Thursday, July 3, 2014

ಚಿಕ್ಕಮಗಳೂರು ಜಿಲ್ಲೆಯ ಶಾಸನೋಕ್ತ ಅಗ್ರಹಾರಗಳು
ಡಾ. ಕೆ. ವಸಂತಲಕ್ಷ್ಮಿ
‘ಅಗ್ರಹಾರ’ಗಳು, ವೇದಸಂಪನ್ನರಾದ ಬ್ರಾಹ್ಮಣರಿಗೆ ಅವರ ಷಟ್ಕರ್ಮಗಳನ್ನು ಸಾಂಗವಾಗಿ ನಡೆಸಿಕೊಂಡು ಬಾಳಲೆಂದು ರಾಜರು ನೀಡುತ್ತಿದ್ದ ‘ಅಕರಗ್ರಾಮಗಳಾಗಿದ್ದವು’ ಪ್ರಾಚೀನ ಶಾಸ್ತ್ರಗ್ರಂಥಗಳು ರಾಜನಾದವನು ರಾಜ್ಯದಲ್ಲಿ ಶಾಂತಿ ನೆಲೆಸಿದ್ದು ಸುಭಿಕ್ಷವಾಗಿರಲು ರಾಜಧನದಿಂದ ವೇದೋಕ್ತ ಸಂಪನ್ನರಿಗೆ ಭೂದಾನ ನೀಡಬೇಕೆಂದು ತಿಳಿಸುತ್ತವೆ. ನಾಡಿನಲ್ಲಿ ಭೂಸುರರು ನೆಲೆಸಿದ್ದು, ಅವರು ನಡೆಸುತ್ತಿದ್ದ ಯಾಗಯಜ್ಞ ಗಳಿಂದ ನಾಡು ಧರ್ಮದ ಬೀಡಾಗುತ್ತದೆ. ಅವರು ಮಾಡುವ ಅಧ್ಯಯನ, ಅಧ್ಯಾಪನಗಳಿಂದ ಜನರು ಸುಶಿಕ್ಷಿತರು, ಸಜ್ಜನರು, ಸುಶೀಲರೂ ಆಗುತ್ತಾರೆ. ರಾಜನು ದಾನ ನೀಡಿ ಸತ್ಕರ್ಮಿ ಯಾಗಿ, ಶಾಂತಿ ಪ್ರಿಯನಾಗುವನೆಂದು ತಿಳಿಸಿದೆ. ಹೀಗೆ ದಾನ ನೀಡುವುದರಿಂದ ರಾಜನಿಗೆ ಪುಣ್ಯಪ್ರಾಪ್ತಿಯೂ ಆಗುತಿತ್ತು. ಡಾ|| ಡಿ.ಸಿ. ಸರ್ಕಾರ್‍ರವರು ವಾಚಸ್ಪತ್ಯ ಗ್ರಂಥವನ್ನಾಧರಿಸಿ-ವಿದ್ಯಾಭ್ಯಾಸವನ್ನು ಮುಗಿಸಿ ಬಂದ ಬ್ರಾಹ್ಮಣ ವಟುಗಳಿಗೆ ನೆಮ್ಮದಿಯಿಂದ ನೆಲೆಸಲು ಅನುವಾಗುವಂತೆ ರಾಜರು ಅಗ್ರಹಾರ ದಾನ ಕೊಡುತ್ತಿದ್ದರೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಗ್ರಹಾರವೆಂದರೇ- ಶ್ರೇಷ್ಠವಾದ ಭೂಮಿಯನ್ನು ಬ್ರಾಹ್ಮಣರಿಗೆ ಅಕರವಾಗಿ ಕೊಟ್ಟ ಭೂಭಾಗವಾಗಿರುತ್ತದೆ. ಈ ಭೂಭಾಗದ ಎಲ್ಲಾ ಆದಾಯಗಳೂ ದಾನ ಪಡೆದ ಬ್ರಾಹ್ಮಣರಿಗೆ ಸೇರುತ್ತಿದ್ದು, ಅವರನ್ನು ಶಾಸನಗಳಲ್ಲಿ ‘ಮಹಾಜನ’ರೆಂದು ಕರೆಯಲಾಗಿದೆ. ಡಾ. ಚಿದಾನಂದ ಮೂರ್ತಿಯವರು- ಶಾಸನಗಳಲ್ಲಿ ಬರುವ ಮಹಾಜನರ ವಿಶೇಷಣಗಳು ಬ್ರಾಹ್ಮಣರದ್ದಾಗಿದೆ. ಇವು ಬೇರೆಯಾರಿಗೂ ಹೊಂದುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಆದರೆ ಡಾ|| ಅಲ್ಟೇಕರರು- ಮಹಾಜನರೆಂದರೇ ಬ್ರಾಹ್ಮಣರೇ ಆಗಬೇಕಿಲ್ಲ, ಬ್ರಾಹ್ಮಣೇತರರು ಕಡಿಮೆ ಸಂಖ್ಯೆಯಲ್ಲಿ ಸೇರಿರು ತ್ತಾರೆ ಎಂದೂ ಅರ್ಥೈಸುತ್ತಾರೆ. ಇದರಂತೆ ಶಾಸನಗಳಲ್ಲಿ ಅಗ್ರಹಾರಗಳಲ್ಲಿ ನೆಲೆಸಿದ್ದ ಇತರ ಜನರ ಬಗೆಗೂ ಕೆಲವು ಉಲ್ಲೇಖಗಳೂ ಲಭ್ಯವಿವೆ.
ಶಾಸನಗಳಲ್ಲಿನ ‘ಅಗ್ರಹಾರ’ಗಳ ಬಗೆಗಿನ ವಿವರಗಳನ್ನು ಗಮನಿಸಿದರೆ ಅಕರವಾಗಿ ನೀಡಿದ ಗ್ರಾಮಗಳನ್ನು ‘ಅಗ್ರಹಾರ’, ‘ಬ್ರಹ್ಮಪುರಿ’, ‘ಸರ್ವಜ್ಞಪುರಿ’ ಎಂದೂ ಕರೆಯಲಾಗಿದೆ. ಇದರಂತೆ ದಾನ ನೀಡುವ ಸಂದರ್ಭದಲ್ಲಿ ದಾನ ನೀಡುವವರು ಆ ಭಾಗಕ್ಕೆ ಹೊಸ ಹೆಸರೊಂದನ್ನು ಇಟ್ಟು ದಾನ ನೀಡುತ್ತಿದ್ದರು. ಹೀಗೆ ಹೆಸರಿಸುವಲ್ಲಿ, ಆ ಪ್ರದೇಶದಲ್ಲಿನ ದೇವರ ಹೆಸರು ಅಥವಾ ದಾನ ನೀಡಿದ ರಾಜನ ಹೆಸರನ್ನು ಸೇರಿಸಿ ಪುರವಾಗಿ ಮಾಡಿ ದಾನ ನೀಡಿರುವುದನ್ನು ಗಮನಿಸಬಹುದು. ಚಿಕ್ಕಮಂಗಳೂರು ಜಿಲ್ಲೆಯ ಶಾಸನಗಳಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಅಗ್ರಹಾರಗಳು ಲಭ್ಯವಿದ್ದು, ಕೆಲವು ಪ್ರಮುಖ ಅಗ್ರಹಾರಗಳನ್ನು ಮಾತ್ರ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಜಿಲ್ಲೆಯ ಕೆಲವು ಶಾಸನಗಳನ್ನು ಗಮನಿಸಿದಾಗ ಆ ಕಾಲದಲ್ಲಿ ಅಗ್ರಹಾರಗಳ ಆಡಳಿತ, ನಿರ್ವಹಣೆ ಮತ್ತು ಅಲ್ಲಿನ ಚಟುವಟಿಕೆಗಳ ಬಗೆಗೂ ತಿಳಿದುಬರುತ್ತಿದೆ.
ಕಡೂರು ತಾಲೂಕಿನ ಆಸಂದಿ ಗ್ರಾಮದ ತಾಮ್ರ ಶಾಸನವೊಂದು (ಕಡೂರು-24) ಕ್ರಿ.ಶ. 795ರಲ್ಲಿ ಗಂಗರ ದೊರೆ 2ನೇ ಶಿವಮಾರನು ಆಸಂದಿ ವಿಷಯದ ತೋರಗಲ್ಲು ಗ್ರಾಮವನ್ನು ನಾನಾವೃತ್ತಿಗಳಾಗಿ ವಿಂಗಡಿಸಿ, ವಿವಿಧಗೋತ್ರದ ವೇದಭ್ಯಾಸಿಗಳಾದ ಬ್ರಾಹ್ಮಣರಿಗೆ ಸರ್ವಬಾಧ ಪರಿಹಾರವಾಗಿ ಬಿಟ್ಟಿದ್ದನ್ನು ತಿಳಿಸುತ್ತಿದೆ. ಈ ಜಿಲ್ಲೆಯ ಶಾಸನಗಳಲ್ಲಿ ಅಗ್ರಹಾರದ ಹಿನ್ನೆಲೆಯಲ್ಲಿ ಗಮನಿಸಿದಾಗ ಸಿಗುವ ಪ್ರಾಚೀನ ಅಕರ ಗ್ರಾಮದಾನದ ಶಾಸನವಿದು. ಆದರೆ ಇದರಲ್ಲಿ ‘ಗ್ರಾಮ’ವನ್ನು ‘ಅಗ್ರಹಾರ’ವೆಂದು ಕರೆದಿಲ್ಲ. ಬಹುಶಃ ಈ ಪರಿಸರದಲ್ಲಿ 8ನೇ ಶತಮಾನದಲ್ಲಿ ‘ಅಗ್ರಹಾರ’ ಪದದ ಬಳಕೆ ಇದ್ದಂತಿಲ್ಲ. ಆದರೆ 9ನೇ ಶತಮಾನದ ಚಿಕ್ಕನಾಯಕನಹಳ್ಳಿಯ ಶಾಸನವು (ಕ.94) ಅಗ್ರಹಾರ ಎಳಮ್ಬುಣುಸೆಯ ಬ್ರಹ್ಮದೇಯವನ್ನು ಮಾಸಾಮಿ ಎಂಬುವನಿಗೆ ಕೊಡಲಾಗದೇ, ಅವನೊಂದಿಗೆ ಹೋರಾಡಿ ಮಣದಿಯ, ಸಿರಿವಚ್ಚ ಮೊದಲಾದವರು ಸತ್ತದ್ದನ್ನು ತಿಳಿಸುವ ವೀರಗಲ್ಲು ಶಾಸನವಾಗಿದೆ. ಇದರಿಂದ 9ನೇ ಶತಮಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಳ್‍ಪುಣಸೆ ಗ್ರಾಮ ಅಗ್ರಹಾರವಾಗಿತ್ತೆಂದು ತಿಳಿಯುತ್ತದೆ. ಈ ಜಿಲ್ಲೆಯ ಅತ್ಯಂತ ಪ್ರಾಚೀನ ಅಗ್ರಹಾರ ಇದಾಗಿದೆ.
