Monday, January 6, 2014

ಕಳಶೇಶ್ವರ ದೇಗುಲದ ನರೂಪಗಳು

  ಕಳಸೇಶ್ವರ ದೇವಾಲಯದ ನಿರೂಪಗಳು
ಜಿ.ವಿ.ಕಲ್ಲಾಪುರ
ಕೆಳದಿ ವಸ್ತು ಸಂಗ್ರಹಾಲಯ,
   ಕೆಳದಿ-೫೭೭೪೦೧.

‘ಕಳಸ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ೬೦ ಕಿ.ಮೀ. ದೂರದಲ್ಲಿದೆ. ಭದ್ರಾನದಿಯ ಬಲದಂಡೆಯ ಮೇಲಿನ ಈ ಗ್ರಾಮ ಇತಿಹಾಸಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ಕಳಸೇಶ್ವರ ಅಥವಾ ಕಳಸನಾಥ ದೇವಾಲಯವಿದೆ. ಈ ಪ್ರದೇಶದಲ್ಲಿ ಕೋಟಿತೀರ್ಥ, ರುದ್ರತೀರ್ಥ, ಅಂಬುತೀರ್ಥ, ನಾಗತೀರ್ಥ ಮತ್ತು ವಸಿಷ್ಠತೀರ್ಥಗಳೆಂಬ ಐದು ತೀರ್ಥಗಳಿವೆ. ಕಳಸವು ಪಂಚ ಶೈವ ಕ್ಷೇತ್ರಗಳಲ್ಲೊಂದೆಂದು ಗುರುತಿಸಲಾಗಿದೆ. ಈ ಪ್ರಾಂತವನ್ನು ಸಾಂತರ ಭೈರರಸವೊಡೆಯನು ಆಳುತ್ತಿದ್ದನೆಂದು ತಿಳಿದು ಬರುತ್ತದೆ.
ಕಳಸದ ಪೂರ್ವದಿಕ್ಕಿನ ಒಂದು ಸಣ್ಣಗುಡ್ಡದ ಮೇಲೆ ಕಳಸೇಶ್ವರ ದೇವಾಲಯವಿದೆ. ಸುತ್ತಲಿನ ಪ್ರಾಕಾರವನ್ನು ಹೊಸದಾಗಿ ನಿರ್ಮಿಸಲಾಗಿದೆ. ಮುಂದಿನ ಮಂಟಪವು ಹಳೆಯದಾಗಿದೆ. ಪ್ರಧಾನ ದೇವಾಲಯವು ವಿಜಯನಗರ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಇದನ್ನು ಸಾಂತರಸರು ಜೀರ್ಣೋದ್ಧಾರ ಮಾಡಿದ್ದಾಗಿ ತಿಳಿದು ಬರುತ್ತದೆ. ಗರ್ಭಗೃಹ, ನವರಂಗ, ಮುಖಮಂಟಪ, ಸಿಂಹಯಾಳಿಗಳಿಂದ ಕೊಡಿದೆ. ಭುವನೇಶ್ವರಿಯನ್ನು ಕಲಾತ್ಮಕವಾಗಿ ರಚಿಸಲಾಗಿದೆ. ಇಲ್ಲಿ ಗಣಪತಿ ಮತ್ತು ಅಗಸ್ತ್ಯೇಶ್ವರ ದೇವಾಲಯಗಳಿವೆ. ಗಣಪತಿ ದೇವಾಲಯವು ಹೊಯ್ಸಳ ಶೈಲಿಯಲ್ಲಿದೆ. ಶಿಖರವಿದೆ. ಕ್ಷೇತ್ರಪಾಲ ಮತ್ತು ಪಾರ್ವತಿ ದೇವಾಲಯಗಳಿಂದ ಕೂಡಿದೆ.
