Saturday, January 17, 2015

ಕೆಳಗೆರೆ ಗ್ರಾಮದ ವೀರಗಲ್ಲುಗಳು



ಕೆಳಗೆರೆ ಗ್ರಾಮದಲ್ಲಿ ದೊರೆತ ಅಪ್ರಕಟಿತ ವೀರಗಲ್ಲುಗಳು
ಡಾ. ಜಿ. ಕರಿಯಪ್ಪ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಕೇಂದ್ರದಿಂದ ಸು. 12 ಕಿ.ಮೀ. ದೂರದಲ್ಲಿರುವ ಕೆಳಗೆರೆ ಗ್ರಾಮವು ಐತಿಹಾಸಿಕವಾಗಿ ಮತ್ತು ಚಾರಿತ್ರಿಕವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಪ್ರಾಚೀನ ಶಾಸನಗಳಲ್ಲಿ ಈ ಗ್ರಾಮವನ್ನು “ಕೆಲ್ಲನ್‍ಗೆರೆ” ಎಂದು ಉಲ್ಲೇಖಿಸಲಾಗಿದ್ದು, ನಾಗಮಂಗಲ ತಾಲೂಕನ್ನೊಳಗೊಂಡಂತೆ ಗಂಗ, ಹೊಯ್ಸಳ ಮತ್ತು ವಿಜಯನಗರ ಕಾಲದ ರಾಜಕೀಯ ಮತ್ತು ಸಾಂಸ್ಕøತಿಕ ಇತಿಹಾಸ ವೈವಿಧ್ಯಮಯವಾಗಿದ್ದು, ಇಲ್ಲಿನ ಸ್ಮಾರಕಗಳಾದ ವೀರಗಲ್ಲು, ಸತಿಕಲ್ಲು, ಮಹಾಸತಿಕಲ್ಲುಗಳು, ವೀರರ ಗುಡಿಗಳು ಹಾಗೂ ಇನ್ನಿತರ ಸ್ಮಾರಕಗಳ ಬಗ್ಗೆ ಈಗಾಗಲೇ ವಿದ್ವಾಂಸರು ತಮ್ಮ ಕೃತಿ-ಲೇಖನಗಳಲ್ಲಿ ಪರಿಶೀಲಿಸಿದ್ದಾರೆ. ಆದರೆ ಅವುಗಳ ಸಮಗ್ರ ಅಧ್ಯಯನ ನಡೆದಿರುವುದಿಲ್ಲ. ಹೀಗಾಗಿ ಈ ಕೆಳಗೆರೆ ಗ್ರಾಮದಲ್ಲಿ ದೊರೆತಿರುವ ವೀರಗಲ್ಲುಗಳ ಬಗ್ಗೆ ಜಿಲ್ಲಾ ಗ್ಯಾಸೆಟಿಯರ್, ಎಪಿಗ್ರಾಫಿಯಾ ಕರ್ನಾಟಿಕ ಸಂಪುಟಗಳು, ಇತಿಹಾಸ ದರ್ಶನ, ಎಂ.ಎ.ಆರ್. ರಿಪೋರ್ಟ್ ಹಾಗೂ ಇನ್ನಿತರ ನಿಯತಕಾಲಿಕೆಗಳಲ್ಲಿ ವರದಿಯಾಗಿ ಪ್ರಕಟವಾಗಿರುವುದಿಲ್ಲ. ಗ್ರಾಮದ ಪೂರ್ವಕ್ಕೆ ಇರುವ ಈಶ್ವರ ದೇವಾಲಯದ ಬಳಿ ಈ ವೀರಗಲ್ಲುಗಳಿವೆ.
