Friday, January 23, 2015

ಸೂರನಹಳ್ಳಿಯ ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳು



ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿಯ ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳು
ಬಿ. ಪರಮೇಶ
ಗಂಡುಮೆಟ್ಟಿನ ನೆಲ ಪ್ರಾಗೈತಿಹಾಸದ ನೆಲೆಯಾದ ಚಿತ್ರದುರ್ಗ ಜಿಲ್ಲೆ ಆಂಧ್ರ ಮತ್ತು ಕರ್ನಾಟಕ ಗಡಿನಾಡಿನ ಜಿಲ್ಲೆಯಾಗಿದ್ದು ಇದೇ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಪರಶುರಾಮಪುರ ಹೋಬಳಿ ಗ್ರಾಮವೆ ಸೂರನಹಳ್ಳಿ. ಇದು ಚಳ್ಳಕೆರೆಯಿಂದ ದೊಡ್ಡೇರಿ ಪುರ್ಲಳ್ಳಿ ಮಾರ್ಗವಾಗಿ ಇಪ್ಪತ್ತನಾಲ್ಕು ಕಿ.ಮೀ. ದೂರದಲ್ಲಿದೆ. ಗ್ರಾಮದ ಉತ್ತರ ಮತ್ತು ದಕ್ಷಿಣಕ್ಕೆ ಪುರ್ಲಳ್ಳಿ ಮತ್ತು ಒಡೇರಳ್ಳಿ ಪೂರ್ವಕ್ಕೆ ಚೌಳೂರು ಪಶ್ಚಿಮಕ್ಕೆ ದೇವರ ಮರಿಕುಂಟೆ ಇದೆ. ಯಾವುದೇ ಬೆಟ್ಟ ಗುಡ್ಡಗಳಿಲ್ಲದೆ ಚಿಕ್ಕ ಚಿಕ್ಕ ಕಣ ಶಿಲೆಯ ಬೆಟ್ಟಗಳಿವೆ. ವೇದಾವತಿ ನದಿಯ ಎಡದಂಡೆ ಮೇಲಿರುವ ಗ್ರಾಮವಾಗಿದೆ. ಈ ಗ್ರಾಮವು ಇತಿಹಾಸ ಪ್ರಸಿದ್ಧ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಯಿಂದ ಸುಮಾರು 68 ಕಿ.ಮೀ. ದೂರದಲ್ಲಿದೆ. ಸೂರನಹಳ್ಳಿ ಸೂರಪ್ಪನಾಯಕನೆಂಬುವವನು ಈ ಭಾಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಹಾಗಾಗಿ ಸೂರನಹಳ್ಳಿ ಎಂದು ಹೆಸರಾಯಿತು.
ಸೂರನಹಳ್ಳಿಯಲ್ಲಿ ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಕೆಲವು ವಿಶಿಷ್ಟ ಹಾಗೂ ಮಹತ್ವವವಾದ ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳನ್ನು ನೋಡಬಹುದು. ನೊಳಂಬ, ಪಲ್ಲವ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ವಿಜಯನಗರ ಹಾಗೂ ಚಿತ್ರದುರ್ಗ ಪಾಳೆಗಾರರ ಕಾಲಕ್ಕೆ ಸೇರಿದವುಗಳಾಗಿವೆ. ಸೂರನಹಳ್ಳಿಯಲ್ಲಿ ದೊರೆತಿರುವ ವೀರಗಲ್ಲುಗಳು ಹನ್ನೊಂದನೆ ಶತಮಾನಕ್ಕೆ ಸೇರಿದವಾಗಿವೆ. ಇವು ಊರಿನ ಉತ್ತರಕ್ಕೆ ವಿರುಪಾಕ್ಷಪ್ಪನವರ ಹೊಲದಲ್ಲಿ ನಾಲ್ಕು ವೀರಗಲ್ಲುಗಳಿವೆ.
