Thursday, November 20, 2014

ಜೈನ ಕಾಶಿ- ಮೂಡುಬಿದ್ರೆ




ಎಚ್‌.ಶೇಷಗಿರಿರಾವ್‌









                                                 ಸಾವಿರ ಕಂಬದ ಬಸದಿ


                                                 






ಮೂಡು ಬಿದ್ರೆಯು ಜೈನಕ್ಷೇತ್ರಗಳಲ್ಲಿ ಜೈನ ಕಾಶಿ ಎಂದೇ ಪ್ರಖ್ಯಾತ. ಅದಕ್ಕೆ ಕಾರಣ ಅಲ್ಲಿರುವ ಹದಿನೆಂಟು ಜೈನ ಬಸದಿಗಳು. ಅವಕ್ಕೆಲ್ಲ ಮುಕುಟ ಪ್ರಾಯ ಸಾವಿರ ಕಂಬದ ಬಸದಿ.ಮೂಡುಬಿದಿರೆ ಒಂದು ಕಾಲಕ್ಕೆ ದಟ್ಟ ಬಿದಿರು ಪೊದೆಗಳ ಪ್ರದೇಶವಾಗಿದ್ದರಿಂದ ಅದಕ್ಕೆ ಮೂಡುಬಿದ್ರೆಅಂದರೆ ಪೂರ್ವದ ಬಿದಿರೆ  ಎಂಬ ಹೆಸರು ಬಂದಿತು ಎಂಬ ಪ್ರತೀತಿ. ಇಲ್ಲಿ ಪಡುಬಿದಿರೆಯೂ ಇರುವುದು. ಮೂಡುಬಿದಿರೆ ಪ್ರಸಿದ್ಧವಾಗಿರುವುದು ಅಲ್ಲಿನ ಹದಿನೆಂಟು ಬಸದಿಗಳಿಂದ ಇಲ್ಲಿ ಹದಿನೆಂಟು ಸಂಖ್ಯೆಗೂ ಮೂಡುಬಿದಿರೆಗೂ ಏನೋ ನಂಟು ಇದಂತಿದೆ.. ಇಲ್ಲಿ ಸುತ್ತಲಿನ ಹಳ್ಳಿಗಳನ್ನು ಸಂಪರ್ಕಿಸಲು  ಹದಿನೆಂಟು ರಸ್ತೆಗಳು, ಹದಿನೆಂಟು ಜಲಾಶ್ರಯಗಳು ಇವೆ. ಇಲ್ಲಿನ ಹದಿನೆಂಟು ಬಸದಿಗಳಲ್ಲಿ ಅತಿ ಪ್ರಸಿದ್ದವಾದುದು ಸಾವಿರ ಕಂಬದ ಬಸದಿ . ಅದಕ್ಕೆ ತ್ರಿಭುವನ ತಿಲಕ ಚೂಡಾಮಣಿ ಎಂಬ ಹೆಸರೂ ಇದೆ.ಅಂದರೆ ಮೂರು ಲೋಕದಲ್ಲೂ ಮುಕುಟದ ಮಣಿ ಎಂಬ ಹೆಗ್ಗಳಿಕೆ ಇದರದು.ಇದನ್ನು ಅಲ್ಲಿರುವ ಎಂಟು ಅಡಿ ಎತ್ತರದ ಚಂದ್ರನಾಧ ತೀರ್ಥಂಕರರ  ಹೆಸರಿನಲ್ಲಿ ಚಂದ್ರನಾಥ ಬಸದಿ ಎಂದೂ ಕರೆಯುವರು. ಇದರ ನಿರ್ಮಾಣ 1430 ರಲ್ಲಿ ತುಂಡರಸು ದೇವರಾಯ ಒಡೆಯರ ಕಾಲದಲ್ಲಿ ಆಯಿತು.  ಬಸದಿಯ ಎದುರಿನ  ೬೦ ಅಡಿ ಎತ್ತರದ ಭವ್ಯ ಮಾನಸ ಶಿಲಾಸ್ಥಂಬವು ರಾಣಿ ನಾಗಲಾದೇವಿಯ ಕಾಲದಲ್ಲಿ ನಿರ್ಮಾಣವಾಯಿತು ನಂತರ 1962 ನವೀಕರಣವಾಯಿತು. ಸುಮಾರು ಮೂರುದಶಕಗಳ ಪ್ರಯತ್ನದ ನಂತರ ಕೋಟ್ಯಂತರ ಹಣ ವೆಚ್ಚದ ನಂತರ ಇಂದಿನ ಸುಸ್ಥಿತಿಗೆ ಬಂದಿದೆ.

ಏಷಿಯಾದಲ್ಲಿಯೇ ಇದು ಅತ್ಯಂತ ಭವ್ಯ ಬಸದಿ ಎನ್ನಲಾಗಿದೆ  ದೇಗುಲದ ಸಂಕೀರ್ಣವು ಮೂರು ಅಂತಸ್ತುಗಳನ್ನು ಹೊಂದಿದೆ.ಮೇಲಿನ ಅಂತಸ್ತಿಗೆ ಸಾಮಾನ್ಯವಾಗಿ ಪ್ರವಾಸಿಗಳಿಗೆ ಪ್ರವೇಶ ವಿಲ್ಲ. ವರ್ಷಕ್ಕೊಂದು ಬಾರಿ ಮಾತ್ರ ಅವಕಾಶವಿದೆ ಎನ್ನಲಾಗಿದೆ.

.
                                                        
ಸಾವಿರ ಕಂಬದ ಬಸದಿ ಎಂದು ಹೆಸರಾಗಲೂ ಕಾರಣ ಅಲ್ಲಿರುವ ಭವಯ ಶಿಲಾಕಂಬಗಳು ಬಸದಿಯ ಹೊರ ಆವರಣದಲ್ಲೇ ಸುಮಾರು ಇನ್ನೂರು  ಭವ್ಯ ಸುಭದ್ರ ೨೦ ಅಡಿ ಎತ್ತರದ ಎರಡು ಸಾಲಿನ ಗ್ರಾನೈಟ್‌ ಕಂಬಗಳಿಂದ ಆವೃತವಾಗಿದೆ.ನಂತರ  ಒಂದೊಕ್ಕೊಂದು ಪೂರಕವಾಗಿರುವ ಹಲವಾರು ಮಂಟಪಗಳಿವೆ.  ಅಲ್ಲಿರುವ  ಕಂಬಗಳು ಬಹು ಕಲಾತ್ಮಕ. , ಕಂಬಗಳಲ್ಲಿಯೇ ಕಡೆದ ಕಿರು ಕಂಬಗಳೂ ಸೇರಿಸಿದರೆ ಸಾವಿರ ಕಂಬಗಳಾಗಬಹುದು. ಒಂದಂತೂ ನಿಜ ಎಣಿಕೆ ಮಾಡಲು ಹೋದರೆ ಲೆಕ್ಕ ತಪ್ಪುವುದು ಖಂಡಿತ.

                                                
   

ಮೊದಲ ಪ್ರಕಾರದಲ್ಲಿಅಂದರೆ ಗರ್ಭ ಗುಡಿಯಲ್ಲಿ ಎಂಟು ಅಡಿ ಎತ್ತರದ ಚಂದ್ರನಾಥ ಸ್ವಾಮಿಯ ಸುಂದರ ವಿಗ್ರಹವಿದೆ.ಎರಡನೆದಾಗಿ ದೊಡ್ಡ್ದಾದ ಮಂಟಪವು ಕಲಾಕೃತಿಗಳಿಂದ ಅಲಂಕೃತವಾಗಿವೆ.ಇಲ್ಲಿರುವ ಹಲವಾರು ಮಂಟಪಗಳು ಕಲ್ಲಿನ ಕಂಬಗಳಿಂದ ಕೂಡಿದ್ದು ಮಧ್ಯ ಮಂಟಪದಲ್ಲಿ ಕುಸರೀ ಕಲೆಯಿಂದ ಕೂಡಿದ ಸ್ಥಂಬಗಳಿವೆ.
                         

                        