ಒಂದನೇ ವೀರಗಲ್ಲು: ಈ ವೀರಗಲ್ಲನ್ನು ಗೋವುಗಳನ್ನು ಕದಿಯುತ್ತಿರುವ ಗೋವುಗಳ್ಳರೊಡನೆ ಹೋರಾಡಿ ಗೋವುಗಳನ್ನು ರಕ್ಷಿಸಿ ವೀರಮರಣವನ್ನಪ್ಪಿದ ವೀರಪುರುಷನ ಸ್ಮರಣಾರ್ಥಕವಾಗಿ ಸ್ಥಾಪನೆ ಮಾಡಲಾಗಿರುವ ವೀರಗಲ್ಲು ಇದಾಗಿದೆ. ಇದನ್ನು ಸುಮಾರು ನಾಲ್ಕು ಅಡಿ ಎತ್ತರ ಮೂರು ಅಡಿ ಅಗಲ ಮತ್ತು ನಾಲ್ಕು ಇಂಚು ದಪ್ಪನಾಗಿರುವ ಬಳಪದ ಕಲ್ಲಿನಲ್ಲಿ ರಚನೆ ಮಾಡಲಾಗಿದೆ. ಇದರಲ್ಲಿ ಮೂರು ಹಂತದಲ್ಲಿರುವ ಪಟ್ಟಿಕೆಗಳಲ್ಲಿ ಶಿಲ್ಪಗಳನ್ನು ಕಂಡರಿಸಲಾಗಿದೆ.
ಕೆಳಹಂತದ ಪಟ್ಟಿಕೆಯಲ್ಲಿ ಗೋವುಗಳನ್ನು ಕದಿಯುತ್ತಿರುವ ಗೋವುಗಳ್ಳರೊಡನೆ ಹೋರಾಟ ಮಾಡಲು ಸಜ್ಜಾಗಿ ಕುದುರೆಯನ್ನೇರಿ ಕುಳಿತಿರುವ ವೀರಪುರುಷನು ತನ್ನ ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿಕೊಂಡಿದ್ದಾನೆ. ಈತನು ತನ್ನ ಎಡಗೈಯಲ್ಲಿ ಕುದುರೆಯ ಲಗಾಮನ್ನು ಹಿಡಿದು ಬಲಗೈಯಲ್ಲಿ ಸುರುಳಿಯೋಪಾದಿಯಲ್ಲಿ ಅಲಂಕರಿಸಲಾಗಿರುವ (ಈಟಿ?) ಆಯುಧವನ್ನು ಹಿಡಿದುಕೊಂಡು ತನ್ನ ಬಲಗೈಯನ್ನು ಮೇಲಕ್ಕೆ ಎತ್ತಿ ಹಿಡಿದಿದ್ದಾನೆ, ಅಲ್ಲದೇ ಕುದುರೆಯನ್ನು ಸಹ ವಿವಿಧ ವಸ್ತ್ರಾಭರಣಗಳನ್ನು ಹಾಕಿ ಅಲಂಕರಣ ಮಾಡಲಾಗಿದೆ, ಈ ಕುದುರೆಯ ಹಿಂಭಾಗದಲ್ಲಿ ತನ್ನ ಪತ್ನಿಯು ಹೋರಾಟಕ್ಕೆ ಸನ್ನದ್ಧನಾಗಿರುವ ವೀರನನ್ನು ಬೀಳ್ಕೊಡುತಿರುವಂತೆ ನಿಂತಿರುವ ಸ್ತ್ರೀಯ ಶಿಲ್ಪವನ್ನು ಸಹ ಬಹಳ ಸುಂದರವಾಗಿ ಬಿಡಿಸಲಾಗಿದೆ. ಈ ಸ್ತ್ರೀಯು ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿ ತಲೆಗೆ ಹೂವನ್ನು ಮುಡಿದುಕೊಂಡಿದ್ದಾಳೆ. ಕೈಯಲ್ಲಿ ನೀರಿನ ಕಮಂಡಲ ಬಲಗೈಯಲ್ಲಿ ಪುಷ್ಟವೊಂದನ್ನು ಹಿಡಿದು ನಿಂತಿದ್ದಾಳೆ. ಈ ಸ್ತ್ರೀಯ ಹಿಂಭಾಗದಲ್ಲಿ ಗೋವುಗಳು ತಮ್ಮ ತಲೆಯನ್ನು ಮೇಲೆತ್ತಿ ನೋಡುತ್ತಿರುವಂತೆ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಗೋವುಗಳೊಡನೆ ವೀರವೇಶದಿಂದ ಹೋರಾಡಿ ಮರಣಹೊಂದಿದ ವೀರ ಪುರುಷನನ್ನು ಕೀರ್ತಿಮುಖವುಳ್ಳ ಮಂಟಪದಲ್ಲಿರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೇವಕನ್ಯೆಯರು ಕೈಗಳಲ್ಲಿ ಛಾಮರವನ್ನು ಹಿಡಿದಿದ್ದಾರೆ. ಮತ್ತೊಂದು ಕೈಯಲ್ಲಿ ಮಂಟಪವನ್ನು ಹಿಡಿದುಕೊಂಡು ದೇವಲೋಕಕ್ಕೆ ಎತ್ತಿಕೊಂಡು ಹೋಗುತ್ತಿರುವಂತೆ ಬಹಳ ಕಲಾತ್ಮಕವಾಗಿ ಕೆತ್ತಲಾಗಿದೆ.
