Thursday, November 29, 2012

ಇತಿಹಾಸಕಾರರು. ಸರಣಿ-೩



ಎಚ್ .ಶೇಷಗಿರಿರಾವ್
appaaji@gmail.com


          










                       ಇತಿಹಾಸದ ಆಕರಗಳ ಸಮಗ್ರ ಸಂಗ್ರಾಹಕ -ಕರ್ನಲ್‌ ಕಾಲಿನ್‌ ಮೆಕೆಂಜಿ
                                  (೧೭೫೪-೧೮೨೧)

        ಕರ್ನಾಟಕದ ಇತಿಹಾಸದ  ಅಭ್ಯುದಯದಲ್ಲಿ ಪಾಶ್ಚಾತ್‌ ವಿದ್ವಾಂಸರ ಕೊಡುಗೆ ಅಪಾರ. ಅದರಲ್ಲೂ ಖಾಸಗಿ ಕೆಲಸಕ್ಕಾಗಿ ಭಾರತಕ್ಕೆ ಬಂದು ನಂತರ ಬ್ರಿಟಿಷ್‌ಸೈನ್ಯದ ಅಧಿಕಾರಿಯಾಗಿ ಸೇವೆಗೆ ಸೇರಿ ಸ್ವಾಮಿಕಾರ್ಯದ ಜೊತೆಗೆ ತಾವು ಸೇವೆ ಸಲ್ಲಿಸುತ್ತಿರುವ  ಪ್ರದೇಶದಲ್ಲಿನ ಸಮಾಜದ ಹಲವು ಆಯಾಮಗಳನ್ನು ದಾಖಲಿಸಿದ ಕೀರ್ತಿ ಕರ್ನಲ್‌ ಮೆಕೆಂಜಿಯದು.’ಕಂಟ ಹಿಡಿದರೆ ಕವಿ, ಖಡ್ಗ ಹಿಡಿದರೆ ಕಲಿ” ಎಂಬಕೀರ್ತಿಗೆ ಕನ್ನಡದ  ಆದಿಕವಿ ಪಾತ್ರನಾದರೆ. “ಕೋವಿ ಹಿಡಿದು ಯುದ್ಧದಲ್ಲಿ ಜಯಸಾಧನೆ ಸರ್ವೆಕ್ಷಣೆ ಮಾಡುವಾಗ ಇತಿಹಾಸ ಸಂಶೋಧನೆ ”  ಎಂಬುದು ಕರ್ನಲ್‌ ಕಾಲಿನ್‌ ಮೆಕೆಂಜಿಯವರ ಕಾರ್ಯ ವೈಖರಿ, ಕನ್ನಡದ ಕೈಫಿಯತ್‌, ಬಖೈರು ಮತ್ತು ಕಡತಗಳಗಳ ನಿರ್ಮಾಣಕ್ಕೆ ಕಾರಣಕರ್ತ ಕರ್ನಲ್‌ ಕಾಲಿನ್‌ಮೆಕಂಜಿ. ಅದರ ಪರಿಣಾಮವಾಗಿ ದಕ್ಷಿಣಭಾರತದ ಮಧ್ಯಕಾಲೀನ ಇತಿಹಾಸ,ಜನ ಜೀವನ ಮತ್ತು ಆಚರಣೆಗಳ ಸ್ಪಷ್ಟ ಚಿತ್ರಣ ಹಾಗೂ ಒಳನೋಟವು ಲಭ್ಯವಾಗುವುದು.
ಲೂವಿ ದ್ವೀಪ
ಕಾಲಿನ್ ಮೆಕೆಂಜಿ ಸ್ಕಾಟಲೇಂಡಿನವನು. ಅಲ್ಲಿನ ಲೀವೀಸ್‌ ದ್ವೀಪದ ಸ್ಟಾರ್ನವೇಯಲ್ಲಿ ೧೭೫೪ ರಲ್ಲಿ  ಜನಿಸಿದನು.. ತಂದೆ ಮರ್ಡೋಕ್ ಮೆಕೆಂಜಿ. ಸ್ಥಿತಿವಂತ ವ್ಯಾಪಾರಿ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿಯೇ ಆಯಿತು. ಹೆಸರಾಂತ ಟ್ಯೂಟರ್‌ ಅಲೆಕ್ಜಾಂಡರ್‌ಆಂಡರ್ಸನ್‌ ನಿಂದ ಖಾಸಗಿಯಾಗಿ ಕಲಿಕೆ.ವಿಜ್ಞಾನ ಮತ್ತು ಗಣಿತದಲ್ಲಿ ವಿಶೇಷ ಆಸಕ್ತಿ.. ಅವರ ಸಹಪಾಠಿಯೂ ಹೆಸರಾಂತ ಸಂಶೋಧಕನಾದ ಅಲೆಕ್ಜಾಂಡರ್‌

