Friday, November 16, 2012

ಡಿ. ಸ್ಮಿತಾರೆಡ್ಡಿ ಲೇಖನ


ಘಾಟಿ ಪರಿಸರದ ಪ್ರಾಗೈತಿಹಾಸಿಕ ನೆಲೆಗಳು ಒಂದು ಶೋಧ

ಡಿ. ಸ್ಮಿತಾರೆಡ್ಡಿ
ನಂ. ೭೦೨, ಬಿ-೨, ಕೃಷ್ಣಾ ಬ್ಲಾಕ್ ರಾಷ್ಟ್ರೀಯ ಕ್ರೀಡಾಗ್ರಾಮ ವಸತಿ ಸಂಕೀರ್ಣ ಕೋರಮಂಗಲ, ಬೆಂಗಳೂರು-೫೬೦೦೪೭.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದಕ್ಷಿಣ ಭಾರತದ ಪ್ರಮುಖ ನಾಗಾರಾಧನಾ ಸ್ಥಳವಾಗಿದ್ದು, ಪುಣ್ಯ ಕ್ಷೇತ್ರವೆಂದು ಪರಿಗಣಿತವಾಗಿದೆ. ಸುತ್ತಲೂ ಬೆಟ್ಟಗುಡ್ಡಗಳನ್ನೊಳಗೊಂಡ ಕಣಿವೆಯಲ್ಲಿ ಸುಬ್ರಹ್ಮಣ್ಯ ದೇವಾಲಯವಿರುವುದರಿಂದ, ಈ ಗ್ರಾಮವನ್ನು ಘಾಟಿ ಸುಬ್ರಹ್ಮಣ್ಯವೆಂದೂ ಸಹ ಕರೆಯುತ್ತಾರೆ. ಪ್ರಕೃತಿಯ ಸೊಬಗಿನಿಂದ ಮನೊಂಹರವಾದ ಸ್ಥಳದಲ್ಲಿರುವ ಈ ಗ್ರಾಮ ಆಸ್ತಿಕರನ್ನು ಮಾತ್ರವಲ್ಲದೆ, ನಿಸರ್ಗಪ್ರಿಯರನ್ನೂ ಸಹ ಆಕರ್ಷಿಸುತ್ತಿದೆ. ಇದು ಉತ್ತರ ಪಿನಾಕಿನಿ ನದಿಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಸ್ಥಳ ವ್ಯವಸಾಯಕ್ಕೆ ತಕ್ಕಂತಹ ವಾತಾವರಣವನ್ನು ಹೊಂದಿದೆ. ಹಾಗಾಗಿ ಘಾಟಿ ಮತ್ತು ಅದರ ಕಣಿವೆಯಲ್ಲಿ ಬರುವ ಗ್ರಾಮಗಳು ಹಿಂದೊಮ್ಮೆ ಪ್ರಾಗೈತಿಹಾಸಿಕ ಮಾನವನ ನೆಲೆಯಾಗಿತ್ತೆಂಬುದರಲ್ಲಿ ಸಂಶಯವೇ ಇಲ್ಲ.