ಚಿಕ್ಕಮಗಳೂರು ಜಿಲ್ಲೆಯು ಹೊಯ್ಸಳ ನಾಡಿನ ಪ್ರಮುಖ ಭಾಗಗಳಲ್ಲಿ ಒಂದಾಗಿದ್ದು ಈ ಜಿಲ್ಲೆಯಲ್ಲಿ ಹೊಯ್ಸಳರ ಶಾಸನಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭಿಸಿವೆ. ಅಗ್ರಹಾರದ ಉಲ್ಲೇಖವಿರುವ ಸು. 40 ಶಾಸನಗಳು ದೊರೆಯುತ್ತವೆ. ಇವುಗಳಿಂದ ಹೊಯ್ಸಳರ ಕಾಲದಲ್ಲಿ ಈ ಜಿಲ್ಲೆಯಲ್ಲಿ ಅನೇಕ ಅಗ್ರಹಾರಗಳು ನಿರ್ಮಾಣವಾಗಿತ್ತೆಂದು ತಿಳಿಯುತ್ತಿದೆ. ಈ ಜಿಲ್ಲೆಯಲ್ಲಿ ಸು. 12ನೇ ಶತಮಾನದಿಂದ ಅಗ್ರಹಾರಗಳ ರಚನೆಯು ಆರಂಭವಾಗಿದ್ದು, ಸು. 17ನೇ ಶತಮಾನದವರೆಗೆ ಅಗ್ರಹಾರಗಳ ನಿರ್ಮಾಣವಾಗಿವೆ. ಈ ಜಿಲ್ಲೆಯ ಶಾಸನಗಳಿಂದ ಅಗ್ರಹಾರಗಳ ಸ್ಥಾಪನೆಯಾದ ಬಗೆ, ಅಗ್ರಹಾರಗಳಲ್ಲಿ ನಡೆಯುತ್ತಿದ್ದ ಕಾರಯ ಕಲಾಪಗಳು ಅಗ್ರಹಾರಗಳ ನಿರ್ವಹಣೆ, ಜೀರ್ಣೋದ್ಧಾರ ಮತ್ತು ಅಗ್ರಹಾರಗಳ ಸಂರಕ್ಷಣೆ ಬಗೆಗೆ ಶಾಸನಗಳು ಬೆಳಕು ಚೆಲ್ಲಿವೆ.
ಕ್ರಿ.ಶ. 1130ರ ಮರಲೆ ಗ್ರಾಮದ ಶಾಸನವು (ಚಿ.ಮಾ.108) ರಾಯಣದಂಡನಾಥನು ಧರ್ಮವೇ ದೃಷ್ಟಾದೃಷ್ಟ ಸುಖದಾಯಿಯೆಂದು ತಿಳಿದು, ದೇವಳಿಗೆ ನಾಡ ಮೊರಲೆಯನ್ನು ಅಗ್ರಹಾರವಾಗಿ ಮಾಡಿ, ಶ್ರೀ ಕೇಧಶವ ದೇವರ ಪ್ರತಿಷ್ಠೆ ಮಾಡಿಸಿದ್ದನ್ನು ಶಾಸನವು ತಿಳಿಸುತ್ತಿದೆ. ಆ ದೇವರಿಗೆ ನಮಸ್ಕರಿಸಲು ಬಂದ ದೊರೆ ವಿಷ್ಣುವರ್ಧನನು ದೇವರ ಅಂಗಭೋಗ, ಗೀತವಾದ್ಯ ನೃತ್ಯಕ್ಕೆಂದು, ಜೀರ್ಣೋದ್ಧಾರಕ್ಕೆಂದು ಗಂಜಿಗೆರೆ ಗ್ರಾಮವನ್ನು ಕೊಟ್ಟನಲ್ಲದೇ ಹಿರಿಮುಗಳಿ, ಮಾಗುಂಡಿಗಳಲ್ಲಿ ಗದ್ದೆಯನ್ನು ಬಿಟ್ಟನು. ರಾಯಣನು ಮೊರಲೆಯಲ್ಲಿ ಬಂಧುಗಳಿಗೆ, ಬ್ರಾಹ್ಮಣರ್ಗೆ ವೃತ್ತಿ ವಿಭಾಗ ಮಾಡಿ ಸರ್ವನಮಸ್ಯವಾಗಿ ಕೊಟ್ಟದ್ದನ್ನು ತಿಳಿಸಿದೆ. ಈ ದೇವರನ್ನು ನಂತರದ ಶಾಸನಗಳಲ್ಲಿ ರಾಯಕೇಶವ ದೇವರೆಂದು, ಅಗ್ರಹಾರವನ್ನು ‘ಶ್ರೀರಾಯಕೇಶವಾಪುರ’, ‘ವಿಷ್ಣುವರ್ಧನ ಕೇಶವಾಪುರು’ವೆಂದು ಕರೆಯಲಾಗಿದೆ.
ಕಡೂರು ತಾಲೂಕಿನ ಬ್ರಹ್ಮಸಮುದ್ರದ ಶಾಸನವು (ಕ.150) ಹೊಯ್ಸಳ ನಾರಸಿಂಹದೇವನಲ್ಲಿ ಶ್ರೀಕರಣದ ಹೆಗ್ಗಡೆಯಾಗಿದ್ದ ನಾಕಿಮಯ್ಯನು ‘ಯಶಸ್ಸು ಮತ್ತು ಧರ್ಮಗಳೇ ಶಾಶ್ವತಧನ’ವೆಂದು ತಿಳಿದು ರಾಜನಿಂದ ಬ್ರಹ್ಮಸಮುದ್ರ ಗ್ರಾಮವನ್ನು ಪಡೆದುಕೊಂಡನು. ನಾಕಿಮಯ್ಯನ ಕಾಲಗುಣ ದಿಂದ ಆ ಕಾಲ ಈ ಕಾಲವೆನ್ನದೇ ಸಮಸ್ತ ಧಾನ್ಯ, ಫಳ ವಾಪೀಗಳು ಸಂಪನ್ನವಾಗಿ ‘ಬಲಿರಾಜ್ಯದಂತೆ’ ಸಂಪದ್ಭರಿತ ವಾಯಿತು. ಈಶ ಭವನವೂ, ವೇದಧ್ವನಿ ಘೋಶ ಮಾಡುತ್ತಿದ್ದ ವಿಪ್ರರೂ, ವ್ಯಾಪಾರಿಗಳೂ, ನೆಲೆಸಿದ್ದ ಈ ಗ್ರಾಮಕ್ಕೆ ‘ಬ್ರಹ್ಮ ಸಮುದ್ರ’ವೆಂಬ ಹೆಸರು ಅನ್ವರ್ಥನಾಮವಾಗಿತ್ತು. (ಕ್ರಿ.ಶ. 1169ರಲ್ಲಿ) ನಾಕಿಮಯ್ಯನು ನಾಕೇಶ್ವರ ದೇವಾಲಯವನ್ನು ಕಟ್ಟಿಸಿ ದೇವರ ಅಂಗಭೋಗ, ನೈವೇದ್ಯ, ಪೂಜಕರಿಗೆ, ಪರಿಚಾರಿಕ ಜೀವಿತಕ್ಕೆಂದೂ, ವೇದಖಂಡಕ, ಶಾಸ್ತ್ರಖಂಡಿಕ, ತರ್ಕವಕ್ಷರ ಖಂಡಿಕರಿಗಳಿಗೆ ಅಗ್ರಾಸನ ನಡೆಸಲೆಂದು ದಾನ ನೀಡಿದ್ದಾನೆ. ಈ ಸ್ಥಾನವನ್ನು ‘ನೈಷ್ಠಿಕಸ್ಥಾನ’ವೆಂದೂ ತಿಳಿಸಿದ್ದು ಶುದ್ಧ ಶೈವರಾದ ಊಧ್ರ್ವಶ್ರೌತ್ರಿಯರಾದ, ಶಂಖಮಠಕ್ಕೆ ಸೇರಿದ ಶ್ರೀಮತ್ ತ್ರಿಲೋಚನಾಚಾರ್ಯರಿಗೆ ನೀಡಲಾಗಿದೆ. ನಂತರದ ಕಾಲದ ಶಾಸನಗಳಲ್ಲಿ ಬ್ರಹ್ಮಸಮುದ್ರವನ್ನು ‘ಶ್ರೀಮದನಾದಿ ಅಗ್ರಹಾರ’ವೆಂದೂ ಉಲ್ಲೇಖಿಸಿದೆ. ಕ್ರಿ.ಶ. 1219ರ ವೀರನಾರಾಯಣನ ದೇವಾಲಯದ ಶಾಸನವು (ಕ.157). ‘ಶ್ರೀಮದನಾದಿಯಗ್ರಹಾರ, ಶ್ರೀಲಕ್ಷ್ಮೀನಾರಾಯಣಪುರ’ವಾದ ಬ್ರಹ್ಮಸಮುದ್ರವೆಂದು ತಿಳಿಸಿದೆ. ಬ್ರಹ್ಮಸಮುದ್ರದ ಲಕ್ಷ್ಮಿನಾರಾಯಣದೇವ ಶಾಸನವು (ಕ.169) ಕ್ರಿ.ಶ. 1172ರಲ್ಲಿ ಹೊಯ್ಸಳ ದೊರೆ ನರಸಿಂಹದೇವನ ಶ್ರೀಕರಣಾಧಿಕಾರಿಯೂ, ಸರ್ವಾಧಿಕಾರಿಯಾದ ಆಚಿಮಯ್ಯನು ಲಕ್ಷ್ಮಿನಾರಾಯಣ ದೇವಾಲಯವನ್ನು ನಿರ್ಮಿಸಿದ್ದನ್ನು ತಿಳಿಸಿದೆ. ಈ ದೇವರ ಶ್ರೀ ಕಾರ್ಯಕ್ಕೆಂದು ದೊರೆ ನಾರಸಿಂಹದೇವನ ಕೈಯಿಂದ ಭೂದಾನವನ್ನು ಕೊಡಿಸಿದ್ದಾನೆ. ಹೀಗೆ ಬ್ರಹ್ಮ ಸಮುದ್ರವು ಶೈವ, ವೈಷ್ಣವ ಜನರೆಲ್ಲ ಒಟ್ಟಾಗಿ ನೆಲೆಸಿದ್ದ ಅಗ್ರಹಾರವಾಗಿತ್ತು.