Wednesday, May 15, 2013

ಗ್ರಾಮವೈವಿಧ್ಯ-ಡಾ. ಕೂ.ಸ. ಅಪರ್ಣ


ಗ್ರಂಥೋಕ್ತ ಗ್ರಾಮವೈವಿಧ್ಯ
ಡಾ. ಕೂ.ಸ. ಅಪರ್ಣ
ಗ್ರಾ, ನಗರ, ಖೇಡ, ಖರ್ವಟ ಇತ್ಯಾದಿಗಳನ್ನು ನಾವು ಶಾಸನ ಮತ್ತು ಸಾಹಿತ್ಯಗಳಲ್ಲಿ ಕಾಣುತ್ತೇವೆ. ಜೈನ ಸನ್ಯಾಸಿಗಳು ವಿವಿಧೆಡೆ ಸಂಚಾರ ಮಾಡುವ ಸಂದರ್ಭವನ್ನು ಹೇಳುವಾಗ, ‘ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ ಅಟವ್ಯಾಂ ದಶರಾತ್ರಂ ಎಂಬೀ ನ್ಯಾಯದಿಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಲ್ಲಿ ಎಂಬ ಒಕ್ಕಣೆಯು ದೊರೆಯುತ್ತದೆ.ಅಂತೇ, ಶಾಸನದಲ್ಲೂ ಇದೇ ರೀತಿಯಾಗಿ ‘ಗ್ರಾಮಪುರ ಖೇಡ ಖರ್ವಡ ದ್ರೋಣಾಮುಖಗಳ ಉಲ್ಲೇಖವಿದೆ.ಮೇಲುನೋಟಕ್ಕೆ ಇವು ಸಾಮಾನ್ಯವಾಗಿ ಬಳಸುವ ಪದಗಳೇ ಎನಿಸುವುವಾದರೂ, ಇವುಗಳು ಪಾರಿಭಾಷಿಕ ಪದಗಳಾಗಿದ್ದು, ಗ್ರಂಥಗಳು ಈ ಬಗ್ಗೆ ಅನೇಕ ವಿವರಗಳನ್ನು ನೀಡಿವೆ.
‘ಗ್ರಾಮವೆಂಬುದು ಸಾಮಾನ್ಯ ಶಬ್ದ ಮಾತ್ರವಲ್ಲದೆ, ಪಾರಿಭಾಷಿಕ ಶಬ್ದವೂ ಆಗಿದೆ. ಈ ಗ್ರಾಮಗಳ ಬಗ್ಗೆ ಹೇಳುವ ಗ್ರಂಥಗಳು, ಅವುಗಳ ವಿಸ್ತಾರ, ಅಲ್ಲಿರುವ ಜನತೆ, ಬೀದಿಗಳು, ವಾಸ್ತುಮಂಡಲ, ಆಕಾರ ಇವುಗಳನ್ನು ಮಾತ್ರವಲ್ಲದೆ, ಗ್ರಾಮಗಳಲ್ಲಿರಬೇಕಾದ ಮುಖ್ಯದ್ವಾರಗಳು, ವಸತಿ ವ್ಯವಸ್ಥೆ, ದೇವಾಲಯಗಳ ಸ್ಥಾನ - ಇತ್ಯಾದಿಗಳನ್ನೂ ತಿಳಿಸಿವೆ. ಈ ಬಗ್ಗೆ ಮಯಮತ, ಮಾನಸಾರ ಮುಂತಾದ ಗ್ರಂಥಗಳಲ್ಲಿ ದೊರೆತಿರುವ ವಿವರಗಳನ್ನು ಕೆಲಮಟ್ಟಿಗೆ ನೀಡುವುದೇ ಈ ಲೇಖನದ ಉದ್ದೇಶ.
ಆಕಾರ: ಗ್ರಾಮದ ಭೂಮಿಯು ಚತುರಶ್ರ, ಆಯತ, ತ್ರಿಕೋಣ, ವರ್ತುಲಾಕಾರ ಅಥವಾ ಮರ್ದಲಾಕಾರವಾಗಿದ್ದರೆ ಪ್ರಶಸ್ತವಾದುದೆಂದು ವಿಶ್ವಕರ‍್ಮ ವಾಸ್ತುಶಾಸ್ತ್ರವು ಹೇಳಿದೆ.ಹಾಗಿಲ್ಲದೆ, ಮೇಲೆ ಕೆಳಗೆ ಇರುವ (ಅಂದರೆ ಸಮತಟ್ಟಾಗಿರದ) ಭೂಮಿ, ಶಿಖರ ಹೀನ / ಶಿರೋಹೀನ ಭೂಮಿ ಹಾಗೂ ವಕ್ರಾಕೃತಿಯಲ್ಲಿರುವ ಭೂಮಿಯು ವರ್ಜ್ಯವಾದುದು ಎಂದು ಅದೇ ಗ್ರಂಥವು ಹೇಳಿದೆ.