                                                                 
ಮಧ್ಯ ರಂಗದಲ್ಲಿ ಮೇಲ್ಛಾವಣಿಯಂತೂ ಅದ್ಭುತ . ಶಿಲಾ ಚಾಂಡಲಿಯರ್‌ಗಳು ಗುರುತ್ವಾಕರ್ಷನ ಶಕ್ತಿಗೆ ಸವಾಲೆಸೆಯುವಂತಿವೆ.
.ಇಲ್ಲಿನ ಶಿಲ್ಪಕಲೆಯನ್ನು ವರ್ಗಿಕರಿಸುವುದು ಸುಲಭದ ಮಾತಲ್ಲ. ದಕ್ಷಿಣ ಬಾರತದ ಇತರ ಯಾವುದೇ ದೇಗುಲಗಳನ್ನು ಇದು ಹೋಲುವುದಿಲ್ಲ. ತುಸು ಮಟ್ಟಿಗೆ ನೇಪಾಳದ ದೇಗುಲಗಳ ರಚನೆಯನ್ನು ನೆನಪಿಸಿದರೂ ಪೂರ್ಣವಾಗಿ ಅನುಕರಿಸಿಲ್ಲ. ಇಲ್ಲಿನ ಬಹು ಮಳೆಯ ಕಾರಣದಿಂದ ಇಳಿಜಾರಾದ ಮಾಡನ್ನು ತಾಮ್ರ, ಕಟ್ಟಿಗೆ ಮತ್ತು ಶಿಲೆಗಳ ನ್ನು ಬಳಸಿ ನಿರ್ಮಾಣ ವಾಗಿಲ್ಲಿ ಇಲ್ಲಿ ಬಿರಿ ಮಳೆ ಮತ್ತು ಸುಡು ಬಿಸಿಲಿನ ಪರಿಣಾಮವಾಗಿ ವಾಸ್ತು ಶೈಲಿಯು ಬದಲಾಗಿದೆ. ಹೊರ ವರಣದಲ್ಲಿ ಸ್ಥಂಬಗಳು ಗಟ್ಟಿ ಮುಟ್ಟಾಗಿ ಆಧಾರ ನೀಡಿದರೆ ಮಧ್ಯ ಮಂಟಪದಲ್ಲಿ ಕಲಾ ಸೌಂದರ್ಯ ಅರಳಿನಿಂತಿದೆ.ಜಗಲಿಯ ಕೆಳ ಭಾಗದ ಪಟ್ಟಿಗೆಗಳಲ್ಲಿ ಜನ ಜೀವನದ ವಿವಿಧ ಚಟುವಟಿಕೆ ರೂಪಿಸುವ ಉಬ್ಬು ಶಿಲ್ಪಗಳಿವೆ. ಕುಸ್ತಿ ಪಟುಗಳು, ಯೋಗ ನಿರತರು, ಪಶು , ಪಕ್ಷಿ ಗಳೂ ಅದರಲ್ಲಿ ವಿದೇಶಿ ಪ್ರಾಣಿಗಳ ಶಿಲ್ಪಗಳೂ ಇವೆ.ಲ್ಲಿನ ವಿಶೇಷತೆ ಎಂದರೆ ಜೈನ ಮಂದಿರವಾದರೂ ವೈದಿಕ ಪುರಾಣಗಳ ದೇವತೆಗಳ ಶಿಲ್ಪಗಳೂ ಇವೆ. ಒಂದು ರೀತಿಯಲ್ಲಿ ಧರ್ಮಸಾಮರಸ್ಯದ ಸಂಕೇತ ಈ ಬಸದಿ ಎನ್ನ ಬಹುದು
                                                          


ಉತ್ತರಭಾರತದಲ್ಲಿ ಕಿರುಕುಳಕ್ಕೆ ಒಳಗಾದ ಜೈನರು ದಕ್ಷಿಣಕ್ಕೆ ವಲಸೆಬಂದು ತಮ್ಮ ವ್ಯಾಪಾರ ಮತ್ತು ವಾಣಿಜ್ಯದಿಂದ ಅಭಿವೃದ್ಧಿ ಹೊಂದಿದರು. ಕಾಲಕಾಲಕ್ಕೆ ಆಳ್ವಿಕೆ ನಡೆಸಿದ  ಅನೇಕ ರಾಜವಂಶಗಳಿಂದಲೂ ರಕ್ಷಣೆ ಮತ್ತು ಉತ್ತೇಜನ ದೊರೆಯಿತು.ಪರಿಣಾಮ  ಇಲ್ಲಿನ ಜೈನ ವ್ಯಾಪಾರಿಗಳು ಅಭಿವೃದ್ಧಿ ಹೊಂದಿದರು.. ಮತ್ತು ತಮ್ಮ ಕೃತಜ್ಞತೆಯನ್ನು ಜಿನಾಲಯಗಳನ್ನು ನಿರ್ಮಿಸುವ ಮೂಲಕ ವ್ಯಕ್ತಪಡಿಸಿದರು. ಬಸದಿಯಲ್ಲಿ ಕೆತ್ತ ಲಾಗಿರುವ ಉಬ್ಬುಶಿಲ್ಪಗಳು ಇಲ್ಲಿನ ವರಿಗೆ  ಇದ್ದ ವಿದೇಶಿ ವ್ಯಾಪಾರ ಸಂಬಂಧವನ್ನು ಸೂಚಿಸುತ್ತವೆ. ಚೀನಾದ ಡ್ರಾಗನ್, ಒಂಟೆಯನ್ನು ಬಳಸಿ ಉಳುಮೆ ಮಾಡುತ್ತಿರುವುದು , ಆಫ್ರಿಕಾದ ಜಿರಾಫೆ  ಸಹಜವಾಗಿ ಇಲ್ಲಿನವರ ಆಫ್ರಿಕಾ, ಅರೇಬಿಯಾ ಮತ್ತು ಏಷಿಯಾದ  ಪರಿಚಯದ ಸಾಕ್ಷಿಯಾಗಿವೆ
ನವನಾರೀ ಕುಂಜರ
ಸಪ್ತನಾರಿ ತುರಗ
                                                                                                                                         
