Sunday, January 25, 2015

ಲಾಳಸಂಗಿ ಬಕ್ಕಯ್ಯನಮಠದ ಅಪ್ರಕಟಿತ ಶಾಸನ



ಇಂಡಿ ತಾಲ್ಲೂಕು ಲಾಳಸಂಗಿ ಬಕ್ಕಯ್ಯನಮಠದ ಅಪ್ರಕಟಿತ ಶಾಸನ ಮತ್ತು ಪ್ರಾಚ್ಯಾವಶೇಷಗಳು
ಆದಪ್ಪ ಪಾಸೋಡಿವಿಜಾಪುರ ಜಿಲ್ಲೆಯ ಇಂಡಿ ಪಟ್ಟಣದಿಂದ ಪೂರ್ವಕ್ಕೆ 26 ಕಿ.ಮೀ ದೂರದಲ್ಲಿ ಲಾಳಸಂಗಿ ಗ್ರಾಮವಿದೆ. ತರ್ದವಾಡಿ ನಾಡನ್ನಾಳುತ್ತಿದ್ದ ಕಲಚುರಿ ದೊರೆ ರಾಯಮುರಾರಿ ಸೋವಿದೇವನ ಆಡಳಿತಾವಧಿಯ (ಕ್ರಿ.ಶ. 1167-76) ಶಾಸನವೊಂದನ್ನು ಈ ಗ್ರಾಮದ ಅಗಸಿ ಬಾಗಿಲಿನ ಬಲಭಾಗದಲ್ಲಿ ನಿಲ್ಲಿಸಲಾಗಿದ್ದು, ಇದರಲ್ಲಿ ಪೆರಮಿದೇವ-ಸೋಯಿದೇವ ರಾಣಿಯರು ಆರವೆ (ಉದ್ಯಾನ)ಗಾಗಿ ಹೊಲ-ಮನೆ ಬಿಟ್ಟುಕೊಟ್ಟರೆಂಬ ಅಪರೂಪದ ಮಾಹಿತಿ ಇದೆ.1 ಇಂಥಹುದೇ ಧರ್ಮದಾರವೆಯನ್ನು ‘ಕ್ಷಿತಿರುಹ ನೋಂಪಿ’ ವ್ರತದ ಭಾಗವಾಗಿ ಬೆಳೆಸಿದ ಇನ್ನೊಂದು ಉಲ್ಲೇಖ ಇದೇ ತಾಲ್ಲೂಕಿನ ಹಿರೇಬೇವಿನೂರಿನ ಕ್ರಿ.ಶ.1190ರ ಶಾಸನದಲ್ಲಿ ಉಕ್ತವಾಗಿದೆ. ಇಲ್ಲಿ ಬೊಪ್ಪಣಯ್ಯನ ಅರ್ಧಾಂಗಿ ಸಿರಿದೇವಿಯಕ್ಕ ವನಸ್ಪತಿಗಳನ್ನು ನೆಟ್ಟು ವ್ರತವನ್ನು ಆಚರಿಸುತ್ತಾಳೆ2. ಲಾಳಸಂಗಿ ಮತ್ತು ಹಿರೇಬೇವಿನೂರು ಗ್ರಾಮಗಳ ಅಂದಿನ ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕರು ಹೊಂದಿದ ಆಸ್ಥೆಯನ್ನು ಮೆಚ್ಚಲೇಬೇಕು.
ಲಾಳಸಂಗಿ ಗ್ರಾಮದ ಕಂದಾಯ ವ್ಯಾಪ್ತಿಗೊಳಪಡುವ ಗೋಳಸರದ ಶ್ರೀಮತಿ ಶಾಂತಾಬಾಯಿ ನಿಂಬರಗಿಯವರ ಹೊಲದಲ್ಲಿರುವ 13ನೇ ಶತಮಾನದ ಪೂರ್ವಾರ್ಧ ಕಾಲಮಾನದ ಒಂದು ಶಾಸನವು ‘ಲಾಳಸಂಗವಿಗೆಯ ಸಂಕರಸೆಟ್ಟಿ’ ಯನ್ನು ಉಲ್ಲೇಖಿಸುತ್ತದೆ3. ಪ್ರಸ್ತುತ ಲಾಳಸಂಗಿ ಸ್ಥಳನಾಮವು ನಾಡಿನೊಳಗೆ ಕಲಹಗಳನ್ನು ನಿವಾರಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುತ್ತಿದ್ದ ನಾಡಸಂಧಿವಿಗ್ರಹಿಯ ವಾಸದ ನೆಲೆಯಿಂದಾಗಿ ಅದು ನಾಡಸಂಧಿವಿಗ್ರಹಿ > ನಾಳಸಂದಿವಿಗ್ರಹಿ > ಲಾಳಸಂಗಿವಿಗವಿ > ಲಾಳಸಂಗವಿಗೆ > ಲಾಳಸಂಗಿ ಎಂಬುದಾಗಿಯೂ, ಕೆಲವೊಮ್ಮೆ ಮಾತಿನ ಭರದಲ್ಲಿ ಸ್ಥಳೀಯರು ಲಾಸಂಗಿ ಎಂದೂ ಹೇಳಿಬಿಡುತ್ತಾರೆ.
ಬಕ್ಕಯ್ಯನ ಮಠದ ಶಾಸನ: ಗ್ರಾಮದ ಪೂರ್ವಕ್ಕೆ ಊರ ಹೊರಭಾಗದಲ್ಲಿ ‘ಬಕ್ಕಯ್ಯನ ಮಠ’ ಇದೆ. ಉತ್ತರ ದಿಕ್ಕಿಗೆ ಮುಖ ಮಾಡಿರುವ ಕರಿಕಲ್ಲಿನ ಇಂಡೋ-ಇಸ್ಲಾಮಿಕ್ ಮಾದರಿಯ ಕಟ್ಟಡವಿದಾಗಿದೆ. ಮಠದ ಪಡಸಾಲೆಗೆ ಮೂರೂ ಕಮಾನುಗಳ ಮೂಲಕ ಪ್ರವೇಶವಿದೆ. ಈ ಕಮಾನುಗಳು ಮತ್ತು ಇಡೀ ಬಕ್ಕಯ್ಯನ ಮಠದ ಹೊರನೋಟವು ವಿಜಾಪುರದ ಇಬ್ರಾಹಿಂರ ಹಳೆಯ ಜಾಮೀ ಮಸೀದಿ ಮತ್ತು ಹೈದರಯ್ಯನ ಮಸೀದಿಗಳಂತೆ ಕಾಣಿಸುತ್ತದೆ. ಮುಂದೆ ಈ ರಾಚನಿಕ ವಿನ್ಯಾಸವು ಈ ಭಾಗದ ಎಲ್ಲ ಧರ್ಮದವರ ನಿರ್ಮಿತಿಗಳಿಗೂ ವಿಸ್ತರಣೆಯಾಗಿರುವುದನ್ನು ಇಲ್ಲಿ ಕಾಣಬಹುದು. ಕಮಾನುಗಳು, ಮಿನಾರ್‍ಗಳು ಇಲ್ಲಿ ಸರ್ವೇಸಾಮಾನ್ಯವಾಗಿ ಉಳಿದುಕೊಂಡಿವೆ. ಪಡಸಾಲೆಯು ಪೂರ್ವ-ಪಶ್ಚಿಮದಲ್ಲಿ 28 ಅಡಿ, ದಕ್ಷಿಣೋತ್ತರ 10 ಅಡಿಗಳ ವಿಸ್ತೀರ್ಣವನ್ನು ಹೊಂದಿದೆ. ಪಡಸಾಲೆಯ ಮಧ್ಯಮ ಕಮಾ£ನ ಮೂಲಕ ಮಧ್ಯದಂಕಣದಲ್ಲಿ ಒಳಗೆ ಚಿಕ್ಕ ಗರ್ಭಗೃಹದಂತಹ ಒಂದು ಕೋಣೆ ಇರುತ್ತದೆ. ಇದರ ಬಾಗಿಲು 3’9" ಎತ್ತರ ಹಾಗೂ 2’ ಅಗಲವಾಗಿದೆ. ಈ ಕೋಣೆಯ ದ್ವಾರಬಂಧಗಳ ಮೇಲೆ ಇರುವ ಲಲಾಟದಲ್ಲಿ ಶಿವಲಿಂಗದ ರೇಖಾಚಿತ್ರ ಬಿಡಿಸಿದ್ದು, ಲಿಂಗದ ಸುತ್ತಲೂ ಅಯತಾಕಾರದ ಎರಡು ಗೆರೆಗಳನ್ನು ಎಳೆಯಲಾಗಿದೆ. ಶಿವಲಿಂಗದ ಎಡ-ಬಲಕ್ಕೆ ಶಾಸನದ ಸಾಲುಗಳಿದ್ದು, ಬಣ್ಣ ಬಳಿದಿರುವುದರಿಂದ ಅಕ್ಷರಗಳು ಮಾಸಿರುತ್ತವೆ. ಚಿಕ್ಕ ಕೋಣೆಯ ಎಡಭಾಗದಿಂದ ಮಠದ ಮಾಳಿಗೆಯ ಮೇಲೆ ಹೋಗಲು ಕಲ್ಲಿನ ಮೆಟ್ಟಿಲುಗಳನ್ನು ಕಟ್ಟಲಾಗಿದೆ. ಪಡಸಾಲೆಯ ಛತ್ತಿನ ಮುಂಭಾಗಕ್ಕೆ 18 ಅಲಂಕಾರಿಕ ಬುಗುರೆಗಲ್ಲುಗಳನ್ನು ಕೂಡ್ರಿಸಲಾಗಿದೆ. ಇವುಗಳ ಹಿಂಬಾಲಗಳು ಗೋಡೆಯಲ್ಲಿ ಸಿಕ್ಕಿಕೊಂಡಿರುತ್ತವೆ. ಬುಗುರೆಗಲ್ಲುಗಳು ಗಡಿಗೆಬೋದಿನ ಮನೆಯ ಕಾಷ್ಠಬೋದಿಗೆಗಳನ್ನು ನೆನಪಿಸುತ್ತವೆ ಮತ್ತು ಆನೆಯ ಮೇಲೆತ್ತಿದ ಸೊಂಡಿಲಿನಂತೆಯೂ ಕಾಣಿಸುತ್ತವೆ. ಅವುಗಳ ಮೇಲೆ ಕಲ್ಲುಚಪ್ಪಡಿಗಳನ್ನು ಹೊದಿಸಲಾಗಿದೆ. ಇನ್ನು ಪಡಸಾಲೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಊರಿನ 85-90 ವರ್ಷದ ವಯೋವೃದ್ಧರನ್ನು  ವಿಚಾರಿಸಿದಾಗ, ಅವರು ಇದನ್ನು ಬಕ್ಕಯ್ಯನ ಮಠವೆಂದೂ, ತಾವು ಇಲ್ಲಿಯೇ ಶಾಲೆ ಕಲಿತ್ತದ್ದು ಎಂದು ಹೇಳುತ್ತಾರೆ. ಮಠದ ಮಧ್ಯದ ಕಮಾನಿನ ಎಡಕಂಬಕ್ಕೆ ಒರಗಿಸಿದ ಸ್ಥಿತಿಯಲ್ಲಿ 18 ಇಂಚು ಅಗಲ 11ಳಿ ಇಂಚು ಎತ್ತರವಿರುವ ಶಿಲಾಶಾಸನವಿದೆ. ಶಾಸನಕಲ್ಲಿನ ಸುತ್ತಲೂ ಒಂದು ಇಂಚು ಅಂಚನ್ನು ಬಿಟ್ಟು ಗೆರೆ ಹಾಕಲಾಗಿದೆ. ಆಯತಾಕಾರದ ಕಲ್ಲಿನ ಮೇಲೆ ಆಯತಾಕಾರದ ಗೆರೆ ಹಾಕಿಕೊಂಡು ಆರು ಸಾಲುಗಳ ಶಾಸನವನ್ನು ಇದರ ಮೇಲೆ ಬರೆಯಲಾಗಿದೆ.
ಶಾಸನ ಪಾಠ
1 ಶ್ರೀ ಯಂಕಂಚಿ ನಿಂಗಪ್ಪನ ಪುತ್ರನಾ
2 ದ ಶಂಕರಪ್ಪ . . . . ಸಿದ್ದಲಿಂಗಪ್ಪ
3 ನ ಪುತ್ರನಾದ ಶಿವಲಿಂಗಪ್ಪ ಯಿಬ್ಬ
4 ರು ಕೂಡಿ ಆನಂದ ನಾಮ ಸಂವತ್ಸ
5 ರದಲ್ಲಿ ತಂಮ ಭಕ್ತಿಯಿಂದ
6 ಕಟ್ಟಿಸಿ ಶರಣು ಮಾಡಿದ ಮಟ
ಯಂಕಂಚಿ ಗ್ರಾಮದ ನಿಂಗಪ್ಪನ ಪುತ್ರ ಶಂಕರಪ್ಪ ಮತ್ತು ಸಿದ್ಧಲಿಂಗಪ್ಪನ ಪುತ್ರ ಶಿವಲಿಂಗಪ್ಪನ ಇಬ್ಬರೂ ಕೂಡಿಕೊಂಡು ಭಕ್ತಿಯಿಂದ ಲಾಳಸಂಗಿ ಗ್ರಾಮದ ಈ ಮಠವನ್ನು ಕಟ್ಟಿಸಿ ಶರಣು ಮಾಡಿದರು ಎಂಬುದು ಶಾಸನದ ಸಾರಾಂಶವಾಗಿರುತ್ತದೆ. ಸಿಂದಗಿ ತಾಲ್ಲೂಕಿನ ಯಂಕಂಚಿಯಿಂದ ಇಂಡಿ ತಾಲ್ಲೂಕಿನ ಲಾಳಸಂಗಿಯು ಸುಮಾರು 55 ಕಿ.ಮೀ. ದೂರದಲ್ಲಿದೆ. ಅಷ್ಟೊಂದು ದೂರದಿಂದ ಬಂದ ಶರಣರಿಬ್ಬರು ಮಠ ಕಟ್ಟಿಸಲು ಮುಂದಾದದ್ದು ಅವರ ಭಕ್ತಿಯ ವಿಷಯವಾಗಿದೆ. ಮಠದ ಕಟ್ಟಡದ ಖರ್ಚು-ವೆಚ್ಚಗಳನ್ನು ಇಬ್ಬರೂ ಭರಿಸಿ ಆನಂದನಾಮ ಸಂವತ್ಸರದಲ್ಲಿ ನಿರ್ಮಾಣಗೊಳಿಸಿರುತ್ತಾರೆ. ಶಂಕರಪ್ಪ-ಶಿವಲಿಂಗಪ್ಪ ಇವರಿಬ್ಬರೂ ಸಮಕಾಲೀನರಾಗಿದ್ದು, ಇವರಿಬ್ಬರ ತಂದೆಯವರಾದ ಯಂಕಂಚಿ ನಿಂಗಪ್ಪ ಮತ್ತು ಸಿದ್ಧಲಿಂಗಪ್ಪನವರೂ ಸಮವಯಸ್ಕರಾಗಿದ್ದಿರಬಹುದು. ‘ಶರಣು ಮಾಡುವುದು’ ಎಂದರೆ ಸಮರ್ಪಿಸುವುದು ಎಂಬರ್ಥ ಬರುತ್ತದೆ. ‘ಮಠ’ ಎಂಬ ಪದಕ್ಕೆ ‘ಯತಿಗಳ ವಾಸಸ್ಥಾನ’ ಎಂಬುದು ಮೂಲಾರ್ಥ. ಅಂತಹ ವಾಸಸ್ಥಾನಗಳಲ್ಲಿ ವಿದ್ಯಾದಾನ ನಡೆಯುತ್ತಿದ್ದುದರಿಂದ ವಿದ್ಯಾಕೇಂದ್ರ, ಪಾಠಶಾಲೆ ಎಂಬ ಅರ್ಥಗಳೂ ಇವೆ. ಅಮರಕೋಶದಲ್ಲಿ ‘ಶಿಷ್ಯರಿರುವ ಸ್ಥಳ’ ಎಂಬ ಅರ್ಥವನ್ನು ಕೊಟ್ಟಿದೆಯಾದರೂ ಈಗಲೂ ಹಳ್ಳಿಗಳಲ್ಲಿ ಪಾಠಶಾಲೆಗಳನ್ನು ‘ಮಠ’, ‘ಸಾಲೆಮಠ’ ಎಂದು ಕರೆಯಲು ಬಹುಮಟ್ಟಿಗೆ ಪ್ರಾಚೀನ ದೇವಸ್ಥಾನಗಳೇ ಕಾರಣ4. ಇತ್ತೀಚಿನವರೆಗೂ ಲಾಳಸಂಗಿಯಲ್ಲಿ ಪಾಠ ಪ್ರವಚನಗಳು ಇದೇ ಮಠದಲ್ಲಿ ನಡೆಯುತ್ತಿದ್ದವೆಂಬುದನ್ನು ಇಲ್ಲಿಯ ವಯೋವೃದ್ಧರು ನೆನಪಿಸಿಕೊಳ್ಳುತ್ತಾರೆ. ಜನರ ಬಾಯಿಯಲ್ಲಿ ಇದು ‘ಬಕ್ಕಯ್ಯನ ಮಠ’ವಾಗಿ ಉಳಿದುಕೊಂಡಿದೆ. ಬಹುಶಃ ಈ ಮಠಕ್ಕೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಬಕ್ಕಯ್ಯನ ದೇವಸ್ಥಾನವಿದ್ದಿರಬಹುದು, ಏಕೆಂದರೆ ಈ ಮಠದ ಹಿಂದೆ ಮರಗಳ ಕೆಳಗೆ ಇಟ್ಟಿರುವ ಬೃಹತ್ ಶಿವಲಿಂಗದ ಪಾಣಿಪೀಠವು ಈ ಅಂಶವನ್ನು ದೃಢೀಕರಿಸುತ್ತದೆ.