ನಕ್ಷೆ: ಗ್ರಾಮನಕ್ಷೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಬೆಸಸಂಖ್ಯೆಯ ಅಥವಾ ಸಮಸಂಖ್ಯೆ ವಾಸ್ತುಮಂಡಲವನ್ನು ಇದಕ್ಕೆ ಬಳಸಬಹುದಾಗಿದೆ.ಇದಕ್ಕಾಗಿ ಸಕಲ, ಆಸನ ಯಾವುದೇ ನಕ್ಷೆಯೂ ಸೂಕ್ತವೆನಿಸಿದ್ದು, ಇವು ಕ್ರಮವಾಗಿ ಒಂದು ಮತ್ತು ನೂರು ಪದಸಂಖ್ಯೆಯ ನಕ್ಷೆಗಳಾಗಿವೆ.ಕೆಲವೆಡೆ, ಆಯಾ ಗ್ರಾಮದ ಆಕಾರ / ಪ್ರಕಾರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ವಿಧದ ವಸ್ತುನಕ್ಷೆಯನ್ನು ಹೇಳಲಾಗಿದೆ. ಇದರಂತೆ ಚಂಡಿತ / ಮಂಡೂಕ ಅಥವಾ ಸ್ಥಂಡಿಲ, ಪರಮಶಾಯಿಕಾ, ಪೇಚಕ / ಪೀಠ ಮುಂತಾದ ನಕ್ಷೆ / ವಾಸ್ತುಮಂಡಲವನ್ನು ಗ್ರಂಥಗಳು ಉಲ್ಲೇಖಿಸಿವೆ. ಈ ನಕ್ಷೆಗಳ ಮಧ್ಯದ ಸ್ಥಾನವು ಬ್ರಹ್ಮನ ಸ್ಥಾನವಾಗಿದ್ದರೆ, ಇದರ ನಂತರ, ಸುತ್ತ ಒಂದಾದ ಮೇಲೊಂದರಂತೆ ಕ್ರಮವಾಗಿ ದೈವಕ, ಮಾನುಷ ಮತ್ತು ಪೈಶಾಚ ಸ್ಥಾನಗಳು ಇರುತ್ತವೆ.
ಅಳತೆ: ಗ್ರಾಮ, ನಗರ, ಖೇಟ, ಖರ್ವಟ ಇತ್ಯಾದಿಗಳನ್ನು ‘ದಂಡದಿಂದ (Poes) ಅಳೆಯಬೇಕೆಂದೂ, ಅದನ್ನು ‘ಧನುರ್ಗ್ರಹ ಎಂದು ‘ದಂಡದಿಂದ (ಅಳೆಯಬೇಕೆಂದು) ಗ್ರಂಥಗಳೂ ಹೇಳಿವೆ. ಒಂದು ಹಸ್ತವು ಕಿಷ್ಕು (ubi) ಎನಿಸಿದ್ದು, ೪ ಹಸ್ತವು ಒಂದು ‘ದಂಡ ಎನಿಸುತ್ತದೆ. ಅಂಗುಲವೆಂದರೆ ಒಂದು ಕಿಷ್ಕು (ಹಸ್ತ) ಎಂದೂ, ‘ಚತುರ್ಗುಣ ವೆಂದಾಗ, ಒಂದು ದಂಡವೆಂದೂ ವಿಮಾನಾರ್ಚನ ಕಲ್ಪದಲ್ಲಿದೆ.೧೦ ಆದರೆ, ಇದರಲ್ಲಿ ‘ಗುಣದ ಅಳತೆಯ ಬಗ್ಗೆ ಹೇಳಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ೮ ಕಂಸ/ಕಿಷ್ಕು ಅಥವಾ ೮ ಪ್ರಾಜಾಪತ್ಯಹಸ್ತವು (=೬೪ ಅಂಗುಲದ ಹಸ್ತ) ಒಂದು ದಂಡಕ್ಕೆ ಸಮ ಎಂದಿದೆ. (ಇದನ್ನು ಬ್ರಾಹ್ಮಣರಿಗೆ ಬಿಡುವ ಭೂಮಿಯ ಅಳತೆಗೆ ಬಳಸಿ ಎಂದಿದೆ)೧೧. ಇದೇ ಕೃತಿಯ ಅಡಿಟಿಪ್ಪಣಿಯಲ್ಲಿ ಒಂದೆಡೆ, ೪೨ ಅಂಗುಲವೆಂದರೆ ಒಂದು ಹಸ್ತ ಮತ್ತು ೪ ಹಸ್ತವೆಂದರೆ ಒಂದು ದಂಡ (=೧೬೮ ಅಂಗುಲ) ಎಂದೂ ಸ್ಪಷ್ಟಪಡಿಸಿದೆ೧೨. ಇದರಲ್ಲಿ ಒಂದು ‘ಧನುರ್ಗ್ರಹ ಅಥವಾ ೨೮ ಅಂಗುಲದ ಹಸ್ತವು, ದನ ಮೇಯಲು ಬಿಡುವ ಭೂಮಿಯ ಅಳತೆಗೆ ಬಳಸಬೇಕು೧೩ ಎಂದಿದೆಯೇ ಹೊರತು ಗ್ರಾಮದ ಅಳತೆಗೆ ಹೇಳಿಲ್ಲ. ಧನುರ್ಗ್ರಹ ದಂಡದಲ್ಲಿ ೨೭ ಅಂಗುಲಗಳಿರುವುದಾಗಿ ಒಂದೆಡೆ ಹೇಳಿದೆ೧೪. ಹೀಗಿದ್ದರೂ, ವಿವರಣೆ ನೀಡುವಾಗ ಗ್ರಂಥಗಳು ‘ದಂಡದಿಂದ ಅಳೆಯಬೇಕೆಂದಷ್ಟೇ ಹೇಳಿದ್ದು, ಕೆಲವೆಡೆ ‘ಧನುರ್ಗ್ರಹ ದಂಡದಿಂದ ಗ್ರಾಮವನ್ನು ಅಳೆಯಬೇಕೆಂದು ಸ್ಪಷ್ಟವಾಗಿದೆ೧೫.