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯದ ಶಾಸನವು (ಚಿ.ಮ.179) ಕ್ರಿ.ಶ. 1180ರಲ್ಲಿ ಹೊಯ್ಸಳ ದೊರೆ ವೀರಬಲ್ಲಾಳದೇವನು ಖಾಂಡೆಯದ ಮಾರ್ಕಂಡೇಶ್ವರ ದೇವರ ಶ್ರೀ ಕಾರ್ಯಕ್ಕೆಂದು ಖಾಂಡೆಯದಗ್ರಹಾರದ ಸಿದ್ದಾಯದಲ್ಲಿನ 50 ಗದ್ಯಾಣವನ್ನು, ಬನವಸೆ ನಾಡಗ್ರಹಾರದ ಶಿವಯೋಗಿ ಮಾಧವದೇವರಿಗೆ ಧಾರಾಪೂರ್ವಕವಾಗಿ ಕೊಟ್ಟನು. ಈ ಶಾಸನ ದಾನಕ್ಕೆ ಸೇರಿದ್ದ ಊರುಗಳನ್ನು ತಿಳಿಸುತ್ತಾ, ಕರಿಗಣಲೆ, ದೇಗುರವಳ್ಳಿಗಳನ್ನು ಹೆಸರಿಸಿದೆ. ಈ ದೇವರ ಭಂಢಾರಕ್ಕೆ, ಖಾಣಿಹೆಗ್ಗಡೆಯಾದ ಬಸವಣ್ಣನು ಅಗ್ಗಿಷ್ಠಿಗೆಗೆಂದು ದಾನ ಬಿಟ್ಟಿದ್ದನ್ನು ತಿಳಿಸಿದೆ. ಈ ಊರಿನ ಮತ್ತೊಂದು ಶಾಸನವು (ಚಿ.ಮ.180) ಕ್ರಿ.ಶ.1183ರಲ್ಲಿ ದೇವಣನು ವೀರಬಲ್ಲಾಳ ದೇವರ ಕೈಯಲ್ಲಿ ಅಗ್ನಿಷ್ಠಿಗೆಯ ಮಠಕ್ಕೆಂದು ಪಡೆದ ದಾನವನ್ನು ಉಲ್ಲೇಖಿಸಿದೆ. ಈ ಅಗ್ರಹಾರದ ಮಹಾಜನಗಳೆಂದು ದಾಮೆಯಹೆಬ್ಬಾರುವ, ಕೇಶವಹೆಬ್ಬಾರುವ, ಹೆಬ್ಬಾರುವ ಶಂಕರಯ್ಯ ಮೊದಲಾದವ ರನ್ನು ಹೆಸರಿಸಿದೆ. ಕಡೂರು ತಾಲೂಕಿನ ಕೆರೆಸಂತೆ ಗ್ರಾಮದ ಶಾಸನ ವೊಂದು (ಕ.66) ವೀರಬಲ್ಲಾಳದೇವನ ಕಾಲದ್ದಾಗಿದ್ದು (ಕ್ರಿ.ಶ. 1181) ಈ ಗ್ರಾಮವನ್ನು ಪಿರಿಯಗ್ರಹಾರ ಶ್ರೀವಿಷ್ಣುಸಮುದ್ರವೆಂದು ಕರೆದಿದೆ. ಶಾಸನವು ವಿಷ್ಣು ಸಮುದ್ರದ ಮಹತ್ವವನ್ನು- ಇದು ಅಗಸ್ತ್ಯನು ಸಮುದ್ರವನ್ನು ಕುಡಿದು ಬರಿದು ಮಾಡಿದಾಗ ಬ್ರಹ್ಮನು ಅದನ್ನು ಮತ್ತೆ ತುಂಬಿ ದಂತಿರುವ ಸಮುದ್ರದಂತೆ ಇತ್ತು ಎನ್ನುತ್ತಾ ಆ ಕೆರೆಯ ವಿಶಾಲತೆಯನ್ನು ಬಣ್ಣಿಸಿದೆ. ಈ ಭೂಭಾಗದಲ್ಲಿ ದೊರೆ ವಿಷ್ಣುವರ್ಧನನು ಋಗ್‍ಯಜುಸ್ಸಾಮರ್ಥವಣವೇದ ಪಾರಂಗತ ನಾನೂರು ಜನ ಬ್ರಾಹ್ಮಣರಿಗೆ ಪ್ರೀತ್ಯಾದರಗಳಿಂದ ಅಗ್ರಹಾರವಾಗಿ ಕೊಟ್ಟನೆಂದು ಶಾಸನ ತಿಳಿಸಿದೆ. ಹೀಗೆ ನಾನೂರು ಜನ ಚತುರ್ವೇದ ಪಾರಂಗತರಿದ್ದುದರಿಂದ ಇದನ್ನು ‘ಪಿರಿಯ ಗ್ರಹಾರ’ವೆಂದು ಕರೆದಿದೆ. ಈ ಮಹಾಜನಗಳು ಸಿದ್ದೇಶ್ವರ ದೇವಸ್ಥಾನವನ್ನು ಶೈವಾಗಮ ವಿಶಾರದರಾಗಿದ್ದ ಶಿವಬ್ರಾಹ್ಮಣ ಲಾಳವಂದಿಭಟ್ಟರಿಗೆ ವಹಿಸಿಕೊಟ್ಟದನ್ನು ತಿಳಿಸಿದೆ.
ಇದೇ ಗ್ರಾಮದ ಕ್ರಿ.ಶ.1224ರ ಮತ್ತೊಂದು ಶಾಸನವು (ಕ.64) ಹೊಯ್ಸಳ ದೊರೆ ವೀರನರಸಿಂಹದೇವರ ಕಾಲದಲ್ಲಿ ಚೌಂಡಿಸೆಟ್ಟಿಯು ಶಂಭುದೇವರ ದೇವಾಲಯವನ್ನು ಕಟ್ಟಿಸಿ, ದೇವರ ಪ್ರತಿಷ್ಠಾಪನೆ ಮಾಡಿಸಿದಾಗ, ವಿಷ್ಣುಸಮುದ್ರದ ಅಶೇಷ ಮಹಾಜನಂಗಳ ಅನುಮತಿ ಪಡೆದು ಶೈವಾಗಮ ವಿಶಾರದರಾಗಿದ್ದ ಶಿವಬ್ರಾಹ್ಮಣ ಬಮ್ಮೆಯದ ಅಳಿಭಟ್ಟರಿಗೆ ಆ ಸ್ಥಾನವನ್ನು ದಾನ ನೀಡುತ್ತಾನೆ. ಮಹಾಜನರು ದೇವರಂಗಭೋಗಕ್ಕೆಂದು ಭೂಮಿದಾನ ನೀಡಿದ್ದನ್ನು ತಿಳಿಸಿದೆ. ಇಲ್ಲಿಯ ಇನ್ನೊಂದು ಶಾಸನವು (ಕ.61) ಕ್ರಿ.ಶ.1259ರಲ್ಲಿ ಮಹಾವಡ್ಡಬೆವಹಾರಿ ಸೋವಾಸಿ ಮಾಧವಭಟ್ಟಯ್ಯನ ಮಗ ಅಲ್ಲಾಳದೇವನು ಶ್ರೀಮದ ನಾದಿಯಗ್ರಹಾರವಾದ ವಿಷ್ಣುಸಮುದ್ರವೆಂಬ ಕೆರೆಸಂತೆಯ ಕೆರೆಯ ಧರ್ಮಕ್ಕೆಂದು 200 ಗದ್ಯಾಣವನ್ನು ದಾನ ನೀಡಿದ್ದನ್ನು ತಿಳಿಸಿದೆ. ಈ ಹಣಕ್ಕೆ ಬಂದ ಬಡ್ಡಿಯಿಂದ ಪ್ರತಿ ವರ್ಷ 30 ಗದ್ಯಾಣವನ್ನು ಆ ಕೆರೆಯ ತೂಬನ್ನು ಸರಿಪಡಿಸುತ್ತಾ, ಮಹಾಜನರು ಸಧರ್ಮವನ್ನು ನಡಸುವರೆಂದು ಶಾಸನ ತಿಳಿಸಿದೆ; ಈ ವಿಷ್ಣುಸಮುದ್ರದ ಕೆರೆಯ ತೂಬನ್ನು ಈ ಊರಿನ ಮತ್ತೊಂದು ಶಾಸನದಲ್ಲಿ ‘ರಾಯರಾಯ ಪುರಂಗೊಣ್ಣ ತೂಬು’ ಎಂದು ಕರೆದಿದೆ (ಕ.67). ಕೆರೆಸಂತೆ ಗ್ರಾಮದ ಮತ್ತೊಂದು ಶಾಸನವು (ಕ.71) ವಿಷ್ಣಸಮುದ್ರದ ನಖರೇಶ್ವರ ದೇವರಿಗೆ ಪ್ರತಿವರ್ಷವೂ ಸಿದ್ದಾಯದ 1200 ಹೊನ್ನಿನೊಳಗೆ, 10 ಗದ್ಯಾಣವನ್ನು ಅಮೃತಪಡಿಗೆಂದು ಭೂಮಿಯನ್ನು ನಾನೂರ್ವರು ದಾನ ನೀಡಿದ್ದನ್ನು ತಿಳಿಸಿದೆ.
