Monday, October 7, 2013

ಡಾಬೆಂ. ಮ.ಶ್ಯಾಮಲಾರತ್ನಕುಮಾರಿ- ಸರಣಿ-೩

ನೀತಿವಾಕ್ಯಾಮೃತಕಾರ ಸೋಮದೇವ ಸೂರಿಯ ದೃಷ್ಟಿಯಲ್ಲಿ ರಾಜ್ಯ-ಒಂದು ವಿಶ್ಲೇಷಣೆ  ಆಗಿದೆ

ಸೋಮದೇವಸೂರಿ ಕ್ರಿಸ್ತಶಕ ೯೪೦-೯೭೦ರ ಅವಧಿಯಲ್ಲಿ ಜೀವಿಸಿದ್ದ ಜೈನ ಕವಿ. ಇವನ ಬಗೆಗಿನ ಮಾಹಿತಿಗಳ ಆಧಾರಗಳೆಂದರೆ ಇವನ ಸ್ವಕೀಯ ಗ್ರಂಥ ಯಶಸ್ತಿಲಕಚಂಪೂ ಹಾಗೂ ಪರಭಣಿ ತಾಮ್ರಪಟಗಳು ಯಶಸ್ತಿಲಕಚಂಪೂ ಗ್ರಂಥದ ಪ್ರಸ್ತಾವನೆಯಲ್ಲಿ ತಾನು ನೇಮಿಚಂದ್ರರ ಶಿಷ್ಯನೆಂದೂ, ಮಹಾನ್ ಶಾಸ್ತ್ರ ಪಂಡಿತನೂ, ಸುಕವಿಯೂ ಆಗಿದ್ದನೆಂದೂ ಕ್ರಿ.ಶ. ೯೫೯ರಲ್ಲಿ ರಾಷ್ಟ್ರಕೂಟರ ಸಾಮಂತರಾದ ಬೋದನ ಅಥವಾ ವೇಮುಲವಾಡ ಚಾಲುಕ್ಯ ರಾಜಕುಮಾರ ಇಮ್ಮಡಿ ಅರಿಕೇಸರಿಯ ಪುತ್ರ ವಾಘರಾಜನ ಪೋಷಣೆಯಲ್ಲಿ ಗಂಗಾಧರಂ ಎಂಬಲ್ಲಿ ಯಶಸ್ತಿಲಕಚಂಪೂ ಗ್ರಂಥವನ್ನು ಬರೆದು ಮುಗಿಸಿದನೆಂದೂ ಆಗ ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಕೃಷ್ಣನು ಮೇಲ್ಪಾಟಿ (ಉತ್ತರ ಆರ್ಕಾಟ್ ಜಿಲ್ಲೆ) ನೆಲೆವೀಡಿನಿಂದ ಆಳುತ್ತಿದ್ದನೆಂದೂ ತಿಳಿಯುತ್ತದೆ. ಅಲ್ಲದೆ ಈತನು ಅರಿಕೇಸರಿಯ ಪುತ್ರ ಭದ್ರದೇವನ ರಾಜಗುರುವೂ ಆಗಿದ್ದನು. ಪ್ರಾಯಶಃ ಈ ಸಮಯದಲ್ಲೇ ನೀತಿವಾಕ್ಯಾಮೃತ ಗ್ರಂಥವನ್ನು ಬರೆದಿರಬೇಕು. ಪರಭಣಿ ತಾಮ್ರಪಟಗಳು ಜೈನ ಪಂಡಿತನೂ, ಆರ್ಚಾಯನೂ ಆದ ಈತನಿಗೆ ಬಸದಿಯ ಮೇಲ್ವಿಚಾರಣೆಗಾಗಿ ಸಬ್ಬಿಸಾವಿರ ನಾಡಿನ ರೇಪಾಕ ಹನ್ನೆರಡರಲ್ಲಿದ್ದ ವನಿಕುಟುಪುಲು ಎಂಬ ಗ್ರಾಮವನ್ನು ಕುಟ್ಟಂ ವೃತ್ತಿಯಾಗಿ(ಕುಟುಂಬ ವೃತ್ತಿ) ಚಾಲುಕ್ಯದೊರೆ ಉಮ್ಮಡಿ ಅರಿಕೇಸರಿ ದಾನವಾಗಿ ಕೊಟ್ಟ ವಿಷಯವನ್ನು ತಿಳಿಸುತ್ತದೆ.

          ಪ್ರಸ್ತುತ ವೀತಿವಾಕ್ಯಾಮೃತದಲ್ಲಿ ಉಕ್ತವಾಗಿರುವ ರಾಜ್ಯದ ಬಗ್ಗೆ ಎರಡು ಪರಿಭಾಷಾ ಸೂತ್ರಗಳ ವಿಶ್ಲೇಷಣೆಯನ್ನು ನೀಡುತ್ತಿದ್ದೇನೆ.

          ನೀತಿವಾಕ್ಯಾಮೃತ ಗ್ರಂಥವು ರಾಜ್ಯಶಾಸ್ತ್ರದ ಕೈಪಿಡಿಯಂತ್ತಿದ್ದು ಕೌಟಿಲ್ಯನ ’ಅರ್ಥಶಾಸ್ತ್ರ’ದ ಪ್ರಾಥಮಿಕ ಪರ್ವವೆಂದು ಪರಿಗಣಿಸಲ್ಪಟ್ಟಿದೆ. ಇದೊಂದು ಸೂತ್ರ ಗ್ರಂಥವಾಗಿದ್ದು ೧೬೬೦ ಸೂತ್ರಗಳನ್ನು ೩೨ ಸಮುದ್ದೇಶಗಳಿಂದ ಅಧ್ಯಾಯಗಳನ್ನು ಒಳಗೊಂಡಿದೆ. ಇದು ರಾಜ್ಯ ಸ್ವರೂಪ, ರಾಜನ ಹಾಗೂ ಸಪ್ತರಾಜ್ಯಾಂಗಗಳ ಕಾರ್ಯಾಚರಣೆಗಳ ಬಗ್ಗೆ ಸೂತ್ರರೂಪದಲ್ಲಿ ನಿರ್ದೇಶನ ನೀಡುವ ಗ್ರಂಥವಾಗಿದೆ.

          ಗ್ರಂಥದ ಮೊದಲ ಸೂತ್ರದಲ್ಲಿಯೇ ರಾಜ್ಯದ ಪರಿಭಾಷೆಯನ್ನು ಹೇಳುವ ಮೂಲಕ ಸೋಮದೇವಸೂರಿಯು ವಸ್ತುನಿರ್ದೇಶಕರೂಪವಾದ ಮಂಗಳವನ್ನು ಮಾಡಿದ್ದಾನೆ. ಹಾಗೂ ಫಲರೂಪವಾದ ಮಂಗಳಾಚರಣೆಯನ್ನೂ ಮಾಡಿದ್ದಾನೆ. ಈ ಪರಿಭಾಷಾ ಸೂತ್ರವು ಇಂತಿದೆ :

                              "ಧರ್ಮಾರ್ಥಕಾಮಮೋಕ್ಷರೂಪಸರ್ವಪುರುಷಾರ್ಥ ಫಲಮಿದಂ ರಾಜ್ಯಮ್ |"

ಧರ್ಮಾರ್ಥಕಾಮಮೋಕ್ಷಗಳು ಮಾನವ ಜೀವನದ ಪರಮ ಧ್ಯೇಯಗಳಾಗಿವೆ. ಇವುಗಳ ಸಿದ್ಧಿಯಿಂದಲೇ ಮಾನವ ಜೀವನದ ಸಕಲತೆ ಹಾಗೂ ಸಾರ್ಥಕತೆ. ಇವುಗಳಲ್ಲಿ ಧರ್ಮಾಕಾಮಗಳೆಂಬ ತ್ರಿವರ್ಗಗಳನ್ನು ಮಾನವನು ತನ್ನ ಹಾಗೂ ಸಮಾಜದ ಹಿತಕ್ಕಾಗಿ ಸಾಧಿಸತಕ್ಕದ್ದು. ಕೊನೆಯದಾದ ಮೋಕ್ಷ ಮಾತ್ರ ವ್ಯಕ್ತಿಕವಾದುದ್ದು.  ಮಾನವನ ಇನ್ನಿತರ ಸಕಲ ಆಕಾಂಕ್ಷಗಳನ್ನೂ ಈ ಚತುರ್ವಿಧ ಪುರುಷಾರ್ಥದಲ್ಲಿ ಸಮಾವೇಶಗೊಳಿಸಿ ಅವುಗಳ ಸಮಷ್ಟಿ ಫಲಸಿದ್ಧಿಯೇ ರಾಜ್ಯವೆಂದು ಹೇಳಿದ್ದಾನೆ.

