Tuesday, January 20, 2015

ಉಜಿನಿ ಅಪ್ರಕಟಿತ ಶಿಲಾಶಾಸನ

ಉಜಿನಿ ಅಪ್ರಕಟಿತ ಶಿಲಾಶಾಸನ ಮತ್ತು ಪ್ರಾಚ್ಯಾವಶೇಷಗಳು
ಡಾ. ಎಚ್.ಎಸ್. ಗೋಪಾಲರಾವ್ವೇದಾವತಿ ಎಸ್. ಬಾಲಸುಬ್ರಹ್ಮಣ್ಯ 
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ಸಾಸಲು ಹೋಬಳಿ, ಉಜಿನಿ ಗ್ರಾಮದಲ್ಲಿ ಶಿಥಿಲ ಚೆನ್ನಕೇಶವ ದೇವಾಲಯದ ಎದುರಿಗಿರುವ ಗರುಡ/ಮತ್ಸ್ಯ ಕಂಬದ ಪಕ್ಕದಲ್ಲಿ ನೆಟ್ಟಿರುವ ಕಲ್ಲಿನ ಮೇಲಿನ ಶಿಲಾಶಾಸನದ ಪಾಠ ಈ ಕೆಳಕಂಡಂತಿದೆ.
ಶಾಸನದ ಪಾಠ
1 [ರ]ಕತಾಕ್ಷಿ ಸಂವತ್ಸರದ ಮಾಗ ಬಹು[ಳ]
2 - ಐವತು ನಂ ವಿಪಾಳಿತಗೂ ಸಿಂ
3 ಗಯನ ಮಕ್ಕಳು ಗೋಸಲ ಕವಿಲೆ ಗೋರ-ನು
4 ಉಜಿನಿಸೀಮೆಯ ಗಉಡಿ ಕುಕೂಣ ಬಿ
5 ಕ್ಷೆಯ ಕೊಂಡ ವಿವರ ಕತ್ತಗೊಂಡ ಬಸವಿಗೆ
6 ವಿರಗಉಡನ ಮಗ ಚಿಕ್ಕಗಳಿಣರಸ ಬಸ
7 ವರಸರಮಗ ಪುಟ್ಟಚನ್ನಪ್ಪನ ಮಗನ
8 ವರು ವೀರಬೋವಗೆ ಕೊಟ್ಟ ಕಾಣಿಕೆ
9 ಯ ಕೊಟ್ಟ ಶಸನ ಮಂಗಳಮಹಾ
10 ಶ್ರೀ ಶ್ರೀ ಶ್ರೀ ಶ್ರೀ
ಶಾಸನದ ಪಾಠ ಅಸ್ಪಷ್ಟ. ಸಿಂಗಯನ ಮೂವರು ಮಕ್ಕಳ ಹೆಸರು ಪ್ರಸ್ತಾಪವಾಗಿದೆ. ಬಹುತೇಕ ಇವರಿಂದ ಉಜಿನಿ ಸೀಮೆಯ ಗವುಡಿ ಕುಕೂಣಬಿಯು ಪಡೆದ ಶಿಕ್ಷೆಯ ವಿವರವನ್ನು ದಾಖಲಿಸಲು ಶಾಸನ ಸಿದ್ಧವಾಗಿರುವಂತಿದೆ. ಬಹುಶಃ ತಪ್ಪುಕಾಣಿಕೆಯಾಗಿ ಬಸವರಸರ ಮಗ ಪುಟ್ಟಚನ್ನಪ್ಪನ ಮಗ ವೀರಬೋವನಿಗೆ ಗಉಡಿಯು ಕೊಟ್ಟ ಕಾಣಿಕೆಯ ವಿವರವಿದ್ದು, ಅದು ಕೈತಪ್ಪಿರುವಂತಿದೆ.
ಲಿಪಿಸ್ವರೂಪದ ಆಧಾರದ ಮೇಲೆ ಶಾಸನದ ಕಾಲವನ್ನು ಕ್ರಿ.ಶ. 17ನೆಯ ಶತಮಾನ ಎಂದು ಭಾವಿಸಬಹುದು. ಅದು ಒಪ್ಪಿತವಾದರೆ ಶಾಸನದ ಕಾಲವು ಕ್ರಿ.ಶ. 1685ರ ಫೆಬ್ರವರಿ 14ರಿಂದ 27ರವರೆಗಿನ ಯಾವುದಾದರೂ ಒಂದು ದಿನವಾಗುತ್ತದೆ.