ಕಡೂರು ತಾಲೂಕಿನ ಮಾದಾಪುರ ಗ್ರಾಮದ ಕ್ರಿ.ಶ. 1218ರ ಶಾಸನವು (ಕ.185) ಮಗರೆ 200ರೊಳಗೆ ಚಳ್ಕಿ ವೃತ್ತಿಗೆ ಸೇರಿದ್ದ ಕೇಶಿಯಹಳ್ಳಿಯನ್ನು ‘ಉತ್ತಮ ಅಗ್ರಹಾರ’ ವೆಂದು ಉಲ್ಲೇಖಿಸುತ್ತಾ ಇದನ್ನು ‘ಪ್ರಸನ್ನ ಮಾಧವಪುರ’ವೆಂದು ಹೆಸರಿಸಿದೆ. ಈ ಅಗ್ರಹಾರದಲ್ಲಿ ಕ್ಷೀರಸಾಗರದಂತಹ ತಟಾಕಗಳು, ಸುಂದರವಾದ ಉದ್ಯಾನವನಗಳೂ, ಮುನಿ ಗಳಂತೆ ತೇಜಸ್ಸುಳ್ಳ ವಿಪ್ರವ್ರಜವೂ, ಲಕ್ಷ್ಮಿಯನ್ನು ಹೋಲು ವಂತಹ ಪುರಸ್ತ್ರೀಯರು ಇದ್ದು ಈ ನಾಡಿನಲ್ಲಿ ಯಾವಾಗಲೂ ವಸಂತಮಾಸವೇ ಇರುತ್ತಿತ್ತು ಎಂದು ಬಣ್ಣಿಸಿದೆ. ಮಾಧವಾ ಪುರದ ವಿಪ್ರರು- ಅಕಳಂಕಾಚಾರರಾರಾಧಿತರೂ, ಗುರು ಪಿತೃದೈವ ಅತಿಥಿ, ಬ್ರಾತರನ್ನು ಉನ್ನತಮಟ್ಟಕ್ಕೇರಿಸಲು ಅನೇಕ ಯಜ್ಞಗಳನ್ನು ಮಾಡುತ್ತ ಯಶಸ್ಸು ಗಳಿಸಿದವರೂ, ವೇದ ವೇದಾಂತಗಕೃತಾಭ್ಯಾಸರೂ, ವಿದ್ವಾಂಸರಾದ ಇವರು ಸದಾದಾನಮುದಿತರಾಗಿದ್ದರು, ಸತ್ಯರತ್ನಾಕರರಾಗಿದ್ದರು ಎಂಬ ಶಾಸನ ಬಣ್ಣಿಸಿದೆ. ಅಖಿಳ ನೀತಿನಿದಾನ ಸರ್ವಜ್ಞರೆನ್ನಿಸಿದ 42 ಜನ ವಿಪ್ರರು ನೆಲೆಸಿದ್ದರು. ಈ ಅಗ್ರಹಾರದಲ್ಲಿ ವೀರಬಲ್ಲಾಳದೇವನ ರಾಣಿ ಬೈಚಲಾದೇವಿಯು ಪ್ರಸನ್ನಮಾಧವ ದೇವಾಲಯನ್ನು ನಿರ್ಮಿಸಿ ಬ್ರಾಹ್ಮಣರಿಗೆ ದಾನ ಬಿಟ್ಟಿದ್ದನ್ನು ಶಾಸನ ದಾಖಲಿಸಿದೆ.
ಅಗ್ರಹಾರದಲ್ಲಿ ಹೊಸದಾಗಿ ದೇವಾಲಯವನ್ನು ನಿರ್ಮಿಸಿದಾಗ ಮಹಾಜನರೇ ಮುಂದಾಗಿ ತಮ್ಮ ವೃತ್ತಿಭಾಗದ ಕೆಲ ಭೂಮಿಯನ್ನು, ದೇವರ ಶ್ರೀ ಕಾರ್ಯಕ್ಕೆಂದು ದಾನ ನೀಡುತ್ತಿದ್ದರು. ಕಡೂರು ತಾಲೂಕಿನ ದೇವನೂರು ಗ್ರಾಮದಲ್ಲಿ ‘ಅಭಿನವರುದ್ರ’ ನೆನಿಸಿದ್ದ ಕುಮಾರದೇವರು ‘ಸಿದ್ಧೇಶ್ವರ ದೇವಾಲಯ’ವನ್ನು ಕಟ್ಟಿಸಿದರು (ಕ.106). ಆಗ ವರಲಕ್ಷ್ಮಿ ನಾರಾಯಣಪುರವೆನ್ನಿಸಿದ್ದ ದೇವನೂರಿನ ಬ್ರಾಹ್ಮಣರು ಭೂದಾನ ನೀಡಿದರಲ್ಲದೇ, ಸಿದ್ಧನಾಥ ದೇವರ ಗದ್ದೆಗಳ ಸಿದ್ದಾಯವನ್ನು ಎಂದೆಂದಿಗೂ ಸರ್ವನಮಸ್ಯವಾಗಿ ಸಲ್ಲಿಸಿದರು. ಹೀಗೆ ಅಗ್ರಹಾರದ ಮಹಾಜನರು ಆ ಗ್ರಾಮದ ಒಡೆಯರಂತಿದ್ದು, ಎಲ್ಲಾ ವ್ಯವಹಾರಗಳನ್ನು ನಿರ್ವಹಿಸು ತ್ತಿದ್ದದನ್ನು ಶಾಸನಗಳು ತಿಳಿಸಿವೆ. ಇದರಂತೆ, ಬ್ರಹ್ಮಸಮುದ್ರದ ಶಾಸನವೊಂದು (ಕ.153) ಕ್ರಿ.ಶ. 1232ರಲ್ಲಿ ಅನಾದಿ ಅಗ್ರಹಾರವಾದ ಬ್ರಹ್ಮಸಮುದ್ರದ ಅಶೇಷಮಹಾಜನರು ಕರೆಗಗೌಡ ಪೆರಮಾಳುಗೌಡರಿಗೆ ಕೀಳ್ಕೋಗಿನ ನೆತ್ತರು ಕೊಡಗಿಯ ಕೆಯಿಮತ್ತರು ಎರಡು, ಕಂಬ 230ಕ್ಕೆ ಸರ್ವಬಾಧಾ ಪರಿಹಾರವಾಗಿ ಮಾಡಿದ್ದನ್ನು ಶಾಸನ ತಿಳಿಸಿದೆ.
ತರಿಕೆರೆ ತಾಲೂಕಿನ ಅಮೃತಾಪುರದ ಶಾಸನವು (ತ.12) ಕ್ರಿ.ಶ.1198ರಲ್ಲಿ ಹೊಯ್ಸಳವೀರ ಬಲ್ಲಾಳದೇವರ ಬಲದೋಳಿನಂತಿದ್ದ ದಂಡನಾಯಕ ಅಮಿತಯ್ಯನು ಕಗ್ಗಿಯ ವೃತ್ತಿಗೆ ಸೇರಿದ ಅಮೃತಸಮುದ್ರದಲ್ಲಿ ಅಮೃತೇಶ್ವರ ದೇವಾಲಯವನ್ನು ನಿರ್ಮಿಸಿದನು. ಈ ದೇವರ ಅಂಗಭೋಗ, ರಂಗಭೋಗ, ಚೈತ್ರಪವಿತ್ರಗಳಿಗೆಂದು, ಆಸಂದಿ ನಾಡಿನ ಅಗ್ರಹಾರ ಹುಣಿಸೆಕಟ್ಟೆಯನ್ನು ಸರ್ವನಮಸ್ಯವಾಗಿ ಬಿಟ್ಟಿದ್ದನ್ನು ತಿಳಿಸಿದೆ. ಇದೇ ತಾಲೂಕಿನ ಕುಂಟನಮಡವು ಗ್ರಾಮದ ಶಾಸನವು (ತ.34) ಕ್ರಿ.ಶ. 1230ರಲ್ಲಿ ಶ್ರೀಮದನಾದಿಯ ಗ್ರಹಾರ ಯಮ್ರಿತಕೇಶವಪುರವಾದ ಕೂಟನಮಡುವಿನ ಅಶೇಷಮಹಾಜನರು ಸಭಾಸ್ಥಳಕ್ಕೆ ಬಂದು ಸೇರಿ ತಮ್ಮಲ್ಲಿ ಐಕಮತ್ಯದಿಂದ ಸುತ್ತಲ ಕೆಲವು ಹಳ್ಳಿಗಳನ್ನು ಧ್ರುವ ಉಂಡಿಗೆ ಯಾಗಿ ಹಂಚಿಕೊಂಡ ವಿಧಾನವನ್ನು ತಿಳಿಸಿದೆ. ಶಾಸನವು ಮಹಾಜನರು ವೊಕ್ಕುಂದ, ಮಾವಿನಕೆರೆಯ 95 ವೃತ್ತಿ, ದೊಡ್ಡೇರಿ, ಬೀಚನಮಾನಿಯ 98 ವೃತ್ತಿ, ವೊಳ್ಳೆಯಮಾನಿ, ವೊರವನಕೆರೆಯ 95 ವೃತ್ತಿ, ಸೀಗೆಯಕೋಟೆ, ತಟ್ಟೆಯಹಳ್ಳಿ, ಮಲ್ಲೆಯನಹಳ್ಳಿಯ 57 ವೃತ್ತಿ. ಒಟ್ಟು ವೃತ್ತಿ 300 ಕಂಬವನ್ನು ತಾವು ತೆಗೆದುಕೊಂಡು ತಮ್ಮ ಹಳ್ಳಿಗಳಲ್ಲಿ ಕೆರೆ ಕಾಲುವೆಗಳನ್ನು ಕಟ್ಟಿಸಿ, ತೋಟ ತುಡಿಕೆಯನ್ನು ನಡೆಸುವರು ತಮ್ಮ ತಮ್ಮ ಹಳ್ಳಿಗಳ ತಪ್ಪು, ಕಾತುಷ್ಟಿ, ಕಾಹು ಎಲ್ಲವೂ ಅವರವರೇ ನೋಡಿಕೊಳ್ಳುವರು ಎಂದು ಕಟ್ಟುಪಾಡನ್ನು ವಿಧಿಸಿದ್ದು ಇದನ್ನು ಮೀರಿದರೆ ಚಕ್ರವರ್ತಿ ವೀರನರಸಿಂಹದೇವರಸರಾಣಿ, ಸೋವಿಲಾದೇವಿಯರಾಣಿ ಎಂದಿದೆ- ಹೀಗೆ ಅಂದಿನ ಅಗ್ರಹಾರದ ಬ್ರಾಹ್ಮಣರು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತರಾಗದೇ, ಸುತ್ತಲ ಗ್ರಾಮಗಳ ಏಳಿಗೆಗೆ ಶ್ರಮಿಸುತ್ತಾ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿದ್ದನ್ನು ಶಾಸನವು ತಿಳಿಸುತ್ತಿದೆ.
