಮಲನೆಂದೂ ಬಣ್ಣಿಸಿಕೊಂಡಿದ್ದಾನೆ.41 ಹಾಗೆಯೇ 2ನೇ ಸಿಂಗಣನನ್ನು ಯಾದವಕುಳಕಮಲ ಮಾರ್ತಾಂಡನೆಂದು ಕರೆದರೆ,42 ಕನ್ನರ ದೇವನನ್ನು ಯಾದವಕುಲತಿಲಕನೆಂದು ಬಣ್ಣಿಸಲಾಗಿದೆ.43 ಇವೇ ಬಿರುದುಗಳನ್ನು ಮುಂದೆ ಬಂದ ಅರಸರೂ ಧರಿಸಿದ್ದಾರೆ. ಸೇವುಣರು ತಾವು ಯಾದವ ಕುಲದವರೆಂಬುದನ್ನು ಬಿರುದುಗಳ ಮೂಲಕ ಒತ್ತಿ ಹೇಳಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು. ಇದೇ ಅವಧಿಯಲ್ಲಿ ಆಳ್ವಿಕೆ ನಡೆಸಿದ ಹೊಯ್ಸಳರು ಕೂಡ ತಮ್ಮನ್ನು ದ್ವಾರಾವತೀ ಪುರವರಾಧೀಶ್ವರರೆಂದು ಕರೆದುಕೊಂಡಿದ್ದಾರೆ. ವಿಷ್ಣುವರ್ಧನ, ವೀರ ನರಸಿಂಹ, 2ನೇ ನರಸಿಂಹ ಮೊದಲಾದವರು ಯಾದವಕುಲತಿಲಕ, ಯಾದವನಾರಾಯಣ, ಯಾದವ ಕುಲಾಂಬರದ್ಯುಮಣಿಯೆಂದು ಹೇಳಿಕೊಳ್ಳುವ ಮೂಲಕ ತಾವು ಯಾದವ ವಂಶಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ.44
ಕಮ್ಮಟದುರ್ಗದ ಕಂಪಿಲರಾಯನು ತನ್ನನ್ನು ಯಾದವ ನಾರಾಯಣನೆಂದು ಕರೆದುಕೊಡಿದ್ದಾನೆ.45 ವಿಜಯನಗರ ಅರಸರ ಕಾಲದಲ್ಲಿ ಅನೇಕ ಬಗೆಯ ಬಿರುದುಗಳನ್ನು ಶಾಸನ
ಸಾಹಿತ್ಯಗಳಲ್ಲಿ ಕಾಣುತ್ತೇವೆ. ಅವರು ಹಿಂದೂರಾಯ ಸುರತ್ರಾಣ, ದಕ್ಷಿಣ ಸಮುದ್ರಾಧೀಶ್ವರ, ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಸಮುದ್ರಾಧಿಪತಿ ಮುಂತಾಗಿ ಬಣ್ಣಿಸಿಕೊಂಡಿದ್ದಾರೆ. ಹಾಗೆಯೇ ಇವರ ಬಿರುದುಗಳಲ್ಲಿ ತಮ್ಮ ಮನೆತನವನ್ನು ಹೇಳಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. 2ನೇ ಹರಿಹರನು ಪಡವಾರ ವಂಶೋದ್ಭವನೆಂದೂ,46 2ನೇ ದೇವರಾಯನು ವಿಜಯನಗರ ಪುರವರಾಧೀಶ್ವರ,47 ಶ್ರೀಕೃಷ್ಣದೇವರಾಯನು ತೌಳವಂಶಾಬ್ದಿಚಂದ್ರ, ಯಾದವಕುಲಾಂಬರದ್ಯುಮಣಿಯೆಂದು ತಮ್ಮನ್ನು ಕರೆದುಕೊಂಡಿದ್ದಾನೆ.48 ಈ ಮೇಲಿನ ಬಿರುದುಗಳಿಂದ ವಿಜಯನಗರ ಅರಸರ ಮೂಲವನ್ನು ಕುರಿತು ಚರ್ಚಿಸುವ ಅಗತ್ಯವಿದೆ.
ವಿಜಯನಗರ ನಂತರ ಬಂದ ಮೈಸೂರು ಒಡೆಯರು ಅನೇಕ ಬಿರುದುಗಳನ್ನು ಧರಿಸಿದ್ದರು. ಅವುಗಳಲ್ಲಿ ಬಿರುದಂತೆಂಬರ ಗಂಡ ಎಂಬುದು ಚಿರಪರಿಚಿತವಾದುದು. ಈ ಮನೆತನದ ಮೂಲವನ್ನು ಕುರಿತ ಬಿರುದುಗಳಲ್ಲಿ ಚಿಕ್ಕದೇವರಾಯ ಒಡೆಯರು ಯಾದವಕುಲೋದ್ದರಣ ಧುರೀಣ ಎಂದೂ,49 ಮುಮ್ಮಡಿ ಕೃಷ್ಣರಾಜ ಒಡೆಯ ಯದುಕುಲಪಯಃ ಪಾರಾವಾರ ಕಳಾನಿಧಿ ಎಂದು ಕರೆದಿರುವುದು ಪ್ರಮುಖವಾಗಿದೆ.50 ಇವುಗಳಿಂದ ಒಡೆಯರು ತಮ್ಮನ್ನು ಯಾದವ ವಂಶದವರೆಂದು ಹೇಳಿಕೊಂಡಂತಾಗಿದೆ.
ಪ್ರಾಚೀನ ಕರ್ನಾಟಕದ ಅನೇಕ ಅರಸು ಮನೆತನಗಳಲ್ಲಿ ರಾಷ್ಟ್ರಕೂಟರಿಂದ ಹಿಡಿದು ಮೈಸೂರು ಒಡೆಯರವರೆಗೆ ತಮ್ಮನ್ನು ಯಾದವ ಅಥವಾ ಯದುವಂಶದವರೆಂದು ಕರೆದುಕೊಂಡಿರುವುದು ಗಮನಾರ್ಹ. ರಾಷ್ಟ್ರಕೂಟರು ಯಾದವ ವಂಶೋದ್ಭವ, ಯದುಕುಳನರಪಾಳ, ದೇವಗಿರಿ ಯಾದವರು ಯಾದವನಾರಾಯಣ, ಯಾದವ ಚಕ್ರವರ್ತಿ, ಕಮ್ಮಟದುರ್ಗದ ಕಂಪಿಲರಾಯ ಯಾದವನಾರಾಯಣ, ಹೊಯ್ಸಳ ಮತ್ತು ವಿಜಯನಗರ ಅರಸರು ಯಾದವ ಕುಳಾಂಬರದ್ಯುಮಣಿ, ಮೈಸೂರು ಒಡೆಯರು ಯಾದವ ಕುಲೋದ್ದರಣದುರೀಣ, ಯದುಕುಲಪಯಃ ಪಾರಾವಾರ ಕಳಾನಿಧಿ ಎಂದು ಬಣ್ಣಿಸಿಕೊಂಡಿದ್ದಾರೆ. ಇದರಿಂದ ಯದು ಅಥವಾ ಯಾದವ ಕುಲದವರೆಂದು ಗುರುತಿಸಿಕೊಳ್ಳುವುದು ಪ್ರಾಚೀನ ಅರಸರಿಗೆ ಹೆಮ್ಮೆಯ ಸಂಗತಿಯಾಗಿತ್ತೆಂದು ತಿಳಿದುಬರುತ್ತದೆ. ಯದು ಯಯಾತಿ ಚಕ್ರವರ್ತಿ ಮತ್ತು ದೇವಯಾನಿಯರ ಹಿರಿಯ ಮಗ. ಇವನ ವಂಶದವರನ್ನು ಸಾಮಾನ್ಯವಾಗಿ ಯದುವಂಶದವರೆಂದು ಕರೆಯಲಾಗಿದೆ.
ಒಟ್ಟಿನಲ್ಲಿ ಬಿರುದಾವಳಿಗಳ ಮೂಲಕ ಪ್ರಾಚೀನ ಕರ್ನಾಟಕದ ಅರಸು ಮನೆತನಗಳ ಮೂಲ, ವಂಶ, ಕುಲ, ರಾಜಧಾನಿ ಮತ್ತು ಆಳ್ವಿಕೆಯ ಪ್ರದೇಶಗಳನ್ನು ತಿಳಿಯಲು ಸಾಧ್ಯವೆಂಬುದು ಪ್ರಸ್ತುತ ಪ್ರಬಂಧದ ಮುಖ್ಯ ಆಶಯ. ಬಿರುದಾವಳಿಗಳು ಪ್ರಾಚೀನ ಚರಿತ್ರೆಯ ಪುನಾರಚನೆಗೆ ಮಹತ್ವದ ಆಕರಗಳಾಗುವುದರ ಜೊತೆಗೆ ಅಂದಿನ ಮೂಲ ನೆಲೆಗಳನ್ನು ಪ್ರಕಟಪಡಿಸುವ ಸಂವಹನ ಮಾಧ್ಯಮಗಳೆಂದರೆ ಅತಿಶಯೋಕ್ತಿಯಾಗಲಾರದು.

ಆಧಾರಸೂಚಿ ಮತ್ತು ಅಡಿಟಿಪ್ಪಣಿಗಳು
1. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ-i, ಠಿ.17, ಏಚಿಡಿಟಿಚಿಣಚಿಞಚಿ Uಟಿiveಡಿsiಣಥಿ, ಆhಚಿಡಿತಿಚಿಜ.
2. ಇಠಿigಡಿಚಿಠಿhiಚಿ Iಟಿಜiಛಿಚಿ-xvi, ಠಿ.11.
3. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 126.
4. ಅದೇ, ಪುಟ 223-224.
5. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ-v, ಠಿ.241.
6. Iಟಿಜiಚಿಟಿ ಂಟಿಣiquಚಿಡಿಥಿ-x, 27.
7. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ.v, ಠಿ.20.
8. ಗಿiರಿಥಿಚಿಟಿಚಿgಚಿಡಿ Iಟಿsಛಿಡಿiಠಿಣioಟಿs, voಟ.ii, ಏಓ.918.
9. ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು, ರಾಗೌ. ಪುಟ 64.
10. ರಾಷ್ಟ್ರಕೂಟರ ಶಾಸನಗಳು-2, ಪುಟ 544.
11. ಅದೇ, ಪುಟ 787.
12. ಇಠಿigಡಿಚಿಠಿhiಚಿ ಅಚಿಡಿಟಿಚಿಣiಛಿಚಿ-xi, ಊoಟ.68.
13. Iಟಿsಛಿಡಿiಠಿಣioಟಿs oಜಿ ಣhe ಅhಚಿಟuಞಥಿಚಿs oಜಿ ಃಚಿಜಚಿmi, ಇಜ.Pಚಿಜigಚಿಡಿ, ಠಿ.1.
14. Ibiಜ, ಠಿ.10.
15. Ibiಜ, ಠಿ.333.
16. ರಾಷ್ಟ್ರಕೂಟರ ಶಾಸನಗಳು-2, ಪುಟ 518.
17. ಅದೇ, ಪುಟ 563.
18. ಕಲ್ಯಾಣ ಚಾಲುಕ್ಯರ ಶಾಸನಗಳು-1, ಪುಟ 8.
19. ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು, ರಾಗೌ. ಪುಟ146.
20. ಕಲ್ಯಾಣ ಚಾಲುಕ್ಯರ ಶಾಸನಗಳು-1, ಪುಟ 151.
21. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 61.
22. ಅದೇ, ಪುಟ 420, 467.
23. ಅದೇ, ಸಂ. 1, ಪುಟ 21; ಸಂ. 10, ಪುಟ 257.
24. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ.v, ಠಿ.104; Souಣh Iಟಿಜiಚಿಟಿ Iಟಿsಛಿಡಿiಠಿಣioಟಿs-15, ಠಿ.188.
25. Ibiಜ, ಠಿ.114.
26. Ibiಜ, ಠಿ.121; Souಣh Iಟಿಜiಚಿಟಿ Iಟಿsಛಿಡಿiಠಿಣioಟಿs-15, ಓo.69.
27. ಇಠಿigಡಿಚಿಠಿhiಚಿ ಅಚಿಡಿಟಿಚಿಣiಛಿಚಿ-xi, ಠಿ.388.
28. ರಾಷ್ಟ್ರಕೂಟರ ಶಾಸನಗಳು-1, ಪುಟ 237.
29. ಅದೇ, ಪುಟ 291.
30. ಅದೇ, ಪುಟ 408, 435.
31. ಅದೇ, ಪುಟ 697, 500.
32. ಅದೇ, ಪುಟ 483, 488.
33. ಅದೇ, ಪುಟ 316, 472.
34. ಅದೇ, ಪುಟ 787.
35. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-6, ಪುಟ 70.
36. ಅದೇ, ಪುಟ 213; ಇಠಿigಡಿಚಿಠಿhiಚಿ ಅಚಿಡಿಟಿಚಿಣiಛಿಚಿ-vii, ಠಿ.132.
37. ಖಿhe ಓoಟಚಿmbಚಿs, ಒ.S.ಏಡಿishಟಿಚಿmuಡಿಣhಥಿ, ಠಿ. 57.
38. Ibiಜ, ಠಿ.126.
39. Ibiಜ, ಠಿ.71, 84, 94; ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 283.
40. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-10, ಪುಟ 131.
41. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 274.
42. ಏ.I-ಗಿ, ಠಿಠಿ.165-166; ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-10, ಪುಟ 280; ಅದೇ-9, ಪುಟ 450.
43. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-2, ಪುಟ 180, 606; ಅದೇ, ಸಂ. 1, ಪುಟ 296.
44. ಎಪಿಗ್ರಾಫಿಯ ಕರ್ನಾಟಿಕ-9, ಪುಟ 51, 465; ಅದೇ, ಸಂ. 3, ಪುಟ 76.
45. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-2, ಪುಟ 158.
46. ಇಅ-vii, ಒu.89; iii, ಒi-20.
47. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-3, ಪುಟ 72, 200.
48. ಕೃಷ್ಣದೇವರಾಯನ ಶಾಸನಗಳು, ಡಿ.ವಿ. ಪರಮಶಿವಮೂರ್ತಿ(ಸಂ.), ಪುಟ 624, 625.
49. ಎಪಿಗ್ರಾಫಿಯ ಕರ್ನಾಟಿಕ-5, ಪುಟ 209-223.
50. ಅದೇ, ಪುಟ 160-163.


