Tuesday, January 8, 2013

ಎಸ್‌ಆರ್‌ ರಾವ್‌- ---- - ನುಡಿ ನಮನ



ಒಂದು ಆತ್ಮೀಯ ನೆನಪು
ಡಾ. ನಳಿನಿ ವೆಂಕಟೇಶ್‌.
ಸಂ.೧೫.ಮನಶ್ವಿನಿ, ಸ್ನೇಹ ಕಾಲನಿ
ಚಿಕ್ಕಲ್ಲಸಂದ್ರ,
ಬೆಂಗಳೂರು
ನಾನು ಮತ್ತು ಮೀನಾ ನಲವತ್ತು  ವರ್ಷದ ಸ್ನೇಹಿತೆಯರು.ನಮ್ಮಗೆಳತನ ಬಾಲ್ಯದಿಂಲೇ ನಾವು ಶಾಲೆಗೆ ಹೋಗುತಿದ್ದ ಕಾಲದಿಂದಲೇ ಪ್ರಾರಂಭವಾಗಿತ್ತು.ಕಾಲಕಳೆದಂತೆ ಅದು ಗಾಢವಾಗುತ್ತಾ ಹೋಯಿತು.ಇಬ್ಬರಿಗೂ ಮದುವೆ ಮಕ್ಕಳು ಮೊಮ್ಮಕ್ಕಳಾದರೂ ಈ ವರೆಗೆ ನಮ್ಮಿಬ್ಬರಲ್ಲಿ ಒಂದೇ ಒಂದು ಚಿಕ್ಕಭಿನ್ನಾಭಿಪ್ರಾವೂ ಬಂದಿಲ್ಲ.ಹೀಗೆ ನಮ್ಮ ಸ್ನೇಹ ಮುಂದುವರಿಯಲು ಡಾ. ಎಸ್‌ಆರ್‌ ರಾವ್‌ ಮತ್ತು ಶ್ರೀಮತಿ ಕಮಲಮ್ಮನವರೇ ಅಪರೋಕ್ಷವಾಗಿ ಕಾರಣರು. ಮೀನಾರಾವ್‌ ಎಸ್.ಆರ್‌.ರಾವ್‌ ದಂಪತಿಗಳ ಮುದ್ದಿನ  ಸೊಸೆ.   ಅವರ ಮಗನ ಮಡದಿ. ನಾನು ಅವರ ಮನೆಯಲ್ಲಿ ಸೊಸೆಯ ಸ್ನೇಹಿತೆಯಾಗಿ ಮಾತ್ರ ಉಳಿದಿಲ್ಲ. ಶ್ರೀಮತಿ ಕಮಲಮ್ಮನವರಿಗೂ ಅವರ ಮಕ್ಕಳಾದ ಶಕುಂತಲ ಮತ್ತು ನಳಿನಿಯರಿಗೂ ಗೆಳತಿಯಾಗಿರುವೆ.ಹಾಗಾಗಿ ನಾನೂ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬಳಾಗಿರುವೆ.ಅವರೆಲ್ಲರ ಸಹೃದಯತೆಯೇ ಇದಕ್ಕೆ ಕಾರಣ.ಅವರೆಲ್ಲ ನನ್ನನ್ನೂ ತಮ್ಮ ಮನೆ ಮಗಳಾಗಿ ಮಾಡಿಕೊಂಡಿದ್ದಾರೆ.