ಚಿಕ್ಕ ಅಧಿಕಾರಿಯಾಗಿ ಸೇರಿ ಕರ್ನಲ್‌ ಹುದ್ದೆಯವರೆಗೆ ಏರಿದ ಮೆಕೆಂಜಿ ೧೭೮೩  ರಿಂದ ೧೮೨೧ ರ ವರೆಗೆ ೩೮ವರ್ಷ ಭಾರತದ ವಿವಿಧ ಪ್ರಾಂತಗಳನ್ನು ಸುತ್ತಿ  ಸರ್ವೇಕ್ಷಣ ಪರಣಿತನೆನಿಸಿ ಸುಮಾರು -೭೯ ನಕ್ಷೆಗಳನ್ನು ರಚಿಸಿದ. ಭಾರತದ ಪ್ರಥಮ ಸರ್ವೇಯರ್‌ ಜನರಲ್‌ ಆಗಿ ನೇಮಕ ವಾಯಿತು.

ಮೆಕೆಂಜಿ ಬರಿ ಭೂಮಾಪನ ಅಧಿಕಾರಿಯಾಗಿದ್ದರೆ  ಸಾವಿರಾರು ಅಧಿಕಾರಿಗಳಲ್ಲಿ ಒಬ್ಬರಾಗುತ್ತಿದ್ದರು,ಇತಿಹಾಸದಲ್ಲಿ ಅವರ ಹೆಸರು ಅಜರಾಮರ ವಾಗುತ್ತಿರಲಿಲ್ಲ. ಅವರು ಬರಿ ಭೂಮಿಯನ್ನು ಮೋಜಣಿ ಮಾತ್ರ ಮಾಡದೆ ಅಲ್ಲಿನ ಜನ ಜೀವನವನ್ನು ದಾಖಲೆ ಮಾಡಿದರು. ಅಲ್ಲಿನ ಪ್ರತಿ ಊರಿನ ಜನರ ಆಚಾರ-ವಿಚಾರ, ಜಾತಿ –ಜನಾಂಗ,.ನಂಬಿಕೆ ಆಚರಣೆ ,ಇತಿಹಾಸ – ಐತಿಹ್ಯ  ಅಂದಂದೇ ಸ್ಥಳಿಯ ಲಿಪಿಕಾರರಿಂದ ಬರೆಸಿ ದಾಖಲೆ ಮಾಡಿ  ಸಂಗ್ರಹಿಸಿದರು.ಕಾಗದದ ಬಳಕೆ ಅದೇ ತಾನೆ ಪ್ರಾರಂಭ ವಾಯಿಯು,ತಮ್ಮ ಸಹಾಯಕ್ಕಾಗಿ ಅಲ್ಲಿನ ಜನ ಹೇಳಿದುದನ್ನು ಬರೆದುಕೊಳ್ಳಲು ದೇಶೀಯ ಭಾಷೆ ಸಂಸ್ಕೃತ ಮತ್ತು ಇಂಗ್ಲಿಷ್‌ ಬಲ್ಲ ವಿದ್ಯಾವಂತ ಬ್ರಾಹ್ಮಣ ನೌಕರರನ್ನು ನೇಮಿಸಿಕೊಂಡರು.ಹಗಲಿನಲ್ಲಿ ಸರ್ವೆ ಕೆಲಸ ಮುಗಿಸಿಕೊಂಡು ರಾತ್ರಿ ಡೇರೆಯಲ್ಲಿ ಕುಳಿತು ಹಲವಾರು ವಿದ್ಯಾವಂತ ಸಹಾಯಾಕರ ಒಡಗೂಡಿ  ಕೈಫಿಯತ್ತುಗಳ ಬರವಣಿಗೆಗೆ ತೊಡಗುತ್ತಿದ್ದರು.. ಅವರಿಗೆ ತನ್ನ ವೇತನದಿಂದಲೇ ಸಂಬಳ ನೀಡಿ ದಾಖಲೆ ಕಾರ್ಯಮುಂದುವರೆಸಿದ.ಆ ದಾಖಲೇಗಳೇ  ಅತ್ಯಮೂಲ್ಯವಾವಾದ, ವಿಶಿಷ್ಟವಾದ ಐತಿಹಾಸಿಕ ಆಕರಗಳಾದ ಕೈಫಿಯತ್‌ಗಳೆನಿಸಿವೆ. ಮೆಕೆಂಜಿಯ ಪ್ರಕಾರ ಕೈಫಿಯತ್‌ ಎಂದರೆ ಸ್ಥಳ ಪುರಾಣ,ಐತಿಹ್ಯ,ಜಾನಪದ ಮತ್ತುಇತಿಹಾಸ ಗಳನ್ನು ಒಳ ಗೊಂಡ ದಾಖಲೆ.
ಕರ್ನಲ್‌ ಕಾಲಿನ್‌ಮೆಕೆಂಜಿ