  ಸಹ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

Sunday, August 23, 2015

ತುರವಿಹಾಳ ಗ್ರಾಮದಲ್ಲಿ ಹಾಲುಮತ ದಾಖಲೆಗಳ ಶೋಧ

ತುರವಿಹಾಳ ಗ್ರಾಮದಲ್ಲಿ ಹಾಲುಮತ ದಾಖಲೆಗಳ ಶೋಧ
ಡಾ. ಎಫ್.ಟಿ. ಹಳ್ಳಿಕೇರಿ
ಹಾಲುಮತ ಗುರುಪರಂಪರೆಯಲ್ಲಿ ರೇವಣಸಿದ್ಧ-ಸಿದ್ಧರಾಮ-ಅಮೋಘಸಿದ್ಧ ಎಂಬ ಮೂರು ಸಂಪ್ರದಾಯಗಳಿವೆ. ಕ್ರಮವಾಗಿ ಸರೂರ(ರೇವಣಸಿದ್ಧ)-ಸೊಲ್ಲಾಪುರ (ಸಿದ್ಧರಾಮ)-ಅರಕೇರಿ (ಅಮೋಘಸಿದ್ಧ) ಗ್ರಾಮಗಳು ಈ ಮೂರು ಸಂಪ್ರದಾಯಗಳ ಮುಖ್ಯಕೇಂದ್ರಗಳು. ನಂತರದಲ್ಲಿ ಈ ಸಂಪ್ರದಾಯಕ್ಕೆ ಗುರುಗಳಾಗಿ ಬಂದವರು ಶಾಂತ ಮುತ್ತಯ್ಯ-ಸಿದ್ಧಮಂಕ-ಅಮೋಘಸಿದ್ಧ ಒಡೆಯರು. ಈ ಮೂರು ಸಂಪ್ರದಾಯಗಳನ್ನು ಪರಂಪರಾನುಗತವಾಗಿ ಮುಂದುವರೆಸಿಕೊಂಡು ಬರುತ್ತಿರುವ ಗುರುಗಳಿಗೆ ಒಡೆಯರು, ಗುರುವಿನವರು ಎಂದು ಕರೆಯಲಾಗುತ್ತಿದೆ. ಕುರುಬರ ಈ ಗುರುಪರಂಪರೆಗಳು ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳುದ್ದಕ್ಕೂ ಈಗಲೂ ಮುಂದುವರೆದಿವೆ. ಇದಕ್ಕೆ ಈಗಲೂ ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿರುವ ರೇವಣಸಿದ್ಧ-ಸಿದ್ಧರಾಮ-ಅಮೋಘಸಿದ್ಧ ಮಠಗಳು ನಿದರ್ಶನಗಳಾಗಿವೆ. ಈ ಮಠಗಳ ಪೀಠಾಧಿಪತಿಗಳಾಗಿ ಕುರುಬರಿಗೆ ಗುರುಗಳಾಗಿ ಒಡೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಥವರಲ್ಲಿ ತುರವಿಹಾಳದ ಮಾದಪ್ಪಯ್ಯ ಒಡೆಯರ ಅವರು ಪ್ರಮುಖರಾಗಿದ್ದಾರೆ.
1. ತುರವಿಹಾಳದ ಮಾದಪ್ಪಯ್ಯ ಒಡೆಯರು
ತುರವಿಹಾಳ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಗ್ರಾಮ. ಸಿಂಧನೂರನಿಂದ ಪಶ್ಚಿಮಕ್ಕೆ 18 ಕಿ.ಮೀ. ಅಂತರ (ಸಿಂಧನೂರು-ಕುಷ್ಟಗಿ ಮುಖ್ಯರಸ್ತೆ)ದಲ್ಲಿರುವ ಈ ಗ್ರಾಮದಲ್ಲಿ ಕುರುಬರ ಗುರುಪರಂಪರೆಗೆ ಸೇರಿದ ರೇವಣಸಿದ್ಧ ಮತ್ತು ಅಮೋಘಸಿದ್ಧ ಸಂಪ್ರದಾಯದ ಒಡೆಯರ ಮನೆತನಗಳಿವೆ. ಈ ಮನೆತನಗಳಲ್ಲಿ ನೂರು ವರ್ಷಗಳ ಹಿಂದೆ ಆಗಿಹೋದ ಮಾದಪ್ಪಯ್ಯ ತಂದೆ ಓಗಪ್ಪಯ್ಯ ಗುರುವಿನ ಅವರು ಕುರುಬರ ಗುರುಪರಂಪರೆಯಲ್ಲಿ ಒಂದಾದ ಅಮೋಘಸಿದ್ಧ ಸಂಪ್ರದಾಯಕ್ಕೆ ಸೇರಿದವರು. ಮಾದಪ್ಪಯ್ಯ ಅವರು ಬಿಜಾಪುರ ಜಿಲ್ಲಾ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಮತ್ತು ತುರವಿಹಾಳದಲ್ಲಿರುವ ಅಮೋಘಸಿದ್ಧ ಶಾಖಾಮಠಗಳೆರಡಕ್ಕೂ ಗುರುಗಳಾಗಿದ್ದರು. ಮಾದಪ್ಪಯ್ಯ (ಮರಣ:10-8-1964)ನವರಿಗೆ ಗಂಗಮ್ಮ ಮತ್ತು ನಾಗಮ್ಮ ಎಂಬ ಇಬ್ಬರು ಹೆಂಡಂದಿರಿದ್ದರು. ಇವರ ಮಗ ಸಿದ್ಧಯ್ಯ (ಮರಣ:21-4-2006). ಇವರಿಗೂ ಗಂಗಮ್ಮ ಮತ್ತು ನೀಲಮ್ಮ ಎಂಬಿಬ್ಬರು ಹೆಂಡಂದಿರು. ನೀಲಮ್ಮನವರಿಗೆ ಮಾದಯ್ಯ-ಗಂಗಾಧರಯ್ಯ-ಯೋಗಪ್ಪಯ್ಯ ಎಂಬ ಮೂವರು ಮಕ್ಕಳಿದ್ದಾರೆ.
ಮದುವೆ, ಉಡಕಿ, ಬಿಡಕಿ ಮೊದಲಾದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಹಾಗೂ ವಾರ್ಷಿಕವಾಗಿ ಭಕ್ತರು ಆತ್ಮಸಂತೋಷದಿಂದ ಇಂತಿಷ್ಟು ಕಾಣಿಕೆಯನ್ನು ಮಠಕ್ಕೆ ಸಲ್ಲಿಸಬೇಕೆಂಬುದನ್ನು ಮೇಲಿನ ಉಲ್ಲೇಖದಿಂದ ತಿಳಿದು ಬರುತ್ತದೆ. ಭಕ್ತರು ಕೊಟ್ಟಂಥ ಹಣ ದವಸ-ಧಾನ್ಯ-ವಸ್ತ್ರ ರೂಪದ ಕಾಣಿಕೆಯ ವಿವರಗಳನ್ನು ಖಾತೆಕೀರ್ದಿ (ರಜಿಸ್ಟರ ಬುಕ್) ಪುಸ್ತಕದಲ್ಲಿ ಮಾದಪ್ಪಯ್ಯನವರು ದಾಖಲಿಸಿದ್ದಾರೆ. ಆ ಪುಸ್ತಕದ ಪ್ರತಿಯೊಂದು ಪುಟದ ಮೇಲ್ಭಾಗದಲ್ಲಿ ಈ ಕೆಳಗಿನ ವಿವರಗಳು ಮುದ್ರಿತವಾಗಿವೆ.
“ಶ್ರೀ ಭೂರಮಾಧೃತ ನವಖಂಡಪೃಥ್ವೀ ರತ್ನಹಾರ ನಾಯಕಶಿಖಾರತ್ನ ಪರಿರಮ್ಯೋದಕ ದಶದಿಗ್ಭಾಗ ಮಣಿಚಂಡಕಿರಣ ರಾಜಾತಮಪ್ಪ ಭರತಾಖ್ಯ ಭೂಮಾನಿನೀಸಿ ಮಂತದಂತಿಪ್ಪ ವಿಂದ್ಯಾಚಲ ದಕ್ಷಿಣ ದೆಶೆಯೊಳ್ ಸೇರಿದ ವಿಜಾಪುರ ಜಿಲ್ಲಾ ವ, ತಾಲೂಕು ಪೈಕಿ ಹರಕೇರಿ ವ, ಮಂಕಣಾಪೂರ ಅಮೋಗಸಿದ್ಧೇಶ್ವರ ಸಿಂಹಾಸನ ಶಾಖಾ ಮಲಪ್ರಭಾ, ಕೃಷ್ಣ ಸಂಗಮವಾಹಿನಿ ಧಡದೋಳ್ ಶೋಭಿಸುತಿರ್ಪ ತಂಗಡಗಿ ಮತ್ತು ನಿಜಾಮ ಇಲಾಖೆಗೆ ಸೇರಿದ ರಾಯಚೂರು ಜಿಲ್ಲಾ ಸಿಂಧನೂರ ತಾಲೂಕ ಪೈಕಿ ತುರ್ವಿಹಾಳ ಹಾಲಮತದ ಧರ್ಮಗುರು ಮಠಾಧ್ಯಕ್ಷರಾದ ಸೃಷ್ಟಿ-ಸ್ಥಿತಿಲಯ ಕಾರ್ಯ ಕೃತಕೃತ್ಯರಾದ ಪರತರ ಪರಂಜ್ಯೋತಿ ಪರಬ್ರಹ್ಮ ಪರಶಿವ ಸ್ವರೂಪಿಗಳಾದ ಶ್ರೀ ಮಾದಪ್ಪಯ್ಯ ಓಘಪ್ಪಯ್ಯ ಮಹಾಸ್ವಾಮಿ ಒಡೆಯರು ಇವರಿಗೆ ಕೆಳಗೆ ನಮೂದಿಸಲ್ಪಟ್ಟ ಯಾವತ್ತೂ ಶಿಷ್ಯಮಂಡಳಿಯವರು ತಮ್ಮ ಧರ್ಮಕಾರ್ಯಗಳಿಗೆ ಆತ್ಮಸಂತೋಷದಿಂದ ಒಪ್ಪಿ ಬರಕೊಟ್ಟ ಕಾಣಿಕೆಯ ವಿವರ: ವಿವಾಹ ಕಾರ್ಯಕ್ಕೆ ವರಪಕ್ಷದಿಂದ 2 ರೂಪಾಯಿ ವಧುಪಕ್ಷದಿಂದ 1 ರೂಪಾಯಿ, ಉಡಕೀ ಕಾರ್ಯಕ್ಕೆ ಪ್ರತಿಪಕ್ಷದಿಂದ 3 ರೂಪಾಯಿ ಬಿಡಕೀ ಕಾರ್ಯಕ್ಕೆ ಪ್ರತಿಪಕ್ಷದಿಂದ 6 ರೂಪಾಯಿ ಮತ್ತು ವರ್ಷಾಶನ ಕಾಣಿಕೆ 1 ರೂಪಾಯಿ, 25 ನಯಾಪೈಸೆ ಈ ಪ್ರಕಾರ ಮಠಕ್ಕೆ ಸಲ್ಲಿಸತಕ್ಕದ್ದು.”
ಓದಲು ಮತ್ತು ಬರೆಯಲು ಬರುವಷ್ಟು ವಿದ್ಯೆಯನ್ನು ಸಂಪಾದಿಸಿ ತಂದೆ ಓಗಪ್ಪಯ್ಯನವರ ನಿಧನದ ನಂತರ ಗುರುಪಟ್ಟವನ್ನು ಸ್ವೀಕರಿಸಿದರು. ರಾಯಚೂರು ಬಿಜಾಪುರ ಬಾಗಲಕೋಟ ಜಿಲ್ಲೆಗಳ 135 ಹಳ್ಳಿಗಳ ಕುರುಬರ ಮನೆತನಗಳು ಇವರ ವ್ಯಾಪ್ತಿಯಲ್ಲಿದ್ದವು. ಆ ಮೂಲಕ ಶಿಷ್ಯರನ್ನು ಕಟ್ಟಿಕೊಂಡು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಕುರುಬ ಸಮುದಾಯವನ್ನು ಜಾಗೃತಗೊಳಿಸಲು ನಿರಂತರವಾಗಿ ಶ್ರಮಪಟ್ಟರು. ಸಮುದಾಯದ ಮನೆತನ ಅಥವಾ ಸದಸ್ಯರಲ್ಲಿ ವಾದವಿವಾದಗಳು ನಡೆದಾಗ ಅವುಗಳನ್ನು ಬಗೆಹರಿಸಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ವಿದಿsಸಿದ್ದು, ದಂಡ ಹಾಕಿದ್ದು, ಶಿಕ್ಷೆ ಮುಗಿದ ನಂತರ ಮತ್ತೆ ಸಮಾಜದೊಳಗೆ ಅವರಿಗೆ ಪ್ರವೇಶ ನೀಡಿದ್ದು, ಬಡವರಿಗೆ ಹಣ ದವಸ ದಾನ್ಯಗಳ ರೂಪದಲ್ಲಿ ಸಹಾಯ ಮಾಡಿದ್ದಾರೆ. ಈ ಕುರಿತು ತುರವಿಹಾಳದ ಒಡೆಯರ ಮನೆಯಲ್ಲಿ ಸನದು ನಿರೂಪಗಳಂಥ ನೂರಾರು ದಾಖಲೆಗಳ ಸಂಗ್ರಹವಿದೆ. ಆ ಸಂಗ್ರಹದಲ್ಲಿರುವ ಕೆಲವು ದಾಖಲೆಗಳನ್ನು ಅಧ್ಯಯನಕ್ಕೊಳಪಡಿಸಿ, ಅವುಗಳ ಸಾಂಸ್ಕøತಿಕ ಮತ್ತು ಚಾರಿತ್ರಿಕ ಮಹತ್ವವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
2. ದಾಖಲೆಗಳ ಸ್ವರೂಪ ಮತ್ತು ಮಹತ್ವ
ತುರವಿಹಾಳದಲ್ಲಿ ಲಭ್ಯವಾದ ದಾಖಲೆಗಳು ಕೋರಿ ಕಾಗದ, ಆಧುನಿಕ ಕಾಗದ ಮತ್ತು ಸ್ಟಾಂಫ್‍ಪೇಪರಗಳ ರೂಪದಲ್ಲಿವೆ. ಎ4 ಅಳತೆಯ ಒಂದು ಪುಟದಿಂದ ಹಿಡಿದು ನಾಲ್ಕೈದು ಪುಟಗಳಷ್ಟು ಮಾಹಿತಿಯಿರುವ ಸನದು ನಿರೂಪಗಳಿವೆ. ವಿಷಯ ದೀರ್ಘವಾಗಿದ್ದರೆ ಕಾಗದಗಳನ್ನು ಒಂದಕ್ಕೊಂದು ಅಂಟಿಸಲಾಗಿದೆ. ವಸ್ತುವಿನ ದೃಷ್ಟಿಯಿಂದ ಇಲ್ಲಿನ ದಾಖಲೆಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು.
1. ಕುರುಬರ ಗುರು ಯಾರು ಎಂಬುದಕ್ಕೆ ವಾದ-ವಿವಾದ ಮಾಡಿ ನಿರ್ಣಯಿಸಿದ ದಾಖಲೆಪತ್ರಗಳು.
2. ಮಾದಪ್ಪಯ್ಯ ಒಡೆಯರು ಶಿಷ್ಯಸಮೂಹಕ್ಕೆ ಬರೆದ ದಾಖಲೆಪತ್ರಗಳು.
3. ಕುರುಬ ಸಮುದಾಯದ ಶಿಷ್ಯಬಳಗವು ಒಡೆಯರಿಗೆ ಬರೆದ ದಾಖಲೆಪತ್ರಗಳು.
4. ಕುಲಾಚಾರಕ್ಕೆ ಸಂಬಂಧಿಸಿದ ನಿರ್ಣಯದ ದಾಖಲೆಪತ್ರಗಳು.
5. ಸುಡುಗಾಡ ಸಿದ್ಧನ ಮಜೂರಿಯನ್ನು ತಿಳಿಸುವ ದಾಖಲೆಪತ್ರ.
6. ಇತರೆ ದಾಖಲೆಗಳು
1. ಕುರುಬರ ಗುರು ಯಾರು ಎಂಬುದಕ್ಕೆ ವಾದ-ವಿವಾದ ಮಾಡಿ ನಿರ್ಣಯಿಸಿದ ದಾಖಲೆಪತ್ರಗಳು.
ಕುರುಬರ ಗುರು ಯಾರು ಎಂಬುದು 19ನೆಯ ಶತಮಾನದ ಮಧ್ಯಭಾಗದಿಂದ 20ನೆಯ ಶತಮಾನದ ಮಧ್ಯಭಾಗದವರೆಗೆ ಸಾಕಷ್ಟು ವಾದ-ಪ್ರತಿವಾದಗಳು ನಡೆದಿವೆ. ರೇವಣಸಿದ್ಧ ಅಥವಾ ಸಿದ್ಧರಾಮ, ಶಾಂತಮುತ್ತಯ್ಯ ಅಥವಾ ಸಿದ್ಧಮಂಕ, ಸಿದ್ಧಮಂಕ ಅಥವಾ ಅಮೋಘಸಿದ್ಧ, ರೇವಣಸಿದ್ಧ ಅಥವಾ ಅಮೋಘಸಿದ್ಧ,-ಇವರಲ್ಲಿ ಯಾರು ಗುರುಗಳು ಎಂಬುದನ್ನು ನಿರ್ಣಯಿಸುವ ದಾಖಲೆಗಳು ಅಧಿಕ ಪ್ರಮಾಣದಲ್ಲಿ ಪತ್ರಗಳು ನಾಡಿನಾದ್ಯಂತ ದೊರೆಯುತ್ತವೆ. ಅಂಥ ಪತ್ರಗಳು ತುರವಿಹಾಳದ ಈ ಸಂಗ್ರಹದಲ್ಲಿವೆ. ವಿಶೇಷವಾಗಿ ಅಮೋಘಸಿದ್ಧ ಮತ್ತು ರೇವಣಸಿದ್ಧ-ಸಿದ್ಧಮಂಕ ಸಂಪ್ರದಾಯದವರ ನಡುವೆ ನಡೆದ ವಾದಗಳ ವಿವರಗಳು ಇಲ್ಲಿವೆ. ಕುರುಬರಿಗೆ ಗುರುಗಳಾಗಿ ಅರಕೇರಿ ಸಿದ್ಧಯ್ಯ ವಡೆಯರು-ಮಕಣಾಪುರದ ಅಮ್ಮಣ್ಣ ವಡೆಯರು ಹಾಗೂ ಸರವೂರಿನ ಮಂಕಣ್ಣ-ರೇವಣ್ಣ ವಡೆಯರಲ್ಲಿ ಯಾರಾಗಬೇಕು ಎಂಬುದರ ಬಗೆಗೆ ಸರ್ವಸಭಾನಾಯಕರಲ್ಲಿ ಚರ್ಚೆ ನಡೆದು ಹೀಗೆ ತೀರ್ಮಾನಿಸಿದರು.
“ಕುರುಬಯೆಂಬ ಕುಲದೊಳಗೆ ಶಿವಾಚಾರ ವಡಿಯ ಅರಕೇರಿ ಮಕಣಾಪುರದ ಅಮ್ಮಣ್ಣ ಸಿದ್ಧಯ್ಯ ಒಡೆಯರು ಗುರುಮುಖ್ಯ ಕರ್ತರು | ಭಿಕ್ಷಾವರ್ತಿಚಂತಿದೈವದ ಮುಂದೆ ನಿರ್ನಯ ಮಾಡಿ ಸನದು ಬರಸಿದರು | ಸರವರೆಲ್ಲ ಹರಕತ್ತ ಮಾಡಿದರೆ ದಿವಾಣ ದೈವದ ಗುನ್ನೆಗಾರಿ ಸರವಸಿತಾ ಪರಿಹಾರಯೆತ್ತಲಾಗದು | ಕುಲಾಚಾರದಲ್ಲಿ ದೈವದ ವಡಿಯರು ಕರಿಸಿ ವಿಭೂತಿ ಧರಿಸೆಂದರೆ ಧರಿಸಬೇಕು | ಬ್ಯಾಡಯೆಂದರೆ ಬಿಡಬೇಕು | ಹಾಲುಮತದೊಳು ಯಾವನಾದರೆ ಸರವರವರು ಗುರುವೆಂದು ನುಡಿದವ ಶಿವಾಚಾರಕ್ಕೆ ಹೊರಗುಯೆಂದರು | ಇದು ಹುಸಿಯೆಂದರೆ ನರಕ ತಪ್ಪದು |”
ಇಂಥ ದಾಖಲೆಗಳು ಸ್ಥಳೀಯ ಸಂಸ್ಕøತಿ ಅಧ್ಯಯನಕ್ಕೆ ಅನೇಕ ಮಾಹಿತಿಗಳನ್ನು ಒದಗಿಸುತ್ತವೆ.
2. ಮಾದಪ್ಪಯ್ಯ ಒಡೆಯರು ಶಿಷ್ಯಸಮೂಹಕ್ಕೆ ಬರೆದ ದಾಖಲೆಪತ್ರಗಳು
ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಒಡೆಯರು ಆಜ್ಞೆಗಳನ್ನು ಹೊರಡಿಸುತ್ತಿದ್ದರು. ಅಂಥ ಆಜ್ಞೆಯನ್ನು ಒಳಗೊಂಡ ಪತ್ರಗಳು ಮಾದಪ್ಪಯ್ಯನವರು ಹೊರಡಿಸಿದ್ದರು. ಉದಾಹರಣೆಗೆ ಈ ಪತ್ರವನ್ನು ಗಮನಿಸಬಹುದು
“||ಶ್ರೀಗುರು|| ಶ್ರೀಮತ್ ಸಂಸ್ಥಾನ ವಿಜಾಪೂರ ತಾಲೂಕು ಪೈಕಿ ಪರಕೇರಿ ಮಂಕಣಾಪುರ ಅಮೋಘಸಿದ್ಧೇಶ್ವರ ಸಿಂಹಾಸನ ಹಾಲುಮತ ಅಧ್ಯಕ್ಷರಾದ ಶ್ರೀಮಾದಪ್ಪಯ್ಯ ಒಡೆಯರ ಕಡೆಯಿಂದಾ ಯಾವತ್ತು ಭಕ್ತಮಂಡಳಿಗೆ ಈ ನೋಟಿಸದ್ವಾರಾ ತಿಳಿಸುವದೇನೆಂದರೆ £ೀವು ಯಾವತ್ತರೂ ಮೇಲೆ ಕಾಣಿಸಿದ ಸಿಂಹಾಸನಕ್ಕೆ ಶಿಷ್ಯರಾಗಿದ್ದು ಸದಾ ಆಶೀರ್ವಾದ ಹೊಂದುತ್ತ ಬಂದಿದ್ದೀರಿ | ಆದರೆ ನಾನು ಇಷ್ಟು ದಿವಸ ಬಾಲ್ಯಾವಸ್ಥೆಯಲ್ಲಿದ್ದೆನು | ಆ ಕಾಲಕ್ಕೆ ಶಿದ್ದಯ್ಯ ವ|| ಮದ್ದವೀರಯ್ಯನವರು ನಮ್ಮ ಯಾವತ್ತೂ ಭಕ್ತಾದಿಗಳಿಗೆ ಹೋಗಿ ನಿಷ್ಕಾರಣ ಅಧಿಕಾರದ ದರ್ಪ ತೋರಿಸಿ ಕಾಣಿಕೆ ವಗೈರೆ ವಸೂಲ ಮಾಡುತ್ತ ಬಂದಿರುವರು | ಆದರೆ ಈಗ ನಾವು ವಯಸ್ಸಿಗೆ ಬಂದ ಮೇಲೆ ಯಾವತ್ತು ಅಧಿಕಾರಿಗಳು ಕೈಯಲ್ಲಿ ತೆಗೆದುಕೊಂಡು ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತ ಪ್ರಸಾದ ಜರುಗಿಸಿರುವೆವು | ಸದ್ರಿ ಸಿದ್ದಯ್ಯನವರು ಇದುವರಿಗೂ ನಮ್ಮ ಹೆಸರಿನ ಮೇಲೆ ಎನ್ಕಿ ಕಾಣಿಕೆ ವಗೈರೆ ವಸೂಲ ಮಾಡುತ್ತ ಬಂದರು | ಅದು ತಪ್ಪು ಇರುತ್ತದೆ | ಮುಂದೆ ಅವರು ಯಾವ ಗ್ರಾಮಕ್ಕೆ ಬಂದರೂ ನೀವು ನಮ್ಮ ಗುರುಸ್ಥಳಕ್ಕೆ ಯಾವ ತರಹದ ಸಂಬಂಧವಿಟ್ಟಿರು ವದಿಲ್ಲವೆಂದು ನಿರಾಕರಿಸಿ ಅವರಿಗೆ ಯಾವ ತರಹದ ಕಾಣಿಕೆ ವಗೈರೆ ಸಲ್ಲಿಸಕೂಡದು | ಆಕಸ್ಮಾತ ನೀವು ಸಲ್ಲಿಸಿದ್ದರೆ ಸಂಸ್ಥಾನ ಜವಾಬ್ದಾರಿ ಅಲ್ಲಾ | ಮೇಲೆ ಬರೆದ ನೋಟಿಸಿನ ಪ್ರಕಾರ ಪಾಲಿಸುವದಕ್ಕಾಗಿ ಸಿಂಹಾಸನದ ಕಡಿಯಿಂದ ಯಾವತ್ತು ಭಕ್ತ ಮಂಡಳಿಗೆ ಆಗ್ನೆ ಇರುತ್ತದೆ || ಫಕ್ತ||”