ಸಾರಾಂಶ
ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿ ಉಜಿನಿಯಲ್ಲಿ ಶಿಥಿಲ ಚೆನ್ನಕೇೀಶವ ದೇವಾಲಯವಿದ್ದು, ಪೂರ್ವಾಭಿಮುಖವಾಗಿದ್ದ ದೇವಾಲಯದ ಮುಖ್ಯ ದ್ವಾರದ ಮೂಲಕ ಈಗ ಪ್ರವೇಶವಿಲ್ಲ. ಬದಲಿಗೆ ದಕ್ಷಿಣದಲ್ಲಿ ಒಳಪ್ರವೇಶಿಸಲು ವ್ಯವಸ್ಥೆ ಇದೆ. ಈಗ ದೇವಾಲಯದಲ್ಲಿ ಮೂರ್ತಿಯೂ ಇಲ್ಲ. ದೇವಾಲಯದ ಪೂರ್ವಕ್ಕಿರುವ ಗರುಡಗಂಬ(ಇದರ ಕೆಳಭಾಗದಲ್ಲಿ ಮತ್ಸ್ಯ ಇರುವುದರಿಂದ ಇದನ್ನು ಮತ್ಸ್ಯ ಕಂಬ ಎನ್ನಲೂ ಅವಕಾಶಗಳಿವೆ. ಪಕ್ಕದಲ್ಲಿನ ಕ್ರಿ.ಶ.ಸು. 17ನೆಯ ಶತಮಾನದ ಅಪ್ರಕಟಿತ ಶಾಸನದ ಪ್ರಕಾರ ಉಜಿನಿ ಒಂದು ಸೀಮೆಯ ಕೇಂದ್ರವಾಗಿತ್ತು.
ಉಜಿನಿ ಸ್ಥಳನಾಮವನ್ನು ‘ಉದಕಜನಿ’ಯ ಮೂಲಕ ಹುಡುಕಲು ಅವಕಾಶಗಳಿವೆ. ಉಜಿನಿಗೆ ಹೊಂದಿಕೊಂಡಂತೆಯೇ ಇರುವ ಗುಡ್ಡದಲ್ಲಿ ಹಲವು ನೀರಿನ ಚಿಲುಮೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಗುಡ್ಡದಲ್ಲಿ ಹಸಿರು ತುಂಬಿದೆ. ಇದರಿಂದ ಇದು ಜನವಸತಿಗೆ ತಕ್ಕ ಪ್ರದೇಶ ಎಂಬುದರಲ್ಲಿ ಸಂಶಯವಿಲ್ಲ.
ಸಾಮಾನ್ಯವಾಗಿ ಬೀರಗಾರರ ಗುಡಿಗಳು ಇರುವ ಪ್ರದೇಶದಲ್ಲಿ ಪ್ರಾಗಿತಿಹಾಸದ, ಅದರಲ್ಲೂ ವಿಶೇಷವಾಗಿ ಬೃಹತ್ ಶಿಲಾಯುಗದ ನೆಲೆಗಳನ್ನು ಹುಡುಕುವ ಪ್ರಯತ್ನ ಮಾಡುವುದು ಸ್ವಾಭಾವಿಕ. ಇವು ಇತಿಹಾಸ ಕಾಲದ ನೆಲೆಗಳೂ ಆಗಿರುತ್ತವೆ. ವೀರಗಾರರ ಗುಡಿಗಳ ಜೊತೆಗೆ ಬೀರೇಶ್ವರನ ಗುಡಿಯೂ ಇರುತ್ತದೆ. ನಾನು ಕಂಡಿರುವಂತೆ, ಕರ್ನಾಟಕದಲ್ಲಿ ವೀರಗಾರರ ಗುಡಿಗಳಿರುವ ಯಾವುದೇ ಗ್ರಾಮದಲ್ಲಿ ಬೀರೇಶ್ವರನ ಗುಡಿ ಇದ್ದೇ ಇರುತ್ತದೆ. ಇದು ಪಶುಪಾಲಕ ಮತ್ತು ಕೃಷಿಯ ಆರಂಭ ಕಾಲದ ಸ್ವರೂಪ.