 ಆದ್ದರಿಂದಲೇ ಇಲ್ಲಿನ ಹಲವಾರು ಬಸದಿಗಳು ವ್ಯಾಪಾರಿಗಳಾದ ಶೆಟ್ಟರ  ಹೆಸರಿನಲ್ಲಿಯೇ ಇವೆ. ವಿಕ್ರಮ ಶೆಟ್ಟಿ ಬಸದಿ, ಚೋಲ ಶೆಟ್ಟಿ ಬಸದಿ, ಕೋಟಿ ಸೆಟ್ಟಿ ಬಸದಿ ಮೊದಲಾದವು ಶಿಲ್ಪಕಲಾ ಸೌಂದರ್ಯದಿಂದ ಮನ ಸೆಳೆಯುತ್ತವೆ. ಅದರಲ್ಲೂ ವಿಶೇಷವಾಗಿ ಗುರು ಬಸದಿಯು ಅತ್ಯಂತ ಪುರಾತನ ಮತ್ತು ಪವಿತ್ರ ಬಸದಿಎಂದು ಪರಿಗಣಿಸಲ್ಪಟ್ಟಿದೆ. ಅಲ್ಲಿನ ೫೨ ಅಮೂಲ್ಯ ವಿಗ್ರಹಗಳು ಮತ್ತು ಪಾರ್ಶ್ವನಾಥನ ಮೂರ್ತಿ ಮನಸೆಳೆಯುತ್ತವೆ

                                       

ಜೈನ ದಂðದ ಪವಿತ್ರ ಸಾಹಿತ್ಯವನ್ನು ಕಾಪಿಡಲು ಇದು ಸುರಕ್ಷಿತ ಸ್ಥಳವೆನಿಸಿದ್ದರಿಂದ  ೧೮ನೆಯ ಶತಮಾನದಲ್ಲಿ ಮೊಘಲರ ದಾಳಿಯ ಭಯ ಹೆಚ್ಚಿದ್ದರಿಂದ ಶ್ರವಣಬೆಳಗೊಳದಿಂದ ಪ್ರಾಕೃತ ಮತ್ತು ಕನ್ನಡದಲ್ಲಿನ ತಾಳೆಯೋಲೆಗಳನ್ನು ಇಲ್ಲಿಗೆ ಸಾಗಿಸಲಾಯಿತು ಎಂಬ ಐತಿಹ್ಯವಿದೆ. ಈಗಲೂ ಸುಮಾರು ಎಂಟು ಸಾವಿರ ಹಸ್ತಪ್ರತಿಗಳು ಇಲ್ಲಿನ ಜೈನ ಮಠದಲ್ಲಿವೆ. ಅದರಲ್ಲೂ ಜೈನರ ಧವಳ ಮತ್ತು ಜಯಧವಳ ಎಂಬ ಗ್ರಂಥಗಳು ವರ್ಣಮಯ ಚಿತ್ರಗಳಿಂದ ಕೂಡಿದ್ದು ಅತ್ಯಮೂಲ್ಯವಾಗಿವೆ. ಶತಮಾನಗಳಿಗಿಂತಲೂ ಪುರಾತನವಾದ ಈ ಕೃತಿಗಳು ಜೈನ ಧರ್ಮದ ಮೇಲೆ  ಅಂದಿನ ಭಾರತದ ಮೇಲೆ   ಬೆಳಕು ಚೆಲ್ಲುತ್ತವೆ.