ಘಾಟಿ ಗ್ರಾಮಕ್ಕೆ ಸುಮಾರು ಎರಡು ಕಿ.ಮೀ.ಗಳ ಅಂತರದಲ್ಲಿ ಲಗುಮೇನಹಳ್ಳಿ ಎಂಬ ಒಂದು ಪುಟ್ಟ ಗ್ರಾಮವಿದೆ. ಗ್ರಾಮಕ್ಕೆ ಹೊಂದಿಕೊಂಡಂತಿರುವ ಹೊಲಗಳಲ್ಲಿ ಹಾಗೂ ಮನೆಗಳ ಅಕ್ಕಪಕ್ಕದಲ್ಲಿಯೇ ಹಲಾವರು ಚೌಕಾಕಾರದ ಕಿಂಡಿಕೋಣೆಯ (ಸ್ವಲ್ಪ ಮಟ್ಟಿಗೆ ಸ್ವಸ್ತಿಕ ಆಕಾರದ) ಶಿಲಾ ಗೋರಿಗಳಿವೆ ಇವು ಸುಮಾರು ಅರ್ಧ ಕಿ.ಮೀ. ಸುತ್ತಳತೆಯಲ್ಲಿ ಪ್ರಸರಿಸಿವೆ. ಆದರೆ ವ್ಯವಸಾಯ ಕಾರ್ಯ ಮನೆಗಳ ನಿರ್ಮಾಣ, ಅವುಗಳ ಬಗೆಗಿನ ಅವಜ್ಞೆ ಹಾಗೂ ನಿಧಿಗಳ್ಳರಿಂದಾಗಿ ಬಹುತೇಕ ಎಲ್ಲಾ ಶಿಲಾಗೋರಿಗಳೂ ನಾಶವಾಗಿ ಅವಶೇಷಗಳ ರೂಪದಲ್ಲಿ ಉಳಿದಿವೆ. ಗ್ರಾಮಕ್ಕೆ ಹೊಂದಿಕೊಂಡ ಹೊಲದಲ್ಲಿ ಇಂತ ಭಗ್ನಾವಸ್ಥೆಯಲ್ಲಿರುವ ಸುಮಾರು ಹದಿನಾರು ಬೃಹತ್ ಶಿಲಾ ಗೋರಿಗಳನ್ನು ಕಾಣಬಹುದು. (ಹೊಲಗಳಲ್ಲಿ ಈ ಶಿಲಾಸಮಾಧಿಗಳಿರುವುದರಿಂದ ಹೆಚ್ಚಿನವು ಕಣ್ಮರೆಯಾಗಿವೆ.) ಇವುಗಳ ಉದ್ದ ಸುಮಾರು ಎಂಟು ಅಡಿ ಇದ್ದು ಅಗಲ ಸುಮಾರು ಮೂರು ಅಡಿಗಳಷ್ಟಿದೆ. ಆದರೆ ಮೇಲ್ಭಾಗದ ಚಪ್ಪಡಿಕಲ್ಲು ಎಷ್ಟು ವಿಸ್ತೀರ್ಣವಿತ್ತು ಎಂಬುದನ್ನು ಹೇಳುವುದು ಕಷ್ಟವಾದರೂ ಅಲ್ಲಿ ಚದುರಿ ಬಿದ್ದಿರುವ ಅವಶೇಷಗಳ ಆಧಾರದ ಮೇಲೆ ಅವು ಸುಮಾರು ಎಂಟು ಅಡಿ ಉದ್ದ ಹಾಗೂ ಐದು ಅಡಿ ಅಗಲವನ್ನು ಹಾಗೂ ಸುಮಾರು ೧ ೧/೨ ಅಡಿ ದಪ್ಪವನ್ನು ಹೊಲದಿದ್ದಿರಬಹುದೆಂದು ಊಹಿಸ ಬಹುದು. ಗ್ರಾಂದ ಬಹುತೇಕ ಎಲ್ಲ ಶಿಲಾಗೋರಿಗಳೂ ಇದೇ ಸ್ವರೂಪದಲ್ಲಿವೆ. ಶಿಲಾಗೋರಿಗಳ ಕೋಣೆ ಕಿಂಡಿಯು ಸುಮಾರು ಒಂದು ಅಡಿ ವ್ಯಾಸವನ್ನು ಹೊಂದಿದೆ.