ಅದರ ಮೂಲ ಸ್ಥಳೀಯ ಅಧಿಕಾರಿಗಳು, ಪಟೇಲರು , ಶಾನುಭೋಗರು,ಪಂಡಿತರು ಸ್ವತಃ ಬರೆದು ಕೊಟ್ಟಿದ್ದು. ಇದುವರೆಗ ಇತಿಹಾಸದ ಆಧಾರ ಶಾಸನಗಳು ಮತ್ತು ಅದಕ್ಕೆ ಪೂರಕವಾಗಿ ಕೆಲಮಟ್ಟಿಗೆ ಸಾಹಿತ್ಯ ತಾಳೆಯೋಲೆ. ಇವು ಹೊಸ ಪ್ರಕಾರ. ೭೯೯೦-೧೮೨೧ ರ ವರೆಗೆ ಸಂಗ್ರಹಿಸಿದ , ಬರೆಸಿದ. ಪ್ರಾಚೀನ,ಮಧ್ಯಕಾಲೀನ ಸಮಕಾಲೀನ ಭೌಗೋಲಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸ್ಥೀತಿಗತಿಗಳ ನೈಜ ಚಿತ್ರಣವಾಗಿದೆ. ಹೀಗೆ ಸಂಗ್ರಹಿಸುವಾಗ  ಅವರಲ್ಲಿ ಮಾನವ ಶಾಸ್ತ್ರಜ್ಞ , ಸಮಾಜ ಶಾಸ್ತ್ರಜ್ಞ ಮತ್ತು ಇತಿಹಾಸಕಾರರ ಮೂರೂ ಗುಣಗಳೂ ಅವರಲ್ಲಿ  ಮುಪ್ಪರಿಗಂಡಿದ್ದವು ಈ ದಾಖಲೆಗಳ ಅಧ್ಯಯನ  ಇಂದು ನಾಲ್ಕಾರು ವಿದ್ವಾಂಸರಿಂದ ಮಾತ್ರ ಆಗಿದೆ
.
ಅವನು   ೪೨೦೦ಮೈಲು ಸುತ್ತಾಡಿ ಸಂಗ್ರಹಿಸಿದ  ೨೦೭೦ ಕೈಫಿಯತ್‌ಗಳ ರಚನೆಗೆ ಕಾರಣರಾದರು.ಕೈಫಿಯತ್‌ಗಳು ವಿಜಯನಗರ,ಹೊಯ್ಸಳಅರಸರ, ಹಾಗೂ ಅನೇಕ ಕಿರಿಯ ಸಂಸ್ಥಾನಿಕರ  ವಿವರ ಸಂಗ್ರಹಿಸಲಾಯಿತು ಕಂಪಿಲ. ಮುಸ್ಲಿಂ,ಮರಾಠ ಮತ್ತು ವಿಜಯನಗರದ ರಾಜ ಕೆಳದಿ ಮತ್ತು ಇತರೆ ಮನೆತನದ ಇತಿಹಾಸದ ಮೇಲೆ ಅವು ಬೆಳಕು ಚೆಲ್ಲುತ್ತವೆ. ಅವರ ಗಮನ ಬರಿ ಅರಸರ, ರಾಜರ ಮತ್ತು ಇನಾಂದಾರ ಮತ್ತು ಜಾಗೀರುದಾರರ ಮಾಹಿತಿ ಸಂಗ್ರಹಕ್ಕೆ ಮಾತ್ರ ಮೀಸಲಾಗಿರಲಿಲ್ಲ. ಜನಸಾಮಾನ್ಯರ ನಡೆ ನುಡಿ, ಆಚಾರ ವಿಚಾರ ,ವೃತ್ತಿ ಉದ್ಯೋಗ, ಮನರಂಜನೆ ಜೀವನ ವಿಧಾನವೂ ಅವರಿಗೆ ಅತಿ ಮುಖ್ಯವಾಗಿತ್ತು ಆದುದರಿಂದಲೇ ಚನ್ನಯ್ಯ ಕುಲದ ಕೈಫಿಯತ್ತು, ಜಾತಿರಿವಾಜು ಕೈಫಿಯತ್ತು, ವಕ್ಕಲಿಗರ ಕೈಫಿಯತ್ತು ಮೊದಲಾದ ಹಲವು ಕೈಫಿಯತ್ತು ಅಂದಿನ ಸಾಮಾಜಿಕ, ಧಾರ್ಮಿಕ ಜೀವನದಮೇಲೆ ಬೆಳಕು ಚೆಲ್ಲುತ್ತವೆ.  