ವಿಸ್ತಾರ: ಮಯಮತದಂತೆ, ದೊಡ್ಡ ಗ್ರಾಮವೆಂದರೆ, ಒಂದು ಲಕ್ಷದಂಡದಷ್ಟು ವಿಸ್ತಾರವಾಗಿರುವುದು.೧೬ ಇದರ ಆರಂಭದ ಚಿಕ್ಕ ಅಳತೆಯು ೨೦೦೦ ದಂಡ ಆಗಿದ್ದು, ೨೦೦೦೦ ದಂಡ ಅಳತೆಯನ್ನು ೫ ಬಾರಿ ಹೆಚ್ಚಿಸಿಕೊಂಡು  ಹೋಗುವುದರಿಂದ ೫ ರೀತಿಯ ವಿಸ್ತಾರವು ಬರುತ್ತದೆ. ಗ್ರಾಮದ ಚಿಕ್ಕ ಅಳತೆಯೆಂದರೆ, ೫೦೦ ದಂಡ ವಿಸ್ತಾರವಾಗಿರುವುದು, ಈ ಆರಂಭದ ಅಳತೆಯಿಂದ ೫೦೦ ದಂಡ ಹೆಚ್ಚಿಸಿಕೊಂಡು ಹೋಗುವುದರಿಂದ ೨೦೦೦೦ ದಂಡದವರೆಗೆ ೪೦ ರೀತಿಯ ವಿಸ್ತಾರವು ಬರುತ್ತದೆ೧೭. ಇದೇ ಗ್ರಂಥದಲ್ಲಿ ಇನ್ನೊಂದೆಡೆ, ಇನ್ನೂ ಚಿಕ್ಕದಾದ ೨೦೦೦ ದಂಡದಿಂದ ೩೦೦ ದಂಡ ವಿಸ್ತಾರವುಳ್ಳ ಗ್ರಾಮದ ಬಗ್ಗೆ ಹೇಳಿದೆ೧೮. ‘ಕುಟುಂಬಾವನಿಯ ಭಾಗವು ಗ್ರಾಮದ ೧/೨೦ನೇ ಭಾಗವಾಗಿರುತ್ತದೆ, ಅಂದರೆ, ೨೫೬೦ ದಂಡ ವಿಸ್ತಾರದ್ದಾಗಿದ್ದು, ಇದು ಗ್ರಾಮದಲ್ಲಿನ ಕುಟುಂಬ ನಿವೇಶನಕ್ಕೆ ಸೂಕ್ತವಾಗಿರುತ್ತದೆ೧೯. ಇವುಗಳಲ್ಲಿ ನಿಯಮದಂತೆ ದಂಡವನ್ನು ಹೆಚ್ಚಿಸಿಕೊಂಡು ಹೋಗುವುದರಿಂದ ವಿವಿಧ ವಿಸ್ತಾರದ ಗ್ರಾಮವನ್ನು ನಿರ‍್ಮಿಸಬಹುದು೨೦. ಅಂತೇ ನಗರದ ದೊಡ್ಡ ವಿಸ್ತಾರವೆಂದರೆ, ಎಂಟು ಸಾವಿರ ದಂಡ೨೧, ಚಿಕ್ಕದೆಂದರೆ ಎರಡು ಸಾವಿರ ಇದರಲ್ಲಿ ೨೦೦೦ ದಂಡವನ್ನು ಇಳಿಸುತ್ತಾ ಹೋದಲ್ಲಿ, ನಗರದ ೪ ರೀತಿಯ ವಿಸ್ತಾರವನ್ನು ಪಡೆಯಬಹುದು೨೨.