3. ಭಕ್ತರು ಒಡೆಯರಿಗೆ ಬರೆದ ದಾಖಲೆಪತ್ರಗಳು
ಸಮುದಾಯದ ಭಕ್ತರು ತಮ್ಮ ಮಧ್ಯ ಉದ್ಭವಿಸಿದಂಥ ತಂಟೆ ತಕರಾರುಗಳನ್ನು ಅಥವಾ ಕೌಟುಂಬಿಕ-ಸಾಮಾಜಿಕ-ವಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗುರುಗಳಲ್ಲಿ ಮನವಿ ಮಾಡಿಕೊಂಡು ಅವರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತಿದ್ದರು. 23-11-1914ರಂದು ಹುನಗುಂದ ಸೀಮೆಯ ಗೋಸಲ ಮಾಘೆ ಬಾನರಾಮ ಸೋಮಪ್ಪ ನಾಯಕದೇಸಾಯಿ ಪರಗಣೆ ಹುನಗುಂದದರ ಜಾಗಾಲ್ವಿಹೊಳ್ಳಯಿವರು ಬರೆದುಕೊಟ್ಟ ಕರಾರು ಪತ್ರದ ಸಾರಾಂಶ ಹೀಗಿದೆ.
“ವಿಜಾಪುರ ಜಿಲ್ಹಾ ತಾಲುಕು ಪೈಕಿ ಅರಕೇರಿ ಮಂಕಮಾ ಪುರದ ತಂಗಡಗಿ ಮಠಕ್ಕೆ ವಡಿಯರಾದ ಶಿದ್ದಪ್ಪಯ್ಯ ತಂದಿ ಮಾದಪ್ಪಯ್ಯ ಯಿವರಿಗೆ ಬರಿಸುವದೇನೆಂದರೆ-ವಳಗಡೆ ಉಜ್ಜನಿ ಸಿಂಹ್ಮಾಸನದಲ್ಲಿ ನೀವು ನಿಮ್ಮ ಪ್ರತಿವಾದಿ ಮಂಕಯ್ಯನು ಸಹ ವುಭಯರು ಸದರಿ ಸಂಸ್ಥಾನದಲ್ಲಿ ನಿಮ್ಮ ನಿಮ್ಮ ನ್ಯಾಯ ವಿಚಾರಾಗಿ ಆದ ಹುಕುಂ ನಮಗೆ ಮತ್ತು ಅಲಮ್ಮಗೀರಬಾದಶಹನ ಸನದು-ವ-ಏನಕೆ ಕಾಗದಪ್ರತಿಗಳು ತೋರಿಸಿದ್ದರಿಂದ ನಾವು ವಡಂಬಟ್ಟು ಯೀ ಹೊತ್ತಿನ ದಿವಸ ಹಾಲುಮಥ ಕುರುಬ ಮುಂತಾದ ಸರ್ವರು ಯಿವರಿಗೆ ನಡಕೊಳ್ಳುವದಕ್ಕೆ ನಮ್ಮ ವಡಂಬಡಿಕೆಯಿರುತ್ತದೆ. ಅದರಂತೆ ನೀವು ತಡಕೊಳ್ಳಲಿಕ್ಕೆ ಜೀಕು-ಜೀರ ನೀವು ನಡಕೊಳ್ಳದಿದ್ದರೆ ಶಿವಾಚಾರ ಕುಲಾಚಾರಕ್ಕೆ ಹೊರ್ತಾಗಬೇಕಾದೀತು. ಹೀಗೆ ತಿಳಿದು ಈಗ ಬಂದ ಗುರುಗಳು ಅಂದರೆ ಶಿದ್ದಪ್ಪಯ್ಯ ಯಿವರಿಗೆ ನಡಕೊಳ್ಳಲಿಕ್ಕೆಬೇಕು. ಯಿವರು ಹುನಗುಂದ ಶೀಮೆ ಕಿರಸೂರು ಕಟ್ಟೆಗೆ ಯಿವರೇ ಬಾಧ್ಯರು ಮತ್ತು ದೀಕ್ಷಾ-ವ-ಕಾಣಿಕಾ ಮುಂತಾದವುಗಳನ್ನು ಮಾಡಲಿಕ್ಕೆ ಯಿವರೆ ಬಾಧ್ಯಸ್ಥರುಯಿರುತ್ತಾರೆ. ನೀವು ಆಯಾ ಸಮಂಧ ಬಾಬು ನಮಗೆ ಮುಟ್ಟಿಸಬೇಕು. ಅವ್ವಳ್ಳಿ-ಕಳ್ಳಿಗುಡ್ಡ ವ. ನಿಂಬಲಗುಂದಿ ವ. ಮುಳ್ಳೂರು ವ. ಹೂವಿನಳ್ಳಿ ವ. ಕ್ಯಾದಿಗ್ಗೇರಿ ವ. ಚೀಲಾಪೂರ ವ. ಕುಣಿಬೆಂಚಿ ಯೀ ಗ್ರಾಮಗಳಲ್ಲಿ ಯಿರುವ ಹಾಲುಮಥದ ಜನರು ಸದರಿ ಮೇಲೆ ನಮೋದಿಶಿದ ಗುರುಗಳಿಗೆ ಯೇಕನಿಷ್ಟೆಯಿಂದ ನಡಕೊಳ್ಳತಕ್ಕದ್ದು ಎಂದು ಯೀ ಹೊತ್ತಿನ ದಿವಸ ಬರಕೊಟ್ಟ ಪತ್ರ ಸಹಿ...”.
ಇಂಥ ಅನೇಕ ಸಮಸ್ಯೆಗಳನ್ನು ತಂಟೆ-ತಕರಾರುಗಳನ್ನು ಮಾದಪ್ಪಯ್ಯ ಮತ್ತು ಸಿದ್ದಯ್ಯ ಒಡೆಯರ ಅವರು ಬಗೆಹರಿಸಿದ್ದುಂಟು. ಭಕ್ತರು ತಪ್ಪು ಮಾಡಿದಾಗ ಕ್ಷಮಾಪಣೆ ಕೋರಿ ಬರೆದ ಪತ್ರಗಳೂ ಇಲ್ಲಿವೆ.
4. ಕುಲಾಚಾರಕ್ಕೆ ಸಂಬಂಧಿಸಿದ ನಿರ್ಣಯದ ದಾಖಲೆಪತ್ರಗಳು
ಸಮಾಜದ ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಆ ವ್ಯಕ್ತಿ ಮತ್ತು ಆತನ ಮನೆತನದ ಎಲ್ಲ ಸದಸ್ಯರನ್ನು ಕುಲದಿಂದ ದೈವದಿಂದ ಹಾಗೂ ಗುರುಸನ್ನಿಧಿಯಿಂದ ಹೊರಗಿಡುವ ಪದ್ದತಿ ಇದೆ. ಮತ್ತೆ ಕೆಲವು ದಿವಸಗಳ ನಂತರ ಆ ವ್ಯಕ್ತಿಗೆ ಕ್ಷಮಾದಾನ ನೀಡಿ ಒಳಗೆ ಕರೆದುಕೊಳ್ಳುವ ನಿಯಮವು ಬಹುಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂಥ ಸಂದರ್ಭದಲ್ಲಿ ಹೊರಗಿಟ್ಟ ಆ ವ್ಯಕ್ತಿ ದೈವದರಿಗೆ ಕ್ಷಮಾಪಣೆ ಅಥವಾ ಮಾಡಿದ ತಪ್ಪನ್ನು ಮನ್ನಿಸಬೇಕೆಂಬ ಪತ್ರವನ್ನು ನೀಡುತ್ತಾನೆ. ದಾಖಲೆಗಳಲ್ಲಿ ಅಂಥ ಪತ್ರಕ್ಕೆ “ಶರಣಾಗತ ಪತ್ರ” ಎಂದು ಕರೆಯಲಾಗಿದೆ. ಆ ಶರಣಾಗತ ಪತ್ರವನ್ನು ಪರಿಶೀಲಿಸಿದ ದೈವದವರು ಅಂಥ ವ್ಯಕ್ತಿಗಳನ್ನು ಸಮಾಜದೊಳಗೆ ಮತ್ತೆ ಬರಮಾಡಿಕೊಳ್ಳಲು ಒಪ್ಪಿ ಪತ್ರವನ್ನು ಗುರುಸನ್ನಿಧಿಗೆ ಕೊಡುತ್ತಾರೆ. ಆ ಪತ್ರಕ್ಕೆ “ಸಮ್ಮತಿ ಪತ್ರ”ಎಂದು ಕರೆಯಲಾಗಿದೆ. ಆ ಸಮ್ಮತಿ ಪತ್ರದ ಆಧಾರದಿಂದ ಕುಲಗುರುಗಳು ಆ ವ್ಯಕ್ತಿಯನ್ನು ಕುಲದೊಳಗೆ ತೆಗೆದುಕೊಳ್ಳಲು ಅನುಮತಿ ಪತ್ರವನ್ನು ನೀಡುತ್ತಾರೆ. ಅದಕ್ಕೆ “ಶುದ್ಧಿಸಂಸ್ಕಾರ ಪತ್ರ” ಎಂದು ಕರೆಯಲಾಗಿದೆ. ಸಮುದಾಯದಲ್ಲಿ ದೈವಸ್ಥರು ಮತ್ತು ಕುಲಗುರುಗಳು ಸಮುದಾಯದಲ್ಲಿ ಶಿಸ್ತು ಬರಬೇಕೆಂಬ ಉದ್ದೇಶದಿಂದ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಇಂಥ ಮಾಹಿತಿಯನ್ನು ನೀಡುವ ದಾಖಲೆಪತ್ರಗಳು ತುರ್ವಿಹಾಳದ ಒಡೆಯರ ಮನೆಯಲ್ಲಿ ಲಭ್ಯವಾಗಿವೆ. 1948ರಲ್ಲಿ ಗಂಜಿಹಾಳ ಗ್ರಾಮದ ಲಕ್ಕಪ್ಪ ವ. ಬಸ್ಸಪ್ಪ ರಾಘಾಪುರ ಅವರು ಯಾವುದೋ ಕಾರಣದಿಂದ ಸಮಾಜದಿಂದ ಬಹಿಷ್ಕøತಗೊಂಡಿರುತ್ತಾರೆ. ಕೆಲವು ದಿವಸಗಳ ನಂತರ ಲಕ್ಕಪ್ಪ ಅವರು-
“ತಾವು ಮತ್ತು ನಮ್ಮ ದೈವದವರು ಕೂಡೆ ನಮ್ಮ ಮನೆಯವರನ್ನೆಲ್ಲ ದೀಕ್ಷಾದಿಂದ ಶುದ್ಧಿ ಸಂಸ್ಕಾರ ಕೊಟ್ಟು ಉದ್ಧಾರ ಮಾಡಬೇಕೆಂದು ಬಿದ್ದುಬೇಡಿಕೊಳ್ಳುತ್ತೇವೆ ಮತ್ತು ಮುಂದಾದರೂ ಶ್ರೀಗಳವರ ದೈವದವರ ಅನುಮತಿ ಪ್ರಕಾರ ನಡೆದುಕೊಂಡು ಹೋಗುತ್ತೇವೆ.”
ಎಂದು ಸ್ವಸಂತೋಷದಿಂದ ದೈವದವರಿಗೆ ಮತ್ತು ಶ್ರೀ ಮಾದಪ್ಪಯ್ಯ ಒಡೆಯರ ಅವರಿಗೆ ಶರಣಾಗತ ಪತ್ರವನ್ನು ಕೊಡುತ್ತಾರೆ. ಆ ಪತ್ರವನ್ನು ಪರಾಮರ್ಶಿಸಿದ ದೈವದವರು ಗುರುಸನ್ನಿಧಿಗೆ-
“ಈ ದಿವಸ ತಮ್ಮ ಸನ್ನಿಧಿಯಲ್ಲಿ ನಮ್ಮ ಸಮಕ್ಷಮ ಸದರಿ ಘರಾಣೆದವರು(ಲಕ್ಕಪ್ಪ ವ.ಬಸ್ಸಪ್ಪ) ಇವರು ಶರಣಾಗತ ಪತ್ರದಿಂದ ದೈವದ ಸನ್ನಿಧಿಯಲ್ಲಿ ಬಿದ್ದುಬೇಡಿಕೊಂಡಿದ್ದರಿಂದ ಮತ್ತು ತಾವಾದರೂ ನಮ್ಮೆಲ್ಲರ ಕಬೂಲ ಕೇಳಿದ್ದರಿಂದ ನಾವೆಲ್ಲರೂ ನಮ್ಮ ಸ್ವಸಂತೋಷದಿಂದ ಲಕ್ಕಪ್ಪ ವ. ಬಸ್ಸಪ್ಪ ರಾಘಾಪುರ ಇವರ ಮನೆಯವರನ್ನೆಲ್ಲಾ ದೀಕ್ಷಾ ಮಾಡಿಕೊಳ್ಳಲಿಕ್ಕೆ ಅಡ್ಡಿಯಿಲ್ಲೆಂದು ಮತ್ತು ಮುಂದೆ ತಮ್ಮ ಆಜ್ಞೆಯ ಪ್ರಕಾರ (ಲಕ್ಕಪ್ಪ ವ. ಬಸ್ಸಪ್ಪ) ಇವರ ಸಂಗಡ ಬಳಕೆ ಭೋಜನ ವ ಹವ್ಯಕವ್ಯ ಕಾರ್ಯದಲ್ಲಿ ಕೂಡಿಕೊಂಡು ನಡೆಯಲಿಕ್ಕೆ ನಮ್ಮೆಲ್ಲರ ಕಬೂಲ ಮಾಡಿ ಸಮ್ಮತಿ ಪತ್ರ ಬರಕೊಟ್ಟಿರುತ್ತೇವೆ.”
ಈ ಎರಡು ಪತ್ರಗಳನ್ನು ಗಮನಿಸಿದ ಕುಲಗುರುಗಳು ಶುದ್ಧಿಸಂಸ್ಕಾರ ಪತ್ರವನ್ನು ನೀಡುತ್ತಾರೆ. ಆ ಪತ್ರದ ವಿವರಗಳು ಹೀಗಿವೆ.
“ಶ್ರೀಮತ್ ಸಂಸ್ಥಾನ ವಿಜಾಪುರ ತಾಲುಕು ಪೈಕಿ ಅರಕೇರಿ ವ. ಮೊಂಕಣಾಪುರದ ಅಮೋಘಶಿದ್ದೇಶ್ವರ ಸಿಂಹಾಸನದ ವ. ತಂಗಡಗಿ ಮಠದ ಹಾಲುಮತಕ್ಕೆ ಅಧ್ಯಕ್ಷರಾದ ಶ್ರೀಮಾದಪ್ಪಯ್ಯಸ್ವಾಮಿ ಮೊಕ್ಕಾಂ ಗಂಜಿಹಾಳ ಇವರ ಸನ್ನಿಧಿಯಿಂದಾ-ಶುದ್ಧಿಸಂಸ್ಕಾರ ಪತ್ರ ಬೈ|| ಗಂಜಿಹಾಳ ಹಾಲುಮತ ದೈವದವರಿಗೆ ವ. ಇನ್ನುಳಿದ ಪರಸ್ಥಲದ ಸಮಸ್ತ ಹಾಲುಮತ ದೈವಾಚಾರದವರಿಗೆ ಈ ಶುದ್ಧಿ ಸಂಸ್ಕಾರ ಪತ್ರದಿಂದ ತಿಳಿಸುವದರಲ್ಲಿ ಬರುತ್ತದಲ್ಲಾ. ಗಂಜಿಹಾಳ ಹಾಲುಮತ ದೈವದ ಪೈಕಿ ಅಂದರೆ (ಲಕ್ಕಪ್ಪ ವ.ಬಸ್ಸಪ್ಪ ತಂದಿ ಹನುಮಪ್ಪಾ ರಾಘಾಪೂರ) ಇವರನ್ನು ಸ್ಥಾನಿಕ ದೈವದವರು ಮತ್ತು (ಶ್ರೀಗಳವರು) ಕೂಡೆ ಏನಿಕೆ ಸಂಸರ್ಗ ದೋಷದಿಂದ ಅವರನ್ನು ಬಹುದಿವಸಗಳ ಲಾಗಾಯತ ಬಹಿಷ್ಕøತರನ್ನಾಗಿ ಮಾಡಿದ್ದು ಈಗ ತಾರೀಖು 22-6-1948 ದಿವಸ ಸದರಿ ಲಕ್ಕಪ್ಪ ವ.ಬಸ್ಸಪ್ಪ ತಂದಿ ಹನುಮಪ್ಪ ರಾಘಾಪೂರ ಇವರು ಸ್ಥಾನಿಕ ದೈವ ಮತ್ತು ಶ್ರೀಗಳವರ ಸನ್ನಿಧಿಯಲ್ಲಿ ಶರಣಾಗತ ಪತ್ರದಿಂದ ನಮ್ಮನ್ನು ಶುದ್ಧಿಸಂಸ್ಕಾರ ಕೊಟ್ಟು ಉದ್ಧಾರ ಮಾಡಬೇಕೆಂದು ಬಿದ್ದು ಬೇಡಿಕೊಂಡಿದ್ದಕ್ಕೆ ಸ್ಥಾ£ಕ ದೈವದವರು ಸದರಿಯವರನ್ನು ಉದ್ಧಾರ ಮಾಡಲಿಕ್ಕೆ ಎಲ್ಲರೂ ಸಮ್ಮತಿ ಕೊಟ್ಟದ್ದರ ಮೇಲಿಂದ ಸದರಿಯವರನ್ನು ಈ ದಿವಸ ಅಂದರೆ ತಾರೀಖು 28-6-1948 ಇಶ್ವಿ ದಿವಸ ಸದರಿಯವರ ಘರಾಣೆದಲ್ಲಿ ಸ್ಥಾನಿಕ ದೈವದವರನ್ನು ಕೂಡಿಕೊಂಡು ಪಂಚಗವ್ಯ ವಿಧಿಪ್ರಕಾರ ಶುದ್ಧಿ ಸಂಸ್ಕಾರ ಕೊಟ್ಟು ಉದ್ಧಾರ ಮಾಡಿರುತ್ತದೆ. ಕಾರಣ ಇನ್ನು ಮೇಲೆ ಸದರಿಯವರ ಸಂಗಡ ಸಮಾಜದಲ್ಲಿ ಕೂಡಿಕೊಂಡು ಬಳಕೆ ಭೋಜನ ಕಾರ್ಯಗಳಲ್ಲಿ ಕೂಡಿಕೊಂಡು ಹೋಗಬೇಕು. ಜೇರ ತಪ್ಪಿದಲ್ಲಿ ಸದರಿ (ಲಕ್ಕಪ್ಪ ವ.ಬಸ್ಸಪ್ಪ ರಾಘಾಪೂರ)ಇವರಿಗೆ ಆದ ಪ್ರಾಯಶ್ಚಿತ ನಿಮಗೆ ಮಾಡುವದರಲ್ಲಿ ಬರುವದೆಂದು ಸ£್ನಧಿಯಿಂದಾ ತಿಳಿಸಿದ ಶುದ್ಧಿಸಂಸ್ಕಾರ ಪತ್ರ ಸಹಿ||
ತಾರೀಖು: 29-6-1948 ಇಶ್ವಿ
ದ| ಶ್ರೀ ಮಾದಪ್ಪಯ್ಯಸ್ವಾಮಿ ಒಡೆಯರು
ಶ್ರೀಮಾದಪ್ಪಯ್ಯಸ್ವಾಮಿ ಒಡೆಯರು ಮೊಕ್ಕಾಮು ಗಂಜಿಹಾಳ.
ಇದರ ಪ್ರತಿ ಒಂದು ಬರಿಸಿ ಬಸ್ಸಪ್ಪ ರಾಘಾಪುರ ಇವರಿಗೆ ಕೊಟ್ಟಿರುತ್ತದೆ. ತಾರೀಖು: 1-7-1948
ಇಶ್ವಿ.
ಇನ್ನು ಕೆಲವು ಸಂದರ್ಭಗಳಲ್ಲಿ ದೈವದವರು ಕುಲ ಗುರುಗಳಿಂದಲೂ ಬಗೆಹರಿಯಲಾದ ಸಮಸ್ಯೆಗಳನ್ನು ಬೇರೆ ಸಮುದಾಯದ ಗುರುಗಳಿಂದ ಬಗೆಹರಿಸಿಕೊಂಡಿರುವುದಕ್ಕೆ ಕೆಲವು ದಾಖಲೆಗಳು ಸಾಕ್ಷಿಯಾಗಿದೆ. ಅಂಥ ದಾಖಲೆಗಳು ತುರ್ವಿಹಾಳದಲ್ಲಿ ದೊರೆತಿವೆ. ಹುನಗುಂದ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿರುವ ಹಾಲುಮತ ಸಮುದಾಯದ ದೈವದವರಿಗೆ ಸರೂರ ಮಂಕಯ್ಯ ಮತ್ತು ತಂಗಡಗಿ ಮಾದಯ್ಯ ಇವರಿಬ್ಬರಲ್ಲಿ ಕುಲಗುರುಗಳು ಯಾರು ಎಂಬ ಬಗ್ಗೆ ಉಜ್ಜನಿಪೀಠದ ಸ್ವಾಮಿಗಳ ಸಮ್ಮುಖದಲ್ಲಿ ನ್ಯಾಯವನ್ನು ನಿರ್ಣಯಿಸಲಾಗಿದೆ. ಆ ನ್ಯಾಯನಿರ್ಣಯ ಮಾಡಿದ ವಿವರಗಳು ಹೀಗಿವೆ-
“ಶ್ರೀಮತ್ಪರಶಿವ ದಕ್ಷಿಣಲನೋದ್ಭವ ಜಗದ್ಗುರು ದಾರುಕಾಚಾರ್ಯ ಪರಂಪರಾಗತ ಶ್ರೀಮತ್ರಮಪಾವನ ಭೂಸುರಕ್ಷೇತ್ರ ಶ್ರೀಮದ್ದುಜ್ಜನೀಶ ಧರ್ಮ ಸಾಂಹ್ಮಾಸನಸ್ಯ ಸರ್ವಸ್ವತಂತ್ರಾವತಾರ ಶಿಖಾಮುದ್ರಾಧೃತಾರಾದ ಮೌಕ್ತಿಕಾಸನವರ್ಷ ಲಾಂಛನ ಪರಿಶೋಭಿತ ಶಿವಚರ ಪಟ್ಟಾಧ್ಯಕ್ಷ ಮರುಳಶಿದ್ಧರಾಜದೇಶಿಕೇಂದ್ರ ಮಹಾಸ್ವಾಮಿ ಸನ್ನಿಧಿ ಅಧಿಕಾರ ಸ್ಥಾನದಿಂದಾ--
ಕೇವಲಾಸ್ಮದೀಯ ಕಾರುಣ್ಯಾಮೃತ ಸರಸೀಬಾಲ ಮರುಳೋಪಮಾನರಾದ ಹುನಗುಂದ ತಾಲೂಕು ಗೂಡೂರು ಆಜುಬಾಜು ಗ್ರಾಮಗಳ ಪಟ್ಟಚರಂತರು ಮಠದಮಹತ್ತು ದೇಸಾಯಿ ದೇಶಪಾಂಡ್ಯೆ ನಾಡಗೌಡರು ಶಟ್ರುಗೌಬಾ ಯಜಮಾನರು ಯಿನ್ನೂರು ಮುಂತಾದ ಸಮಸ್ತ ವೀರಶೈವ ಭಕ್ತಾವಳಿಗಳಿಗೆ ಮತ್ತು ಹಾಲುಮಥ ದೈವದವರಿಗೆ ಲಿಖಿಸಿದ ಅಮೋಘ ಆಶೀರ್ವಾಚನ ನಿರೂಪಸ್ತದು ಪರಿವಯಂ ಶ್ರೀ ಶಿವಯೋಗಾನಂದ ತಪಸಾಮ್ರಾಜ್ಯ ವೈಭವೈವ್ವಾಸಾಮಃಯುಷೋದಾ ಶುಭಾಂಗ ಯೋಗಾಕ್ಷೇಮಾತಿ ಶಯನಾಂ ಪದೇಪದೇ ಬಿನ್ನಹ ಪತ್ರಿಕಾಪ್ರೆಷಣೀಯತ್ರತಃ--