ಸೂಪಶಾಸ್ತ್ರ-ಬಾಣ ಬಿರುಸು ಕ್ರಮ-ಶಿಲ್ಪಶಾಸ್ತ್ರ-ಧನ್ವಂತರಿ ನಿಘಂಟು-ವೈದ್ಯ.ನಿಘಂಟು  ಸಂಸ್ಕೃತದಲ್ಲಿದ್ದರೆ ಅದರ  ಕನ್ನಡ ಟೀಕೆಯೂ ಇತ್ತು.. ವೈದ್ಯಕೀಯದಲ್ಲಿ ಬಳಸುವ ಗಿಡ ಮೂಲಿಕೆಗಳ  ಆಕಾರಾದಿ  ಪಟ್ಟಿ -ಜ್ಯೋತಿಷ್ಯ ಸಂಗ್ರಹ, ಶಕುನ ಶಾಸ್ತ್ರ ,ಹಾಲಕ್ಕಿ ಶಕುನ,ಗಣಿತ ಸಂಗ್ರಹ- ಭೂಮಿತಿ, ತತ್ವಶಾಸ್ತ್ರ, ವೈದ್ಯ,ಜ್ಯೋತಿಷ್ಯ , ವಿವಿಧ ವೃತ್‌ಇಗಾರ ಕೆಲಸದ ವಿಧಾನ, ಬಳೆ ಮಾಡುವ ವಿಧಾನ-ಬಣಜಿಗರ ಪೂರ್ವೋತ್ತರ, ತಾವು ಭೇಟಿ ನೀಡಿದ ಸ್ಥಳಗಳ ವರ್ಣನೆ, ಅಲ್ಲಿನ ಸಸ್ಯಸಂಪತ್ತು ಮತ್ತು ಪ್ರಾಣಿವೈವಿದ್ಯದ ವಿವರ,ಬಿದುನೂರ ಮೃಗಗಳು- ಸ್ಥಳ ವರ್ಣನೆ ಅಲ್ಲಿ ದೊರೆವ ಶಾಸನಗಳ ಪಟ್ಟಿ,  ಶಾಸನಗಳು, ಶಾಸನ ಪ್ರತಿಗಳು, ರಾಮಾಯಣ, ಮಹಾಭಾರತ , ಭಾಗವತ ಹಲವು ಹನ್ನೊಂದು ಕೃತಿಗಳ ಅನೇಕ ಪ್ರತಿಗಳನ್ನು ಅಲ್ಲಿ ಕಾಣ ಬಹುದು. ಜೊತೆಗೆ ರಾಜವಂಶೀಐರ ವಿವರ, ಗ್ರಾಮಚರಿತ್ರೆ, ಆಡಳಿತ ಸಂಬಂಧಿ ದಾಕಲೆಗಳನ್ನೂ ಬರೆಸಿದ. ಅವನ ಸಹಾಯಕರುರಾದ ದೇಶೀಯ ವಿದ್ವಾಂಸರು ಹಲವುದಾಖಲೆಗಳ  ಇಂಗ್ಲಿಷ್‌ ಅನುವಾದವನ್ನು ಮಾಡಿದರುಅದರ ಜೊತೆಯಲ್ಲಿಯೇ ಅಲ್ಲಿರುವ ವಿಶೇಷ ವಿಗ್ರಹಗಳು, ಚಲಾವಣೆಯಲ್ಲಿರುವ ನಾಣ್ಯಗಳು ಹೀಗೆ ಮೆಕೆಂಜಿ ಮುಟ್ಟದಪ್ರಾಚ್ಯ ವಸ್ತುವೇ ಇಲ್ಲ ಎನ್ನಬಹುದು.. ಮೆಕೆಂಜಿಯುಹೆಚ್ಚು ಕಡಿಮೆ ಈಗಿನ ಗೆಜೆಟಿಯರ್‌ಗಳ ಕೆಲಸವನ್ನೇ ಮಾಡಿದನು ಯಾವುದೇ ಪ್ರದೇಶದ ಸರ್ವೆ ಮಾಡಿದರೆ ಅಲ್ಲಿನ ಎಲ್ಲ ಮಾಹಿತಿಯೂ ದಾಖಲುಮಾಡಿರುವುದರಿಂದ ಒಂದು ರೀತಿಯಲ್ಲಿ ವಿಶ್ವ ಕೋಶವೇ ನಿರ್ಮಿಸುತ್ತಿದ್ದನೆನ್ನ ಬಹುದು