ವಿಸ್ತಾರ ಮತ್ತು ವಿವಿಧ ಪ್ರಕಾರಗಳು
ಮಯಮತದಲ್ಲಿ, ಗ್ರಾಮ, ಖೇಟ, ಖರ್ವಡ, ದುರ್ಗ, ನಗರಗಳನ್ನು ವಿಸ್ತಾರದ ಆಧಾರದಿಂದ ಬೇರೆ ಬೇರೆ ರೀತಿಯಾಗಿ ಹೇಳಿದೆ೨೩. ಇವುಗಳಲ್ಲಿ ಒಂದೊಂದರಲ್ಲೂ ಕ್ಷುದ್ರ, ಮಧ್ಯಮ, ಉತ್ತಮ ಎಂದು ಮರು ವಿಂಗಡಣೆ ಇದೆ. ಅದರಂತೆ ‘ಗ್ರಾಮಗಳಲ್ಲಿ ‘ಕ್ಷುದ್ರಗ್ರಾಮದ ವಿಸ್ತಾರವು ೬೪ ದಂಡ ಮತ್ತು ಮಧ್ಯಮ ಗ್ರಾಮದ ವಿಸ್ತಾರವು ೧೨೮ ದಂಡ ಇರುತ್ತದೆ. ಮತ್ತು ಉತ್ತಮ ಗ್ರಾಮದ ವಿಸ್ತಾರವು ೧೯೨ ದಂಡ ಇರುವುದು. ಅಂದರೆ, ಕ್ಷುದ್ರ ಗ್ರಾಮದ ಎರಡರಷ್ಟು ಮತ್ತು ಮೂರರಷ್ಟು ವಿಸ್ತಾರವಾಗಿರುವುದು. ‘ಖೇಟ ರೀತಿಯ ಗ್ರಾಮದ ವಿಸ್ತಾರವು ಕ್ರಮವಾಗಿ ೨೫೬,೨೪ ೩೨೦ ಮತ್ತು ೩೮೪ ದಂಡ ಇದ್ದು, ಅವು ಇವೇ ‘ದಂಡಗಳ ಆಧಾರದಿಂದ ಕ್ಷುದ್ರ, ಮಧ್ಯಮ, ಹಾಗೂ ಉತ್ತಮ ರೀತಿಗೆ ಕ್ರಮವಾಗಿ ಸೇರುತ್ತವೆ.  ‘ಖರ್ವಡದಲ್ಲಿ ಚಿಕ್ಕದು ೪೪೮ ‘ದಂಡದಷ್ಟೂ  ಮಧ್ಯಮದ್ದು ೫೧೨ ದಂಡದಷ್ಟು ಹಾಗೂ ವಿಸ್ತಾರವಾಗಿರುತ್ತದೆ. ‘ದುರ್ಗ ರೀತಿಯ ಗ್ರಾಮದಲ್ಲಿ ವಿಸ್ತಾರವು ೬೪೦,೭೦೪,೭೬೮ ದಂಡಗಳು ಕ್ರಮವಾಗಿ ಇರುತ್ತವೆ. ಅಂತೇ, ನಗರ ರೀತಿಯ ಗ್ರಾಮದ ವಿಸ್ತಾರವು ಕ್ಷುದ್ರಗ್ರಾಮವಾದಲ್ಲಿ ೮೩೨ ದಂಡಗಳೂ, ‘ಮಧ್ಯಮದಲ್ಲಿ ೮೯೬ ದಂಡಗಳೂ, ಉತ್ತಮ ಗ್ರಾಮದಲ್ಲಿ ೯೬೦ ದಂಡಗಳೂ ಇರುತ್ತವೆ೨೫. ಈ ಎಲ್ಲ ರೀತಿಗಳಲ್ಲಿ ಒಂದೊಂದರ ನಡುವೆಯೂ ೬೪ ದಂಡಗಳ ವ್ಯತ್ಯಾಸವಿರುವುದನ್ನಿಲ್ಲಿ ಗಮನಿಸಬಹುದು. ಇದರಲ್ಲೇ ೬೪ರ ಬದಲು ೧೬ ದಂಡ ಹೆಚ್ಚಿಸುತ್ತಾ ಹೋದರೆ, ಪ್ರತಿಯೊಂದಕ್ಕೂ ಇನ್ನೂ ೯ ರೀತಿಯ ಅಳತೆಯು ದೊರೆಯವುದೆಂದೂ ಇದರಲ್ಲಿದೆ೨೬. ಇವುಗಳ ಉದ್ದವು ವಿಸ್ತಾರದ ಎರಡರಷ್ಟು, ಮುಕ್ಕಾಲೂ ಅರ್ಧ ಅಥವಾ ಕಾಲುಭಾಗದಷ್ಟು ಹೆಚ್ಚಾಗಿರಬೇಕು ಅಥವಾ ೬/೮ನೇ ಅಷ್ಟು ಹೆಚ್ಚಾಗಿರಬಹುದು ಅಥವಾ ಅದು ಚೌಕಾಕಾರವಾಗಿದ್ದು, ಉದ್ದವು ಅಗಲಕ್ಕೆ ಸಮನಾಗಿರಬಹುದು. ಇವುಗಳಲ್ಲಿ, ಉದ್ದ ಮತ್ತು ಅಗಲದ ಅಳತೆಯನ್ನು ಬೆಸಸಂಖ್ಯೆಯ ದಂಡಗಳಿಂದ ಗುರುತಿಸಲಾಗುತ್ತದೆ, ನಂತರ ಉಳಿದದ್ದು ನಿರ್ಮಾಣ ರಹಿತವಾಗಿರಬೇಕು. ಈ ಕ್ರಮವು ಗ್ರಾಮ ಇತ್ಯಾದಿ ಎಲ್ಲಾ ನಿವೇಶನಗಳಿಗೂ ಅನ್ವಯಿಸುವುದು. ಗ್ರಾಮವಾಗಲೀ, ಗೃಹವಾಗಲೀ ‘ದಂಡದ ಪೂರ್ನ ಸಂಖ್ಯೆಯನ್ನು ಉಪಯೋಗಿಸಬೇಕು (೧೬, ೬೪, ೭೦೪ ಇ.); ಛೇದಿಸಬಾರದು ಎಂದೂ ಮಯಮತದಲ್ಲಿದೆ೨೭.