ಮೂರನೇ ಪಟ್ಟಿಕೆಯಲ್ಲಿ ದೇವಲೋಕದ ಕಲ್ಪನೆಯ ಶಿಲ್ಪಗಳನ್ನು ಬಹಳ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಇದರಲ್ಲಿ ಶಿವಲಿಂಗ ಒಂದಕ್ಕೆ ಪೂಜೆಯನ್ನು ಸಲ್ಲಿಸುತ್ತಿರುವ ಪುರೋಹಿತ, ಶಿವಲಿಂಗದ ಮುಂದೆ ನಂದಿಯ ಶಿಲ್ಪ, ಪುರೋಹಿತರ ಹಿಂಬದಿಯಲ್ಲಿ ಪದ್ಮಾಸನದಲ್ಲಿ ಕೈಮುಗಿದು ದೇವರ ಪ್ರಾರ್ಥನೆಯಲ್ಲಿ ಮಗ್ನನಾಗಿರುವ ವೀರಪುರುಷನ ಶಿಲ್ಪವನ್ನು ಕೆತ್ತನೆ ಮಾಡಲಾಗಿದೆ. ಅಂತ್ಯದಲ್ಲಿ ಸೂರ್ಯಚಂದ್ರರ ಶಿಲ್ಪಗಳನ್ನು ಸಹ ಸುಂದರವಾಗಿ ಮೂಡಿ ಬರುವಂತೆ ಕೆತ್ತನೆ ಮಾಡಲಾಗಿದೆ.
ಎರಡನೇ ವೀರಗಲ್ಲು: ಇದು ಸಹ ಯಾವುದೋ ಹೋರಾಟದಲ್ಲಿ ತೊಡಗಿ ವೀರ ಮರಣವನ್ನಪ್ಪಿದ ಮಹಾನ್ ವೀರಪುರುಷನ ಸ್ಮರಣಾರ್ಥಕವಾಗಿ ನಿಲ್ಲಿಸಲಾಗಿರುವಂತಹ ವೀರಗಲ್ಲಾಗಿದೆ. ಈ ವೀರಗಲ್ಲು ಸುಮಾರು ನಾಲ್ಕು ಅಡಿಗಳ ಎತ್ತರವಾಗಿ ಎರಡುವರೆ ಅಡಿಗಳ ಅಗಲವಾಗಿ ಮತ್ತು ನಾಲ್ಕು ಇಂಚು ದಪ್ಪನಾಗಿರುವ ಬಳಪದ ಕಲ್ಲಿನ ಚಪ್ಪಡಿಯ ಮೇಲೆ ರಚಿಸಲಾಗಿದೆ. ಇದರಲ್ಲಿ ಮೂರು ಹಂತದಲ್ಲಿರುವ ಪಟ್ಟಿಕೆಗಳು ಕಾಣಬರುತ್ತವೆ. ಈ ವೀರಗಲ್ಲಿನ ಕೆಳಭಾಗವು ಸ್ವಲ್ಪ ಭೂಮಿಯಲ್ಲಿ ಹೂತುಹೋಗಿದೆ.