ಒಂದನೆ ವೀರಗಲ್ಲು
ಈ ವೀರಗಲ್ಲು ಮಣ್ಣಿನಲ್ಲಿ ಸಿಲುಕಿಕೊಂಡಿದ್ದು ತುರುಗಳ್ಳರ ಬಗ್ಗೆ ಮಾಹಿತಿ ವೀರಗಲ್ಲಾಗಿದೆ. ಈ ವೀರಗಲ್ಲು ಮೂರು ಹಂತಗಳನ್ನು ಹೊಂದಿದ್ದು, ನಾಲ್ಕುವರೆ ಅಡಿ ಉದ್ದ ಎರಡುವರೆ ಅಡಿ ಅಗಲವಿದೆ. ಮೂರು ಹಂತಗಳಲ್ಲಿ ಶಿಲ್ಪಗಳನ್ನು ಬಿಡಿಸಲಾಗಿದೆ. ಒಂದನೆ ಹಂತದಲ್ಲಿ ಬಿಲ್ಲುಧಾರಿಯಾದ ವೀರನು ಬಲಗೈಯಲ್ಲಿ ಬಿಲ್ಲನ್ನು ಹಿಡಿದಿದ್ದು ಎಡಗೈಯನ್ನು ಮೇಲಕ್ಕೆತ್ತಿದ್ದಾನೆ. ಎಡಗೈ ಕೆಳಗಡೆ ಎರಡು ಗೋಪುರಗಳನ್ನು ಬಿಡಿಸಲಾಗಿದೆ. ವೀರರ ತಲೆಯ ಮೇಲೆ ತುರುಬು ಇದೆ. ಕೊರಳಲ್ಲಿ ಹಾರ ಸೊಂಟದಲ್ಲಿ ಪಟ್ಟಿ ಎರಡು ತೊಡೆಗಳ ಮಧ್ಯೆ ಇಳಿಬಿದ್ದಿರುವ ವಸ್ತ್ರವಿದೆ. ವೀರನ ಬಲಗಾಲಿನ ಕೆಳಗೆ ಶತ್ರು ಸತ್ತುಬಿದ್ದಿರುವ ಶಿಲ್ಪವಿದೆ. ಈ ಹಂತವಾದ ಮೇಲೆ ಶಾಸನದ ಸಾಲು ಇದೆ. ಎರಡನೆ ಹಂತದಲ್ಲಿ ವೀರ ಹೋರಾಡಿ ಮರಣ ಹೊಂದಿದ್ದ ವೀರನನ್ನು ಇಬ್ಬರು ಅಪ್ಸರೆಯರು ವೀರನ ಎರಡು ಕೈಗಳನ್ನು ತನ್ನ ಭುಜಗಳ ಮೇಲೆ ಹೊತ್ತು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೇವಕನ್ಯೆಯ ಚಿತ್ರಗಳಿವೆ. ಮೂರನೆ ಹಂತದಲ್ಲಿ ವೀರ ಪೀಠದ ಮೇಲೆ ಕುಳಿತಿರುವ ಶಿಲ್ಪವಿದೆ. ವೀರನ ಎರಡೂ ಕಡೆ ದೇವಕನ್ಯೆಯರು ಸೊಂಟವನ್ನು ಭಾಗಿಸಿರುವಂತೆ ನಿಂತಿದ್ದಾರೆ.
ಎರಡನೆ ವೀರಗಲ್ಲು
ಈ ವೀರಗಲ್ಲು ನೈಸ್‍ಕಲ್ಲಿನಲ್ಲಿ ಈ ಶಿಲ್ಪವನ್ನು ಬಿಡಿಸಲಾಗಿದೆ. ಈ ವೀರಗಲ್ಲು ಮೂರು ಹಂತಗಳನ್ನು ಹೊಂದಿದೆ. ಈ ವೀರಗಲ್ಲು ಮೂರುವರೆ ಅಡಿ ಉದ್ದ ಒಂದುವರೆ ಅಡಿ ಅಗಲ 53 ಸೆ.