 ಈ ಎಲ್ಲ ಬಸದಿಗಳ ಮೇಲುಸ್ತುವಾರಿಯನ್ನು ಚಾರು ಕೀರ್ತಿ ಭಟ್ಟಾರಕರು ನೋಡಿ ಕೊಳ್ಳುತಿದ್ದಾರೆ. ಯುವಕರು , ಜ್ಞಾನಿಗಳು, ಆದುನಿಕ ತಂತ್ರಜ್ಞಾನದ ಪರಿಚಯುಳ್ಳ ಉತ್ಸಹಾಹಿಗಳಾದ  ಅವರು , ದೇಶ ವಿದೇಶ ಪರ್ಯಟನೆ ಮಾಡಿರುವರು. ಸ್ವಾಮೀಜಿಯವರು ಮೂಡುಬಿದ್ರೆಯು ಧರ್ಮಸಾಮರಸ್ಯಕ್ಕೆ ಹೇಗೆ ಪೂರಕವಾಗಿದೆ, ಸಿದ್ಧಾಂತಗಳು ಬೇರೆಯಾದರೂ ಆಚರಣೆಯಲ್ಲಿ ಏಕತೆಯನ್ನು ಕುರಿತು ಮಾತನಾಡುತ್ತಾ ಶ್ರೀ ಕ್ಷೇತ್ರದ ಅಬಿವೃದ್ಧಿಗೆ ಇತರ ಧರ್ಮದವರ ಸಹಕಾರವನನ್ನೂ ನೆನೆದರು..
  
ಇಲ್ಲಿನ ಕರಾವಲಿಯ ವಿಶೇಷಕಲೆಯಾದ ಯಕ್ಷಗಾನಕ್ಕೂ ಇಲ್ಲಿ ಉತ್ತೇಜನವಿದೆ.. ಇದಲ್ಲದೆ ಕಂಬಳ. ಹುಲಿವೇಷ, ನಾಗಾರಾಧನೆ,ಭೂತ ಕೋಲಗಳು ಜಾನಪದ ಕಲೆಯ ಸೊಗಡು ಬೀರಿದರೆ ಉರುಸು, ಸಂತ ಮೇರಿ ಉತ್ಸವಗಳು. ಏಳನೆಯ ಶತಮಾನದ ಹಿಂದೂ ದೇವಾಲಯಗಳು ಇಂದೂ ಜನಾಕರ್ಷಕವಾಗಿ ಪ್ರವಾಸಿಗರ ಕಣ್ಮನ ತಣಿಸುತ್ತವೆ.
ಚೌಟ ಅರಸರ ಅರಮೆನ ಹೆಬ್ಬಾಗಿಲು
 ಆನೆ ಬಾಗಿಲು
                                                              
         
 ಐತಿಹಾಸಿಕವಾಗಿಯೂ ಇದು ಪ್ರಮುಖ ರಾಜಮನತನಗಳ ತಾಣವಾಗಿತ್ತು. ಚೌಟರಸರ ಅರಮನೆ ಮತ್ತು ಆನೆಯೂ ಹೋಗ ಬಹುದಾಂಥಹ ಹೆಬ್ಬಾಗಿಲು  ಇಂದಿಗೂ ಸುಸ್ಥಿತಿಯಲ್ಲಿದೆ.
 ಒಂದು ಕಾಲದಲ್ಲಿ ಸಾವಿರಾರು ಜನರಿಗೆ ಅನ್ನದಾನ ಮಾಡುತಿದ್ದುದರ ಕುರುಹಾಗಿ ಸಾವಿರ ಜನರಿಗೆ ಅನ್ನ ಬೇಯಿಸುವ ತಾಮ್ರದ ಪಾತ್ರೆ ಇಲ್ಲಿದೆ






ಸಾವಿರ ಜನರಿಗೆ ಅನ್ನಬೇಯಿಸುವ ಪಾತ್ರೆ
                               






.ಈಗಂತೂ ಆಳ್ವ ಸಮೂಹದ ಶಿಕ್ಷಣ ಸಂಸ್ಥೆಗಳು ವಿದ್ಯಾಕ್ಷೇತ್ರದಲ್ಲಿ ಕ್ರಾಂತಿ ತಂದಿವೆ. ಈಗ ಹತ್ತು ವರ್ಷದಿಂದ ನಡೆಸುತ್ತಿರುವ ಆಳ್ವಾ ನುಡಿ ಸಿರಿ ಮತ್ತು ವಿರಾಸತ್‌ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕ ದೊಡ್ಡ ಕಾಣಿಕೆ ಸಲ್ಲಿಸುತ್ತವೆ. ಒಟ್ಟಿನಲ್ಲಿ ಮೂಡುಬಿದ್ರೆ ಪರಾಂಪರಿಕ ಮತ್ತು ಆಧುನಿಕತೆಯ ಸಂಗಮವಾಗಿ ಕಂಗೊಳಿಸುತ್ತಿದೆ




.




