ತರೀಕೆರೆಯ ಹಳೆಯೂರಿನ ಶಾಸನವು (ತ. 97) ಕ್ರಿ.ಶ. 1180ರಲ್ಲಿ ವೀರಬಲ್ಲಾಳದೇವರು ಆಳುತ್ತಿದ್ದಾಗ, ಶ್ರೀಮದಗ್ರಹಾರ ಅಮರಾವತಿಪುರವೆನ್ನಿಸಿದ್ದ ತರಿಯಕೆರೆಯಲ್ಲಿ ಯಮನಿಯಮ ಸ್ವಾಧ್ಯಾಯಧ್ಯಾನಧಾರಣ ಮೋನಾನುಷ್ಠಾನ ಜಪಸಮಾಧಿಶೀಲಸಂಪನ್ನರಾದ, ಔಪಸನಾ ಅಗ್ನಿಹೋತ್ರ ಮಾಡುವ ಗುರುದೇವ ಪೂಜಾತತ್ಪರರಾದ, ಸೂರ್ಯನಂತೆ ತೇಜಪ್ರತಾಪಿಗಳಾದ ಭೂಸುರರು ನೆಲೆಸಿದ್ದರು. ಈ ಅಗ್ರಹಾರವನ್ನು ಹೆಗ್ಗಡೆ ವಿಜೆಯಾದಿತ್ಯದೇವನು, ಹೆಗ್ಗಡತಿ ದೇಕವ್ವೆಯವರು ಮಹಾಪ್ರಧಾನರಾದ ಲಕ್ಮರಸರು ಮಾಡಿದ ಅಗ್ರಹಾರವೆಂದು ಶಾಸನ ತಿಳಿಸಿದೆ. ಈ ಅಗ್ರಹಾರದಲ್ಲಿ ಕೇಶವದೇವರ ಪ್ರತಿಷ್ಠೆ ಮಾಡಿದಾಗ ನೂರೆರೆಡು ಮಹಾಜನರು ದಾನ ನೀಡಿದ್ದನ್ನು ಶಾಸನ ದಾಖಲಿಸಿದೆ.
ತರಿಕೆರೆ ತಾಲೂಕಿನ ಸಮತಳ ಗ್ರಾಮದ ಶಾಸನವೊಂದು (ತ.88) ಹೆಗ್ಗಡೆ ಚಂದಿರಯ್ಯನು ಚೌಡವ್ವೆಯರು ಮುದ್ದೇಶ್ವರ ಲಿಂಗವ ಪ್ರತಿಷ್ಠೆ ಮಾಡಿದಾಗ ಚಂದಿರಯ್ಯನವರು ‘ಸರಸ್ವತಿಪುರ’ವೆಂದು 24 ಜನ ಬ್ರಾಹ್ಮಣರಿಗೆ ದಾನ ಬಿಟ್ಟದ್ದನ್ನು ದಾಖಲಿಸಿದೆ. ಶಾಸನವು ಈ ದೇವಾಲಯಕ್ಕೆ ನೀಡಿದ ದಾನವು ಸರಸ್ವತಿಪುರದ ಮಹಾಜನರೆದುರು ನಡೆಯಿತೆಂದು ತಿಳಿಸಿದೆ. ತರೀಕೆರೆಯ ತಾಮ್ರ ಶಾಸನವು (ತ.51) ವೀರಬಲ್ಲಾಳ ದೇವರು, ಆಸನ್ದಿ ನಾಡಿಗೆ ಸೇರಿದ ಮೊಲ್ಲೇಶ್ವರ ಗ್ರಾಮವನ್ನು ಅಗ್ರಹಾರವಾಗಿ ಮಾಡಿದ್ದನ್ನು ತಿಳಿಸಿದೆ. ಈ ಅಗ್ರಹಾರದ ಕಟ್ಟುಗುತ್ತಿಗೆ ಪಿಂಡದಾನವಾಗಿ ಗದ್ಯಾಣ 100ನ್ನು ತಿಳಿಸಿದ್ದು, ಸರ್ವಬಾಧಾ ಪರಿಹಾರವಾಗಿ ಬಿಟ್ಟಿದ್ದನ್ನು ತಿಳಿಸಿದೆ.
ಬ್ರಹ್ಮಸಮುದ್ರದ ವೀರನಾರಾಯಣ ದೇವಾಲಯದ ಶಾಸನವೊಂದು (ಕ.158) ಕ್ರಿ.ಶ.1240ರಲ್ಲಿ ಅನಾದಿ ಅಗ್ರಹಾರವಾದ ಬ್ರಹ್ಮಸಮುದ್ರದ ಮಹಾಜನಂಗಳು ತಮ್ಮೊಳೇಕಸ್ಥರಾಗಿ ಪ್ರಭುಮಂಟಪದಲ್ಲಿ ಕುಳಿತಿದ್ದಾಗ ಅವರಿಗೆ ದಾಮೋಜನು ಪಾದಪೂಜೆ ಮಾಡಿದ್ದನ್ನು ತಿಳಿಸಿದೆ. ಮಹಾಜನರು ದಾಮೋಜನ ಕಂಬ 100 ಭೂಮಿಯನ್ನು ಸರ್ವಬಾಧೆ ಪರಿಹಾರವಾಗಿ ಮಾಡಿಕೊಟ್ಟಿದ್ದನ್ನು ದಾಖಲಿಸಿದೆ; ಇದೇ ದೇವಾಲಯದ ಮತ್ತೊಂದು ಶಾಸನವು (ಕ.161) ನಾರಣದೇವನಿಗೆ 200 ಕಂಬ ಗದ್ದೆ ಬೆದ್ದಲನ್ನು ಕಾರುಣ್ಯದಿಂದ ಕೊಟ್ಟದ್ದನ್ನು ತಿಳಿಸಿದೆ. ಹೀಗೆ ತಮ್ಮ ಪರಿಸರದ ಜನರ ಕಷ್ಟನಷ್ಟಗಳಲ್ಲಿ ಭಾಗಿಯಾಗಿ ಮಹಾಜನರು ಊರಿನ ಜನರ ಆದರಕ್ಕೆ ಪಾತ್ರರಾಗಿದ್ದರು.