ಬಕ್ಕಯ್ಯನ ಮಠದ ದುರಸ್ತಿ ಕೆಲಸ 15-20 ವರ್ಷಗಳ ಹಿಂದೆ ನಡೆಯಿತು. ಆಗ ಪಡಸಾಲೆಯ ಗೋಡೆಗಳು ಮತ್ತು ಕಮಾನುಗಳಿಗೆ ಸಿಮೆಂಟ್ ಹಚ್ಚಿ, ಮಧ್ಯದ ಕಮಾನಿನ ಮೇಲೆ ‘ಶ್ರೀ ನೂರಂದೇಶ್ವರ ಜ್ಞಾನಮಂದಿರ ಲಾಳಸಂಗಿ’ ಎಂಬ ಬರಹ ಬರೆಸಲಾಗಿದೆ. ಆದಾಗ್ಯೂ ಗ್ರಾಮಸ್ಥರು ‘ಬಕ್ಕಯ್ಯನ ಮಠ’ವೆಂದೇ ಹೇಳುತ್ತಾರೆ. ಹಿಂದೆ ಈ ಮಠದೊಳಗೆ ಮನೆಗಳಿದ್ದವು, ಮನೆ ಮತ್ತು ಮಠಗಳನ್ನೊಳಗೊಂಡು ದೊಡ್ಡ ಆವರಣ ಗೋಡೆಯೂ ಇರುವುದನ್ನು ಪಾಯದ ಕಲ್ಲುಗಳಿಂದ ಇಂದಿಗೂ ಗುರುತಿಸಬಹುದಾಗಿದೆ. ಬಕ್ಕಯ್ಯನ ಮಠಕ್ಕೆ ‘ನೂರಂದೇಶ್ವರ ಜ್ಞಾನಮಂದಿರ’ ಎಂಬ ಹೆಸರಿಡುವ ಪ್ರಯತ್ನ ಹೇಗೆ ನಡೆಯಿತು? ಎಂದು ಪ್ರಶ್ನಿಸಿದಾಗ ಲಾಳಸಂಗಿಯ ಕೆಲ ಗ್ರಾಮಸ್ಥರು ಈ ಮಠ ಸಿಂದಗಿ ತಾಲ್ಲೂಕು ಮೋರುಟಗಿಯ ನೂರಂದೇಶ್ವರ ಮಠದ ಆಡಳಿತಕ್ಕೊಳಪಟ್ಟಿದೆ ಎಂದು ತಿಳಿಸಿದರು. ಇನ್ನು ಕೆಲವರು ನೂರಂದೇಶ್ವರ ಮಠದಿಂದ ಒಬ್ಬ ಯತಿ ಬಂದು ಇಲ್ಲಿ ತಂಗಿದ್ದರು. ಅವರ ಇರುವಿಕೆಗಾಗಿ ಇದನ್ನು ‘ನೂರಂದೇಶ್ವರ ಜ್ಞಾನಮಂದಿರ’ ಎನ್ನಲಾಗಿದೆ ಎಂಬ ವಿವರಣೆ ನೀಡುತ್ತಾರೆ. ಹಾಗಾದರೆ ಮೋರುಟಗಿಯ ನೂರಂದೇಶ್ವರರು ಯಾರು? ಎಂಬ ಪ್ರಶ್ನೆ ಎದುರಾದಾಗ ಮೋರುಟಗಿಯ ಬಸಲಿಂಗಯ್ಯ ತೆಗ್ಗಿನಮಠರವರು ಹೀಗೆ ಹೇಳುತ್ತಾರೆ - ‘ರಾಮಗಿರಿ ಮಠದ ವಂಶಸ್ಥರಾದ ನೂರಂದಯ್ಯ (1879-1974)ನವರು ತಾಯಿ ಬಸಮ್ಮ ಮತ್ತು ತಂದೆ ಗುರುಬಸಯ್ಯನವರ ಜೇಷ್ಠ ಪುತ್ರರು. ಇವರು ಸಿಂದಗಿ ತಾಲ್ಲೂಕಿನ ಮೋರುಟಗಿ, ಅಫಜಲಪುರ ತಾಲ್ಲೂಕಿನ ಶಿವೂರ, ಇಂಡಿ ತಾಲ್ಲೂಕಿನ ಚಿಕ್ಕಬೇವನೂರು, ಚಿತ್ತಾಪುರ ತಾಲ್ಲೂಕಿನ ಪೆಂಗಳಿ, ಅಕ್ಕಲಕೋಟ ತಾಲ್ಲೂಕಿನ ಸುಲೇರ ಜವಳಗಿ,  ಹಂಜಗಿ ಗ್ರಾಮಗಳಲ್ಲಿ ಮಠಗಳನ್ನು ಸ್ಥಾಪಿಸಿದ್ದರು. ಈ ಎಲ್ಲ ಮಠಗಳು ನೂರಂದೇಶ್ವರ ವಿರಕ್ತಮಠ ಗಳೆಂದು ಕರೆಯಲ್ಪಡುತ್ತಿವೆ’. ಇವರ ಈ ಮಾತಿನಲ್ಲಿ ಲಾಳಸಂಗಿ ಮಠದ ಪ್ರಸ್ತಾಪವೇ ಇರುವುದಿಲ್ಲ. ಹಾಗಾಗಿ ಲಾಳಸಂಗಿಯ ಬಕ್ಕಯ್ಯನ ಮಠಕ್ಕೂ ಮೋರುಟಗಿಯ ನೂರಂದೇಶ್ವರ ಮಠಕ್ಕೂ ಸಂಬಂಧವಿರುವುದಿಲ್ಲ. ಬಕ್ಕಯ್ಯನ ಮಠದ ಇಂಡೋ-ಇಸ್ಲಾಮಿಕ್ ವಾಸ್ತುಶೈಲಿ (ಕಮಾನು) ಹಾಗೂ ಯಂಕಂಚಿ ಶರಣರು ಹಾಕಿಸಿದ ಶಿಲಾಶಾಸನ (ಫಲಕದ) ಲಕ್ಷಣಗಳನ್ನಾಧರಿಸಿ ಬಕ್ಕಯ್ಯನ ಮಠವು ಸುಮಾರು 150 ವರ್ಷಗಳ ಹಿಂದಿನ ಅಂದರೆ ಕ್ರಿ.ಶ.1864-65ರ ನಿರ್ಮಿತಿಯೆಂದು ಹೇಳಬೇಕಾಗುತ್ತದೆ. ನಿಂಗಪ್ಪನ ಪುತ್ರ ಶಂಕರಪ್ಪ ಹಾಗೂ ಸಿದ್ಧಲಿಂಗಪ್ಪನ ಪುತ್ರ ಶಿವಲಿಂಗಪ್ಪನವರ ವಂಶಸ್ಥರು ಯಂಕಂಚಿ ಗ್ರಾಮದಲ್ಲಿ ಇದ್ದಿರುವ ಬಗ್ಗೆ, ಈ ಕುಟುಂಬದವರಿಂದ ನಡೆದ ಇಂಥ ಧರ್ಮ ಕಾರ್ಯಗಳ ಹೆಚ್ಚಿನ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಸದರಿ ಕುಟುಂಬದ ವಂಶವೃಕ್ಷವನ್ನು ಲಭ್ಯ ಆಕರಗಳಿಂದ ಸಂಗ್ರಹಿಸಬೇಕಾಗಿದೆ. ಶಾಸನೋಕ್ತ ‘ಯಂಕಂಚಿ’ ಸ್ಥಳನಾಮವು ಕ್ರಿ.ಶ.1146ರ ಯರಗಲ್ಲು ಶಾಸನದಲ್ಲಿ ‘ಎಕ್ಕಂಚಿ’ ಎಂದು ಉಲ್ಲೇಖಿಸಲ್ಪಟ್ಟಿರುತ್ತದೆ. ಬದ್ಧರೂಪದಲ್ಲಿ ಕಾಣಿಸಿಕೊಳ್ಳುವ ‘ಎಕ್ಕಂಚಿ’ ಸ್ಥಳನಾಮದ ಅಂತ್ಯಸ್ವರ ‘ಇ’ ಎಂಬ ಸ್ಥಳವಾಚಕದ ಮೂಲ ನಿರ್ಧರಿಸಲು ಹೊರಟರೆ, ಅದು ಗ್ರಾಮ > ಗಾಮ > ಗಾವ > ಗಾ > ಗೆ > ಗಿ (ಗ್+ಇ=ಗಿ, ಚ್+ಇ=ಚಿ) ಆಗಿದೆಯೆನ್ನಲಾಗುತ್ತದೆ. ಸಿಂದಗಿ ತಾಲ್ಲೂಕಿನ ಇಂಥ ಇತರ ಸ್ಥಳನಾಮಗಳೆಂದರೆ ಚಟ್ಟರಕಿ, ಹೊನ್ನುಟಕಿ, ಇಂಗಳಗಿ, ಕುಮಸಗಿ, ಕುಳೆಕುಮಟಗಿ, ಚಿಕ್ಕರೂಗಿ, ಹಿಪ್ಪರಗಿ ಇತ್ಯಾದಿ5.
ಅಜಾತಸ್ವಾಮಿ ಮಠದ ಕಮಾನುಬಾವಿ: ಲಾಳಸಂಗಿ ಗ್ರಾಮದ ಪಶ್ಚಿಮಕ್ಕೆ ಊರ ದಂಡೆಯಲ್ಲಿ ಅಜಾತಸ್ವಾಮಿ ಮಠವಿದೆ. ಈ ಮಠದ ಆವರಣದಲ್ಲಿ ಒಂದು ಕಮಾನು ಬಾವಿಯಿದ್ದು, ಹೊರನೋಟಕ್ಕೆ ಅದೊಂದು ನೀರಿನ ತೊಟ್ಟಿಯಂತೆ ಕಾಣಿಸುತ್ತದೆ. ಬಾವಿಯ ಈಶಾನ್ಯ ದಿಕ್ಕಿನಿಂದ ಒಳಗೆ ಇಳಿಯಲು ನಾಲ್ಕು ತಿರುವುಗಳಲ್ಲಿ 4+4+5+3 ಹೀಗೆ ಒಟ್ಟು 16 ಮೆಟ್ಟಿಲುಗಳಿರುತ್ತವೆ. ಕ್ರಿ.ಶ.1530ರ ಕಮಲಾಪುರದ ಶಾಸನವು ನಾಡಬಾವಿ ಮತ್ತು ಕಪಿಲೆಯ ಬಾವಿಯೆಂಬ ಎರಡು ರೀತಿಯ ಬಾವಿಗಳನ್ನು ಉಲ್ಲೇಖಿಸು ತ್ತವೆ. ಮೆಟ್ಟಿಲುಗಳ ಮೂಲಕ ನೀರಿಗೆ ಇಳಿಯಬಹುದಾದ ಬಾವಿಯನ್ನು ನಾಡಬಾವಿ ಅಥವಾ ನಡದಬಾವಿಯಾದರೆ, ಮೆಟ್ಟಿಲುಗಳಿಲ್ಲದ ಬಾವಿಗಳಿಂದ ನೀರನ್ನು ಚರ್ಮದ ಅಥವಾ ತಗಡಿನ ಸಾಧನ (ಕಪಿಲೆ)ದಿಂದ ನೀರೆತ್ತುವ ಪ್ರಕಾರದವುಗಳನ್ನು ಕಪಿಲೆಯ ಬಾವಿ ಎನ್ನಲಾಗುತ್ತದೆ6. ಹಾಗಾಗಿ ಮೆಟ್ಟಿಲುಗಳಿರುವ ಈ ಕಮಾನುಬಾವಿಯನ್ನು ನಾಡಬಾವಿ ಎಂದು ಕರೆಯಬೇಕಾಗುತ್ತದೆ. ತಮಿಳಿನಲ್ಲಿ ಇದನ್ನು ‘ನಡೈಬಾವಿ’ ಎನ್ನುತ್ತಾರೆ. ಬಾವಿಗೆ ಇಳಿಯುವ ಮೆಟ್ಟಿಲು ಹಾಗೂ ಎಡ-ಬಲ ಗೋಡೆಗಳಿಗೆ ಬೃಹತ್ ಗಾತ್ರದ ಚೌಕಾದ ಕರಿಕಲ್ಲುಗಳಿದ್ದು, ಮೇಲ್ಛಾವಣಿಗೆ ಜೋಡಿಸಿರುವ ಕಲ್ಲುಗಳ ಮಧ್ಯದಲ್ಲಿ ಗಾರೆ (ಗಚ್ಚು) ಹಾಕಿ ಕಟ್ಟಲಾಗಿರುತ್ತದೆ. ಎಷ್ಟೇ ಎತ್ತರದ ವ್ಯಕ್ತಿಯೂ ಒಬ್ಬ ನಿರಾಯಾಸವಾಗಿ ಒಳಗೆ ಹೋಗಿ ಬರಬಹುದು. ನೆಲವನ್ನು ವೃತ್ತಾಕಾರದಲ್ಲಿ ಅಗೆದು ಗಟ್ಟಿಭಾಗದಿಂದ ಮೇಲೆ ಕರಿಕಲ್ಲಿನಿಂದ ಚೌಕಾಕಾರದಲ್ಲಿ ಗೋಡೆಕಟ್ಟಿ, ಅದರ ಮೇಲೆ ಪೂರ್ವ-ಪಶ್ಚಿಮ 19 ಅಡಿ, ದಕ್ಷಿಣೋತ್ತರ 17 ಅಡಿ ಸ್ಥಳಾವಕಾಶ ಕಲ್ಪಿಸಿಕೊಡು ಒಟ್ಟು 10 ಕಮಾನಾಕೃತಿಗಳನ್ನು ನಿರ್ಮಿಸಲಾಗಿದೆ. ಈ ಕಮಾನುಗಳ ಅಡಿಯಲ್ಲಿ ವಿಶಾಲವಾದ ಸಮತಟ್ಟು ಮಾಡಿ ತಂಗಲು ಸ್ಥಳಾವಕಾಶ ಒದಗಿಸಲಾಗಿದೆ. ಈ ತಂಗುದಾಣಗಳು ವಿಜಾಪುರ ಹತ್ತಿರದ ಕುಮಟಗಿಯ ಬಾವಿಗಳಲ್ಲಿರುವಂತೆಯೇ ಇರುತ್ತವೆ7. ಕುಮಟಗಿಯಲ್ಲಿರುವಂತೆ ಅಲಂಕಾರಿಕ ಚಿತ್ರಗಳು ಇರುವುದಿಲ್ಲ. ಕಮಾನು ಬಾವಿಯ ಪೂರ್ವದ ಗೋಡೆಗೆ ಎರಡು ಚೌಕಾಕಾರದ ಕೋಷ್ಠಗಳು, ಪಶ್ಚಿಮದ ಗೋಡೆಗೆ ಎರಡು ಕಮಾನಿನಾಕಾರದ ಕೋಷ್ಠಗಳು ಹಾಗೂ ಉತ್ತರ ದಿಕ್ಕಿನ ಗೋಡೆಯಲ್ಲಿ ಎರಡು ಚೌಕಾಕಾರದ ಕೋಷ್ಠ(ಮಾಡು)ಗಳಿರುತ್ತವೆ. ದಕ್ಷಿಣ ದಿಕ್ಕಿಗೆ ಸ್ಥಳಾವಕಾಶ ಇಲ್ಲದಿರುವುದರಿಂದ ಕೋಷ್ಠಗಳನ್ನು ಮಾಡಿರುವುದಿಲ್ಲ. ಲಾಳಸಂಗಿಯ ಈ ಬಾವಿ ನೆಲಮಟ್ಟದಿಂದ ಕೆಳಗೆ ನಿರ್ಮಾಣವಾದ ಕಮಾನುಗಳು, ಅವುಗಳ ಮೇಲೆ ಹಾಕಿದ ಕಲ್ಲಿನ ಛಾವಣಿಗಳು ಇದ್ದು, ಹೊರಗಿನಿಂದ ನೋಡಿದರೆ ನೆಲದೊಳಗೆ ಬಾವಿಯ ಸುತ್ತ ಕಮಾನುಗಳಿವೆಯೆಂದು ಗೊತ್ತಾಗುವುದೇ ಇಲ್ಲ. ಆದಾಗ್ಯೂ ಕಮಾನುಗಳ ರಚನಾ ವಿನ್ಯಾಸ ಕಟ್ಟಡ ಶೈಲಿಗಳು ವಿಜಾಪುರದ ಚಾಂದ್‍ಬಾವಡಿಯನ್ನು ಹೋಲುವುದರಿಂದ ಈ ಬಾವಿಯ ಕಾಲಮಾನವನ್ನು ಕ್ರಿ.ಶ.1550-1600ರ ನಂತರದ ಅವಧಿಗೆ ಹಾಕಬಹುದು.