Thursday, November 6, 2014



ಸೂಡಿಯ ನಾಗಕುಂಡ



       ಶಾಸನಗಳಲ್ಲಿ ಸೂಂಡಿಎಂದು ಉಲ್ಲೇಖಿತವಾಗಿ ಕಿಸುಕಾಡು-70ಕ್ಕೆ ಸೇರಿದ ಸೂಡಿ, ಕಲ್ಯಾಣ ಚಾಲುಕ್ಯರ ಜಯಸಿಂಹನ ಸಹೋದರಿ, ರಣಭೈರವಿ ಬಿರುದಿನ ರಾಣಿ ಅಕ್ಕಾದೇವಿಯು ಅನೇಕ ಆಳುತ್ತಿದ್ದ ಪ್ರಾಂತಗಳಲ್ಲಿ ಸೂಡಿಯೂ (ಕ್ರಿ.ಶ 1010) ಒಂದಾಗಿತ್ತು. ಆಕೆಯ ಆಳ್ವಿಕೆಯ ಸಮಯದಲ್ಲಿ ಇದು ದೊಡ್ಡ ಅಗ್ರಹಾರವಾಗಿತ್ತು. ಜೊತೆಗೆ ನಾಣ್ಯಗಳನ್ನು ತಯಾರಿಸುವ ಹೆಸರಾಂತ ಟಂಕಶಾಲೆ ಕೂಡಾ ಇಲ್ಲಿತ್ತು. ಈ ವಿಷಯಗಳನ್ನು ಇಲ್ಲಿರುವ ಶಾಸನಗಳು ವಿವರಿಸುತ್ತವೆ. ಸೂಡಿಯಿಂದ ಸುಮಾರು 9 ಶಾಸನಗಳು ಈಗಾಗಲೆ ಪ್ರಕಟಗೊಂಡಿವೆ. ಒಂದು ಕಾಲದಲ್ಲಿ ವೈಭೋಗದ ತುತ್ತತುದಿಯಲ್ಲಿ ಮೆರೆದ ಇಲ್ಲಿ ಹೆಸರಾಂತ ಪ್ರಕಾಂಡ ಪಂಡಿತರು, ಶಕ್ತಿ ಆರಾಧಕರು, ಕಾಳಾಮುಖರು, ಭೈರವರು, ಲಕುಲೀಶರು, ಪಾಶುಪತರು ಇದ್ದ ಬಗ್ಗೆ ಶಾಸನಗಳು ಪಿಸು ಮಾತಿನಲ್ಲಿ ಪಿಸುಗುಡುತ್ತಿವೆ.

     ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿದ ರೋಣ ಗಜೇಂದ್ರಗಡ ರಸ್ತೆಗೆ ಹೊಂದಿರುವ ಸೂಡಿಯಲ್ಲಿ ಅಳಿದುಳಿದ ಪ್ರಾಚ್ಯ ಅವಶೇóಷಗಳು ಇತಿಹಾಸಕ್ಕೆ ಮೂಕ ಸಾಕ್ಷಿಯಾಗಿ ನಿಂತಿವೆ. ರಸ್ತೆಗೆ ಹೊಂದಿರುವ ದ್ವಿಕೂಟಾಚಲದ ಮಾದರಿಯ ಜೋಡು ಕಳಸದ ಗುಡಿ ನೋಡುಗರ ಗಮನವನ್ನು ಸೆಳೆಯುತ್ತದೆ.  ಕ್ರಿ.ಶ. 1074-75 ಕ್ಕೆ ಸೇರಿದ  ಶಾಸನದಲ್ಲಿ  ಕಲ್ಯಾಣ ಚಾಲುಕ್ಯ ಚಕ್ರವರ್ತಿ II ನೆಯ ಸೋಮೇಶ್ವರನ ಆಳ್ವಿಕೆಯಲ್ಲಿ ಸೂಂಡಿಯ ಪಂಚಲಿಂಗೇಶ್ವರ ದೇವರಿಗೆ ಕಿಸುಕಾಡು-70 ರಲ್ಲಿರುವ ಮುಶಿಗೇರಿ, ಕಲ್ಲಿಗನೂರು ಮತ್ತು ಗುಳಗುಳಿ ಗ್ರಾಮಗಳನ್ನು ಸೂಡಿಯ ಸೋಮೇಶ್ವರ ಪಂಡಿತರಿಗೆ ದಾನ ನೀಡಿದ ವಿಷಯವಿದೆ.