ತರೀಕೆರೆ ತಾಲೂಕಿನ ಬಗ್ಗವಳ್ಳಿಯ ಶಾಸನವೊಂದು (ತ.70) ಶ್ರೀಮದನಾದಿಯಗ್ರಹಾರ ಲಕ್ಷ್ಮಿನರಸಿಂಹಪುರವಾದ ಬಗ್ರ್ಗವಳ್ಳಿ ಮಹಾಜನರು ಮಾಡಿದ್ದ ‘ಗ್ರಾಮಸಮಯ’ದ ಬಗೆಗೆ ತಿಳಿಸಿದೆ. ಇದರಂತೆ, ಅವರು ನಿರ್ಧರಿಸಿದ್ದ ವಿವರವೆಂದರೆ- ಪ್ರಥಮ ನಿವೇಸನಕ್ಕೆ 11 ಕೆಯ್, ದ್ವಿತೀಯ ನಿವೇಸನಕ್ಕೆ 10 ಕೆಯ್, ತೋಂಟವ್ರಿತ್ತಿಗೆ ಎಂಟು ಕಂಬ, ಕಳನು ವ್ರಿತ್ತಿಗೆ 12 ಕೆಯ್ ಅಗಲ, ನಾಲ್ವತ್ತು ಕೆಯ್ ಅಗಲ ಈ ಮರಿಯಾದೆಯಲ್ಲಿ ಮಾಡಿದ ದ್ರುವ ಉಂಡಿಗೆ 11 ಗ್ರಾಮದ ಒಟ್ಟು 104 ವ್ರಿತ್ತಿಯಲ್ಲಿ 66 ವ್ರಿತ್ತಿ, 96 ಪ್ರಥಮ ಸ್ಥಳದಲ್ಲಿ ಶ್ರೀ ನರಸಿಂಹದೇವರದು, ಚೆನ್ನಕೇಶವದೇವರ ಶ್ರೀಕಾರ್ಯಕ್ಕೆ 4 ವ್ರಿತ್ತಿ, ವೇದಖಂಡಿಕಕ್ಕೆ 2 ವ್ರಿತ್ತಿ, ಸತ್ತಕ್ಕೆ 1 ವ್ರಿತ್ತಿ ಪಂಚಿಕೇಸ್ವರದೇವರಿಗೆ 1 ವ್ರಿತ್ತಿ ಎಂದು ಹಂಚಿದ್ದಾರೆ. ಇದಲ್ಲದೇ, ಪಂಚಿಕೇಸ್ವರದೇವರ ಧರ್ಮಕಾರ್ಯದ ಮೊದಲ ಹೊನ್ನು ಗದ್ಯಾಣ 40ಕ್ಕೆ ಆ ಬಡ್ಡಿ ಹೊನ್ನಿನಲ್ಲಿ ಪ್ರತಿ ವರ್ಷ 2 ಹಣವನ್ನು ತೆಗೆದುಕೊಂಡು ಧರ್ಮವನ್ನು ನಡೆಸಬೇಕೆಂದು ತಿಳಿಸಲಾಗಿದೆ. ಹೀಗೆ ಅಗ್ರಹಾರದ ಮಹಾಜನರೇ, ಆ ಗ್ರಾಮಗಳ ದೇವಾಲಯಗಳ ಚಟುವಟಿಕೆಗಳ ಹೊಣೆಹೊತ್ತು ನಿರ್ವಹಿಸಿದ್ದನ್ನು ಈ ಶಾಸನ ತಿಳಿಸುತ್ತಿದೆ. ಹೀಗೆ ಹೊಯ್ಸಳರ ಕಾಲದಲ್ಲಿ ಅಗ್ರಹಾರಗಳ ವ್ಯವಸ್ಥೆ ಸುಗಮವಾಗಿ ಸಾಗಿದ್ದನ್ನು ಕಾಣುತ್ತೇವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಜಯನಗರದ ಅರಸರ ಕಾಲದ ಅಗ್ರಹಾರಗಳ ಬಗೆಗೆ ಗಮನಿಸಿದರೆ, ಶೃಂಗೇರಿ ಮಠದ ತಾಮ್ರ ಶಾಸನವೊಂದು (ಶೃ.32) ಕ್ರಿ.ಶ.1389ರಲ್ಲಿ ವಿಜಯನಗರದ ದೊರೆ ವೀರಹರಿಹರರಾಯನು ವಿದ್ಯಾರಣ್ಯ ಶ್ರೀ ಪಾದಂಗಳವರು ಪರಿಪೂರ್ಣರಾದಾಗ, ಸಿಂಗೇರಿಯ ಗ್ರಾಮಾಶ್ರಿತ ಮಹಾಜನಗಳಿಗೆ, ಕಿಕ್ಕುಂದ ನಾಡು ಮತ್ತು ಹಗಡೂರು ಗ್ರಾಮಗಳು ಸೇರಿದಂತೆ 500 ವರಹ ಗದ್ಯಾಣದ ಹೊನ್ನಿನ ಸ್ಥಲವನ್ನು ನೂರು ವೃತ್ತಿಗಳಾಗಿ ಮಾಡಿ, ‘ವಿದ್ಯಾರಣ್ಯಪುರ’ವೆಂದು ಹೆಸರಿಸಿ ಹಂಪೆಯ ಶ್ರೀ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ದಾನ ಬಿಟ್ಟದ್ದನ್ನು ತಿಳಿಸಿದೆ. ಈ ನೂರು ವೃತ್ತಿಗಳಲ್ಲಿ ಸಿಂಗೇರಿಯ ಶ್ರೀ ವಿದ್ಯಾಶಂಕದೇವರಿಗೆ, ಭಾರತೀ ರಾಮನಾಥ ದೇವರಿಗೆ, ವಿದ್ಯಾವಿಶ್ವೇಶ್ವರದೇವರಿಗೆ ಮತ್ತು ಶ್ರೀ ಜನಾರ್ಧನದೇವರಿಗೆ ತಲಾ 1 ವೃತ್ತಿಯನ್ನು ಬಿಟ್ಟಿದ್ದು, ದೇವಸ್ಥಾನಗಳಿಗೆ 4 ವೃತ್ತಿ ಎಂದು ತಿಳಿಸಿದೆ. ಇದರಿಂದ ಅಗ್ರಹಾರದ ವೃತ್ತಿಗಳಲ್ಲಿ ದೇವದೇಯ, ಬ್ರಹ್ಮದೇಯ ಎರಡರ ಭಾಗವು ಇರುತಿತ್ತೆಂದು ತಿಳಿಯುತ್ತದೆ.
ಶೃಂಗೇರಿ ಮಠದ ತಾಮ್ರ ಶಾಸನವೊಂದು (ಶೃ.33) ಕ್ರಿ.ಶ. 1393ರಲ್ಲಿ ವಿಜಯನಗರದ ರಾಜ ಇಮ್ಮಡಿ ಹರಿಹರ ರಾಯನ ದಾನದ ಮಹತ್ವವನ್ನು ತಿಳಿಸಿದ್ದು, ಇವನು ಆರಂಗ ರಾಜ್ಯದ ಕಾರಕಳ ಸೀಮೆಯಲ್ಲಿರುವ ಭಾನುವಳ್ಳಿ ಗ್ರಾಮವನ್ನು ಯಜುರ್ವೇದದ ಆ ಪಸ್ತಂಭ ಸೂತ್ರಕ್ಕೆ ಸೇರಿದ ಕೌಶಿಕಗೋತ್ರದ ವೇದಾಂತನಿಷ್ಠರಾದ ಮಾಧವೇಂದ್ರರಿಗೆ ದಾನ ನೀಡಿದ್ದನ್ನು ತಿಳಿಸಿದೆ. ಇವರು ಭಾನುವಳ್ಳಿ ಗ್ರಾಮವನ್ನು ನಾನಾವೃತ್ತಿಗಳಾಗಿ ಮಾಡಿ ವೇದ ಪಾರಂಗತರಾದ ಬ್ರಾಹ್ಮಣರಿಗೆ ಹಂಚಿದ್ದಾರೆ. ಈ ಅಗ್ರಹಾರವು ಇಪ್ಪತ್ತು ವೃತ್ತಿಗಳ ಅಗ್ರಹಾರವೆಂದು ಪ್ರಸಿದ್ಧವಾಗಿತ್ತೆಂದು ತಿಳಿಸಿದೆ.
ಇದರಂತೆ ಬೊಮ್ಮಲಾಪುರದ ಶಿಲಾಶಾಸನವು (ಕೊಪ್ಪ.18) 2ನೇ ಹರಿಹರರಾಯನ ಕಾಲದಲ್ಲಿ ವಿಠ್ಠಣ ಒಡೆಯರು ಅರಗದ ರಾಜ್ಯವನ್ನು ಆಳುತ್ತಿದ್ದಾಗ, ತಮಗೆ ಸೇರಿದ ಮೆಣಸೂರ ಭಾಗವನ್ನು ಅಗ್ರಹಾರವಾಗಿಸಿ ‘ಬೊಮ್ಮಂಣ್ನಪುರ’ವೆಂದು ಹೆಸರಿಸಿ ದಾನಬಿಟ್ಟರೆಂದು ದಾಖಲಿಸಿದೆ. ಈ ಅಗ್ರಹಾರದ 54 ವೃತ್ತಿಗಳಲ್ಲಿ 4 ವೃತ್ತಿಗಳನ್ನು ದೇವಾಲಯಗಳಿಗೆ ಬಿಡಲಾಗಿದೆ. ಹಾಲಮತ್ತೂರಿನ ತಾಮ್ರ ಶಾಸನವು (ಕೊಪ್ಪ.38) ಕ್ರಿ.ಶ. 1404ರಲ್ಲಿ ಇಮ್ಮಡಿ ಬುಕ್ಕ ರಾಯನು ಕಾರಕಳ ಸೀಮೆಯ ಬೆಲ್ಲಾರ ಸ್ಥಳದಲ್ಲಿನ ತುಂಗಾ ನದಿ ತಟದಲ್ಲಿರುವ ಹಾಲಮತ್ತೂರು ಗ್ರಾಮವನ್ನು ‘ಷಕರೀಪುರ’ ವೆಂದು ಹೆಸರಿಸಿ, 52 ವೃತ್ತಿಗಳ ಅಗ್ರಹಾರವನ್ನಾಗಿ ಮಾಡಿ ನಾನಾಗೋತ್ರದ ನಾನಾಶಾಖೆಯ ವೈದಿಕ ಬ್ರಾಹ್ಮಣರಿಗೆ ದಾನ ನೀಡಿದ್ದನ್ನು ದಾಖಲಿಸಿದೆ. ಈ ಅಗ್ರಹಾರದ ದಾನದಲ್ಲೂ 4 ವೃತ್ತಿಗಳನ್ನು ದೇವಕಾರ್ಯಕ್ಕೆಂದು ಬಿಡಲಾಗಿದೆ. ಇದರಿಂದ ಅಗ್ರಹಾರ ರಚನೆಯಾದಾಗ, ಅಲ್ಲಿದ್ದ ದೇವಾಲಯಗಳಿಗೂ, ಬ್ರಾಹ್ಮಣರಿಗೆ ನೀಡಿದ ವೃತ್ತಿಗಳಲ್ಲಿ ಪಾಲಿರುತ್ತಿತ್ತೆಂದು ತಿಳಿಯು ತ್ತದೆ.
ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ತಾಮ್ರ ಶಾಸನವು (ಕ.175) ಕ್ರಿ.ಶ. 1409ರಲ್ಲಿ ಇಮ್ಮಡಿ ದೇವರಾಯನು ಸೂರ್ಯಗ್ರಹಣದಂದು ತುಲಾಭಾರ, ಬ್ರಹ್ಮಾಂಡ ಮಹಾದಾನಗಳ ಅಂಗವಾಗಿ ಬಾಸೂರು ಮತ್ತು ಚಿಕ್ಕ ಬಾಸೂರು ಗ್ರಾಮಗಳನ್ನು ಸೇರಿಸಿ. ‘ಅಭಿನವ ಪ್ರತಾಪ ದೇವರಾಯಪುರ’ವೆಂಬ 53 ವೃತ್ತಿಗಳುಳ್ಳ, 330 ವರಾಹ ಗದ್ಯಾಣ ಆದಾಯವುಳ್ಳ ‘ಅಗ್ರಹಾರ’ವನ್ನು ದಾನ ಮಾಡಿದ್ದನ್ನು ತಿಳಿಸಿದೆ. ಇದನ್ನು ದೇವರಾಯನು ಪಂಪಾಕ್ಷೇತ್ರದ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ‘ಸರ್ವನಮಸ್ಯ ಅಗ್ರಹಾರ’ವನ್ನಾಗಿಸಿ ದಾನ ನೀಡಿದ್ದನ್ನು ತಿಳಿಸಿದೆ. ಕ್ರಿ.ಶ.1410ರ ಶಾಸನವು (ಶೃ.79) 2ನೇ ದೇವರಾಯನು ವೇದಾಂತಾಚಾರ್ಯನೂ, ವಿಷ್ಣುಪೂಜಾ ಪರಾಯಣನೂ, ಆಪಸ್ತಂಭ ಸೂತ್ರದ ಶ್ರೀವತ್ಸ ಗೋತ್ರದ ಮಾಯಣಾಚಾರ್ಯನಿಗೆ ಆರಂಗವೇಟೆಯಲ್ಲಿನ ವೋಟಗಾರು ಗ್ರಾಮವನ್ನು ‘ದೇವರಾಯನಪುರ’ವೆಂದು ಹೆಸರಿಟ್ಟು ಅಗ್ರಹಾರವಾಗಿ ಮಾಡಿ ದಾನ ನೀಡಿದ್ದನ್ನು ಕೊಡತಲೆಯೆ ತಾಮ್ರ ಶಾಸನ ತಿಳಿಸಿದೆ.
