Wednesday, January 9, 2013

ಪುರಾತತ್ವ ಪ್ರಪಂಚದ ದಿಗ್ಗಜ- ಡಾ. ಎಸ್‌.ಆರ್‌ .ರಾವ್‌

ಎಚ್.ಶೇಷಗಿರಿರಾವ್‌
appaaji@gmail.com
  












            ಪುರಾತತ್ವ ತಜ್ಞ ಡಾ.ಎಸ್‌.ಆರ್‌.ರಾವ್‌-ಗೆ ನುಡಿ ನಮನ


     ಹಸ್ತಪ್ರತಿ ಮತ್ತು ಶಾಸನಗಳು ಸಯಾಮಿ ಅವಳಿಗಳಂತೆ.ಮುಖ ಬೇರೆ ಬೇರೆಯಾದರೂ ಅವುಗಳು ಏಕ ದೇಹಿಗಳು.ಒಂದು ರೀತಿಯಲ್ಲಿ ಪೌರಾಣಿಕ ಪಕ್ಷಿ ಗಂಡ ಬೇರುಂಡದ ತರಹ.ಅವೆರಡಕ್ಕೂ ಸಾಮನ್ಯವಾಗಿರುವುದು ಲಿಪಿ ಮಾತ್ರ . ಭಾರತದ ಅತಿ ಪ್ರಾಚೀನ ಲಿಪಿ ಎಂದರೆ ಸಿಂಧೂ ಕಣಿವೆಯಲ್ಲಿನ ಪುರಾತನ ನಗರಗಳಾದ ಹರಪ್ಪಾ ಮತ್ತು ಮಹಂಜೆದಾರೋದಲ್ಲಿ ದೊರೆತ ಮುದ್ರೆಗಳ ಮೇಲಿರುವ ಬರಹ.. ಅವುಗಳ ರಹಸ್ಯವನ್ನು ಬಯಲುಮಾಡಲು ಹಲವರು ಪ್ರಯತ್ನಿಸಿದ್ದಾರೆ. ಆದರೆ ಯಾವ ವಿವರಣೆಯೂ ಪೂರ್ಣವಾಗಿ ಒಪ್ಪಿತವಾಗಿಲ್ಲ. ಅವುಗಳಲ್ಲೆಲ್ಲ ಸಾಕಷ್ಟು ಮಟ್ಟಿಗೆ ಒಪ್ಪಿತವಾಗುವಂತೆ ಲಿಪಿಯ ನಿಗೂಢತೆಯನ್ನು ಬಿಡಿಸಿದವರು.ಡಾ. ಎಸ್‌.ಆರ್‌.ರಾವ್‌ .  ಜೊತೆಗೆ ಸಾಗರದತಳದಲ್ಲಿದ್ದ ಪೌರಾಣಿಕವೆನ್ನಲಾದ ಶ್ರೀಕೃಷ್ಣನ ದ್ವಾರಕೆಯ ಅವಶೇಷಗಳನ್ನು ಜಗತ್ತಿಗೆ ಪರಿಚಯಿಸಿದ ಸಂಶೋಧಕರು ಅವರು. ಇನ್ನು ಅನೇಕ ಪ್ರಮುಖ ಪ್ರಾಚೀನ ಪುರಾತತ್ವತಾಣಗಳು,ಸ್ಮಾರಕಗಳು,ಮತ್ತು ದೇಗುಲಗಳು ಬೆಳಕಿಗೆ ಬರಲು ಮತ್ತು ಅವುಗಳ ಸಂರಕ್ಷಣೆಗೆ ಕಾರಣರು.
ಡಾ. ಎಸ್‌ಆರ್‌ರಾವ್‌


ಕಳೆದವಾರ ಕಾಲವಶರಾದ ಡಾ.ಎಸ್‌ ಆರ್‌ ರಾವ್‌ ಅವರು ಅಪ್ಪಟ ಕನ್ನಡಿಗರು. ಅವರ ಜನನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ.ತಂದೆ ಹುಚ್ಚೂರಾಯರು ತಾಯಿ ಕಮಲಮ್ಮ. ಅವರು ಹುಟ್ಟಿದ್ದು ೧೯೨೨ರಲ್ಲಿ .ಅವರ ಪೂರ್ಣ ಹೆಸರು ಶಿಕಾರಿಪುರ ರಂಗನಾಥ ರಾವ್‌ . ವಿದ್ವತ್‌ಲೋಕದಲ್ಲಿ ಎಸ್‌.ಆರ್‌.ರಾವ್‌ ಎಂದೆ ಚಿರಪರಿಚಿತರು. ಅವರದು ತುಂಬು ಕುಟುಂಬ ಏಳುಜನ ಮಕ್ಕಳಲ್ಲಿ ಇವರು ಆರನೆಯವರು. ತಂದೆ ಹಳ್ಳಿಯೊಂದರ ಶಾನುಭೋಗರು.ಬಾಲ್ಯದಲ್ಲಿ ಬಡತನವನ್ನೇ ಹಾಸಿಹೊದಿದ್ದರು.ಆದರೆ ತಾಯಿ, ತಂದೆಯರ  ಶಿಸ್ತು ಮತ್ತು ಜ್ಞಾನದಾಹವೆ ಅವರು ಶಿಕ್ಷಣದಲ್ಲಿ ಮುಂದುವರಿಯಲು ಪ್ರೇರಣೆಯಾಯಿತು..ಇವರ ಪ್ರಾಥಮಿಕ ಶಿಕ್ಷಣ ಶಿವಮೊಗ್ಗದಲ್ಲಿ. ನಂತರದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ. ಆಗ ಮೈಸೂರಿನ ಅನಾಥಾಲಯದಲ್ಲಿ ಅವರ ವಾಸ. ಬೀದಿಯ ದೀಪದ ಕೆಳಗೆ ಓದು. ಮನೆ ಮನೆಯಲೆದು ಕಾಲೇಜುಶುಲ್ಕ ಕಟ್ಟಿದರು. ಅದರಿಂದ ಅವರು ಹಠ ಹರಳುಗಟ್ಟಿತು. ಶ್ರದ್ಧೆಯಿಂದ ಅಭ್ಯಾಸ ಮಾಡಿದರು. . ಪರಿಣಾಮವಾಗಿ  ಬಿ.ಎ. ಆನರ್ಸ  ಪದವಿಯಲ್ಲಿ ಚಿನ್ನದ ಪದಕ ಪಡೆದ ಅತ್ಯತ್ತಮ ವಿದ್ಯಾರ್ಥಿ ಎನಿಸಿದರು. ನಾಗಪುರ ವಿಶ್ವ ವಿದ್ಯಾಲಯದಿಂದ ಎಂ. ಎ ಪದವಿ ಪಡೆದರು ನಂತರ  ಅವರದು ಹೋದ ಹಾದಿಯೇ  ರಾಜ ವೀಧಿಯಾಯಿತು. ’ಚಿಂದಿಯಿಂದ ಚಿನಾಂಬರ’ ಎಂಬ ಮಾತಿಗೆ  ಅವರೇ ಜ್ವಲಂತ ಉದಾಹರಣೆಯಾದರು.