ಕಳಸದಲ್ಲಿ ವೆಂಕಟರಮಣ, ಆಂಜನೇಯ, ವೀರನಾರಾಯಣ, ಗೋಪಾಲಕೃಷ್ಣ, ಗಂಗಾಧರೇಶ್ವರ, ಗಣಪತಿ, ಚೆನ್ನಕೇಶವ, ಬಿಂದುಮಾಧವ, ದುರ್ಗಾ, ಕಾಲಭೈರವ, ಚಂದ್ರನಾಥ ಜೈನ ಬಸದಿಗಳಿವೆ. ಕಳಸಕ್ಕೆ ಸಮೀಪದಲ್ಲಿಯೇ ಪ್ರಸಿದ್ಧವಾದ ಅನ್ನಪೂರ್ಣೇಶ್ವರಿ ಕ್ಷೇತ್ರವಿದೆ.
ಕಳಸೇಶ್ವರ ದೇವಾಲಯದಲ್ಲಿದ್ದ ಕಡತಗಳನ್ನು ಕೆಳದಿ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಇವು ಅಪರೂಪದ ಐತಿಹಾಸಿಕ ದಾಖಲೆಗಳಾಗಿವೆ. ಈ ಕಡತಗಳಲ್ಲಿ ದೇವಾಲಯಕ್ಕೆ ಸಂಬಂಧಿಸಿದ ದಿನನಿತ್ಯದ ಲೆಕ್ಕ ಪತ್ರಗಳು, ದೇವಾಲಯಕ್ಕೆ ಬಂದ ಧಾನ್ಯಗಳ ವಿವರಗಳು, ವರ್ಷಂಪ್ರತಿ ನಡೆಯುತ್ತಿದ್ದ ವಿವಿಧ ಉತ್ಸವಗಳ ವಿವರಗಳು, ಉಪಾದಿವಂತರು ತಮ್ಮ ಉಪಾದಿಗಳನ್ನು ಬೇರೆಯವರಿಗೆ ವಹಿಸಿಕೊಟ್ಟ ನಿರೂಪಗಳು ಇತ್ಯಾದಿ ಅನೇಕ ವಿಚಾರಗಳು ದಾಖಲಾಗಿವೆ. ಅವುಗಳಲ್ಲಿ ಉಪಾದಿಗೆ ಸಂಬಂಧಿಸಿದ ಮೂರು ನಿರೂಪಗಳನ್ನು ಆಯ್ದು ಇಲ್ಲಿ ಕೊಡಲಾಗಿದೆ.
ನಿರೂಪ ೧
೧.       ಕಲಸೇಶ್ವರಸ್ವಾಮಿಯವರು
೨.       ಬಾಳೆಹೊಂನ್ನೂರು ವೆಂಕಪ್ಪಗೆ ಬರೆಶಿ ಕಳುಹಿಸಿದ ನಿರೂಪಾ ಸ್ವಸ್ತಶ್ರೀಜಯಾಭ್ಯುದಯಾ
೩.       ಶಾಲಿವಾಹನ ಶಕವರುಷ ೧೭೬೧ನೆ ಪರಿವರ್ತ ಮಾನಕೆ ಸಲ್ಲುವ ವಿಕಾರಿನಾಮಸಂವತ್ಸರದ
೪.       ಮಾಘಶು ೨ ಗುರುವಾರ್ರದಲ್ಲು ಭಂಡಾರದ ಲೇಖಕೆ ಬರೆಸಿಯಿರವದ್ದು ಲಕ್ಕವಳ್ಳಿತ್ತಾಲೂಕ್ಕೂ
೫.       ಆರುವಳಿ ಮಾಗಣೆ ಬೈಸಗಾರ್ರು ಗ್ರಾಮದಲ್ಲು ಯಿರ್ರುವ ಗದೆ ಖ೬ಕ್ಕೆ ಸಿಸ್ತು