ಕ್ರಿ.ಶ. 1432ರಲ್ಲಿ ಇಮ್ಮಡಿ ದೇವರಾಯನು ಹೊಂನಾಪುರ ರಾಜ್ಯದ ‘ಮಂಜುಗುಣಿ’ ಗ್ರಾಮವನ್ನು ಶ್ರೀರಾಮಚಂದ್ರ ದೇವರ ನೈವೇದ್ಯಕ್ಕೆಂದು ಆನಂದವಾಲಾ ಪರಿಷತ್ತಿಗೆ ಸೇರಿದ ಶ್ರೀ ಪುರುಷೋತ್ತಮಾರಣ್ಯ ಯತಿಗಳಿಗೆ ದಾನ ನೀಡಿದ್ದು, ಇದು ‘ದೇವ ಬೋಗ್ಯ’ವೆನ್ನಿಸಿದರೂ, ಈ ಪ್ರದೇಶದಲ್ಲಿ ಯತಿಗಳೂ, ಅವರ ವೇದಾಭ್ಯಾಸಿ ಶಿಷ್ಯರೂ ನೆಲೆಸಿದ್ದ ಅಗ್ರಹಾರವೇ ಆಗಿತ್ತು. ಈ ಅಗ್ರಹಾರಕ್ಕೆ ಹೊಸ ಹೆಸರನ್ನು ಸೂಚಿಸಿಲ್ಲವಾದರೂ ಶಾಸನಾಂತ್ಯದಲ್ಲಿ ‘ಸೀಮಾ ನೋಸ್ಯ ಅಗ್ರಹಾರಸ್ಯ ಲಿಖ್ಯಂತೇ ದೇಶಭಾಷಾಯ’ ಎಂದಿದ್ದು ಇದು ಅಗ್ರಹಾರವೇ ಎಂದು ಸ್ಪಷ್ಟಪಡಿಸಿದೆ (ಶೃ.34).
ಶೃಂಗೇರಿಯ ಹರಾವರಿ ಗ್ರಾಮದ ಶಾಸನವು (ಶೃ.48) ಕ್ರಯದಾನದ ಶ್ರೋತ್ರುಗುತ್ತಿಗೆಯ ಪತ್ರ ಶಾಸನವಾಗಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕ್ರಿ.ಶ. 1518ರ ಈ ಶಾಸನವು ಬ್ರಾಹ್ಮಣರು ಪಡೆದಿದ್ದ ವೃತ್ತಿ ಭೂಮಿಯನ್ನು ಮಲ್ಲಣ್ಣನವರಿಗೆ ಶ್ರೋತ್ರು ಗುತ್ತಿಗೆಯಾಗಿ ಕೊಟ್ಟಿದ್ದನ್ನು ತಿಳಿಸುತ್ತಿದ್ದು, ಅಗ್ರಹಾರದ ಬ್ರಾಹ್ಮಣರಿಗೆ ಸಂಕಟ ಒದಗಿದಾಗ ತಮ್ಮ ಪಾಲಿನ ಭೂಮಿಯನ್ನು ಗುತ್ತಿಗೆಗೆ ಕೊಡುತ್ತಿದ್ದುದನ್ನು, ಆ ಭೂಮಿಯ ಸಿದ್ಧಾಯವನ್ನು ಗುತ್ತಿಗೆದಾರನೇ ನೀಡುತ್ತಿದ್ದು ದನ್ನು ತಿಳಿಸುತ್ತದೆ. ಇಂಥ ಕ್ರಯಪತ್ರ ಅಥವಾ ಗುತ್ತಿಗೆ ಪತ್ರ ಸಿದ್ಧವಾದಾಗ ಆ ಪತ್ರಕ್ಕೆ ಅಗ್ರಹಾರದ ಮಹಾಜನರ ಒಪ್ಪವೂ ಇರುತ್ತಿತ್ತೆಂದು ತಿಳಿದುಬರುತ್ತದೆ (ಶೃ.49).
ಅಗ್ರಹಾರವೊಂದು ಅಪರೂಪಕ್ಕೆ ‘ಗ್ರಾಮದಾನ’ವಾಗಿ ಪರಿಣಮಿಸಿದ ಸಂಗತಿಯು ಕೆಳಬೆಳ್ಳೂರು ಶಾಸನದಿಂದ (ಶೃ.52) ತಿಳಿಯುತ್ತಿದೆ. ಕ್ರಿ.ಶ. 1524ರ ಈ ಶಾಸನವು ಯತಿಗಳಾದ ಶ್ರೀ ರಾಮಚಂದ್ರಭಾರತಿ ಒಡೆಯರು ಕೆಳಬೆಳ್ಳೂರಿನ ಮೂಲಿಗಳಾದ ಕಜ್ಜರಸ, ಸಂಜಯ, ಬೊಂಮ್ಮೆಯವರಿಂದ ಶ್ರೀ ಮಠಕ್ಕೆ ಸಲ್ಲಬೇಕಾದ ಸಿದ್ಧಾಯವು ಸಲ್ಲದೇ ಉಳಿದುಬಂದು ನಿಮಿತ್ತರಾಗಿ, ಆ ಗ್ರಾಮವನ್ನು, ಕಾರಕಳದ ಭಾರದ್ವಾಜಗೋತ್ರ, ಋಕ್‍ಶಾಖೆಯ ಸೂರಪ್ಪ ಸೇನಬೋವರಿಗೆ ವಹಿಸಿಕೊಡುತ್ತಾರೆ. ಆ ಗ್ರಾಮದ ಮೂಲಿ ಗಳು ಭೂಮಿಯ ಕೆಲಭಾಗವನ್ನು ಅಡವಿಟ್ಟು ಹಣವನ್ನು ಪಡೆದಿದ್ದು, ಆ ಹಣವನ್ನೆಲ್ಲ ಸೂರಪ್ಪನವರ ಕೈಯಿಂದ ಕೊಡಿಸಿ, ಮೂಲಿಗರಿಗೂ ಸೂರಪ್ಪನವರಿಂದ ಉಡುಗೆರೆಯನ್ನು ಕೊಡಿಸಿ ಮೂಲಿಗರಿಂದಲೇ ಸೂರಪ್ಪನವರಿಗೆ ಅಗ್ರಹಾರವನ್ನು ದಾನವಾಗಿ ಧಾರೆ ಎರೆದು ಕೊಡಿಸುತ್ತಾರೆ. ಈ ದಾನದಲ್ಲೂ ‘ದೇವಸ್ವದ’ ಭಾಗವನ್ನು ಸೂಚಿಸಿದೆ. ಈ ಶಾಸನಾಂತ್ಯದಲ್ಲಿ ರಾಮಚಂದ್ರ ಭಾರತಿಯತಿಗಳ ಒಪ್ಪ, ಶ್ರೀ ವಿದ್ಯಾಶಂಕರ ಎಂಬ ಒಪ್ಪವಿದೆ. ಈ ಶಾಸನವು ಹಿಂದೆ ನಶಿಸುತ್ತಿದ್ದ ಅಗ್ರಹಾರ ಗಳನ್ನು ಹೀಗೆ ಸರಿಪಡಿಸಿ ಮತ್ತೆ ಅಗ್ರಹಾರ ನಿರ್ವಹಣೆ ಮಾಡುತ್ತಿದ್ದರೆಂದು ತಿಳಿಸುವ ಶಾಸನವಾಗಿದೆ.
ವಿಜಯನಗರೋತ್ತರ ಕಾಲದ ಶಾಸನಗಳನ್ನು ಗಮನಿಸಿದರೆ ಶೃಂಗೇರಿಯ ಶಾಸನವೊಂದು (ಶೃ.2) ಕ್ರಿ.ಶ. 1903ರಲ್ಲಿ ಶೃಂಗೇರಿಯ ಶ್ರೀ ನರಸಿಂಹ ಭಾರತಿ ಸ್ವಾಮಿಗಳು, ಅವರ ಗುರುಗಳು ಪೂಜಿಸುತ್ತಿದ್ದ ಶ್ರೀ ನೃಸಿಂಹೇಶ್ವರದೇವರ ಪ್ರೀತ್ಯರ್ಥವಾಗಿ ಶ್ರೀ ನರಸಿಂಹಪುರವೆಂಬ ಹೆಸರಿನ ಅಗ್ರಹಾರವನ್ನು, ಪಶ್ಚಿಮವಾಹಿನಿಯಾದ ತುಂಗಭದ್ರಾ ತೀರದ ವಸಿಷ್ಠಾಶ್ರಮದಲ್ಲಿ ನಿರ್ಮಿಸಿ, ನಾನಾಗೋತ್ರದ, ನಾನಾಸೂತ್ರದ ಅಶೇಷ ವಿದ್ವನ್ಮಹಾಜನರಿಗೆ ಸರ್ವಸಮಸ್ಯವಾಗಿ ಕೊಟ್ಟ ‘ಧರ್ಮಶಾಸನ’ವೆಂದು ಉಲ್ಲೇಖಿಸಿದೆ. ಈ ಶಾಸನದಲ್ಲಿ ಸು. 20 ಜನರಿಗೆ ಬಿಟ್ಟು ದಾನವಿದ್ದು ಒಟ್ಟು ಭತ್ತ ಖಂಡುಗ 20, ಅಡಕೆಮರ 5500ನ್ನು ಹಂಚಿಕೊಡಲಾಗಿದೆ. ಈ ದಾನದ ವಿವರವೂ ಆ ಅಗ್ರಹಾರದಲ್ಲಿ ನೆಲೆಸಿದ ವಿಪ್ರರ ಆರ್ಥಿಕ ಭದ್ರತೆಯನ್ನು ಸೂಚಿಸುತ್ತಿದೆ.
