Tuesday, February 4, 2014

ತೀರ್ಥಹಳ್ಳಿತಾಲೂಕಿನ ಮೂರುಶಾಸನಗಳು

ತೀರ್ಥಹಳ್ಳಿ ತಾಲ್ಲೂಕಿನ ಮೂರು ಸ್ಮಾರಕ ಶಾಸನಗಳು
ಜಿ.ಕೆ. ದೇವರಾಜಸ್ವಾಮಿ
ತೀರ್ಥಹಳ್ಳಿ ತಾಲ್ಲೂಕಿನಿಂದ ಸುಮಾರು ೧೫ ಕಿ.ಮೀ. ದೂರದಲ್ಲಿ ಹೆದ್ದೂರು ಗ್ರಾಮವಿದೆ. ಈ ಗ್ರಾಮದ ಬೆಂಡೆಕೊಪ್ಪ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿರುವ ಶಾಸನ.
ಶಾಸನವು ೪ ಅಡಿ ೬ ಇಂಚು ಎತ್ತರ, ೩ ಅಡಿ ಅಗಲವಾಗಿದೆ. ಬಳಪದಕಲ್ಲಿನಲ್ಲಿ ಕೆತ್ತಲಾಗಿದೆ. ಕೆಳಗಿನ ಪಟ್ಟಿಕೆಯಲ್ಲಿ ನಾಲ್ಕು ಜನ ಯೋಧರಿದ್ದಾರೆ. ಮಧ್ಯದಲ್ಲಿ ಇಬ್ಬರು ಗುರಾಣಿ ಮತ್ತು ಭರ್ಜಿಯನ್ನು ಹಿಡಿದು ಹೋರಾಡುತ್ತಿರುವ ದೃಶ್ಯವಿದೆ. ಇವರ ಎಡಕ್ಕೆ ಒಬ್ಬ ಖಡ್ಗ ಗುರಾಣಿ ಹಿಡಿದವನಿದ್ದಾನೆ. ಎರಡೂ ಬದಿಯಲ್ಲಿ ಬಿಲ್ಲು ಮತ್ತು ಖಡ್ಗವನ್ನು ಹಿಡಿದ ಯೋಧರ ಚಿತ್ರವನ್ನು ಚಿತ್ರಿಸಲಾಗಿದೆ.
ಎರಡನೇ ಪಟ್ಟಿಕೆಯಲ್ಲಿ ಮಧ್ಯದಲ್ಲಿ ಕುದುರೆ ಮೇಲೆ ಖಡ್ಗಧಾರಿಯಾದವನನ್ನು ಕೆತ್ತಲಾಗಿದೆ. ಅವನಿಗೆ ಹಿಂಭಾಗದಿಂದ ಛತ್ರಿಯನ್ನು ಒಬ್ಬ ಹಿಡಿದಿದ್ದಾನೆ. ಛತ್ರಿ ಹಿಡಿದವನ ಹಿಂಭಾಗದಲ್ಲಿ ಒಬ್ಬ ಗಿಂಡಿಯನ್ನು ಹಿಡಿದಿರುವಂತಿದೆ. ಕುದುರೆಯ ಮುಂಭಾಗದಲ್ಲಿ ಒಬ್ಬ ಕುದುರೆಯ ಹಗ್ಗವನ್ನು ಹಿಡಿದಿರುವಂತಿದೆ. ಮತ್ತೊಬ್ಬ ಯೋಧ ಕಹಳೆಯನ್ನು ಊದುತ್ತಿದ್ದಾನೆ. ಒಟ್ಟಾರೆ ಯುದ್ಧಕ್ಕೆ ಹೋಗುವ ಚಿತ್ರಣ ಕಂಡುಬರುತ್ತಿದೆ. ಮೂರನೇ ಪಟ್ಟಿಕೆಯಲ್ಲಿ ಮಧ್ಯದಲ್ಲಿ ಶಿವಲಿಂಗವಿದ್ದು, ಎಡ-ಬಲಕ್ಕೆ ಸ್ತ್ರೀಯರ ಚಿತ್ರವಿದೆ. ಈ ಸ್ತ್ರೀಯರ ಪಕ್ಕದಲ್ಲಿ ಕೈ ಮುಗಿದು ಕುಳಿತಿರುವ  ವೀರರ ಚಿತ್ರವಿದೆ. ಕೈ ಮುಗಿದು ಕುಳಿತ ವೀರರ ಬಲಕ್ಕೆ ಖಡ್ಗದ ಚಿತ್ರಣವಿದೆ. ಎಡಭಾಗದಲ್ಲಿರುವ ಸ್ತ್ರೀ ಕೈ ಮುಗಿದು ಕುಳಿತ ವೀರನಿಗೆ ಸಂತೈಸುವ ರೀತಿಯಲ್ಲಿ ಹಾಗೂ ಬಲಭಾಗದಲ್ಲಿರುವ ಸ್ತ್ರೀ ಕೈಯಲ್ಲಿ ಏನೋ ಹಿಡಿದಿರುವಂತೆ ಅನಿಸುತ್ತದೆ. ಮೇಲ್ಭಾಗದಲ್ಲಿ ಜಟಾಧಾರಿ ಅರ್ಚಕ/ಮುನಿ ಶಿವನಿಗೆ ಘಂಟೆ ಬಾರಿಸುತ್ತಾ ಆರತಿ ಬೆಳಗುತ್ತಿದ್ದಾನೆ. ಮುನಿಯ ಎಡ ಪಕ್ಕದಲ್ಲಿ ಮೇಲ್ಭಾಗದಲ್ಲಿ ಚಂದ್ರ ಕೆಳಭಾಗವನ್ನು ಹಸು-ಕರುವನ್ನು ಕೆತ್ತಲಾಗಿದೆ. ಬಲಭಾಗದ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಶಿವದೇವಾಲಯದಲ್ಲಿರುವ ಬಸವನಂತೆ ಬಸವನನ್ನು ಕೆತ್ತಲಾಗಿದೆ. ಶಾಸನದ ಸುತ್ತಲೂ ಪಟ್ಟಿಕೆಯನ್ನು ರಚಿಸಿದ್ದಲ್ಲದೆ ಅಲಂಕಾರಿಕ ಹೂ-ಬಳ್ಳಿಯಿಂದ ಕೆತ್ತಿದೆ. ಮೇಲ್ಭಾಗದ ಕೊನೆಯಲ್ಲಿ ಸಿಂಹ ಮುಖವನ್ನು ಕೆತ್ತಲಾಗಿದೆ. ಮೂರು ಅಡ್ಡ ಪಟ್ಟಿಕೆಗಳಲ್ಲಿ ಹಾಗೂ ಕೆಳಭಾಗವು  ಕೆತ್ತಲಾಗಿದೆ. ಲಿಪಿ ಅಲಂಕಾರವಾಗಿದ್ದರೂ ಭಾಷಾ ಸ್ಪಷ್ಟತೆ ಇಲ್ಲ. ಇದರ ಕಾಲ ಕ್ರಿ.ಶ. ೭-೧೦-೧೨೫೪ (ಶಾ.ಶ. ೧೧೭೬).
ಶಾಸನ ಪಾಠ
೧        ಆನಂದ ಸಂವಚಾರದ ಆಶಿಜ ಬ ೧೦ ಲು ಗುರ[ವಾ]
೨        ರ ಬೊ[ಂ]ಮ್ನೆರು ನಾಯಕನ ಮರ(ಗ) ಲಿಂಗಣನು ಮಾಳೂರ ಆರು
೩        ಕಿಲಾರ ಸೀಮೆಯ ಸುರುಳಿಯ ಕೋಟೆಯ ಹೋರು
೪        ತಾ[ಂ]ನಲಿ ಹುಲುರಾಶಿಯ
೫        ತಂಮಗೌಉ[ಡ]
೬        ನ್ಮಮಗ . . ಹೋರೆಹಾಯದಾಡಿ[ಪಾಯ್ದಳ]? ಸಹಿತಂ ಏರಿ
೭        ದಂ . ಹಾವರು . . . . ಬಯಉ
೮        ಸಾಲು ಸ್ಪಷ್ಟವಾಗಿಲ್ಲ
ಶಾಸನದಲ್ಲಿ ಪ್ರಮುಖ ವ್ಯಕ್ತಿಯಾದ ಲಿಂಗಣ ಹಾಗೂ ಇನ್ನೊಬ್ಬ ವ್ಯಕ್ತಿ ಮರಣ ಹೊಂದಿರುವುದನ್ನು ದಾಖಲಿಸಿದೆ. ಚಿತ್ರದ ಹಿನ್ನೆಲೆಯಲ್ಲಿ ಗಮನಿಸಿದಾಗ ಈ ಸತ್ತ ವ್ಯಕ್ತಿಗಳಲ್ಲಿ ಒಬ್ಬ ಪ್ರಮುಖನಾದ ಮಾಂಡಲೀಕನ ಅಥವಾ ಗಾವುಂಡನೋ ಆಗಿರಬೇಕು. ಹೆಚ್ಚಿನ ಮಾಹಿತಿಯು ತಿಳಿಯುತ್ತಿಲ್ಲ.