ಮೀ. ಸುತ್ತಳತೆ ಇದೆ. ಮೂರನೆ ಹಂತದ ಭಾಗ ಮುರಿದುಹೋಗಿದೆ ಹಾಗು ಎಡಭಾಗದ ಅಂಚಿನಲ್ಲಿ ಶಾಸನದ ಸಾಲು ಇದೆ. ಮೊದಲನೆ ಹಂತದಲ್ಲಿ ವೀರನು ತನ್ನ ಎಡಕೈಯಲ್ಲಿ ಬಿಲ್ಲನ್ನು ಹಿಡಿದು ಹೋರಾಡುತ್ತಿರುವ ಶಿಲ್ಪವಿದೆ. ಬಲಗಾಲನ್ನು ಹಿಂದಕ್ಕೆ ಇಟ್ಟು ಮಡಿಚಿರುವಂತೆ ಪಾದದ ಕೆಳಗೆ ಶತ್ರುವನ್ನು ತುಳಿದು ಸಾಯಿಸುತ್ತಿರುವ ಶಿಲ್ಪವಿದೆ. ವೀರನ ಕೆಳಗಡೆ ಮೂರು ಕರುಗಳನ್ನು ಚಿತ್ರಿಸಲಾಗಿದೆ. ದೇವಲೋಕಕ್ಕೆ ಕರೆದೊಯ್ಯು ತ್ತಿರುವ ಚಿತ್ರವಿದೆ. ಮೂರನೆ ಹಂತದಲ್ಲಿ ವೀರನು ದೇವಲೋಕದಲ್ಲಿ ಪೀಠದ ಮೇಲೆ ಕುಳಿತಿರುವ ಚಿತ್ರದಲ್ಲಿದೆ. ವೀರನ ಎರಡು ಕಡೆ ದೇವಕನ್ಯೆಯರು ಸೊಂಟವನ್ನು ಬಾಗಿಸಿರುವಂತೆ ನಿಂತಿದ್ದಾರೆ. ಬಲಭಾಗದ ಸ್ತ್ರೀಯ ಶಿಲ್ಪ ಹಾಳಾಗಿದೆ. ವೀರನು ದೇವಲೋಕವನ್ನು ಸೇರಿದ್ದಾನೆ ಎಂಬುದನ್ನು ತಿಳಿಯಬಹುದು. ಅಂಚಿನಲ್ಲಿ ಶಾಸನದ ಸಾಲು ಇದೆ. ಅಸ್ಪಷ್ಟದಿಂದ ಕೂಡಿದೆ.
ಮೂರನೆ ವೀರಗಲ್ಲು
ಈ ವೀರಗಲ್ಲು ಬಿಳಿ ಕಲ್ಲಿನಲ್ಲಿ ಬಿಡಿಸಲಾಗಿದೆ ಇದು ಮೂರು ಹಂತಗಳನ್ನು ಹೊಂದಿದ್ದು, ಮೂರುವರೆ ಅಡಿ ಅಗಲ ಮೂರುವರೆ ಅಡಿ ಉದ್ದ ಎರಡು ಅಡಿ ಅಗಲ ಹೊಂದಿದೆ 52 ಸೆ.ಮೀ. ಸುತ್ತಳತೆ ಇದೆ. ಈ ವೀರಗಲ್ಲಿನ ಬಲಭಾಗದಲ್ಲಿ ಶಾಸನದ ಸಾಲು ಇದೆ. ಅದು ``ಳುಗುರಾವಳ್ಳಿ ಗೋಳು ಗೊರಾರೊಲ್ಲಿ’’ ಎಂದು ಶಾಸನದ ಪಾಠ ಇದೆ. ಸು. ಹನ್ನೊಂದನೆ ಶತಮಾನಕ್ಕೆ ಹೋಲುತ್ತವೆ. ಮೊದಲನೆ ಹಂತದಲ್ಲಿ ವೀರನು ಬಲಗೈಯಲ್ಲಿ ಸುರಿಗೆ ಹಿಡಿದಿರುವಂತೆ ಹಾಗೂ ಎಡಗೈಯಲ್ಲಿ ಶತ್ರುವನ್ನು ಹಿಡಿದು ಕತ್ತನ್ನು ಹಿಚುಕಿ ಹೋರಾಡುವ ಶಿಲ್ಪವನ್ನು ವೈರಿತಲೆಯನ್ನು ಹಿಂದಕ್ಕೆ ನೋಡುವಂತೆ ವೀರನಿಗೆ ಹೆದರಿ ಬಾಗಿರುವ ಭಂಗಿಯಲ್ಲಿ ತನ್ನ ಎರಡು ಕೈಗಳನ್ನು ಬಾಗಿರುವಂತೆ ಶತ್ರುವಿನ ಬಲಗೈಯಲ್ಲಿ ಖಡ್ಗವನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ವೀರನ ಕೊರಳಲ್ಲಿ ಹಾರ ಸೊಂಟಪಟ್ಟಿ ಇರುವ ವಸ್ತ್ರವನ್ನು ಮೊಣಕಾಲಿನ ಭಾಗದವರೆಗೂ ಧರಿಸಿದ್ದಾನೆ. ಬಲಭಾಗದಲ್ಲಿ ತುರುಗಳನ್ನು ಚಿತ್ರಿಸಲಾಗಿದೆ. ಇದೂ ತುರುಗೋಳ್ ವೀರಗಲ್ಲಾಗಿದೆ. ಎರಡನೆ ಹಂತದಲ್ಲಿ ಹೋರಾಡಿದ ವೀರನನ್ನು ದೇವಕನ್ಯೆಯರು ದೇವಲೋಕಕ್ಕೆ ಕೊಂಡೊಯ್ಯುವ ಶಿಲ್ಪಗಳನ್ನು ಬಿಡಿಸಲಾಗಿದೆ. ವೀರನ ಎರಡೂ ಕೈಗಳನ್ನು ಸ್ತ್ರೀಯರು ತಮ್ಮ ಭುಜಗಳ ಮೇಲೆ ಹೊತ್ತು ಕರೆದೊಯ್ಯುತ್ತಿರುವ ಶಿಲ್ಪವಿದೆ. ಮೂರನೆ ಹಂತದಲ್ಲಿ ವೀರನು ಸ್ವರ್ಗಲೋಕದಲ್ಲಿ ಪೀಠದ ಮೇಲೆ ಕುಳಿತಿರುವ ಶಿಲ್ಪವಿದೆ. ವೀರನ ಎರಡೂ ಕಡೆ ದೇವಕನ್ಯೆಯರು ಸೊಂಟವನ್ನು ಭಾಗಿಸಿರುವಂತೆ ನಿಂತಿದ್ದಾರೆ. ವೀರನು ಸ್ವರ್ಗವನ್ನು ಸೇರಿದ್ದಾನೆಂಬುದನ್ನು ಈ ರಚನೆಗಳಿಂದ ತಿಳಿಯಬಹುದು.
ನಾಲ್ಕನೆ ವೀರಗಲ್ಲು
ಈ ವೀರಗಲ್ಲು ಸೀಣಿಕಲ್ಲಿನಲ್ಲಿ ಕೊರೆಯಲಾಗಿದೆ. ಈ ವೀರಗಲ್ಲು ಒಂದೇ ಹಂತದಲ್ಲಿದೆ. ಮೂರುವರೆ ಅಡಿ ಎತ್ತರ ಮೂರು ಅಡಿ ಅಗಲವಿದೆ, 87 ಸೆ.ಮೀ. ಸುತ್ತಳತೆ ಇದೆ. ವೀರನು ಹುಲಿಯನ್ನು ಕೊಲ್ಲುತ್ತಿರುವ ಶಿಲ್ಪವಿದೆ. ಹುಲಿಯನ್ನು ಎಡಗೈಯಲ್ಲಿ ಹುಲಿಯ ಮುಂಗಾಲು ಮತ್ತು ಬಾಯಿಯನ್ನು ಹಿಡಿದಿರುವಂತೆ ವೀರನ ಎಡಪಾದಕ್ಕೆ ಹುಲಿ ತನ್ನ ಹಿಂಗಾಲುಗಳ ಉಗುರುಗಳಿಂದ ಹೊದೆಯುವಂತೆ ಚಿತ್ರವಿದೆ. ವೀರನ ಪಕ್ಕದಲ್ಲಿ ಚಿಕ್ಕವೀರನ ಶಿಲ್ಪವಿದೆ. ಬಲಕೈಯಲ್ಲಿ ಚಾಕು ಹಿಡಿದು ವೀರನಿಗೆ ಸಹಾಯಕನಂತೆ ಚಿತ್ರಿಸಲಾಗಿದೆ. ಇದನ್ನು ಸ್ಥಳೀಯರು ಹುಲಿಕಲ್ಲುಗುಡ್ಡ ಎಂದು ಕರೆಯುತ್ತಾರೆ.