ಯೀಗ ನಿಮ್ಮಗೆ ಅಪ್ಪಣೆ ಕೊಡಿಸುವದೇನಂದರೆ ಸದರೀ ಹಾಲುಮಥ ದೈವಕ್ಕೆ ಸರೂರು ಮಂಕಯ್ಯ-ತಂಗಡಗಿ ಮಾದಯ್ಯ-ಯೀವುಭಯರು ಹುನಗುಂದ ತಾಲೂಕು ಪ್ರತಿಗ್ರಾಮಗಳಲ್ಲಿರುವ ಹಾಲುಮಥದ ದೈವದವರಿಗೆ ಗುರುಗಳೆಂಬೊ ಹಂಶದಲ್ಲಿ ಉಭಯರಿಗೆ ನ್ಯಾಯದಿಂದ ಸದರೀ ದೈವಕ್ಕೆ ತಸ್ತಿ ಕೊಡುವ ಅಂಶವನ್ನೂ ಸನ್ನಿಧಿಗೆ ಶೃತವಾಗಿ ಸದರೀ ಮಂಕಯ್ಯನಿಗೆ ಮಾದಯ್ಯನಿಗೆ ಗೂಡೂರು ಮೊಕ್ಕಾಮಿಗೆ ಹಾಜರಾಗಿ ನಿಮ್ಮ ನಿಮ್ಮ ಕಾಗದ ಪತ್ರಗಳು ಹಾಜರಪಡಿಸಿ ನ್ಯಾಯ ಹೊಂದಿದ್ದಕ್ಕೆ ಯರಡನೇ ಹುಕುಂ ಪಡದೇ ಹೋಗುವಂತೆ ಸನ್ನಿಧಿಯಿಂದಾ ಹುಕೂಂ ಅಪ್ಪಣೆಯಾದಕ್ಕೆ ಸದರೀ ಮುದ್ದತ್ತಿಗೆ ಸರಿಯಾಗಿ ಓಮಾದಯ್ಯನು ಮಾತ್ರ ಹಾಜರಾಗಿರುತ್ತಾನೆ. ಮಂಕಯ್ಯ ಯೆಂಬುವನು ತಾನು ಗ್ರಾಮದಲ್ಲಿ ಯಿದ್ದು ಗೈರಾಜರೆನಿಶಿ ಕೊಂಡು ಮುದ್ದತ್ತು ತಪ್ಪಿಶಿರುತ್ತಾನೆ. ಆದ ಕಾರಣಾ ಸದರೀ ಮಂಕಯ್ಯಯೆಂಬುವನು ಸನ್ನಿಧಿರೂಬರೂಬ ಹಾಜರಾಗಿ ಮುದ್ದತ್ತು ತಪ್ಪಿಶಿದ್ದಕ್ಕೆ ತಕ್ಕ ಸಂಜಾಯಿಷಿ ಕೊಟ್ಟು ಯೆರಡನೇ ಹುಕೂಂ ತಂದ ನಿಮ್ಮಲ್ಲಿ ಭಯಾನ ಪಡಿಸೋವರಿಗೂ ಸದರ ಮಂಕಯ್ಯನಿಗೆ ಯಾವದೊಂದು ಮರ್ಯಾದೆ ಕೊಡದೆ ಸದರ ಮಾದಯ್ಯನಿಗೆ ಗುರುಮನೆ ಹುಕೂಂ ಪ್ರಕಾರ ಮಾನಸನ್ಮಾನ ವಗೈರೆ ಕೊಟ್ಟು ಯೇನೊಂದು ಅಭ್ಯಂತರವಿಲ್ಲದೆ ಆಚರಿಸಿಕೊಂಡು ಹೋಗ ತಕ್ಕದ್ದು. ಏತದ್ವಿಷಯ ಗುರುಸಂಸ್ಥಾನವಾಂಛಾಸುಶೀಲರಾದ ಗುರುಪುತ್ರರಿಗೆ ಬಾಹುಲ್ಯವಾಗಿ ಲಿಖಿಸತಕ್ಕನಿರುತ್ತೆ.
ಮೊಕ್ಕಾಮು ಗೂಡೂರು ತಾಲೂಕು ಹುನಗುಂದ
ಮಿತಿ ಕೀಲಕನಾಮ ಸಂ||ರದ ಬಾದ್ರಪದ ಶು||4||
ತಾ|| 31-8-1708ನೇ ಯಿಸ್ವಿ.”
5. ಸುಡುಗಾಡ ಸಿದ್ಧನ ಕಥೆಯನ್ನು ನಿರೂಪಿಸುವ ದಾಖಲೆಪತ್ರ
ಅಲೆಮಾರಿ ಜನಸಮುದಾಯಗಳಲ್ಲಿ ಒಂದಾದ ಸುಡುಗಾಡ ಸಿದ್ಧರ ಕುರಿತು ಒಂದು ದಾಖಲೆ ಲಭ್ಯವಾಗಿದೆ. ಕುರುಬ ಸಮಾಜದ ಸಿದ್ಧ ಎಂಬ ಹೆಸರಿನ ವ್ಯಕ್ತಿಯು ಬಸವಣ್ಣನ ಸಮ್ಮುಖದಲ್ಲಿ ಸುಡುಗಾಡ ಸಿದ್ಧನಾಗಿ ಪ್ರಸಿದ್ಧನಾದದ್ದನ್ನು ಪವಾಡ ಕಥನದ ಮುಖಾಂತರ ದಾಖಲೆಯೊಂದು ನಿರೂಪಿಸುತ್ತದೆ. ಆರಂಭದಲ್ಲಿ ಶ್ರೀಗುರುಬಸವ ಲಿಂಗಾಯನಮಃ ಎಂದು ಆರಂಭವಾಗುತ್ತದೆ. ನಂತರದಲ್ಲಿ “ಕಲ್ಯಾಣಪುರದೊಳಗೆ ಶುಡುಗಾಡ ಶಿದ್ಧನು ನಿರ್ಮಾಣ ಆದದ್ದು ಬರಿಯುವದಕ್ಕೆ ಶುಭಮಸ್ತು” ಎಂದಿದೆ. ಬಿಜ್ಜಳನು ಬಸವಣ್ಣನನ್ನು ಪರೀಕ್ಷೆ ಮಾಡಬೇಕೆಂದು ಯೋಚಿಸಿದನು. ಒಂದು ದಿನ ಬಿಜ್ಜಳನು ಸಿದ್ಧನ ಹೆಂಡತಿಯನ್ನು ಕರೆಯಿಸಿ “ಗಂಡನು ಸ್ವರ್ಗವಾಶಿಯಾಗಿಯಿದಾನೆ’’ ಎಂದು ಬಸವಣ್ಣನಿಗೆ ಹೇಳಬೇಕೆಂದು ತಾಕೀತು ಮಾಡಿದನು. ಅದರಂತೆ ಅವಳು “ಮುಂದೆ ನನಗೇನು ಗತಿ ನಂನ್ನ ಉದ್ದಾರ ಮಾಡಬೇಕು” ಎಂದು ಕಪಟತನದಿಂದ ಬಸವಣ್ಣನಿಗೆ ಹೇಳಿದಳು. ಬಸವಣ್ಣನು ಆಕೆಯ ಕಪಟತನವನ್ನು ಅರಿತು “ನಿನ್ನ ಗಂಡಾ ಸತ್ತುಯಿದ್ದಾನೆ ರುದ್ರಭೂಮಿಗೆವೈದು ಸಮಾಧಿ ತ್ಯೆಗೆದು ಮಣ್ಣ ತೋಡು” ಎಂದು ಹೇಳಿದನು. ಈ ವಾಕ್ಯವನ್ನು ಕೇಳಿದ ಆಕೆ ಮನೆಗೆ ಬಂದು ಗಂಡನನ್ನು ಮಾತನಾಡಿಸಲು, ಆತ ಸತ್ತು ಹೋಗಿದ್ದನು. ಬಸವಣ್ಣನು ನುಡಿದ ಮಾತು ಸತ್ಯವಿದೆ ಅಂದುಕೊಂಡು ರೋಧಿಸುತ್ತ ಬಿಜ್ಜಳನಲ್ಲಿಗೆ ಬಂದು “ಯಲೋ ರಾಜನೇ, ಮಕ್ಕಳು ಮರಿಗೆ ಯೇನು ಗತಿ ಮಾಡಲಿ. ತಾವು ಸತ್ಪುರುಷರ ಸಂಗಡ ಜಿದ್ದು ಮಾಡಿದ್ದೀರಿ. ಅದೇ ಕರೇವು ಆಯಿತ್ತು” ಎನ್ನಲು ಬಿಜ್ಜಳರಾಯನು ನಾಲ್ಕು ಸಾವಿರ ವರಹಗಳ ಕೊಟ್ಟು ಕಳಿಸಿದನು. ಕುರುಬರ ಮಂಡಳಿ ಕೂಡಿ ಶವಕ್ಕೆ ಶೃಂಗಾರ ಮಾಡಿ ಸ್ಮಶಾನಕ್ಕೆ ಹೋಗಿ ಸಮಾಧಿಯನ್ನು ತೋಡುವ ಸಂದರ್ಭದಲ್ಲಿ ಬಸವಣ್ಣನು ಮನೆಯೊಳಗಿದ್ದನು. ಆತನ ಬಳಿಗೆ ಮಂಡಳಿಯು ಬಂದು ದೀರ್ಘದಂಡ ನಮಸ್ಕಾರವನ್ನು ಮಾಡಿ “ತಾವು ಮೂರು ಲೋಕಕ್ಕೆ ಕರ್ತೃಯಿದ್ದೀರಿ. ಯಿಂದು ವಂದು ಅಪರಾಧವನ್ನು ಮನಶಿಗೆ ತಾರದೆ ಕುರುಬರ ಶಿದ್ದನು ಸತ್ತದ್ದು ಲೋಕಗೆ ಸಂಜೀವನವ ಮಾಡಿ ತೀರ್ಥ ತೆಗೆದುಕೊಳ್ಳಬೇಕು” ಎಂದು ಬೇಡಿಕೊಂಡರು. ಬಸವಣ್ಣನು ಮಸ್ತಕದ ಮೇಲೆ ಹಸ್ತವನ್ನಿಡಲು ಶಿದ್ಧನು ಎದ್ದು ನಿಂತನು. ಆಗ ಸರ್ವರು “ಹೇ ಸ್ವಾಮಿ ನಿಮ್ಮ ಕೀರ್ತಿದೂರ ಬೇಳೋಣವಾಯಿತ್ತು’’ ಎನ್ನುತ್ತ ದೀರ್ಘದಂಡ ನಮಸ್ಕಾರವ ಮಾಡಿದರು. ಸಮಾಧಿಗೆ ಕುರಿಹಾರವನ್ನು ಕೊಟ್ಟು ಸಮಾಧಿ ಮುಚ್ಚಿಸಿದರು. ಸ್ಮಶಾನದಲ್ಲಿ ಜೀವಂತವಾದವರು ಮರಳಿ ಮನೆಗೆ ಬರುವಂತಿಲ್ಲ. ಹೀಗಾಗಿ ಅವರಿಗೆ ಅಲ್ಲಿಯೇ ಒಂದು ಮಠ ಕಟ್ಟಿಕೊಂಡು ಪೂಜೆಪುನಸ್ಕಾರಗಳನ್ನು ಮಾಡುತ್ತ ಇರಬೇಕು. ಹಾಲುಮತದ ಕುಲ ಕುರುಬರಟ್ಟಿಗೆ ಒಂದು ಕೋಡಿನ ಮರಿ, ಗೊಲ್ಲರಟ್ಟಿಗೆ ಒಂದು ಕೋಡಿನ ಮರಿಯನ್ನು ಜೀವನಾಧಾರಕ್ಕಾಗಿ ಸಿದ್ದನಿಗೆ ಕೊಡಬೇಕು. ಆ ಸಿದ್ಧನಿಗೆ ಸುಡುಗಾಡ ಸಿದ್ಧ ಎಂದು ಹೆಸರಿಟ್ಟು ಬಸವಣ್ಣನು ಕಲ್ಯಾಣಕ್ಕೆ ಹೋದನು.
ಬಳ್ಳಾರಿ ಜಿಲ್ಲಾ ಕೂಡ್ಲಗಿ ತಾ|| ಮೌಜೆ ದಸುಮಾಪುರ ದೊಳಗಿರುವ ಸುಡುಗಾಡ ಶಿದ್ಧರ ವೀರಭದ್ರಶಿದ್ಧ ಶಿದ್ಧರಾಮ ಶಿದ್ಧ ಇವರು ಹರಪನಹಳ್ಳಿ ಹಡಗಲಿ ತಾಲೂಕುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಅಲ್ಲಿನ ದೇಶಾಯಿ ಅಮಲ್ದಾರ ಶಿರಸ್ತೆದಾರು ಕುಲಕರಣಿ ಮುಂತಾದ ಸಮಸ್ತ ದೈವಾಚಾರ ದವರು ಮನಿವಂದಕ್ಕೆ ಒಂದು ದುಡ್ಡಿನ ಪ್ರಕಾರ ಕೊಡುತ್ತ ಹೋಗಬೇಕು. ಈ ಪ್ರಕಾರ ನಿಯಮಗಳನ್ನು ರೂಪಿಸಲಾಗಿದೆ. “ಸಂ 900 ಫಸಲಿ ಶ್ರೀಮನೃಪ ಶ್ಯಾಲಿವಾಹನ ಶಖ ವರುಷಂಗಳು ಹದಿನಾರುನೂರಾ ಹನ್ನೆರಡು” ಅಂದರೆ ಕ್ರಿ.ಶ.1690ರಲ್ಲಿ ಈ ಪತ್ರವು ಸಿದ್ಧವಾಗಿದೆ.
ಈ ವರೆಗಿನ ಶಾಸನ-ನಿರೂಪ-ಸನದುರೂಪದ ದಾಖಲೆಪತ್ರಗಳ ಪರಾಮರ್ಶನದಿಂದ ಕಂಡುಬರುವ ಸಂಗತಿಗಳನ್ನು ಕೆಳಗಿನಂತೆ ಕ್ರೋಢೀಕರಿಸಿ ಹೇಳಬಹುದು.
1. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳ ಹಾಗೂ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿಯಲ್ಲಿ ಅಮೋಘಸಿದ್ಧ ಪರಂಪರೆಯ ಮಠಗಳಿದ್ದವು. ಈ ಎರಡೂ ಮಠಗಳಿಗೆ ಶ್ರೀ ಮಾದಪ್ಪಯ್ಯ ಒಡೆಯರ ಅವರು ಗುರುಗಳಾಗಿದ್ದುದು ಇಲ್ಲಿನ ದಾಖಲೆಗಳು ಸ್ಪಷ್ಟಪಡಿಸುತ್ತವೆ.
2. ಅರಕೇರಿ ಅಮೋಘಸಿದ್ಧ ಸಂಪ್ರದಾಯದ ಒಡೆಯ ರಿಗೂ ಸರೂರ ರೇವಣಸಿದ್ಧ ಸಂಪ್ರದಾಯದ ಒಡೆಯರಿಗೂ ಆಗಾಗ ವಾದವಿವಾದಗಳು ನಡೆಯುತ್ತಿದ್ದವು. ಆ ವಿವಾದಗಳನ್ನು ಗುರುಹಿರಿಯರ ಸಮ್ಮುಖದಲ್ಲಿ ಬಗೆಹರಿಸಿ ಕೊಳ್ಳುತ್ತಿದ್ದರೆಂಬುದಕ್ಕೆ ಅನೇಕ ದಾಖಲೆ ಪತ್ರಗಳು ಸಾಕ್ಷಿಯಾಗಿವೆ.
3. ಬಿಜಾಪುರ ಮತ್ತು ಬಾಗಲಕೋಟ ಜಿಲ್ಲೆಯ ಅನೇಕ ಗ್ರಾಮಗಳ ಕುರುಬ ಮನೆತನಗಳ ಕುರಿತು ಅನೇಕ ಮಾಹಿತಿಗಳನ್ನು ಈ ದಾಖಲೆಗಳು ಒದಗಿಸುತ್ತವೆ.
4. ಮಾದಪ್ಪಯ್ಯ ಒಡೆಯರ ಹಾಗೂ ಸಿದ್ದಯ್ಯ ಒಡೆಯರ ಅವರು ಹಳ್ಳಿ-ಹಳ್ಳಿಗಳನ್ನು ಸುತ್ತಾಡಿ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಕುರುಬ ಸಮುದಾಯವನ್ನು ಜಾಗೃತಗೊಳಿಸುವಲ್ಲಿ ಹಾಗೂ ಅಭಿವೃದ್ಧಿ ಮಾಡುವಲ್ಲಿ ಸಾಕಷ್ಟು ಪರಿಶ್ರಮವಹಿಸಿದ್ದರೆಂಬುದು ಲಭ್ಯವಾದ ದಾಖಲೆಗಳು ತಿಳಿಸುತ್ತವೆ.
5. ಮಾದಪ್ಪಯ್ಯನವರು ಭಕ್ತರು ಕಾಣಿಕೆರೂಪದಲ್ಲಿ ಕೊಡುತ್ತಿದ್ದ ಹಣ ದವಸಧಾನ್ಯ ವಸ್ತ್ರ ಇತ್ಯಾದಿಗಳ ಮಾಹಿತಿಯನ್ನು ರಜಿಸ್ಟರ್ ಬುಕ್‍ನಲ್ಲಿ ದಾಖಲಿಸುತ್ತಿದ್ದರು. ಗ್ರಾಮದ-ತಾಲೂಕು-ಜಿಲ್ಲೆಯ ಹೆಸರು, ಗ್ರಾಮಕ್ಕೆ ಆಗಮಿಸಿದ ದಿನಾಂಕ, ನಿರ್ಗಮಿಸಿದ ದಿನಾಂಕ, ಶಿಷ್ಯರ ಪೂರ್ಣಹೆಸರು, ಶಿಷ್ಯರ ಗೋತ್ರ-ಮನೆದೇವರು, ಹಿಂದಿನ ರಜಿಸ್ಟರ್ ನಂಬರು, ಪೂಜಾಕಾಣಿಕೆ ರಕಮು, ಕಾಣಿಕೆ ರಕಮು, ಫಡಿಕಾಣಿಕೆ, ಅಂತೂ ಒಟ್ಟು ರಕಮು, ಕಾಣಿಕೆ ಕೊಟ್ಟವರ ಹಸ್ತೆ(ಸಹಿ), ಕಾಣಿಕೆ ಕೊಟ್ಟ ತಾರೀಖು, ಶರಾ ಹೀಗೆ ಹನ್ನೊಂದು ಕಾಲಂಗಳಲ್ಲಿ ಸಮಗ್ರ ಮಾಹಿತಿಯನ್ನು ರಜಿಸ್ಟರ್(ಖಾತೆಕೀರ್ದಿ) ಪುಸ್ತಕದಲ್ಲಿ ದಾಖಲಿಸಿರುವುದು ಮಾದಪ್ಪಯ್ಯನವರ ಪ್ರಾಮಾಣಿಕತೆಗೆ ಮತ್ತು ಲೆಕ್ಕಪತ್ರಗಳ ಪಾರದರ್ಶಕತೆಗೆ ನಿದರ್ಶನವಾಗಿದೆ.
6. ಕುಲಬಾಂಧವರ ನಡುವೆ ತಂಟೆ-ತಕರಾರುಗಳು ಬಂದರೆ ದೈವದವರು ಮತ್ತು ಒಡೆಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಿದ್ದರು. ಆ ಶಿಕ್ಷೆಯು ಕುಲಬಾಂಧವರಿಂದ ಬಹಿಷ್ಕಾರ, ದಂಡವನ್ನು ಕಟ್ಟುವುದು ಇತ್ಯಾದಿ ರೂಪದಲ್ಲಿರುತ್ತಿತ್ತು. ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರೆ ಅಂಥವರನ್ನು ಮತ್ತೆ ಸಮುದಾಯದೊಳಗೆ ಸೇರಿಸಿಕೊಳ್ಳುವ ಪದ್ದತಿಯಿತ್ತು. ಆ ಪದ್ದತಿ ಮೂರು ಹಂತಗಳಲ್ಲಿ ನಡೆಯುತ್ತಿತ್ತೆಂಬುದು ಇಲ್ಲಿನ ದಾಖಲೆಗಳು ತಿಳಿಸುತ್ತವೆ. ತಪ್ಪು ಮಾಡಿದ ವ್ಯಕ್ತಿ ಶರಣಾಗತ ಪತ್ರವನ್ನು ದೈವದವರಿಗೆ ನೀಡುವುದು, ಆ ಪತ್ರವನ್ನು ಪರಿಶೀಲಿಸಿ ಆ ವ್ಯಕ್ತಿಗೆ ಕ್ಷಮಾಪಣೆ ನೀಡಬೇಕೆಂಬ ಸಮ್ಮತಿ ಪತ್ರವನ್ನು ಕೊಡುತ್ತಾರೆ. ಆ ಶರಣಾಗತ ಪತ್ರ ಹಾಗೂ ಸಮ್ಮತಿ ಪತ್ರವನ್ನು ಪರಿಶೀಲಿಸಿ ಮಾದಪ್ಪಯ್ಯ ಒಡೆಯರು ಕ್ಷಮಾಪಣೆ ಮಾಡಿ ಶುದ್ಧಿ ಸಂಸ್ಕಾರ ಪತ್ರವನ್ನು ನೀಡಿದ್ದನ್ನು ಇಲ್ಲಿನ ಮೂರು ದಾಖಲೆ ಪತ್ರಗಳು ತಿಳಿಸುತ್ತವೆ.
7. ಎಲ್ಲ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆಗೊಳಪಡಿಸಿದಾಗ ಇನ್ನೂ ಅನೇಕ ವಿಷಯಗಳು ತಿಳಿದು ಬರುತ್ತವೆ. ಈ ನಿಟ್ಟಿನಲ್ಲಿ ಈ ಸಂಪ್ರಬಂಧ ಮೊದಲ ಪ್ರಯತ್ನವಾಗಿದೆ.
** ಮಾದಪ್ಪಯ್ಯನವರ ವಂಶಸ್ಥರೂ, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಚಿದಾನಂದಯ್ಯ ಗುರುವಿನ ಅವರ ಸೂಚನೆಯ ಮೇರೆಗೆ ನಾನು 2010 ಡಿಸೆಂಬರ್ ತಿಂಗಳಲ್ಲಿ ತುರವಿಹಾಳಕ್ಕೆ ಭೇಟಿ ಕೊಟ್ಟೆನು. ಆ ಸಂದರ್ಭದಲ್ಲಿ ಚಿದಾನಂದಯ್ಯ ಅವರು ತಮ್ಮ ವಂಶಸ್ಥರ ಬಗೆಗೆ, ತಮ್ಮ ಮನೆತನಗಳಲ್ಲಿ ಕಾಪಾಡಿಕೊಂಡು ಬಂದಿದ್ದ ಅನೇಕ ದಾಖಲೆ ಪತ್ರಗಳನ್ನು ತೋರಿಸಿ ಸಾಕಷ್ಟು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನನ್ನೊಂದಿಗೆ ತುರವಿಹಾಳಕ್ಕೆ ಬಂದು ಸಹಕರಿಸಿದವರು, ಗಂಗಾವತಿಯ ಸರಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಮತ್ತು ನನ್ನ ಸಂಶೋಧನ ವಿದ್ಯಾರ್ಥಿ ಮಿತ್ರ ಎನ್. ವಿರೂಪಾಕ್ಷಿ. ಇವರೆಲ್ಲರ ನೆರವನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