೨. ಬೆಂಡೆಕೊಪ್ಪ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿರುವ ಎರಡನೆಯ ಶಾಸನ
ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಇದು ೪ ಅಡಿ ಎತ್ತರ, ೩ ಅಡಿ ಅಗಲ ಅಳತೆ ಉಳ್ಳದ್ದಾಗಿದೆ. ಶಾಸನವನ್ನು ಬಳಪದಕಲ್ಲಿನ ಮೇಲೆ ಕೆತ್ತಲಾಗಿದೆ. ಶಾಸನದ ಕೆಳಗಿನ ಪಟ್ಟಿಕೆಯ ಬಲಭಾಗದಲ್ಲಿ ಒಬ್ಬ ವೀರ ಕುದುರೆ ಮೇಲೆ ಕುಳಿತು ಈಟಿಯನ್ನು ಹಿಡಿದು ತಿವಿಯಲು ಸಿದ್ಧನಾದಂತಿದೆ. ಕುದುರೆಯು ಎರಡು ಕಾಲುಗಳನ್ನು ಎತ್ತಿ ಜಿಗಿಯುತ್ತಿರುವಂತೆ ಕೆತ್ತಲಾಗಿದೆ. ಎದುರಾಳಿ ವೀರನು ಕುದುರೆಯ ತಲೆ ಹಿಡಿದು ಭರ್ಜಿಯಿಂದ ಕುತ್ತಿಗೆಯನ್ನು ತಿವಿಯುತ್ತಿರುವಂತಿದೆ. ಅವನ ಕಾಲಿನ ಕೆಳಗೆ ಒಂದು ಕುದುರೆ ಬಿದ್ದಂತೆ ಚಿತ್ರಿಸಲಾಗಿದೆ. ಅವನ ಹಿಂಭಾಗದಲ್ಲಿರುವ ಒಬ್ಬ ವೀರನು ಬಿಲ್ಲನ್ನು ಎಳೆದುಬಿಡುವಂತೆ  ಚಿತ್ರಿಸಿದೆ. ಶಾಸನದ ಎರಡನೆಯ ಪಟ್ಟಿಕೆಯ ಬಲಭಾಗದಲ್ಲಿ ಇಬ್ಬರು ಕುದುರೆ ಮೇಲೆ ಕುಳಿತು ಯುದ್ಧ ಮಾಡುತ್ತಿದ್ದಾರೆ. ಕೆಳಗಿನ ಪಟ್ಟಿಕೆಯ ದೃಶ್ಯ ಮುಂದುವರೆದಂತಿದೆ. ಎದುರಾಳಿಯು ಕುದುರೆಯನ್ನು ಭರ್ಜಿಯಿಂದ ತಿವಿದು ಎಡಕೈಯಲ್ಲಿ ಹಿಡಿದಿದ್ದಾನೆ. ಬಲಕೈ ಏನೋ ಹಿಡಿದಿರುವಂತಿದೆ. ಕುದುರೆಯ ಮೇಲೆ ಕುಳಿತ ಎರಡನೆಯವನು ಈಟಿಯನ್ನು ಹಿಡಿದು ಮುನ್ನುಗ್ಗುತ್ತಿರುವಂತಿದೆ. ಮುಂದಿನ ಕುದುರೆ ಸವಾರನ ಸಹಾಯಕ್ಕೆ ಬರುತ್ತಿರುವಂತೆ ಚಿತ್ರಿಸಿದೆ. ಮೂರನೇ ಪಟ್ಟಿಕೆಯಲ್ಲಿ ಕೆಳಗೆ ನಿಂತು ಹೋರಾಡುತ್ತಿರುವ ಎದುರಾಳಿ ವೀರ ಮಡಿದಿರಬೇಕು. ಅವನನ್ನು ನಾಲ್ಕು ಜನ ಅಪ್ಸರೆಯರು ಹೆಗಲ ಮೇಲೆ ಕೈ ಹಾಕಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ಚಿತ್ರಿಸಿದೆ. ಮೇಲ್ಭಾಗದಲ್ಲಿ ದೇವಾಲಯವನ್ನು ಹೋಲುವಂತೆ ಸಾಂಕೇತಿಕವಾಗಿ ಮಂಟಪದ ರೀತಿಯಲ್ಲಿ ಕೆತ್ತಲಾಗಿದೆ. ಮಂಟಪದ ಮಧ್ಯದಲ್ಲಿ ಶಿವಲಿಂಗದ ಎಡಕ್ಕೆ ವೀರ ಕೈ ಮುಗಿದು ಕುಳಿತಿದ್ದಾನೆ. ಬಲಕ್ಕೆ ಜಟಾಧಾರಿ ಮುನಿಯು ಶಿವಲಿಂಗವನ್ನು ಪೂಜಿಸುತ್ತಿದ್ದಾನೆ. ಮಂಟಪದ ಹೊರಭಾಗ ಎಡಕ್ಕೆ ಸೂರ್ಯ ಹಾಗೂ ಹಸು-ಕರುವನ್ನು ಚಿತ್ರಿಸಲಾಗಿದೆ. ಬಲಭಾಗದಲ್ಲಿ ಚಂದ್ರ ಮತ್ತು ಜಟಾಧಾರಿ ವ್ಯಕ್ತಿ ಏನನ್ನೋ ಕೈ ಹಿಡಿದು ತರುತ್ತಿರುವ ದೃಶ್ಯವಿದೆ. ಈ ಮೇಲಿನ ಪಟ್ಟಿಕೆ ಭಾಗದಲ್ಲಿ ಮಾತ್ರ ಕಮಾನಿನಿಂದ ಕೂಡಿ ಅಲಂಕಾರ ಕೆತ್ತನೆಗಳಿಂದ ಕೂಡಿದೆ. ಮೂರು ಅಡ್ಡಪಟ್ಟಿಕೆಯಲ್ಲಿ ಹಾಗೂ ಕೆಳಭಾಗದಲ್ಲಿ ಶಾಸನವನ್ನು ಕೆತ್ತಲಾಗಿದೆ.
ಶಾಸನ ಪಾಠ
೧        ಶ್ರೀ ಸ್ವಸ್ತಿ ಶಮಸ್ತ ಪ್ರಸಸ್ತಿ ಸಹಿತಂ ಭಡ್ತಕೋರ
೨        . . . ಸಿ . . ಸಃ . . . . ಗಮ ಮಾದ . . . . ಉರವಿ
೩        ಣ್ದದ . . ಒಲ್ಲೆಸಿರಣದ . . . ಪಂ ಲೋಸ ಹುತ್ಯೆಯ
೪        ಸ . ತ . . . . . . . . . . . . .
೫        ದ . ಕಂರ ತುಲೆಯವ.ಕ..ಗ.ಸ.ರದಕ್ತಯ ಕುಸಂಸಿವಸ್ತ್ರಂ
೬        ಯಕನಮಾ ಹ ಳಿ ನ[ಸ್ತು]?ಶಸ್ತ ಸಮಸ್ತ ಮಹಾಮಣ್ಡ ಳೇಶ್ವರಂ . . ಪ್ರತ್ಪಾ[ವ] ಹಿರಣ್ಯಾವ
೭        ಸ್ತ್ರದಾನ . . ರಸಿರಸಿಂ . ಸನವ . . . . . . . . . . .
೮        ರಿರವಿವಾದಲನಾಡರವ . . ಬಿಮ . . . ರಿಸಿ ರೆರುಡೂಲೆಃ ವಿಧಃವಿದು
೯        ಸತ್ತತೈಲ್ಪಗೌಡ[ನ] ಧನಕನಕ [ದಿಂದೆ] ಸಪುಣ್ಯ ಮುಮಿದೆ ಇಳಂಬಿ. ಯರೆಸಿಕುಮ
೧೦     ರಾನ(ಸೂ)ಪುಂಡಯರಸಮ . . . . . [ಮೊರಡಿ]. ಲಾಕಣಭಂದದುಯಿಡರ‍್ಯಗರೊಲೊಮಾ
೧೧     ದಾನಂ . . . . . . . . . . . . . . . .