          ತ್ರಿವರ್ಗ ಸಾಧನೆ ಮಾನವನಿಗೆ ರಾಜ್ಯದಿಂದಲೇ ಸಾಧ್ಯವಾಗುತ್ತದೆ. ಆದ್ದರಿಂದ ಧರ್ಮಾರ್ಥಕಾಮಗಳ ಸ್ವರೂಪವನ್ನು ಪ್ರತ್ಯೇಕ ಸಮುದ್ದೇಶಗಳಲ್ಲಿ ವಿವರಿಸಲಾಗಿದೆ. ಧರ್ಮದ ಸ್ವರೂಪವು "ಯಶೋ(ಎಸ್)ಭ್ಯುದಯ ನಿಃಶ್ರೇಯಸಸಿದ್ಧಿಃ ಸ ಧರ್ಮಃ" ಎಂದು ಹೇಳಲ್ಪಟ್ಟಿದೆ ಅಂದರೆ ಇಹದಲ್ಲಿ ಅಭ್ಯುದಯವನ್ನೂ ಪರದಲ್ಲಿ ಶ್ರೇಯಸ್ಸನ್ನೂ ನೀಡುವಂತಹುದೇ ಧರ್ಮ. ಆ ಧರ್ಮದ ಫಲ ಗಳಿಸಲು ಸರ್ವಹಿತಚಿಂತನೆ ಯಥಾ ಶಕ್ತಿ ದಾನ, ಸ್ವಾರ್ಥ ತ್ಯಾಗ ಹಾಗೂ ತಪಸ್ಸುಗಳೆಂಬ ಧರ್ಮಸಾದನಗಳನ್ನು ನಿರ್ದೇಶಿಸಿದ್ದಾನೆ. ಅರ್ಥದ ಸ್ವರೂಪವನ್ನು "ಯತಃ ಸರ್ವಪ್ರಯೋಜನಸಿದ್ಧಿ: ಸೋ(ಎಸ್)ರ್ಥಃ" ಎಂಬುದಾಗಿ ಹೇಳಿದೆ. ಅಂದರೆ ಮಾನವನ ಸಕಲ ಆವಶ್ಯಕತೆಗಳನ್ನು ಪೂರೈಸುಹುದೇ ಅರ್ಥ(ಸಂಪತ್ತು). ಅರ್ಥಲಾಭಕ್ಕಾಗಿ ಪ್ರಯತ್ನಪೂರ್ವಕ ಗಳಿಕೆ, ಸಂರಕ್ಷಣೆ, ವೃದ್ಧಿ ಮತ್ತು ಸತ್ಪಾತ್ರದಾನ ಎಂಬಂತಹ ಮಾರ್ಗೋಪಾಯಗಳನ್ನು ಸೂಚಿಸಿದ್ದಾನೆ. "ಸರ್ವೇಂದ್ರಿಯ ಸಂಪ್ರೀತಿಃ ಕಾಮಃ" ಎಂದು ಕಾಮದ ಸ್ವರೂಪವನ್ನು ಹೇಳಿದೆ. ಕಾಮವನ್ನು ಧರ್ಮಾರ್ಥಗಳಿಗೆ ವಿರೋಧವಿರದಂತೆ ಸೇವಿಸಬೇಕೆಂದೂ ಹಾಗೆ ಸೇವಿಸಿದಾಗ ಮಾತ್ರ ನಿಜವಾದ ಸುಖ ಪ್ರಾಪ್ತಿಯಾಗುವುದೆಂದೂ ಇದಕ್ಕೆ ವ್ಯತಿರಿಕ್ತವಾಗಿ ಕಾಮವೊಂದನೆ ಅತಿಯಾಗಿ ಸೇವಿಸಿದ್ದರೇ ಅದು ಮಾನವನ ಆತ್ಮನಾಶಕ್ಕೆ ಕಾರಣವಾಗುವುದೆಂಬ ಎಚ್ಚರಿಕೆಯನ್ನೂ ನೀಡಿದ್ದಾನೆ. ಇಂದ್ರಿಯ ಸಂಪ್ರೀತಿಯು ಧರ್ಮಾರ್ಥಗಳ ಸಾಮರಸ್ಯದೊಡನೆ ಉಂಟಾದಲ್ಲಿ ಮಾನವನಲ್ಲಿ ಮಾನಸಿಕ ಸಂತೃಪ್ತಿ ಸಮಾಧಾನಗಳು ನೆಲಗೊಂಡು ಅವನನ್ನು ಆಧ್ಯಾತ್ಮಿಕ ಸಾಧನೆಯಡೆಗೊಯ್ದು ಚರಮ ಪುರುಷಾರ್ಥವಾದ ಮೋಕ್ಷಸಿದ್ಧಿಗೆ ಕಾರಣವಾಗುತ್ತದೆ. ಇಂತಹ ಪುರುಷಾರ್ಥಫಲವಾದ ರಾಜ್ಯವು ಹೇಗೆ ವ್ಯವಸ್ಥೆಗೊಳ್ಳಬೇಕೆಂದೂ ಸಪ್ತಾಂಗ(ಸ್ವಾಮಿ, ಅಮಾತ್ಯ, ಜನಪದ, ಕೋಶ, ಬಲ, ದುರ್ಗಾ, ಮಿತ್ರ)ಗಳೊಡನೆ ಹೇಗೆ ಸಮರ್ಪಕ ಕಾರ್ಯಾಚರಣೆ ನಡೆಸಬೇಕೆಂಬ ವಿವರಗಳನ್ನು ತನ್ನ ಮುಂದಿನ ಸಮುದ್ದೇಶಗಳಲ್ಲಿ ಸೂತ್ರಿಸಿದ್ದಾನೆ. ಹೀಗೆ ಈ ರಾಜ್ಯಪರಿಭಾಷಾಸೂತ್ರದ ವಿವರಣೆಯೇ ಆಗಿದೆ ಸೋಮದೇವಸೂರಿಯ ಈ ಇಡೀ ಗ್ರಂಥ ’ನೀತಿವಾಕ್ಯಾಮೃತ’.

          ಪುರುಷಾರ್ಥಸಿದ್ಧಿಯನ್ನು ಮಾನವನಿಗೆ ರಾಜ್ಯವು ಹೇಗೆ ಉಂಟುಮಾಡುವುದನ್ನು ಗ್ರಂಥದ ೫ನೇ ಅಧ್ಯಾಯವಾದ ವಿದ್ಯಾವೃದ್ಧಸಮುದ್ದೇಶದಲ್ಲಿ ಇನ್ನೊಂದು ರಾಜ್ಯಪರಿಭಾಷಾಸೂತ್ರದಲ್ಲಿ ಹೇಳಿದೆ. ಈ ಸೂತ್ರ ಹೀಗಿದೆ : "ರಾಜ್ಞಃ ಪೃಥ್ವೀಪರಿಪಾಲನೋಚಿತಂ ಕರ್ಮ ರಾಜ್ಯಮ್" ಇದರ ಅರ್ಥ ರಾಜನ ಯಥಾಯೋಗ್ಯವಾದ ಪೃಥ್ವೀ ಪರಿಪಾಲನೆಯ ಕಾರ್ಯ (ರಾಜ್ಯಭಾರ) ವೇ ರಾಜ್ಯ ಎಂದು. ರಾಜನ್ ಶಬ್ದವು ಮೂಲತಃ ’ಆಳು’ ಎಂಬ ಅರ್ಥ ಕೊಡುವ ’ರಾಟ್’ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಆದ್ದರಿಂದ ಪ್ರಜೆಗಳನ್ನೂ ಭೂಮಿಯನ್ನೂ ಪರಿಪಾಲಿಸುವವನೇ, ಆಳುವವನೇ ರಾಜ. ಪೃಥ್ವಿಯನ್ನು "ವರ್ಣಾಶ್ರಮವತೀ ಪಶುಹಿರಣ್ಯಧಾನ್ಯಫಲದಾ" ಎಂದು ಹೇಳಲಾಗಿದೆ. ಈ ಉಕ್ತಿಯಿಂದ ಪೃಥ್ವಿ ಅಥವಾ ಭೂಮಿಯೂ ಪ್ರಜೆಗಳು ವರ್ಣಾಶ್ರಮರೂಪ ಸಾಮಾಜಿಕ ವ್ಯವಸ್ಥೆಯಿಂದ ಕೂಡಿದೆ ಹಾಗೂ ಪ್ರಜೆಗಳ ಜೀವನಸಮೃದ್ಧಿಯನ್ನುಂಟು ಮಾಡುತ್ತದೆ ಎಂದು ಸಿದ್ಧವಾಗುತ್ತದೆ. ಇಂತಹಾ ಭೂಮಿಯ ಪರಿಪಾಲನೆಯನ್ನು ಯತೋಚಿತವಾಗಿ ರಾಜ ನಡೆಸಬೇಕು. ಇಲ್ಲಿ ಪರಿಪಾಲನೆಯಂದರೆ ಶಿಷ್ಟ ರಕ್ಷಣೆ ಮತ್ತು ದುಷ್ಟ ಶಿಕ್ಷಣೆ. ರಾಜನ ಶಿಷ್ಟರಕ್ಷಣಾಕಾರ್ಯ ಎಂದರೆ ಪ್ರಜೆಗಳನ್ನು ಆಂತರಿಕ ಹಾಗೂ ಬಾಹ್ಯ ಶತ್ರುಗಳಿಂದ ರಕ್ಷಿಸುವುದು, ದುರ್ಬಲರಿಗೂ ಆಶ್ರಯಹೀನರಿಗೂ ಆಶ್ರಯ ನೀಡುವುದು, ಎಲ್ಲ ಧರ್ಮಗಳಿಗೂ ಧರ್ಮೀಯರಿಗೂ ಸಮಾನವಾಗಿ ಪ್ರೋತ್ಸಾಹ ಮತ್ತು ಸ್ವಾತಂತ್ರ್ಯ ನೀಡಿ ಮತೀಯ ಸೌಹಾರ್ಧವನ್ನುಂಟು ಮಾಡುವುದು, ಸಾಧು-ಸಜ್ಜನರಿಗೂ ಗಾಯಕ, ಕವಿ, ಪಂಡಿತ, ನರ್ತಕ, ವಾದಕ, ಚಿತ್ರಕಾರ, ಶಿಲ್ಪಿ ಮುಂತಾದ ಕಲಾಕಾರರಿಗೆ ಪೋಷಣೆ ನೀಡುವುದು, ಸ್ವಧರ್ಮ ಎಂದರೆ ರಾಜಧರ್ಮ ಮತ್ತು ಸಾಮಾನ್ಯ ಧರ್ಮ ಎಂದರೆ ಮಾನವ ಧರ್ಮವನ್ನು ಅನುಸರಿಸಿ ತನ್ಮೂಲಕ ಸ್ನೇಹಯುಕ, ಬಂಧುರ ಸಾಮಾಜಿಕ ಪರಿಸರವನ್ನು ಏರ್ಪಡಿಸುವುದೂ, ಕೃಷಿ, ಕೈಗಾರಿಕೆ, ವಾಣಿಜ್ಯ, ವ್ಯಾಪಾರಿಗಳಿಗೆ ಉತ್ತೇಜನ ನೆರವುಗಳನ್ನು ನೀಡಿ ಆರ್ಥಿಕ ಸಮೃದ್ಧಿಯನ್ನುಂಟು ಮಾಡುವುದು ಮುಂತಾದ ಕರ್ತವ್ಯಗಳನ್ನು ಯೋಗ್ಯರೀತಿಯಲ್ಲಿ ನಿರ್ವಹಿಸುವುದರಿಂದ ಸಾಧಿತವಾಗುತ್ತದೆ. ಪರಿಪಾಲನೆಯ ಇನ್ನೊಂದು ಮುಖ್ಯವಾದ ದುಷ್ಟಶಿಕ್ಷಣೆಯ ಕಾರ್ಯವು ರಾಜನು ದುಷ್ಟರಾದ ರಾಜದ್ರೋಹಿಗಳು, ನಯವಂಚಕರು, ದರೋಡೆಗಾರರು, ಲಂಚಕೋರರು, ಪ್ರಜಾಪೀಡಕ ಅಧಿಕಾರಿಗಳು ಮುಂತಾದ ಸಮಾಜ ವಿರೋಧೀ ಜನರ ಅಪರಾಧಗಳನ್ನು ಪತ್ತೆಹಚ್ಚಿ, ಅಪರಾಧಗಳನ್ನು ಹಿಡಿತರಿಸಿ ಅವರ ಅಪರಾಧಗಳು ಸಾಕ್ಷಾಧರಗಳಿಂದ ಸಾಬೀತಾದರೆ ಅಪರಾಧಗಳ ತೀವ್ರತೆಗೆ ಅನುಗುಣವಾಗಿ, ಧರ್ಮಶಾಸ್ತ್ರನಿಯ ಮಗಳಿಗನುಸಾರವಾಗಿ, ತನ್ನ ದಂಡಾಧಿಕಾರವನ್ನು ಶಿಕ್ಷೆ, ದಂಡ ವಿಧಿಸುವುದರ ಮೂಲಕ ಪ್ರಯೋಗಿಸಿ ಪ್ರಜೆಗಳಿಗೆ ನ್ಯಾಯ ದೊರಕಿಸಿ ರಕ್ಷಣೆ ಕೊಡುವುದರಿಂದ ಸಾಧಿತವಾಗುತ್ತದೆ. ದುಷ್ಟಶಿಕ್ಷಣೆಯ ಜೊತೆಗೆ ನ್ಯಾಯ ತೀರ್ಮಾನ ಹಾಗೂ ಶಿಕ್ಷೆ ವಿಧಿಸುವಿಕೆಯಲ್ಲಿ ರಾಜನು ತನ್ನ ನಿಷ್ಪಕ್ಷಪಾತದಿಂದ, ಧರ್ಮದೃಷ್ಟಿಯಿಂದ, ಸದ್ವರ್ತನೆಯಿಂದ ಅಪರಾಧಿಗಳ ಮನಃ ಪರಿವರ್ತನೆಗೊಳಿಸಿ ದುಷ್ಟರ ದುಷ್ಟತನವನ್ನು ನಿವಾರಿಸಿ ಅವರನ್ನು ಸನ್ಮಾರ್ಗಕ್ಕೆ ತರುವ ಕ್ರಮಗಳನ್ನೂ ಅಗತ್ಯವಾಗಿ ಕೈಗೊಳ್ಳಬೇಕು.