 ಪ್ರಾಧ್ಯಾಪಕ, ಹಸ್ತಪ್ರತಿ ಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ಬಳ್ಳಾರಿ ಜಿಲ್ಲೆ-583276.


Tuesday, August 18, 2015

ಕಿತ್ತೂರು ಸಂಸ್ಥಾನದ ಅಪ್ರಕಟಿತ ಮೋಡಿ ದಾಖಲೆಗಳು

ಕಿತ್ತೂರು ಸಂಸ್ಥಾನದ ಅಪ್ರಕಟಿತ ಮೋಡಿ ದಾಖಲೆಗಳು
(ಮಲ್ಲಸರ್ಜನನ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳು)
ಡಾ. ನರಹರಿ ಕೆ.ಎನ್.
1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡ ಬಳಿಕ ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಸಾಮ್ರಾಜ್ಯ ಪ್ರಬಲಗೊಂಡಿದ್ದರಿಂದ ಸಾಂಸ್ಕøತಿಕವಾಗಿ ಜನರ ಮೇಲೆ ಪ್ರಭಾವ ಬೀರಿವೆ. ಕಾರಣ ಉತ್ತರ ಕರ್ನಾಟಕದ ಎಲ್ಲಾ ಭಾಗದಲ್ಲಿ ಪಾರ್ಸಿ ಮತ್ತು ಮರಾಠಿ ಕಾಗದ ಪತ್ರಗಳ ವ್ಯವಹಾರ ನಡೆದಿರುವುದು ಇದಕ್ಕೆ ಸಾಕ್ಷಿ. ಸಾಮಾನ್ಯವಾಗಿ ಪತ್ರಗಳ ವ್ಯವಹಾರಗಳು ಮರಾಠಿ ಮೂಡಿ ಲಿಪಿಯಲ್ಲಿ ಬರೆಯಲ್ಪಟ್ಟಿದ್ದರೂ ಇದರ ಭಾಷೆ ಮಾತ್ರ ದೇವನಾಗರಿ ಮತ್ತು ಮರಾಠಿಯನ್ನು ಬಳಸಲಾಗಿದೆ. ಕೆಲವೊಮ್ಮೆ ಮೋಡಿ ಲಿಪಿಯಲ್ಲಿದ್ದರೂ ಕನ್ನಡ ಭಾಷೆಯಲ್ಲಿ ಪತ್ರ ಬರೆದಿರುವುದು ವಿಶೇಷವಾಗಿದೆ.1
ಮೋಡಿ ಇದು ಮಹಾರಾಷ್ಟ್ರದಲ್ಲಿಯ ಒಂದು ಲಿಪಿ. ಇದನ್ನು ದೇವಗಿರಿಯ ದಿವಾನ ಹೇಮಾಡಪಂತ ಇವರು ಶೋಧಿಸಿದರು. ಛತ್ರಪತಿ, ಪೇಶ್ವೆ, ಫಡಣೀಸ, ಶಿಂಧೆ, ಹೋಳಕರ, ಭೋಸಲೆ, ಚಟ್ನೀಸ ಮೊದಲಾದ ಅರಸರು ಮತ್ತು ಸರದಾರರು ಮೋಡಿಯಲ್ಲಿಯೇ ಪತ್ರ ವ್ಯವಹಾರ ಪ್ರಾರಂಭಿಸಿದರು. ಈ ಲಿಪಿಯಲ್ಲಿ ಪರಿಣಿತರಾದ ಆಗಿನ ಕಾರ್ಯಸ್ಥ ಪ್ರಭುಗಳು ಇದಕ್ಕೆ ರಾಷ್ಟ್ರೀಯ ಸ್ವರೂಪವನ್ನು ಕೊಟ್ಟರು.
ಮೋಡಿ ದಾಖಲೆಗಳು ಹೆಚ್ಚಾಗಿ ಪುಣೆಯ ಪತ್ರಾಗಾರದಲ್ಲಿ ಸಿಗುತ್ತವೆ. ಕ್ರಿ.ಶ.1818ರಲ್ಲಿ ಪೇಶ್ವೆಯರೊಡನೆ ಕೊನೆಯ ಯುದ್ಧ ಮುಗಿದ ನಂತರ ಅಂದಿನ ಮುಂಬೈ ಗೌರ್ನರ್ ಎಲಿಫನ್‍ಸ್ಟನ್‍ನು ಪೇಶ್ವೆ ಹುಜುರ ದಫ್ತರನ್ನು ತನ್ನ ವಶಕ್ಕೆ ತೆಗೆದುಕೊಂಡು ಪುಣೆಯ ಚೀಫ್ ಡೆಕ್ಕನ್ ಕಮೀಶನರ್ ಇವರ ಮೇಲ್ವಿಚಾರಣೆಯಲ್ಲಿ ಇಟ್ಟರು. ಈ ಇನಾಮ ಕಮೀಷನ್ (1843-1863) ಸಂಗ್ರಹಿಸಿದ ಅನೇಕ ಮೋಡಿ ಕಡತಗಳನ್ನು ಪುಣೆಯ ಪತ್ರಾಗಾರದಲ್ಲಿ ಇಡಲಾಗಿದೆ.
ಈ ಪತ್ರಾಗಾರದಲ್ಲಿ ಸುಮಾರು 34,972 ಗಂಟುಗಳು ಇವೆ. ಅವುಗಳಿಗೆ ‘ದಫ್ತರ್’ ಅಥವಾ ‘ರುಮಾಲು’ ಎಂದು ಕರೆಯುತ್ತಾರೆ. ಉದಾ: ಶಾಹು ದಫ್ತರ, ಪೇಶ್ವೆ ದಫ್ತರ, ಸಾತಾರಾ ಮಹಾರಾಜಾ ದಫ್ತರ, ಕರ್ನಾಟಕ ದಫ್ತರ, ಸೊಲ್ಲಾಪುರ ದಫ್ತರ ಇತ್ಯಾದಿ. ಕರ್ನಾಟಕ ದಫ್ತರದಲ್ಲಿ ಸುಮಾರು 2461 ರುಮಾಲುಗಳಿವೆ. ಅವುಗಳಲ್ಲಿ ಕಿತ್ತೂರಿಗೆ ಸಂಬಂಧಪಟ್ಟ ಕಡತಗಳು.
ಪುಣೆ ಪತ್ರಾಗಾರದಲ್ಲಿ ಸಾವಿರಾರು ತಾಳೆಬರಹದ ಪ್ರತಿಗಳು ಸಂಗ್ರಹವಾಗಿದೆ. ಅವುಗಳಲ್ಲಿ ಕಂಡುಬರುವ ಅಂಶಗಳೇನೆಂದರೆ ಆಯಾ ಪ್ರದೇಶದ ಆಯ-ವ್ಯಯ ಜೊತೆಗೆ ಅವರು ಕೊಡಮಾಡಿದ ಪೂಜೆ-ಪುನಸ್ಕಾರ, ಗಣಾಚಾರಿಕೆ ಹೀಗೆ ಇನ್ನಿತರ ಬಾಬ್ತುಗಳಿಗೆ ಕೊಡಮಾಡಿದ ಉಲ್ಲೇಖ ಇದೆ.
ಪುಣೆಯ ಡೆಕ್ಕನ್ ಕಾಲೇಜಿನ ವಸ್ತುಸಂಗ್ರಹಾಲಯ ದೊರೆತ ರುಮಾಲ್ ನಂ. 74 ರ ಕಡತದಲ್ಲಿ ಹಲವು ಪತ್ರಗಳಿದ್ದೂ ಬ್ರಿಟೀಷ್ ಹಾಗು ಪೇಶ್ವೆಯವರ ಪತ್ರ ವ್ಯವಹಾರಗಳ ದಾಖಲೆಗಳಿವೆ.
ಪತ್ರಗಳಲ್ಲಿ ಹೆಚ್ಚಿನವುಗಳು ಅರಬ್ಬಿ ಭಾಷೆಯ/ಪಾರ್ಸಿ ಭಾಷೆಯ ಅಂಕೆಗಳನ್ನು ಬಳಸಿರುತ್ತಾರೆ ಅಲಫ್, ತಿಸ್ನಯ್ಯ, ಮಯ್ಯಾತೀನ್, ಸುಮಾ ಎಂಬ ಪದಗಳಿಂದ ಅಂದಿನ ವರ್ಷಗಳನ್ನ ತಿಳಿಸುವ ಪದಗಳಾಗಿವೆ.2 ಆದ್ದರಿಂದ ಈ ಮೂಡಿ ಪತ್ರಗಳಲ್ಲಿ ಅರಬ್ಬಿ/ಪಾರ್ಸಿ, ಹಾಗೂ ಹಿಂದೂ ಪಂಚಾಂಗದ ಕಾಲಮಾನವನ್ನು ಬಳಸುತ್ತಿರುವುದರಿಂದ, ಅರಬ್ಬಿ ಭಾಷೆಯ ಕೋಷ್ಟಕವನ್ನು ಕೂಡಿಸಿ ಕಾಲಮಾನವನ್ನು ನಿರ್ಧರಿಸುವುದು ಕಷ್ಟಕರ. ಕೆಲವೊಮ್ಮೆ ಹಿಂದೂ ತಿಂಗಳು ಮತ್ತು ಅರಬ್ಬಿ ತಿಂಗಳು ಎರಡನ್ನು ಬಳಸಿದ ಉದಾಹರಣೆಯನ್ನು ಕಾಣುತ್ತೇವೆ.
ಕಿತ್ತೂರು ಸಂಸ್ಥಾನದಲ್ಲಿ ರಕ್ಷಣೆಗಾಗಿ 12000 ಸಾವಿರ ಸೈನ್ಯವಿತ್ತು ಸೈನ್ಯದ ಅವಶ್ಯಕತೆ ಬಿದ್ದಾಗ ಹಳ್ಳಿಯ ಓಲೆಕಾರರನ್ನು ಕರೆಯಿಸಿಕೊಂಡು ಗ್ರಾಮದ ಜನತೆಯ ಸಹಕಾರದಿಂದ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಪ್ರತಿಯೊಬ್ಬ ಓಲೆಕಾರರಿಗೂ ಕತ್ತಿ, ಡಾಲು, ಖಡ್ಗಗಳನ್ನು ನೀಡುವ ಪದ್ಧತಿ ಇದ್ದವು. ಯುದ್ಧದ ಉಪಯೋಗಕ್ಕಾಗಿ 60 ತೋಪುಗಳಿದ್ದವು. ಕಿತ್ತೂರು ಅರಮನೆಯಲ್ಲಿ 5000 ಸಶಸ್ತ್ರ ಸೈನ್ಯ, ಗಜದಳ, ಅಶ್ವದಳ, ಓಂಟೆಗಳು, ಮಂತ್ರಿಗಳು, ಕಾರಭಾರಿಗಳು, ದಳವಾಯಿಗಳು ಮುಂತಾದ ಅಧಿಕಾರಿ ವರ್ಗಗಳಿದ್ದವೆಂದು ತಿಳಿದುಬರುತ್ತದೆ. ಸಂಸ್ಥಾನಕ್ಕಾಗಿ ಪ್ರಾಣ ತೆರಲು ಸಿದ್ಧರಿರುವ ವೀರ ಭಟರುಗಳು ಕೂಡಾ ಇದ್ದರು. ಇದಕ್ಕೆ ರಾಜಗುರುಗಳ ಆಶೀರ್ವಾದವು ಇರುತ್ತಿತ್ತು.
ಕಿತ್ತೂರು ಸಂಸ್ಥಾನವು ವ್ಯಾಪ್ತಿಯ ದೃಷ್ಟಿಯಿಂದ ಒಂದು ಸಣ್ಣ ಸಂಸ್ಥಾನ. ಸಮಕಾಲೀನ ಟಿಪ್ಪುವಿನದು ದೊಡ್ಡ ಸಾಮ್ರಾಜ್ಯ. ಹಾಗಿದ್ದರೂ ಕಿತ್ತೂರು ಕೋಟೆ ಮತ್ತು ಸೈನ್ಯದ ಸಾಮಥ್ರ್ಯದ ಬಗ್ಗೆ ಬ್ರಿಟಿಷರಿಗೆ ಕೂಡ ಭಯವಿತ್ತು.3 ಕಿತ್ತೂರಿನ ಗಢಾದ ಮರಡಿ, ಕೆಮ್ಮನಮರಡಿ ಮತ್ತು ಮುನೋಳಿಯಲ್ಲಿ ಸೈನ್ಯದ ತರಬೇತಿಯ ಕೇಂದ್ರವಾಗಿತ್ತು. ಸರ್ದಾರ ಗುರುಸಿದ್ಧಪ್ಪ, ಅವರಾಧಿ ಸರದಾರ ವೀರಪ್ಪ, ಗುರುಪುತ್ರಪ್ಪ, ನರಸಿಂಹರಾವ್, ಗೋಲಂದಾಜ್ ಹಿಮ್ಮತ್‍ಸಿಂಗ್, ಸಂಗೊಳ್ಳಿ ರಾಯಣ್ಣ, ಗಜವೀರ, ಬಿಚ್ಚುಗತ್ತಿ ಚೆನ್ನಬಸಪ್ಪ ಮುಂತಾದ ಸೇನಾ ನಾಯಕರುಗಳಿದ್ದರು.
ಕಿತ್ತೂರು ಸಂಸ್ಥಾನದ ಇತಿಹಾಸದಲ್ಲಿ ಸೈನಿಕ ವ್ಯವಹಾರ ತುಂಬ ಮಹತ್ವದ ಪಾತ್ರವನ್ನು ವಹಿಸುತ್ತದೆ.  ಮಲ್ಲಸರ್ಜನನ ಕಾಲದಲ್ಲಿ ಸಂಸ್ಥಾನದ ಉಳಿವಿಗಾಗಿ ಸೈನಿಕರು ಮತ್ತು ಗ್ರಾಮದ ಜನರುಗಳು ಸಾಕಷ್ಟು ಪ್ರಯತ್ನ ಮಾಡಿರುವುದನ್ನು ಪತ್ರಗಳಲ್ಲಿ ಕಾಣುತ್ತೇವೆ. ಒಕ್ಕುಂದ, ದೇಗಾವಿ ಮತ್ತು ಬೀಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಲ್ಲಸರ್ಜನನ್ನು ರಕ್ಷಣೆ ಮಾಡುತ್ತಿರುವುದನ್ನು ಪುಣೆಯ ನಾನಾ ಫಡ್ನೀಸನಿಗೆ ಆತನ ಕಿರಿಯ ಅಧಿಕಾರಿಗಳು ಬರೆದ ಅಂಶಗಳಿವೆ.
ಒಂದನೆ ಪತ್ರದಲ್ಲಿ ಸೇವೆಯಲ್ಲಿರುವ ಬಾಪೂಜಿ ನಾರಾಯಣ ಪರಚುರೆ ಮಾಡುವ ಸಾಷ್ಟಾಂಗ ನಮಸ್ಕಾರಗಳು. ತಾರೀಖ್ ಚ. 26 ಸಾಬಾನ ಕಿತ್ತೂರು ತಾಲೂಕಿನ ಒಕ್ಕುಂದ ಗ್ರಾಮದ ಸೇವಕನು ಬರೆಯುವ ವರ್ತಮಾನ ಇಲ್ಲಿ ವಿಶೇಷವೇನೆಂದರೆ ದೇಸಾಯಿಯವರು ದೇಗಾವಿಯಲ್ಲಿದ್ದಾರೆ ಎಂದು ತಿಳಿದು ರಾಜಶ್ರೀ ಮಹದಜೀ ಪಂಥ್ ಬೆಹರೆಯವರು ಸೈನ್ಯದ ಸಮೇತವಾಗಿ ದೇಗಾವಿಗೆ ಸಮೀಪಕ್ಕೆ ಹೋದರು. ಆಗ ಮಧ್ಯಾಹ್ನವಾಗಿತ್ತು. ಮುಂದೆ ಹೋಗಬಾರದೆಂದು ಮಾತುಕತೆ ನಡೆದಿತ್ತು. ಇಷ್ಟರಲ್ಲೇ ಮಲ್ಲಸರ್ಜನ ದೇಸಾಯಿಯವರ ಕಡೆಗಿನ ಮೂರು ಕುದುರೆ ಸವಾರರು ಒಂದು ಸಾವಿರ ಸೈನಿಕರು ಮತ್ತು ಲೂಟಿಕೋರರು ಮುಂದೆ ಹೋಗಿದ್ದಾರೆಂದು ಗೊತ್ತಾದ ಮೇಲೆ ರಾಜಶ್ರೀ ದೊಂಡೋ ಪಂಥ್ ಗೋಖಲೆ ತಮ್ಮ ಶೂರ ಸೈನಿಕರೊಂದಿಗೆ ಬೆನ್ನತ್ತಿದರು. ಅವರು ಮುಂದೆ ಹೋಗಿ ಕುದುರೆಗಳನ್ನು ನಿಲ್ಲಿಸಿದಾಗ ಮಲ್ಲಸರ್ಜನ ದೇಸಾಸಿಯವರ ಕುದುರೆ ಸವಾರರು ಓಡಿ ಹೋದರು. ನಂತರ ಸುಮಾರು ನೂರು ಸೈನಿಕರ ಸಾವನ್ನು ಅನುಭವಿಸಿದರು. ಅನೇಕರು ಗಾಯಾಳುಗಳಾದರು. ಇದೇ ಸಂದರ್ಭದಲ್ಲಿ ರಾಸ್ತೆಯವರ ಕಡೆಯ ಸೈನಿಕರು ನೂರೈವತ್ತೂ ಹೆಚ್ಚು ಜನ ಬೇರೆ ಕಡೆಯಿಂದ ಬಂದರು. ಅವರು 10-15 ಜನರನ್ನು ಕೊಂದು ಹಾಕಿದರು. ಈ ಘಟನೆಯು ದೇಗಾವಿಯ ಸಮೀಪ ನಡೆಯಿತು. ಸಂಕೋಜಿ ಕಾಟೆ ಇವರ ಸೈನ್ಯವು ಇಲ್ಲಿಗೆ ಬಂದಾಗ ಯುದ್ಧ ಮಾಡುವ ಸಂದರ್ಭದಲ್ಲಿ ಇವರ ಎದೆಗೆ ಕಲ್ಲು ಬಡಿದು ಮೂತ್ರ ಬಂದಾಗಿತ್ತು. ಆಗ ನಾಲ್ಕೈದು ತಾಸುಗಳ ಕಾಲ ವಿಶ್ರಾಂತಿ ಪಡೆದು ಚೇತರಿಸಿಕೊಂಡರು. ಗೋಖಲೆಯವರ ಕಡೆಗಿನ ಎಂಟು ಕುದುರೆಗಳು ಬೆಹರೆಯವರ ನಾಲ್ಕೈದು ಕುದುರೆಗಳು ಕಾಟೆಯವರ ಒಂದೆರಡು ಕುದುರೆಗಳು ಗಾಯಾಳುಗಳಾಗಿದ್ದವು. ರಾಸ್ತೆಯವರ ಒಂದು ಕುದುರೆ ಸತ್ತು ಹೋಗಿದೆ ಎಂದು ವರ್ತಮಾನ ಬಂದಿದೆ ಎಂದು ಮಾಹಿತಿಗಾಗಿ ಪತ್ರದಲ್ಲಿ ಉಲ್ಲೇಖವಿದೆ.4
ಎರಡನೆ ಪತ್ರದಲ್ಲಿ ಮಹದಜೀ ಖಂಡೆರಾವ್ ಮಾಡುವ ನಮಸ್ಕಾರಗಳು. ವಿನಂತಿ. ಚ. 28 ಸಾಬಾನ (ಉರ್ದು ಮಾಸ) ಇಲ್ಲಿಯವರೆಗೆ ಎಲ್ಲವೂ ಕ್ಷೇಮ. ಕಿತ್ತೂರು ತಾಲೂಕಿನ ಒಕ್ಕುಂದ ಗ್ರಾಮದಲ್ಲಿರುವ ಸೇವಕನಾಗಿರುವ ನಾನು ತಿಳಿಸುವುದೇನೆಂದರೆ ಚ. 25ರಂದು ರಾಜಶ್ರೀ ಮಹದಜೀ ಪಂಥ್ ಬೆಹೆರೆ ಅವರು ತಮ್ಮ ಸೈನ್ಯವನ್ನು ದೇಗಾವಿಗೆ ತೆಗೆದುಕೊಂಡು ಹೋದರು. ಆಗ ಮಧ್ಯಾಹ್ನವಾಗಿತ್ತು. ಅಲ್ಲಿಂದ ಸುಮಾರು 50 ಜನ ಕುದುರೆ ಸವಾರರು ಸುಮಾರು 500 ಜನ ಸೈನಿಕರು ಮುಂದೆ ಹೋಗಿ ದೊಂಡೋಪಂಥ್ ಗೋಖಲೆ ಆನಂದ ಬಾಬರ ಮತ್ತು ಸಕೋಜಿ ಕಾಟೆ ಇವರ ನಾಯಕತ್ವದಲ್ಲಿ ಮೂರು ತಂಡಗಳನ್ನಾಗಿ ವಿಂಗಡಿಸಿ ಮಲ್ಲಸರ್ಜನ ದೇಸಾಯಿಯ ಸೈನ್ಯವನ್ನು ತಡೆ ಹಿಡಿಯಲು ಪ್ರಯತ್ನಮಾಡಿದರು. ಆಗ ಯುದ್ಧ ನಡೆಯಿತು. ಅಲ್ಲಿ ಸೇರಿದಂತಹ ಜನರು ಕುದುರೆ ಸವಾರರನ್ನು ಕಂಡು ತಾವೂ ಕುದುರೆಯನ್ನು ಹತ್ತಿ ಯುದ್ಧವನ್ನು ಆರಂಭಿಸಿದರು. ಸುಮಾರು 75-100 ಜನರನ್ನು ಈ ಯುದ್ಧದಲ್ಲಿ ಕೊಲ್ಲಲಾಯಿತು. ಅನೇಕ ಜನರಿಗೆ ಗಾಯವಾಯಿತು. ನಂತರ ಮೂರೂ ಜನ ಸೈನ್ಯದ ಮುಖ್ಯಸ್ಥರೂ ಒಂದು ಕಡೆ ಸೇರಿದ್ದಾಗ ಅಲ್ಲಿಗೆ ಬೆಹೆರೆಯವರು ಆಗಮಿಸಿದರು. ಆಗ ಸ್ಥಳೀಯ ಜನರು ಪರಾಭವಗೊಂಡಿದ್ದರು. ಸಂಜೆಯ ವೇಳೆಗೆ ಸೈನ್ಯವು ಠಾಣೆಗೆ ಬಂದಿತು. ಆಗ ರಾಸ್ತೆಯವರ ಸೈನ್ಯದ ಒಂದು ಕುದುರೆ ಸತ್ತು ಬಾಬರನ ಒಬ್ಬ ಸೈನಿಕ ಸತ್ತಿದ್ದನು. ಐದಾರು ಕುದುರೆಗಳು ಗಾಯಗಳಾಗಿದ್ದವು. ಹತ್ತರಿಂದ 12 ಜನರು ಪೆಟ್ಟನ್ನು ತಿಂದಿದ್ದರು. ಮರುದಿವಸ ಅಂದರೆ ಚ. 26 ರಂದು ಸ್ಥಳೀಯ ಜನರು ಹೆದರಿಕೆಯಿಂದ ರಾತ್ರಿ ವೇಳೆಯಲ್ಲಿ ದೇಗಾವಿಯನ್ನು ಬಿಟ್ಟು ಓಡಿಹೋದರು. ಅವರ ಜೊತೆಯಲ್ಲಿ ಸುಮಾರು 1500 ಸೈನಿಕರು ನೂರು ಕುದುರೆ ಸವಾರರು ಇದ್ದರೆಂದು ತಿಳಿದುಬರುತ್ತದೆ. ಅರ್ಧ ದಾರಿಯಲ್ಲಿ ಹೋದಾಗ ಅವರ ಜೊತೆಗಿದ್ದ ಸುಮಾರು 500 ಸೈ£ಕರಲ್ಲಿ ಕೆಲವರು ಬಿಟ್ಟು ಓಡಿ ಹೋದರು. ಹನುಮಂತ ಗಡ ಮತ್ತು ಬಿಜಗರಣಿ ಸಮೀಪವಿರುವ ಹಲಸಿಯ ಅಡವಿಯಲ್ಲಿ ಅವರು ತಂಗಿದ್ದರು. ಜೊತೆಗೆ ಸಮೀಪದ ಸಂಗೊಳ್ಳಿ, ಶೀಗಿ ಹಳ್ಳಿ, ದೇಗಾವಿ ಮತ್ತು ಗಂದಿಗವಾಡದಿಂದ ಸುಮಾರು 2000 ಸೈನಿಕರು ಇದ್ದಾರೆ ಒಟ್ಟಿನಲ್ಲಿ 3-5 ಸಾವಿರ ಜನ ಕೂಡಿಸಿರಬಹುದೆಂದು ತಿಳಿದುಬರುತ್ತದೆ. ನಮ್ಮಲ್ಲಿ ಕೇವಲ ಎರಡು ಸಾವಿರದ ಐದುನೂರು ಸೈನಿಕರು ಮಾತ್ರವಿದ್ದು ಮೊದಲು 2 ಠಾಣೆಗಳಿದ್ದವು. ಆವಾಗ ಎಲ್ಲವೂ ಸರಿ ಎನಿಸುತ್ತಿತ್ತು. ಆದರೆ ಈಗ ಕೆಲವು ಠಾಣೆಗಳು ಕಿತ್ತೂರಿನಲ್ಲಿಯೇ ಉಳಿದವು. ಮತ್ತೆ ಕೆಲವು ದೇಸಾಯಿಯವರ ಕಡೆಗೆ ಉಳಿದವು. ಹೀಗಾಗಿ ಒಟ್ಟಿನಲ್ಲಿ ಬಂದೋಬಸ್ತ್ ಆಗುವವರೆಗೂ ಮುಖ್ಯಠಾಣೆಯ ಮೇಲೆ ಬಹಳಷ್ಟು ಸೈನಿಕರನ್ನು ನೇಮಿಸಬೇಕಾಗಿದೆ. ಸಣ್ಣ ಪುಟ್ಟ ಠಾಣೆಗಳನ್ನು ರಕ್ಷಣೆ ಮಾಡಲು ಕೆಲವು ಸೈನಿಕರನ್ನು ಇಡಲಾಗಿದೆ. ಇದನ್ನು ಮಾಡದಿದ್ದರೆ ಬಂದೋಬಸ್ತ್ ಆಗುವುದಿಲ್ಲ. ನಮ್ಮ ಸಿಬ್ಬಂದಿಯನ್ನು ಹೆಚ್ಚು ಮಾಡಬೇಕಾಗಿದೆ. ಬೆಹೆರೆಯವರ ಕಡೆಯಿಂದಲೂ ಬಂದೋಬಸ್ತ್ ಆಗಬೇಕಾಗಿದೆ. ಠಾಣೆಗಳಲ್ಲಿ ಸಿಬ್ಬಂದಿಗಳ ಕಡಿಮೆಯಾಗಿದೆ. ದೇಸಾಯಿಯವರು ಅಡವಿಯಲ್ಲಿ ಅಡಗಿಕೊಂಡಿದ್ದರೆ ಸೈನಿಕರಿಲ್ಲದೆ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಆದ್ದರಿಂದ ಸುಮಾರು 2 ಸಾವಿರ ಸೈನಿಕರನ್ನು ಕಳಿಸುವ ವ್ಯವಸ್ಥೆ ಮಾಡಬೇಕು. ಇಲ್ಲಿನ ಬಂದೋಬಸ್ತ್ ಬಗ್ಗೆ ಸ್ವಾಮಿಯವರಿಗೆ ಎಲ್ಲವೂ ತಿಳಿದ ವಿಷಯವಾಗಿದೆ. ಮುಂದೆ ಏನು ಆಗುತ್ತದೆ ಎನ್ನುವುದನ್ನು ಬರೆದು ಕಳಿಸುತ್ತೆನೆ. ಇದು ತಮ್ಮ ಮಾಹಿತಿಗಾಗಿ ಇಂತಿ ನಿಮ್ಮ ಸೇವಕನೆಂದು ದಾಖಲಿಸಿದೆ.5
ಮೂರನೆ ಪತ್ರದಲ್ಲಿ ಕಿತ್ತೂರಿನ ತಾಲೂಕಿನ ಸುದ್ದಿ ತಮಗೆ ತಲುಪಿದೆ ಚ. 15 ಜಿಲಕಾದ (ಉರ್ದು ಮಾಸ)ದಂದು ರಾಜಶ್ರೀ ಮಹದಜಿ ಪಂಥ್ ಬೆಹೆರೆ ಇವರ ಸೈನ್ಯದ ವಾಸ್ತವ್ಯ ಬೀಡಿಯಲ್ಲಿದೆ. ಅಲ್ಲಿಂದ ಎರಡು ಸಾವಿರ ಸೈನಿಕರನ್ನು ತೆಗೆದುಕೊಂಡು ಕ್ರೂರ ಸೈನಿಕರ ಜೊತೆಗೆ ಹಲಸಿಯ ಸಮೀಪವಿರುವ ಹನುಮಂತಗಡದಲ್ಲಿದ್ದಾರೆ. ಹಲಸಿಯ ಮೇಲೆ ದಾಳಿ ಮಾಡಿ ಆ ಪೇಟೆಯನ್ನು ವಶಪಡಿಸಿಕೊಂಡರು. ನಂತರದಲ್ಲಿ ಕೋಟೆಯಲ್ಲಿ ಬಹಳಷ್ಟು ಚಟುವಟಿಕೆಗಳು ನಡೆದವು. ಅ ಸಂದರ್ಭದಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲು ಆಗಲಿಲ್ಲ. ಪೇಟೆಯನ್ನು ಬಿಟ್ಟು ಸೈನ್ಯದ ಪಡೆ ಮತ್ತೆ ಹಿಂತುರಿಗಿ ಬಂದಿತು. ಆಗ 50-60 ಜನ ಸಾವಿಗೆ ಈಡಾದರು. ಸುಮಾರು 75 ಜನರು ಗಾಯಾಳುಗಳಾದರು. ಚ. 16 ರಂದು ರಾಜಶ್ರೀ ಮೋರೋ - ಬಾಪು ಫsÀಡ್ಕೆ ಇವರು ಬೆಹೆರೆಯವರ ಸೈನ್ಯದಲ್ಲಿ ಹಾಜರಾದರು. ನಂತರದಲ್ಲಿ ಹಲಸಿಯ ಸಮೀಪದಲ್ಲಿರುವ ಹನುಮಂತಗಡಕ್ಕೆ ಹೋಗಲು ತೀರ್ಮಾನಿಸಿದರು. ಆಗ ಕಿತ್ತೂರ್‍ಕರ್ ದೇಸಾಯಿಯವರು ತಮ್ಮ ಕ್ರೂರ ಸೈನಿಕರೊಂದಿಗೆ ಹಲಸಿಯಿಂದ ಹನುಮಂತ ಗಡದ ಅಡವಿಯ ಕಡೆಗೆ ಓಡಿಹೋದರು. ಮುಫ್ತಿಯಲ್ಲಿದ್ದ ಕೆಲವು ಸೈನಿಕರನ್ನು ಖಾನಾಪುರದಲ್ಲಿಟ್ಟರು. ಸೈನ್ಯವನ್ನು ತೆಗೆದುಕೊಂಡು ದೇಸಾಯಿಯವರನ್ನು ಬೆನ್ನತ್ತಿಕೊಂಡು ಹೋಗಲು ನಿರ್ಧರಿಸಲಾಯಿತು. ಆಗ ಪೆದ್ರು ಫಿರಂಗಿ ಶಿವರುದ್ರಪ್ಪ ವಾಣಿ ಇವರು ಕಿತ್ತೂರಕರ್ ದೇಸಾಯಿಯವರ ಕಡೆಗೆ ಇದ್ದರು. ಇವರ ಕುಟುಂಬದ ಜನರನ್ನು ಖಾನಾಪುರಲ್ಲಿ ಬಂಧಿಸಿದಾಗ ಇವರು ಅಡವಿಯಿಂದ ಓಡಿಬಂದರು ಎಂಬುದು ಖಚಿತ ಸುದ್ಧಿಯಾಗಿದೆ, ಮಾಹಿತಿಗೆ ತಿಳಿಸಲಾಗಿದೆ ಎಂದು ದಾಖಲಿಸಿದೆ.6
ಅಪ್ರಕಟಿತ ದಾಖಲೆಗಳಿಂದ ತಿಳಿದುಬರುವ ಅಂಶಗಳೇನೆಂದರೆ
ಕಿತ್ತೂರಿನ ಮಲ್ಲಸರ್ಜನ ದೇಸಾಯಿಯ ಸೈನ್ಯ ಮತ್ತು ರಾಜಶ್ರೀ ಮಹದಜಿ ಪಂಥ ಬೆಹೆರೆಯವರ ಸೈನ್ಯದ ಮಧ್ಯೆ ನಡೆದ ಕದನದ ವಿವರ ಕದನದಿಂದಾಗುವ ಪರಿಣಾಮಗಳನ್ನು ಪ್ರಸ್ತಾಪಗೊಂಡಿದೆ.  ಮಲ್ಲಸರ್ಜನನ ಸೈನ್ಯದ ಬಲದ ಬಗ್ಗೆ ಉಲ್ಲೇಖ ಮಾಡಿರುವುದು ಇಲ್ಲಿಯ ಒಂದು ವಿಶೇಷತೆಯಾಗಿದೆ. ರಾಜಶ್ರೀ ದುಂಡೋಪಂಥ ಬೆಹೆರೆಯವರು ತಮ್ಮ ಸೈನಿಕರನ್ನು ಒಡಗೂಡಿ ಮಲ್ಲಸರ್ಜನನ್ನು ಬೆನ್ನತ್ತಿಕೊಂಡು ಹೋದಾಗ ಉಂಟಾದ ಯುದ್ಧದಲ್ಲಿ ಸೈನ್ಯದ ಮುಖ್ಯಸ್ಥನಾದ ಸಂಕೋಜಿ ಕಾಟೆಯವರಿಗೆ ಪೆಟ್ಟು ತಗುಲಿ ಕೆಲವು ಕಾಲ ಚೇತರಿಸಿಕೊಳ್ಳಬೇಕಾಯಿತು. ಬೆಹೆರೆಯವರ ಕೆಲವು ಕುದುರೆಗಳು ಗಾಯವಾಗಿದೆಯೆಂಬುದು ಈ ಪತ್ರದಲ್ಲಿ ಕಂಡುಬಂದಿದೆ. ಮಲ್ಲಸರ್ಜನನು ಒಕ್ಕುಂದದಿಂದ ಖಾನಾಪುರದ ಕಡೆಗೆ ಓಡಿಹೋದನೆಂದು ಇದರಿಂದ ತಿಳಿದುಬರುತ್ತದೆ.
ಎರಡನೆ ಪತ್ರವು ಹಿಂದಿನ ಪತ್ರದ ಮುಂದುವರೆದ ಭಾಗವಾಗಿದ್ದು, ದೇಗಾವಿಯಲ್ಲಿ ನಡೆದ ಬೆಹೆರೆ ಮತ್ತು ಮಲ್ಲಸರ್ಜನನ ಸೈನ್ಯದ ನಡುವೆ ನಡೆದ ಘರ್ಷಣೆಯ ವಿವರ ಸಂಪೂರ್ಣವಾಗಿ ತಿಳಿದು ಬರುತ್ತದೆ.  ಬೆಹೆರೆಯವರ ಸೈನ್ಯವು ದೇಗಾವಿಗೆ ಹೋಗುವವರೆಗೆ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಇವುಗಳ ನೇತೃತ್ವವನ್ನು ದುಂಡೋಪಂಥ ಗೋಖಲೆ, ಆನಂದ ಬಾಬರ್ ಮತ್ತು ಸಂಕೋಜಿ ಕಾಟೆ ವಹಿಸಿಕೊಂಡಿದ್ದರು. ಇವರೆಲ್ಲರೂ ಕೂಡಿ ಮಲ್ಲಸರ್ಜನನ ಸೈನ್ಯವನ್ನು ತಡೆಯಲು ಪ್ರಯತ್ನಿಸಿ ವಿಫಲರಾದರು ಕಾರಣ ದೇಗಾವಿ, ಗಂಧಿಗವಾಡ, ಸಂಗೊಳ್ಳಿ ಮತ್ತು ಶೀಗಿಹಳ್ಳಿಯ ಜನರು ಸುಮಾರು 2000ದಷ್ಟಿದ್ದು, ಮಲ್ಲಸರ್ಜನ ಫಲಾಯನಗೈಯಲು ಸಹಾಯಕರಾದರು.  ಈ ಪತ್ರದಿಂದ ತಿಳಿದುಬರುವ ಅಂಶವೆಂದರೆ ಮಲ್ಲಸರ್ಜನ ದೇಸಾಯಿಯವರು ಸಂಕಷ್ಟ ಬಂದಾಗ ಅಡವಿಯಲ್ಲಿ ಅಡಗಿಕೊಂಡು ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರು. ಹಾಗೂ ತಮ್ಮ ಬಂದೋಬಸ್ತಿಗಾಗಿ ಗ್ರಾಮಗಳ ಜನರನ್ನು ಬಳಸಿಕೊಳ್ಳುತ್ತಿದ್ದರು ಎಂಬುದು ತಿಳಿದುಬರುತ್ತದೆ.
ಮೂರನೆ ಪತ್ರದಲ್ಲಿ ಕಿತ್ತೂರ್‍ಕರ್ ದೇಸಾಯಿಯವರು ಹಲಸಿ ಮತ್ತು ಹನುಮಂತಗಡದಲ್ಲಿದ್ದಾರೆ ಎಂಬುದನ್ನು ತಿಳಿದು ಮಹದಜಿ ಪಂತ್ ಬೆಹರೆಯವರು ಇವರನ್ನು ಬೆನ್ನಟ್ಟಿಕೊಂಡು ಹಲಸಿ ಪೇಟೆಯ ಮೇಲೆ ದಾಳಿ ನಡೆಸಿದರು. ಅಷ್ಟರ ವೇಳೆಗಾಗಲೇ ಕಿತ್ತೂರ್‍ಕರ್ ದೇಸಾಯಿಯ ಸೈನ್ಯವು ಹಲಸಿಯನ್ನು ಬಿಟ್ಟು ಹನುಮಂತಗಡದ ಅಡವಿಯನ್ನು ಸೇರಿದ್ದರು. ಆಗ ಜನರಿಗೂ ಮತ್ತು ಸೈನಿಕರಿಗೂ ಯುದ್ಧ ನಡೆದಾಗ 50-60 ಜನರು ಸಾವನ್ನು ಅನುಭವಿಸಿದರು. ಸುಮಾರು 75 ಕ್ಕೂ ಹೆಚ್ಚು ಜನ ಗಾಯಾಳುಗಳಾದರು. ಗುಪ್ತದಳದವರ ಸಹಾಯದಿಂದ ಮಲ್ಲಸಜ್ಜನ ದೇಸಾಯಿಯ ಭಟರಾದ ಪೆದ್ರು ಪಿರಂಗಿ ಮತ್ತು ಶಿವರುದ್ರಪ್ಪ ವಾಣಿಯವರ ಕುಟುಂಬದ ಸದಸ್ಯರನ್ನು ಬೆಹರೆಯವರು ಬಂಧಿಸಿದಾಗ ಸುದ್ಧಿಯನ್ನು ತಿಳಿದ ಅಡವಿಯಲ್ಲಿದ್ದ ಇವರಿಬ್ಬರೂ ವಾಪಸು ಬಂದರೆಂದು ಈ ಪತ್ರದಿಂದ ತಿಳಿದುಬರುತ್ತದೆ.
ಒಟ್ಟಾರೆ ಆಪ್ರಕಟಿತ ದಾಖಲೆಗಳು ಕಿತ್ತೂರು ಮಲ್ಲಸರ್ಜನ ದೇಸಾಯಿ ಸೈನ್ಯ ಮತ್ತು ರಾಜಶ್ರೀ ಮಹಾದಜಿ ಪಂಥ ಬೆಹರೆಯವರ ನಡುವೆ ಕದನ, ಅದರಿಂದುಂಟಾದ ಪರಿಣಾಮ, ಬುದ್ಧಿವಂತಿಕೆಯಿಂದ ಸೈನ್ಯ ಬೇರ್ಪಡಿಸಿದ ನೀತಿ, ರಕ್ಷಿಸಿಕೊಳ್ಳುವುದಕ್ಕಾಗಿ ಗ್ರಾಮದ ಜನರನ್ನು ಬಳಸಿಕೊಳ್ಳುವಿಕೆ, ಗುಪ್ತದಳವನ್ನು ಬಳಸಿಕೊಳ್ಳುವಿಕೆ, ಜನರ ಸಾವು-ನೋವುಗಳ ಚಿತ್ರಣ ಈ ಅಪ್ರಕಟಿತ ದಾಖಲೆಗಳಿಂದ ತಿಳಿದು ಬರುತ್ತದೆ.