೬.       ಗ ೩ಲೂ ಮೂರ್ರುವರಹಾಲು ಆರ್ರು ಹಣವಿನ ಭೂಮಿಯಲ್ಲೂ ನಿನೂ ಸಾಗುವಳಿಮಾ
೭.       ಡುವಗದೆ ಖ||ಂ ಹೆ ಸಿಸ್ತು ಗ ೧೬೦ ೮|= ವರಾಹಾಲು ನಾಲ್ಕು ಹಣೌ ವಂದ್ದು
೮.       ಹಾಗ ಉ ಮೂರ್ರು ವಿಸ ಕಂದಾಯ ಬರ್ರು ಹಣಕ್ಕೆ ಸಂನಿದ್ಧಿಯಲ್ಲು ನಿತ್ಯಗಂ
೯.       ಗಾ ಸ್ನಾನದ ಉಪಾದಿಗೆ ಅಡಿಗಳ ಪುಟ್ಟರಾಮಾಜೋಯಿಸಗೆ ಅಪ್ಪಣೆ ಆಗಬೆಕೆಂ
೧೦.     ದಾಗಿ ಬಿಂನ್ನವವಂ ಮಾಡಿಕೊಂಡದಕ್ಕೆ ನಿನ್ನ ಅಪೆಕ್ಷ ಪ್ರಕಾರ ಪುಟ್ಟರಾಮಾಜೋಯಿಸ
೧೧.     ಗೆ ನಿತ್ಯ ಗಂಗಾಸ್ನಾನದ ಉಪಾದಿ ಬಗೆ ಕಟಲೆ ಮಾಡಿಶಿಯಿರ್ರುತ್ತದೆ| ಯೀಗ ಸಾ
೧೨.     ಗವಳಿ ಆಗಿಯಿರ್ರುವ ಗದ್ದೆ ಸಿಸ್ತಿನ ಹಣ ಹೊರತ್ತೂ ಯಿಂನ್ನೂಯಿರ್ರುವ ಗದ್ದೈ
೧೩.     ಯುಂ ಸಾಗುವಳಿಮಾಡ್ಸಿವುದು ಯೀಗ ಬರ್ರುವ ಹಣ ಗ ೧೬೪||= ವಂದ್ದು ವರ
೧೪.     ಹ ರಾ ಹಾಗೂ ಮೂರ್ರುವೀಸ್ವನ್ನೂ ಯೀಪುಟ್ಟರಾಮಾಜೋಯಿಸ
೧೫.     ಸ್ತು ವಂಶಪಾರಂಪರ್ಯಾವಾಗಿ ಕೊಟ್ಟುಕೊಂದು  ಯಿಂನ್ನೂಯಿರ್ರುವಗದೆ ಸಾಗು
೧೬.     ಂದು ಉತ್ಸವಕೆ ಉಪಯುಕ್ತ ಆಗುವಂತೆ ನಡದ್ದು
ಈ ದಾಖಲೆಯು ಕ್ರಿ.ಶ.೧೮೩೯ರ ಡಿಸೆಂಬರ್ ೮ ಭಾನುವಾರ ತಾರೀಖಿಗೆ ಸಮಾನವಾಗುತ್ತದೆ. ಇಲ್ಲಿ ಉಲ್ಲೇಖಿತವಾಗಿರುವ ಬಾಳೆಹೊನ್ನೂರು ವೆಂಕಪ್ಪ ಎಂಬುವ ವ್ಯಕ್ತಿ ರೆವಿನ್ಯೂ ಅಧಿಕಾರಿಯಾಗಿದ್ದಾನೆ. ಇದರಲ್ಲಿ ಗಂಗಾಸ್ನಾನದ ಉಪಾದಿಯನ್ನು ಅಡಿಗಳ ಪುಟರಾಮಾಜೋಯಿಸಗೆ ವಹಿಸಿಕೊಡುವಂತೆ ಆದೇಶಿಸಲಾಗಿದೆ. ಇದರಲ್ಲಿ ಅವನಿಂದ ಪಡೆಯಬೇಕಾದ ತೆರಿಗೆಗಳ ಭೂಮಿಗಳ ವಿವರಗಳನ್ನು ದಾಖಲಿಸಿಲಾಗಿದೆ.
