Tuesday, November 19, 2013

ಡಾ.ಎಂ.ಎಂ. ಕಲಬುರ್ಗಿ

 
ಎಚ್‌.ಶೇಷಗಿರಿರಾವ್‌













ಬಹುಮುಖಿ ವಿದ್ವಾಂಸ  ಡಾ. ಎಂ.ಎಂ. ಕಲಬುರ್ಗಿ
 ಕರ್ನಾಟಕ ಏಕೀಕರಣವಾಗಿ ಅರವತ್ತು ವರ್ಷದ ಮೇಲೆ ಆದರೂ ಹೈದ್ರಾಬಾದ್‌ ಕರ್ನಾಟಕ, ಮುಂಬಯಿ ಕರ್ನಾಟಕ ಮತ್ತು ಹಳೆಮೈಸೂರು ವಿಭಾಗಗಳ ಅಬಿವೃದ್ಧಿಯಲ್ಲಿ ಅಸಮಾನತೆಯ ದೂರು ಇದ್ದೇಇದೆ. ಡಾ. ಡಿ.ಎಂ.ನಂಜುಂಡಪ್ಪ ವರದಿಯ ಪ್ರಕಾರ ಕೈಗಾರಿಕೆ ನೀರಾವರಿ, ತಲಾಆದಾಯದಲ್ಲಿ ಹಳೆಯಮೈಸೂರು ವಿಭಾಗವು ಮುನ್ನೆಡೆ ಸಾಧಿಸಿದೆ. ಉತ್ತರ ಕರ್ನಾಟಕ ಅನೇಕ ವಿಷಯಗಳಲ್ಲಿ ಹಿಂದುಳಿದಿದೆ. ಆದರೆ ಮೊದಲಿನಿಂದಲೂ   ಉತ್ತರಕಕರ್ನಾಟಕವು  ಸಾಹಿತಿಕ ಮತ್ತು ಸಾಂಸ್ಕೃತಿಕವಾಗಿ ಎಂದೂ ಹಿಂದೆ ಬಿದ್ದಿಲ್ಲ ಅಂದು ಹಳೆ ಮೈಸೂರು ಭಾಗದಲ್ಲಿ ಕುವೆಂಪು ಇದ್ದರೆ ಉತ್ತರಕರ್ನಾಟಕದಲ್ಲಿ ದ.ರಾ.ಬೇಂದ್ರೆ. ಅಲ್ಲಿ ಮೈಸೂರು ಸಾಂಸ್ಕೃತಿಕ ರಾಜಧಾನಿಯಾದರೆ ಈ ಭಾಗದಲ್ಲಿ ಧಾರವಾಡಕ್ಕೆ ಆ ಹೆಸರು ಮೀಸಲು ಎರಡೂ ಕವಿಗಳ,ಸಾಹಿತಿಗಳ ಸಂಗಿತಗಾರ ನೆಲೆಬೀಡು  ಧಾರವಾಡದಲ್ಲಿ ನಿಂತು ಎಲ್ಲಿ ಕಲ್ಲು ಎಸೆದರೂ ಯಾರೋ ಒಬ್ಬ ಸಾಹಿತಿಯ ಮನೆಯ ಮೇಲೆ ಬೀಳುವುದು ಎನ್ನುವುದು ಉತ್ಪ್ರೇಕ್ಷೆಯ ಮಾತು ಅಲ್ಲ. ಅಷ್ಟೇ ಏಕೆ  ರಾಜ್ಯದಲ್ಲಿ ಪ್ರತಿಷ್ಠಿತ  ಜ್ಞಾನಪೀಠಪ್ರಶಸ್ತಿ ಪುರಸ್ಕತರಲ್ಲಿ ಸಿಂಹಪಾಲು ಉತ್ತರ ಕರ್ನಾಟಕದ ಸಾಹಿತಿಗಳಿಗೆ. ಇಂದೂ ಕೂಡಾ ನಮ್ಮ ನಾಡಿನ   ಪ್ರಮುಖ ಸಂಶೋಧಕರು ಎಂದರೆ ನೆನಪಿಗೆ ಬರುವುದು ಇಬ್ಬರು . ಹಳೆ ಮೈಸೂರು ಭಾಗದಲ್ಲಿ ಡಾ.ಎಂ. ಚಿದಾನಂದ ಮೂರ್ತಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಡಾ.ಎಂ. ಎಂ. ಕಲಬುರ್ಗಿ.