          ಈ ಮೇಲೆ ಹೇಳಿದ ಭೂ ಪರಿಪಾಲನಾ ಕಾರ್ಯವನ್ನು ಉಚಿತ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುವಂತೆ ಮಾಡಲು ರಾಜಕುಮಾರರಿಗೆ ತಾವು ಸಿಂಹಾಸನಸ್ಥರಾಗುವ ಪೂರ್ವದಲ್ಲಿ ಯೋಗ್ಯ ಶಿಕ್ಷಣ ನೀಡುವುದರ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ್ದಾನೆ ಕೃತಿಕಾರ ಸೋಮದೇವಸೂರಿ. ಅವನ ಅಭಿಪ್ರಾಯದಲ್ಲಿ ವಿದ್ಯಾಸಂಸ್ಕಾರನು ಪಡೆಯದ ರಾಜವನ್ನು ಸಂಸ್ಕರಣಕೊಳ್ಳಗಾಗದ ಕೇವಲ ಕಲ್ಲು ತುಂಡಿನಂತಿರುವ ರತ್ನದಂತೆ ನಿಷ್ಪ್ರಯೋಜಕ ಹಾಗೂ ಮೂರ್ಖರಾಜನಿರುವ ರಾಜ್ಯಕ್ಕಿಂತ ಅರಾಜಕ ರಾಜ್ಯವೇ ಶ್ರೇಷ್ಠವೆನಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ರಾಜಕುಮಾರನಿಗೂ ಬಾಲ್ಯಾವಸ್ಥೆಯಲ್ಲಿಯೇ ಸಮರ್ಥ ಗುರುಗಳಿಂದ ಕಡ್ಡಾಯವಾಗಿ ಮತ್ತು ಯಥೋಚಿತವಾಗಿ ಚತುರ್ವಿಧ ರಾಜವಿದ್ಯೆಗಳಾದ ತ್ರಯೀ, ಅನ್ವೀಕ್ಷಕೀ, ವಾರ್ತಾ ಹಾಗೂ ದಂಡನೀತಿಗಳಲ್ಲಿ ಶೀಕ್ಷಣಕೊಡಿಸ ತಕ್ಕದ್ದು. ಈ ಚರ್ತುವಿಧ ರಾಜವಿದ್ಯೆಗಳಲ್ಲಿ ಶಿಕ್ಷಣ ನೀಡುವುದರಿಂದ ರಾಜನಿಗೆ ಉಂಟಾಗುವ ಪ್ರಯೋಜನಗಳನ್ನೂ ವಿವರಿಸಿದ್ದಾನೆ. ತ್ರಯೀ ಶಿಕ್ಷಣದಿಂದ  ಧರ್ಮದ ಸ್ವರೂಪ, ಚಾತುರ್ವರ್ಣ, ಚಾತುರಾಶ್ರಮಗಳ ಆಚಾರ ನಿಯಮಗಳ ಜ್ಞಾನ ಮತ್ತು ಧರ್ಮಸಿದ್ಧಿಸಾಧನಕ್ರಮ ತಿಳಿದುಬರುತ್ತದೆ. ಅನ್ವೀಕ್ಷಕೀ ಶಿಕ್ಷಣದಿಂದ ಮಾನವ ಸಹಜ ಶಾರೀರಿಕ ಮಾನಸಿಕ ದೋಷಗಳ ನಿವಾರಣೆ ಮತ್ತು ಆಧ್ಯಾತ್ಮಿಕ ಪ್ರಗತಿಗಳು ಸಾಧ್ಯವಾಗುತ್ತವೆ. ವಾರ್ತಾ ಶಿಕ್ಷಣದಿಂದ ಮಾನವ ಜೀವನದ ಆರ್ಥಿಕ ಸಂಪನ್ನತೆಗೆ ಸಾಧನಗಳಾದ ಕೃಷಿ, ಕುಶಲಕರ್ಮ, ವ್ಯಾಪಾರ ಮುಂತಾದವುಗಳ ವೃದ್ಧಿಗಾಗಿ ಮಾರ್ಗೋಪಾಯಗಳ ನಿದರ್ಶನದಿಂದ ವ್ಯವಹಾರ ಜ್ಞಾನ ಕುಶಲತೆಯು ಪ್ರಾಪ್ತವಾಗುತ್ತವೆ. ದಂಡನೀತಿ ಶಿಕ್ಷಣದಿಂದ ದಂಡಾಧಿಕಾರದ ಸಮುಚಿತ ಪ್ರಯೋಗ, ದುಷ್ಟ ನಿಗ್ರಹ ಪರಿಜ್ಞಾನ, ನ್ಯಾಯಾನ್ಯಾಯಗಳ ವಿವೇಚನೆ ಪ್ರಾಪ್ತವಾಗುತ್ತದೆ. ಈ ರೀತಿಯಾಗಿ ವಿದ್ಯಾವಿನಯಸಂಪನ್ನನಾದ ರಾಜ ಮಾತ್ರ ವಿವೇಕಿಯಾಗಿ ಉಚಿತಾನುಚಿತವನ್ನು ತಿಳಿದು ಭೂಪ್ರಜಾ ಪರಿಪಾಲನಾಕಾರ್ಯವನ್ನು ಯಶಸ್ವಿಯಾಗಿ ವಿರ್ವಹಿಸುತ್ತಾನೆ.