        ಇಲ್ಲಿರುವ ವಿಶಿಷ್ಠವಾದ ಬಾವಿಯೊಂದು ತನ್ನ ಇತಿಹಾಸವನ್ನು ಗರ್ಭದಲ್ಲಿರಿಸಿಕೊಂಡಿದೆ. ನಾಗರ ಬಾವಿ, ಇದನ್ನು ನಾಗಕುಂಡ, ರಸ್ತಾಬಾವಿ, ಪಾಂಡವರ ಬಾವಿ ಎಂದು ಕರೆಯುತ್ತಾರೆ. ಈ ರಸ್ತೆಯ ಪಕ್ಕದಲ್ಲಿರುವ ಕಾರಣ ರಸ್ತಾದ ಬಾವಿ ಎಂದು ಹೆಸರು ಬಂದಿದೆ. ಆದರೆ ಪಾಂಡವರ ಬಾವಿ ಎಂದು ಏಕೆ ಕರೆದರೋ ತಿಳಿಯದು. ಸಾಮಂತನಾದ ನಾಗದೇವನ್ನು ಇದನ್ನು ನಿರ್ಮಿಸಿದ ಕಾರಣ ನಾಗರಬಾವಿ, ನಾಗಕುಂಡ ಎಂದು ಹೆಸರನ್ನು ಪಡೆದುಕೊಂಡಿದೆ. ಈ ಬಗೆಗಿನ ಶಾಸನವು ಇಲ್ಲಿರುವ ಜೋಡು ಕಳಸದ ಗುಡಿಯಲ್ಲಿದೆ. ಇದು ಸುಮಾರು 80 ಅಡಿ ಸುತ್ತಳತೆಯನ್ನು, ಸುಮಾರು 50 ಅಡಿ ಆಳವನ್ನು ಹೊಂದಿದೆ. ಆ ಶಾಸನದ ಪ್ರಕಾರ ಕ್ರಿ.ಶ 1060 ರಲ್ಲಿ ಚಾಲುಕ್ಯರ ಮಹಾಸಾಮಂತಾಧಿಪತಿ, ದಂಡನಾಯಕ ನಾಗದೇವನು ನಾಗಗೊಂಡವೆಂಬ ಅಪರೂಪದ, ವಿಶಿಷ್ಠವಾದ ಪುಷ್ಕರಣಿಯನ್ನು ಕಟ್ಟಿಸುತ್ತಾನೆ. ಇದು ಚಾಲುಕ್ಯರ ವೈಭದ ಕೊಳ. ಇದರ ಒಳಗೋಡೆಯಲ್ಲಿ ಉಬ್ಬು ಕಂಬದ ಗೋಪುರಗಳ ಮಾದರಿಯ ಕೆತ್ತನೆ ಇದೆ. ಇದು ಚೌಕಾಕಾರದಲ್ಲಿದ್ದು ಇದರ ಪಶ್ಚಿಮಕ್ಕೆ ಮೆಟ್ಟಲುಗಳಿದ್ದು. ಅವು ಪೂರ್ವ ದಿಕ್ಕಿಗೆ ಅವುಗಳ ಮೂಲಕ ಕೆಳಗಿಳಿಯುವಂತಿವೆ. ಮೆಟ್ಟಲುಗಳು ಪ್ರಾರಂಭವಾಗುವ ಒಂದು ಚೌಕಟ್ಟು ಇದ್ದು, ಅಲ್ಲಿ ಈಗ ಕೇವಲ ಅರೆಗಂಬಗಳು ಮಾತ್ರ ಉಳಿದಿವೆ. ಇಲ್ಲಿಂದ ಮೆಟ್ಟಲುಗಳ ಎರಡು ಸಾಲುಗಳು ಪ್ರಾರಂಭವಾಗುತ್ತವೆ. ಇದರಲ್ಲಿ ಒಂದು ಸಾಲು ಉತ್ತರಕ್ಕೆ, ಮತ್ತೊಂದು ಪಶ್ಚಿಮಕ್ಕೆ  ಹೋಗುತ್ತವೆ. ಇದೇ ತರಹದ ಮೆಟ್ಟಲುಗಳು ಈ ಬಾವಿಯ ಇನ್ನುಳಿದ ಮೂರೂ ಬದಿಯಲ್ಲಿ ಕಂಡುಬರುತ್ತವೆ. ಮೆಟ್ಟಲುಗಳ ಮೇಲಿರುವ ಬಾವಿಯ ಗೋಡೆ ಲಂಬವಾಗಿದ್ದರೂ ಅದು ದಾರಿಯ ವರೆಗೆ ಮುಂದುವರಿದಿದೆ.ಈ ಹಂತದ ಮೇಲೆ ಅದು ಮುಂದೆ ಉಬ್ಬಿಕೊಂಡಿರುವ ಕಪೋತವಿದೆ. ಇವು ನಾಲ್ಕು ಬದಿಯಲ್ಲಿ ಕಂಡುಬರುತ್ತದ್ದು ಅವು ಅಲಂಕಾರರಹಿತ ಗೂಡುಗಳಿಂದ ಕೂಡಿದೆ. ಈ ಗೋಡೆಗಳ ಜಗಲಿ, ಪದ್ಮ, ತ್ರಿಪಟ್ಟ ಕುಮುದ, ಕಪೋತ, ತೊಲೆಗಳ ಕೊನೆ ಪದ್ಮಗಳಿಂದ ಕೂಡಿದ ಅದಿಷ್ಠಾನವನ್ನೊಳಗೊಂಡಿದೆ. ಚೌಕಾಕಾರದ ಬಾವಿಯ ಮೂರು ಬದಿಯಲ್ಲಿರುವ ಭಿತ್ತಿಯು ಉದ್ದವಾದ ಅರೆಗಂಬಗಳಿಂದ ಕೂಡಿದ್ದು ಅವು ಅನೇಕ ಉಬ್ಬು ಮತ್ತು ಗೂಡುಗಳಿಂದ ಅಲಂಕರಿಸಲ್ಪಟ್ಟಿವೆ.ಇದರ ಮಧ್ಯದ ಭಾಗ ಮೂರು ಸಲ ಮುಂದುವರಿದು ಮಧ್ಯದಲ್ಲಿ ಸರಳ ಗೂಡನ್ನು ಹೊಂದಿದೆ. ಇದರ ಮೂಲೆಗಳಲ್ಲಿ ಚಾಚಿಕೊಂಡಿರುವ ಭಾಗಗಳಿದ್ದು. ಅವು ಕೃತಕ ಗೂಡುಗಳಿಂದ ಅಲಂಕೃತವಾಗಿ, ಪ್ರಸ್ತರವು ಶಾಲ, ಕೂಟ, ಪಂಚರಗಳಿಂದ ಕೂಡಿದೆ. ಬಾವಿಯ ದಾರಿಯ ಇಕ್ಕೆಲಗಳಲ್ಲಿ ಅಲಂಕಾರಿಕ ಗೋಡೆಗಳಿವೆ. ಈ ದಾರಿ ಪೂರ್ವಕ್ಕೆ ಕೊನೆಯಲ್ಲಿ ಪ್ರವೇಶ ಮಂಟಪವಿದ್ದು, ಇದು ನಾಲ್ಕು ಅರೆಗಂಬಗಳ ಮೇಲೆ ನಿಂತಿದೆ. ಈ ಮಂಟಪದ ಗೋಡೆ ಮತ್ತು ಪ್ರಸ್ತರವು ಈ ದಾರಿಯ ಇತರ ಗೋಡೆಗಳಂತಿವೆ. ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ಗೂಡುಗಳಿವೆ. ಬಾವಿಯ ದಾರಿಯು ಮಂಟಪದ ಪೂರ್ವ ಬದಿಯ ವರೆಗೆ ಮುಂದುವರಿದಿದೆ. ಇದು ಈ ಬಾವಿಯ ವಾಸ್ತು ರಚನೆ.