ಡಾ.ಕಲಬುರ್ಗಿಯವರು, ಕರ್ನಾಟಕದ ಬಹುಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು ಅವರದು ಬಹುಮುಖಿ ವಿದ್ವತ್‌. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ, ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಹರಿವಿದೆ.. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲವನ್ನು ಪ್ರಕಟಿಸಿದ್ದಾರೆ.
ಡಾ.ಎಂ.ಎಂ.ಕಲಬುರ್ಗಿಯವರ ಪೂರ್ಣ ಹೆಸರು ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ. ಅವರು ಹುಟ್ಟಿದ್ದು 28-11-1938 . ಬಿಜಾಪುರ ಜಿಲ್ಲೆಯ ಸಿಂಧಗಿತಾಲೂಕಿನ ಯರಗಲ್ಲ ಅವರ ಜನ್ಮ ಸ್ಥಳ.  ತಂದೆ ಮಡಿವಾಳಪ್ಪ. ತಾಯಿ ಗುರಮ್ಮ. ಅವರದು ಅವಿಭಕ್ತ ಕುಟುಂಬ. ಅವರ  ಪ್ರಾಥಮಿಕ ಶಿಕ್ಷಣ ಯರಗಲ್ಲಿನಲ್ಲಿ. ಮಾಧ್ಯಮಿಕ ಶಿಕ್ಷಣ ಸಿಂಧಗಿಯಲ್ಲಿ ಆಯಿತು ಪದವಿಪೂರ್ವ ಶಿಕ್ಷಣ ಬಿಜಾಪುರದಲ್ಲಿ.. ಧಾರವಾಡದಲ್ಲಿ ಕಾಲೇಜು ಕಲಿಕೆ. ೧೯೬೦ ರಲ್ಲಿ ಕರ್ನಾಟಕ ಕಾಲೇಜಿನಿಂದ ಬಂಗಾರದ ಪದಕ ಸಮೇತ ಪದವಿ ಪಡೆದರು.೧೯೬೨ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಪಡೆದರು. ತಕ್ಷಣವೇ ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆ 1962ರಲ್ಲಿ ದೊರೆಯಿತು. 1966 ರಲ್ಲಿಕನ್ನಡ ಅಧ್ಯಯನ ಪೀಠದಲ್ಲಿ ಆಧ್ಯಾಪಕರಾಗಿ ನೇಮಕವಾಯಿತು.ಅವರಿಗೆ 1968 ರಲ್ಲಿ” ಕವಿರಾಜ ಮಾರ್ಗ ಪರಿಸರದ ಕನ್ನಡಸಾಹಿತ್ಯ”  ಮಹಾಪ್ರಬಂಧಕ್ಕೆ  ಪಿಎಚ್‌,ಡಿ. ದೊರೆಯಿತು. ಪ್ರಾಧ್ಯಾಪಕರಾಗಿ ಹತ್ತೊಂಬತ್ತುವರ್ಷ ಕಾರ್ಯನಿರ್ವಹಿಸಿದ ಅವರು ಅನೇಕ ಆಡಳಿತಾತ್ಮಕ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಆ ಅವಧಿಯಲ್ಲಿ ಅನೇಕ ಸಂಶೋಧನೆಗೆ ಕಾರಣರಾದರು ಜೊತೆಗೆ ಅನೇಕರಿಗೆ ಮಾರ್ಗದರ್ಶನ ನೀಡಿದರು. ನಿವೃತ್ತಿಯ ನಂತರ ಮೂರುವರ್ಷ ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ ಮುನ್ನೆಡಸಿದರು. ಈಗಲೂ ಸಕ್ರಿಯವಾಗಿ ಸಂಶೋಧನಾಕಾರ್ಯ ಮಾಡುತ್ತಿರುವರು. ಕರ್ನಾಟಕ ಸರ್ಕಾರವು ಪ್ರಕಟಿಸಿದ “ವಚನಸಾಹಿತ್ಯ ಸಂಪುಟ”  ಮಾಲೆಗೆ ಪ್ರಧಾನ ಸಂಪಾದಕರಾಗಿ ಹದಿನೈದು ಸಂಪುಟಗಳನ್ನು ಹೊರ ತಂದರು ಹಾಗೂ “ ಸಮಗ್ರ ಕೀರ್ತನೆ ಸಂಪುಟಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.