೧೨     (ಶಾಸನದ ಕೆಳಭಾಗ ಭೂಮಿಯಲ್ಲಿ ಹೂತುಹೋಗಿದ್ದು, ಮುಂದಿನ ಸಾಲಿನ ಲಿಪಿಯು ಸ್ಪಷ್ಟವಾಗಿಲ್ಲ.)
ಪ್ರಸ್ತುತ ಶಾಸನವು ತ್ರುಟಿತವಾಗಿದ್ದು, ಪಾಠ ನಿರ್ಧರಿಸಲು ಕಷ್ಟಸಾಧ್ಯ. ಶಾಸನದ ಲಿಪಿ, ಭಾಷಾ ದೃಷ್ಟಿಯಿಂದ ಇದನ್ನು ಕ್ರಿ.ಶ. ೧೨-೧೩ನೇ ಶತಮಾನದ್ದೆನ್ನಬಹುದು. ಮಹಾ ಮಂಡಳೇಶ್ವರ ತೈಲಪಗೌಡ ಇತ್ಯಾದಿ ಸ್ಪಷ್ಟತೆಯಿಂದ ಪ್ರಾದೇಶಿಕವಾಗಿ ಸಾಂತರರ ಕಾಲದ್ದೆಂದು ಊಹಿಸಬಹುದಾಗಿದೆ.
೩. ಮುನ್ನೂರಿನ ತುರುಗೋಳ್ ಪೆಣ್ಬುಯ್ಯಲ್ ವೀರಗಲ್ಲು
ತೀರ್ಥಹಳ್ಳಿ ತಾಲ್ಲೂಕಿನಿಂದ ೫ ಕಿ.ಮೀ. ದೂರದಲ್ಲಿ ಮುನ್ನೂರು ಗ್ರಾಮವಿದೆ. ಗ್ರಾಮದ ಶ್ರೀ ಮೋಹನ್‌ರವರ ಮನೆಯ ಆವರಣದಲ್ಲಿ ಈ ಶಾಸನವಿದೆ. ಈ ವೀರಗಲ್ಲು ಶಾಸನವು ೫ ಅಡಿ ೨ ಇಂಚು ಎತ್ತರ ಹಾಗೂ ೩ ಅಡಿ ಅಗಲವಿದೆ. ಕಣಶಿಲೆಯಲ್ಲಿ ಶಿಲ್ಪದೊಂದಿಗೆ ಶಾಸನವನ್ನು ಕಂಡರಿಸಲಾಗಿದೆ. ಶಾಸನವು ೪ ಹಂತಗಳ ಚಿತ್ರ ಪಟ್ಟಿಕೆ ಯನ್ನು ಒಳಗೊಂಡಿದೆ. ಶಾಸನದ ಕೆಳಭಾಗದ ಪಟ್ಟಿಕೆಯಲ್ಲಿ ನಾಲ್ಕು ಜನರನ್ನು ಕೆತ್ತಲಾಗಿದೆ. ಈ ಉಬ್ಬುಶಿಲ್ಪದಲ್ಲಿ ಒಬ್ಬನನ್ನು ಹಸುವು ತುಳಿದು ನಿಂತಿದೆ. ಹಸುವಿನಿಂದ ತುಳಿಯಲ್ಪಟ್ಟವನನ್ನು ಒಬ್ಬನು ತಿವಿಯುತ್ತಿರುವಂತಿದೆ. ಉಳಿದ ಇಬ್ಬರು ಸ್ತ್ರೀಯರು ಕೈ ಕೈ ಹಿಡಿದಿದ್ದಾರೆ. ಕೈ ಹಿಡಿದ ಮಧ್ಯದಲ್ಲಿ ಮರ ಅಥವಾ ತ್ರಿಶೂಲದ ರೀತಿಯಲ್ಲಿ ಕೆತ್ತಲಾಗಿದೆ. ಎರಡನೆಯ ಪಟ್ಟಿಕೆಯಲ್ಲಿ ನಾಲ್ಕು ಜನರನ್ನು