          ರಾಜ್ಯಾಧಿಕಾರ ಪಡೆದ ರಾಜನಿಗೆ ಅವನ ಎಲ್ಲ ಕಾರ್ಯಗಳ ಸಮಯೋಚಿತ ಹಾಗೂ ಸಮುಚಿತ ನಿರ್ವಹಣೆಗಾಗಿ ಕಾರ್ಯಧುರಂಧರರಾದ ಮಂತ್ರಿ, ಅಮಾತ್ಯ ಮುಂತಾದ ಅಧಿಕಾರವರ್ಗವನ್ನೂ ರಕ್ಷಣಾಕಾರ್ಯಕ್ಕಾಗಿ ಯುದ್ಧ ನಡೆಸಲು ಸೇನೆಯನ್ನೂ, ರಕ್ಷಣೆ ನೀಡುವ ದುರ್ಗವನ್ನೂ, ತುಂಬಿ ತುಳುಕುವ ಬೊಕ್ಕಸವನ್ನೂ ಆ ಸಮುದ್ರ ಪರ್ಯಂತ ಭೂ ಒಡೆತನದ ಹಕ್ಕನ್ನೂ ನೀಡಲಾಗಿದೆ. ಆದ್ದರಿಂದಲೇ ಇವುಗಳಿಗೆ ರಾಜ್ಯಾಂಗಗಳೆಂದು ಹೆಸರಿದೆ. ರಾಜ್ಯಾಂಗಗಳ ಜೊತೆಗೆ ರಾಜನಿಗೆ ಸಾಮಂತರಿಂದ ಕಪ್ಪಕಾಣಿಕೆ ಪಡೆಯುವ, ಪ್ರಜೆಗಳಿಂದ ಕರವಸೂಲಿ ಮಾಡುವ, ಅರಮನೆ, ಪರಿವಾರ, ಸಿಂಹಾಸನ, ರಾಜದಂಡ, ಧವಳಛತ್ರ, ಪತಾಕೆ, ರಾಜಮುದ್ರೆಗಳಂತಹ ರಾಜ ಚಿಹ್ನೆಗಳನ್ನು ಹೊಂದುವ ವೈಭವ ಜೀವನ ನಡೆಸಲು ವಿಶೇಷ ಅನುಕೂಲತೆಗಳು, ಸವಲತ್ತುಗಳು ನೀಡಲ್ಪಟ್ಟಿವೆ. ಈ ಅಧಿಕಾರ, ಸವಲತ್ತುಗಳನ್ನು ಬಳಸಿಕೊಂಡು ರಾಜ ರಾಜ್ಯಾಂಗಗಳ ಮೇಲೆ ಸ್ವಾಮಿತ್ವವನ್ನು ಹೊಂದಿ, ಅವುಗಳ ಸೂಕ್ತವ್ಯವಸ್ಥೆ, ಕ್ರೋಢೀಕರಣ, ಸಹಯೋಗಗಳನ್ನೇರ್ಪಡಿಸಿ ಪ್ರಜೆಗಳತ್ರಿವರ್ಗಸಾಧನೆಯನ್ನೂ ಮತ್ತು ಶಿಷ್ಟರಕ್ಷಣ ದುಷ್ಟಶಿಕ್ಷಣಗಳನ್ನೊಳಗೊಂಡ ಭೂಪರಿಪಾಲನಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾನೆ. ಇಂತಹ ಯಶಸ್ವೀ ರಾಜನನ್ನೇ ಪರಮದೈವತವೆಂದೂ, ಲೋಕಪಾಲಕರಿಗಿಂತ ಉತ್ತಮ ಲೋಕಪಾಲಕನೆಂದೂ ಅನುಕೂಲವರ್ತನೆಯುಳ್ಳ ಶಿಷ್ಟ ಸಜ್ಜನರಿಗೆ ಸರ್ವಾಭೀಷ್ಟಗಳ ಮಳೆಗರೆಯುವ  ಇಂದ್ರನಂತೆಯು ಪತಿಕೂಲ ವರ್ತನೆಯುಳ್ಳ ದುಷ್ಟದುರ್ಜನರಿಗೆ ಮರಣ ದಂಡನೆ ಮುಂತಾದ ಶಿಕ್ಷೆಗಳನ್ನು ವಿಧಿಸುವ ಮೂಲಕ ಭಯವನ್ನುಂಟು ಮಾಡುವ ಯಮನಂತೆಯೂ ಭಾವಿಸಲಾಗಿದೆ. ಈ ಬಗೆಯಾಗಿ ರಾಜನು ಸಮುಚಿತವಾಗಿ ನೆರವೇರಿಸುವ ತ್ರಿವರ್ಗಸಾಧನೆ ಮತ್ತು ರಾಜ್ಯಭಾರವನ್ನೇ ರಾಜ್ಯವೆಂದು ಸಮೀಕರಿಸಿರುವುದು ಸಮೀಚೀನವೇ ಆಗಿದೆ.

----------------------------------------------------------------------------

೪. ’ವಡ್ಡಾರಾಧನೆ’ಯಲ್ಲಿ ಶಿಕ್ಷಣ ವ್ಯವಸ್ಥೆಯ ಚಿತ್ರಣ 

          ’ವಡ್ಡಾರಾಧನೆ’ ಶಿವಕೋಟಾಚಾರ್ಯರಿಂದ ಕ್ರಿ.ಶ. ೧೦ನೇ ಶತಮಾನದಲ್ಲಿ ರಚಿಸಲ್ಪಟ್ಟ ಕೃತಿ ಈವರೆಗೆ ನಮಗೆ ಉಡಲಬನಾಗಿರುವ ಪ್ರಥಮ ಕನ್ನಡ ಗದ್ಯಕೃತಿ ಮೂಲತಃ ಜೈನ ಕೃತಿಯಾದ ಇದರಲ್ಲಿ ೧೯ ಜನ ಮಹಾಪುರುಷರ ಗಾಹೆ(ಗಾದೆ-ಚರಿತೆ)ಗಳನ್ನೊಳಗೊಂಡಿದೆ. ಧಾರ್ಮಿಕ ಹಿನ್ನಲೆಯಲ್ಲಿ ರಚಿತವಾಗಿದ್ದರೂ ಈ ಕೃತಿಯು ಬಗ್ಗೆ ಸಮಕಾಲಿನ ಶಿಕ್ಷಣ ವ್ಯವಸ್ಥೆಯ ಅತ್ಯುಪಯುಕ್ತವಾದ ಮಾಹಿತಿಯನ್ನೊದಗಿಸುತ್ತದೆ.

          ಈ ಕೃತಿಯಲ್ಲಿ ವೈದಿಕರ ವಿದ್ಯಾಭ್ಯಾಸ ಕ್ರಮ ಹಾಗೂ ಜೈನ ವಿದ್ಯಾಭ್ಯಾಸ ಕ್ರಮಗಳೆರಡನ್ನೂ ಸಮಾನವಾಗಿ ಪುರಸ್ಕರಿಸಲಾಗಿದೆ. ಹಾಗೆಯೇ ಲೌಕಿಕ, ಆಧ್ಯಾತ್ಮಿಕ ಶಿಕ್ಷಣಗಳೆರಡಕ್ಕೂ ಮಾನವ ಜೀವನದಲ್ಲಿ ಸ್ಥಾನವನ್ನು ಕಲ್ಪಿಸಲಾಗಿದೆ. ಇವರ ಸುಕುಮಾರ ಸ್ವಾಮಿಯ ಕಥೆ, ಸನತ್ಕುಮಾರ ಚಕ್ರವರ್ತಿಯ ಕಥೆ ವಿದ್ಯುಚ್ಚೋರರಿಸಿಯ ಕಥೆ, ಗುರುದತ್ತ ಭಟಾರರ ಕಥೆ, ಚಿಲಾತಪುತ್ರನ ಕಥೆಗಳಲ್ಲಿ ಶೈಕ್ಷಣಿಕ ಕ್ರಮದ ಬಗ್ಗೆ ಮಹತ್ವಪೂರ್ಣ ಮಾಹಿತಿ ಲಭ್ಯವಾಗುತ್ತದೆ.

          ಸುಕುಮಾರಸ್ವಾಮಿಯ ಕಥೆಯಲ್ಲಿ ವತ್ಸದೇಶದ ಕೌಶಾಂಬಿನಗರದ ರಾಜ ಅತಿಬಳನ ಮಂತ್ರಿ ಸೋಮಶರ್ಮನ ಮಕ್ಕಳಾದ ಅಗ್ನಿಭೂತಿ, ವಾಯುಭೂತಿ ವಿದ್ಯಾವಂತರಲ್ಲ, ಸೋಮಾರಿಗಳು ಹಾಗೂ ಉಂಡಾಡಿಗಳಾಗಿದ್ದರಿಂದ ಸೋಮಶರ್ಮನ ಮರಣಾನಂತರ ಮಂತ್ರಿ ಪದವಿಯನ್ನು ಯೋಗ್ಯತಾ ಆಧಾರದ ಮೇಲೆ ರಾಜನು ಅವರ ದಾಯಾದಿಗೆ ಕೊಡುತ್ತಾನೆ. ಇದರಿಂದ ಅಪಮಾನಗೊಂಡು ತಮ್ಮ ತಾಯಿ ಕಾಶ್ಯಪಿಗೆ ಈ ವಿಷಯನ್ನರುಹಿ ತಾವು ಇನ್ನು ಮುಂದೆ ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ತೋರುವೆವು ಎಂದು ಹೇಳಲು ತಾಯಿಯು ಅವರಿಬ್ಬರನ್ನೂ ತನ್ನ ಸೋದರ ಮಗಧೆಯ ಮಂತ್ರಿ ಸೂರ್ಯಮಿತ್ರನಲ್ಲಿಗೆ ಕಳುಹುವಳು ಈ ಪ್ರಸಂಗದಿಂದ ವಿದ್ಯಾಭ್ಯಾಸವೇ ಅರ್ಹತೆಯ ಸಾಧನವೆಂದೂ, ಓದದಿರುವವರು ಮೂರ್ಖರಿಂದೂ ಅಂತಹವರಿಗೆ ಉನ್ನತ ಹುದ್ದೆಯನ್ನು ವಂಶ ಪಾರಂಪರ‍್ಯತಾಧಾರ ಮೇಲಾದರೂ ಕೊಡಲಾಗದು, ಯೋಗ್ಯತಾಧಾರದ ಮೇಲೆ ಉನ್ನತಾಧಿಕಾರಿಗಳಿಗೆ ನೇಮಕ ಎಂಬ ಕೃತಿಕಾರನ ಸ್ಪಷ್ಟ ಧೋರಣೆ ಮತ್ತು ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುವುದು.