ನಿರೂಪ -೨
೧.       ಶ್ರೀಕಲಸೇಶ್ವರಸ್ವಮಿಯರ್ರು
೨.       ಆಡುವಳಿ ಮಾಗಣಿಸ್ತಳ ಶಾನಭಾಗವಸ್ತಾರ ಕಳಸೈನಮಗ ರಾಮೈ
೩.       ಗೆ ಬರಶಿ ಕಳುಹಿದ ನಿರೂಪ ಸ್ವಸ್ತಿಶ್ರೀಜಯಾಭ್ಯುದಯ ಶಾಲಿವಾಹನಶಕ
೪.       ವರ್ರುಷ ೧೭೬೧ನೆ ವರ್ತಮಾನಕೆ ಸಲುವ ವಿಕಾರ್ರಿ ನಾಮ ಸಂವತ್ಸರದ ಮಾಘ
೫.       ಶು ೩ಯು ಶುಕ್ರವಾರದಲ್ಲು ಭಂಡಾರದ ಲೆಖಕೆ ಬರೆಶಿಯಿರ್ರುವದೂ
೬.       ನಿಂನ ಮಾಗಣಿ ಪೈಕಿ ಬಾಳೆಹೊಂನೂರ್ರು ವೆಂಕಪ್ಪಯ್ಯನ್ನೂ ಸಾಗುಮಾಡುವ ಬೈ
೭.       ಸ ಗಾರ್ರುಗ್ರಾಮದಲ್ಲು ಉತ್ತಾರ ಗದ್ದೆ ೫೬ಕ್ಕೆ ಸಿಸ್ತು ಗ ೩| ಮೂರ್ರುವರಹಾ
೮.       ಉ ಆರ್ರುಹಣವಿನಲ್ಲು ಗದ್ದೆ ಬಿಜವರ್ರಿ ೫ ೨||೦ ಸಿಸ್ತು ಗ೧೬೪|= ವಂದು
೯.       ವರಹಾಲು ನಾಲ್ಕು ಹಣಾ ಹಾಗೂ ಮೂರ್ರು ವಿಸಕ್ಕೆ ನಿತ್ಯದಲ್ಲೂ ಗಂಗಾಸ್ನಾನದ ಬಗ್ಯೆ
೧೦.     ಅಡಿಗಳ ಪುಟರಾಮಾಜೋಯಿಸರಿಗೆ ಅಪ್ಪಣೆ ಆಗಬೆಕೂಯಂಬದಾಗಿ ಬಾಳೆ
೧೧.     ಹೊಂನ್ನೂರು ವೆಂಕಪ್ಪನು ಅಪೇಕ್ಷೆ ಉಳವನಾಗಿ ಬಿಂನಹಂ ಮಾಡಿ ಕೊಂಡವ
೧೨.     ರ್ರಿಂದ ಅವನ ಅಪೆಕ್ಸೆ ಪ್ರಕಾರ ಗಂಗಾಸ್ನಾನದ ಉಪಾದಿ ಬಗ್ಯೆ ಅಡಿಗಳ ಪುಟರಾಂ
೧೩.     ಮಾ ಜೋಯಿಸಗೆ ಕಾಲಂಪ್ರತಿಯಲ್ಲೂ ಕೊಟ್ಟು ನಡೆಶಿಬರ್ರುವಂತೆ ಕಟಳೆ
೧೪.     ಮಾಡಿಸಿಯಿರ್ರುತ್ತೆ ಯಿiಗ ಸಾಗುವಳಿಯಾಗಿರ್ರುವ ಗದ್ದೆ ಶಿಸ್ತಿನ
೧೫.     ಗಣ ಹೊರತ್ತೂಯಿಂನ್ನೂಯಿರ್ರುವಗದ್ದೆ ಸಾಗುವಳಿ ಮಾಡಿಶಿ ಭಂಡಾ
೧೬.     ರಕೆ ಹಣಬಂದು ಉತ್ಸವಕ್ಕೆ ಉಪಯುಕ್ತ ಆಗುವಂತೆ ಸಹಾ ಬಾಳವ
೧೭.     ದಾಗಿಸದಂ ಇಸ್ತಾಳ ಶ್ಯಾ|ಗು|ಲಕ್ಷ್ಮೀನರಸೈನ ಅಕ್ಷರದಲ್ಲು ಬರಕೊಟ್ಟ ಪಟಿನಕಲು