ಸಂಜೆಯಲ್ಲಿ ದ್ವಾರಕಾ

. ಅವರು ೧೯೪೮ರಲ್ಲಿ  ಹಿಂದಿನ ಬರೋಡಾ ಸಂಸ್ಥಾನದಲ್ಲಿ ಪುರಾತತ್ವ ಇಲಾಖೆಯ ಸಹಾಯಕನಿರ್ದೇಶಕರಾಗಿ ಕೆಲಸಕ್ಕೆ ಸೇರಿದರು.ಬರೋಡ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನವಾದಾಗ ಭಾರತಸರ್ಕಾರದ ಪುರಾತತ್ವ ಇಲಾಖೆಯ ಉಪನಿರ್ದೇಶಕರಾದರು . ಇಲಾಖೆಯಲ್ಲಿ ೧೯೮೦ರವರೆಗೆ ವಿವಿಧ ಹುದ್ದೆ ನಿರ್ವಹಿಸಿ ೧೯೮೦ ರಲ್ಲಿ ಉಪಮಹಾನಿರ್ದೇಶಕರಾಗಿ ನಿವೃತ್ತರಾದರು.ನಿವೃತ್ತಿಯನಂತರ ಅವರ ಸೇವೆಗೆ ಇನ್ನೂ ಹೆಚ್ಚು ಮೆರಗು ಬಂತು ೧೯೮೧ ರಿಂದ ೧೯೯೪ ರವರೆಗೆ ಎಮೆರೈಟಿಸ್‌ ವಿಜ್ಞಾನಿಯಾಗಿ ಗೋವಾದ ನ್ಯಾಷನಲ್‌ ಇನಸ್ಟಿಟ್ಯೂಟ್‌  ಅಫ್ ಓಷನೋಗ್ರಫಿಯಲ್ಲಿಸೇವೆ ಸಲ್ಲಿಸಿದರು  ಅವರು . ಆಗ್ರಾ, ನಾಗಪುರ, ಔರಂಗಾಬಾದ್‌ ಮತ್ತು ಬೆಂಗಳೂರು ವೃತ್ತದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿದರು.ಅವರ ಸೇವಾವಧಿಯಲ್ಲಿ ರಂಗಪುರ,ಅಮ್ರೇಲಿ,ದ್ವಾರಕಾ,ಹನೂರು, ಐಹೊಳೆ, ಕಾವೇರಿಪಟ್ಟಣಂ ಮೊದಲಾದ ಪ್ರದೇಶಗಳಲ್ಲಿ ಉತ್ಖನನ ನಡೆಸಿದರು..ಅವರ ಪ್ರಮುಖ ಅನ್ವೇಷಣೆ ಎಂದರೆ ಐತಿಹಾಸಿಕ ಬಂದರು ನಗರ ಲೋಥಾಲ್‌ಶೋಧ
ಚಿತ್ರ ಲಿಪಿ


. ಸ್ವಾತಂತ್ರಾನಂತರ ಸಿಂಧೂಕಣಿವೆ ನಾಗರೀಕತೆಯ ಕೇಂದ್ರಗಳಾದ ಹರಪ್ಪಾ ಮತ್ತು ಮೆಹಂಜದಾರೋ ಪಾಕಿಸ್ತಾನದ ಪಾಲಾದವು.ಭಾರತದಲ್ಲಿನ ಸಿಂಧೂಕಣಿವೆಯ ನಾಗರೀಕತೆಯ ಸ್ಥಳಗಳಲ್ಲಿಗಳ ಶೋಧಕ್ಕಾಗಿ ಅವರು ನಡೆಸಿದ ಉತ್ಖನನದಿಂದ ಹಲವಾರು ಪ್ರಾಚೀನ ತಾಣಗಳು ಬೆಳಕಿಗೆ ಬಂದವು. ಲೋಥಾಲ್ ನ ಸಂಶೋಧನೆಯು ೧೯೫೨ರಲ್ಲಿ ಭಾರತೀಯ ಇತಿಹಾಸಕ್ಕೆ ಹೊಸ ತಿರುವು ನೀಡಿತು. ಲೋಥಾಲ್‌ ಜಗತ್ತಿನಲ್ಲೇ ಪ್ರಥಮ ಸುಸಜ್ಜಿತ ಬಂದರು ಪಟ್ಟಣವಾಗಿತ್ತು  ಎಂಬ ಅಂಶ ಅವರ  ಪರಿಶ್ರಮದಿಂದ ಬೆಳಕಿಗೆ ಬಂದಿತು.ಅದರಿಂದ ಅವರ ಹೆಸರು ಅಂತರಾಷ್ಟ್ರೀಯ ವಲಯದಲ್ಲಿ ಬೆಳಗಿತು  ಅವರು ಭಾರತದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿನ ಹಲವಾರು ಪ್ರದೇಶಗಳಲ್ಲಿ  ತಂಡದೊಡನೆ  ಉತ್ಖನನ ನಡೆಸಿರುವರು.