ವೀರಗಾರರ ಗುಡಿಗಳನ್ನು ಹಿಂದೆಯೇ ತಿಳಿಸಿರುವಂತೆ ಇತಿಹಾಸದ ಆರಂಭಕಾಲದಿಂದಲೂ ನಿರಂತರವಾಗಿ ಕಾಣಬಹುದು. ಇದು ಬೃಹತ್ ಶಿಲಾಯುಗದ ಪಳೆಯುಳಿಕೆ. ವೀರಗಾರರ ಗುಡಿಗಳು ಸಾಮಾನ್ಯವಾಗಿ  ಚಿಕ್ಕವು.  ಒಬ್ಬ ವ್ಯಕ್ತಿ ನುಸುಳುವಷ್ಟು ಜಾಗವೂ ಅಲ್ಲಿರುವುದಿಲ್ಲ. ಚಿಕ್ಕ ಗೂಡಿನಂತಹ ಮಂಟಪದಲ್ಲಿ ಒಂದು ವೀರಗಲ್ಲನ್ನು ಇಟ್ಟು, ಅದಕ್ಕೆ ವರ್ಷದ ನಿರ್ದಿಷ್ಟ ಅಥವಾ ತಮಗೆ ಇಷ್ಟ ಅಥವಾ ಅವಕಾಶ ದೊರೆತ ದಿನದಂದು ಒಂದು ಕುಟುಂಬದವರು ಸಾಮೂಹಿಕವಾಗಿ ಪೂಜೆ ಸಲ್ಲಿಸುವ ಪದ್ಧತಿ ಇರುತ್ತದೆ. ಆ ಪೂಜೆಯಲ್ಲಿ ಪ್ರಾಣಿ ಬಲಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು. ಉಜಿನಿ ಗ್ರಾಮದ ಊರಿನಿಂದ ಸ್ವಲ್ಪ ದೂರದಲ್ಲಿರುವ ಬೀರೇಶ್ವರ ದೇವಾಲಯವು ಹೆಂಚು ಮತ್ತು ಮಾಳಿಗೆಯ ಕಟ್ಟಡ. ದೂರಕ್ಕೆ ಮನೆಯಂತೆಯೇ ಕಾಣುವ ಇದರ ಮೂರು ಭಾಗಗಳಲ್ಲೂ ಗುಂಪುಗುಂಪಾಗಿ ವೀರಗಾರರ ಗುಡಿಗಳಿವೆ. ಈಗಾಗಲೇ ತಿಳಿಸಿರುವಂತೆ ಇವು ಗೂಡಿನಂತಹ ರಚನೆಗಳು. ಇವುಗಳಲ್ಲಿ ಕೆಲವು ಗುಂಪಿನವು ಸುಸ್ಥಿತಿಯಲ್ಲಿ ರಕ್ಷಿತವಾಗಿವೆ. ಇನ್ನು ಕೆಲವು ರಕ್ಷಣೆಯ ನಿರೀಕ್ಷೆಯಲ್ಲಿವೆ. ಸ್ಥಳೀಯರು ಹೇಳುವ ಪ್ರಕಾರ ಇವು ಹಲವು ಕುಟುಂಬಗಳಿಗೆ ಸೇರಿದ ವೀರಗಾರರ ಗುಡಿಗಳು. ಆಯಾ ಕುಟುಂಬದವರು ತಮಗೆ ಅನುಕೂಲ ಆದ ದಿನ ಅಥವಾ ಮೊದಲೇ ಗೊತ್ತುಪಡಿಸಿದ ದಿನ ಸಾಮೂಹಿಕವಾಗಿ ಬಂದು ಪೂಜೆಯನ್ನು ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಅದೇ ದಿನ ಉಳಿದ ವೀರಗಾರರ ಗುಡಿಗಳಿಗೆ ಸಂಬಂಧಿಸಿದ ಕುಟುಂಬಗಳವರೂ ಬಂದಿರಬಹುದು. ನಿರ್ದಿಷ್ಟ ಗುಂಪಿನ ವೀರಗಾರರ ಗುಡಿಗಳಿಗೆ ನಡೆದುಕೊಳ್ಳುವ ಕುಟುಂಬಗಳವರು ಮತ್ತೊಂದು ಕುಟುಂಬದವರ ವೀರಗಾರರ ಗುಡಿಗಳಿಗೆ ನಡೆದುಕೊಳ್ಳುವುದಿಲ್ಲ. ಆದರೂ ಬಹುತೇಕ ಎಲ್ಲಾ ಕುಟುಂಬಗಳಲ್ಲೂ ಆಚರಣೆಯ ವಿಷಯದಲ್ಲಿ ಸಾಮರಸ್ಯವಿದೆ. ಹಿರಿಯರು ಮಾಡಿದ ನಿರ್ಣಯವನ್ನು ಯಾರೂ ಮೀರುವುದಿಲ್ಲ. ಇದು ಶಿಷ್ಟ ಪಂಗಡಗಳಲ್ಲಿನ ಗೋತ್ರ ಪದ್ದತಿಯನ್ನು ನೆನಪಿಗೆ ತರುತ್ತದೆ.