ಬ್ರಾಹ್ಮಣರ ಸಂಖ್ಯೆ ಮತ್ತು ವಿವಿಧ ಪ್ರಕಾರಗಳು
ಗ್ರಾಮದಲ್ಲಿರುವ ಬ್ರಾಹ್ಮಣರ ಸಂಖ್ಯೆಯ ಆಧಾರದಿಂದ ವಿವಿಧ ಪ್ರಕಾರದ ಗ್ರಾಮಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಉತ್ತಮ, ಮಧ್ಯಮ ಮತ್ತು ಅಧಮ ಎಂದು ೩ ಪ್ರಕಾರಗಳಿದ್ದು, ಅವುಗಳೊಂದೊಂದರಲ್ಲೂ ಉಪ ಪ್ರಕಾರಗಳಿವೆ. ಮಯಮತದಂತೆ, ‘ಉತ್ತಮೋತ್ತಮ ಗ್ರಾಮದಲ್ಲಿ ೧೨೦೦೦ ಬ್ರಾಹ್ಮಣರೂ, ಅದೇ ಮಧ್ಯಮ ಗ್ರಾಮದಲ್ಲಿ ೧೦೦೦೦ ಬ್ರಾಹ್ಮಣರೂ, ‘ಅಧಮ ಗ್ರಾಮದಲ್ಲಿ ೮೦೦೦ ಬ್ರಾಹ್ಮಣರೂ ಇರುತ್ತಾರೆ. ಅಂತೇ, ೭೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಮಧ್ಯಮೋತ್ತಮವೆಂದೂ, ಅದೇ ೬೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಮಧ್ಯಮವೆಂದೂ, ೫೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಅಧಮವೆಂದೂ ಕರೆದಿದೆ. ಇದೇ ರೀತಿ ೪೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಅಧಮೋತ್ತಮ ಎಂದೂ ೩೦೦೦ ಬ್ರಾಹ್ಮಣರಿದ್ದರೆ ‘ಅಧಮ ಸಮ ಗ್ರಾಮವೆಂದೂ ೨೦೦೦ ಬ್ರಾಹ್ಮಣರಿದ್ದರೆ ಅದಕ್ಕೆ ‘ಅಧಮಾಧಮ ಗ್ರಾಮ ಎಂದೂ ಹೆಸರಿಸಿದೆ. ಇದರೊಂದಿಗೆ, ೧೦೦೦ ಬ್ರಾಹ್ಮಣರಿರುವ ಗ್ರಾಮವು ‘ನೀಚೋತ್ತಮ; ೭೦೦ ಬ್ರಾಹ್ಮಣರಿರುವ ಗ್ರಾಮವು ‘ಅಧಮ ಮಧ್ಯಮ ಹಾಗೂ ೫೦೦ ಬ್ರಾಹ್ಮಣರಿರುವ ಗ್ರಾಮವು ‘ನೀಚಾಲ್ಪ ಗ್ರಾಮ ಎನಿಸುತ್ತದೆ೨೮. ಇಲ್ಲಿ ‘ಉತ್ತಮ ಪ್ರಕಾರದಲ್ಲಿನ ಮೂರು ಉಪಪ್ರಕಾರಗಳ ನಡುವೆ ೨೦೦೦ ಬ್ರಾಹ್ಮಣ ಸಂಖ್ಯೆಯ ವ್ಯತ್ಯಾಸವಿದೆ, ‘ಮಧ್ಯಮ ಮತ್ತು ‘ಅಧಮ ರೀತಿಗಳ ಮೂರು ಉಪಪ್ರಕಾರಗಳ, ನಡುವೆ ೧೦೦೦ ಬ್ರಾಹ್ಮಣ ಸಂಖ್ಯೆಯ ವ್ಯತ್ಯಾಸವಿದೆ; ಅಂತೇ, ‘ನೀಚ ರೀತಿಯ ಉಪಪ್ರಕಾರಗಳ ನಡುವೆ ಕ್ರಮವಾಗಿ ೩೦೦ ಮತ್ತು ೨೦೦ ಸಂಖ್ಯೆಯ ವ್ಯತ್ಯಾಸವಿದೆ.
ಇನ್ನೂ ಹತ್ತು ರೀತಿಯ ಸಣ್ಣ ಗ್ರಾಮಗಳನ್ನು ಮಯಮತವು ಗುರುತಿಸಿದೆ. ಇಂತಹ ಗ್ರಾಮಗಳಲ್ಲಿ ಬ್ರಾಹ್ಮಣರ ಮನೆಗಳು ಕ್ರಮವಾಗಿ ೩೨೪, ೨೧೬, ೧೦೮, ೮೪, ೬೪, ೫೦, ೩೨, ೨೪, ೧೬ ಹಾಗೂ ೧೨ ಕ್ರಮವಾಗಿ ಇರುವುವು೨೯. ಯಾವ ಗ್ರಾಮದಲ್ಲಿ ಒಂದೇ ಒಂದು ಬ್ರಾಹ್ಮಣರ ಮನೆ ಇರುವುದೋ ಅದಕ್ಕೇ ‘ಕುಟಿಕ ಅಥವಾ ‘ಏಕಭೋಗ ಎಂದು ಹೆಸರು೩೦ ಬೇರೆ ಏನೂ ಸಾಧ್ಯವಿಲ್ಲವಾದರೆ, ೧ರಿಂದ ೧೦ ಬ್ರಾಹ್ಮಣರಿಗೆ ಭೂದಾನ ಮಾಡಬಹುದು೩೧.