ಈ ಕೈಫಿಯತ್ತುಗಳು ವಿಶೇಷ ವಾಗಿ ಧಾರ್ಮಿಕ ಕೇಂದ್ರಗಳ ದೈನಂದಿನ ಆಚರಣೆಯ ವಿವರವನ್ನು ಕೊಡುತ್ತವೆ.   ಪೇಜಾವರ, ಪುತ್ತಿಗೆ , ಮೊದಲಾದ ಅಷ್ಠ ಮಠಗಳ ಕೈಫಿಯತ್ತುಗಳಲ್ಲಿ ಅಲ್ಲಿ ದೈನಂದಿನ ಆಚರಣೆಯ ಮಾಹಿತಿ ದೊರೆಯುವುದು.
ಮೆಕಂಜಿಯವರ ಸಂಗ್ರಹದಲ್ಲಿ ಕನ್ನಡ , ತುಳು ಮರಾಠಿ ತೆಲುಗು , ತಮಿಳು ಮೊದಲಾದ  ೧೪ ಭಾಷೆಗಳ  ಮತ್ತು ೧೭ ಲಿಪಿಗಳಲ್ಲಿ ಕೈಫಿಯತ್ತುಗಳು ಇವೆ..ಅವನು ಬಹುಬಾಷೆ ಬಲ್ಲವರಾಗಿರುವುದು ಇದರಿಂದ ವಿದಿತವಾಗಿತ್ತದೆ. ಅವನ ಇಪ್ಪತ್ತಕ್ಕೂ ಹೆಚ್ಚುವರ್ಷದ ದುಡಿಮೆಯ ಫಲವಾಗಿ ೨೦೦೦ಕ್ಕೂ ಮಿಕ್ಕಿ ಶಾಸನಗಳು . ನಾಣ್ಯಗಳು, ಶಾಸನ ಪ್ರತಿ ವಿಗ್ರಹಗಳ  ಶೋಧನೆ ಮತ್ತು ಸಂಗ್ರಹ ವಾಯಿತು.  ೧೮೦೭ ರಲ್ಲಿ ಏಷಿಯಾಟಿಕ್‌ ರಿಸರ್ಚ ಸಂಚಿಕೆಯಲ್ಲಿನ  ೯ನೆಯ ಸಂಪುಟದಲ್ಲಿ ಬರೆದ ಲೇಖನಗಳು  ದಕ್ಷಿಣ ಭರತದ ರಾಜವಂಶಗಳ ಕುರಿತಾದ ಬಹುಮುಖ್ಯ ದಾಖಲೆಯಾಗಿದೆ. ಬಖೈರುಗಳು ಎಂದರೆ ಸಂಭಾಷಣೆಗಳ ದಾಖಲೆ. ಟಿಪ್ಪುಸುಲ್ತಾನನು  ಆಂಗ್ಲ ಅಧಿಕಾರಿಯೊಡನೆ  ನಡೆಸಿದ ೫೮೬ ಪುಟಗ:ಳ ಸಂಭಾಷಣೆ  ಈ ಸಂಗ್ರಹದಲ್ಲಿದೆ.  ಮರಾಠ ಮನೆತನ, ಸಮಕಾಲಿನರ ನೆನಪಿನ ದಾಖಲೆ, ಚೋಳರಾಜಾಂಚೆಕಥಾ, ಘೋರ್ಪಡೆಯಾಂಚಿ ಕೈಫಿಯತ್ತು, ಲೋಹಾಚಲಮಹಾತ್ಮೆಗಳು ದಕ್ಷಿಣ ಭಾರತದ ಇತಿಹಾಸದ ಮಹತ್ವದ ಆಕರ ಸಾಮಗ್ರಿಗಳಾಗಿವೆ
ಮೆಕಂಜಿ ಸಂಚರಿಸಿದ ಪ್ರದೇಶ