ಐತಿಹಾಸಿಕ ಸ್ಮಾರಕಗಳ .ಹಲವಾರು ಕೋಟೆಗಳ ಸುಸ್ಥಿತಿಗೆಗೆ       ಅವರು ಕಾರಣ. ಜಗತ್ಪ್ರಸಿದ್ಧ ತಾಜ್‌ಮಹಲ್‌ , ಐಹೊಳೆ , ಪಟ್ಟದ ಕಲ್‌ ,ಬಿಜಾಪುರದ ಸ್ಮಾರಕಗಳ ಸಂರಕ್ಷಣೆಯಲ್ಲೂ ಅವರ ಪಾಲು ಇದೆ.ಅವರು ಡಾ. ರಾವ್‌ ಅವರು ಉತ್ತರ ಗುಜರಾತಿನ ಸಿದ್ಧುಪುರದಲ್ಲಿನ ರುದ್ರಮಹಲ್‌ ಕ್ಷೇತ್ರದಲ್ಲಿ ಸ್ಥಳೀಯ ಮುಸ್ಲಿಮರ ತೀವ್ರ ಪ್ರತಿರೋಧದ ನಡುವೇಯೂ ಉತ್ಖನನ ನಡೆಸಿ ಪರಿವರ್ತಿತವಾದ ಮಸೀದೆಯ ಅಂಗಳದಲ್ಲಿ ಮಂದಿರೊಂದನ್ನು ಪತ್ತೆ ಹಚ್ಚಿದರು. ಹೊಸಪೇಟೆ ಸಮೀಪದ ಹಂಪೆ ಮತ್ತು ಫತೇಪುರ ಸಿಕ್ರಿಗಳಲ್ಲಿನ ಉತ್ಖನನಕ್ಕೂ ಅವರು ಮಾರ್ಗದರ್ಶನ ನೀಡಿದರು
ಅವರ ಮಹಾನ್‌ಸಂಶೋಧನೆಯಾದದ್ದು ೧೯೭೨ ರಲ್ಲಿ .  ಸಿಂಧೂ ಕಣಿವೆ ನಾಗರೀಕತೆಯು ಕೊನೆಯಾದದ್ದು ಆರ್ಯರ ದಾಳಿಯಿಂದಲ್ಲ, ಅಭೂತಪೂರ್ವ ಪ್ರವಾಹದಿಂದ  ಎಂದು ಪುರಾವೆ ಒದಗಿಸಿದರು.
ಅವರ “ ಲೋಥಲ್‌ ಮತ್ತು ಸಿಂಧೂ ಕಣಿವೆ ನಾಗರೀಕತೆ” ಎಂಬ ಸಂಪ್ರಬಂಧಕ್ಕೆ ನಾಗಪುರ ವಿಶ್ವವಿದ್ಯಾಲಯವು ಡಿಲಿಟ್‌ಪ್ರಶಸ್ತಿ ಪ್ರದಾನ ಮಾಡಿತು  ಅವರಿಗೆ   ಮೈಸೂರು, ಕುವೆಂಪು, ಮತ್ತು ಕನ್ನಡ ವಿಶ್ವವಿದ್ಯಾಲಯಗಳೂ   ಗೌರವ ಡಿಲಿಟ್‌ಪ್ರಶಸ್ತಿ ನೀಡಿ ತಮ್ಮ ಗೌರವ ಹೆಚ್ಚಿಸಿಕೊಂಡವು.
ಅವರ   ಕೆಲಸ  ಮತ್ತು ಕಲಿಕೆ ಜೊತಜೊತೆಯಲ್ಲಿಯೇ  ಸಾಗಿದವು. ಪ್ರಮುಖ ಪುರಾತತ್ವ ತಜ್ಞರಾದ ವೀಲರ್‌ ಅವರಿಂದ ವೈಜ್ಞಾನಿಕ ಉತ್ಖನನ ಕಲಿತರು.ಪ್ಯಾರಿಸ್‌ ಮತ್ತು ಇಂಗ್ಲೇಂಡಿನ ಹೆಸರಾಂತ ಪುರಾತತ್ವ ತಜ್ಞರ ಜೊತೆ ಕ್ಷೇತ್ರಾನುಭವ ಮಾರ್ಗದರ್ಶನ ಪಡೆದರು. ಅಮರೇಲಿ, ರಂಗಾಪುರ್‌( ಗುಜರಾತ್,ಕನ್ಹೇರಿ ( ಮಹಾರಾಷ್ಟ್ರ)ಚಂದ್ರಪುರ್(ಗೋವಾ) ಮೊದಲಾದ ಸಿಂಧೂ ಕಣಿವೆಯ ಪುರಾತ್ತತ್ವ ತಾಣಗಳನ್ನು ಬೆಳಕಿಗೆ ತಂದರು.  ಕಂಚಿನ ಯುಗದ ತಾಣಗಳಾದ ತೇವೋರ್( ಮಹಾರಾಷ್ಟ್ರ)ಭಾಗಟ್ರಾವ್‌( ಗುಜರಾತ್), ನವಶಿಲಾಯುಗದ ತಾಣ ಪೈಯಾಂಪಲ್ಲಿ,ಮತ್ತು  ಐಹೊಳೆ, ಕಾವೇರಿಪಟ್ಣಂ ಗಳ ಪುರಾತತತ್ವ ತಾಣಗಳು ದೊರೆಯಲು ಅವರೇ ಕಾರಣರು.