ಕೆಳಹಂತದಲ್ಲಿರುವ ಪಟ್ಟಿಕೆಯಲ್ಲಿ ವೀರನೋರ್ವನು ಅಲಂಕರಿಸಲ್ಪಟ್ಟ ಕುದುರೆಯನ್ನೇರಿ ಕುಳಿತಿದ್ದಾನೆ. ಈ ವೀರನು ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿದ್ದಾನೆ. ಈತನು ತನ್ನ ಎಡಗೈಯಲ್ಲಿ ಕುದುರೆಯ ಲಗಾಮನ್ನು ಹಿಡಿದುಕೊಂಡು ಬಲಗೈಯಲ್ಲಿ ಉದ್ದನೆಯ ಖಡ್ಗವನ್ನು ಹಿಡಿದುಕೊಂಡು ತನ್ನ ಭುಜದ ಮೇಲೆ ಇರಿಸಿಕೊಂಡಿದ್ದಾನೆ. ಈ ವೀರಪುರುಷನು ಏರಿರುವ ಕುದುರೆಯ ಹಿಂಭಾಗದಲ್ಲಿ ಕೈಯಲ್ಲಿ ನೀರಿನ ಕಮಂಡಲ ಮತ್ತು ಪುಷ್ಟವನ್ನು ಹಿಡಿದು ತನ್ನ ಪತಿಯನ್ನು ಬೀಳ್ಕೊಡುವಂತೆ ಕೆತ್ತನೆ ಮಾಡಲಾಗಿರುವ ಸ್ತ್ರೀಯ ಶಿಲ್ಪವಿದೆ. ಈ ಸ್ತ್ರೀಯು ಸಹ ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿಕೊಂಡಿದ್ದಾಳೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಹೋರಾಟದಲ್ಲಿ ತೊಡಗಿ ವೀರಮರಣವನ್ನಪ್ಪಿದ ಪುರುಷನನ್ನು ಕೀರ್ತಿಮುಖದಂತಿರುವ ಮಂಟಪದಲ್ಲಿ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯತ್ತಿರುವ ಸ್ತ್ರೀಯರಿಬ್ಬರ ಶಿಲ್ಪಗಳನ್ನು ಬಿಡಿಸಲಾಗಿದೆ. ಈ ಸ್ತ್ರೀಯರು ತಮ್ಮ ಕೈಗಳಲ್ಲಿ ಚಾಮರ ಮತ್ತು ಮಂಟಪವನ್ನು ಹಿಡಿದು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಸನ್ನಿವೇಶವನ್ನು ಬಹಳ ಸೊಗಸಾಗಿ ಕೆತ್ತನೆ ಮಾಡಲಾಗಿದೆ.
ಮೂರನೇ ಪಟ್ಟಿಕೆಯಲ್ಲಿ ಶಿವನ ಸಾನಿಧ್ಯದ ದೃಶ್ಯ ಸನ್ನಿವೇಶವನ್ನು ಬಹಳ ಸೊಗಸಾಗಿ ಕೆತ್ತನೆ ಮಾಡಲಾಗಿದೆ. ಇದರಲ್ಲಿ ಹೂವಿನ ಹಾರಗಳಿಂದ ಅಲಂಕರಿಸಲ್ಪಟ್ಟ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿರುವ ಪುರೋಹಿತ ಲಿಂಗದ ಎಡಭಾಗದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಪುರೋಹಿತರ ಹಿಂಭಾಗದಲ್ಲಿ ಪದ್ಮಾಸನದಲ್ಲಿ ಕುಳಿತು ಕೈಮುಗಿದು ದೇವರ ಪ್ರಾರ್ಥನೆಯಲ್ಲಿ ತೊಡಗಿರುವ ವೀರಪುರುಷನ ಶಿಲ್ಪವನ್ನು ಬಿಡಿಸಲಾಗಿದೆ. ಅಂತ್ಯದಲ್ಲಿ ಸೂರ್ಯಚಂದ್ರರನ್ನು ಸಹ ಬಿಡಿಸಲಾಗಿದೆ.
ಮೂರನೇ ವೀರಗಲ್ಲು: ಈ ವೀರಗಲ್ಲನ್ನು ಬಳಪದ ಕಲ್ಲಿನಲ್ಲಿ ರಚಿಸಲಾಗಿದೆ. ಇದು ಸುಮಾರು ನಾಲ್ಕು ಅಡಿಗಳ ಎತ್ತರ ಎರಡುವರೆ ಅಡಿ ಅಗಲ ಮತ್ತು ನಾಲ್ಕು ಇಂಚು ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕೆಗಳನ್ನು ಮಾಡಿ ಶಿಲ್ಪಗಳನ್ನು ಕಂಡರಿಸಲಾಗಿದೆ.
ಕೆಳಹಂತದ ಪಟ್ಟಿಕೆಯಲ್ಲಿ ವೀರನೋರ್ವನು ಎರಡು ಕೈಗಳಲ್ಲಿ ಖಡ್ಗಗಳನ್ನು ಹಿಡಿದುಕೊಂಡಿದ್ದಾನೆ. ಬಲಗೈ ಯಲ್ಲಿರುವ ಕತ್ತಿಯನ್ನು ಮೇಲಕ್ಕೆ ಎತ್ತಿ ಹಿಡಿದಿದ್ದಾನೆ. ಎಡಗೈಯಲ್ಲಿರುವ ಕತ್ತಿಯನ್ನು ಕೆಳಮುಖವಾಗಿ ಹಿಡಿದುಕೊಂಡಿದ್ದಾನೆ. ಈ ವೀರನು ಮೈ ಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿರುವಂತೆ ಬಹಳ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಈ ವೀರ ಪುರುಷನ ಮುಂಬದಿಯಲ್ಲಿ ಎರಡು ತಾಳೆಯ ಮರಗಳನ್ನು ಕೆತ್ತನೆ ಮಾಡಲಾಗಿದೆ. ಅಲ್ಲದೆ ವೀರಪುರುಷನ ಹಿಂಬದಿಯಲ್ಲಿ ಸ್ತ್ರೀಯೋರ್ವಳು ನೀರಿನ ಕಮಂಡಲ ಮತ್ತು ಬಲಗೈಯಲ್ಲಿ ಕತ್ತಿಯನ್ನು ಹಿಡಿದು ನಿಂತಿದ್ದಾಳೆ. ಇವಳು ಸಹ ಮೈ ಮೇಲೆ ವಿವಿಧ ಬಗೆಯ ಸುಂದರವಾದ ವಸ್ತ್ರಾಭರಣಗಳನ್ನು ಧರಿಸಿರುವಂತೆ ನಯನ ಮನೋಹರವಾಗಿ ಕೆತ್ತನೆ ಮಾಡಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಚಾಮರವನ್ನು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಕೀರ್ತಿಮುಖವುಳ್ಳ ಮಂಟಪವನ್ನು ಹಿಡಿದುಕೊಂಡಿರುವ ದೇವಕನ್ಯೆಯರಿಬ್ಬರು ಹೋರಾಟದಲ್ಲಿ ತೊಡಗಿ ವೀರಮರಣವನ್ನೊಂದಿದ ವೀರಪುರುಷನನ್ನು ಮಂಟಪದ ಒಳಗೆ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಸನ್ನಿವೇಶವನ್ನು ಬಿಡಿಸಲಾಗಿದೆ.
ಮೂರನೇ ಹಂತದ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿರುವ ಪುರೋಹಿತರು ಕಚ್ಚೆಪಂಚೆಯನ್ನು ಧರಿಸಿ ತಲೆಯ ಕೂದಲನ್ನು ಹಿಂದಕ್ಕೆ ಕಟ್ಟಿಕೊಂಡಿದ್ದಾರೆ. ಶಿವನ ಮುಂದೆ ನಂದಿಯನ್ನು ಇರಿಸಲಾಗಿದೆ. ಪುರೋಹಿತರ ಹಿಂಬದಿಯಲ್ಲಿ ವೀರಮರಣವನ್ನೊಂದಿದ ಪುರುಷನು ಪದ್ಮಾಸನದಲ್ಲಿ ಕೈಮುಗಿದು ಕುಳಿತುಕೊಂಡು ದೇವರ ಪ್ರಾರ್ಥನೆಯಲ್ಲಿ ತೊಡಗಿರುವಂತೆ ಕೆತ್ತನೆ ಮಾಡಲಾಗಿದೆ. ಮೇಲ್ಭಾಗದಲ್ಲಿ ಎಡ ಮತ್ತು ಬಲಭಾಗದಲ್ಲಿ ಸೂರ್ಯ ಚಂದ್ರರನ್ನು ಬಿಡಿಸಲಾಗಿದೆ.
ನಾಲ್ಕನೇ ವೀರಗಲ್ಲು: ಇದೂ ಸಹ ಬಳಪದ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿರುವಂತಹ ವೀರಗಲ್ಲಾಗಿದೆ. ಇದು ಸುಮಾರು ನಾಲ್ಕು ಅಡಿ ಎತ್ತರವಾಗಿದೆ. ಎರಡುವರೆ ಅಡಿ ಅಗಲವಾಗಿದೆ ಮತ್ತು ಐದು ಇಂಚು ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕಾ ಶಿಲ್ಪಗಳನ್ನು ಬಿಡಿಸಲಾಗಿದೆ. ಈ ವೀರಗಲ್ಲಿನ ಕೆಳಭಾಗವು ಅರ್ಧಭಾಗ ಭೂಮಿಯಲ್ಲಿ ಹೂತುಹೋಗಿದೆ. ಕೆಳಹಂತದ ಪಟ್ಟಿಕೆಯಲ್ಲಿ ವೀರಪುರುಷ ನೋರ್ವನು ಬಿಲ್ಲನ್ನು ಹಿಡಿದು ಬಾಣವನ್ನು ಬಿಡುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಈ ವೀರನ ಮುಖ ಭಾಗವು ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ಕಲ್ಲಿನ ಚಕ್ಕೆ ಎದ್ದು ಹೋಗಿದೆ. ಇವನ ತಲೆಯ ಕೂದಲನ್ನು ಮೇಲೆತ್ತಿ ತುರುಬಿನಂತೆ ಕಟ್ಟಿಕೊಂಡಿರುವಂತೆ ಕೆತ್ತನೆ ಮಾಡಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಚಾಮರವನ್ನು ಹಿಡಿದು ವೀರ ಮರಣಹೊಂದಿದ ಪುರುಷನನ್ನು ದೇವಕನ್ಯೆಯರು ವೀರಪುರುಷನ ಕೈಗಳನ್ನು ತಮ್ಮ ಭುಜದ ಮೇಲಿರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವಂತೆ ಕೆತ್ತನೆ ಮಾಡಲಾಗಿದೆ.
ಮೂರನೇ ಹಂತದ ಪಟ್ಟಿಕೆಯಲ್ಲಿ ಸಿಂಹಾಸನದ ಮೇಲೆ ಕುಳಿತಿರುವ ದೇವಮಾನವ ಶಿಲ್ಪವನ್ನು ಬಿಡಿಸಲಾಗಿದೆ. ಇವನು ತನ್ನ ಬಲಗಾಲನ್ನು ಮಡಿಸಿಕೊಂಡು ಎಡಗಾಲನ್ನು ಮಡಿಚಿಕೊಂಡು ಆ ಕಾಲಿನ ಮೇಲೆ ತನ್ನ ಎಡಗೈಯನ್ನು ಇರಿಸಿದ್ದಾನೆ. ಈ ಶಿಲ್ಪದ ಭಾಗ ಸ್ವಲ್ಪ ಮುರಿದು ಹೋಗಿದೆ. ಈ ದೇವಮಾನವನ ಎಡ ಬಲದಲ್ಲಿ ಚಾಮರ ಮತ್ತು ಫಲವನ್ನು ಹಿಡಿದು ನಿಂತಿರುವ ಸ್ತ್ರೀಯರ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ.
ಐದನೇ ವೀರಗಲ್ಲು: ಇದನ್ನು ಬಳಪದ ಕಲ್ಲಿನಲ್ಲಿ ರಚಿಸಲಾಗಿದೆ. ಇದು ಸುಮಾರು ಮೂರು ಅಡಿ ಎತ್ತರವಾಗಿದ್ದು, ಎರಡು ಅಡಿಗಳ ಅಗಲವಾಗಿದೆ ಮತ್ತು ಮೂರು ಇಂಚು ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕಾ ಶಿಲ್ಪಗಳನ್ನು ಬಿಡಿಸಲಾಗಿದೆ. ಇದರ ಮೇಲ್ಭಾಗವು ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ಯಾವುದೇ ರೀತಿಯ ರಚನೆ ಕಾಣಬರುವುದಿಲ್ಲ. ಕೆಳಹಂತದ ಪಟ್ಟಿಕೆಯಲ್ಲಿ ಮತ್ತು ಎರಡನೇ ಹಂತದ ಪಟ್ಟಿಕೆಗಳಲ್ಲಿ ಮೂರು ಭಾಗಗಳಾಗಿ ಮಾಡಿ ಮಧ್ಯದಲ್ಲಿ ಚಿಕ್ಕ ಚಿಕ್ಕ ಶಿಲ್ಪಗಳನ್ನು ಬಿಡಿಸಲಾಗಿದೆ. ಇದರಲ್ಲಿ ಇಬ್ಬರು ಪುರುಷರು ಆಯುಧಗಳನ್ನಿಡಿದು ಹೋರಾಟದಲ್ಲಿ ತೊಡಗಿದ್ದಾರೆ. ಎಡಭಾಗದಲ್ಲಿ ಸ್ತ್ರೀಯೋರ್ವಳು ಸಹ ಹೋರಾಟದಲ್ಲಿ ತೊಡಗಿರುವಂತೆ ಬಿಡಿಸಲಾಗಿದೆ. ಇವರ ಮುಖಗಳು ಸ್ಪಷ್ಟವಾಗಿ ಕಾಣಬರುವುದಿಲ್ಲ.