ಕಾಮಿಕಾಗಮದಲ್ಲೂ ಈ ಬಗ್ಗೆ ವಿವರವಿದೆ. ಇದರಂತೆ ಗ್ರಾಮಗಳಲ್ಲಿ, ಜ್ಯೇಷ್ಠ, ಮಧ್ಯ, ಕನಿಷ್ಠ ಮತ್ತು ಕ್ಷುದ್ರ ಎಂದು ನಾಲ್ಕು ವಿಧಗಳಿವೆ. ಈ ಒಂದೊಂದರಲ್ಲೂ ಬ್ರಾಹ್ಮಣ ವರ್ಗದ ಪ್ರಮಾಣ ಅನುಸರಿಸಿ ೯ ರೀತಿಗಳಿವೆ:
ಬ್ರಾಹ್ಮಣರ ಸಂಖ್ಯೆ ೧೪೦೦೦ದಿಂದ ೬೦೦೦ ದವರೆಗಿರುತ್ತದೆ. ‘ಜ್ಯೇಷ್ಠ ರೀತಿಯಲ್ಲಿ ಬ್ರಾಹ್ಮಣರ ಸಂಖ್ಯೆ ೫೦೦೦ದಿಂದ ೧೦೦೦ದವರೆಗಿರುತ್ತದೆ. ಕೊನೆಯದು ಸಹಸ್ರಹೀನವಾಗಿರುತ್ತದೆ. ‘ಮಧ್ಯಮದಲ್ಲಿ ೯೦೦ರಿಂದ ೫೦ರವರೆಗೆ ಬ್ರಾಹ್ಮಣರಿರುತ್ತಾರೆ. ಕೊನೆಯದಾದ ೯ನೇ ವಿಧದ ಗ್ರಾಮದಲ್ಲಿ ೫೦ ಬ್ರಾಹ್ಮಣರಿರುತ್ತಾರೆ. ೫೦ಕ್ಕಿಂತ ಕಡಿಮೆ ಸಂಖ್ಯೆಯ ಬ್ರಾಹ್ಮಣರಿದ್ದಲ್ಲಿ ಆ ಗ್ರಾಮವು ‘ಕನಿಷ್ಠ ಮತ್ತು ‘ಕ್ಷುದ್ರ ಪ್ರಕಾರಕ್ಕೆ ಸೇರುತ್ತದೆ. ೧೦೮ರಿಂದ ಆರಂಭಿಸಿ ೧೦ರಂತೆ ಹೆಚ್ಚಿಸುತ್ತಿರಬಹುದು(?)೩೨ ೫ರಂತೆ ಹೆಚ್ಚಿಸುತ್ತಿರಬಹುದು, ಆದರೆ ಅದು ೧೦ರಲ್ಲಿ ಕೊನೆಯಾಗಬೇಕು. ೩೨, ೨೪, ೧೬, ೧೨, ಅಥವಾ ೪, , ೧೦ - ಹೀಗೂ ಇರಬಹುದು೩೩.
ಗ್ರಾಮಗಳ ವಿಶೇಷ ವರ್ಗಿಕರಣ: (ಗ್ರಾಮಭೇದಾ) ಇನ್ನೊಂದು ರೀತಿಯ ವರ್ಗೀಕರಣದಂತೆ, ಗ್ರಾಮದಲ್ಲಿ ಬ್ರಾಹ್ಮಣರ ಮನೆಗಳು ಮಾತ್ರವೇ ಇದ್ದರೆ, (ದ್ವಿಜಕುಲ ಪರಿಪೂರ್ಣ) ಅದಕ್ಕೆ ‘ಮಂಗಲ ಎಂದು ಹೆಸರು, ರಾಜ ಮತ್ತು ವ್ಯಾಪಾರಿಗಳು ಅಲ್ಲಿದ್ದರೆ - ಅದಕ್ಕೆ ‘ಪುರ ಎಂದು ಹೆಸರು, ಬೇರೆ ಬೇರೆ ಜನಗಳಿಂದ ಕೂಡಿದ್ದರೆ ಅದಕ್ಕೆ ‘ಗ್ರಾಮ ಎಂದು ಹೆಸರು; ಸನ್ಯಾಸಿಗಳಿರುವುದು. ‘ಮಠ೩೪ ಇಲ್ಲಿ ‘ಮಠ ಎಂದಾಗ, ಪೂರ್ತಿ ಊರನ್ನೇ ಹೇಳಿದಂತಾಗಿದೆ.