          ಅಗ್ನಿಭೂತಿ, ವಾಯುಭೂತಿ ಪಂಡಿತನಾದ ತಮ್ಮ ಸೋದರಮಾವ ಸೂರ್ಯಮಿತ್ರನೆಡೆಗೆ ಬಂದಾಗ ಸೂರ್ಯಮಿತ್ರ ಬಾಂಧವ್ಯ ಹಾಗೂ ಸಲಿಗೆ ವಿದ್ಯಾಭ್ಯಾಸಕ್ಕೆ ಹಾನಿಕರವೆಂದು ಭಾವಿಸಿ ಬಂಧುತ್ವವನ್ನು ಮರೆಮಾಚಿ ವಿದ್ಯಾರ್ಥಿಗಳಾಗಿ ತನ್ನ ಬಳಿ ಇರಲು ಅರ್ಹತಾ ನಿಯಮಗಳನ್ನೊಡ್ಡುವನು. ’ವಿದ್ಯಾರ್ಥಿಗಳಾಗಿ ಯೋದಂ ಕಲ್ವೆಮೆಂಬೞ್ತಯೊಳ್ ಬಂದಿರಪ್ಪೊಡೆಬೈಕಂದಿರಿದು ಕಪ್ಪಡಮುಟ್ಟಿರುಳಂ ಪಗಲುಮಲಸದೆ ನಿರ್ಬಂಧದಿಂದೋದಲಾರ್ಪೊಡೆ ನಿಮ್ಮನೋದಿಸಲಕ್ಕುಂ’  ಎಂದು. ಅಂದರೆ ವಿದ್ಯಾರ್ಥಿಗಳು ಓದು ಕಲಿಯಬೇಕೆಂಬ ಶ್ರದ್ಧಾಸಕ್ತಿಗಳನ್ನು ಮೊಟ್ಟಮೊದಲು ಹೊಂದಿರ ಬೇಕು, ಭಿಕ್ಷಾಟನೆಯಿಂದ ತಮ್ಮ ಆಹಾರವನ್ನು ತಾವೇ ಗಳಿಸಿಕೊಳ್ಳಬೇಕು ಹಾಗೂ ವೇಷಭೂಷಣಗಳಲ್ಲಿ ಆಸಕ್ತಿ ತೋರದೆ ನಿಯಮಪೂರ್ವಕವಾಗಿ ಹಗಲು ರಾತ್ರಿಗಳೆಂದೆಣಿಸದೆ ಸೋಮಾರಿತನ ಬಿಟ್ಟು ಕಷ್ಟ ಪಟ್ಟು ಓದಬೇಕು. ಇದೇ ವಿದ್ಯಾರ್ಥಿಗಳ ಲಕ್ಷಣ. ವಿದ್ಯಾರ್ಥಿಗಳಿಗೆ ಹೇಳಿರುವ ಈ ಲಕ್ಷಣಗಳು ಇಂದಿಗೂ ಉಪಯುಕ್ತವಾಗಿವೆ ಹಾಗೂ ಆಚರಣಯೋಗ್ಯವಾಗಿವೆ.

          ವಿದ್ಯಾರ್ಜನೆಗೆ ತೀವ್ರಾಕಾಂಕ್ಷೆ, ಛಲ ಮತ್ತು ತ್ಯಾಗದ ಅವಶ್ಯಕತೆ ಎಷ್ಟಿದೆ ಎಂಬುದು ದೃಷ್ಟಾಂತಪೂರ್ವಕವಾಗಿ ತಿಳಿದು ಬರುತ್ತದೆ. ಸೂರ್ಯಮಿತ್ರನು ಸುಧರ್ಮಾಚಾರ್ಯರಿಂದ ಜ್ಯೋತಿಶ್ಶಾಸ್ತ್ರ ಕಲಿಯಲು ಬಂದ ಸಂಧರ್ಭದಲ್ಲಿ ಸೂರ್ಯಮಿತ್ರ ಸ್ವತಃ ತಾನೇ ಸರ್ವಶಾಸ್ತ್ರ ವಿಶಾರದ ಪಂಡಿತನಾದರೂ ಸುಧರ್ಮಾಚಾರ್ಯರು ತಾನು ಕಳೆದಿದ ಅರಸನ ಉಂಗುರವನ್ನು ತಮ್ಮ ಜ್ಯೋತಿಶ ವಿದ್ಯೆಯಿಂದ ದೊರಕಿಸಿ ಕೊಟ್ಟು ಪ್ರಾಣ ಉಳಿಸಿದ್ದನ್ನು ಕಂಡು ಅಂತಹ ಶಕ್ತಿಯುಳ್ಳ ಜ್ಯೋತಿಶ್ಯ ವಿದ್ಯೆಯನ್ನು ಕಲಿಯಲಪೇಕ್ಷಿಸಿ ಸುಧರ್ಮಾಚಾರ್ಯರಲ್ಲಿಗೆ ಬಂದು ವಿದ್ಯೆಯನ್ನು ಹೇಳಿಕೊಡಬೇಕೆಂದು ಕೇಳಿಕೊಂಡಾಗ ಸುಧರ್ಮಾಚಾರ್ಯರು ಇಂತೆಂದರು - ’ತಮಾ, ಯಮ್ಮಜೋಯಿಸನೆಂತಪ್ಪ ರೂಪಿದ ಋಷಿಯರ್ಗಲ್ಲದೆ ಪೇೞಲುಂ ಕಲಲುಮಾಗದು’. ಆ ಮೇರೆಗೆ ಸೂರ್ಯಮಿತ್ರನು ಜ್ಯೋತಿಷ್ಯವನ್ನು ಕಲಿಯಲೇಬೇಕೆಂಬ ತೀವ್ರಾಕಾಂಕ್ಷಯಿಂದ ಸುಧರ್ಮಾಚಾರ್ಯರನ್ನು ಬೇಡಿ ಅವರಿಂದ ದೀಕ್ಷೆಯನ್ನು ಪಡೆದು ಸುಧರ್ಮಾಚಾರ್ಯರ ನಿಯಮಗಳಿಗೊಪ್ಪಿ ಪಂಚಮಹಾವ್ರತಗಳು(ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ) ಪರಿಕ್ರಮಣ ನಮಸ್ಕಾರ(ಪಶ್ಚಾತಾಪ, ಪ್ರಕೀರಣಕ ಮತ್ತು ಪಂಚನಮಸ್ಕಾರ) ಗಳನ್ನು ಅನುಷ್ಠಾನ ಮಾಡಿ, ತ್ರಿಷಷ್ಠಿ(೬೩) ಶಲಾಕಾ ಪುರುಷಚರಿತ್ರೆ, ಚರಣಗ್ರಂಥ, ಕರಣಗ್ರಂಥ ಹಾಗೂ ದ್ರವ್ಯಾನುಯೋಗಗಳನ್ನೂ ಅಧ್ಯಯನ ಮಾಡಿದನು. ಅಷ್ಟೇ ಅಲ್ಲದೇ ಕೇವಲ ಜ್ಯೋತಿಷ ವಿದ್ಯೆಯನ್ನು ಕಲಿಯಲು ಸನ್ಯಾಸಿಯಾದವನು ಈಗ ನಿಷ್ಟೆಯಾದ ತಪೋಜೀವನವನ್ನು ಸ್ವ ಇಚ್ಛೆಯಿಂದಲೇ ಕೈಗೊಂಡನು, ತಪಃಶಕ್ತಿಯಿಂದಲೇ ಜ್ಯೋತಿಷ ವಿದ್ಯೆಯು  ಸಾಧಿಸಲ್ಪಟ್ಟಿತು.