ಲಗುಮೇನಹಳ್ಳಿಯಿಂದ ಪೂರ್ವದಿಕ್ಕಿನ ಕಡೆಗಿರುವ ಬೆಟ್ಟದ ಮೇಲೆ ಬೃಹತ್ತಾದ ನೈಸರ್ಗಿಕವಾದ ಒಂದು ಕಲ್ಮನೆಯಿದ್ದು, ಇದು ಸುಮಾರು ೧೪ ಅಡಿಗಳಷ್ಟು ಉದ್ದ, ಹತ್ತು ಅಡಿಗಳಷ್ಟು ಅಗಲವಿದೆ. ಹಾಗೂ ಬಂಡೆಯ ದಪ್ಪವೂ ಸಹ ಸುಮಾರು ೨ ೧/೨ ಅಡಿಗಳಷ್ಟು ದಪ್ಪವಿದೆ. ಮುಂಭಾಗವು ಸುಮಾರು ಮೂರು ಅಡಿಗಳಿಗಿಂತಲೂ ಹೆಚ್ಚು ದಪ್ಪವನ್ನು ಹೊಂದಿದೆ. ಈ ಕಲ್ಮನೆಯ ಕೆಳಗೆ ಸುಮಾರು ೬ ಮಂದಿ ಮಲಗಬಹು ದಾದಷ್ಟು ಸ್ಥಳಾವಕಾಶವಿದೆ. (ಇದರ ಆಸುಪಾಸಿನಲ್ಲೇ ಇನ್ನೂ ನಾಲ್ಕು ಶಿಲಾಸಮಾಧಿಗಳಿವೆ.) ಹಾಗೆಯೇ ಸ್ವಲ್ಪ ಮುಂದೆ ಬೆಟ್ಟದ ನಡುನೆತ್ತಿಯನ್ನು ತಲುಪಿದರೆ, ಅಲ್ಲಿ ಸ್ವಾಭಾವಿಕವಾದ ಬೃಹತ್ ಕಲ್ಲುಬಂಡೆಗಳಿವೆ. ಒಂದಕ್ಕೊಂದು ತಗುಲಿ ಕೊಂಡಿರುವ ಎಡರು ಬಂಡೆಕಲ್ಲುಗಳ ಕೆಳಭಾಗದಲ್ಲಿ ನುಸುಳಿ ದರೆ, ಎಡಭಾಗದ ದೊಡ್ಡ ಬಂಡೆಯ ಕೆಳಗೆ ಒಬ್ಬ ವ್ಯಕ್ತಿ ಒಳಗೆ ನುಸುಳಬಹುದಾದಷ್ಟು ಸಣ್ಣ ಕಿಂಡಿಯಿದೆ. ಈ ಕಿಂಡಿಯ ಮೂಲಕ ಒಳಗೆ ಹೋದರೆ ಆ ಬಂಡೆಯ ಕೆಳಗೆ ಸುಮಾರು ೧೨ ಜನ ಮಲಗುವಷ್ಟು ವಿಶಾಲವಾದ ಸ್ಥಳವಿದೆ. ಆ ಸ್ಥಳದಲ್ಲಿ ಇಂದಿಗೂ ಮಡಿಕೆ ಕುಡಿಕೆಗಳನ್ನಿಟ್ಟು ಪೂಜೆ ಮಾಡುವ ಪದ್ಧತಿಯಿದೆ.  ಪದ್ಧತಿ ಗಮನಿಸಿದರೆ ಹಿಂದೆ ಆ ಸ್ಥಳದಲ್ಲಿ ಪ್ರಾಗೈತಿಹಾಸಿಕ ಕಾಲದ ಮಾನವರು ವಾಸಿಸುತ್ತಿದ್ದು, ಅವನಿಗೆ ಸಂಬಂಧಿಸಿದ ಅವಶೇಷಗಳು ಅಲ್ಲಿ ಇದ್ದಿರಲೂ ಬಹುದು. ಈ ಜಾಗದಲ್ಲೆ ನವಶಿಲಾಯುಗದ ಕಾಲಕ್ಕೆ ಸೇರಿರುವ ಒಂದು