Tuesday, January 6, 2015

ನುಣ್ಣೂರು ಗ್ರಾಮದಲ್ಲಿ ಹೊಯ್ಸಳ ನರಸಿಂಹನ ಕಾಲದ ಶಾಸನ

ನುಣ್ಣೂರು ಗ್ರಾಮದಲ್ಲಿ ದೊರೆತ ಹೊಯ್ಸಳ ನರಸಿಂಹನ
ಕಾಲದ ಅಪ್ರಕಟಿತ ಶಾಸನ
ಕೂಡ್ಲೂರು ವೆಂಕಟಪ್ಪ ಮುರಳಿ ಮಂಜುನಾಥ ಎಂ.ಕೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನುಣ್ಣೂರು ಗ್ರಾಮದ ಹೊರವಲಯದಲ್ಲಿನ ಹೊಲವೊಂದರಲ್ಲಿ ಶಿಲಾಶಾಸನವೊಂದು ಪತ್ತೆಯಾಯಿತು. ಅರ್ಧಕ್ಕಿಂತ ಹೆಚ್ಚು ಭಾಗ ಭೂಮಿಯಲ್ಲಿ ಹೂತುಹೋಗಿದ್ದ ಈ ಶಾಸನವನ್ನು ಅಗೆದು ತೆಗೆದು ಪರಿಶೀಲಿಸಿದಾಗ ಅಪ್ರಕಟಿತ ಶಾಸನವೆಂದು ತಿಳಿಯಿತು. ಐದು ಅಡಿ ಉದ್ದ. ಎರಡುವರೆ ಅಡಿ ಅಗಲ ಹಾಗೂ ಅರ್ಧ ಅಡಿ ದಪ್ಪವಾದ ಕಣಶಿಲೆಯ ಫಲಕದ ಮೇಲೆ ಈ ಶಾಸನವನ್ನು ಕಂಡರಿಸಲಾಗಿದೆ. ಈ ಶಾಸನದ ಭಾಷೆ ಹಾಗೂ ಲಿಪಿಯು ಕನ್ನಡವಾಗಿದೆ. ಈ ಲಿಪಿಯು ಹೊಯ್ಸಳರ ಕಾಲದ್ದಾಗಿದ್ದು, ಸುಂದರವಾಗಿದೆ. ಕಣಶಿಲೆಯ ಕಲ್ಲಿನ ಮೇಲೆ ಗುಂಡಾಗಿ, ಆಕರ್ಷಕವಾಗಿ ಶಾಸನವನ್ನು ಕೊರೆದಿರುವುದು ವಿಶೇಷ.
ಶಾಸನದ ಶಿಲ್ಪ
ಶಾಸನ ಪಾಠದ ಮೇಲ್ಭಾಗದಲ್ಲಿ ಸುಮಾರು ಒಂದು ಅಡಿ ಎತ್ತರವಾದ ಉಬ್ಬುಶಿಲ್ಪವನ್ನು ಕಡೆಯಲಾಗಿದೆ. ಶಾಸನ ಫಲಕದ ತೀರಾ ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಶಿಲ್ಪಗಳ ಕೆಳಭಾಗದಲ್ಲಿ ಇಬ್ಬರು ವ್ಯಕ್ತಿಗಳು ಪ್ರತ್ಯೇಕವಾದ ಪೀಠಗಳ ಮೇಲೆ ಪದ್ಮಾಸನದಲ್ಲಿ ಕುಳಿತಿದ್ದಾರೆ. ಅವರ ಮಧ್ಯದಲ್ಲಿರುವ ಗಂಡಸಿನ ಉಡುಗೆ ಧರಿಸಿರುವ ಗಂಡಭೇರುಂಡದ ತಲೆಯನ್ನುಳ್ಳ ವ್ಯಕ್ತಿಯೊಬ್ಬ, ತನ್ನ ಎರಡೂ ಕೈಗಳನ್ನು ಎರಡೂ ಬದಿಗೆ ಚಾಚಿ ಇಕ್ಕೆಲಗಳಲ್ಲಿ ಕುಳಿತಿರುವ ವ್ಯಕ್ತಿಗಳ ತಲೆಯ ಮೇಲೆ ಇರಿಸಿ ಆಶೀರ್ವದಿಸುತ್ತಿದ್ದಾನೆ. ಬಲಗಡೆ ಕುಳಿತ ವ್ಯಕ್ತಿಯ ಮೇಲೆ ಹುಲಿಯೊಂದು ತನ್ನ ಎಡಮುಂಗಾಲನ್ನು ಮೇಲೆತ್ತಿ ಆಕ್ರಮಣ ಮಾಡುವ ಭಂಗಿಯಲ್ಲಿದೆ. ಹುಲಿಯ ಪಕ್ಕದಲ್ಲಿ ಪೂರ್ಣಕುಂಭ ಹಾಗೂ ಅಂಕುಶದ ಶಿಲ್ಪವಿದೆ. ಈ ರೀತಿಯ ಶಾಸನ ಶಿಲ್ಪಗಳು ಚನ್ನಪಟ್ಟಣ ತಾಲ್ಲೂಕಿನ ಹೊಯ್ಸಳರ ಕಾಲದ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಈ ಶಿಲ್ಪವನ್ನು ಗಮನಿಸಿದರೆ ವೀರತನಕ್ಕೆ ನೀಡಿದ ದಾನ ಎನ್ನುವುದನ್ನು ಸೂಚಿಸುತ್ತದೆ. ಒಟ್ಟಾರೆ ಶಾಸನದ ಶಿಲ್ಪ ಅಭೂತಪೂರ್ವವಾದದ್ದು ಎಂದು ಹೇಳಬಹುದು. ನಿಪುಣ ಶಿಲ್ಪಿಯೊಬ್ಬನ ಕೈಚಳಕದ ಫಲಿತವಾದ ಈ ಶಿಲ್ಪವು ಆಕರ್ಷಕವಾಗಿಯೂ ಇದೆ.
ಶಾಸನ ಪಾಠ
1 ಶ್ರೀಸ್ವಸ್ತಿ ಸಮಸ್ತ ಭುವನಾಶ್ರಯ
2 ಶ್ರೀಪ್ರಿಥ್ವೀವಲ್ಲಭ ಮಲೆರಾಜರಾಜ
3 ಮಲಪರೊಳ್‍ಗಂಡ ಗಂಡ
4 ಭೇರುಂಡ ಕದನಪ್ರಚಂಡ ಶನಿ
5 ವಾರಸಿದ್ಧಿ ಗಿರಿದುರ್ಗಮಲ್ಲ ಚಲದಂಕ
6 ರಾಮ ಮಗರರಾಯಸ್ಥಾಪನಾಚಾರಿಯ
7 ಪಾಂಡ್ಯರಾಯಪ್ರತಿಷ್ಟಾಚಾರ್ಯ ನಿಶ್ಶಂ
8 ಕ ಪ್ರತಾಪ ಹೊಯಿಸಳ ಭುಜಬಳ ವೀರ
9 ನಾರಸಿಂಹದೇವರಸರು ಕವಿಕುಮುದ
10 ಚಂದ್ರಲೋಭಿರಾಯ ಗಜಾಂಕುಶ ಶ್ರೀವಾರಜನ
11 ಗಂಡ. ತ್ರಿಭುವನ ವಂದಿಜನ ಚಕ್ರವ
12 ತ್ರ್ತಿ ಕೀರ್ತಿದೇವರಸರಿಗೆ ನುಣ್ಣನೂರ ಚತುಃ
13 ಸೀಮೆಯ ಭೂಮಿಯನು ಅಚ್ರ್ಚಾಗತಿ ಕಿ¾ು
14 ಕುಳ ಕಾಣಿಕೆ ಹಣವನು ವ1ದು ಅಮು
15 . . . ಪಂಚಕಾರುಕ. ಲೆಡಿಯೊಳಗಾದ ನಮ
16 . ಕೆ¾õÉಯನೂ ಬಿಟ್ಟು ಧಾರೆಯನೆ¾ದು ಸಬ್ರ್ಬ
17 ನಮಸ್ಯವಾಗಿ ಕೀರ್ತಿದೇವರಸರಿಗೆ ಕೊಟ್ಟೆವು
18 ಯೀ ಮರಿಯಾದೆಯಲು ಸೂರಿ(ಯ) ಚಂದ್ರನುಳೊನಕ
19 ವು ನಡವುದು ಇವರ ಒಡವೆ. ಂಡಿನೆ ಸಿಮೋಲ್ಲ(ಂ) ಘ
20 . ಳ ದೇವನ ಲಿಂಗ ಅಳಿಪಿದವನು ತಾಯ...
21 . ಕತೆÀ್ತಗೇದ ಕವಿಲೆಯ ಕೊಂದ ಪಾಪ(ದಲಿ ಹೋಹರು)
ಶಾಸನದ ವಿಶ್ಲೇಷಣೆ
ಶಾಸನದಲ್ಲಿ ಒಟ್ಟು 21 ಸಾಲುಗಳ ಪಾಠವಿದೆ. ಶಾಸನದ ಆರಂಭದಲ್ಲಿ ಸ್ವಸ್ತಿಸಮಸ್ತಭುವನಾಶ್ರಯ, ಪೃಥ್ವೀವಲ್ಲಭ, ಮಲೆರಾಜರಾಜ, ಮಲಪರೊಳ್ ಗಂಡ, ಗಂಡಭೇರುಂಡ, ಶನಿವಾರ ಸಿದ್ದಿ, ಗಿರಿದುರ್ಗಮಲ್ಲ, ಛಲದಂಕರಾಮ, ಮಗರರಾಯ ಸ್ಥಾಪನಾಚಾರ್ಯ, ಪಾಂಡ್ಯರಾಯ ಪ್ರತಿಷ್ಠಾಪನಾಚಾರ್ಯ ಮುಂತಾದ ವೀರನರಸಿಂಹನ ಬಿರುದಾವಳಿಗಳಿವೆ. ಶಾಸನದ ಮುಂದಿನ ಭಾಗದಲ್ಲಿ ಕವಿಕುಮುದಚಂದ್ರ, ಲೋಭಿರಾಯ, ಗಜಾಂಕುಶ, ಶ್ರೀವಾರಜನಗಂಡ, ತ್ರಿಭುವನ ವಂದಿಜನ ಚಕ್ರವರ್ತಿ ಎಂದು ಕೀರ್ತಿದೇವರಸ ಎಂಬುವರಿಗೆ ವೀರನರಸಿಂಹನು ನುಣ್ಣನೂರು ಗ್ರಾಮದ ಚತುಃಸ್ಸೀಮೆಯ ಭೂಮಿಯನ್ನು ಧಾರೆಯೆರೆದು ಯಾವುದೇ ರೀತಿಯ ತೆರಿಗೆಗಳಿಲ್ಲದಂತೆ ದಾನವಾಗಿ ಕೊಟ್ಟ ವಿವರಗಳಿವೆ. ಶಾಸನದ ಅಂತ್ಯದಲ್ಲಿ ಶಾಪಾಶಯಗಳಿವೆ.
ಈ ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲದಿದ್ದರೂ, ಈ ಶಾಸನದಲ್ಲಿ ಉಕ್ತನಾಗಿರುವ ಕೀರ್ತಿದೇವರಸನ ಇತರ ಶಾಸನಗಳು (ಇತಿಹಾಸ ದರ್ಶನ, ಸಂ.26, ಪು 189) ಹಾಗೂ ಶಾಸನದಲ್ಲಿ ಉಲ್ಲೇಖಿತನಾಗಿರುವ ವೀರನರಸಿಂಹನ ಬಿರುದುಗಳ ಆಧಾರದಿಂದ ಹೊಯ್ಸಳ ಚಕ್ರವರ್ತಿ ಸೋಮೇಶ್ವರನ ಪುತ್ರನಾದ ಮೂರನೇ ವೀರನರಸಿಂಹನೆಂದು ಗುರುತಿಸಬಹುದು. ಕ್ರಿ.ಶ. 1253ರಿಂದ 1292ರವರೆಗೆ ಆಳ್ವಿಕೆ ನಡೆಸಿದ ಮೂರನೇ ವೀರನರಸಿಂಹನ ಕಾಲಕ್ಕೆ ಈ ಶಾಸನ ಸೇರುತ್ತದೆ. ಮೂರನೇ ನರಸಿಂಹನ ಕಾಲದಲ್ಲಿ ಕೀರ್ತಿದೇವರಸನು ಈ ಪ್ರದೇಶವನ್ನು ಆಳುತ್ತಿದ್ದ ಮಾಂಡಲಿಕನೆಂಬುದು ಸ್ಪಷ್ಟವಾಗುತ್ತದೆ. ಶಾಸನದಲ್ಲಿ ಅಚ್ಚಾರ್ಗತಿ, ಕಿರುಕುಳ, ಕಾಣಿಕೆ, ಪಂಚಕಾರುಕ ಮೊದಲಾದ ತೆರಿಗೆಗಳ ಪ್ರಸ್ತಾಪವಿದೆ. ಈ ಎಲ್ಲಾ ತೆರಿಗೆಗಳಲ್ಲದೇ, ಈ ಗ್ರಾಮದ ಕೆರೆಯನ್ನೂ ವೀರನರಸಿಂಹನು ಕೀರ್ತಿದೇವರಸನಿಗೆ ಸರ್ವ ನಮಸ್ಯವಾಗಿ ಧಾರೆಯೆರೆದು ಕೊಟ್ಟ ವಿವರ ಶಾಸನದಲ್ಲಿದೆ.
[ಈ ಶಾಸನವನ್ನು ಓದಲು ನಮಗೆ ನೆರವಾದ ಪ್ರೀತಿಯ  ಗುರುಗಳಾದ ಪ್ರೊ. ಎಂ.ಜಿ. ಮಂಜುನಾಥ್ ಹಾಗೂ ಸೀತಾರಾಮ ಜಾಗೀರ್‍ದಾರ್ ಅವರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.]

  ಕೂಡ್ಲರು ಗ್ರಾಮ, ಚನ್ನಪಟ್ಟಣ ತಾಲ್ಲೂಕು,ರಾಮನಗರ ಜಿಲ್ಲೆ.
 # 41, ಮಾಕಳಿ ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ.


No comments:

Post a Comment