          ಅಂದಿನ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಬೋಧಿಸಲ್ಪಡುತ್ತಿದ್ದ ವಿಷಯಗಳ ವ್ಯಾಪ್ತಿ ಎಷ್ಟು ವಿಸ್ತ್ರುತವಾಗಿತ್ತೆಂದು ಈ ಕೆಳಗಿನ ಬೋಧನಾ ವಿಷಯಗಳ ಪಟ್ಟಿಯಿಂದ ತಿಳಿದುಬರುತ್ತದೆ. ಸೂರ್ಯಮಿತ್ರನು ತನ್ನ ಶಿಷ್ಯನಾದ ಅಗ್ನಿಭೂತಿಗೆ ಬೋಧಿಸಿದ ವಿಷಯಗಳೆಂದರೆ ಚತುರ್ವೇದಗಳು, ಷಡಂಗಗಳು, ಹದಿನೆಂಟು ಧರ್ಮಶಾಸ್ತ್ರಗಳು(ಮನು, ಗೌತಮ, ವಶಿಷ್ಠ, ಅತ್ರಿ, ದಕ್ಷ, ಅಂಗೀರಸ, ಉಶನಸ್, ವಾಕ್ಪತಿ, ವ್ಯಾಸ, ಆಪಸ್ತಂಭ, ಕಾತ್ಯಾಯನ, ವಿಷ್ಣು, ಯಾಜ್ಞವಲ್ಕ್ಯ, ನಾರದ, ಪರಾಶರ, ಶಂಖ, ಹಾರೀತ - ಇವರಿಂದ ಪ್ರಣೀತವಾದ ಸ್ಮೃತಿಗಳು), ಮೀಮಾಂಸಾ, ನ್ಯಾಯವಿಸ್ತರ(ತರ್ಕಶಾಸ್ತ್ರ), ಪ್ರಮಾಣಂ(ಪ್ರತ್ಯಕ್ಷ, ಅನುಮಾನ, ಶಬ್ದ, ಅನುಪಲಬ್ದಿ, ಅರ್ಥಪತ್ತಿ), ಛಂದಸ್ಸು, ಅಲಂಕಾರ, ನಿಗಂಟು, ಕಾವ್ಯ, ನಾಟಕ, ಚಾಣಕ್ಯ, ಅರ್ಥಶಾಸ್ತ್ರ, ಸಾಮಂತ್ರಿಕ, ಶಾಲಿಹೋತ್ರ(ಶಾಲಿಹೋತ್ರನೆಂಬ ಋಷಿವಿರಚಿತ ಅಶ್ವಶಾಸ್ತ್ರ), ಪಾಳಕಾಪ್ಯ(ಪಾಳಕಾಪ್ಯನೆಂಬ ಋಷಿವಿರಚಿತ ಗಜಶಾಸ್ತ್ರ), ಹಾನಿತಂ, ಚರಕಂ, ಅಶ್ವಿನೀಮತಂ, ಬಾಹಲಾ, ಶುಶ್ರುತಂ, ಕ್ಷಾರಪಾನೀಯಂ ಎಂಬ ಆರು ವೈದ್ಯಪದತ್ತಿಗಳು, ಜ್ಯೋತಿಷ ಹಾಗೂ ಮಂತ್ರವಿದ್ಯೆ. ಈ ಬೋಧನಾ ವಿಷಯಗಳ ಪಟ್ಟಿಯಲ್ಲಿ ವೈದಿಕ, ಧಾರ್ಮಿಕ, ಲೌಕಿಕ, ಪ್ರಾಣಿಕ ಮುಂತಾದ ವೈವಿಧ್ಯಪೂರ್ಣ ವಿಷಯಗಳು ಅಡಕವಾಗಿದ್ದು ಶೈಕ್ಷಣಿಕ ವ್ಯವಸ್ಥೆಯು ಸಮಕಾಲೀನ ಜನಸಮುದಾಯದ ಆವಶ್ಯಕತೆಗಳನ್ನು ಪೂರೈಸುವ ಹಾಗೂ ದೈನಂದಿನ ಜೀವನದಲ್ಲಿ ಸುಲಭವಾಗಿ ಅಳವಡಿಸಬಹುದಾಗಿದ್ದು ಸಮಾಜದಲ್ಲಿ ಮಹತ್ವದ ಸ್ಥಾನವನ್ನು ಶಿಕ್ಷಣಕ್ಕೆ ತಂದಿದ್ದಿತು ಎಂಬುದು ಗಮನಿಸಬೇಕಾದ ಅಂಶ.
         
          ವೈದಿಕ ಶಿಕ್ಷಣ ವ್ಯವಸ್ಥೆಯ ಜೊತೆ ಜೊತೆಗೇ ಜೈನ ಶಿಕ್ಷಣ ಕ್ರಮವು ಈ ಕೃತಿಯಲ್ಲಿ ವಿವೇಚಿಸಲ್ಪಟ್ಟಿದೆ. ಜೈನ ಶೈಕ್ಷಣಿಕ ಕ್ರಮದಲ್ಲಿ ಬೋಧಿಸಲ್ಪಡುತ್ತಿದ್ದ ವಿಷಯಗಳೆಂದರೆ ೧೪ ಪೂರ್ವಗಳು(ಉತ್ಪಾದಪೂರ್ವ, ಆಗ್ರಾಯಣೀಪೂರ್ವ, ನೀರ್ಯಾನುವಾದಪೂರ್ವ, ಅಸ್ತಿ-ನಾಸ್ತಿಪ್ರವಾದಪೂರ್ವ, ಜ್ಞಾನಪ್ರವಾದಪೂರ್ವ, ಸತ್ಯಪ್ರವಾದಪೂರ್ವ, ಆತ್ಮಪ್ರವಾದಪೂರ್ವ, ಕರ್ಮಪ್ರವಾದಪೂರ್ವ, ಪ್ರತ್ಯಾಖ್ಯಾನುವಾದಪೂರ್ವ, ವಿದ್ಯಾನುವಾದಪೂರ್ವ, ಕಲ್ಯಾಣವಾದ ಪೂರ್ವ, ಪ್ರಾಣವಾದ ಪೂರ್ವ, ಕ್ರಿಯಾವಾದ ಪೂರ್ವ, ತ್ರಿಲೋಕಪೂರ್ವ ಬಿಂದುಸಾರ ಪೂರ್ವ), ದ್ವಾದಶಂಗಗಳು(ಆಚಾರಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವ್ಯಖ್ಯಾಪ್ರಜ್ಞಪ್ತಿ, ಜ್ಞಾತೃಧರ್ಮ ಕಥಾಂಗ, ಉಪಾಸಕಾಧ್ಯಾಂಗ, ಅಂತಕೃದ್ಧಶಾಂಗ, ಅನುಕ್ತರೋಪಪಾದಕ ದಶಾಂಗ, ಪ್ರಶ್ನವ್ಯಾಕರಣಾಂಗ, ವಿಪಾಕಸೂತ್ರಂಗ, ದೃಷ್ಟಿಪ್ರವಾದಾಂಗ), ಚರಣಗ್ರಂಥ, ಕರಣಗ್ರಂಥ, ದ್ರವ್ಯಾನುಯೋಗ, ತ್ರಿಷಷ್ಠಿ  ಶಲಾಕ ಪುರುಷರ ಚರಿತೆ ಮುಂತಾದವು.

          ಸ್ತ್ರೀ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಕೃತಿಯು ಕೆಲವು ವಿವರಗಳನ್ನು ನೀಡುತ್ತದೆ. ಸ್ತ್ರೀಯರು ಅಕ್ಷರ ಆಲೇಖ್ಯಗಣಿತ, ಗಾಂಧರ್ವ, ನೃತ್ಯ, ಚಿತ್ರಕರ್ಮ, ಪತ್ಯಚ್ಛೇದ್ಯ ಮುಂತಾದ ಚತುಷ್ಷಷ್ಠಿ(೬೪) ಕಲೆಗಳಲ್ಲಿ ಪರಿಣತಿ ಪಡೆಯುತ್ತಿದ್ದರು ಎಂದು ವಿದ್ಯುಚ್ಚೋರನ ಕಥೆ ತಿಳಿಸುತ್ತದೆ. ಇದೇ ಕಥೆಯಲ್ಲಿ ಚೋರ ವಿದ್ಯೆ - ಕರ್ಪಟ ವಿದ್ಯೆ(ಕರಪಟ್ಟಿ ರಚಿತ ಶಾಸ್ತ್ರ), ಕಳ್ಳತನವನ್ನು ಪತ್ತೆ ಹಚ್ಚುವುದನ್ನು ಪ್ರತಿಪಾದಿಸುವ ಶಾಸ್ತ್ರ(ಸುರಖಶಾಸ್ತ್ರ) ಹಾಗೂ ಚೋರವಿದ್ಯೆಯ ಪ್ರಕಾರಗಳಾದ ಜೃಂಭಿನಿ(ಪ್ರತ್ಯಕ್ಷ, ಮಾಯ), ಸ್ಥಂಭಿನಿ(ಗತಿ ನಿರೋಧ), ಮೋಹಿನಿ(ಮೂರ್ಛೆ), ಸರ್ಷಪಿ(ಚರ್ಮ ರೋಗ ಉಂಟುಮಾಡುವಿಕೆ), ತಾಳ್ತೋದ್ಘಾಟಿನಿ(ಬೀಗ ತೆಗೆಯುವುದು), ಮಂತ್ರ, ಚೂರ್ಣ, ಯೋಗ, ಘುಟಿಕಾ(ಗುಳಿಗೆ) ಮತ್ತು ಅಂಜನಗಳ ಉಲ್ಲೇಖವಿದೆ.