ಕಾಮಿಕಾಗಮದಲ್ಲಿ ಉದ್ದೇಶಪೂರಿತವಾಗಿ ಕರೆತಂದ ವೇದವಿದರಾದ ಬ್ರಾಹ್ಮಣರು ಅನುಭವಿಸುವ ಗ್ರಾಮವೇ ‘ಮಂಗಲ ಅಥವಾ ‘ಅಗ್ರಹಾರ ಎಂದಿದೆ, ಅಲ್ಲಿ ವಿಪ್ರರು ಮತ್ತು ಬೇರೆ ವರ್ಣದವರೂ ಇದ್ದರೆ, ಅದು ‘ಗ್ರಾಮ ಒಂದು ಬ್ರಾಹ್ಮಣರ ಮನೆ ಮಾತ್ರವಿದ್ದು, ಪರಿಚಾರಕರೂ ಇದ್ದರೆ, ಅದು ‘ಕುಟಿಕ ಅಥವಾ ‘ಏಕಭೋಗ ಜನಗಳಿಂದ ತುಂಬಿದ್ದು, ಕ್ರಯ-ವಿಕ್ರಯಗಳಿಂದ ಕೂಡಿದ್ದು, ಕರ್ಮಚಾರಿಗಳಿದ್ದು, ಸರ್ವದೇವತೆಗಳಿಂದ ಕೂಡಿದ್ದರೆ, ಅದು - ನಗರ, ಅರಣ್ಯ ಸರೋವರದ ಹತ್ತಿರವಿದ್ದು, ವ್ಯಾಪಾರ ನಡೆಯುತ್ತಿದ್ದು, ಹೊರ ದೇಶದಿಂದ ಜನ/ವಸ್ತು ಬರುತ್ತಿದ್ದರೆ, ಅದು ‘ಪಟ್ಟಣ ಎಂದೂ ಅದು ಹೇಳಿದೆ.೩೫ ಬ್ರಾಹ್ಮಣರಿಗೆ ಯುಕ್ತವಾದ ‘ದಂಡಕ ಪ್ರಕಾರದ ಗ್ರಾಮದ ಬಗ್ಗೆ ಹೇಳುವಾಗ ಮಾನಸಾರದಲ್ಲಿ ೨೪ ಯತಿಗಳಿಂದ ಕೂಡಿದ್ದರೆ, ಅದು ‘ಗ್ರಾಮ  ನದೀ ದಂಡೆಯ ಮೇಲಿದ್ದರೆ - ಅದು ‘ಪುರ; ೫೦ ದೀಕ್ಷಿತರಿದ್ದರೆ ಅದು ‘ನಗರ ೫೮ ಬ್ರಾಹ್ಮಣರ ಮನೆಗಳಿದ್ದರೆ ಅದು ‘ಮಂಗಲ ಹಾಗೂ ನೂರು ಬ್ರಾಹ್ಮಣರ ಮನೆಗಳಿದ್ದರೆ ಅದು ‘ಕೋಷ್ಠ; ಬೇರೆ ಬ್ರಾಹ್ಮಣರ ಸಮೂಹವಿದ್ದರೆ, ಅವರಿಗೆ ಬೇಕಾದಂತೆ ಹೆಸರಿಡಬಹುದು ಎಂದು ಹೇಳಿದ್ದು, ಇಲ್ಲಿ ಹೇಳದೇ ಇರುವುದನ್ನು ಶಾಸ್ತ್ರದ ನಿಯಮದಂತೆ (ಸ್ಥಳೀಯ ಪದ್ಧತಿಯಂತೆ) ಮಾಡಬೇಕೆಂದೂ ಹೇಳಲಾಗಿದೆ೩೬. ಅಂತೇ, (ನಂದ್ಯಾವರ್ತ ಪ್ರಕಾರದ ಗ್ರಾಮದಲ್ಲಿ) ಬ್ರಾಹ್ಮಣರೋ ಇದ್ದರೆ ಆದು ‘ಮಂಗಲ ಕ್ಷತ್ರಿಯ, ವೈಶ್ಯ, ಶೂದ್ರರಿದ್ದರೆ ‘ಪುರ ವೈಶ್ಯ, ಶೂದ್ರರಿದ್ದರೆ (ಬ್ರಾಹ್ಮಣರೊಂದಿಗೆ?) ‘ಅಗ್ರಹಾರ ಎನಿಸುವುದು.೩೭
ವಿಮಾನಾರ್ಚನ ಕಲ್ಪದ ವಿವರಣೆಗಳು ಇಂತಿವೆ
ಬ್ರಾಹ್ಮಣರು, ಸೇವಕರುಗಳಿದ್ದರೆ ‘ಗ್ರಾಮ; ಬ್ರಾಹ್ಮಣರು ಹೆಚ್ಚಾಗಿ ಮುಖ್ಯವಾಗಿ ಇದ್ದರೆ ‘ಅಗ್ರಹಾರ ಅನೇಕ ಜನ... ಇದ್ದು ಅನೇಕ ಶಿಲ್ಪಿಗಳೂ ಇದ್ದು, ಕ್ರಮವಿಕ್ರಯಗಳು ನಡೆಯುತ್ತಿದ್ದು, ಎಲ್ಲಾ ದೇವತೆಗಳಿಂದ ಕೂಡಿದ್ದರೆ, ಅದು ‘ನಗರ’; ಬೇರೆ ಬೇರೆ ದ್ವೀಪಗಳಿಂದ, ಬಂದ ವಸ್ತುಗಳನ್ನು ಕೊಳ್ಳುವುದು ಮಾರುವುದು ಇದ್ದಲ್ಲಿ ಅದು ‘ಪಟ್ಟಣ; ಬ್ರಾಹ್ಮಣರ ಒಂದು ಪರಿವಾರ ಮಾತ್ರವೇ ಇದ್ದರೆ, ಅದು ‘ಕುಟಕ೩೮.