ಅವರದು ಇಚ್ಛೆಯರಿತು ನಡೆವ ಸತಿ ಮತ್ತು ಮುಚ್ಚಟೆಯ ಮೂರು ಮಕ್ಕಳ ಸಂಸಾರ (ಗೋಪಾಲ್, ಶಕುಂತಲಾ ಮತ್ತು ನಳಿನಿ ) ಅವರು ತಮ್ಮ ಜೀವನದ ಬಹುಭಾಗವನ್ನು ಪ್ರವಾಸ ಮತ್ತು ಕ್ಷೇತ್ರಕಾರ್ಯದಲ್ಲೇ ಕಳೆದರೂ ಹೊಂದಿಕೊಂಡು ಹೋಗುವ ಹೆಂಡತಿ ಶ್ರೀ ಮತಿ ಕಮಲ ಅವೆ ಸಾಧನೆಯ ಬೆನ್ನೆಲುಬು.. ಅವರ ಮಗಳು ಶ್ರೀಮತಿ ನಳಿನ ಹೇಳುವ ಹಾಗೆ “ನಮ್ಮ ತಂದೆ ವಿಶ್ವ ಸಂಚಾರಿ,ಲಂಡನ್, ರೋಮ್, ಪ್ಯಾರಿಸ್‌ ನ್ಯೂಯಾರ್ಕ, ವಾಷಿಂಗ್‌ಟನ್‌, ಈಜಿಪ್ಟ್‌ ಇರಾಕ್‌,  ಮಾಸ್ಕೋ ಟೊಕಿಯೋ, ಪೀಕಿಂಗ್‌ ಮೊದಲಾದ ನಗರಗಳ ವಿಶ್ವವಿದ್ಯಾಲಯಗಳಲ್ಲಿ, ಮ್ಯೂಜಿಯಂಗಳಲ್ಲಿ ಅಂತರಾಷ್ಟ್ರೀಯ ಸಮಾವೇಶದಲ್ಲಿ ಭಾಷಣ ನೀಡುವಾಗ ಮನೆಯ ನೆನಪೇ ಇರುತ್ತಿರಲಿಲ್ಲ. ಅನೇಕ ಸಲ ಅಮ್ಮನಿಗೆ ಅವರು ಎಲ್ಲಿರುವರು ಎಂದೇ ಗೊತ್ತಾಗುತ್ತಿರಲಿಲ್ಲ.ಅಷ್ಟೊಂದು ಕಾರ್ಯದ ಒತ್ತಡ ಅಚರಿಗೆ. ಆದರೆ ಮನೆಯಲ್ಲಿದ್ದಾಗ ಮಾತ್ರ ಬರಹದ ನಡುವೆ ಬಿಡುವು ಮಾಡಿಕೊಂಡು, ನಮಗೆ ಸಂಸ್ಕೃತ ಕಲಿಸುವರು. ಅಥವ ತಮ್ಮ  ಕ್ಷೇತ್ರಕಾರ್ಯದ ಅನುಭವ ಹಂಚಿಕೊಳ್ಳುವರು”.   ಅದರ ಫಲ ಮೂವರೂ ಮಕ್ಕಳೂ ಸುಶಿಕ್ಷಿತರಾದರು. . ಒಬ್ಬಮಗಳು ತಂದೆಯ ಹಾದಿಯಲ್ಲಿಯೇ ಮುನ್ನೆಡೆದಿದ್ದಾಳೆ.ಹೀಗೆ ಬಿಡುವಿಲ್ಲದ ಕೆಲಸದ ನಡುವೆಯೂ ನೆಮ್ಮದಿಯಿಂದ  ಜೀವನ ನಡೆಸಿದರು. ಅವರು ದೇಶಾದ್ಯಂತ ಭೂಗರ್ಭದಲ್ಲಿ ಅಡಗಿದ ಐತಿಹಾಸಿಕ ಸತ್ಯಗಳ ಶೋಧನೆಗೆ,ಜಗತ್ತಿನಾದ್ಯಂತ ಹೊಸ ವಿಷಯ ಕಲಿಯಲು, ಕಲಿಸಲು  ತಾವು ಶೋಧಿಸಿರುವುದನ್ನು ತಜ್ಞರ ಗಮನಕ್ಕೆ ತರಲು ಸಂಚರಿಸಿದರು.ವಿಶೇಷವಾಗಿ ಸಮುದ್ರ ಪುರಾತತ್ವ  ಭಾರತದಲ್ಲಿ ಅವರ ನನಸಾದ ಕನಸಾಗಿತ್ತು..