ಆಧಾರಸೂಚಿ
1. ನರಹರಿ ಕೆ.ಎನ್., ‘ಕಿತ್ತೂರು ಸಂಸ್ಥಾನದ ಆಡಳಿತ ವಿಭಾಗ-ವಿಸ್ತಾರ’, ಅಪ್ರಕಟಿತ ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2013, ಪುಟ-189.
2. ಅದೇ ಪುಟ-190.
3. ಅದೇ ಪುಟ-238.
4. ಅದೇ ಪುಟ-214.
5. ಅದೇ ಪುಟ-215.
6. ಅದೇ ಪುಟ-216.
ಆಕರಗ್ರಂಥ
1. ಕಡತದ ಸಂಖ್ಯೆ 11, ರುಮಾಲ್ ನಂ. 74, ಪತ್ರದ ಸಂಖ್ಯೆ 07, ಡೆಕ್ಕನ್ ಕಾಲೇಜು ವಸ್ತು ಸಂಗ್ರಹಾಲಯ, ಪುಣೆ.
2. ಕಡತದ ಸಂಖ್ಯೆ- 11, ರುಮಾಲ್ ನಂ 74, ಪತ್ರದ ಸಂಖ್ಯೆ-03, ಡೆಕ್ಕನ್ ಕಾಲೇಜು ವಸ್ತು ಸಂಗ್ರಹಾಲಯ, ಪುಣೆ.
3. ಕಡತದ ಸಂಖ್ಯೆ- 02, ರುಮಾಲ್ ನಂ 74, ಪತ್ರದ ಸಂಖ್ಯೆ-03, ಡೆಕ್ಕನ್ ಕಾಲೇಜು ವಸ್ತು ಸಂಗ್ರಹಾಲಯ, ಪುಣೆ

  ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚನ್ನಮ್ಮನ ಕಿತ್ತೂರು-591115. ಬೆಳಗಾವಿ ಜಿಲ್ಲೆ.