 ಚರಿತ್ರೆ ಹೇಳುವ ಅವನ ಟಿಪ್ಪಣಿಗಳು ಅಗಾಧ ಕಾರ್ಯದ ಮೇಲೆ ಬೆಳಕು ಬೀರುವವು.. ಕಡಿಮೆ ಕಾಲದಲ್ಲಿ  ಶ್ರೇಷ್ಠ ಸಾದನೆ ಮಾಡಿದ ಹಿರಿಮೆ ಅವನದು. ೧೮೦೦ ರಿಂದ ೧೮೨೧ರ  ಮಧ್ಯದ ಅವಧಿಯಲ್ಲಿ  ೮೦೦೦ ಶಾಸನ ,ಸುಮಾರು ೧೫೦೦ ಹಸ್ತಪ್ರತಿಗಳು, ೬೨೧೮ . ವಿಗ್ರಹಗಳು ೧೦೬ ನಾಣ್ಯಗಳು ಮತ್ತು  ಸಾವಿರಾರು ಶಾಸನ ಪ್ರತಿಗಳನ್ನು  ಸಂಗ್ರಹಿಸಲಾಯಿತು. ಈ ಎಲ್ಲ ಅಗಾಧ ಕೆಲಸವು ವೈಜ್ಞಾನಿಕ ಉಪಕರಣಗಳು ಇಲ್ಲದ, ಆಧುನಿಕ ಸಾರಿಗೆ ಸಂಪರ್ಕವಿಲ್ಲದ ಕಾಲದಲ್ಲಿ ಮಾಡಲಾಗಿರುವುದು  ಅವನ ಶ್ರಮ, ಶ್ರದ್ಧೆ ಮತ್ತು ಬದ್ಧತೆಯ ಸೂಚಕವಾಗಿದೆ.’
ಕರ್ನಲ್‌ ಮೆಕೆಂಜಿ ಬಹು ಭಾಷಾವಿದ್ವಾಂಸ.ಅದರಿಂದಲೇ ಅವನ ಸಂಗ್ರಹದಲ್ಲಿ ವಸ್ತುಗಳ ವೈವಿದ್ಯತೆ ಅಪಾರ.ದಾಖಲೆಗಳಂತೂ ಹಲವು ಹತ್ತು ಭಾಷೆಗಳಲ್ಲಿವೆ. .ಅವನ ಸಂಗ್ರಹದಲ್ಲಿನ ದಾಖಲೆಗಳ ಸೂಚಿ  ೧೮೯೩ರಲ್ಲಿ ಮದ್ರಾಸಿನಲ್ಲಿ ಪ್ರಾರಂಭವಾಯಿತು. ಅದು ೧೯೫೨ ರ ವರಗೆ ಮುಂದುವರೆಯಿತು ಎಂದರೆ ಅದರ ಅಗಾಧತೆಯ ಅರಿವಾಗುವುದು
ಅವರ ಸಂಗ್ರಹಗಳ ವಿವರವನ್ನು  ಅರಿಯಲು.ಅನೇಕ ವಿದ್ವಾಂಸರು ವರ್ಷಾನುಗಟ್ಟಲೆ ಶ್ರಮಿಸುತ್ತಿದ್ದಾರೆ.ಅವರ ದುಡಿಮೆಯ ಫಲವಾಗಿ  ಸಂಪಾದಿಸಿದ ಏಳು ಸಂಪುಟಗಳು ಈಗಾಗಲೇ ಹೊರ ಬಂದಿವೆ.  ಕುಪ್ಪುಸ್ವಾಮಿ, ಶಂಕರರಾವ್‌,  ಟಿ.ವಿ.ಚಂದ್ರಶೇಖರ ಶಾಸ್ತ್ರಿ ಮತ್ತು ಇತರರು  ಅವಿರತ ದುಡಿದಿದ್ದಾರೆ.