ಸ್ಪಷ್ಟವಾಗಿ ಕೆತ್ತಲಾಗಿದೆ. ಎಡಭಾಗದಲ್ಲಿರುವ ವ್ಯಕ್ತಿಯನ್ನು ಇಬ್ಬರು ಸ್ತ್ರೀಯರನ್ನು ಅಪಹರಿಸುತ್ತಿರುವ ವ್ಯಕ್ತಿಯು ಕತ್ತಿಯಿಂದ ತಿವಿಯುತ್ತಿದ್ದಾನೆ. ಅಪಹರಿಸುತ್ತಿರುವ ಸ್ತ್ರೀಯರು ಪರಸ್ಪರ ಕೈಯನ್ನು ಹಿಡಿದಿದ್ದಾರೆ. ಹಾಗೂ ಬಲಭಾಗದ ಕೊನೆಯಲ್ಲಿ ರುವ ಸ್ತ್ರೀಯು ಕೈಯಲ್ಲಿ ಆಯುಧವನ್ನು ಹಿಡಿದು ಪ್ರತಿಭಟಿಸು ತ್ತಿರುವಂತಿದೆ. ಅವಳ ಪಕ್ಕದಲ್ಲಿ ಚಿತ್ರಣವಿದ್ದು, ಸ್ಪಷ್ಟವಾಗುತ್ತಿಲ್ಲ. ಮೂರನೆಯ ಪಟ್ಟಿಕೆಯಲ್ಲಿ ಮಧ್ಯದಲ್ಲಿ ಇಬ್ಬರು ವೀರರು ಪರಸ್ಪರ ಕೈಯನ್ನು ಹಿಡಿದುಕೊಂಡಿದ್ದು ಅವರ ಪಕ್ಕದಲ್ಲಿ ಅಪ್ಸರೆಯರ ಸೂಚಕವಾಗಿ ಸ್ತ್ರೀಯರ ಚಿತ್ರ ಕೆತ್ತಲಾಗಿದೆ. ನಾಲ್ಕು ಜನರೂ ಕೈ ಹಿಡಿದು ಹೋಗುತ್ತಿರುವಂತಿದೆ. ಮೇಲ್ಭಾಗದ ಮಧ್ಯದಲ್ಲಿ ಗಜಲಕ್ಷ್ಮಿ ಚಿತ್ರಣ, ಎಡಕ್ಕೆ ಚಂದ್ರ ಹಸುವಿನ ಚಿತ್ರವಿದೆ. ಬಲಕ್ಕೆ ಸೂರ್ಯ, ಕುದುರೆ ಚಿತ್ರವನ್ನು ಕೆತ್ತಲಾಗಿದೆ. ಶಿಲ್ಪದ ಮಧ್ಯದ ಮೂರೂ ಪಟ್ಟಿಕೆ ಹಾಗೂ ಅಕ್ಕಪಕ್ಕದ ಪಟ್ಟಿಕೆಗಳಲ್ಲಿ ಶಾಸನವನ್ನು ಕೆತ್ತಲಾಗಿದೆ. ಪಟ್ಟಿಕೆ ಕೆಳಭಾಗದಲ್ಲಿಯೂ ಶಾಸನವನ್ನು ಬರೆಯಲಾಗಿದೆ.
ಶಾಸನ ಪಾಠ
ಮೇಲ್ಭಾಗದ ಪಟ್ಟಿಕೆ
೧        . . . . . ಲೆಕಪಸಲೆಬಃ
ಎರಡು  ಮತ್ತು ಮೂರನೆಯ ಪಟ್ಟಿಕೆ ಸವೆದಿದೆ
ಶಾಸನದ ಎಡಭಾಗದ ಪಟ್ಟಿಕೆ
೧ ಮೃಚುರುಲ . ಳಯ . . . . . . .
ಶಾಸನದ ಬಲಭಾಗದ ಪಟ್ಟಿಕೆ
೧ . . . ಮಲೆಂ ಪುಗೆನ ಮೃತಳನ . .