ಎರಡನೇ ಹಂತದ ಪಟ್ಟಿಕೆಯಲ್ಲಿ ಮಧ್ಯದ ಭಾಗದಲ್ಲಿ ಪುರುಷನೋರ್ವನು ನೃತ್ಯ ಭಂಗಿಯಲ್ಲಿ ನಿಂತಿದ್ದಾನೆ. ಇವನ ಎಡ ಮತ್ತು ಬಲಭಾಗದಲ್ಲಿ ಸ್ತ್ರೀಯರು ನಿಂತಿದ್ದಾರೆ.
ಆರನೇ ವೀರಗಲ್ಲು: ಇದೊಂದು ಮೂರು ಅಡಿ ಎತ್ತರ ಎರಡು ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪನಾಗಿರುವ ಬೆಣಚುಕಲ್ಲಿನಲ್ಲಿ ರಚಿಸಲಾಗಿರುವ ವೀರಗಲ್ಲಾಗಿದೆ ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕೆಗಳಿವೆ. ಕೆಳಗಿನ ಹಂತದ ಪಟ್ಟಿಕೆಯಲ್ಲಿ ವೀರಾವೇಶದಿಂದ ಹೋರಾಡಿ ಮಡಿದು ನೆಲದ ಮೇಲೆ ಮಲಗಿರುವಂತಹ ಶಿಲ್ಪವನ್ನು ಬಿಡಿಸಲಾಗಿದೆ. ಹೋರಾಟದಲ್ಲಿ ಜಯಶೀಲನಾದ ವೀರನು ಎರಡನೇ ಹಂತದಲ್ಲಿ ತನ್ನ ಪತ್ನಿಯ ಜೊತೆಗೂಡಿ ಬಲಗೈಯಲ್ಲಿ ಕತ್ತಿಯನ್ನು ಮೇಲಕ್ಕೆ ಎತ್ತಿ ಹಿಡಿದು ನಿಂತಿದ್ದಾನೆ. ಇವರಿಬ್ಬರು ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿರುವಂತೆ ಬಿಡಿಸಲಾಗಿದೆ. ಆದರೆ ಮುಖದ ಭಾಗವು ಕಾಲಪುರುಷರ ದಾಳಿಗೆ ಬಲಿಯಾಗಿ ಸ್ಪಷ್ಟವಾಗಿ ಕಾಣದಂತಾಗಿದೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರನ್ನು ಬಿಡಿಸಲಾvದೆ.
ಏಳನೇ ವೀರಗಲ್ಲು: ಇದೊಂದು ಹಸಿರು ಛಾಯವುಳ್ಳ ಬಳಪದ ಕಲ್ಲಿನಲ್ಲಿ ರಚಿಸಲಾಗಿದೆ. ಇದು ಸುಮಾರು ಮೂರು ಅಡಿಗಳ ಎತ್ತರ ಮೂರು ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ಕೆಳಹಂತದ ಪಟ್ಟಿಕೆಯಲ್ಲಿ ಕುದುರೆಯನ್ನೇರಿ ಹೊರಟಿರುವ ವೀರಪುರುಷ ಅವನ ಮುಂದೆ ಮತ್ತೊಬ್ಬ ಪುರುಷನು ಸೋತು ತನ್ನೆರಡು ಕೈಗಳನ್ನು ಕೆಳಗಿಳಿಸಿ ಸುಸ್ತಾದಂತೆ ಬಿಡಿಸಲಾಗಿದೆ. ಎಡಭಾಗದಲ್ಲಿ ಸ್ತ್ರೀಯೋರ್ವಳ ಶಿಲ್ಪವನ್ನು ಬಿಡಿಸಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಹೋರಾಡಿ ವೀರಮರಣವನ್ನೊಂದಿದ ವೀರನನ್ನು ಮಂಟಪವೊಂದರಲ್ಲಿ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯುತ್ತಿರುವ ದೇವಕನ್ಯೆಯರ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ಮೇಲ್ಭಾಗದಲ್ಲಿ ಶಿವನಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ಪುರೋಹಿತರು ಪುರೋಹಿತರ ಹಿಂಬದಿಯಲ್ಲಿ ಪದ್ಮಾಸನದಲ್ಲಿ ಕೈಮುಗಿದು ದೇವರ ಧ್ಯಾನದಲ್ಲಿ ತೊಡಗಿರುವ ವೀರಪುರುಷ ಶಿವಲಿಂಗದ ಎಡಭಾಗದಲ್ಲಿ ನಂದಿಯ ಶಿಲ್ಪವನ್ನು ಬಿಡಿಸಲಾಗಿದೆ.