ಆದರೆ ಇನ್ನೂ ಅವನ ಸಂಗ್ರಹದ ಹಲವು ಆಯಾಮಗಳ ಅಧ್ಯಯನ ಆಗ ಬೇಕಿದೆ. ಕನ್ನಡದ ವಿವಿಧ ಕೃತಿಗಳನ್ನು ಪುರಾಣ, ಕಾವ್ಯಕಥನ, ಶಾಸ್ತ್ರ, ಜೈನ ವಾಙ್ಮಯವೆಂದು ವಿಂಗಡನೆ ಮಾಡಿರುವನು. ಅವನ ಸಂಗ್ರಹದಲ್ಲಿನ ಬಾಣ ಬಿರುಸು ಕಾರ್ಯಕ್ರಮ  ಮತ್ತು ಸೂಪಶಾಸ್ತ್ರ ಎಂಬ ಕೃತಿಗಳು ಇವೆ. ಅವುಗಳು ಅನನ್ಯವಾಗಿದ್ದು  ಬೇರೆ ಇನ್ನಾವ ಭಾಷೆಯಲ್ಲೂ ಅವು ದೊರೆಯುವುದಿಲ್ಲ ಎಂದರೆ ಅವನ ಸಂಗ್ರಹದ ಸೂಕ್ಷ್ಮತೆಯ ಮಹತ್ವದ ಅರಿವಾಗುವುದು.  ಅದರಿಂದ ಮೆಕಂಜಿಯ.ಕನ್ನಡ ಇತಿಹಾಸ ಮತ್ತು ಸಾಹಿತ್ಯಕ್ಕೆ  ಕೊಡುಗೆಯ ಅಗಾಧತೆ ಅರಿವಾಗುವುದು.  ಅವನ ಕೊಡುಗೆ ಬರಿ ದಕ್ಷಿಣ ಭಾರತಕ್ಕ ಮಾತ್ರ ಸೀಮಿತವಾಗಿರಲಿಲ್ಲ. ಸೈನಿಕ ಸೇವೆಗೆಂದು ಎರಡು ವರ್ಷ ಜಾವಾಕ್ಕೆ ಮತ್ತು ಬರ್ಮಕ್ಕೆ ಹೋದಾಗ ವೃತ್ತಿಯ ಜೊತೆ  ತನ್ನ ಪ್ರವೃತ್ತಿಯನ್ನು ಯಶಸ್ವಿಯಾಗಿ ನಿಭಾಯಿಸಿ ಅಲ್ಲಿನ ಪುರಾತತ್ವ ವಸ್ತುಗಳನ್ನು ತನ್ನ ಸಂಗ್ರಹಕ್ಕೆ ಸೇರ್ಪಡೆ ಮಾಡಿದ.. “ಭಾರತದ ನಕ್ಷೆ ನಿರ್ಮಿಸಿದ ಮೊದಲ ವ್ಯಕ್ತಿ “ಎಂಬ ಹೆಗ್ಗಳಿಕೆಯ ಜೊತೆ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಪುರಾತತ್ವ ಸಂಪತ್ತನ್ನು ಸಂಶೋಧಿಸಿ ಅನಾವರಣಮಾಡಿದ ಏಕಮೇವಾದ್ವೀತೀಯ ಸಂಶೋಧಕನೆಂಬ ಹಿರಿಮೆಗೂ ಪಾತ್ರನಾದ.
ಮೆಕೆಂಜಿ ಕಲೆಕ್‌ಷನ್‌-೧೯೨೮,ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.ಅದು   ಹಸ್ತ ಪ್ರತಿಗಳು ಸಾಹಿತ್ಯ, ಇತಿಹಾಸ, ಪುರಾತತ್ವ ವಸ್ತುಗಳು ಮತ್ತು ಇತರೆ ಐತಿಹಾಸಿಕ ಆಕರಗಳ ವರ್ಣನಾತ್ಮಕ    ಕ್ಯಾಟಲಾಗ್,-ಎಚ್‌ಎಚ್ ವಿಲ್ಸನ್‌ ನಿಂದ ಪ್ರಫ್ರಥಮವಾಗಿ ಕಲ್ಕತ್ತಾದಲ್ಲಿ ಪ್ರಕಟವಾಯಿತು.ನಂತರ ಆ ಕಾರ್ಯ ಚೆನ್ನೈನಲ್ಲಿ ಮುಂದುವರಿಯಿತು