ಬಾವಿಯಿಂದ ಒಂದು ಕಿ.ಮೀ. ದೂರದಲ್ಲಿರುವ ಕೆರೆ ತುಂಬಿದರೆ ಬಾವಿಗೆ ನೀರು ಒಸರುತ್ತದೆ. ಕಮಾನುಬಾವಿ ಯೊಂದಿಗೆ ಬೆಸೆದುಕೊಂಡಿರುವ ಅಜಾತಸ್ವಾಮಿ ಮಠದ ಬಗ್ಗೆ ತಿಳಿಯಲೆತ್ನಿಸಿದಾಗ ಅಜಾತಸ್ವಾಮಿಗಳು ಆಲಮೇಲದಿಂದ ಲಾಳಸಂಗಿ ಗ್ರಾಮಕ್ಕೆ ಬಂದು ಇಲ್ಲಿ ಮಠ ಸ್ಥಾಪಿಸಿದರಂತೆ. ಇವರ ಸಹೋದರ ಗೋಸಯ್ಯನವರು ಆಲಮೇಲದ ಕೆರೆ ಹಿಂಭಾಗದಲ್ಲಿ ಮಠವನ್ನು ಕಟ್ಟಿಸಿದ್ದರೆ, ಇನ್ನೊಬ್ಬ ಸಹೋದರ ಲಗಳಯ್ಯ ಸ್ವಾಮಿಗಳು ಆಲಮೇಲದ ಕಡಣಿ ಅಗಸಿಯ ಹತ್ತಿರವಿರುವ ಬಡಿಗೇರ ಓಣಿಯಲ್ಲಿ ಮಠ ಮಾಡಿಕೊಂಡಿದ್ದ ಮಾಹಿತಿ ತಿಳಿದು ಬಂತು. ಇನ್ನು ಅಜಾತಸ್ವಾಮಿಗಳು ಜಾತ್ಯಾತೀತ ತತ್ವದವರಾಗಿದ್ದು, ಎಲ್ಲ ಜಾತಿಗಳ ಜನರ ಮನೆಗೂ ಭಿಕ್ಷೆಗೆ ಹೋಗುತ್ತಿದ್ದರಂತೆ. ಒಂದು ದಿನ ಮಾಂಸಾಹಾರಿಯ ಮನೆಗೆ ಭಿಕ್ಷೆ ಬೇಡಲು ಹೋದಾಗ ಅವರು ಮಾಂಸಭಿಕ್ಷೆ ನೀಡಿದರಂತೆ. ಇದರಿಂದ ಶಾಖಾಹಾರಿ ಜನರು ರೊಚ್ಚಿಗೆದ್ದು ಧ್ಯಾನಕ್ಕೆ ಕುಳಿತಿದ್ದ ಅಜಾತಸ್ವಾಮಿಗಳನ್ನು ಮಾಂಸಭಿಕ್ಷೆ ಬೇಡಿರುವುದೇಕೆ? ಎಂದು ಕೇಳಬೇಕೆನ್ನುವಷ್ಟರಲ್ಲಿ ಅವರು ಲಿಂಗೈಕ್ಯರಾಗಿದ್ದರಂತೆ, ಹೀಗೆ ಜನರು ಮಾತನಾಡಿಕೊಳ್ಳುತ್ತಾರೆ.
ಬಸವಂತನ ಕಮಾನುಬಾವಿಯ ದಂಡೆ ಮೇಲಿರುವ ಸೂರ್ಯ ಮತ್ತು ನರಸಿಂಹ ಶಿಲ್ಪಗಳು: ಗ್ರಾಮದ ಹಡಪದರ ಓಣಿಯೆದುರು ಲಾಳಸಂಗಿ-ಶಿವಪುರ ಮುಖ್ಯ ರಸ್ತೆಯಲ್ಲಿ ಬಸವಂತನ ಬಾವಿಯೆಂದು ಹೇಳಲಾಗುವ ಇನ್ನೊಂದು ಕಮಾನುಬಾವಿಯಿದೆ. ಅಜಾತಸ್ವಾಮಿ ಮಠದ ಆವರಣ ದಲ್ಲಿರುವ ಬಾವಿಗಿಂತ ಇದು ದೊಡ್ಡದಾಗಿದೆ. ಬಾವಿಯ ದಕ್ಷಿಣ ದಿಕ್ಕಿನಿಂದ ಮೆಟ್ಟಿಲುಗಳ ಮೂಲಕ ನೀರಿಗೆ ಇಳಿಯಬೇಕಾಗುತ್ತದೆ. ಇದೂ ಸಹ ನಾಡಬಾವಿ ಅಥವಾ ನಡದ ಬಾವಿಯ ಪ್ರಾಕಾರವಾಗಿರುತ್ತದೆ. ಗೋಡೆಗೆ ಬಳಸಿದ ಚೌಕಾಕಾರದ ಕರಿಕಲ್ಲುಗಳ ನಡುವೆ ಗಾರೆ ಬಳಸಲಾಗಿದೆ. ಈ ಹಿಂದೆ ಎರಡು ಕಪಿಲೆ(ಬಾರಿ)ಗಳ ಮೂಲಕ ಬಾವಿಯ ನೀರನ್ನು ಮೇಲೆತ್ತಲಾಗುತ್ತಿತ್ತು.
ಬಾವಿಯನ್ನು ಪ್ರವೇಶಿಸುವಾಗ ನಮ್ಮ ಬಲಭಾಗಕ್ಕೆ ಪೂರ್ವಾಭಿಮುಖವಾಗಿ ಗಣೇಶನ ಗುಡಿಯಿದೆ. ಈ ಗುಡಿಯ ಬಲಗೋಡೆಗೆ ಅಪರೂಪದ ಸೂರ್ಯ ಶಿಲ್ಪವೊಂದನ್ನು ನಿಲ್ಲಿಸಲಾಗಿದೆ. ಇದರಲ್ಲಿ ಸೂರ್ಯನು ಸಮಭಂಗಿಯಲ್ಲಿ ನಿಂತು ಕೈಗಳಲ್ಲಿ ನೀಳವಾದ ತಾವರೆಯ ಮೊಗ್ಗುಗಳನ್ನು ಲಘುವಾಗಿ ಹಿಡಿದಿರುತ್ತಾನೆ. ಸೂರ್ಯಶಿಲ್ಪವು ವಿಜಯ ನಗರೋತ್ತರ ಕಾಲದ್ದೆಂದು ತಿಳಿದುಬರುತ್ತದೆ. ಗಟ್ಟಿಯಾದ ಕರಿಕಲ್ಲಿನಲ್ಲಿ ತುಂಬಾ ಒರಟಾಗಿ ಶಿಲ್ಪಿಸಲ್ಪಟ್ಟ ಸೂರ್ಯ ಬಿಂಬವನ್ನು ಪೂರ್ವಕ್ಕೆ ಮುಖಮಾಡಿ ನಿಲ್ಲಿಸಲಾಗಿದೆ. ಸೂರ್ಯನಿಗೆ ಎರಡೂ ಕಾಲುಗಳಲ್ಲಿ ಕಾಲ್ಕಡಗ, ನಡುಪಟ್ಟಿಯಿಂದ ಇಳಿಬಿದ್ದಿರುವ ಬಟ್ಟೆ, ಎಡಭುಜದಿಂದ ಎದೆಯ ಬಲಕ್ಕೆ ಇಳಿಬಿದ್ದಿರುವ ಯಜ್ಞೋಪವೀತ, ಕರ್ಣಕುಂಡಲ, ಕರಂಡಕಗಳನ್ನು ಕಂಡರಿಸಲಾಗಿದೆ. ಸೂರ್ಯನ ಇಕ್ಕೆಲಗಳಲ್ಲಿ ಉಷಾ-ಪ್ರತ್ಯುಷಾರ ಚಿಕಣಿ ಶಿಲ್ಪಗಳನ್ನು ಮೂಡಿಸಲಾಗಿದೆ8. ಗಣೇಶನ ಗುಡಿಯ ಎಡಗೋಡೆಗೆ ಸಮಭಂಗಿಯಲ್ಲಿ ನಿಂತಿರುವ ನರಸಿಂಹನ ಶಿಲ್ಪವಿದೆ. ನಾಲ್ಕು ಕೈಗಳಿದ್ದು ಒಂದು ಬಲಗೈಯಲ್ಲಿ ಶಂಖ, ಇನ್ನೊಂದು ಬಲಗೈ ಕೆಳಗೆ ಬಿಡಲಾಗಿದೆ. ಒಂದು ಎಡಗೈಯಲ್ಲಿ ಗದೆಯನ್ನು ಕೆಳಮುಖ ಮಾಡಿ ಹಿಡಿದುಕೊಂಡಿದ್ದು, ಇನ್ನೊಂದು ಎಡಗೈಯಲ್ಲಿರುವ ವಸ್ತು ಅಸ್ಪಷ್ಟವಾಗಿದ್ದು ಅದು ತೃಟಿತವಾಗಿದೆ. ಕೊರಳಲ್ಲಿ ಅರ್ಧ ಚಂದ್ರಾಕಾರದ ಆಭರಣವಾದ ಅಡ್ಡಿಗೆ, ಎಡಭುಜದಿಂದ ಹಾದು ಬಲತೋಳಿನ ಕೆಳಗೆ ಇಳಿದಿರುವ ಎರಡೆಳೆಯ ಯಜ್ಞೋಪವೀತ, ನಡುವನ್ನು ಬಿಗಿದು ಮುಂಭಾಗದಲ್ಲಿ ಗಂಟು ಬಿದ್ದಿರುವ ನಡುಬಂಧ, ಇಳಿಬಟ್ಟೆ, ಕೈಕಡಗ ಮತ್ತು ಅಲಂಕಾರಿಕ ಕಾಲ್ಕಡಗಗಳನ್ನು ತೋರಿಸಲಾಗಿದೆ. ಮುಖಲಕ್ಷಣಗಳನ್ನು ಗಮನಿಸಿದಾಗ ನರಸಿಂಹನಂತೆಯೂ, ಆಯುಧಗಳನ್ನು ಪರಿಗಣಿಸಿದಾಗ ವಿಷ್ಣುವಿನಂತೆಯೂ9 ಕಾಣಿಸುವ ಈ ಶಿಲ್ಪವು ಗಟ್ಟಿಯಾದ ಕರಿಕಲ್ಲಿನಲ್ಲಿ ಒರಟಾಗಿ ಕೆತ್ತಲ್ಪಟ್ಟಿದೆ. ಶಿಲ್ಪದ ಎಡಬಲಗಳಲ್ಲಿ ಮನುಷ್ಯರಿಬ್ಬರ ಚಿಕಣಿ ಶಿಲ್ಪಗಳಿರುತ್ತವೆ. ಇದೂ ಕೂಡ ವಿಜಯನಗರೋತ್ತರ ಕಾಲಮಾನದ್ದಾಗಿರುತ್ತದೆ.