ಅವರ ಮತ್ತೊಂದು ಮಹತ್ವದ  ಸಂಶೋಧನೆ ಸಿಂದೂ ಲಿಪಿಯ ನಿಗೂಢತೆ ಬಿಡಿಸಿದ್ದು.  ಸಿಂಧೂ ಕಣಿವೆಯ ಪುರಾತತ್ವ ತಾಣಗಳಾದ ಹರಪ್ಪಾ ಮಹಂಜದಾರೋಗಳಲ್ಲಿ ದೊರೆತ ಭಾಷೆಯ ಲಿಪಿಗಳು ಇಂಡೋ ಯುರೋಪಿಯನ್‌ ಅಲ್ಲ , ಅವು  ಖಚಿತವಾಗಿ ಇಂಡೋ ಆರ್ಯನ್‌ ಎಂದು ಸಿದ್ಧ ಮಾಡಿದರು ಕ್ರಿ.. ಪೂ. ೧೭೦೦ರಲ್ಲಿ ಚಿತ್ರಲಿಪಿಯಾಗಿದ್ದುದು ಕ್ರಮೇಣ ವರ್ಣಲಿಪಿಯಾಗಿ ವಿಕಾಸ ವಾದುದನ್ನು ತಮ್ಮ ಹೊಸ ಹೊಸ ಉತ್ಖನನದ ತಾಣಗಳಲ್ಲಿ ದೊರೆತ ವಸ್ತುಗಳ  ಪುರಾವೆ  ಒದಗಿಸಿದರು.ಈ ಕಾರ್ಯಕ್ಕಾಗಿ ಅವರಿಗೆ ಇಂದಿರಾಗಾಂಧಿ ಫೆಲೋ ಷಿಪ್‌ ದೊರೆಯಿತು. ಸುಮಾರು ಮೂವತ್ತು ವರ್ಷದ ಶ್ರಮದಿಂದ ಸಿಂಧೂ ಕಣಿವೆಯಲ್ಲಿ ದೊರೆತ ೯೦೦ಮುದ್ರೆಗಳನ್ನು ಓದಲು ಸಫಲರಾದರು
 ರಾವ್‌ ಅವರು 1992  ರಲ್ಲಿ ಸಿಂಧೂ ಕಣಿವೆ ನಾಗರೀಕತೆಯ ಕಾಲದ ಲಿಪಿಗಳ ರಹಸ್ಯವನ್ನು ಬಯಲು ಮಾಡುವ ಪ್ರಯತ್ನದಲ್ಲಿ ಯಶಗಳಿಸಿದರು ಎನ್ನಲಾಗಿದೆ.  ಹರಪ್ಪ ಲಿಪಿಗಳು ಚಿಕ್ಕದಾದ ಸಂಕೇತಗಳ ಸರಪಣಿಗಳಾಗಿವೆ. ಈ ವಿವರಣೆಯು ಇನ್ನೂ ವಿವಾದದಿಂದ ಹೊರತಾಗಿಲ್ಲ.ಇವು ಅಕ್ಷರಗಳ ಸಂಕೇತಗಳಾಗಿವೆ ವಿನಃ, ಅವುಗಳ ಭಾಷೆಯ ಸ್ವರೂಪ ಕುರಿತಾದ ಮಾಹಿತಿ ಪೂರ್ಣವಾಗಿ ದೊರೆತಿಲ್ಲ ಎನ್ನಲಾಗಿದೆ.. ಹರಪ್ಪದಲ್ಲಿ ೧೮೭೩ ರಲ್ಲಿ ಮೊದಲಬಾರಿಗೆ ಮದ್ರೆಗಳು ದೊರೆತವು.ಈವರೆಗೆ ಬೇರೆ ಬೇರೆ ತಾಣಗಳಲ್ಲಿ ಸಿಕ್ಕಸುಮಾರು ೪೦೦೦ ಮುದ್ರೆಗಳ ಪಟ್ಟಿ  ಮಾಡಲಾಗಿದೆ. ಅದರಲ್ಲಿ ೩೭೦೦ ಮುದ್ರೆಗಳು ಮತ್ತು ೪೧೭ವಿಶಿಷ್ಟ ಸಂಕೇತಗಳು ಇವೆ. ಆ ಬರಹದಲ್ಲಿ ಸರಾಸರಿ ೫ ಸಂಕೇತಗಳುಇವೆ. ಅತಿ ಉದ್ದವಾದುದು ೧೭ಸಂಕೇತಗಳನ್ನು ಹೊಂದಿದೆ. ಭಾಷೆ  ಅಪರಿಚಿತವಾದರೂ ಭಾಗಶಃ ಓದಬಹುದು ಎನ್ನಲಾಗಿದೆ
ಸಿಂಧೂ ಕಣಿವೆ ಲಿಪಿ

. ಅವರ ವಾದವನ್ನು ಹೆಸರಾಂತ ಪುರಾತತ್ವ ತಜ್ಞರಾದ ಪ್ರೊ. ಗ್ರುಮಂಡ್‌, ಕೇಂಬ್ರಡ್ಜ್  ಆಲಫಬೆಟ್‌ ಮ್ಯೂಜಿಯಂ ನ ನಿರ್ದೇಶಕ ಡೈರಿಂಗರ್ಹಾಸ್‌ , ಪಿ.ಬಿ ದೇಸಾಯಿ ಮ್ಯೂನಿಚ್‌ವಿಶ್ವವಿದ್ಯಾಲಯದ ಪ್ರೊ. ಎ. ಕಮ್ಮೆನಭುರ್‌ ಸಹಮತ ಸೂಚಿಸಿದ್ದಾರೆ.ಆದರೆ ಅದು ಇಂಡೋ ಯುರೋಪಿಯನ್‌ಗೆ ಅತಿ ಹತ್ತಿರವಾದ ಇಂಡೋ ಅರ್ಯನ್‌  ಭಾಷೆಯಾಗಿದೆ  ಎಂಬ ವಾದವೂ ಇದೆ.ಇದನ್ನು ಲಿಪಿ ಶಾಸ್ತ್ರದಲ್ಲಿ  ದಿಶೆ ಬದಲಿಸುವ ಶತಮಾನದ ಶೋಧ ಎಂದು ಹೇಳಲಾಗುವುದು..
ಹರಪ್ಪ ಭಾಷೆಯ ಅನಾವರಣವೂ ರಾಜಕೀಯ ಧ್ವನಿಯನ್ನೂ ಹೊಂದಿದೆ,ದ್ರಾವಿಡ ಮೂಲವೆಂದು ದಕ್ಷಿಣದ ಭಾರತದವರು  ಮತ್ತು ಇಂಡೋ ಆರ್ಯನ್‌ ಮೂಲದ್ದು ಎಂದು ಉತ್ತರ ಭಾರತದ ಹಿಂದೂ ಹಿತಾಸಕ್ತರು ವಾದಿಸುವರು. ಡಾ.ರಾವ್‌ ಫೊನಿಷಿಯನ್‌ ವರ್ಣಗಳೊಂದಿಗೆ ಹೋಲಿಸಿ ಅವುಗಳ ದ್ವನಿ ನಿಗದಿಮಾಡಿದಾಗ  ಏಕ,ಟ್ರ ಚತುಸ್‌,ಪೆಂಟ , ಹಪ್ತ, ,ಸಪ್ತ , ದಸ ,ದ್ವಾದಸ ಮತ್ತು ಶತ ಮೊದಲಾದ ಸಂಖ್ಯೆಗಳನ್ನು ಗುರುತಿಸಲಾಯಿತು(೧,೩ ೪,೫,೭,೧೦,೧೨,೧೦)
ಮುಖ್ಯವಾಹಿನಿಯ ವಿದ್ವಾಂಸರು   ಅವರ ಹೇಳಿಕೆಯ ತತ್ವಶಃ ಒಪ್ಪಿದರೂ, ಅದು ಸಂಪೂರ್ಣ ಭಾಷೆ  ಎಂದು ಅನೇಕರು ಒಪ್ಪಿಲ್ಲ    ಫ್ರೊ.ಜಾನ್‌  ಇಮಿಚಿನರ್‌  ಪ್ರಕಾರ, “ಈ ವಿವರಣೆಯು ಬಹುತೇಕ ವ್ಯಕ್ತಿ ನಿಷ್ಠವಾಗಿದೆ.ಆದರೆ ಡಾ.ರಾವ್‌ ವಿವರಣೆ ಈಗ ನೀಡಿರುವ ಎಲ್ಲಕ್ಕಿಂತ ಉತ್ತಮ”  ಎನ್ನಲಾಗಿದೆ
ಸಿಂಧೂಲಿಪಿಗಳ ಮ್ಯೂಜಿಯಂ  ಒಂದನ್ನು ತಿರುಪತಿಯಲ್ಲಿ ಸ್ಥಾಪಿಸಲಾಗಿದೆ.
ಅವರ ಸೇವೆಯ ಕೊನೆಯ ಹಂತದಲ್ಲಿ ಶ್ರೀಕೃಷ್ಣನಿಂದ ನಿರ್ಮಿತವಾದ ದ್ವಾರಕಾ ನಗರವನ್ನು ಸಾಗರ ತಳದ ಉತ್ಖನನ ನಡೆಸಿ ಶೋಧಿಸಿ ಹೊಸ ಹಾದಿ ತೋರಿದರು.
ಅದರಿಂದ ಅವರಿಗೆ ವೈಯುಕ್ತಿಕಸಾಧನೆಗಾಗಿ ವರ್ಲಡ್‌ ಟ್ರಸ್ಟ ಪ್ರಶಸ್ತಿ ದೊರೆಯಿತು. ಗೋವಾದ ರಾಷ್ಟ್ರೀಯ ಸಮುದ್ರಅಧ್ಯಯನ ಸಂಸ್ಥೆಗೆ ವಿಶೇಷ ಸಲಹೆಗಾರ ಮತ್ತುವಿಜ್ಞಾನಿಯಾಗಿ೧೯೮೧ ರಿಂದ ೧೫ ವರ್ಷ ಕಾರ್ಯನಿರ್ವಹಿಸಿದರು. ಆಗಲೇ ಸಮುದ್ರತಳದ ಪುರಾತತ್ವ  ಎಂಬ ನವೀನ ಶಿಸ್ತನ್ನು ಹುಟ್ಟಿಹಾಕಿ, ಅರೇಬಿಯನ್‌ಸಮುದ್ರದ ಉತ್ಖನನ ಮಾಡಿ ದ್ವಾರಕಾ ಮತ್ತು ಬಂಗಾಕೊಲ್ಲಿಯ ಉತ್ಖನನದಿಂದ ಪುಂಪುಹಾರ್ ಅವಶೇಷಗಳನ್ನು ಶೋದಿಸಿದರು.
ಬೆಟ್ ದ್ವಾರಕಾ
ತಮಿಳುನಾಡಿ ಇತಿಹಾಸಪ್ರಸಿದ್ಧ ಪಟ್ಟಣ ಪುಂಪುಹಾರ ಅನ್ನು ಸಾಗರದ ಸವಕಳಿಯಿಂದಾಗಿ ಖಾಲಿ ಮಾಡ ಬೇಕಾಯಿತು ಪೂರ್ವ ತೀರವು ಅಬ್ಬರದ ಅಲೆಗಳಿಂದ ಕೂಡಿದೆ. ಪೂಂಪುಹಾರದಲ್ಲಿ ಉತ್ಖನನದಿಂದ  ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಉಲ್ಲೇಖಿತವಾದ ಇಟ್ಟಿಗೆಯ ಗೋಡೆಯು ದೊರೆತಿದಿದೆ
ಪಶ್ಚಿಮತೀರದ ಗುಜರಾತಿನ ಕಚ್‌ ಹತ್ತಿರದ ಉತ್ಖನನದಿಂದ ಸಾಗರದ ಅಡಿಯಲ್ಲಿ  ಸುಮಾರು ಏಳು ಚದರಮೈಲುಪ್ರದೇಶದ ಪಟ್ಟಣದ ಅವಶೇಷ ದೊರಕಿದೆ.ಅದನ್ನೇ ಪುರಾಣ ಪ್ರಶಿದ್ದ  ದ್ವಾರಕಾ ನಗರ ಎಂದು ಗುರುತಿಸಲಾಗಿದೆ. ಪೌರಾಣಿಕವಿವರಣೆಗಳುತಾಳೆ ಹೊಂದಿತ್ತವೆ.