Friday, August 14, 2015

ಚಾರಣ್ಯಕವಿ ಚರಿತ್ರಕಾರನಾದಾಗ; ಕವಿ ಗೋವಿಂದ ವೈದ್ಯರ ಕಾವ್ಯ, ಕಂಠೀರವ ನರಸರಾಜ ವಿಜಯ*
ಡಾ. ಲೀಲಾ ಬಿ.
ಚಾರಣ ಕವಿಯೆಂದು ಕವಿ ಗೋವಿಂದ ವೈದ್ಯರನ್ನು ಮೊದಲು ಗುರುತಿಸಿ ಕರೆದವರು ಬೆಟಗೇರಿ ಕೃಷ್ಣಶರ್ಮರು. ಚಾರಣ ಗೀತೆಗಳನ್ನು ಹಾಡುವ ಕವಿಗಳು ರಾಜಸ್ಥಾನದಲ್ಲಿಯೂ ಮತ್ತು ಮಹಾರಾಷ್ಟ್ರದಲ್ಲಿಯೂ ಬಹಳ ಜನ ಸಿಗುವರು. ರಾಜರ ಸಾಹಸ, ಶೌರ್ಯ, ಯುದ್ಧ ಕೈಗೊಂಡ ರೀತಿ ಮನಮುಟ್ಟುವಂತೆ ಕಥಾರೂಪಕದಲ್ಲಿ ಹಾಡುವರು ಮತ್ತು ಹಾಡಿನ ಮೂಲಕ ದೇಶಪ್ರೇಮವನ್ನು ಹೊಡೆದೆಬ್ಬಿಸುವದು ಈ ಕವಿಗಳ ಉದ್ದೇಶ. ಮಧ್ಯಯುಗದಲ್ಲಿ ಇವರನ್ನು ‘ಷಾಹಿದ್’ ಎಂದು ಕರೆದರು. ಷಾಹಿದ್ ಎಂದರೆ ಪರ್ಷಿಯನ್ ಭಾಷೆಯಲ್ಲಿ ಹುತಾತ್ಮರು ಎಂದರ್ಥ. ಮಹಾರಾಷ್ಟ್ರದಲ್ಲಿ ‘ಶಾಹಿರ್‍ಗೀತ’ ಎಂದು ಕರೆಯಲ್ಪಟ್ಟಿತು. ಶಾಹಿರ್‍ಗೀತೆಗಳಲ್ಲಿ ವಿರಸ ತುಂಬಿದೆ. ಕರ್ಣಾಟಕದಲ್ಲಿ ಗೀಗಿ ಪದಮೇಳಗಳು ಇದನ್ನು ಹೋಲಿದರೂ, ಅದರಲ್ಲಿ ವೀರರಸಕ್ಕಿಂತ ಹೆಣ್ಣು, ಗಂಡುಗಳ ಹೊಡೆದಾಟವನ್ನು ಮಾತ್ರ ಕಾಣುತ್ತೇವೆ.
ಹಲವಾರು ಕನ್ನಡ ಸಾಮ್ರಾಜ್ಯಗಳು (ಕದಂಬರಿಂದ ಹೊಯ್ಸಳದವರೆಗೆ) ಅಂದರೆ 5-6 ಶತಮಾನದಿಂದ 15ನೇ ಶತಮಾನದವರೆಗೆ ಆಳಿದ್ದರೂ, ಅವರ ವೀರ ಪರಂಪರೆಯನ್ನು ಬಿಂಬಿಸುವ, ‘ಶಾಹಿರ್ ಗೀತೆ’ ಕಂಡುಬರುವುದಿಲ್ಲ. ಆದರೆ 19ನೇ ಶತಮಾನದಲ್ಲಿ ನಮಗೆ ಹಲವಾರು ಗೀತೆಗಳು ಕಂಡುಬರುವದು. ಬಹುಷಃ ಕನ್ನಡಿಗರ ಪರಾಧೀನ ಜೀವನ ಪರಂಪರೆಯಲ್ಲಿ ನಷ್ಟವಾಗಿರಬಹುದು.
ನಮಗೆ ಸಿಕ್ಕುವ ಮೊದಲನೆ ಚಾರಣ ಕವಿ ರಚನೆ; ಕವಿ ನಂಜುಂಡನ ಕುಮಾರರಾಮನ ಚರಿತ್ರೆ (1525). ಗಂಗಕವಿ, ಕುಮಾರರಾಮನನ್ನು ಆಧಾರವಾಗಿಟ್ಟು ಬರೆದ ಕಥೆ ‘ಕುಮಟಿರಾಮ’ (1651). ಕವಿ ನಂಜುಂಡನ ‘ಕುಮಾರರಾಮನ ಕಥೆ’ ಮೊದಲ ಚಾರಣಕವಿತೆಯೆಂದು ಬೆಟ್ಟಗೇರಿ ಕೃಷ್ಣಶರ್ಮರು ಖಚಿತವಾಗಿ ಅಭಿಪ್ರಾಯ ಪಡುತ್ತಾರೆ. ಇದು ಒಂದು ಐತಿಹಾಸಿಕವಾದ ಸಂಗತಿ. ಇದರಲ್ಲಿ ತುರುಕರೊಡನೆ ಕಾದಾಡಿದ ವೀರಕಥೆ ಇದೆ. ಇದರ ಸಮಗ್ರ ಕಥಾನಕವನ್ನು ಒ.ಊ.ಖಚಿmಚಿshಚಿಡಿmಚಿರವರು ‘Sಣuಜies iಟಿ ಗಿiರಿಚಿಥಿಚಿಟಿಚಿgಚಿಡಿ ಊisಣoಡಿಥಿ’ ಎಂಬ ಪ್ರಬಂಧದಲ್ಲಿ ಚರ್ಚಿಸಿರುವರು2. ಮತ್ತೊಂದು ಪ್ರಬಂಧ ‘ಇxಠಿಟoiಣs oಜಿ ಏಚಿmಠಿiಟಚಿ ಚಿಟಿಜ ಏumಚಿಡಿಚಿ ಖಚಿmಚಿಟಿಚಿಣhಚಿ3, ಸುದೀರ್ಘವಾಗಿ ಕೊಟ್ಟಿದೆ. ಮುಂದೆ ಹುಲ್ಲೂರು ಶ್ರೀನಿವಾಸ ಜೋಯಿಸರು4 ತಮ್ಮ ‘ಏumಚಿಡಿಚಿ ಖಚಿmಚಿ’ ಪ್ರಬಂಧದಲ್ಲಿ ಸಂಕ್ಷಿಪ್ತ ವರದಿ ಕೊಟ್ಟಿರುತ್ತಾರೆ. ಇವೆಲ್ಲಾ ಆಧಾರದಿಂದ ನಮಗೆ ಕುಮಾರರಾಮನ ಸಾಹಸ ಕಥಾನಕ ಚಿಂತನೆ ಇವುಗಳ ಲಭ್ಯವಿದೆ. 1960ರಲ್ಲಿ ಅನಂತರಂಗಾಚಾರ್ಯರ ಸಂಪಾದಕತ್ವದಿಂದ ಹೊರಬಂದ ಕುಮಾರರಾಮನ ಸಾಂಗತ್ಯ ಸಂಗ್ರಹದಲ್ಲಿ ಮೂಲರೂಪದಲ್ಲಿ ಸಾಹಿತ್ಯ ದೊರಕುತ್ತದೆ. “ಕುಮಾರರಾಮ”ನ ಸಾಂಗತ್ಯ ಕರ್ಣಾಟಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಕವಿ ಗೋವಿಂದ ವೈದ್ಯ: ಗೋವಿಂದ ವೈದ್ಯರ ತಂದೆ ಶ್ರೀನಿವಾಸ ಪಂಡಿತರು, ಗೋವಿಂದ ವೈದ್ಯರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಕವಿ ತನ್ನ ಸ್ಥಳವನ್ನು ಹೇಳಿಲ್ಲ. ಆದರೆ ‘ಶ್ರೀ ಕಂಠೀರವ ನರಸರಾಜ ವಿಜಯ’ ಗ್ರಂಥದ ಆರಂಭದಲ್ಲಿ, ಮತ್ತು ಕೊನೆಯಲ್ಲಿ ಶ್ರೀರಂಗನಾಥನ ಸ್ತುತಿ ಇದೆ. ಅವರು ರಾಜನ ಆಸ್ಥಾನ ಕವಿಯಾದ್ದರಿಂದ, ಮೂಲತಃ ಶ್ರೀರಂಗಪಟ್ಟಣ ಸ್ಥಳವಾಗಿರಬಹುದೆಂದು ಅಭಿಪ್ರಾಯವಿದೆ5. ಕವಿ ಸಂಸ್ಕೃತ ಮತ್ತು ಕನ್ನಡದಲ್ಲಿ ಹೆಚ್ಚು ಪರಿಶ್ರಮ ಪಡೆದಿದ್ದರು. ಈ ಗ್ರಂಥವನ್ನು 1648ರಲ್ಲಿ ರಚಿಸಿದ್ದಾಗಿ ಗ್ರಂಥದ ಕೊನೆಯ ಪದ್ಯದಿಂದ ತಿಳಿದುಬರುತ್ತೆ. ಈ ಕಾವ್ಯವನ್ನು ತಾನು ಪದ್ಯದಿಂದ ರಚಿಸಿ ಭಾರತಿ ನಂಜುಂಡನೆಂಬುವನಿಂದ ರಾಜಾಸ್ಥಾನದಲ್ಲಿ ಓದಿಸಿದರು ಎಂಬುದಾಗಿ ಮುನ್ನುಡಿಯಲ್ಲಿ ತಿಳಿಸಿದೆ. ಇದರಲ್ಲಿ 26 ಸಂಧಿಗಳಿವೆ. ಇದರ ಶೈಲಿ ಷಟ್ಪದಿ ಗ್ರಂಥ ಶೈಲಿಯನ್ನು ಅನುಸರಿಸಿದೆ. ಸಾಮಾನ್ಯ ಮನುಷ್ಯನಿಗೆ ಅರ್ಥವಾಗುವ ಸಾಂಗತ್ಯ ವಾಕ್ಯದಿಂದ ರಚಿಸಿದೆ. ಇದರಲ್ಲಿ ವೀರರಸ ಪ್ರಧಾನವಾಗಿದೆ.  ದ್ರಾಕ್ಷಾಪಾಕದಂತಿದೆ ಎಂದಿದ್ದಾನೆ ಕವಿ. ಇದರಲ್ಲಿರುವ ವಿಶೇಷ ಚರಿತ್ರಾಂಶವೆಂದರೆ ಕವಿ ತಾನು ನೋಡಿದನ್ನು, ಕಂಡಿದ್ದನ್ನು ಮತ್ತು ಹಲವರಿಂದ ಕೇಳಿದ್ದನ್ನು ಯಥಾವತ್ತಾಗಿ ಬರೆದಿರುವದರಿಂದ ಈ ಪುಸ್ತಕ ಚರಿತ್ರಕಾರನಿಗೆ ಮಹತ್ವವೆನಿಸುತ್ತದೆ.
ಕಂಠೀರವ ನರಸರಾಜ ವಿಜಯ (1648): ಮೈಸೂರು ರಾಜರಾಗಿದ್ದ ಕಂಠೀರವ ನರಸರಾಜರನ್ನು ವರ್ಣಿಸುವ ರೋಮಾಂಚಕವಾದ ಶೂರರಾದ ಕಥೆ. ಇದರಲ್ಲಿ ಕನ್ನಡಿಗರು ತಮ್ಮ ದೊರೆಯ ಬಗ್ಗೆ ಹೆಮ್ಮೆ ಮತ್ತು ಸ್ಪೂರ್ತಿ ಪಡೆಯುವಂತಿದೆ. ರಾಜಸ್ಥಾನದಲ್ಲಿದ್ದರೂ ಕವಿ ಮುಖ್ಯವಾಗಿ ಜನ ಸಾಮಾನ್ಯರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆದದ್ದಾಗಿದೆ. ಈ ಕಾವ್ಯ ಸ್ವದೇಶಾಭಿಮಾನದಿಂದ ಕೂಡಿದೆ. ಕವಿ ತನ್ನ ಸ್ಪದೇಶಾಭಿಮಾನವನ್ನು ಹಲವಾರು ಬಾರಿ ಹೇಳಿರುವನು.
ಕಂಠೀರವ ನರಸರಾಜ 1638-59: ತಾಳೀಕೋಟೆಯ ಯುದ್ಧದ ನಂತರ ಇನ್ನೂರು ವರ್ಷದಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಭಾವ ಬೀರಿದ್ದು ಮೈಸೂರು ಒಡೆಯರ ವಂಶಸ್ಥರು. ಮೈಸೂರು ಕಂಠೀರವ ನರಸರಾಜ ಒಡೆಯರ್ (ಬೆಟ್ಟದ ಚಾಮರಾಜ ಒಡೆಯರ ಪುತ್ರ) ಎಲ್ಲಾ ವಿದ್ಯೆಯಲ್ಲೂ ಪಾರಂಗತರಿದ್ದರು. ನಂಜರಾಜ, ಲಿಂಗರಾಜ ಇವರ ಗುರುಗಳು. ಅಲಸಿಂಗಾಚಾರ್ಯರೂ ಇವರ ಗುರು. ಕಂಠೀರವ ನರಸರಾಜ ಒಡೆಯರ್ ಶ್ರೀರಂಗಪಟ್ಟಣದಲ್ಲಿ ರಾಜ್ಯವನ್ನು ಕಟ್ಟಿ ಸಕಲ ಸಾಮಂತರನ್ನೂ ಸ್ವಾಧೀನ ಪಡಿಸಿಕೊಂಡಿದ್ದರು. ಸುಲ್ತಾನ್ ಮಹಮೂದ್ ಖಾನ್ ಪಾದುಷ, ಬಿಜಾಪುರದ ರಾಜನು, ಕರ್ಣಾಟಕವನ್ನು ವಶಪಡಿಸಿಕೊಳ್ಳಲೆಂದು ರಣದುಲ್ಲಾಖಾನ್ ಎಂಬ ಸೇನಾಪತಿಯನ್ನು ಅಸಂಖ್ಯಾತ ಸೈನ್ಯದೊಂದಿಗೆ ಕಳುಹಿಸಿದನು. ರಣದುಲ್ಲಾಖಾನನು ಹಲವು ಪಾಳೇಗಾರರನ್ನು ಗೆದ್ದನಾದರೂ, ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿ, ಆಕ್ರಮಿಸಿದರೆ, ಮಿಕ್ಕವರೆಲ್ಲಾ ತನ್ನ ಕೈವಶ ಆಗುವರೆಂದು ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಆದರೆ ರಣಧೀರ ಕಂಠೀರವ ನರಸರಾಜ ಒಡೆಯರ್ ಮಹಾರಾಜರು ತಮ್ಮ ಸಾಹಸ ಶೌರ್ಯದಿಂದ ತುರುಕರನ್ನು ಸೋಲಿಸಿದ್ದಲ್ಲದೆ ಬಹಳ ಜನರಿಗೆ ಮೂಗು ಕತ್ತರಿಸಿ ಮುಖ ಭಂಗ ಮಾಡಿದರು. 1639ರಲ್ಲಿ ಖಾನ್‍ಖಾನ್ ಎಂಬುವನು ಶ್ರೀರಂಗಪಟ್ಟಣದ ದೊರೆಯ ಮೇಲೆ ತಾನು ಸಮರ್ಥವಾಗಿ ಯುದ್ಧ ಮಾಡಲಾರೆ ಎಂದು ದೂರದಿಂದಲೇ ಹಿಂದಿರುಗಿದನು. ಇನ್ನೊಬ್ಬ ಮುಸ್ತಾಫಾ ಖಾನ್ ದೊಡ್ಡದಾದ ಸೈನ್ಯದೊಡಗೂಡಿ ಬಂದರೂ ಕಂಠೀರವ ನರಸರಾಜರಿಂದ ಪರಾಜಿಸಲ್ಪಟ್ಟನು.
ಹೀಗೆ ಕಂಠೀರವ ನರಸರಾಜ ವಿಜಯ ಕನ್ನಡಿಗರು ತಮ್ಮ ಮತ್ತು ತಮ್ಮ ರಾಜನು, ತನ್ನ ದೇಶಕ್ಕಾಗಿ ಅಭಿಮಾನದಿಂದ ವೈರಿಗಳೊಂದಿಗೆ ಹೊಡೆದಾಡಿ ನಡೆಸಿದ ಯುದ್ಧ. ಆದ್ದರಿಂದ ಇದು ಚಾರಣ ಕವಿತೆ. ಇನ್ನು ಈ ಕಾವ್ಯದಲ್ಲಿರುವ ವೈವಿಧ್ಯತೆಯೆನ್ನು ಗುರುತಿಸೋಣ.
ರೂಢಿಯಿಂದ ಕೂಡಿದ ತಿಳಿಕನ್ನಡದಲ್ಲಿ ಜನ ಸಾಮಾನ್ಯನಿಗೆ ಅರ್ಥವಾಗುವ ಶೈಲಿಯಲ್ಲಿ ಇರುವ ಈ ಕಾವ್ಯದಲ್ಲಿ; ಜನರ ವೈವಿಧ್ಯತೆ, ಉಡುಪುಗಳು, ಸಾಮಾಜಿಕ ಜನಜೀವನ, ಯುದ್ಧ ತಯಾರಿಕೆ ಮತ್ತು ಶತ್ರುಗಳನ್ನು ಎದುರಿಸುವ ರೀತಿ ಹೇಳಿದೆ. ಅಂದಿನ ಸಾಮಾಜಿಕ ಜೀವನದ ಸಮಗ್ರ ಚಿತ್ರ ಇಲ್ಲಿದೆ. ಆದ್ದರಿಂದ ಇದನ್ನು ಸಾಮಾಜಿಕ ಚರಿತ್ರೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಇಲ್ಲಿ ಕರ್ಣಾಟಕದ ವರ್ಣನೆ ಕೇವಲ ಮೈಸೂರಿಗೆ ಮಾತ್ರ ಸೀಮಿತ. ಬಿಜಾಪುರ, ಉತ್ತರ ಕರ್ಣಾಟಕ ಸೇರಿಸಿಲ್ಲ. ಈ ಕಾವ್ಯದಲ್ಲಿ 26 ಸಂಧಿಗಳಿವೆ. 501 ಪುಟದ ಪುಸ್ತಕದಲ್ಲಿ ಹಲವಾರು ಚಾರಿತ್ರಿಕ, ಸಾಮಾಜಿಕ ವಿಷಯಗಳು ಇದ್ದರೂ ಕೂಡ ಹಲವನ್ನು ಮಾತ್ರ ಆರಿಸಿ ಕಾಣಿಸಿದೆ. (ವಿವರಗಳಿಗೆ ಅಡಿ ಟಿಪ್ಪಣಿ ನೋಡಿ)
ಕವಿಯ ದೇಶಾಭಿಮಾನ: ಮೈಸೂರು ಮತ್ತು ಮೈಸೂರು ರಾಜನ ಮೇಲೆ ಕವಿ ಅತ್ಯಂತ ಅಭಿಮಾನ ಹೊಂದಿದ್ದನು.  ಕಂಠೀರವ ನರಸರಾಜರ ಶೌರ್ಯವನ್ನು ವಿವರಿಸುತ್ತಾ,
(6) ಕರ್ಣಾಟಕವನ್ನು ಕೆಡಿಸಲು ಬಂದ ತುರುಕರ
ನಿರ್ಣಾಮ ಮಾಡಿ ಜಗವ
ಪೂರ್ಣದೆ ಸಲಹಿದ ಕಂಠೀರವೇಂದ್ರ ಸು
ಪರ್ಣವಾಹನ ಮೂರ್ತಿಯೈಸೆ |
ಎಂದು ಹೆಮ್ಮೆಯಿಂದ ಹೊಗಳಿರುವನು.
ಮಹಮ್ಮದೀಯರು ದಂಡೆತ್ತಿ ಬಂದ ಸಂಗತಿಯನ್ನು ಮತ್ತು ರಣದುಲ್ಲಾಖಾನನ ಸೈನ್ಯವು ಶ್ರೀರಂಗಪಟ್ಟಣಕ್ಕೆ ಧಾಳಿ ಮಾಡಿ ಮೊದಲು ಚಿಕ್ಕಪುಟ್ಟ ಪಾಳೆಗಾರರನ್ನೂ ಆಕ್ರಮಿಸಿ, ಹಲವು ಪ್ರದೇಶಗಳನ್ನೂ ಧೂಳಿಪಟ ಮಾಡಿದ್ದನು. ಕವಿ ಬಣ್ಣಿಸಿರುವುದು ಹೀಗೆ.
(7) ಕಣ್ಣಿನೊಳಗೆ ಖಾನ ಕನಸಿನೊಳಗೆ ಖಾನ
ಬಣ್ಣಿಸೆ ಮನದೊಳಗೆ ಖಾನ
ಕಿಣ್ಣವಡೆದ ಖಾನನ ಸುದ್ಧಿ ಜಪವಾಗಿ
ಬಣ್ಣಗೆಟ್ಟುದು ಲೋಕವೆಲ್ಲ
ಖಾನನ ಹಾವಳಿಗೆ ಕಂಗೆಟ್ಟು
(8) ಗಿಡುವಿನೊಳಗೆ ಹೆತ್ತವರ ಗರ್ಭಿಣಿಯರ
ನೊಡನೆ ಸಾಗಿಸಲಾರದವರು
ಕಡುಗಲಿ ರಣಧೂಳಿ ಖಾನನೊಬ್ಬರ ರಂಜಿ
ಯಡವಿಯ ಹೊಕ್ಕರೇನೆಂಬ
ಆದರೆ ರಣಧೂಳಿ ಖಾನನ ಆಟ ಹೆಚ್ಚು ದಿವಸ ನಡೆಯಲಿಲ್ಲ. ಕಗ್ಗೊಲೆ ಕಾಳಗದಲ್ಲಿ ಮೈಸೂರಿನ ವೀರರು ಹೆಸರುವಾಸಿ ಎಂಬುದನ್ನು ಕವಿ ತಿಳಿಸಿರುವನು.
ಕಗ್ಗೊಲೆಗಳ ಕಾಳಗದೆ ಮೈಸೂರವ
ರಗಳೆಯರು ಜನದೊಳಗೆ
ಬಗ ನಿಲ್ಲಿಂದೈದಿ ನಾವು ನಮ್ಮಯ ಗುಡಿ
ದುರ್ಗ ಹೊತ್ತಲಿ ನಿಲ್ಪೆನೆಂದ
ರಣಧೂಳಿಖಾನ್ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಕಂಠೀರವ ನರಸಿಂಹರಾಜರು, ಖಾನರನ್ನು ಸದೆ ಬಡಿದರು.
(9) ನರಸಿಂಹನ ದಿವ್ಯನಾಮಸ್ಮರಣೆಗೆ
ತರಿಕಗಲ್ ಪರಿದೋಡುವಂತೆ
ದೊರೆರಾಯ ಕಂಠೀರವೇಂದ್ರನ ಶೌರ್ಯವು
ಮುರಿಗೆಡೆದೋಡಿದರ್ಖಳರು
ನರಸಿಂಹನನ್ನು ಕೆಣಕಿದ ತುರುಕರು ತಮ್ಮ ದುರ್ಗತಿಯನ್ನು ತಾವೆ ಕಂಡುಕೊಂಡರು. ಅದಲ್ಲದೆ ತುರುಕರ ಬಲ ಕುಗ್ಗಿತು.
(10) ತುರುಗವ ಸುಳಿದು ಖಂಡೆಯವ ಬಿಸುಟು ನಮ್ಮ
 ಹೊರಟ ಸಲಹಿಕೊಳ್ಳೆನುತ
 ಕರವ ಮುಗಿದು ಕಲಿಗಳಿಗೆ ಬಿಡಿಸಿಕೊಂಡು
 ತುರುಕ ರಾವುತರೋಡಿದರು
ಖಾನ್ ಪರಾಭವಗೊಂಡು ತನ್ನ ಊರಿಗೆ ಹಿಂತಿರುಗಿದನು.
ಇದೆಲ್ಲಾ ಪದ್ಯಗಳನ್ನು ಓದುವಾಗ ಸ್ವದೇಶಾಭಿಮಾನ ಜಾಗ್ರತಗೊಳ್ಳುತ್ತದೆ.
ನಾವು ಈಗ ಶ್ರೀರಂಗ ಪಟ್ಟಣದ ವರ್ಣನೆ ನೋಡೋಣ: ಇಲ್ಲಿ ಬ್ರಾಹ್ಮಣರ ಬೀದಿ, ಕವಿಗಳ ಬೀದಿ, ಮಂತ್ರಿಗಳ ಶೃಂಗಾರ ಗೃಹ, ಕರುಣಿಕರ ಮನೆ, ರಾಜರಿಗೆ ನಿಮಿಷದಲ್ಲಿ ಸಲಹೆ ಕೊಡಲು, ಸಕಾಲದಲ್ಲಿ ಸೂಕ್ತ ಉತ್ತರ ನೀಡಲು ಹಲವಾರು ವಿದ್ವಾಂಸರಿದ್ದರು. ಮತ್ತು ಸಕಲರಿಗೂ ಔಷಧಿ ಒದಗಿಸಲು ಘನವೈದ್ಯರ ನಿಕರಕೇರಿ ಒಂದಿತ್ತು. ಇವರು ನಾಟಿ ವೈದ್ಯರಲ್ಲ. ಇವರಲ್ಲಿ ಘನವೈದ್ಯರಿದ್ದರು.
(11) ಸಕಲ ರುಜೆಯ ಔಷದಿಗಳನಿತ್ತು
 ಸುಖವ ಪುಟ್ಟಸಿ ಸರ್ವಜನಕೆ
 ಅಕಳಂಕರೆನಿಸಿ ಮೆರೆವ ಘನವೈದ್ಯರ
 ನಿಕರದ ಕೇರಿಯೊಪ್ಪಿದುವು.
ಶ್ರೀರಂಗಪಟ್ಟಣದ ವರ್ಣನೆಯಲ್ಲಿ ಮತ್ತೊಂದು ವಿಷಯ ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಧಾನ್ಯವನ್ನು ಬೆಳೆದು ಅದನ್ನು ಸರಿಯಾಗಿ ವಿತರಣೆ ಮಾಡುವದು, ಪಾಲಿಸಬೇಕಾದ ನಿಯಮ. ಆದರೆ, ನಿಯಮ ಈ ಕಾಲದಲ್ಲಿ ತಪ್ಪುತಿರುವದರಿಂದ ಈ ಪದ್ಯ ಇಂದಿಗೂ ಪ್ರಸ್ತುತವಾಗಿದೆ.
(12) ಅಕ್ಕರೊಳಗೆ ಬಹುಬಗೆಯ ಧಾನ್ಯಗಳನು
 ಚೊಕ್ಕಟವಾಗಿಯೆ ಬೆಳೆದು
 ಎಕ್ಕರುಳದೆ ಧರ್ಮಮಾರ್ಗದೆ ರಾಜಿಸು
 ವೊಕ್ಕಲಿಗರ ಕೇರಿಯಿಹುವು
ಮತ್ತೊಂದು ಕಡೆ ಮುತ್ತುಗಳನ್ನು ಮಾರಾಟ ಮಾಡುವ ಹಲವಾರು ಮಳಿಗೆಗಳಿದ್ದವು.
(13) ಹರಸಖ ನವನಿಧಿಗಳನೀ ಪುರದೊಳ
 ಗಿರಿಸಿದನೆಂಬಂದದಲಿ
 ಪಿರಿದೆನಿಸುವ ಹೊನ್ನ ರಾಸಿಗಳಿಂ ಬಿನ್ನ
 ವರದರ ಮಳಿಗೆಯೊಪ್ಪಿದುವು.
ಮುತ್ತಿನ ಮಳಿಗೆಗಳಲ್ಲಿ ಹಲವಾರು ವೈವಿಧ್ಯಮಯವಾದ ಮುತ್ತುಗಳನ್ನು ಜೋಡಿಸಿಟ್ಟಿರುವದನ್ನು ಮಳಿಗೆಗಳಲ್ಲಿ ಕಾಣಬಹುದಿತ್ತು. ಬಿಳಿಮುತ್ತು, ಕೆನ್ನೀರಮುತ್ತು, ಕಟ್ಟಾಣಿ ಮುತ್ತು, ಮೂಕುತಿ ಮುತ್ತು, ಕಂಠಮಾಲೆಯ ತೋರಮುತ್ತು ಹೀಗೆ ಹಲವು ಮುತ್ತುಗಳಿದ್ದವು.
ಒಂದೆಡೆ ಮುತ್ತಿನ ಮಳಿಗೆ ಇದ್ದಂತೆ, ಇನ್ನೊಂದೆಡೆ ಪವಳದ ಮಳಿಗೆ, ಸಣ್ಣ ಪವಳ, ಕೈಕಟ್ಟಿನ ಪವಳ, ಬಣ್ಣ ಸಂದ ಜಾತಿ ಪವಳ, ಹೀಗೆ ಉತ್ಕೃಷ್ಟವಾದ ಪವಳ ದೊರೆಯುತ್ತಿತ್ತು. ನೀಲದ ಸರ, ಮಾಣಿಕದ ಕುಚ್ಚು, ವಜ್ರದ ಮೇಲು ಗೊಂಚಲು ವೈಢೂರ್ಯದ ಬಲು ಸುಂದರವಾದ ಅಂಗಡಿಗಳು ಸಾಲಾಗಿದ್ದವು.
ಅತ್ಯುತ್ತಮವಾದ ಸೀರೆ ಜವಳಿಗಳ ಮಳಿಗೆಗಳ ಸುಂದರ ವರ್ಣನೆ ಇಲ್ಲಿ ಇದೆ. ನಾನಾ ವಿಧವಾದ, ವಸ್ತ್ರ ವಿನ್ಯಾಸ ಹಲವಾರು ಬಣ್ಣದೊಂದಿಗೆ ಅಂದವಾಗಿ ಜೋಡಿಸಿದೆ. ಪಪ್ಪುಳಿ ಸೀರೆ ಜವಳಿ ಮಳಿಗೆ ಸುಂದರವಾಗಿದೆ. ಮತ್ತೊಂದು ಕಡೆ ಇಲ್ಲಿ ಬೆಳೆಯುವ ಎಲ್ಲಾ ಹೂವುಗಳನ್ನು ಅಲಂಕಾರ ಮಾಡಿ ಜೋಡಿಸಿಟ್ಟಿರುವದು ವೈಶಿಷ್ಟ್ಯ.
ಕಸ್ತೂರಿ (ಕಸ್ತೂರಿ ಇರಬಹುದು) ಸೇವಂತಿಗೆ, ದುಂಡುಮಲ್ಲಿಗೆ, ಮೊತ್ತದ ಜಾಜಿ, ಸಂಪಿಗೆ ಹೂವು ಕಟ್ಟಿ ಮಾರುತ್ತಿರುವ ದೃಶ್ಯ. ಹೆಂಗಸರು ಅಂದವಾಗಿ ಹೂವುಗಳನ್ನು ಕಟ್ಟಿ ರಸ್ತೆಯ ಬದಿಯಲ್ಲಿ ಇಟ್ಟು ಮಾರುತಿದ್ದರು.
ಮತ್ತೊಂದು ಅತಿ ಮುಖ್ಯವಾದ ಕೆಲಸವೆಂದು ರಾಜ ಪರಿಗಣಿಸಿದ್ದು ಪ್ರಜಾಹಿತವನ್ನು ಸದಾ ಬಯಸುವ ವರ್ಗ. ಇವರ ಮುಖ್ಯವಾದ ಕೆಲಸ.
(14) ಭುವನದ ಬಡವರ ಬಿನ್ನಹವನಿತಂ
 ದವನೀಶ್ವರರಿಗೆ ಪೇಳಿ
 ತವಕದೆ ಕಾಣಿಸಿಯಿಷ್ಟಾರ್ಥಗೊಳಿಸುತಿ
 ರ್ಪವರ ಕೇರಿಗಳೊಪ್ಪುತಿಹುವು
ವರ್ತಕರನ್ನು ಕವಿ (ಹರದರ) ಎಂದು ಕರೆದಿದ್ದಾನೆ. ಇಲ್ಲಿ ಹಲವಾರು ಜನ ಯಾರಿಗೂ ವಂಚನೆ ಮಾಡದೆ ವ್ಯಾಪಾರ ಮಾಡುತ್ತಿರುವರು. ಬೀದಿಗೆ ಹತ್ತಿರವಾಗಿಯೇ ಸೂಳೆಗೇರಿ ಇದೆ. ಅನೇಕ ಹೆಂಗಳೆಯರು ಶೃಂಗಾರ ಮಾಡಿಕೊಂಡು ಪಗಡೆ, ಜೂಜಾಟ ನೆಪದಿಂದ ತಿರುಗುವರು (ಸೂಳೆಗೇರಿಯ ಸವಿಸ್ತಾರವಾದ, ವಾಸ್ತವವಾದ ಚಿತ್ರ ಕವಿ ವರ್ಣಿಸಿರುವನು).
ಕಲಾಜೀವನ: ಪ್ರಾಚೀನರು ಕಲೆಗೆ ಮಹತ್ವಸ್ಥಾನವನ್ನು ಕೊಟ್ಟಿರುವದನ್ನು ಕವಿ ಸುಂದರವಾಗಿ ಚಿತ್ರಿಸಿರುವನು. ಸಂಗೀತ ನೃತ್ಯದಲ್ಲಿ ಸ್ತ್ರೀಯರು ಅತ್ಯಂತ ಪರಿಣಿತರಾಗಿ ಭಾವಪೂರ್ಣ ಪ್ರದರ್ಶನವನ್ನು ದೊರೆಯ ಮುಂದೆ ಪ್ರದರ್ಶಿಸಿದಾಗ ದೊರೆಗಳು ಮೆಚ್ಚಿದರು.
(15) ಕರದೊಳು ಪಿಡಿದು ವೀಣೆಯ ವಾಣಿಯಂದದೆ
 ಕೊರಳು ಬೆರಳನೊಂದುಗೂಡಿ
 ಹರುಷದೆ ಪಾಡಿ ಗಾನಾಮೃತವನು ಕರ್ಣ
 ಕಿರದೆ ಸೂಸಿದಳೊರ್ವ ನೀರೆ
ಇಲ್ಲಿ ಹೆಂಗಳೆಯರು, ಮುಖ್ಯ ಪಾತ್ರವಹಿಸುವುದನ್ನು ನಾವು ಕಾಣಬಹುದು. ತರ್ಕಶಾಸ್ತ್ರ, ಪುರಾಣ ನೀತಿ ಚಿಂತಾಮಣಿ ಇವುಗಳ ಬಗ್ಗೆ ರಾಜರಿಗೆ ಬಣ್ಣಿಸಿ ರಾಜರ ಹೆಗ್ಗಳಿಕೆಗೆ ಹೆಂಗಳೆಯರು ಪಾತ್ರವಾಗಿರುವುದನ್ನು ಕಾಣಬಹುದು.
ಕವಿ, ಜನಸಾಮಾನ್ಯರ ಊಟದ ಬಗ್ಗೆ ಹೇಳದಿದ್ದರೂ, ಶ್ರೀಮಂತರ ಊಟ ಹೇಗೆ ಇರುತ್ತಿತ್ತೆಂದು ವರ್ಣಿಸಿರುವನು. ಇಲ್ಲಿ ನಮಗೆ ಹಲವಾರು ಉಪ್ಪಿನಕಾಯಿಗಳ ಪರಿಚಯವಾಗುವದು.
ಬಾಳಕ ಸಂಡಿಗೆ*, ಎಣ್ಣೆಯಲ್ಲಿ ಹುರಿದು ಮಾಡಿದ ಪಲ್ಯ ಸೀಕರಣೆ, ಕೋಸಂಬರಿ, ಪಚ್ಚಡಿ, ತೊಗರಿಬೇಳೆ ಸೂಪ (ತೊವ್ವೆ), ಸೊಪ್ಪಿನ ಮೇಲೋಗರ, ಹಾಲುಂಡೆ (ನಮ್ಮ ಫೆಡ) ಜೇನೊಡ (ಘೀವರ್) ಉದ್ದಿನಕಡುಬು, ಹೂರಣ ಕಡುಬು, ರೊಟ್ಟಿ ಉಂಡಲಿಗೆ ಮತ್ತು ವಿಧವಿಧವಾದ ಪಾಯಸ, ಮಂಡಿಗೆ ಬಿಸಿಯದೋಸೆ, ಸಣ್ಣಕ್ಕಿಯ ಪಾಯಸ, ಸಕ್ಕರೆಯ ಪಾಯಸ, ಗೌಲೆಯ ಪಾಯಸ, ನಾನಾ ತರಹದ ಪಾಯಸದ ಪರಿಚಯವಾಗುವದು.
ಇಂದಿನ ಕಲಬೆರಿಕೆ ಕಾಲದಲ್ಲಿ, ಆಗಿನ ಕಾಲದ, ಅಪ್ಪಟ ಹಾಲಿನ ವಿವರ ದೊರಕುವದು. ಚೆಲುಪಾಲು, ಕಂಬಾಲು, ಕೆನೆವೆರೆಸಿದ ಪಾಲು, ಬಟ್ಟಪಾಲು, ಗಟ್ಟಿಯಾದ ಕಟ್ಟು ಮೊಸರು ಸಿಕ್ಕುತ್ತಿತ್ತು.
ಊಟವಾದ ಮೇಲೆ ಕರ್ಪೂರದ ವೀಳ್ಯೆವನ್ನು ಕೊಡುವ ಪದ್ಧತಿ ಇತ್ತು.
ಉಡುಪುಗಳು: ಈಗಿನ ಕಾಲದಲ್ಲಿ ಎಲ್ಲರ ಉಡುಪು ಸಾಮಾನ್ಯವಾಗಿ ಒಂದೇ ತರಹ ಇರುತ್ತದೆ. ಆದರೆ ಅಧಿಕಾರ ವರ್ಗದಲ್ಲಿ, ಇದ್ದವರ ಆಗಿನ ಜನರ ಉಡುಪು ಆಕರ್ಷಕ ಪ್ರದರ್ಶನೀಯವಾಗಿದ್ದವು.
ಮಾಂಡಲೀಕರು: ಚೌಕಳಿ, ಹೊನ್ನಸರ ಕಡಗ, ಕಂಕಣ ಮೊದಲಾದ ಆಭರಣ ಧರಿಸಿ ಜನರು ನೋಡಿದ ತಕ್ಷಣ ಇವನು ಮಾಂಡಲೀಕ ಎಂದು ಗುರುತಿಸುತ್ತಿದ್ದರು. ಪೈರಣಿ ಮೇಲೆ ದುಪ್ಪಟ, ತಲೆಗೆ ಮುಂಡಾಸು ಧರಿಸುತ್ತಿದ್ದರು.
ನಾಯಕರು: ಮುಂಗೈಯ ಮುರಿ, ಮುರಡಿಯ ಸರಪಳಿ ಉಂಗುರ, ತೋಳು ಬಾಪುರಿಗಳಿಂದ ಸಿಂಗರಿಸಿಕೊಂಡಿರುತ್ತಿದ್ದರು. ರಾವುತರು ಮೈಗೆ ಹೊಕ್ಕಿಕೊಂಡಿರುವ ಹೊನ್ನದಗಲೆ, ದಿವ್ಯಾಯಕದ ಆಭರಣಗಳು ಬಿರುದಿನ ಚಂದೆಗಳಿಂದ ಕೂಡಿರುವರು. ಭಟರುಗಳು ಪಟ್ಟಿಯದಟ್ಟಿ, ಕುಂಕುಮ ಗಾಸೆ ಉಟ್ಟಿರುವರು ಒಂಟೆಯ ಸವಾರರು, ಉತ್ತರಿಗೆ, ಹೊನ್ನರಸ, ಘಂಟೆ ಸರಪಳಿ ಮುತ್ತಿನ ಕಡುಕಗಳಿಂದ ಶೋಭಿತರಾಗಿರುತ್ತಿದ್ದರು!
ಮೈಗಾವಲು ಊಳಿಗದವರು, ಚಿನ್ನದ ಹಂಡೆ, ಬಿರುದಿನ ಬೆಳ್ಳಿ ಕಟ್ಟಿನ ಬರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡಿರುವರು.
ಹೆಂಗಸರ ಆಭರಣಗಳು: ವಿಧ ವಿಧವಾದ ಆಭರಣ ಪ್ರಿಯರಾದ ಹೆಂಗಸರ ಒಡವೆಗಳನ್ನು ಕವಿ ವರ್ಣಿಸಿರುವನು. ಅಂಗುಟಿಕೆ, ವೀರಮುದ್ರೆ, ಹೊನ್ನ ಕಾಲುಂಗರ, ಪಿಲ್ಲಿ, ಮೆಂಟಿಕೆ, ತಿರುಪಲ್ಲಿ, ಚರಣ ಪಂಡೆಯ, ಪಾಯವಟ್ಟ, ಹೊನ್ನಿನ ಘಂಟೆಸರ, ಕಟಿಸೂತ್ರ, ಕಾಂಚಿಧಾಮ, ಪ್ರಸ್ತ ಮುಕ್ತಳಿ, ರತ್ನ ಪದಕ, ರತ್ನದ ಬೊಟ್ಟು, ಹರಳೋಲೆ, ಚಿತಾಕು, ಮೂಗುತಿ, ಕಡಗ, ಕಂಕಣ, ಮುದ್ರೆಯುಂಗರ, ಚೌಸರ, ನೂಪರ ಕೊಪ್ಪು ವೆಂಟಿಯ ಚೌಳಿ, ಜಡೆಬಂಗಾರ, ಮೊದಲಾದ (ಕೊರಳು, ಕಿವಿ, ಮೂಗು, ಸೊಂಟ, ಕಾಲು, ತಲೆಗಳ ಚೆಲುವನ್ನು ಇಮ್ಮಡಿಸುವ ಆಭರಣ)ವನ್ನು ಧರಿಸುತ್ತಿದ್ದರು.
ಸರಿಗೆ ಅಂಚಿನ ರವಿಕೆ ಧರಿಸುತ್ತಿದ್ದರು, ಬೇರೆ ಬೇರೆ ಪ್ರಾಂತ್ಯದಿಂದ ಬಂದಂತ; ತೆಲುಗು, ಮಲಯಾಳ, ಕೊಡಗು, ತಿಗುಳ್ಯ ತುರುಕು ನಾರಿಯರ ಉಡುಗೆ ತೊಡುಗೆಗಳ ವರ್ಣನೆ ಕೂಡ ಸಿಗುತ್ತದೆ.
ಕುದುರೆಗಳು: ಕುದುರೆಗಳೂ ರಾಜರ ಆಸ್ಥಾನದಲ್ಲಿ ಮುಖ್ಯ ಸ್ಥಾನವನ್ನು ತೊಟ್ಟಿರುವುದು ಕಾಣುತ್ತದೆ. ಕುದುರೆಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲ್ಪಡುತ್ತಿದ್ದು, ಅದಕ್ಕೆ ನವರತ್ನದ ಕಾಲುಂಗುರ, ಗೆಜ್ಜೆ, ಮುತ್ತಿನ ಕುಚ್ಚು, ಜೇನುಗಳನ್ನು ಬಂಗಾರದ ಬಣ್ಣದ ಕಡಿವಾಣ, ಮೊಗಗನ್ನಡಿ, ಇರುತ್ತಿತ್ತು. ಕೊರಳಿಗೆ ಮುತ್ತಿನ ಸರದಿಂದ, ಸಿಂಗಾರ ಮಾಡಿರುತ್ತಿತ್ತು. ಹೊಕ್ಕುಳಲ್ಲಿ ಪುಟಾಣಿ ಘಂಟೆ ಇರುತ್ತಿತ್ತು.
ಇಲ್ಲಿ ಆನೆಗಳ ವರ್ಣನೆ ಕೂಡ ಇದೆ. ಆನೆಗಳ ಎರಡು ಕಿವಿಗಳಲ್ಲಿ ಮುತ್ತಿನ ಗೊಂಚಲನ್ನು ಕಟ್ಟಿರುವರು. ಎದೆಗೆ ದಪ್ಪಗಿನ ಹಗ್ಗಗಳನ್ನು ಕಟ್ಟಿರುವರ್ರು. ಹಣೆಯ ಮೇಲೆ ಕನ್ನಡಿಯಿಂದ ಶೋಭಿತವಾಗಿದ್ದು ಕೊರಳಲ್ಲಿ ಸರಘಂಟೆ ಪಕ್ಕೆಯಲ್ಲಿ ಘಂಟೆ ಬಿರುದಿನ ಪಟ, ಇವೆಲ್ಲದರಿಂದ ಸಿಂಗರಿಸ ಹೊರಟ ಆನೆಗಳು ರಾಜಠೀವಿಯಿಂದ ನಡೆಯುತ್ತಿದ್ದವು.
ದೇವಸ್ಥಾನದಲ್ಲಿ ನಡೆಯುವ ಸೇವೆ, ಕಟ್ಮಲೆ, ಉತ್ಸವ ಕವಿ ಸುಂದರವಾಗಿ ವರ್ಣಿಸಿದ್ದರೂ, ಅವುಗಳು ಸಂಪ್ರದಾಯವಾಗಿ 21ನೇ ಶತಮಾನದಲ್ಲೂ ನಡೆಯುತ್ತಿರುವದರಿಂದ ಅವುಗಳನ್ನು ವಿವರಿಸಿಲ್ಲ.
ಹೀಗೆ ಚಾರಣಕವಿ ಗೋವಿಂದ ವೈದ್ಯರು 1648ರಲ್ಲೇ ಕನ್ನಡಿಗರ ಜನರ ಸಂಸ್ಕೃತಿಯನ್ನು ಸರಳ ಕನ್ನಡಿಯಲ್ಲಿ ಬಿಂಬಿಸಿರುವದರಿಂದ, ಕಂಠೀರವ ನರಸರಾಜ ವಿಜಯ ಗ್ರಂಥವು ಕರ್ಣಾಟಕದ ಸಾಮಾಜಿಕ ಚರಿತ್ರೆಗೆ ಒಂದು ಅಮೂಲ್ಯ ಕೊಡುಗೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮತ್ತು ಹಲವಾರು ವಿಷಯಗಳು, ಇಂದಿಗೂ ಆಚರಣೆಯಲ್ಲಿದೆ ಮತ್ತು ಅನುಕರಣೀಯವಾಗಿದೆ.
* ಈ ಗ್ರಂಥವನ್ನು ಬೇರೊಬ್ಬರು ಬರೆದಿರುವರು ಎಂಬ ಅಭಿಪ್ರಾಯವಿದೆ.