ಬ್ರಿಟಿಷ್‌ ಮ್ಯೂಜಿಯಂ ಮತ್ತು ಲೈಬ್ರರಿಯಲ್ಲಿರುವ ಮೆಕೆಂಜಿಯ ಸಂಗ್ರಹವು ಇಂದಿಗೂ ಸಂಶೋದಕರ ಪಾಲಿಗೆ ಅಮೂಲ್ಯ ನಿಧಿ

ಮೆಕೆಂಜಿ ಕಲೆಕ್‌ಷನ್‌ ಪುಸಕ
ಜಾವಾ,,ಬರ್ಮಾ ,ಹಳೆಗನ್ನಡ, ತೆಲುಗು,ಒರಿಯಾ ಮರಾಠಿ, ಹಿಂದಿ, ಅರಾಬಿಕ್, ತಮಿಳು ಭಾಷೆಯ ,ಸ್ಥಳೀಯ ಇತಿಹಾಸ, ಜೀವನ ಚರಿತ್ರೆ,ಅಧ್ಯಯನ ಮಾಡುವವರು ಮೊದಲು ನೆನೆಯ ಬೇಕಾದದ್ದು ಮೆಕೆಂಜಿಯನ್ನು .”ಭಾರತದ ಭೂಪಟವನ್ನು ರಚಿಸಿದ ವ್ಯಕ್ತಿ’ ಎಂದು ಗುರುತಿಸುವರು. ಮೆಕೆಂಜಿ  ತನ್ನ ಕರ್ಮಭೂಮಿಯಾದ ಭಾರತಲ್ಲೇ ೧೮೨೧  ರಲ್ಲಿ ಕೊನೆಯುಸಿರು ಎಳೆದ..ಕಲಕತ್ತಾದಲ್ಲಿನ ಸೌತ್‌ಪಾರ್ಕ ರಸ್ತೆಯ ಸ್ಮಶಾನದಲ್ಲಿ ಅವನ  ಸಮಾಧಿ ಮಾಡಲಾಯಿತು. ಅವನ ಪ್ರಾಚ್ಯವಸ್ತುಗಳ ಸಂಗ್ರಹ ಮಡದಿಗೆ ಸೇರಿತು . ಅದನ್ನು ಬ್ರಿಟಷ್ ಸರ್ಕಾರ ಬರಿ ೧೦೦೦೦ಪೌಂಡು ಬೆಲೆ ನೀಡಿ ಖರೀದಿಸಿತು. ಅವುಗಳಲ್ಲಿ  ಬಹುಪಾಲನ್ನು ಇಂಗ್ಲೆಂಡಿಗೆ ಸಾಗಿಸಿತು. ಅವನ ಸಂಗ್ರಹದ ಹೆಚ್ಚಿನ , ದಾಖಲೆಗಳು, ಹಸ್ತಪ್ರತಿಗಳು, ಕಲಾಕೃತಿಗಳು ಈಗ ಬ್ರಿಟಿಷ್‌ ಮ್ಯೂಜಿಯಂ ಮತ್ತು  ಬ್ರಿಟಿಷ್‌ ಲೈಬ್ರರಿಯ ಓರಿಯಂಟಲ್‌ ಮತ್ತು ಇಂಡಿಯಾ ಆಫೀಸ್‌ನಲ್ಲಿವೆ. ಸ್ವಲ್ಪಭಾಗ ಚೆನ್ನೈನ ಸರ್ಕಾರಿ ಪೌರಾತ್ಯ ಹಸ್ತಪ್ರತಿ ಲೈಬ್ರರಿಯಲ್ಲೂ ಇವೆ.. ರಾಜ್ಯ ಪುನರ್‌ವಿಂಗಡಣೆ ನಂತರ ಅವನ್ನು  ಮೈಸೂರಿನ  ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಲಾಗಿದೆ.ಪುರಾತತ್ವ ಇಲಾಖೆ , ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ  ಅವುಗಳ ಪ್ರತಿಗಳು ಇವೆ.
ಮೆಕೆಂಜಿಯ ಪುರಾತತ್ವ ವಸ್ತುಗಳ ಸಂಗ್ರಹ ಮಧ್ಯಕಾಲೀನ ಇತಿಹಾಸ ಆಕರಗಳ ಸಾಗರವೆನ್ನಬಹುದು.ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಹಾಗೂ ಬರ್ಮಾ ಮತ್ತು ಜಾವಗಳ ಇತಿಹಾಸ, ಸಾಹಿತ್ಯ ,ಮಧ್ಯಕಾಲೀನ ಜನಜೀವನ ಮತ್ತು ರಾಜಕೀಯ ಅಧ್ಯಯನ ಮಾಡುವವರು ಮೆಕೆಂಜಿಯನ್ನು ಮರೆಯುವ ಮಾತಿಲ್ಲ.ಮೆಕೆಂಜಿಯ ಸಂಗ್ರಹವೇ ಅವರಿಗೆ ಅತಿ ಮುಖ್ಯ ಆಕರ.

ಆಕರ ಮೂಲಗಳು  :ಸ್ಕಾಟಲೇಂಡಿನ Stornoway Historical Society,ಹಾಗೂ ಅನೇಕ ಅಂತರ್‌ಜಾಲತಾಣಗಳು ಮತ್ತು ಅಭಿನಂದನ ಗ್ರಂಥಗಳು, ಡಾ. ಬಿ ಎಸ್‌ ಪುಟ್ಟ ಸ್ವಾಮಿಯವರ ಕರ್ನಲ್‌ ಮೆಕೆಂಜಿ ಮತ್ತು ಕೈಫಿಯತ್ತು ಗಳಿಗೆ ಮಾಹಿತಿ ಮತ್ತು ಚಿತ್ರಗಳಿಗಾಗಿ ಕೃತಜ್ಞತೆಗಳು





.


1 comment:

  1. ತುಂಬ ಸೊಗಸಾದ ಲೇಖನ...!

    ReplyDelete