ಬೆಟ್‌ದ್ವಾರಕಾದಲ್ಲಿ ಶ್ರೀ ಕೃಷ್ಣನ ಅರಮನೆ ಇತ್ತೆಂದು ಹೇಳಲಾಗಿದೆ.. ಆದರೆ ಬಹಳಷ್ಟುಭಾಗ ನೀರಡಿಲ್ಲಿದೆ.ಅದರ ಒಂದುಭಾಗವನ್ನು ಪುನರ್‌ನವೀಕರಿಸಲಾಗುತ್ತಿದೆ. ಅಲ್ಲಿಗೆ ಪ್ರವಾಸಿಗಳು ಹೋಗಬಹುದು.ಅದು ಒಖಾ ಬಂದರಿನ ಹತ್ತಿರದ ಒಂದುದ್ವೀಪ.ಪ್ರಧಾನ ದೇವಾಲಯದಿಂದ  ೨೫-೩೦ ಮೈಲುದೂರದಲ್ಲಿದೆ.ಮುಖ್ಯ ದೇಗುಲದಲ್ಲಿ ಫೋಟೊ ತೆಗೆಯಲುಅವಕಾಶವಿಲ್ಲ.ಬೆಟ್‌ದ್ವಾರಕಾದಲ್ಲಿ ಸುಧಾಮನು ಅವಲಕ್ಕಿನೀಡಿದನೆಂದು ಐತಿಹ್ಯ.ಆಪ್ರದೇಶದಲ್ಲಿರುವ ೩೦೦ಮನೆಗಳಲ್ಲಿ ಹಿಂದೂಗಳ ಸಂಖ್ಯೆ ಬಹುಕಡಿಮೆ .ಅಲ್ಲಿಗೆ ಹೋಗುವ ದಾರಿಯಲ್ಲಿ ಗೋಪಿತಾಲಬ್‌ ಇದೆಅಲ್ಲಿ ಮೂಲ ಗೋಪಿಚಂದನ ದೊರೆಯುವುದು..
ಸಾಗರದಡಿಯಲ್ಲಿನ  ಒಂದು ಭಾಗದಲ್ಲಿ  ೫೬೦ಮೀ ಉದ್ದ ಸುಸ್ಥಿತಿಯಲ್ಲಿರುವ ಗೋಡೆ ಇದೆ.ಬಂದರು,, ಉಗ್ರಾಣ, ಮತ್ತು ಹಡಗುಗಳು ಅಲೆಯ ಹೊಡೆತಕ್ಕೆ ತೇಲಿ ಹೋಗದಂತೆ ತಡೆಯಲು ಭಾರವಾದ ಲಂಗರುಗಳು ದೊರಕಿವೆ  ಅವುಗಳಿಗೆ .ಮೂರು ರಂದ್ರಗಳಿವೆ. ಸುಮಾರು ನೂರುಕೆಜಿಗೂ ಹೆಚ್ಚು
ತೂಗುವ ೧೫೦-೨೫೦ ಕೆಜಿ ತೂಕದವು  ೫೦ಕಲ್ಲುಗಳು ಸಿಕ್ಕಿವೆ. ಇನ್ನೂ  ನೂರಾರು ನೀರಲ್ಲಿ ಮುಳುಗಡೆಯಾಗಿರಬಹುದು. ದ್ವಾರಕೆಯ ಶೋಧವು ಒಂದು ಆಕಸ್ಮಿಕ. ಸಾಗರತಡಿಯಲ್ಲಿನ ಪುರಾತನ ಸ್ಮಾರಕ ಒಂದನ್ನು ಮರೆ ಮಾಡಿದ್ದ ಆಧುನಿಕ ಕಟ್ಟಡವನ್ನು ಕೆಡವಿದಾಗ, ಅದರಡಿಯಲ್ಲಿ ದೇವಾಲಯವು ಕಂಡುಬಂದಿತು. ಅದರಿಂದ  ಹೊರಟ ಮೆಟ್ಟಿಲುಗಳುಸಾಗರದ ತಡಿಯವರೆಗ ಇದ್ದವು.ಮತ್ತು ಬಂದರು ಪ್ರದೇಶದಲ್ಲೂ ಗೋಚರವಾದವು ಹಾಗೆಯೇ ಮುಂದುವರಿದಾಗ ಭಾರತದ ಪುರಾತತ್ವ ಇತಿಹಾಸದಲ್ಲೇ ಅತ್ಯಂತ ರೋಚಕ ಸಂಶೋಧನೆಯಾದ ಮುಳುಗಡೆಯಾದ ನಗರವೇ ಸಿಕ್ಕಿತು.ಅಲ್ಲಿ ದೊರಕಿದ ಮಡಕೆಯ ಚೂರುಗಳು ಕ್ರಿ. ಪೂ,೧೩೫೪ರವೆಂದು ಗುರುತಿಸಲಾಗಿದೆ.ಅಲ್ಲಿದೊರೆತ ವಸ್ತುಗಳ ಪೂರ್ಣ ಅಧ್ಯಯನ ಇನ್ನೂ ಆಗಬೇಕಿದೆ
ಸಮುದ್ರಶೋಧ
ಜಲಾಂರ್ತಗತ ಪರಂಪರೆ ಯುನೆಸ್ಕೋದ ಸಮಾವೇಶದಲ್ಲಿ ಭಾರತದ ಪ್ರತಿನಿಧಿಯಾಗಿ ಮೂರವರ್ಷದ ಅವಧಿಯ ಮೂರುಬಾರಿಪ್ರಾತಿನಿಧ್ಯ ಪಡೆದರು.  ಸಮಾವೇಶದ  ಚಾರ್ಟರ್‌ನ ಉದ್ದೇಶ, “ ಜಲಾಂರ್ತಗತ  ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಿ, ಪಟ್ಟಿಮಾಡಿ ,ಸಂರಕ್ಷಿಸುವುದು”ಅದಕ್ಕೆ ಕೇವಲ ಆರು ರಾಷ್ಟ್ರಗಳು ಸಹಿಹಾವೆ ಎನ್ನಲಾಗಿದೆ,. ಭಾರತಲ್ಲಿ ೭೫೦೦ ಕಿಮಿ.ತೀರವಿದೆ. ಮತ್ತು ಅತ್ಯಧ್ಭುತವಾದ ದ್ವಾರಕಾನಗರದ ಅವಶೇಷಗಳು ಸಾಗರದಡಿಯಲ್ಲಿ ಸಿಕ್ಕಿವೆ. ಆದರೆ ಭಾರತ ಇನ್ನೂ ಸಹಿ ಹಾಕಬೇಕಿದೆ

 ಈ ಅನ್ವೇಣೆಗಾಗಿ ಗುಪ್ತ ಫೌಂಡೇಷನ್‌ ಪ್ರಶಸ್ತಿ, ವರ್ಲ್ಡ ಷಿಪ್‌ ಪ್ರಶಸ್ತಿ ಪ್ರದಾನಮಾಡಲಾಯಿತುಅವರಿಗೆ ರಾಜ್ಯ , ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳ ಮಹಾಪೂರವೇ ಹಿರಿದುಬಂದಿದೆ.