ಒರಟಾದ ಶಿಲಾಯುಧ (ಕಲ್ಲಿನ ಗುಂಡು) ಸಹ ಇದೆ (ಈ ಶಿಲಾಯುಧವು ಬೆಣಚುಕಲ್ಲಿನದ್ದಾಗಿದ್ದು, ಚೌಕಾಕಾರದಲ್ಲಿದೆ. ಇದನ್ನು ಅಲ್ಲಲ್ಲಿ ಚಕ್ಕೆ ಎಬ್ಬಿಸಿ ಬಳಸಿರುವುದು ಚಿತ್ರದಿಂದ ಸ್ಪಷ್ಟವಾಗುತ್ತದೆ. ಇದು ಸುಮಾರು ೬x ಇದೆ.)  ಈಗ  ಅಲ್ಲಿ ಸೋಮವಾರ ಮುನೇಶ್ವರ ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ. ಬೆಟ್ಟದಿಂದ ಗ್ರಾಮಕ್ಕೆ ಇಳೀಯುವಾಗ ಒಂದು ಕಡೆ ಕಲ್ಲುಗಳನ್ನಿಟ್ಟು ಪೂಜಿಸ ಲಾಗುತ್ತದೆ. ಅಲ್ಲಿ ಒಂದು ಕಲ್ಲಿನ ಮೇಲೆ ಒಂದು ರೇಖಾ ಚಿತ್ರವಿದ್ದು ಅದು ಗೂಳಿಯ ರೇಖಾಚಿತ್ರವಿರಬಹುದೆಂದು ಊಹಿಸಬಹುದು.
ಲಗುಮೇನಹಳ್ಳಿ ಗ್ರಾಮದಿಂದ ದಕ್ಷಿಣಕ್ಕೆ ಸುಮಾರು ೨.ಕಿ.ಮೀ ದೂರ ಕ್ರಮಿಸಿದರೆ ಅಲ್ಲಿ ಮತ್ತೊಂದು ಬೆಟ್ಟವಿದೆ. ಬೆಟ್ಟವನ್ನು ಹತ್ತುತ್ತಿದ್ದಂತೆಯೇ ಪ್ರಾರಂಭದಲ್ಲಿಯೇ ಉತ್ತರಾಭಿ ಮುಖವಾಗಿ ಒಂದು ಸ್ವಾಭಾವಿಕವಾದ ಗುಹೆಯಿದ್ದು, ಗುಹೆಯ ಒಳಗೆ ದೊಡ್ಡದಾದ ಸುರಂಗ ಮಾದರಿಯ ರಚನೆಯಿದೆ. ಗುಹೆಯ ಸ್ವಾಭಾವಿಕ ರಚನೆಯಾಗಿದೆ. ಗುಹೆಯ ಬೆಟ್ಟದ ಕೆಳಗಿದ್ದರೂ, ಗುಹೆಯ ಮೇಲ್ಭಾಗವನ್ನು ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳನ್ನು ಒಂದರ ಮೇಲೊಂದು ಜೋಡಿಸಿರು ವಂತಿದೆ. ಬೆಟ್ಟದ ಆ ಭಾಗದ ರಚನೆಯೂ ಸಹ ವಿಶಿಷ್ಟ ವಾಗಿದ್ದು, ಅದನ್ನು ನೋಡಿದಾಕ್ಷಣವೇ ಅದು ಹಿಂದೊಮ್ಮೆ ಮಾನವನ ನೆಲೆಯಾಗಿತ್ತೆಂದು ಸ್ಪಷ್ಟವಾಗುತ್ತದೆ.