ಆಧಾರಸೂಚಿ
1. ಬೆಟಗೇರಿ ಕೃಷ್ಣಶರ್ಮ, ಕರ್ಣಾಟಕ ಜನಜೀವನ, ಬೆಂಗಳೂರು ವಿಶ್ವ ಕನ್ನಡ ಸಮ್ಮೇಳನ, 1983.
2. ಕಿuಚಿಡಿಣeಡಿಟಥಿ ಎouಡಿಟಿಚಿಟ oಜಿ ಣhe ಒಥಿಣhiಛಿ Soಛಿieಣಥಿ, ಗಿoಟ. ಘಿಘಿ. 1929-30.
3. ಕಿಎಒS ಗಿoಟ. ಘಿಘಿ ಆeಛಿ. 1929.
4. ಕಿಎಒS ಗಿoಟ. ಘಿಘಿಘಿII, 1941-42.
5. ಗೋವಿಂದ ವೈದ್ಯ; ಕಂಠೀರವ ನರಸರಾಜ ವಿಜಯ, ಪುಟ 9.
6. ಸಂಧಿ 18, ಪದ್ಯ 134 ಪುಟ 351.
7. ಸಂಧಿ 11, ಪದ್ಯ 54, ಪುಟ 210.
8. ಸಂಧಿ 11, ಪದ್ಯ 53, ಪುಟ 210.
9. ಸಂಧಿ 15, ಪದ್ಯ 105, ಪುಟ 292.
10. ಸಂಧಿ 15, ಪದ್ಯ 100, ಪುಟ 290.
11. ಸಂಧಿ 6, ಪದ್ಯ 42, ಪುಟ 92.
12. ಸಂಧಿ 6, ಪದ್ಯ 55, ಪುಟ 95.
13. ಸಂಧಿ 6, ಪದ್ಯ 65, ಪುಟ 95.
14. ಸಂಧಿ 6, ಪದ್ಯ 46, ಪುಟ 91.
15. ಸಂಧಿ 8, ಪದ್ಯ 74, ಪುಟ 150.

  `ಶ್ಯಾಮಲ’, ಪ್ಲಾಟ್ 46, 1ನೇ ಮಹಡಿ, ಡಾನ್‍ಬಾಸ್ಕೋ ಹೈಸ್ಕೂಲ್ ಹತ್ತಿರ, ಮಾತುಂಗ, ಮುಂಬೈ-400019.