   ಹಿಂದೆ ಈ ಬಾವಿಯ ನೀರನ್ನು ಪಕ್ಕದಲ್ಲಿರುವ ನಾಗೇಶ್ವರ ದೇವಾಲಯದ ಪೂಜೆಗಾಗಿ ಒಯ್ಯುತ್ತಿದ್ದರಂತೆ, ಆದರೆ ಇಂದು ಬಾವಿಯು ನೀರಿಲ್ಲದೇ ಬತ್ತಿ ಶಿಥಿಲಾವಸ್ಥೆಯಿಂದ ಶಿಲ್ಪವು ಸಾಕಷ್ಟು ಜೀರ್ಣಗೊಂಡಿದೆ. ಈಗ ಇದನ್ನು ಪುನರ್ ನವೀಕರಣವನ್ನು ಮಾಡಲಾಗುತ್ತಿದೆ. ಇದರಿಂದ ಇದರ ಹಿಂದಿನ ವೈಭವವು ಮರುಕಳಿಸಿತೆ?


       - ಡಾ.ಮಲ್ಲಿಕಾರ್ಜುನ ಕುಂಬಾರ
 ವಿಳಾಸ; ಡಾ.ಮಲ್ಲಿಕಾರ್ಜುನ ಕುಂಬಾರ.
   ‘’ವಚನ’’
  ರಾಜೂರ-582230
 ತಾ;ರೋಣ, ಜಿ;ಗದಗ
 ದೂರವಾಣಿ; [08381] 262925, (ಸನಿಹವಾಣಿ::- 9739341726)