ಈ ದಾಖಲೆ ಕ್ರಿ.ಶ.೧೮೩೯ ಡಿಸೆಂಬರ್ ೯ ಸೋಮವಾರಕ್ಕೆ ಸರಿ ಹೊಂದುತ್ತದೆ. ಈ ಹಿಂದಿನ ದಾಖಲೆಯಲ್ಲಿ ಗಂಗಾಸ್ನಾನದ ಉಪಾದಿ ಬಗ್ಗೆ ಕೇಳಿಕೊಂಡಿದ್ದಕ್ಕೆ ಉತ್ತರವಾಗಿ ಈ ನಿರೂಪ ಹೊರಟಿದೆ. ಅದರಲ್ಲಿನ ಬೇಡಿಕೆಯನ್ನು ಇಲ್ಲಿ ಬದ್ದ ಆಗಿಸಲಾಗಿದೆ. ಅಡಿಗಳ ಪುಟರಾಮಾ ಜೋಯಿಸರಿಗೆ ಗಂಗಾಸ್ನಾನದ ಉಪಾದಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ವಹಿಸಿಕೊಡಲಾಗಿದೆ. ಇದಕ್ಕಾಗಿ ನೀಡಿದ ಭೂಮಿಯಿಂದ ಬರುವ ಉತ್ಪತ್ತಿಗೆ ಸಂಬಂಧಪಟ್ಟ ತೆರಿಗೆಯನ್ನು ಶ್ರೀಕಳಸೇಶ್ವರ ದೇವಾಲಯದ ಭಂಡಾರಕ್ಕೆ ಒಪ್ಪಿಸುವುದು ಹಾಗೂ ಆ ಹಣವನ್ನು ಉತ್ಸವಗಳಿಗೆ ಬಳಸುವುದು ಎಂದು ಆದೇಶಿಸಲಾಗಿದೆ.
ನಿರೂಪ - ೩
೧.       ಶ್ರೀಕಲಸೇಶ್ವರಸ್ವಾಮಿಯರ್ರು
೨.       ಶಾರ್ವರಿ ಸಂವತ್ಸರದ ಮಾಘಬ ೪ಯು ಕುಜವಾರದಲು ದೆವಸ್ತಾನ ಮಜ್ಜುರ್ರು
೩.       ಮೇಲಿನ ಅಗ್ರಗಾರದಲು ಯಿರ್ರುವ ಶಿಂಗಾಭಟನ ಮಗ ರಾಂಭಟರಿಗೆ ಬರಶಿಕೊಟ ನಿ
೪.       ರ್ರುಪಾ ಅದಾಗಿ ನಂಮ್ಮ ಉತ್ತಾರದ ಸ್ವಾಸ್ತಿವಳಗಣ ಹೊಸಕೆರ್ರೆ ಗ್ರಾಮದ ಪೈಕಿ ನಿಗ
೫.       ದಿ ಮೈಶಿರ್ರಿ ಬಾಬ್ತು ಯಡದಾಳು ಪುಟ್ಟನ ವಗಣಂಗತದಿಂದಾ ವಿರೋಧಿಸಂವ
೬.       ತ್ಸರಲಾಗ್ಯಾತ್ತು ನಾವಗಾಲು ಬಂಜರ್ರುಯಿರ್ರುವ ವಿರಕ್ತಮಠದ ಪ್ರಭುಮಾನ್ಯ ಪಾ
೭.       ಲು ಗದ್ದೆ ಖ೫ ಅಂಕೆ ಸಿಸ್ತು ಪೆಟೆಯಿಂದಾ ಗ ೨ ||||= ಯರಡುವರಹಾರ ಆರ್ರುಹಣ ಯರಡು
೮.       ಯರಡು ಹಾಗ ಯರಡುವೀಸ ಶಿವ್ಯಾ ಮಾವಿನಕೆರ್ರೆ ಗ್ರಾಮದ ಪೈಕಿಬಳಗೂಡು ಐಭಟನೂ
೯.       ಜನಾಯ ಕೊಟಬಾಬ್ತು ಯಡದಾಳಲು ಯಿರ್ರುವ ಗ** ೮||೦ಕೆ ಸಿಸ್ತು ಗ ೨೬೪ ದಿಪದ