ಈ ವೀರಗಲ್ಲಿನ ಮೇಲ್ಭಾಗವು ಮಳೆಯ ನೀರಿ£ಂದ ಪಾಚಿಕಟ್ಟಿ ಮೇಲೆಲ್ಲಾ ಕಲ್ಲುಹೂ ಬೆಳೆದು ಶಿಲ್ಪಗಳು ಸ್ಪಷ್ಟವಾಗಿ ಕಾಣವುದಿಲ್ಲ.
ಈ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೆಳಗೆರೆ ಗ್ರಾಮದಲ್ಲಿ ದೊರೆತ ಎಲ್ಲ ವೀರಗಲ್ಲುಗಳಲ್ಲೂ ಅದರದೇ ಆದ ವೈಶಿಷ್ಟ್ಯತೆಯಿದ್ದು, ಎಲ್ಲದರಲ್ಲೂ ಶಿವಲಿಂಗ, ಸೂರ್ಯ, ಚಂದ್ರ ಮತ್ತು ನಂದಿಯ ಶಿಲ್ಪವಿದ್ದು, ಜೊತೆಗೆ ತಾಳೆಮರಗಳ ಚಿತ್ರ ಕೆತ್ತಿರುವುದು ಹಾಗೂ ಕೆಲವು ಕಡೆ ವೀರರು ಹೋರಾಡುತ್ತಿರುವುದು ಇವುಗಳೆಲ್ಲವೂ ತುಂಬ ಅಲಂಕರಣೆಯಲ್ಲಿ ಸುಂದರವಾಗಿರುವುದನ್ನು ಕಾಣಬಹುದು. ಒಟ್ಟಾರೆ ಇವುಗಳನ್ನು ನೋಡಿದಾಗ ಶೈವಧರ್ಮದ ಆಚರಣೆ ಹೆಚ್ಚಾಗಿ ಪ್ರಚಲಿತದಲ್ಲಿದ್ದು ಶೈವಪರಂಪರೆಯ ಸಂಸ್ಕøತಿಯನ್ನು ಸಾರುತ್ತದೆ ಎಂದು ಹೇಳಬಹುದಾಗಿದೆ.


ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಕನ್ನಡ ವಿಷಯ ವಿಶ್ವಕೋಶ, ಪ್ರಸಾರಾಂಗ, ಮೈ.ವಿ.ವಿ. ಮೈಸೂರು, 2005.
2. ಮಂಡ್ಯ ಜಿಲ್ಲಾ ಗ್ಯಾಸೆಟಿಯರ್, 2003, ಕರ್ನಾಟಕ ಪುಸ್ತಕ ಮುದ್ರಣಾಲಯ, ಮೈಸೂರು.
3. ಎಪಿಗ್ರಾಫಿಯಾ-ಕರ್ನಾಟಿಕ, ಸಂಪುಟ 7, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
4. ಚಿದಾನಂದಮೂರ್ತಿ.ಎಂ., ಕನ್ನಡ ಶಾಸನಗಳ ಸಾಂಸ್ಕøತಿಕ  ಅಧ್ಯಯನ, 2008, ಪ್ರಸಾರಾಂಗ, ಮೈ.ವಿ.ವಿ. ಮೈಸೂರು.
5. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಧಾರವಾಡ-1982.
6. ಪರಮಶಿವಮೂರ್ತಿ ಡಿ.ವಿ., ಕನ್ನಡ ಶಾಸನಶಿಲ್ಪ, 1999, ಹಂಪಿ.
7. ಫೋಟೋದಲ್ಲಿನ ಚಿತ್ರವನ್ನು ಗಮನಿಸಿ, 1, 2, 3, 4, 5, 6, 7.
 ಸಹ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು.

No comments:

Post a Comment