ಶಾಸನದ ಕೆಳಭಾಗದಲ್ಲಿ
೧        ಅ ಪಡೆದ ಇವೂರ ತುರುವುಂತೊಳ್ದಿ
೨        ಭಾಳಗಮ್ಮ ಮಡಿದ ಕಲ್ಲೋಡಿ(ಟಿ) ವೀರೋ
೩        ಜ ಬರೆ(ದ) ಇ ಕಲ
          ಪಟ್ಟಿಕೆಯಲ್ಲಿರುವಂತಹ ಲಿಪಿಯು ತ್ರುಟಿತವಾಗಿದ್ದು ಪಾಠ ಸ್ಪಷ್ಟವಾಗುತ್ತಿಲ್ಲ. ಕೆಳಭಾಗದ ಪಾಠ ಓದಬಹುದು. ಈವೂರ ತುರುವು ತುಳಿದು ಬಾಳಗಮ್ಮ ಎಂಬುವನು ಮಡಿದ ಹಾಗೂ ಕಲ್ಲನ್ನು ಕಲೋಟಿ ವಿರೋಜ ಬರೆದ ಎಂದಿದೆ. ಶಾಸನ ಗಮನಿಸುವಲ್ಲಿ, ಬಾಳಗಮ್ಮ ಎಂಬುವನು ಹಸುವಿನಿಂದಲೇ ತುಳಿದು ಸತ್ತ ಎಂದು ಶಾಸನವು ಉಲ್ಲೇಖಿಸುತ್ತದೆ. ಈ ಘಟನೆಯನ್ನು ಉಲ್ಲೇಖಿಸುವ ಶಾಸನವು ಇದೇ ಮೊದಲನೆಯದೆನ್ನಬಹುದು. ಕಾರಣ ತುರುಗೋಳ್/ಪೆಣ್ಬುಯ್ಯಿಲ್ ಶಾಸನಗಳಲ್ಲಿ ವಿದ್ವಾಂಸರು ಗಮನಿಸಿ ಉಲ್ಲೇಖಿಸಿದಂತೆ ಕಾಳಗದಲ್ಲಿ ಮಡಿದ ವೀರನನ್ನು ಹಸುಗಳು ತುಳಿದುಕೊಂಡು / ದಾಟಿಕೊಂಡು ಹೋದವು ಎಂದು ಕಾವ್ಯ ಶಾಸನಗಳಲ್ಲಿದೆ. ಆದರೆ ಹಸುವೇ ತುಳಿದು ಸತ್ತನೆಂಬುದು ಶಾಸನೋಕ್ತ ಉಲ್ಲೇಖವು ಮೊದಲನೆಯದಾಗಿದೆ. ಚಿತ್ರಣದಲ್ಲೂ ಶಿಲ್ಪಿಯು ಸ್ಪಷ್ಟವಾಗಿ ಬಿದ್ದ ವ್ಯಕ್ತಿಯ ಮೇಲೆ ಹಸುವು ತುಳಿದು ನಿಂತಂತೆ ಕೆತ್ತಿದ್ದಾನೆ. ಚಿತ್ರ ಗಮನಿಸಿದರೆ ಪೆಣ್ಬುಯ್ಯಲನ್ನೂ ಚಿತ್ರಿಸಿದಂತಿದೆ. ಶಾಸನದ ಅರ್ಧಭಾಗದಷ್ಟು ಪಾಠವಿಲ್ಲ ಮತ್ತು ಕಣಶಿಲೆಯಾದ್ದರಿಂದ ಸ್ತ್ರೀ/ಪುರುಷ ಉಬ್ಬು ಶಿಲ್ಪವನ್ನು ಸೂಕ್ಷ್ಮತೆಯಿಂದ ಗಮನಿಸಬೇಕಾಗಿದೆ. ಒಟ್ಟಾರೆ ಹಸುವಿನಿಂದ ತುಳಿದು ಸತ್ತದ್ದನ್ನು ಶಾಸನವು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಚಿತ್ರದ ಹಿನ್ನೆಲೆಯಲ್ಲಿ ಈ ಶಾಸನವು ತುರುಗೋಳ್ ಹಾಗೂ ಪೆಣ್ಬುಯ್ಯಲನ್ನು ದಾಖಲಿಸಿದೆ.

?# ೫೬, ‘ತ್ರಯೀ ಮೈಸೂರು ಲ್ಯಾಂಪ್ಸ್ ಲೇಔಟ್, ಚನ್ನನಾಯಕನಪಾಳ್ಯ, ೨ನೇ ಹಂತ, ನಾಗಸಂದ್ರ ಅಂಚೆ, ಬೆಂಗಳೂರು-೫೬೦೦೭೩.


                 




No comments:

Post a Comment