ಆರೇರ ಓಣಿಯಲ್ಲಿರುವ ಸಿಂಹಪೀಠ: ಲಾಳಸಂಗಿ ಗ್ರಾಮದ ಆರೇರ ಓಣಿಯಲ್ಲಿ ಉತ್ತರಕ್ಕೆ ಮುಖ ಮಾಡಿರುವ ಸಿಂಹಪೀಠವು 14 ಇಂಚು ಎತ್ತರ 36ಳಿ ಇಂಚು ಉದ್ದವಿದೆ. 16 ಇಂಚು ಅಗಲವಿರುವ ಕರಿಕಲ್ಲು ಚಪ್ಪಡಿಯನ್ನು ಇದಕ್ಕಾಗಿ ಬಳಸಲಾಗಿದೆ. ಪೀಠವನ್ನು ಸರಿಯಾಗಿ ಮೂರು ಭಾಗಗಳನ್ನಾಗಿ ಗುರುತಿಸಿಕೊಂಡು ಮೂರು ಸಿಂಹಗಳನ್ನು ಇದರ ಮೇಲೆ ಕಂಡರಿಸಲಾಗಿದೆ. ಪೀಠದ ಬಲಭಾಗದಲ್ಲಿರುವ ಸಿಂಹವು ತನ್ನ ಮುಂದಿನ ಎಡಗಾಲು ಎತ್ತಿಹಿಡಿದಿದ್ದು ಬಾಲವನ್ನು ಬೆನ್ನಿನ ಮೇಲೆ ತೆಗೆದುಕೊಂಡಿದೆ. ಮುಖವನ್ನು ಎದುರುಗಡೆ ತಿರುಗಿಸಿ ಬಾಯಿ ತೆರೆದು ನಿಂತಿರುತ್ತದೆ. ನಡುವೆಯಿರುವ ಸಿಂಹವು ತನ್ನ ಹಿಂಗಾಲುಗಳ ಮೇಲೆ ಕುಳಿತು ಮುಂಗಾಲುಗಳ ಮೇಲೂ ಭಾರ ಹಾಕಿದೆ. ಕಣ್ಣರಳಿಸಿ, ಬಾಯ್ತೆರೆದು ಕುಳಿತಿದೆ. ಇನ್ನು ಪೀಠದ ಎಡಭಾಗದಲ್ಲಿರುವ ಸಿಂಹವು ಮುಂದಿನ ಬಲಗಾಲನ್ನು ಮೇಲೆ ಎತ್ತಿದ್ದು, ಬಾಲವನ್ನು ಬೆನ್ನಿನ ಮೇಲೆ ತೆಗೆದುಕೊಂಡಿದೆ. ಶಿಲ್ಪಿಯು ಸಿಂಹಪೀಠದ ಮೇಲೆ ಹಾಗೂ ಕೆಳಗೆ ಅಂಚಿನಲ್ಲಿ ಪಟ್ಟಿಕೆ ಹಾಕಿಕೊಂಡಿರುತ್ತಾನೆ. ಈ ಸಿಂಹಪೀಠದ ನೆತ್ತಿಯ ಮೇಲೆ 5x5 ಇಂಚು ಅಳತೆಯ ಚೌಕಾದ ರಂಧ್ರವನ್ನು ಕೊರೆಯಲಾಗಿದೆ. ಪೀಠಕ್ಕೆ ಹೀಗೆ ರಂಧ್ರ ಕೊರೆದು ಮೂರ್ತಿಯನ್ನು ಪೀಠದ ಮೇಲೆ ಸ್ಥಿರೀಕರಿಸುತ್ತಿದ್ದ ಮಾಹಿತಿ ಇದರಿಂದ ತಿಳಿದುಬರುತ್ತದೆ. ಸಿಂಹಪೀಠದ ಹತ್ತಿರದಲ್ಲಿ ಬಿದ್ದಿರುವ ತೃಟಿತವಾದ ಏಳುಹೆಡೆಗಳ ಕಿರೀಟದಂತಹ ಭಾಗ ಹಾಗೂ ಸಿಂಹಪೀಠ - ಈ ಎರಡನ್ನೂ ಪರಾಮರ್ಶಿಸಿದಾಗ ಪಾರ್ಶ್ವನಾಥ ತೀರ್ಥಂಕರ ಹಾಗೂ ಜಿನಬಸದಿಯೊಂದು ಲಾಳಸಂಗಿಯಲ್ಲಿದ್ದಿತ್ತೆಂದು ತಿಳಿದುಬರುತ್ತದೆ. ಆ ಜಿನಾಲಯವು ಯಾವುದೋ ಒಂದು ಕಾಲಘಟ್ಟದಲ್ಲಿ ಸಮೂಲನಾಶವಾಗಿದೆ. ಮಸೀದಿಯ ಇಂದಿನ ಜಾಗವು ಆಳೆತ್ತರದ ದಿಬ್ಬದ ಮೇಲಿದೆ. ಅಲ್ಲಿ ಜಿನಾಲಯದ ಕುರುಹುಗಳನ್ನು ಇಂದಿಗೂ ಮಸೀದಿಯ ಮೆಟ್ಟಿಲುಗಳಿಗೆ ಹಾಕಿದ ಕಲ್ಲಿನ ಕಂಬ, ಮತ್ತಿತರ ತೃಟಿತ ಶಿಲ್ಪಗಳಲ್ಲಿ ನೋಡಬಹುದಾಗಿದೆ. ಅಂದರೆ ವಿಜಾಪುರದ ಆದಿಲ್‍ಶಾಹಿ, ಹೈದ್ರಾಬಾದಿನ ನಿಜಾಮರ ದಾಳಿಗೆ ಸಿಲುಕಿ ನಲುಗಿದ ಸ್ಥಳ ಇದಾಗಿದೆ.