ಐದನೆ ವೀರಗಲ್ಲು
ಇದು ಊರಿನ ಪಶ್ಚಿಮ ಭಾಗದಲ್ಲಿದೆ. ಕರಿಕಲ್ಲಿನಲ್ಲಿ ಕೆತ್ತಲಾಗಿದೆ. ಇದು ಸು. 16 ಮತ್ತು 17ನೇ ಸಾಲಿಗೆ ಸೇರಿದ್ದಾಗಿದೆ. ಇದು ನಾಲ್ಕು ಅಡಿ ಉದ್ದ ಒಂದೂವರೆ ಅಡಿ ಅಗಲವಿದೆ. ಮೊದಲ ಹಂತದಲ್ಲಿ ವೀರನು ಬಿಲ್ಲುಬಾಣಗಳನ್ನು ಹಿಡಿದು ಹೋರಾಡುತ್ತಿರುವ ಶಿಲ್ಪವಿದೆ. ಎರಡನೆ ಹಂತದಲ್ಲಿ ದೇವತಾಸ್ತ್ರೀಯರು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತಿರುವ ಶಿಲ್ಪವಿದೆ. ಮೇಲಿನ ಭಾಗದಲ್ಲಿ ಸೂರ್ಯ ಚಂದ್ರರ ಶಿಲ್ಪಗಳನ್ನು ಬಿಡಿಸಲಾಗಿದೆ. ಇದು ಬೇಟೆಯ ವೀರಗಲ್ಲಾಗಿದೆ.
ವೀರ ಮಾಸ್ತಿಕಲ್ಲುಗಳು
ಪುರುಷನ ಹಾಗೆ ಸ್ತ್ರೀಯು ಕೂಡ ಕದನದಲ್ಲಿ ಹೋರಾಡಿರುವ ಪರಾಕ್ರಮದ ಪತಿಯ ಮರಣದ ನಂತರ ತಾನು ಕೊಂದುಕೊಂಡ ತ್ಯಾಗದ ಸಂಕೇತವಾಗಿ ಕಂಡುಬರುವ ಸ್ಮಾರಕಗಳು ವೀರಗಲ್ಲುಗಳ ಸಾಲಿನಲ್ಲಿ ನಿಲ್ಲುತ್ತವೆ.
ಈ ವೀರ ಮಹಾಸತಿ ಕಲ್ಲು ಪಶ್ಚಿಮ ಭಾಗದಲ್ಲಿದೆ ಒಂದೇ ಹಂತದಲ್ಲಿ ಪೂರ್ವಾಭಿಮುಖವಾಗಿ ನಿಲ್ಲಿಸಲಾಗಿದೆ. ಇದು ಕಪ್ಪು ಶಿಲೆಯ ಬಂಡೆಯಲ್ಲಿ ಕೊರೆಯಲಾಗಿದೆ. ಇದು ತೀರ ಇತ್ತೀಚಿನ 17-18ನೇ ಶತಮಾನಕ್ಕೆ ಸೇರಿದೆ. ಇದು 2 1/2 ಉದ್ದ 2 1/2 ಅಡಿ ಅಗಲ ಬಲಗೈಯನ್ನು ಮೇಲಕ್ಕೆ ಎತ್ತಿಲ್ಲ. ಸತಿ ಕೈ ಮುಗಿಯುತ್ತಿರುವ ಪಾದದವರೆಗು ಹಾರವನ್ನು ಬಿಡಿಸಲಾಗಿದೆ. ತನ್ನ ಎರಡು ಕೈಗಳನ್ನು ಜೋಡಿಸಿರುವ ಭಂಗಿಯಲ್ಲಿದ್ದಾಳೆ. ತಲೆಯಲ್ಲಿ ತುರುಬು ಇದೆ. ಬಲಭಾಗದಲ್ಲಿ ಖಡ್ಗ ಹಿಡಿದು ನಿಂತಿದ್ದಾಳೆ. ಪಾದದ ಕೆಳಗೆ ಬಾಲಕನ ಚಿತ್ರ ಬಿಡಿಸಲಾಗಿದೆ. ಸತಿ ಬೆಂಕಿಯ ಹೊಂಡಕ್ಕೆ ಜಿಗಿಯುವಾಗ ಒಂದು ಭಂಗಿ ಇರಬಹುದು. ಶಿಲ್ಪಗಳ ಮೇಲೆ ಸೂರ್ಯ ಚಂದ್ರರ ಚಿತ್ರಗಳನ್ನು ಬಿಡಿಸಲಾಗಿದೆ.

  ಇತಿಹಾಸ ಉಪನ್ಯಾಸಕರು, ಹೆಚ್.ಪಿ.ಪಿ.ಸಿ. ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ.

No comments:

Post a Comment