          ಅಧ್ಯಯನ ವಿಧಾನಕ್ಕೆ ಸಂಬಂಧಿಸಿದಂತಯೂ ಮಾಹಿತಿ ದೊರಕುತ್ತದೆ ಈ ಕೃತಿಯಲ್ಲಿ. ಇಲ್ಲಿ ಹೇಳಿರುವ ಶಿಕ್ಕಣ ವಿಧಾನಗಳೆಂದರೇ ಸ್ವಾಧ್ಯಾಯ(ಮನನಪೂರ್ವಕ ಸ್ವತಃ ವಿಷಯಗಳನ್ನು ಗ್ರಹಿಸುವಿಕೆ, ಅರ್ಥೈಸುವಿಕೆ), ವಾದ(ಪರಪಕ್ಷಖಂಡನಪೂರ್ವಕ ಸ್ವಪಕ್ಷ ಮಂಡನೆ), ಗ್ರಂಥಾರ್ಥ ಸ್ವರೂಪಾಧ್ಯಯನ, ವ್ಯಾಖ್ಯಾನ(ಪದವಿಭಾಗ, ಪದಶಃ ಅರ್ಥ, ಅನ್ವಯ, ತಾತ್ಪರ್ಯ, ವಿಮರ್ಶೆ), ವಾಕ್ಯಾರ್ಥ(ಹೇತು ನಿದಿರ್ಷ್ಟವಾಗಿ ಆಂತರಿಕ, ಬಾಹ್ಯ ಪ್ರಮಾಣ ಪೂರ್ವಕ ತರ್ಕಬದ್ಧವಾಗಿ ವಾಕ್ಯವನ್ನು ಅರ್ಥೈಸುವಿಕೆ), ವೇದಾಭ್ಯಾಸದಲ್ಲಿ ಅನುಸರಿಸಬೇಕಾದ ವಿಧಾನವೆಂದರೇ ಮೊದಲು ಪ್ರಣವ(ಓಂಕಾರ)ದ ಉಚ್ಛಾರಣೆ ಸ್ವರ, ವರ್ಣ, ಬೇಧದಿಂದ ಮೊದಲು ೬೪ ಋಕ್ ಸಂಹತಿಗಳನ್ನು, ಪದಕ್ರಮಬೇಧದಿಂದ ಬ್ರಾಹ್ಮಣ ಆರಣ್ಯಕ ಸೂತ್ರಗಳನ್ನು ಓದುವುದು, ಋಗ್ಯಜುಸ್ಸಾಮಾರ್ಥವಣ ವೇದಗಳನ್ನು ಸ್ವರವರ್ಣಬೇಧದಿಂದ ಮಂತ್ರಸಹಿತ ಪಾಠ, ಪದ ಕ್ರಮ, ಜಟೆ, ಘನ ಬೇಧದಿಂದ ಯಥಾಕ್ರಮದಿಂದ ಉಚ್ಛಾರಣೆ, ಮೀಮಾಂಸ, ನ್ಯಾಯಸೂತ್ರಗಳನ್ನು ಓದಿ ಕ್ರಿಯಾಕಾರಕ ಸಂಬಂಧದಿಂದ ವ್ಯಾಖ್ಯಾನ ಮಾಡುವುದು. ಈ ಕಾರ್ಯಕಾರಣ ವಿಧಾನಗಳನ್ನೇ ನಾಗಶ್ರೀ ಅನುಸರಿಸಿ ತನಗಿರುವ ವಿದ್ಯಾ ಪಾಂಡಿತ್ಯವನ್ನು ಚಂದ್ರವಾಹನನೆಂಬ ಅರಸನ ಮತ್ತು ಸೂರ್ಯಮಿತ್ರ, ಅಗ್ನಿಭೂತಿ ಭಟಾರರ ಸಮುಖದಲ್ಲಿ ಪ್ರಕಟಗೊಳಿಸಿದಳೆಂದು ಸುಕುಮಾರಸ್ವಾಮಿಯ ಕಥೆಯಿಂದ ತಿಳಿದುಬರುತ್ತದೆ ಅಲ್ಲದೇ, ಗುರುದತ್ತ ಭಟ್ಟಾರರ ಕಥೆಯಲ್ಲಿ ಹಸ್ತಿನಾಪುರದ ರಾಜ ವಿಜಯದತ್ತನ ಪುತ್ರನಾದ ಗುರುದತ್ತನು ಚಿಂತಾಗತಿಯಂಬ ವಿದ್ಯಾಧರನು ಆಕಾಶಕ್ಕೇರುವ ವಿದ್ಯಾಸಾಧನೆಯಲ್ಲಿ ತೊಡಗಿ ಮಂತ್ರಪಠನಗೈದಾಗ ಅದರಲ್ಲಿದ್ದ ಹೀನಾಧಿಕಾಕ್ಷರ ದೋಷಗಳನ್ನು ತನ್ನ ಮಂತ್ರವ್ಯಾಕರಣಪರಿಣತಿಯಿಂದ ಕಂಡುಹಿಡಿದು ಮಂತ್ರ ಉಚ್ಛಾರಣೆಯನ್ನು ತಿದ್ದಿ ಸಕ್ರಮಗೊಳಿಸಿ ವಿದ್ಯಾಧರನ ವಿದ್ಯಾಸಾಧನೆಗೆ ನೆರಾವಾದನೆಂದು ಹೇಳಿದೆ. ಈ ಪ್ರಸಂಗದಿಂದ ಮಂತ್ರಸಿದ್ಧಿಯಲ್ಲಿ ಹೀನಾಧಿಕಾಕ್ಷರ ಮಹತ್ವ ಎಷ್ಟೆಂಬುದು ವ್ಯಕ್ತವಾಗುತ್ತದೆ. ಅಂತೆಯೇ ಭದ್ರಬಾಹುಭಟಾರರ ಕಥೆಯಲ್ಲಿ ವಾಚಕದ ತಪ್ಪಿನಿಂದ ಎಂಥ ಪ್ರಮಾದವಾಯಿತೆಂದು ಹೇಳಿದೆ. ಅಶೋಕ ಚಕ್ರವರ್ತಿಯು ತಾನು ಯುದ್ಧ ಕೈಗೊಂಡಾಗ ಆ ಪರದೇಶದಿಂದ ತನ್ನ ಮಂತ್ರಿ, ಪುರೋಹಿತ ಮುಂತಾದ ಅಧಿಕಾರಿಗಳಿಗೆ ಓಲೆಯೊಂದನ್ನು ಬರೆಯಿಸಿ ರಾಜಕುಮಾರನ ಕುನಾಲನ ವಿದ್ಯಾಭ್ಯಾಸಕ್ಕೆ ಏರ್ಪಡಿಸಲು "ಉಪಾಧ್ಯಾಯನಂಗೆ ಕೞಮೆಯುಂ ಕೂೞುಂ ತುಪ್ಪಮುಂ ತೊವ್ವೆಯುಮಮುಣನಲ್ಕೊಟ್ಟು ಕುಮಾರನೋದಿಸುಗೆ" ಎಂದು ಆದೇಶ ನೀಡಿದನು. "ಕುಮಾರಂ ಅಧ್ಯಾಪಯೇತ್" ಎಂಬುದನ್ನು ವಾಚಕನು "ಕುಮಾರಮಂಭಾಪಯೇತ್" ಎಂದು ವಿಪರೀತವಾಗಿ ಓದಿದ್ದರಿಂದ ಆದೇಶದ ಮೇರೆಗೆ ಉಪಾಧ್ಯಾಯನಿಗೆ ಅಕ್ಕಿ, ತುಪ್ಪ ಮುಂತಾದವುಗಳನ್ನು ಕೊಟ್ಟು ಕುಮಾರ ಕುನಾಲನ ಕಣ್ಣುಗಳನ್ನು ಕೀಳಿಸಿ ಕುರುಡನನಾಗಿಸಲಾಗುತ್ತದೆ. ಈ ದೃಷ್ಟಾಂತದಿಂದ ಓಲೆಯ ಪಾಠದ ಯಥಾರ್ಥವಾಚನ ಕಲೆಯ ಪ್ರಾಮುಖ್ಯ ಎಷ್ಟೆಂದು ಸ್ಫಷ್ಟವಾಗುತ್ತದೆ.

          ಶಿಕ್ಷಣದ ಅವಧಿಯ ಬಗ್ಗೆ ’ವಡ್ಡಾರಾಧನೆ’ಯು ನೀಡುವ ಮಾಹಿತಿಯು ಇಂತಿದೆ: ’ವೈದಿಕ ವಿದ್ಯಾಭ್ಯಾಸಕ್ಕೆ ಎಂಟು ವರ್ಷಗಳೆಂದೂ, ದೀಕ್ಷಾಪೂರ್ವಕ ಜೈನಧರ್ಮದ ಆಧ್ಯಾತ್ಮಿಕ ಶಿಕ್ಷಣಕ್ಕೆ ಹನ್ನೆರಡು ವರ್ಷಗಳೆಂದೂ ನಿಗದಿಯಾಗಿತ್ತೆಂದು ತಿಳಿಸುತ್ತದೆ. ಶಿಕ್ಷಣ ಪಡೆದ ವಿದ್ಯಾರ್ಥಿಯು ನಗರಕ್ಕೆ ತೆರಳಿ ಪಂಡಿತ ಸಭೆಯಲ್ಲಿ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಕೀರ್ತಿವಂತನಾಗುವುದರೊಂದಿಗೆ ಶಿಕ್ಷಣದ ಪರಿಸಮಾಪ್ತಿಯು ಆಗುತ್ತದೆ ಎಂಬುದು ಭದ್ರಬಾಹುಭಟಾರರ ಕಥೆಯಲ್ಲಿ ಹೇಳಿದೆ. ಈ ಮೂಲಕ ಗುರುಕುಲದ ಖ್ಯಾತಿಯು ರಾಜನವರೆಗೂ ತಲುಪಿ ರಾಜನು ಸ್ವತಃ ಗುರುಕುಲದ ನಿರ್ವಹಣೆಗೆ ಮುಂದಾಗುತ್ತಾನೆ. ಹೀಗಾಗಿ ಶಿಕ್ಷಣ ವ್ಯವಸ್ಥೆ ಪ್ರಗತಿಯನ್ನು ಹೊಂದುತ್ತದೆ.