ಶಿಷ್ಟ ಸಾಹಿತ್ಯಕ್ಕೆ ಜನಪದ ಶಿಸ್ತನ್ನು  ಮತ್ತು ಜನಪದ ಸಾಹಿತ್ಯಕ್ಕೆ ಶಿಷ್ಟ ಸಾಹಿತ್ಯದ ಶಿಸ್ತನ್ನು ಅಳವಡಿಸಿ ಆರ್ಥವನ್ನು ವಿಸ್ತರಿಸಿರುವರು.ಬಹುಶಿಸ್ತೀಯ ಅಧ್ಯಯನದಿಂದ ಸಮಗ್ರ ಸಂಶೋಧನ ಮಾಡಿರುವರು.ಅವರ ಪ್ರಕಾರ ಸಂಶೋಧನೆ ಮತ್ತು ವಿಮರ್ಶೆ ವಿಭಿನ್ನವಲ್ಲ ಎರಡರ ಗುರಿ ಸತ್ಯಶೋಧನೆ. ಅವರ ಸಂಶೋಧನೆಯಲ್ಲಿ ಚರಿತ್ರೆ,ಸಮಾಜ ಮತ್ತು ಕಲೆ ಸಂಗಮಿಸುತ್ತವೆ. ಸಾಂಸ್ಕೃತಿಕ ಅಧ್ಯಯನದೊಂದಿಗೆ ಗ್ರಂಥ ಸಂಪಾದನಾಕ್ಷೇತ್ರ, ಭಾಷಾಶಾಸ್ತ್ರ, ಜಾನಪದಕ್ಷೇತ್ರ ಮತ್ತು ನಾಮಶಾಸ್ತ್ರಗಳಲ್ಲಿ ದುಡಿಯುತ್ತಾ ಅವುಗಳನ್ನು ದುಡಿಸಿಕೊಂಡು ಉನ್ನತ ಪರಂಪರೆ ಕಾಪಿಟ್ಟಿರುವುರು.
 ಇವರ ಕನ್ನಡ ಗ್ರಂಥಸಂಪಾದನಶಾಸ್ತ್ರ “ಡಿ.ಎಲ್ಎನ್‌ ರವರ ಕೃತಿಯನಂತರ ಬಂದ ಅಪರೂಪದ ಕೃತಿ.  ಆರು ಕಾಂಡಗಳನ್ನು ಹೊಂದಿದ್ದು. ಇತಿಹಾಸ,ಲೇಖನ ಕಾಂಡ,  ಸ್ಖಾಲಿತ್ಯ ಕಾಂಡ, ಹಸ್ತಪ್ರತಿಕಾಂಡ ,ಸಂಪಾದನ ಕಾಂಡ, ಮತ್ತು  ಶೇಷ ಕಾಂಡಗಳಲ್ಲಿ ಸಮಗ್ರ ನಿರೂಪಣೆ ಇದೆ.
ಬರಿ ಬರೆದುದು ಮಾತ್ರವಲ್ಲ ಅದಕ್ಕನುಗುಣವಾಗಿ ಕನ್ನಡ ಕೃತಿಗಳ ಶಾಸ್ತ್ರೀಯ ಸಂಪಾದನೆ ಮಾಡಿರುವರು
ಸಂಶೋಧನ ಶಾಸ್ತ್ರದಲ್ಲಿ ಅವರ ಅಪಾರ ಅನುಭವದ ರಸಗಟ್ಟಿಯಾಗಿದೆ. ನಿಯಮ-ನಿದರ್ಶನ ಎರಡೂ ಒಂದಾಗಿ ಅವರಲ್ಲಿ ಮೇಳೈಸಿವೆ.
 ಹಸ್ತಪ್ರತಿಗಳ ಸಂಗ್ರಹಣದಲ್ಲಿ ಆಕರಣ, ಸೂಚೀಕರಣ, ವರ್ಗೀಕರಣ, ಸಂಪಾದನ, ಪರಿಚಲನ, ಅಧ್ಯಯನ ಸಂರಕ್ಷಣ ಗಳಲ್ಲದೆ ಗ್ರಂಥಾಲಯ, ಯಂತ್ರೋಪಕರಣ,ಪ್ರದರ್ಶನ ಸಮಾಲೋಚನ,ಸಭಗೃಹ ಮತ್ತು ವಿಶ್ರಾಂತಿಗಳನ್ನು ಸೇರಿರುವರು. ಇದು ಇಂದಿನ ಆಧುನಿಕ ಯುಗದಲ್ಲಿ ಕ್ರಮಗಳೇ ಆಗಿವೆ.