೧೦.     ಹೊಂನಬದಿ ಬಾಬ್ತು ಗ ೧೬೦ ಉಭಯಂ ಗ ೨೬೪ ಅಂತ್ತೂ ಗದೆ ಖಂಡ ೧೩||೦ ಗೆ ಸಿಸ್ತು ಗ೫೦||
೧೧.     ದಿಪಾದ ಹೊಂನ ಬದಿ ಗ ೧೬೦ ಉಭಯಂ ಗ೬೬೦||= ಆರ್ರುವರಾಹಾಉ ಯರಡು ಹಾ
೧೨.     ಗ ಉ ಯರಡು ವಿಸದ ಭೂಮಿಯನ್ನು ನನಗೆ ಸಲತಕ ಉಪಾದಿಸಂಬಳಕೆ ಬಾಳುತ್ತಾ
೧೩.     ರಕೆ ಅಪ್ಪಣೆ ಆಗಬೆಕೆಂಬುದಾಗಿ ವಿಳಂಬಿ ಸಂವತ್ಸರದ ವೌಶಾಖ ಶು ೨ ಯು ಗು
೧೪.     ರ್ರುವಾರದಲು ಕೊಪ್ಪದ ಹೋಬಳಿ ಗಂಜಿದಾರ ಕಸ್ತೂರಿ ರಂಗೈಗೆ ಬರಕೊಡು ಅರ್ಜಿ
೧೫.     ಮೆರ್ರಿಗೆ ಯಿತ್ತಾರಿಕಿನಲು ನಿಂನಕೈಯ್ಯಲು ಕಾಣಿಕೆತ್ತೆಗೆದು ಕೊಂಡದು ಯಿಕೆರ್ರಿ ಗ ೨೬೦
೧೬.     ಯರಡು ವರಹಾತ್ತೆಗೆದು ಕೊಂಡು ಯಿಇಸ್ತಳದ ಭೂಮಿಯನ್ನೂ ನಿನಗೆ ಸಲತಕ
೧೭.     ಉಪಾದಿ ಸಂಬಳದ ಬಗ್ಗೈ ಬಾಳುತ್ತಾರಕೆ ದಯಾಪಾಲಿಶಿಯಿರ್ರುವದರ್ರಿಂದಾ ನಿನ್ನು
೧೮.     ಯೀ ಭೂಮಿಯಂನ್ನು ಚೌ ಮೂಲಗಂಧವಾಗಿ ಸಾಗುವಳಿ ಮಾಡಿಕೊಂದು ನಿಂನ
೧೯.     ಸಂತಾನ ಪಾರಂಪರ್ಯವಾಗಿ ಅನುಭವಿಸಿ ಕೊಂಡು ಬಾಹಾದುಯಮ್ದು ಬ
೨೦.     ರಶಿ ಕೊಟ ನಿರ್ರೂಪ.
          ಈ ದಾಖಲೆಯು ಕ್ರಿ.ಶ.೧೮೪೦ರ ಡಿಸೆಂಬರ್ ೧೨ರ ಶನಿವಾರಕ್ಕೆ ಸರಿಹೊಂದುತ್ತದೆ. ಕಳಸ ಅಗ್ರಹಾರದ ಶಿಂಗಾಭಟರ ಮಗ ರಾಮಭಟರಿಗೆ ಬಾಳುತ್ತಾರವನ್ನು ಕಾಣಿಕೆ ತೆಗೆದುಕೊಂಡು ಬರಕೊಟ್ಟಿರುವ ನಿರೂಪದ ಪ್ರತಿ. ಕ್ರಿ.ಶ.೧೮೩೯ರ ಹೇವಿಳಂಬಿ ಸಂವತ್ಸರದ ಏಪ್ರಿಲ್ ೧೫ ಸೋಮವಾರ ಬರೆದುಕೊಂಡ ಅರ್ಜಿಯನ್ನು ಶಾರ್ವರಿ ಸಂವತ್ರ್ಸರದ ಕ್ರಿ.ಶ.೧೮೪೦ರಲ್ಲಿ ಒಪ್ಪಿಗೆ ನೀಡಿ ಆದೇಶಿಸಲಾಗಿದೆ.

   ಕೆಳದಿ ವಸ್ತು ಸಂಗ್ರಹಾಲಯ,
   ಕೆಳದಿ-೫೭೭೪೦೧.







No comments:

Post a Comment