          ಈಗ ಮೇಲೆ ಹೇಳಿದಾದ ’ವಡ್ಡಾರಾಧನೆ’ಯಲ್ಲಿನ ಶಿಕ್ಷಣ ವ್ಯವಸ್ಥೆ ಚಿತ್ರಣವು ಆಧುನಿಕ ಕಾಲದ ಶಿಕ್ಷಣ ವ್ಯವಸ್ಥೆಗೆ ಎಷ್ಟರ ಮಟ್ಟಿಗೆ ಅನ್ವಯಿಸಬಹುದೆಂದು ತುಲಾನಾತ್ಮಕವಾಗಿ ಪರಿಶೀಲಿಸಿ ನೋಡೋಣ. ಶಿಕ್ಷಣವು ವಿದ್ಯಾ ಎಂದರೆ ಜ್ಞಾನ ಹಾಗೂ ದರ್ಶನವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯೇ ಆಗಿದೆ. ಶಿಕ್ಷಣದ ಮಹತ್ವ ಸಾಮಾಜಿಕ ಜೀವನದ ಸಂಪನ್ನತೆ ಮತ್ತು ಸಂಸ್ಕೃತಿಯ ಪ್ರಗತಿಗಾಗಿ ಎಂದು ಪರಿಗಣಿಸಲಾಗಿತ್ತು. ಶಿಕ್ಷಣವು ಸಾಂಸ್ಕೃತಿಯ ಪರಂಪರೆಗಳನ್ನು ನಿರ್ಮಿಸುವುದರಲ್ಲಿ ಹಾಗೂ ವಿಸ್ತರಣೆಯಲ್ಲಿ ನೆರವು ನೀಡುತ್ತದೆ ಹಾಗೂ ವಿದ್ಯಾರ್ಥಿಗೆ ಸಮಾಜದ ಕಲ್ಯಾಣದಲ್ಲಿ ಭಾಗವಹಿಸಲು, ತನ್ನ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಲು ಪ್ರೇರೇಪಿಸುತ್ತದೆ. ವ್ಯಕ್ತಿತ್ವದ ಸಂಪೂರ್ಣ ವಿಕಾಸ, ಸಮಾಜದ ಸಂರಕ್ಷಣೆ, ವ್ಯಕ್ತಿಯ ಸಾಮಾಜಕೀಕರಣ, ಮಾನವ ಸಭ್ಯತೆಯ ನಿರ್ಮಾಣ, ಜ್ಞಾನ ಪ್ರಸಾರ, ಆ ಮೂಲಕ ಚರಿತ್ರೆ ನಿರ್ಮಾಣ - ಇವು ಶಿಕ್ಷಣದ ಪ್ರಮುಖ ಉದ್ದೇಶಗಳು. ಈ ಶೈಕ್ಷಣಿಕ ಉದ್ದೇಶಗಳಿಗನುಗುಣವಾಗಿ ಪಠ್ಯಕ್ರಮ ರೂಪಿತವಾಗುತ್ತದೆ. ಪಠ್ಯಕ್ರಮದಲ್ಲಿನ ವಿಷಯಗಳನ್ನು ಕಲಿಸುವುದರಿಂದಲೇ ಆಯಾ ಕಾಲದ ಶಿಕ್ಷಣದ ದೇಯೋದ್ಧೇಶಗಳು, ಜೀವನ ದರ್ಶನದ ಸಾಕ್ಷಾತ್ಕಾರವು ಈಡೇರುತ್ತದೆ.

          ಈ ಹಿನ್ನಲೆಯಲ್ಲಿ ’ವಡ್ಡಾರಾಧನೆ’ಯಲ್ಲಿ ಉಲ್ಲೇಖಿತವಾಗಿರುವ ಪಠ್ಯಕ್ರಮಸ್ವರೂಪವನ್ನು ವೇಚಿಸಿದಾಗ ವೇದಗಳು, ವೇದಾಂಗಗಳು, ಧರ್ಮಶಾಸ್ತ್ರಗಳು ಅಥವಾ ಸ್ಮೃತಿಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜ್ಷಾನದ ನೆಲೆಕಟ್ಟಿನಲ್ಲಿ ವ್ಯಕ್ತಿಯ ಚಾರಿತ್ರ್ಯವನ್ನು ನಿರ್ಮಿಸಿ ಆ ಮೂಲಕ ಮಾನವನ ಪರಮೋಚ್ಛ ಗುರಿಯಾದ ಮೋಕ್ಷದೆಡೆಗೆ ಕರೆದೊಯ್ಯಲು ಸಹಕಾರಿಯಾಗಿರುತ್ತಿದ್ದವು. ಮೀಮಾಂಸಾ - ಕ್ರಿಯಾಶಕ್ತಿಯನ್ನೂ, ನ್ಯಾಯವಿಸ್ತರ - ವಾಕ್ ಶಕ್ತಿಯನ್ನೂ ಪ್ರಮಾಣವು - ಸೂಕ್ಮದರ್ಶಿತ್ವವನ್ನೂ, ಛಂದಸ್ಸು, ಅಲಂಕಾರ, ಕಾವ್ಯ, ನಾಟಕ - ಭಾವನಾತ್ಮಕತೆಯನ್ನೂ ಭಾವಾಭಿವ್ಯಕ್ತಿಯನ್ನು ವ್ಯಕ್ತಿಯಲ್ಲಿ ಪ್ರಚೋದಿಸುತ್ತದ್ದವು. ಪ್ರಾಣಿ ಹಾಗೂ ಮಾನವ ವೈದ್ಯಕೀಯ ಶಾಸ್ತ್ರಗಳುಸಾಮುದ್ರಿಕ, ಜ್ಯೋತಿಷ್ಯ ಹಾಗೂ ಮಂತ್ರವಿದ್ಯೆಗಳು ವ್ಯಕ್ತಿಗಳ ಜೀವನೋಪಾರ್ಜನೆಗೆ ವೃತ್ತಿಶೀಕ್ಷಣ ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದ್ದವು. ’ವಡ್ಡಾರಾಧನೆ’ಯಲ್ಲಿ ಬರುವ ವಿದ್ಯುಚ್ಛೋರನ ಕಥೆಯಲ್ಲಿ ಚೋರ ವಿದ್ಯಾಪ್ರಕಾರಗಳನ್ನು ಹೇಳಿದೆ. ಇದರಿಂದ ಕಳ್ಳತನ ನಡೆದ ಬಗೆಯನ್ನು ತಿಳಿದು, ಕಳ್ಳನನ್ನು ಹಿಡಿಯಲೂ ಹಾಗೂ ಮುಂದೆ ಆ ರೀತಿ ಕಳ್ಳತನ ನಡೆಯದಂತೆ ಏರ್ಪಡಿಸಲು ನೆರವಾಗುತ್ತದೆ. ಇದರಿಂದ ಸ್ಫಷ್ಟವಾಗುವ ಅಂಶವೆಂದರೇ ಚೋರತನವು ಅಂದು ಅತ್ಯಂತ ಹೆಚ್ಚಿನ ಪ್ರಮುಖ್ಯತೆ ಪಡೆದ ಅಪರಾಧವೆಂದು ಪರಿಗಣಿಸಲ್ಪಟ್ಟು ಅದನ್ನು ಪತ್ತೆ ಹಚ್ಚಿ ವಿವಾರಿಸುವ ನಿಟ್ಟಿನಲ್ಲಿ ಕೆಲವು ಗ್ರಂಥಗಳನ್ನೂ ರಚಿಸಿದ್ದರು ಎಂದು. ಅಂತಹ ಗ್ರಂಥಗಳಾದ ಕರ್ಪಟಶಾಸ್ತ್ರ ಮತ್ತು ಸುರಖಶಾಸ್ತ್ರಗಳಲ್ಲಿ ಕಳ್ಳನನ್ನು ವಿಧಾನಗಳನ್ನೂ, ಕಳ್ಳನನ್ನು ಯಾವ ರೀತಿಯ ಶಿಕ್ಷೆಗೆ ಒಳಪಡಿಸಬೇಕೆಂಬ ನಿಯಮಗಳನ್ನೂ ಹೇಳಲಾಗಿದ್ದು ಅವುಗಳನ್ನು ಇಂದೂ ಕಳ್ಳತನವನ್ನು ಪತ್ತೆ ಹಚ್ಚುವ, ಕಳ್ಳತನವನ್ನು ತಡೆಯುವ, ಕಳ್ಳತನಕ್ಕೆ ಸಂಬಂಧಿಸಿದ ಅಪರಾಧ ಕಾಯ್ದೆಗಳನ್ನು ರಚಿಸುವ ಸಂದರ್ಭದಲ್ಲಿ ಈ ಶಾಸ್ತ್ರಗಳಲ್ಲಿ ಹೇಳಿದ ಕೆಲವು ಅಂಶಗಳನ್ನು ಸೇರಿಸಲು ಯೋಗ್ಯವಾಗಿದೆ ಎಂದು ಈ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆಯಿದೆ.

          ’ವಡ್ಡಾರಾಧನೆ’ ಕೃತಿಯಲ್ಲಿ ಹೇಳಿರುವ ಶೈಕ್ಷಣಿಕ ವಿಧಾನಗಳಾದ ಸ್ವಾಧ್ಯಾಯ, ವಾದ, ವ್ಯಾಖ್ಯಾನ ಹಾಗೂ ವಾಕ್ಯಾರ್ಥಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೂ ಮಹತ್ವದ ಸ್ಥಾನ ಪಡೆಯಬಹುದಾಗಿದೆ ಮತ್ತು ಪಡೆಯಬೇಕಾಗಿದೆ. ಇಂದು ಪ್ರಚಲಿತವಾಗಿರುವ ಶಿಕ್ಷಣ ವಿಧಾನಗಳಾದ ಕಥನ, ವಿವರಣೆ, ವರ್ಣನೆ, ಚರ್ಚೆ, ಪ್ರಶ್ನೋತ್ತರ, ನಿರೂಪಣೆ ಮುಂತಾದವುಗಳು ಈ ಮೇಲಿನ ಶಿಕ್ಷಣ ವಿಧಾನಗಳಲ್ಲಿ ಅಡಕವಾಗಿವೆಯಾದರೂ ಸ್ವಾಧ್ಯಾಯ ಹಾಗೂ ಮನನ ವಿಧಾನಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಅಗತ್ಯವಿದೆ.

ಆಧಾರ : ’ವಡ್ಡಾರಾಧನೆ’, ಸಂ: ಡಿ.ಎಲ್.ನಾಗಸಿಂಹಾಚಾರ್

----------------------------------------------------------------------------



No comments:

Post a Comment