ಕನ್ನಡ ನಾಮವಿಜ್ಞಾನ-ಭಾಷಾ ಸ್ತರದಲ್ಲಿ ಮೊದಲಾಗಿ ಚಾರಿತ್ರಿಕ, ಭೌಗೋಲಿಕ, ಸಾಂಸ್ಕೃತಿಕ ಸ್ಥರಗಳ ಸಂಯೋಜನೆ ಹೊಂದಿದೆ.ಅದರಲ್ಲಿ ಒಂದು ಜನಾಂಗದ ಭಾಷಿಕ, ರಾಜಕೀಯ, ಸಾಮಾಜಿಕ ,ವ್ಯಾಕರಣ,ಧಾರ್ಮಿಕ ಸ್ವರೂಪ ಅರ್ಥೈಸುವು

ಇವರ ಕೃತಿಯಲ್ಲಿ ಉತ್ತರಕರ್ನಾಟಕದ ಅಡ್ಡಹೆಸರುಗಳು ಹೇಗೆ ಗ್ರಾಮ, ಕುಟುಂಬ,ವಂಶ,ಜಾತಿವೃತ್ತಿ ,ಪ್ರತಿನಿಧಿಯಾಗಿ ಮಾನಸಿಕವಾಗಿ  ಬೆಸೆದು ಸಾಂಘೀಕ ನಿಷ್ಠೆಯನ್ನು ಬೆಳಸುತ್ತವೆ  ಎಂಬುದರ ವಿಶ್ಲೇಷಣೆ ಇದೆ.ಹೀಗೆ ಅವರು ಶೋಧಕ್ಕೆ ಸಾಮಾಜಿಕ ಮುಖ ಜೊಡಿಸಿರುವರು.      
ಅವರ ಶಾಸ್ತ್ರ ಸಂಶೋಧನೆಯಲ್ಲಿನ ವ್ಯಾಪ್ತಿ ಮತ್ತು ವೈವಿಧ್ಯ  ಬೆರಗು ಮೂಡಿಸುವುದು.  ಅವರ ಸಂಶೋಧನೆ ಮತ್ತು ವಿಮರ್ಶೆಗಳು ಶಾಸ್ತ್ರದ ಭಾರದಿಂದ ಜಡವಾಗದೇ, ತಮ್ಮ ರಸವಂತಿಕೆಯಿಂದ  ಆತ್ಮೀಯತೆ ಮೂಡಿಸುವುದು
ಆವರ ಸಂಶೋಧನೆಯ ಮೂರು ಮೂಲಸೆಲೆಗಳು ಶಾಸನ, ಹಳಗನ್ನಡ ಮತ್ತು ವಚನಸಾಹಿತ್ಯ.
ಡಾ| ಎಂ.ಎಂ.ಕಲಬುರ್ಗಿಯವರು ಸೃಜನಶೀಲ ಹಾಗು ಸಂಶೋಧನೆ ಈ ಎರಡೂ ಪ್ರಕಾರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಈ ಅವರು ಶಾಸನ ಸಂಬಂಧಿವಾದ . ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2,  ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು,. ಶಾಸನ ಸಂಪದ,. ಧಾರವಾಡ ಜಿಲ್ಲೆಯ ಶಾಸನಸೂಚಿ ಮೊದಲಾದ  ೧೪ ಕೃತಿ ರಚಿಸಿರುವರು
 ಹಳೆಗನ್ನಡದಲ್ಲಿ  ಮಾರ್ಗ (೧,,,೪), ಕನ್ನಡ ಹಸ್ತಪ್ರತಿ ಶಾಸ್ತ್ರಕನ್ನಡ ಗ್ರಂಥ ಸಂಪಾದನ ಶಾಸ್ತ್ರ, ಕನ್ನಡ ಸಂಶೋಧನ ಶಾಸ್ತ್ರ, ಕನ್ನಡ ನಾಮವಿಜ್ಞಾನ,ಧಾರವಾಡ ಜಿಲ್ಲೆಯ ಶಾಸನಸೂಚಿ, ಮಹಾರಾಷ್ಟ್ರದ ಕನ್ನಡ ಶಾಸನಗಳುಶಾಸನಗಳಲ್ಲಿ ಶಿವಶರಣರು, ಶಬ್ದಮಣಿದರ್ಪಣ ಸಂಗ್ರಹಕನ್ನಡ ಕೈಫಿಯತ್ತುಗಳುಕೆಳದಿ ಸಂಸ್ಥಾನ ಸಮಗ್ರ ಅಧ್ಯಯನಸ್ವಾದಿ ಅರಸು ಮನೆತನ,, ಸಾರಂಗಶ್ರೀ ಅವರ ಕೃತಿಗಳು.
ಈ ಶತಮಾನದ ಶ್ರೇಷ್ಠಚಿಂತಕರಲ್ಲೊಬ್ಬರು ಎಂದು ಹೆಸರುವಾಸಿಯಾದ ಕಲಬುರ್ಗಿಯವರು ಸದಾ ಓದು,ಬರಹ,ಚಿಂತನೆ,ಪ್ರಕಟಣೆ,ಮಾರ್ಗದರ್ಶನ ಮತ್ತು ಇತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ. ಸಾಹಿತ್ಯ, ಶಾಸನ, ಜಾನಪದ, ನಾಮವಿಜ್ಞಾನ, ಗ್ರಂಥ ಸಂಪಾದನೆ, ಹಸ್ತಪ್ರತಿಶಾಸ್ತ್ರ, ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯನ್ನು ಕೊಟ್ಟಿದ್ದಾರೆ. ಜೀವನ ಓದಿ ಎಸೆಯುವ ವರ್ತಮಾನಪತ್ರಿಕೆಯಲ್ಲ ಅನುದಿನವೂ ಗಮನ ಸೆಳೆವ ಮಹಾಕಾವ್ಯಎಂಬುದು ಅವರ ಗಾಢ  ನಂಬಿಕೆ
ಜನ ಮೆಚ್ಚಿ ನಡೆಕೊಂಡರೇನುಂಟು ಲೋಕದಿ ಮನ ಮೆಚ್ಚಿ ನಡಕೊಂಬುದೆ  ಚಂದ ಎಂಬುದು ಅವರ ಧ್ಯೇಯವಾಕ್ಯ
ಪಾಶ್ಚಾತ್‌ ಚೌಕಟ್ಟಿಗೆ ಸಿಕ್ಕ ಜಾನಪದವನ್ನು ಬಂದನದಿಂದ ಬಿಡಿಸಿ ,ದೇಶೀಯ ಹಿನ್ನೆಲೆಯಲ್ಲಿ ಪರಿಶೀಲಿಸಿದ ಸಂಶೋಧಕರು ಕಲಬುರ್ಗಿ. ವರ್ಗ,ವರ್ಣ, ಲಿಂಗ ಬೇಧವಿಲ್ಲದೆ , ವ್ಯಕ್ತಿ ಕೇಂದ್ರಿತವಾಗದೇ ಸಮೂಹದ ದನಿಯಾಗಿ, ಕವಿ ಮತ್ತು ಕೃತಿಗಳ ನಡುವೆ ಕಂದರ ಬಹು ಕಡಿಮೆ ಇರುವುದೇ   ಅಲಿಖಿತ  ಸಾಮಗ್ರಿಯೇ ಹೆಚ್ಚಾಗಿರುವದು., ಭಾಷೆಯಷ್ಟೇ ಪ್ರಾಚೀನವಾಗಿರುವುದೇ    ಜನಪದ ಸಾಹಿತ್ಯ  ಎಂದು ಪ್ರತಿಪಾದನೆ  ಸಮಗ್ರ ಮತ್ತು ಸರ್ವಗ್ರಾಹ್ಯ.   
ಸಂಪಾದಿತ ಕೃತಿಗಳು ಗ್ರಂಥರೂಪದಲ್ಲಿ ಮತ್ತು ಲೇಖನ ರೂಪದಲ್ಲಿ ಇವೆ. ಗ್ರಂಥ ರೂಪದಲ್ಲಿ ವಚನ, ಶಿಷ್ಟ, ದಾಖಲು ಜನಪದ ಮತ್ತು ಇತರೆ ಎಂದು ಐದು ವಿಭಾಗದಲ್ಲಿ ಕೆಲಸವಾಗಿದೆ ಶಿಷ್ಟದಲ್ಲಿ ಕಾವ್ಯ ಮತ್ತು ಶಾಸ್ತ್ರ ಎಂಬ ಗುಂಪಿವೆ. ಕಾವ್ಯದಲ್ಲೂ ಶುದ್ಧ ಮತ್ತು ಐತಿಹಾಸಿಕ ಎಂದು  ವಿಭಜನೆ ಮಾಡಬಹುದು. ದಾಖಲುಸಾಹಿತ್ಯದ ಅಡಿಯಲ್ಲಿ ಶಾಸನ ಹಾಗೂ   ಐದು ವಿಭಾಗಗಳಿವೆ

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೀಖನಗಳನ್ನೂ ಪ್ರಕಟಿಸಿದ್ದಾರೆ. ಈ ಬರವಣಿಗೆಯ ವ್ಯಾಪ್ತಿ ಮತ್ತು ಆಳಗಳು ಗಮನೀಯವಾಗಿವೆ. ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತನ್ನ ಸಂಶೋಧನೆಯ ಫಲಿತಗಳ ನಿಖರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವಕ್ಕೆ ಪಾತ್ರರಾದ ಅವರು ಹಸ್ತಪ್ರತಿ ಶೋಧಕ್ಕೆಂದು ಲಂಡನ್ ಆಕ್ಸಫರ್ಡ್ ಮತ್ತು ಕೆಂಬ್ರಿಜ್‌ಗಳಿಗೆ ಪ್ರವಾಸ ಮಾಡಿರುವರು.
.ಕರ್ನಾಟಕ ವಿಶ್ವ ವಿದ್ಯಾಲುದಲ್ಲಿ  ಜಾನಪದಸಮ್ಮೇಲನವನ್ನು ರೂಪಿಸಿದವರಲ್ಲಿ ಒಬ್ಬರು. ಹಂಪೆಯ ಕನ್ನಡ ವಿಶ್ವ ವಿದ್ಯಾಲಯದಲ್ಲಿ ದೇಸಿ ಸಮ್ಮೇಳನವನ್ನು ಸಂಘಟಿಸಿದವರು ಡಾ| ಕಲಬುರ್ಗಿ . ಗದುಗಿನ ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ  ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ ,ಬೆಳಗಾವಿಯ ನಾಗನೂರು ಮಠದ ವೀರಶೈವ ಅಧ್ಯಯನ ಅಕಾಡೆಮಿಯ ಹಾಗು ಶಿವಮೊಗ್ಗೆಯ ಆನಂದಪುರ ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಡಾ| ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Place name Conference ಗೆ  ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಧರ್ಮಸ್ಥಳದ ಸಾಹಿತ್ಯಸಮ್ಮೇಳನದ ಅಧ್ಯಕ್ಷ್ಯತೆ, ಮೂಡಬಿದಿರೆಯ ನಡೆದ "ಆಳ್ವಾಸ್ ನುಡಿಸಿರಿ 2011"  ಸರ್ವಾಧ್ಯಕ್ಷರಾಗಿದ್ದರು. ಕರ್ನಾಟಕ ಇತಿಹಾಸ ಅಕಾದಮಿಯ ವಾರ್ಷಿಕ ಸಮ್ಮೇಳನದ ಸರ್ವಾಧ್ಯಕ್ಷ ಗೌರವವೂ ಸಂದಿದೆ. ಇವರಿಗೆ ಬಂದಿರುವ ಪ್ರಶಸ್ತಿಗಳು ಹಲವು. ಅವರ ಏಳು ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ.  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ'ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ಪ್ರಶಸ್ತಿ', 'ವರ್ಧಮಾನ ಪ್ರಶಸ್ತಿ', ವಿಶ್ವಮಾನವ ಪ್ರಶಸ್ತಿ',2006ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು  ನೃಪತುಂಗಪ್ರಶಸ್ತಿ ಪಡೆದಿರುವರು..
      ಡಾ.ಕಲಬುರ್ಗಿಯವರು ಖ್ಯಾತ ವಿದ್ವಾಂಸರು ಮತ್ತು ಸಂಶೋಧಕರು ಮಾತ್ರವಲ್ಲ. ಕನ್ನಡ ನೆಲ, ಜಲ, ನುಡಿ ಸಾಹಿತ್ಯಗಳಿಗೆ   ಕುತ್ತು ಬಂದಾಗ ಬೀದಿಗೆ ಇಳಿದು ಚಳುವಳಿ ಮಾಡಿರುವರು. ಗೋಕಾಕ್‌ ಚಳುವಳಿಯಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ಚಳುವಳಿಯ ಕಿಚ್ಚು ಹೆಚ್ಚಿಸಿದ್ದಾರೆ.
ಅವರದು ನಿರ್ಭೀತ ನಿಲವು. ಸತ್ಯಕ್ಕೆ ಅಪಚಾರವಾದರೆ ಸಹಿಸರು. ಸಂಶೋಧನೆಯಿಂದ ಜನಪ್ರಿಯವಾಗ ಬೇಕೆಂಬ ಹಂಬಲದವರಲ್ಲ. ಜನವಿರೋದದ ನಡುವೆಯೂ ಸತ್ಯ ನಿಷ್ಠರಾಗಿ ಕಷ್ಟ ನಷ್ಟಗಳನ್ನು ಎದುರಿಸಿ ದಿಟ್ಟ ನಿಲವು ತಳೆದವರು.



ಕನ್ನಡ  ಸಾಹಿತ್ಯ  ಪರಂಪರೆ ಕಾಲದ  ಅಗತ್ಯಗಳನ್ನು  ಪೂರೈಸಿಕೊಂಡು  ಹೇಗೆ  ತನ್ನತನವನ್ನು  ಮೆರೆದಿದೆ.  ಎಂಬುದರ  ಪೂರ್ಣ ಚಿತ್ರಣವನ್ನು  ಬಲ್ಲವರಾಗಿದ್ದಾರೆ.  ಶಾಸನಶಾಸ್ತ್ತ್ರ, ಜಾನಪದ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ತ್ರ, ವ್ಯಾಕರಣ, ಛಂದಸ್ಸು  ನಾಮ ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳ ಜೊತೆಗೆ ಒಡನಾಟವನ್ನು  ಇಟ್ಟುಕೊಂಡು ತಲಸ್ಪರ್ಶಿಯಾಗಿ ವಿಷಯವನ್ನು ತಿಳಿದು ಕೃತಿ ರಚನೆಗೈದಿರುವ ಕಲಬುರ್ಗಿ ಅವರು ವಿಭಿನ್ನವಾಗಿ ನಿಲ್ಲುತ್ತಾರೆ. ’ನೀರು  ನೀರಡಸಿತ್ತ”. ಕವನ ಸಂಕಲನ, ’ಕೆಟ್ಟಿತ್ತು ಕಲ್ಯಾ”  ನಾಟಕ ,   ಖರೇ ಖರೇ, ಸಂಗ್ಯಾಬಾಳ್ಯಾ  ಸಣ್ಣಾಟಗಳನ್ನು  ರಚಿಸುವ ಮೂಲಕ ಸೃಜನಾತ್ಮಕ ಪ್ರತಿಭೆಯನ್ನು  ಮೆರೆದಿರುವ ಇವರದು ಯಾವ ವಿಷಯದ  ಬಗೆಗೂ  ಮಡಿವಂತಿಕೆಯನ್ನು ಮಾಡುವ ಸ್ವಭಾವವಲ್ಲ. ಅವರು  ಕೃತಿರಚನೆ  ಮಾಡದ ಕ್ಷೇತ್ರವಿಲ್ಲ. ಕನ್ನಡದಲ್ಲಿ ಬಹುಮುಖಿ ವಿದ್ವತ್‌ ಇರುವ ದೈತ್ಯ ಪ್ರತಿಭೆ ಡಾ. ಎಂ.ಎಂ ಕಲಬುರ್ಗಿ  .ಅವರ ಸಾಧನೆಯನ್ನು ಗುರುತಿಸಿ ಮಹಾಮಾರ್ಗ ಎಂಬ ಮೌಲಿಕ ಅಭಿನಂದನ ಗ್ರಂಥ ಅರ್ಪಿಸಲಾಗಿದೆ. .ಅದು ಕನ್ನಡದ ಬಹುಮುಖ್ಯ ಆಕರಗ್ರಂಥವೆಂಬ ಹೆಗ್ಗಳಿಕೆ ಪಡೆದಿದೆ.;.
                     
 ಚಿತ್ರ ಕೃಪೆ   ಅಂತರ್‌ಜಾಲ ಮತ್ತು ಮಹಾಮಾ ರ್ಗ)

No comments:

Post a Comment