ಈಗ ಎರಡುವರ್ಷದ ಕೆಳಗೆನಾನು "ರನ್ನನ ಮೇಲೆ ಪಂಪನ ಪ್ರಭಾವ " ಬರೆದಿದ್ದೆ.  ನನ್ನ ಪುಸ್ತಕ ಪ್ರಕಟವಾಗುವಾಗ ಅದರ ಬಿಡುಗಡೆಯನ್ನುಪಿತೃ ಸಮಾರಾದ ಎಸ್‌ಆರ್‌ ರಾವ್‌ ಅವರೇ ಬಿಡುಗಡೆಮಾಡಬೇಕೆಂಬುದು ನನ್ನ ಹೆಬ್ಬಯಕೆಯಾಗಿತ್ತು.  ಆಶೆಯಿಂದ ಅವರನ್ನು ಕೇಳಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು.  ತಮ್ಮ ಇಳಿವಯಸ್ಸಿನ ಕಾರಣದಿಂದ ಅವರು ಓಡಾಡುವುದನ್ನು ನಿಲ್ಲಿಸಿದ್ದರು. ಯಾವುದೇ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ.ಅವರಿಗೆ ನಾಡೋಜ ಪ್ರಶಸ್ತಿ ಬಂದಾಗಲೂ ಅವರ ವೃಧಾಪ್ಯದಿಂದಾಗಿ ಕನ್ನಡ ವಿಶ್ವ ವಿದ್ಯಾಲಯದವರು ಅವರಿದ್ದಲ್ಲೇ ಬಂದು ಮನೆಯಲ್ಲಿಯೇ ಪ್ರಶಸ್ತಿಪ್ರದಾನ ಮಾಡಿದ್ದರು.ಆ ಸಮಯದಲ್ಲಿ ನಾನೂ ಕಾರ್ಯಕ್ರಮದಲ್ಲಿ ಮನೆಯವಳಂತೆ ಭಾಗವಹಿಸಿದ್ದೆ. ಅವರ ಸೂಕ್ಷ್ಮ ದೇಹ  ಸ್ಥಿತಿ ತಿಳಿದಿತ್ತು. ಹೀಗಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅವರು ಬರಲುಒಪ್ಪಿದಾಗ ನನಗೆ ತುಸು ಸಂಕೋಚವಾಯಿತು.ಅವರಿಗೆ ತೊಂದರೆಯಾಗಬಹುದು ಎಂದು ಹೆದರಿಕೆಯೂ ಆಯಿತು. ಆದರೆ ಅವರೇ  ನನಗೆ ಸಮಾಧಾನ ಮಾಡಿದರು. ಹಾಗೂ ಸಮಾರಂಭದಲ್ಲಿಪಾಲುಗೊಂಡು ಕಳೆ ಗಟ್ಟಿಸಿದರು.ಅವರ ಔದಾರ್ಯ ಮತ್ತು  ಪ್ರೀತಿ ದೈಹಿಕ ತೊಂದರೆಯನ್ನೂ ಮೆಟ್ಟಿ ನಿಂತಿತ್ತು. ಅವರ  ಮಮತೆ ನನ್ನನ್ನು ಮೂಕಳನ್ನಾಗಿಸಿತು.
ಶ್ರೀ ರಾವ್‌ ಅವರಿಗೆ ಹರಪ್ಪ ಮಹಂಜದಾರೋ ಬಗ್ಗೆ , ಲೋಥಾಲ್‌ ಅಥವ ದ್ವಾರಕೆಯಬಗ್ಗೆ  ಅಪಾರ ಆಸಕ್ತಿ. ಯಾರಾದರು ಕೇಳಿದರೆ ಅವರು ಹಿರಿಯರು ಕಿರಿಯರು ಎಂಬುದನ್ನು ಪರಿಗಣಿಸದೆ. ಉತ್ಸಾಹದಿಂದ ಕಣ್ಣಿಗೆ ಕಟ್ಟುವಂತೆ ವಿವರಿಸುವರು.ಒಂದುಸಲ ನಾನು ಒಬ್ಬಳೇ ಇದ್ದಾಗ ಆ ವಿಷಯ ಪ್ರಸ್ತಾಪಿಸಿದೆ..