ಸರ್ವೇಕ್ಷಣೆಯ ಮೂಲಕ ಉಜಿನಿ ಗ್ರಾಮದ ಪ್ರಾಚೀನತೆಯ ಶೋಧsಕ್ಕೆ ತೊಡಗುವುದರಿಂದ ಒಳ್ಳೆಯ ಫಲಿತಾಂಶ ದೊರಕಬಹುದೆಂಬ ಅಂದಾಜಿದೆ. ಬೀರೇಶ್ವರನ ಗುಡಿ, ಅದಕ್ಕೆ ಹೊಂದಿಕೊಂಡ ಬೀರಗಾರರ ಗುಡಿಗಳ ಮೂಲಕ ಶೋಧ ಕಾರ್ಯ ಆರಂಭ ಆಗಬಹುದು.
ಇನ್ನು ಉಜಿನಿ ಗ್ರಾಮದಲ್ಲಿ ಮೇಲೆ ಪ್ರಸ್ತಾಪಿಸಿದ ಅಪ್ರಕಟಿತ ಶಾಸನವಲ್ಲದೆ, ಅದನ್ನು ಕಾಪಾಡಿಕೊಂಡು ಬಂದಿದ್ದ ಗರುಡಗಂಭ (ಮತ್ಸ್ಯ ಕಂಬ)ದ ಎದುರಿಗೆ ಚೆನ್ನಕೇಶವ ದೇವಾಲಯವಿದೆ. ಮೂಲದಲ್ಲಿ ಪೂರ್ವಕ್ಕಿದ್ದ ಇದರ ಮುಖ್ಯ ದ್ವಾರಕ್ಕೆ ಅಡ್ಡಲಾಗಿ ಈಗ, ಬಹುತೇಕ ಇದೇ ದೇವಾಲಯದ ಗರ್ಭಗೃಹದಲ್ಲಿದ್ದ ಪಾಣಿಪೀಠವನ್ನು ಇಟ್ಟು, ಮುಚ್ಚುವ ಪ್ರಯತ್ನ ಮಾಡಲಾಗಿದೆ. ಈಗ ದೇವಾಲಯದ ದಕ್ಷಿಣ ಭಾಗದಲ್ಲಿ ಪ್ರವೇಶ ದ್ವಾರವಿದೆ. ಗರ್ಭಗೃಹದಲ್ಲಿ ಪಾಣಿಪೀಠವೂ ಇಲ್ಲ; ಯಾವುದೇ ಮೂರ್ತಿಯೂ ಇಲ್ಲ. ಗರ್ಭಗೃಹದ ಮುಂದಿನ ಸುಖನಾಸಿಯಲ್ಲದೆ, ನವರಂಗವೂ ಮತ್ತೊಂದು ಸುಖನಾಸಿಯಂತೆಯೇ ಆಗಿದೆ. ದೇವಾಲಯವು ಸ್ವಲ್ಪವೇ ಎತ್ತರದ ಅಧಿಷ್ಠಾನದ ಮೇಲಿದೆ. ದೇವಾಲಯದ ಮುಖ್ಯ ದ್ವಾರ ಮುಚ್ಚಿ, ಗರ್ಭಗೃಹದಲ್ಲಿ ಯಾವ ದೇವರೂ ಇಲ್ಲವಾದ್ದರಿಂದ ರೇಷ್ಮೆ ತಟ್ಟೆಗಳನ್ನು ಇಡಲಾಗಿದೆ. ಬಹುತೇಕ ರೇಷ್ಮೆ ಹುಳುಗಳ ಸಾಕಣೆಗೆ ದೇವಾಲಯ ಬಳಕೆಯಾಗುತ್ತಿದೆ.