ಅವರು ೧೯೭೩ ರಿಂದ ಹಿಡಿದು ೨೦೧೧ ರವರೆಗೆ  ಪುರಾತತ್ವ , ಶಿಲ್ಪಕಲೆ,ವಾಸ್ತುಶಿಲ್ಪಗಳವಿಷಯದಲ್ಲಿ “ರಿಮಿನಿಸೆನ್ಸ್‌ ಅಫ್ ಎನ ಆರ್ಚಿಯಾಲಜಿಸ್ಟ್‌” ಎಂಬ ಅವರ ಆತ್ಮ ಕಥನವೂ ಸೇರಿದಂತೆ  ೨೧ ಕೃತಿಗಳನ್ನು ರಚಿಸಿದ್ದಾರೆ.ಅವೆಲ್ಲವೂ ಪುರಾತತ್ವ ಶಾಸ್ತ್ರದಲ್ಲಿನ ಪರಾಮರ್ಶನ ಗ್ರಂಥಗಳೇ.. ಅವರು ಭಾಗವಹಿಸಿದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮಾವೇಶ, ಸಮ್ಮೇಳನಗಳು ಅನೇಕ..ಅವರ ಸಂಪ್ರಬಂಧ ರಚನೆ , ಮಂಡನೆ ಮತ್ತು ಪ್ರಕಟನೆಯು ೧೯೫೭ರಿಂದ ಪ್ರಾರಂಭವಾಗಿ ೨೦೦೪ ರವರೆಗ ಸತತವಾಗಿ ಸಾಗಿಬಂದಿವೆ.ಸುಮಾರು ಐವತ್ತಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ..  ಭಾರತದಲ್ಲಿ ಮೆರೀನ್‌ ಅರ್ಕಿಯಾಲಜಿ ಯಲ್ಲಿ  ಅವರದೇ ಅಂತಿಮ ಅಭಿಪ್ರಾಯ. ಆಷ್ಟ್ರೇಲಿಯಾ, ಅಮೆರಿಕಾ, ಬ್ರಿಟನ್‌ಗಳ ಜಲಾಂತರ್ಗತ ಪುರಾತತ್ವ ಸಮೇಳನಗಳಲ್ಲಿ ಅವರದು  ಸದಾ ಪ್ರಮುಖ ಪಾತ್ರ.
ರಾಜ್ಯೋತ್ಸವ, ಕರ್ನಾಟಕ ಪುರಾತ್ವ ರತ್ನಸೇರಿದಂತೆ ಹಲವು ಪ್ರಶಸ್ತಿಗಳಿಗೆ ಬಂದಿವೆ. ದಾವಣ ಗೆರೆಯಲ್ಲಿ ನಡೆದ ಕರ್ನಾಟಕ ನಾಲಕ್ಕನೆ ಇತಿಹಾಸ ಪರಿಷತ್ತಿನ ನಾಲಕ್ಕನೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು ,ಅವರು  ಉದ್ಘಾಟನೆ ಮಾಡಿದ ಕಾರ್ಯಕ್ರಮಗಳು ಹಲವಾರು. ವಿದ್ವತ್‌ಸಭೆಗೆ ಅವರು ಕಿರೀಟಪ್ರಾಯರಾಗಿದ್ದರು . ಅವರಿಗೆ ನೋಡೋಜ ಪ್ರಶಸ್ತಿಯನ್ನೂ ಮನೆಗೆ ಹೋಗಿ ಪ್ರದಾನ  ಮಾಡಲಾಯಿತು.
ಅವರ ಕೊನೆಗಾಲದ ಮನೆ ಬೆಂಗಳೂರಾಗಿತ್ತು ಇಳಿವಯಸ್ಸಿನಲ್ಲೂ ಅವರಿಗೆ ಇತಿಹಾಸವೆಂದರೆ ಇಂಗದ ಆಸಕ್ತಿ . ಅವರ ಸೊಸೆಯ ಗೆಳತಿಯಾದ ಶ್ರೀಮತಿ ನಳಿನ ವೆಂಕಟೇಶ್‌ ಹೇಳುವ ಹಾಗೆ ಯಾರೇ ಆಸಕ್ತರು ಕೇಳಿದರೂ ಅವರು ಎಷ್ಟೇ ಕಿರಿಯರಾದರೂ  ವಿವರಣೆ ಕೊಡಲು  ಮುಂದಾಗುತ್ತಿದ್ದರು.ವಿದ್ವತ್‌ ಸಭೆಯಲ್ಲಿ ಹೇಳುವ ಹಾಗೆ ಪ್ರತಿ ವಿವರವನ್ನೂ ಉತ್ಸಾಹದಿಂದ ನೀಡುತಿದ್ದರು.
ಭಾರತದಲ್ಲಿ ಪುರಾತತ್ವ ಜಗತ್ತಿನ ಹೊಸಯುಗದ ಪ್ರವರ್ತನ ಮಾಡಿದ ಹಿರಿಯ ಜೀವ ಇನ್ನುಇಲ್ಲವಾದರೂ ಅವರಶೋಧನ ವಿಧಾನವು ಸದಾ ಮಾರ್ಗದರ್ಶನ ಮಾಡಲಿದೆ.

ಕೃತಜ್ಞತೆ-ಎಸ್‌.ಆರ್‌ ರಾವ್‌ಕುಟುಂಬ, ಡಾ. ನಳಿನಿ ವೆಂಕಟೇಶ್,ಅಂತರ್‌ಜಾಲ ತಾಣಗಳು ಮತ್ತು ಗಾಯತ್ರಿ ಪ್ರಸಾದ್



1 comment: