Sunday, November 17, 2013

ಪಾವಗಡ ತಾಲೂಕಿನ ಪ್ರಾಗೈತಿಹಾಸಿಕ ನೆಲೆಗಳು

ಪಾವಗಡ ತಾಲ್ಲೂಕಿನಲ್ಲಿ ಇತ್ತೀಚೆಗೆ ದೊರೆತ ಕೆಲವು ಪ್ರಾಗೈತಿಹಾಸದ ನೆಲೆಗಳು
ರವೀಶ್ ಜಿ.ಎನ್

ಪಾವಗಡ ತಾಲ್ಲೂಕು ತುಮಕೂರು ಜಿಲ್ಲೆಯಲ್ಲಿದ್ದು, ಈಗಾಗಲೇ ಇಲ್ಲಿ ಹಲವು ಪ್ರಾಗೈತಿಹಾಸ ಕಾಲದ ನೆಲೆಗಳನ್ನು ವಿವಿಧ ಕಾಲಘಟ್ಪದ ಸಂಸ್ಕೃತಿಗಳೆಂದು ವಿಂಗಡಿಸಿ ಶೋಧಿಸ ಲಾಗಿದೆ. ಯಲ್ಲಪ್ಪನಾಯಕನ ಹಳ್ಳಿಯಲ್ಲಿ ಆದಿ ಹಳೇ ಶಿಲಾಯುಗ, ನಿಡುಗಲ್ಲಿನಲ್ಲಿ ಮಧ್ಯ ಹಳೇ ಶಿಲಾಯುಗ, ನಾಗಲಾಪುರದಲ್ಲಿ ಅಂತ್ಯ ಮತ್ತು ಸೂಕ್ಷ್ಮತೆಯುಗ, ಬೂದಿಬೆಟ್ಟ, ನವಶಿಲಾಯುಗ, ಕಣಿಕಲಬಂಡೆ, ಬೃಹತ್ ಶಿಲಾಯುಗ, ಪಾವಗಡ ಇತಿಹಾಸ ಆರಂಭ ಕಾಲ ಎಂದು ಇನ್ನು ಹಲವು ನೆಲೆಗಳನ್ನು ಶೋಧಿಸಲಾಗಿದೆ.
ಪಾವಗಡ ತಾಲ್ಲೂಕಿನಲ್ಲಿ ಇತ್ತೀಚಿನ ಹಲವು ಸ್ಥಳಗಳ ಅನ್ವೇಷಣೆಯಲ್ಲಿ ಕೆಲವು ನೆಲೆಗಳು ಪತ್ತೆಯಾಗಿವೆ.
ಕನ್ನಮೇಡಿ : ಇದು ಪಾವಗಡ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿದ್ದು, ಪಾವಗಡದಿಂದ ಸುಮಾರು ೧೬ ಕಿ.ಮೀ. ದೂರದಲ್ಲಿದೆ. ಕನ್ನಮೇಡಿ ಬೆಟ್ಟದ ತಪ್ಪಲಿನಲ್ಲಿ ವೆಂಕಾವಧೂತ ಸ್ವಾಮಿ ಗುಹೆಗೆ ಹೋಗುವ ದಾರಿಯಲ್ಲಿ ನವಶಿಲಾಯುಗದ ವಸತಿ ನೆಲೆಯಿದ್ದು, ಸಗಣಿಯ ಕಿಟ್ಟ ಅಥವಾ ಬೂದಿಯ ದಿನ್ನೆಯು ಸುಮಾರು ಮೂರು ಎಕರೆಯಲ್ಲಿ ಹರಡಿಕೊಂಡಿದೆ. ಈ ನೆಲೆಯಲ್ಲಿ ನವಶಿಲಾಯುಗಕ್ಕೆ ಸಂಬಂಧಿಸಿದ ಕೈಗೊಡಲಿ, ಸುತ್ತಿಗೆ, ಹೆರೆಚೆಕ್ಕೆ, ಕಲ್ಲಿನ ಬಿಲ್ಲೆ, ಕವಣೆಕಲ್ಲು, ರೆಡ್ ಓಕರ್ ಸ್ಟೋನ್ ಮೊದಲಾದ ಉಪಕರಣಗಳು ಹಾಗೂ ಬೂದು, ಕಂದುಬಣ್ಣ, ನುಣುಪುಗೊಳಿಸಿದ ಬೂದು ಬಣ್ಣದ ಮೃತ್‌ಪಾತ್ರೆಗಳು ದೊರೆಯುತ್ತವೆ. ಮಡಕೆ ತಯಾರಿಕೆಗೆ ಬಳಸುತ್ತಿದ್ದ ಮಣ್ಣಿನ ಡಾಬರ್ ದೊರೆತಿರುವುದು ವಿಶೇಷ. ಜೊತೆಗೆ ಒಂದು ಮಡಕೆ ಚೂರಿನ ತಳಭಾಗದಲ್ಲಿ ಈಚಲು ಚಾಪೆಯ ಗುರುತುಗಳಿರುವುದು ಪತ್ತೆಯಾಗಿದ್ದು, ಇವರಿಗೆ ಚಾಪೆ ಹೆಣೆಯುವ ಜ್ಞಾನವಿತ್ತೆಂದು ಇದು ತಿಳಿಸುತ್ತದೆ.
ಈ ನೆಲೆಯಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ನುಣುಪುಗೊಂಡ ಕಪ್ಪು, ಕಪ್ಪು ಮತ್ತು ಕೆಂಪು ಬಣ್ಣದ ಮೃತ್‌ಪಾತ್ರೆಗಳು ಹಾಗೂ ಕಬ್ಬಿಣದ ಕಿಟ್ಟ ಸಿಗುತ್ತವೆ. ಆರಂಭ ಇತಿಹಾಸ ಕಾಲಕ್ಕೆ ಸಂಬಂಧಿಸಿದ ಕೆಂಪು ಬಣ್ಣದ ಸಾಕಷ್ಟು ಮೃತ್‌ಪಾತ್ರೆಗಳು ದೊರೆತಿದ್ದು, ಅವುಗಳ ಮೇಲ್ಭಾಗ ಕಪ್ಪು ಮಿಶ್ರಿತ ಕಂದು ಬಣ್ಣ ಮತ್ತು ಸುಣ್ಣದಿಂದ ಅಲಂಕರಿಸಲ್ಪಟ್ಟಿದೆ.
ಕನ್ನಮೋಡಿಯ ಪಶ್ಚಿಮ ದಿಕ್ಕಿನಲ್ಲಿರುವ ವೆಂಕಾವಧೂತ ಗುಹೆಯ ಬಳಿ ಇರುವ ಹೆಬ್ಬಂಡೆಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಮನುಷ್ಯರ, ಗೂಳಿಯ, ಬಿಲ್ಲುಹಿಡಿದ ವ್ಯಕ್ತಿ, ದನಗಳನ್ನು ಒಡೆಯಲು ಕೋಲು ಹಿಡಿದಿರುವ ವ್ಯಕ್ತಿ, ಮೆರವಣಿಗೆ ಹೊರಡುತ್ತಿರುವ ದೃಶ್ಯ, ಕೋತಿ ಮೊದಲಾದ ದೃಶ್ಯಗಳನ್ನು ಚಿತ್ರಿಸಿದ್ದಾನೆ. ಈ ಗೀರು ಚಿತ್ರಗಳ ಬಳಿ ನವಶಿಲಾಯುಗದ ಎರಡು ಆಯುಧಗಳಿವೆ.
ನಲಿಗಾನಹಳ್ಳಿ : ಇದು ಪಾವಗಡ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿದ್ದು, ಪಾವಗಡದಿಂದ ೬ ಕಿ.ಮೀ. ದೂರದಲ್ಲಿದೆ. ನಲಿಗಾನಹಳ್ಳಿ ಗ್ರಾಮದಿಂದ ಪೂರ್ವಕ್ಕೆ ಭತ್ತದ ಗುಂಡು ಎಂಬ ಹೆಬ್ಬಂಡೆಯ ಬಳಿ ನವಶಿಲಾಯುಗಕ್ಕೆ ಸಂಬಂಧಿಸಿದ ಕೈಗೊಡಲಿ, ಹೆರೆಚೆಕ್ಕೆಗಳು, ಮೈಕ್ರೋಲಿತಿಕ್ ಬ್ಲೇಡ್, ತಿರುಳ್ಗಲ್ಲು [miಛಿಡಿoihiಛಿ bಟಚಿಜe ಚಿಟಿಜ ಛಿoಡಿe] ಕವಣೆಕಲ್ಲು ಮೊದಲಾದ ಉಪಕರಣಗಳು ಡೈಕ್, ಒಸಾಲ್ಟ್, ಚರ್ಟ್ ಶಿಲೆಯಲ್ಲಿರುವುದು ದೊರೆತಿವೆ. ಜೊತೆಗೆ ಬೂದುಬಣ್ಣದ ಮೃತ್‌ಪಾತ್ರೆಗಳು ಸಿಕ್ಕಿವೆ. ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ಸ್ವಸ್ತಿಕ್, ವೃತ್ತಾಕಾರದ ಕಲ್ಲುಮಾದರಿ, ಚಪ್ಪಟೆಯಾಕಾರದ ಕಲ್ಲು ಮಾದರಿ, ನಿಲುವು ಮಾದರಿ ಹೀಗೆ ನಾಲ್ಕು ಮಾದರಿಗಳಲ್ಲಿ ಒಟ್ಟು ೨೮ ಸಮಾಧಿಗಳಿವೆ. ಭತ್ತದ ಗುಂಡಿನ ತುದಿಯ ಭಾಗದಲ್ಲಿ ಚಪ್ಪಟೆ ಬಂಡೆಯ ಕೆಳಭಾಗದಲ್ಲಿ ಬಿಳಿಬಣ್ಣದ ಮನುಷ್ಯನ ವಿವಿಧ ರೀತಿಯಲ್ಲಿರುವ ಗೀಟು ಚಿತ್ರಗಳಿವೆ. ಈ ನೆಲೆಯಿಂದ ಉತ್ತರ ದಿಕ್ಕಿಗೆ ಒಂದು ಕಿ.ಮೀ. ದೂರದಲ್ಲಿ ಚಪ್ಪಟೆಯಾಕಾರದ ಕಲ್ಲುಮಾದರಿಯ ಒಂದು ಸಮಾಧಿಯಿದ್ದು, ಇಲ್ಲಿ ಇತಿಹಾಸ ಆರಂಭಕ್ಕೆ ಸೇರುವ ಕೆಂಪು ಮೃತ್‌ಪಾತ್ರೆಗಳು ಸಿಗುತ್ತವೆ.

? S/o ನಾರಾಯಣಪ್ಪ, ಗುಂಡಾರ‍್ಲಹಳ್ಳಿ, ಬ್ಯಾಡನೂರು ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ-೫೬೧೨೦೨.




No comments:

Post a Comment