ಊರಿನಿಂದ ಆಚೆ ಸ್ವಲ್ಪ ದೂರದಲ್ಲಿ ಬಂಡಿ ಮಾಂಕಾಳಮ್ಮನ ದೇವಾಲಯ ಇದೆ. ಇದು ಆಧುನಿಕ ಕಟ್ಟಡ. ಇಲ್ಲಿರುವುದು ದುರ್ಗಿಯ ಮೂರ್ತಿ. ದುರ್ಗಿಯ ಮೂರ್ತಿಯ ಹಿಂದೆ ವೀರಭದ್ರನ ಮೂರ್ತಿ ಇದೆ. ಕಟ್ಟಡವು ಆಧುನಿಕವಾದರೂ, ಮೂರ್ತಿಗಳು ಆಧುನಿಕವಲ್ಲ. ಅವು ಕನಿಷ್ಟ ನೂರು ವರ್ಷಗಳಷ್ಟಾದರೂ ಹಳೆಯವು. ಇದಕ್ಕೆ ಸ್ವಲ್ಪ ಮುಂದೆ ತೆರದ ಬಯಲಿನಲ್ಲಿ ಒಂದು ಬಾಣಲಿಂಗ ಮತ್ತು ಅದರ ಎದುರಿಗೆ ಒಂದು ಬಸವನ ಮೂರ್ತಿ ಇದೆ. ಇಲ್ಲಿ ಈಗ ದೇವಾಲಯದ ಗುರುತುಗಳು ಇಲ್ಲವಾದರೂ, ಒಂದು ಕಾಲಕ್ಕೆ ಇಲ್ಲಿ ದೇವಾಲಯ ಇದ್ದಿರಬಹುದು. ಬಾಣ ಲಿಂಗಗಳು ಸಾಮಾನ್ಯವಾಗಿ ಪ್ರಾಚೀನವಾಗಿರುವುದರಿಂದ ಈ ಲಿಂಗ ಮತ್ತು ಅದಕ್ಕೆ ಇದ್ದಿರಬಹುದಾದ ದೇವಾಲಯವು ಕ್ರಿ.ಶ. 10ನೆಯ ಶತಮಾನಕ್ಕೂ ಹಿಂದಿನದು ಎನ್ನಬಹುದು. ಇಲ್ಲಿನ ಕೆಲವು ವೀರಗಲ್ಲುಗಳು ಮತ್ತು ಗಡಿಕಲ್ಲುಗಳು ಈ ಸ್ಥಳದ ಕಾಲವನ್ನು ಕ್ರಿ.ಶ. 10ನೆಯ ಶತಮಾನಕ್ಕೆ ಕೊಂಡೊಯ್ಯುತ್ತವೆ.
ಈಗ ಉಜಿನಿಯ ಈವರೆಗೆ ಅಪ್ರಕಟಿತವಾಗಿದ್ದ ಶಾಸನ ಪ್ರಕಟವಾಗಿದೆ. ಇಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತೆ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಾಗಿದೆ.


ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಕನ್ನಡ ವಿಷಯ ವಿಶ್ವಕೋಶ, ಪ್ರಸಾರಾಂಗ, ಮೈ.ವಿ.ವಿ. ಮೈಸೂರು, 2005.
2. ಮಂಡ್ಯ ಜಿಲ್ಲಾ ಗ್ಯಾಸೆಟಿಯರ್, 2003, ಕರ್ನಾಟಕ ಪುಸ್ತಕ ಮುದ್ರಣಾಲಯ, ಮೈಸೂರು.
3. ಎಪಿಗ್ರಾಫಿಯಾ-ಕರ್ನಾಟಿಕ, ಸಂಪುಟ 7, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
4. ಚಿದಾನಂದಮೂರ್ತಿ.ಎಂ., ಕನ್ನಡ ಶಾಸನಗಳ ಸಾಂಸ್ಕøತಿಕ  ಅಧ್ಯಯನ, 2008, ಪ್ರಸಾರಾಂಗ, ಮೈ.ವಿ.ವಿ. ಮೈಸೂರು.
5. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಧಾರವಾಡ-1982.
6. ಪರಮಶಿವಮೂರ್ತಿ ಡಿ.ವಿ., ಕನ್ನಡ ಶಾಸನಶಿಲ್ಪ, 1999, ಹಂಪಿ.
7. ಫೋಟೋದಲ್ಲಿನ ಚಿತ್ರವನ್ನು ಗಮನಿಸಿ, 1, 2, 3, 4, 5, 6, 7.
 144, `ಸ್ವಸ್ತಿಶ್ರೀ ಸ್ಕಂದ’, ಐ.ವೈ.ಡಿ. ರಸ್ತೆ, ಅರಸಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562123.

No comments:

Post a Comment