ಗುಹೆಯಿರುವ ಭಾಗದಿಂದ ಬೆಟ್ಟದ ಮೇಲೆಯೇ ಹಿಂದಕ್ಕೆ ಸಾಗಿದರೆ ಬೆಟ್ಟ ಸಮತಟ್ಟಾಗಿದ್ದು, ವಿಶಾಲವಾದ ಬಯಲು ಪ್ರದೇಶವಿದೆ. ಈ ಪ್ರದೇಶ ಪ್ರಾಗೈತಿಹಾಸಿಕ ಮಾನವನ ನಿವಾಸವಾಗತ್ತೆಂಬುದಕ್ಕೆ ಪೂರಕವಾಗಿ ಈ ಬೆಟ್ಟದ ಮೇಲೆ ಎರಡು ಪ್ರಾಕೃತಿಕ ದೊಣೆಗಳಿದ್ದು, ಎಲ್ಲಾ ಋತುಗಳಲ್ಲಿಯೂ ಅಲ್ಲಿ ನೀರು ಇರುತ್ತದೆಂದು ಸ್ಥಳೀಯರು ಹೇಳುತ್ತಾರೆ. ಆ ದೊಣೆಯ ಮೇಲ್ಭಾಗದಲ್ಲಿ ಒಂದು ಭಗ್ನಾವಸ್ಥೆಯ ನಿಲುವುಗಲ್ಲು ಸಹ ಇದೆ. ಪ್ರಾಗೈತಿಹಾಸಿಕ ಕುರುಹುಗಳಿರುವ ಬೆಟ್ಟದ ಪ್ರದೇಶಗಳಲ್ಲಿ ಸರ್ವೇಸಾಧಾರಣವಾಗಿ ಕಂಡು ಬರುವಂತೆ ಇಲ್ಲಿಯೂ ಸಹ ಕಲ್ಲುಗಳ ಮೇಲೆ ಕಲ್ಲುಗಳನ್ನು ಪೇರಿಸುವ ವ್ಯವಸ್ಥೆಯನ್ನು ಕಾಣಬಹುದು. ಮದುವೆ ಯಾಗದಿರುವವರು, ಮಕ್ಕಳಾಗದಿರುವವರು ಹಾಗೂ ಮನೆಯನ್ನು ಕಟ್ಟಬೇಕೆಂಬ ಆಕಾಂಕ್ಷೆ ಇರುವವರು ತಮ್ಮ ಆಸೆಗಳು ಈಡೇರುತ್ತವೆಂಬ ಆಶಯದಿಂದ ಈಗಲೂ ಇದೇ ಪದ್ಧತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಬೆಟ್ಟದ ಮೇಲೆ ಅಲ್ಲಲ್ಲಿ ಕಲ್ಮನೆಗಳು ಭಗ್ನಗೊಂಡಿರುವ ಕುರುಹುಗಳು ಕಂಡು ಬರುತ್ತದೆ.
ರಮಣೀಯವಾದ ಸುತ್ತಲೂ ಬೆಟ್ಟಗುಡ್ಡಗಳ ನ್ನೊಳಗೊಂಡ ಕಣಿವೆಯಲ್ಲಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಇಲ್ಲಿಯವರೆಗೆ ಪುಣ್ಯಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತ್ತು. ಈ ಶೋಧದಿಂದ ಈ ಪರಿಸರವು ಕ್ರಿ.ಸ್ತಶಕದ  ಪ್ರಾರಂಭದ ವೇಳೆಗಾಗಲೇ ಮಾನವನಿಗೆ ಆವಾಸಸ್ಥಾನವಾಗಿತ್ತೆಂದು ಇಲ್ಲಿನ ಶಿಲಾಗೋರಿ, ಕಲ್ಮನೆ, ಗುಹೆಗಳು ಹಾಗೂ ನಿಲುವುಗಳಿಂದ ಸ್ಪಷ್ಟವಾಗುತ್ತದೆ.
[ಕ್ಷೇತ್ರ ಕಾರ್ಯಕ್ಕೆ ನನ್ನೊಂದಿಗೆ ಬಂದು ನೆರವು ನೀಡಿದ ಪತಿ ಎನ್.ಸಿ. ಬಾಬುರೆಡ್ಡಿಯವರಿಗೆ ಹಾಗೂ ಮಗಳು ಎಸ್.ಬಿ. ಸೃಷ್ಟಿಗೆ ಕೃತಜ್ಞತೆಗಳು.]



No comments:

Post a Comment