ಶೃಂಗೇರಿಯ ಮಠದ ತಾಮ್ರ ಶಾಸನವೊಂದು (ಶೃ.36) ಕೆಳದಿಯ ವೀರಭದ್ರ ವೆಂಕಣ್ಣನು ಕಟ್ಟಿಸಿದ್ದ ಮಠವನ್ನು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳಿಗೆ ಒಪ್ಪಿಸಿ, ಮಠದ ದೇವಪೂಜೆ, ಅಮೃತಪಡಿ ನಂದಾದೀವಿಗೆಗೆಂದು ಚೌಡಿಸೆಟ್ಟಿ ಕೊಪ್ಪ ಗ್ರಾಮವನ್ನು ಬಿಟ್ಟದ್ದನ್ನು ತಿಳಿಸಿದೆ. ಈ ಶಾಸನವು ನಿತ್ಯಧರ್ಮ ಛತ್ರ ನಡೆಸಲು ವಿಶ್ವನಾಥಪುರ ಅಗ್ರಹಾರದ ವೃತ್ತಿಯ ಭಾಗವಾದ ಕುಂದನೂರಿನ ಕೆಲವು ವೃತ್ತಿಗಳನ್ನು ಬಿಟ್ಟಿದನ್ನು ತಿಳಿಸಿದೆ. ಭಲ್ಲಪ ಒಡೆಯರಿಗೆ ನಾರಸಿಂಹಭಟ್ಟರಿಗೆ ಕೊಟ್ಟ ವೃತಿಗಳನ್ನು ಮಾರಬಾರದೆಂದು ವಿಧಿಸಿದೆ. ನರಸಿಂಹ ದೀಕ್ಷಿತರಿಗೆ ಕೊಟ್ಟಿದ್ದ ವೃತ್ತಿಯು, ವೃತ್ತಿವಂತರು ನಷ್ಟವಾದರಿಂದ ಅದನ್ನು ಧರ್ಮಛತ್ರಕ್ಕೆ ಬಿಟ್ಟದ್ದನ್ನು ತಿಳಿಸಿದೆ. ಇದರಿಂದ ಅಗ್ರಹಾರದ ಮಹಾಜನರು ತಮ್ಮ ಪಾಲಿನ ವೃತ್ತಿಯನ್ನು ಅನುಭವಿಸಬಹುದು ಆದರೆ ಮಾರುವಂತಿರಲಿಲ್ಲ. ಅವರ ಸಂತಾನವು ಅಳಿದರೆ ಅದು ಮತ್ತೆ ದಾನಿಗೆ ಸೇರುತ್ತಿತ್ತೆಂದು ತಿಳಿಯುತ್ತದೆ.
ಶೃಂಗೇರಿ ಮಠದ ಮತ್ತೊಂದು ತಾಮ್ರ ಶಾಸನವು (ಶೃ.38) ಕ್ರಿ.ಶ. 1729ರದ್ದಾಗಿದ್ದು ಕೆಳದಿಯ ಸೋಮ ಶೇಖರ ನಾಯಕರು ಭಾರಧ್ವಾಜ ಗೋತ್ರದ ರುಕ್‍ಶಾಖೆಯ ಚೆಂನಣ್ಣನಿಗೆ ಕೊಟ್ಟ ಭೂದಾನ ಧರ್ಮಶಾಸನವಾಗಿದೆ. ಈ ಶಾಸನವು ತೀರ್ಥರಾಜಪುರದ ನದೀ ಆಚೆಯ ದಡದಲ್ಲಿನ ಮುತ್ತೂರು ಸೀಮೆಗೆ ಸೇರಿದ ಹರಳಿಪಾಲ ಮಲೆಯಾಳಮಠದ ಗ್ರಾಮದಲ್ಲಿ ತನ್ನ ತಂದೆ ವೆಂಕಟಪ್ಪಯ್ಯನು ದೇವಸ್ಥಾನ ಕಟ್ಟಿಸಿದ್ದು ಅಲ್ಲಿ ಅವಿಮುಕ್ತೇಶ್ವರ ದೇವರು, ಬಿಂದು ಮಾಧವದೇವರ ದೇವತಾವೆಚ್ಚಕ್ಕೆಂದು ದೇವಸ್ಥಾನದ ಬಳಿಯಲ್ಲೇ ಇದ್ದ ಚಂದ್ರಶೇಖರಪುರದ ಅಗ್ರಹಾರವನ್ನು ಬರೆಸಿಕೊಟ್ಟದ್ದನ್ನು ತಿಳಿಸಿದೆ. ಇದು ದೀರ್ಘ ಶಾಸನವಾಗಿದ್ದು ಈ ಅಗ್ರಹಾರದ ಒಟ್ಟು ಆದಾಯ ಗದ್ಯಾಣ 195, ವರಾಹಗಳು ಆರು ಹಣವನ್ನು ಕೊಟ್ಟು ಸೀಮಗೆ ವಾಮನ ಮುದ್ರೆಕಲ್ಲನ್ನು ನೆಡಿಸಿದ್ದನ್ನು ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸು. 19ನೇ ಶತಮಾನ ದಿಂದ ಆರಂಭವಾಗಿರುವ ಅಗ್ರಹಾರ ದಾನ ಪದ್ಧತಿಯು ಸು. 18ನೇ ಶತಮಾನದವರೆಗೆ ನಡೆದುಬಂದಿರುವುದು ಈ ಜಿಲ್ಲೆಯ ಶಾಸನಗಳಿಂದ ತಿಳಿಯುತ್ತದೆ. ಅಗ್ರಹಾರಗಳನ್ನು ಶಾಸನಗಳು- ‘ಶ್ರೀ ಮದನಾದಿಅಗ್ರಹಾರ’, ‘ಮಹಾಅಗ್ರಹಾರ’, ‘ಪಿರಿಯಗ್ರಹಾರ’ವೆಂದೂ ಕರೆದಿವೆ. ಅಗ್ರಹಾರಗಳಾಗಿ ಮಾಡುವಲ್ಲಿ, ರಾಜರ ಹೆಸರನ್ನು ಸೇರಿಸಿ- ‘ವಿಷ್ಣುವರ್ಧನ ಕೆಶವಾಪುರ’ (ಚಿ.ಮ.108); ‘ಪ್ರತಾಪದೇವರಾಯಪುರ (ಕ.175)ಗಳೆಂಬ ಉಲ್ಲೇಖಗಳಿರುವಂತೆ, ‘ಸರಸ್ವತಿಪುರ’, ‘ವರಲಕ್ಷ್ಮಿನಾರಾಯಣಪುರ’ (ಕ.106), ‘ಲಕ್ಷ್ಮಿನರಸಿಂಹಪುರ’ (ತ.66), ‘ಹರಿಹರಪುರ’ (ಚಿ.ಮ.153)ಗಳೆಂದು ಹೆಸರಿಸಲಾಗಿದೆ. ಶೃಂಗೇರಿಗೆ ಸಂಬಂಧಿಸಿದಂತೆ ರೂಪಿಸಿರುವ ಅಗ್ರಹಾರಗಳು, ಯತಿಗಳ ಹೆಸರಿನೊಂದಿಗೆ ಉಕ್ತವಾಗಿದ್ದು, ‘ಶ್ರೀ ವಿದ್ಯಾರಣ್ಯಪುರ’ (ಶೃ.32), ‘ಶ್ರೀ ನರಸಿಂಹಪುರ’ (ಶೃ.2), ‘ಶ್ರೀ ಸ್ವಯಂಪ್ರಕಾಶಪುರ’ (ಚಿ.ಮ.81) ಮುಂತಾದವನ್ನು ಗಮನಿಸಬಹುದು.
ಹೀಗೆ ಒಂದು ಜಿಲ್ಲೆಯ ಅಗ್ರಹಾರಗಳ ವಿಸ್ತøತ ಅಧ್ಯಯನ ದಿಂದ ಅಂದಿನ ಕಾಲದ ಸಾಮಾಜಿಕ ಇತಿಹಾಸದ ಮಗ್ಗ ಲೊಂದನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಕರ್ನಾಟಕದ ಸಾಮಾಜಿಕ ಇತಿಹಾಸ, ಧಾರ್ಮಿಕ ಇತಿಹಾಸವನ್ನ ರಿಯಲು ಅಗ್ರಹಾರಗಳ ತಲಸ್ಪರ್ಷಿ ಅಧ್ಯಯನ ವನ್ನು ನಡೆಯ ಬೇಕಾಗಿದೆ.
[ವಿ.ಸೂ. :- ಈ ಪ್ರಬಂಧದಲ್ಲಿ ಬಳಸಿರುವ ಶಾಸನಗಳನ್ನು ಪರಿಷ್ಕøತ ಎಪಿಗ್ರಾಫಿಯ ಕರ್ನಾಟಿಕ ಸಂಪುಟ 11 ಮತ್ತು 12ರಿಂದ ತೆಗೆದು ಕೊಳ್ಳಲಾಗಿದೆ.]

 # 1676, 5ನೇ `ಎ’ ಕ್ರಾಸ್, 10ನೇ ಮುಖ್ಯರಸ್ತೆ, ಬನಶಂಕರಿ 1ನೇ ಹಂತ, ಬೆಂಗಳೂರು-560050

No comments:

Post a Comment