ಸೊಸೆಯ ಸ್ನೇಹಿತೆ ಏಕೋ ಕೇಳುತಿದ್ದಾಳೆ ಎಂದು ಸುಮ್ಮನಾಗಲಿಲ್ಲ.ಇವಳಿಗೆ ಎಲ್ಲವಿವರಣೆಯ ಅಗತ್ಯವಿಲ್ಲ ಎಂಬ ಭಾವನೆ ಅವರಿಗೆ ಬರಲೇಇಲ್ಲ. ಅವರು ವಿದ್ವತ್‌ ಸಮಾವೇಶದಲ್ಲಿ ಉಪನ್ಯಾಸ ನೀಡುವಂತೆ ನನಗೊಬ್ಬಳಿಗೇ  ಸವಿವರವಾಗಿ ಗಂಟೆಗಟ್ಟಲೇ ವಿವರಿಸಿದರು. ಆ ರಂಗದಲ್ಲಿ ಏನೂ ತಿಳಿಯದ ನನಗೂ ಅರ್ಥವಾಗುವಂತೆ ತಿಳಿಸಿದರು.. ಅವರ ಅನುಭವ ಅಪಾರ. ನೆಪಿನ ಶಕ್ತಿಯೂ ಅಗಾಧ. ಭಾಷೆಯೂ ಬಹು ಸರಳ.ಯಾವುದೇ ಚಿಕ್ಕವಿವರನ್ನೂ ಅವರು ರಸವತ್ತಾಗಿ ಬಣ್ಣಿಸುತಿದ್ದರು.ಕೊನೆಕೊನೆಗೆ ಅವರ ದೃಷ್ಟಿ ತುಸು ಮಂದವಾದಾಗ ಕೋಣೆಯಲ್ಲಿಯೇ ಉಳಿಯಬೇಕಾದಾಗ , ನಾನು ಅವರ ಮನೆಗೆ ಬಂದುದನ್ನು ನನ್ನ ದನಿಯಿಂದಲೇ ಗುರುತಿಸಿ ಮಾತನಾಡಿಸುತಿದ್ದರು. ಅವರ “ ಸಮುದ್ರದಲ್ಲಿ ಮುಳುಗಿದ ದ್ವಾರಕೆ” ಪುಸ್ತಕವನ್ನು ಹಲವಾರು ಬಾರಿ ಓದಿಕೊಂಡು ಸಮುದ್ರೀಯ ಉತ್ಖನನದ ಬಗೆಗೆ ಅವರಿಂದಲೇ ವಿವರವಾದ ಮಾಹಿತಿ ಪಡೆದು ರಾಜಾಸ್ತಾನ ಮತ್ತು ಗುಜರಾತ್‌ ಪ್ರವಾಸಕ್ಕೆ ಹೊರಟೆವು.ಗುಜರಾತಿನಲ್ಲಿ ಸಾಗರದ ತೀರದಲ್ಲಿ  ಶ್ರೀಕೃಷ್ಣನು ಓಡಾಡಿದ ನೆಲದ ಮೇಲೆ ಕಾಲಿಟ್ಟಾಗ ಅವರ ವಿವರಣೆ ನೆನಪಿಗೆ ಬಂದು ಭಾವೋದ್ವೇಗದಿಂದ ರೋಮಾಂಚನವಾಯಿತು.ಅದೊಂದು ಮರೆಯಲಾಗದ ಅನುಭವ ಎನಿಸಿತು . ಅವರೇ ಪುನರ್‌ನವೀಕರಿಸಿದ “ದ್ವಾರಕಾಧೀಶ” ಮಂದಿರಭವ್ಯತೆಯನ್ನು ಕಂಡು ಮೈ ಮರೆಯುವಷ್ಟು ಸಂತೋಷವಾಯಿತು.ಆದರೆ ಅಲ್ಲಿನ ಜನರ ಸಮುದ್ರಿಯ ಉತ್ಖನನ ಮತ್ತು ದ್ವಾರಕಾಧೀಶ ಮಂದಿರದ ನವೀಕರಣ  ಕುರಿತಾದ ಅಜ್ಞಾನ ಕಂಡು ವಿಷಾದವಾಯಿತು.  ಈಗ ಅವರು ಭೌತಿಕವಾಗಿ ಇಲ್ಲ. ಆದರೆ ಸಾಗರದಲ್ಲಿ ಮುಳುಗಿದ್ದ ದ್ವಾರಕೆಯನ್ನು ಜಗತ್ತಿಗೆ ತೋರಿಸಿ ಕೊಟ್ಟ  ಅವರ ಒಂದೇ ಒಂದು ಕೆಲಸವೇ ಅವರ ಹೆಸರನ್ನು ಅಜರಾಮರಗೊಳಿಸಲು ಸಾಕು

No comments:

Post a Comment