ಲಾಳಸಂಗಿ ಗ್ರಾಮವೂ ಕೂಡ ಒಂದು ಜೈನನೆಲೆಯಾಗಿತ್ತೆಂದು ನಾವು ಪರಿಗಣಿಸಲೇಬೇಕಾಗುತ್ತದೆ. ತರ್ದವಾಡಿ ನಾಡಿನ ಶಾಸನಗಳಲ್ಲಿ ಕೆಲ ಜಿನಬಸದಿಗಳನ್ನು ಕಟ್ಟಿಸಿದ ಮತ್ತು ಜಿನಪ್ರತಿಮೆಗಳನ್ನು ಮಾಡಿಸಿದ ಉಲ್ಲೇಖಗಳು ಬಂದಿವೆ. ಅವು ಅಂದಿನ ಜೈನಸಮಾಜದ ಮೇಲೆ ಹೆಚ್ಚಿನ ಬೆಳಕನ್ನು ಬೀರುತ್ತಿದ್ದು, ಆ ಜನರ ಜಿನಭಕ್ತಿ, ನಿಷ್ಠೆ, ಶ್ರದ್ಧೆಗಳ ಸಂಕೇತವಾಗಿವೆ. ಅಗರಖೇಡದಲ್ಲಿ ಪಾರಿಸ್ವರ ದೇವರ ಉಲ್ಲೇಖ, ರೂಗಿ ಶಾಸನದ ಸೀಮಾನಿರ್ದೇಶನದಲ್ಲಿ ಬರುವ ಬಸದಿಯ ಉಲ್ಲೇಖ, ಸಿಂದಗಿ ಶಾಸನದಲ್ಲಿ ಬರುವ ಬಸದಿಯ ಗಡಿಂಬದ ಕೋಲ ಪ್ರಸ್ತಾಪ - ಇವೆಲ್ಲವೂ ಅಲ್ಲಿ ಬಸದಿಗಳಿದ್ದುದನ್ನು ಸೂಚಿಸುತ್ತವೆ10. ಲಾಳಸಂಗಿಯಲ್ಲಿ ಪಾರ್ಶ್ವನಾಥ ತೀರ್ಥಂಕರನ ಪೀಠ, ಪಾರ್ಶ್ವನಾಥ ತೀರ್ಥಂಕರನ ತಲೆಯ ಮೇಲಿರುವ ಏಳು ಹೆಡೆಗಳ ಸರ್ಪದ ತೃಟಿತಶಿಲ್ಪ & ಮಸೀದಿಯ ಆವರಣದಲ್ಲಿರುವ ಬಸದಿಯ ಕಂಬಗಳು ಜೈನಾವಶೇಷಗಳೆ£ಸುತ್ತವೆ. ಇಂಥ ಜಿನಾಲಯ-ಬಸದಿಗಳು ಮೊದ ಮೊದಲು ದೇಶ ಪರ್ಯಟನದಲ್ಲಿದ್ದ ಜಿನಮುನಿಗಳ ತಾತ್ಕಾಲಿಕ ವಾಸಸ್ಥಾನಗಳಾಗಿದ್ದು, ನಂತರ ಅವರ ಸದಾ ನೆಲೆಸುವ ತಾಣಗಳಾದಂತೆ ತೋರುತ್ತವೆ. ಸದ್ಯ ಲಾಳಸಂಗಿಯಲ್ಲಿ ಜೈನ ಕುಟುಂಬಗಳಿರುವುದಿಲ್ಲ. ಬದಲಾಗಿ ಮುಸ್ಲಿಂ ಕುಟುಂಬಗಳಲ್ಲಿ ಜೈನಮ್ಮ, ಜೈನುಲ್ ಎಂಬ ಹೆಸರಿನವರಿದ್ದಾರೆ. ಸೂರ್ಯೋದಯದೊಂದಿಗೆ ತಲೆ ಮೇಲೆ ಎಣ್ಣೆಬುಟ್ಟಿ ಹೊತ್ತು ಸುತ್ತಲಿನ ಊರುಗಳಿಗೆ ಹಲ್ಲುಪುಡಿ, ಕುಂಕುಮ, ಎಲೆ-ಅಡಿಕೆ, ನಿಂಬೆಹಣ್ಣು ಮಾರುತ್ತಿದ್ದ ಲಾಳಸಂಗಿಯ ಜೈನಮ್ಮ (ನನ್ನ ತಾಯಿಗೆ ಚಿರಪರಿಚಯದವರು) ಇತ್ತೀಚೆಗೆ ತೀರಿಕೊಂಡರು.
ಪೂರ್ಣಕುಂಭಗಳ ಶಿಲ್ಪ: ದೇವಾಲಯಗಳ ಕಕ್ಷಾಸನದಲ್ಲಿ ಕಂಡುಬರುವ ಪೂರ್ಣಕುಂಭಗಳ ಶಿಲ್ಪವು ಲಾಳಸಂಗಿ ಗ್ರಾಮದ ಬಕ್ಕಯ್ಯನ ಮಠದ ಹಿಂಭಾಗದಲ್ಲಿರುವ ಶಾಂತಪ್ಪ ಅವ್ವಪ್ಪ ಪಾಟೀಲ ಅವರ ತೋಟದ ಬಾವಿಯ ದಂಡೆ ಮೇಲಿದೆ. 4 ಇಂಚು ದಪ್ಪ, 20 ಇಂಚು ಎತ್ತರ ಹಾಗೂ 36 ಇಂಚು ಉದ್ದನೆಯ ಕಪ್ಪುಶಿಲಾ (ಃಟಚಿಛಿಞ ಖಿಡಿಚಿಠಿ) ಫಲಕದಲ್ಲಿ ಎರಡು ಪೂರ್ಣಕುಂಭಗಳನ್ನು ಕಂಡರಿಸಿದ್ದು, ಮೂರನೆಯ ಪೂರ್ಣಕುಂಭ ತೃಟಿತವಾಗಿರುತ್ತದೆ. ಶಿಲಾಫಲಕದ ಅಂಚಿನಲ್ಲಿ ಪಟ್ಟಿಕೆಯನ್ನು ಹಾಕಿಕೊಂಡು ಪ್ರತಿ ಪೂರ್ಣಕುಂಭದ ನಂತರ ಒಂದೊಂದು ಕಂಬ ಮಾದರಿಯನ್ನು ಮಾಡಲಾಗಿದೆ. ಕಂಬ ಮಾದರಿಯಲ್ಲಿ ಪಿಂಡಿ, ಶಲಾಕ, ಕಂಠ, ಮುಚ್ಚಳ, ಕಂಠ, ಬೋದಿಗೆಗಳನ್ನು ತೋರಿಸಲಾಗಿದೆ. ಪೂರ್ಣಕುಂಭದ ಅಡಿಯಲ್ಲಿ ಸಿಂಬಿ (ನಿಲುಗಡೆ) ಇದ್ದು, ಕುಂಭದ ಮಧ್ಯದಲ್ಲಿ ಒಂದು ಸುತ್ತು ಅಲಂಕಾರ ಪಟ್ಟಿಕೆ ಹಾಕಿ ಕಟ್ಟಲಾಗಿದೆ. ಕುಂಭಗಳ ಕಂಠಕ್ಕೆ ಮೇಲೆ ಎರಡೆರಡು ಎಲೆಗಳನ್ನು ಹಾಕಿ, ಎಲೆ ಮೇಲೆ ಫಲವನ್ನಿರಿಸಲಾಗಿದೆ. ಇಂತಹ ಪೂರ್ಣಕುಂಭಗಳು ಐಹೊಳೆಯ ಲಾಡಖಾನ್ ದೇವಾಲಯದ ಕಕ್ಷಾಸನದಲ್ಲಿದ್ದು, ಇವು 8-9ನೇ ಶತಮಾನದಲ್ಲಿ ಯಥೇಚ್ಛವಾಗಿ ಬಳಸಲ್ಪಟ್ಟಿರುತ್ತವೆ11. ಹಾಗಾಗಿ ಆ ಕಾಲಮಾನದ ವಾಸ್ತುಲಕ್ಷಣಗಳನ್ನೊಳಗೊಂಡ ಆಲಯವೊಂದು ಲಾಳಸಂಗಿಯಲ್ಲಿ ಇತ್ತೆಂಬುದು ಸ್ಪಷ್ಠವಾಗುತ್ತದೆ.
ಲಾಳಸಂಗಿ ಊರಿನ ಸುತ್ತಲೂ ಮಣ್ಣಿನ ಕೋಟೆ ಗೋಡೆಯಿತ್ತು. ಎರಡು ಪ್ರವೇಶ ದ್ವಾರ (ಅಗಸಿಬಾಗಿಲು)ಗಳು ಇದ್ದವು. ಗ್ರಾಮದಿಂದ ಉತ್ತರ ದಿಕ್ಕಿಗೆ ಬಸವಂತನ ಬಾವಿಯ ಹತ್ತಿರ ಒಂದು ಅಗಸಿ ಬಾಗಿಲು ಇತ್ತು. ಅದನ್ನು ಕೆಡವಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಕಟ್ಟಿಸಲಾಯಿತೆಂದು ಹೇಳಲಾಗುತ್ತದೆ. ಇನ್ನೊಂದು ಅಗಸಿ ಬಾಗಿಲು ಈಗಿನ ಹನುಮಂತದೇವರ ಗುಡಿಯ ಮುಂಭಾಗದಲ್ಲಿ ಅಲ್ಪಸ್ವಲ್ಪ ದುರಸ್ತಿಹೊಂದಿ ತನ್ನ ರೂಪವನ್ನು ಬದಲಿಸಿಕೊಂಡಿದೆ. ಮಣ್ಣಿನ ಗೋಡೆಗಳ ಅರಮನೆಯ ಅವಶೇಷಗಳೂ ಇದ್ದವು. ಆದಿಲ್‍ಶಾಹಿ ಕಾಲದಲ್ಲಿ ಸಂಸ್ಥಾನಿಕ ಲಾಲ್‍ಸಿಂಗ್‍ನೆಂಬ ಸರ್ದಾರನು ಇಲ್ಲಿ ಆಳ್ವಿಕೆ ನಡೆಸಿ, ನೀರಿಗಾಗಿ ಅಸಂಖ್ಯಾತ ಬಾವಿಗಳನ್ನು ಕೊರೆಸಿ ಕಲ್ಲುಗೋಡೆ ಕಟ್ಟಿಸಿದ್ದನು. ಗ್ರಾಮದಲ್ಲಿ ಮನೆಗಳ ಪಾಯ ತೋಡುವಾಗ ಶಾಹಿ ಕಾಲದ ನಾಣ್ಯಗಳು, ಪೆÇೀರ್ಚುಗೀಸರ ನಾಣ್ಯಗಳು ಈ ಹಿಂದೆ ಸಿಕ್ಕಿವೆ. ಅಲ್ಲದೆ ಗ್ರಾಮದ ಯಾವುದೇ ಭಾಗದಲ್ಲಿ ಅಗೆದರೂ ಒಂದು ಕಡೆ ಒಂದು ಅಡಿ, ಕೆಲವೆಡೆ ಒಂದೂವರೆ ಅಡಿ ಆಳದ ಮಣ್ಣಿನಲ್ಲಿ ನಾಲ್ಕು ಇಂಚಿನಷ್ಟು ಬೂದಿ ಪದರಿನ ಸ್ತರವೊಂದು  ಕಂಡುಬರುತ್ತದೆ13.
8ನೇ ಶತಮಾನದ ಪೂರ್ಣಕುಂಭ ಶಿಲ್ಪ, ತರ್ದವಾಡಿ ನಾಡಾಳಿತ 9, 10ನೇ ಶತಮಾನದ ಪಾರ್ಶ್ವನಾಥ ತೀರ್ಥಂಕರನ ಸಿಂಹಪೀಠ, ತೃಟಿತವಾದ ಏಳು ಹೆಡೆಗಳ ಸರ್ಪ ಮತ್ತು ಬಸದಿಯ ಕಂಬಗಳು, ಕ್ರಿ.ಶ. 1167-76ರ ಕಲಚುರಿ ಅರಸರ ರಾಣಯರು ಬಿಟ್ಟ ಧರ್ಮ-ಇಟ್ಟ ಅರವೆಗೆ ಕೊಟ್ಟ ಕೆಯಿ ಮನೆ ಎಂಬ ಶಾಸನದ ಸಾಲು, 13ನೇ ಶತಮಾನದ ಪೂರ್ವಾರ್ಧದಲ್ಲಿ ಶಾಸನೋಕ್ತ ಲಾಳಸಂಗವಿಗೆ ಗ್ರಾಮನಾಮ ಹಾಗೂ ಸುಮಾರು ಕ್ರಿ.ಶ. 1864-65ರ ಬಕ್ಕಯ್ಯನ ಮಠದ ಶಾಸನ, ಕಮಾನು ಬಾವಿಗಳು-ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಲಾಳಸಂಗಿ ಗ್ರಾಮವು ಸುಮಾರು 8ನೇ ಶತಮಾನದಿಂದಲೂ ಇತಿಹಾಸದಲ್ಲಿ ಗುರುತಿಸಲ್ಪಡುವ ಸ್ಥಳವಾಗಿದೆ.
[ಕ್ಷೇತ್ರಕಾರ್ಯದಲ್ಲಿ ನೆರವಾದ ವಿದ್ಯಾರ್ಥಿ ರವಿ ಆಳೂರ, ಶಿಲ್ಪಗಳ ಭಾವಚಿತ್ರ ಒದಗಿಸಿದ ಮಹಂತೇಶ್ ಹಿಕ್ಕನಗುತ್ತಿರವರ ಸಹಕಾರ ಸ್ಮರಿಸುತ್ತ, ಅನುಭವ ಹಂಚಿಕೊಂಡ ತೇಜಸ್ವಿ ಕಲ್ಲೂರ ಗುರುಗಳಿಗೆ, ಶಿಕ್ಷಕ ವಿ.ಬಿ. ಭೋಗುಂಡಿಯವರಿಗೆ ಧನ್ಯವಾದಗಳು.]

ಆಧಾರಸೂಚಿ
1. ಇತಿಹಾಸ ದರ್ಶನ, ಸಂ.16, ಕರ್ನಾಟಕ ಇತಿಹಾಸ ಅಕಾಡೆಮಿ (ರಿ) ಬೆಂಗಳೂರು, 2001, ಪುಟ 29-30.
2. ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ-10, ಬಿಜಾಪುರ ಜಿಲ್ಲೆ, ಶಾಸನ ಸಂಖ್ಯೆ-77, ಕನ್ನಡ ವಿ.ವಿ.ಹಂಪಿ, 2011, ಪುಟ 227-228.
3. ಇತಿಹಾಸ ದರ್ಶನ, ಸಂ.17, ಕರ್ನಾಟಕ ಇತಿಹಾಸ ಅಕಾಡೆಮಿ (ರಿ) ಬೆಂಗಳೂರು, 2001, ಪುಟ 69-70.
4. ಡಾ. ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಪ್ನ ಬುಕ್ ಹೌಸ್, ಬೆಂಗಳೂರು 2011, ಪುಟ 211.
5. ಡಾ. ಕೊಪ್ಪಾ ಎಸ್.ಕೆ., ತರ್ದವಾಡಿ ನಾಡು - ಒಂದು ಅಧ್ಯಯನ, ಪ್ರತಿಭಾ ಪ್ರಕಾಶನ ಇಂಡಿ, 1990, ಪುಟ 36.
6. ವಿನೋದಾ ಪಾಟೀಲ., ಕರ್ನಾಟಕದ ಪ್ರಾಚೀನ ಬಾವಿಗಳು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು-2006, ಪುಟ-23.
7. ಂSI ಗಿoಟ–37, ಃiರಿಚಿಠಿuಡಿ ಚಿಟಿಜ Iಣs ಂಡಿಛಿhiಣeಛಿಣuಡಿಚಿಟ ಖemಚಿiಟಿs, ಖಿoಠಿiಛಿ: ಖಿhe Wಚಿಣeಡಿ Woಡಿಞs oಜಿ ಣhe ಅiಣಥಿ, 1976, Pಚಿge 120, 121.
8. ಪೂಜ್ಯ ಗುರುಗಳಾದ ಡಾ. ಅ. ಸುಂದರ ಅವರು ಸೂರ್ಯಶಿಲ್ಪದ ಇಕ್ಕೆಲಗಳಲ್ಲಿ ಕಂಡರಿಸಿದ್ದ ಅಸ್ಪಷ್ಟ ಚಿಕಣಿ ಶಿಲ್ಪಗಳ ಮಾಹಿತಿ ನೀಡಿದರು.
9. ಗುರುಗಳಾದ ಡಾ. ರು.ಮ. ಷಡಕ್ಷರಯ್ಯನವರು ಶಂಖ, ಚಕ್ರ, ಗದೆಯಿರುವುದರಿಂದ ಈ ಶಿಲ್ಪ ವಿಷ್ಣುವಿನದ್ದಾಗಿರಬಹುದೆಂದು ಸೂಚಿಸಿದ್ದಾರೆ.
10. ಸೌ.ಇ.ಇ-20, 215 (ಇಂಡಿ ತಾ), ಕ್ರಿ.ಶ. 1248, 45 (ಇಂಡಿ ತಾ) ಕ್ರಿ.ಶ. 1071, 80 (ಸಿಂದಗಿ ತಾ) ಕ್ರಿ.ಶ. 1120.
11. ಪ್ರಬಂಧ ಮಂಡನೆ ಸಂದರ್ಭದಲ್ಲಿ ಗುರುಗಳಾದ ಡಾ. ಅ.ಸುಂದರ ಅವರ ಮಾರ್ಗದರ್ಶನ.
12. ಈ ಪ್ಯಾರಾದಲ್ಲಿ ನಮೂದಿಸಿದ ಎಲ್ಲ ಪುರಾತತ್ವದ ಅಂಶಗಳನ್ನು ತಾವು ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾಗ ಸ್ವಂತ ಅನುಭವಗಳಿಂದ ಸ್ಥಳೀಯ ಜ್ಞಾನವೃದ್ದರಾದ ಶ್ರೀ ತೇಜಸ್ವಿ ಕಲ್ಲೂರ ಅವರು ವಿವರಿಸಿದ್ದಾರೆ.

 ಆಂಗ್ಲಭಾಷಾ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಅಗರ, ಸರ್ಜಾಪುರ ರಸ್ತೆ, ಬೆಂಗಳೂರು-560102.

No comments:

Post a Comment