ಇವಿಷ್ಟೇ ಅಲ್ಲದೆ, ಗ್ರಾಮದಲ್ಲಿನ ವಿವಿಧ ಮಾರ್ಗಗಳ ಸಂಖ್ಯೆ ಮತ್ತು ದಿಕ್ಕು, ಗ್ರಾಮದ ವಸತಿ ವ್ಯವಸ್ಥೆ, ವೃತ್ತಿಪರರ ಸ್ಥಳ, ದೇವಾಲಯಗಳ ಸ್ಥಾನ ಇತ್ಯಾದಿಗಳ ಪೂರ್ಣ ವಿವರಗಳನ್ನೊಳಗೊಂಡ, ಗ್ರಾಮಗಳ ಪ್ರಧಾನ ಪ್ರಕಾರಗಳನ್ನೂ ಗ್ರಂಥಗಳು, ವಿಶೇಷವಾಗಿ ಮಾನಸಾರವು, ಗುರುತಿಸಿ, ವಿವರ ನೀಡಿದೆ. ಬಹುಶಃ ಈ ಕಾರಣವಾಗಿಯೇ ಮಾನಸಾರದಲ್ಲಿ ಗ್ರಾಮಗಳ ಕೆಲವು ಸಾಮಾನ್ಯ ವಿಷಯಗಳು, ಇತರ ಗ್ರಂಥಗಳಂತೆ ಪ್ರತ್ಯೇಕ್ಷವಾಗಿ ದೊರೆಯುವುದಿಲ್ಲ. ಉದಾ: ಗೆ, ಮೇಲೆ ಹೇಳಿದಂತೆ ದಂಡಕ ನಂದ್ಯಾವರ್ತ ಪ್ರಕಾರದ ಗ್ರಾಮದ ಬಗ್ಗೆ ಹೇಳುವಾಗ, ಗ್ರಾಮಗಳ ವಿಶೇಷ ವರ್ಗೀಕರಣ (ಗ್ರಾಮಭೇದಾಃ)ವನ್ನು ಹೇಳಿದೆ; ಗ್ರಾಮಗಳಲ್ಲಿನ ಬ್ರಾಹ್ಮಣರ ಸಂಖ್ಯೆಯ ಬಗ್ಗೆಯೂ ಅವೇ ಸಂದರ್ಭಗಳಲ್ಲಿ ಹೇಳಿದೆ.೩೯
ಶಾಸನಗಳಲ್ಲಿರುವ ವಿವಿಧ ರೀತಿಯ ಉಲ್ಲೇಖಗಳನ್ನು ಗಮನಿಸಿದರೆ, ಗ್ರಂಥಗಳಿಂದ ಇನ್ನೂ ಹೆಚ್ಚಿನ ವಿವರಗಳ ಅವಶ್ಯಕತೆ ಇದೆ ಎನಿಸುತ್ತದೆ. ಶಾಸನಗಳಲ್ಲಿ ದೊರೆಯುವ ಮಂಗಲ, ಅಗ್ರಹಾರ, ಪುರ ಇತ್ಯಾದಿಗಳ ಬಗ್ಗೆ ಗ್ರಂಥಗಳ ಹಿನ್ನೆಲೆಯಲ್ಲಿ ಇನ್ನೂ ಅಧ್ಯಯನ ನಡೆಯಬೇಕಾಗಿದೆ.
 ಡಾ.ಕೂ.ಸ ಅಪರ್ಣ
 ೧೬೭೬, ೫ನೇ ‘ಎ ಅಡ್ಡರಸ್ತೆ,
೧೦ನೇ ಮುಖ್ಯರಸ್ತೆ, ಬನಶಂಕರಿ ಮೊದಲನೇ ಹಂತ
ಬೆಂಗಳೂರು-೫೬೦೦೫೦.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.           ವಡ್ಡರಾಧನೆ (ಉದ್ಧೃತ) ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪುಟ ೧೪೪.
೨.         ಎ.ಕ., Iಘಿ, ಬೆಂಗಳೂರು-೯೫ (ರೈಸ್ ಆವೃತ್ತಿ), ಸುಮಾರು ಕ್ರಿ.ಶ. ೯೫೦.
೩.         ೭.೩, ಪಿ.ಕೆ. ಆಚಾರ‍್ಯ., ಮಾನಸಾರ (ಮಾನ) ಸಂ. ೩, , ೩-೪.
೪.         ಅದೇ ೭.೪.
೫.         ಮಯ - ೯.೩೨ - ೩೫.
೬.         ಅದೇ ೯-೫೪b - ೫೫ ವಿವರಗಳಿಗೆ ನೋಡಿ ಕೂ.ಸ. ಅಪರ್ಣ ‘ಪದನಿರ್ಣಯ ಅಥವಾ ವಾಸ್ತುಮಂಡಲ, ಇತಿಹಾಸ ದರ್ಶನ, ಸಂ. ೨೨;            ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು, ೨೦೦೭, ಪು ೩೨-೪೦.
೭.         ಮಾನ ೯-೧೬೧.
೮.         ಮಯ ೯- ೬೧b.
೯.         ಮಯ ೫.೮b.
೧೦.      ಅ. ೩. ಪುಟ ೧೫.
೧೧.      ಕೆ. ಕೃಷ್ಣಭಟ್ಟ., (ಅನು), ಕೌಟಿಲ್ಯನ ಅರ್ಥಶಾಸ್ತ್ರ, III. ೨೦ (ಕ), ಪುಟ ೧೫೫.
೧೨.      ಅದೇ II. (ಕ), ಪುಟ ೯೪.
೧೩.      ಅದೇ II. ೨೦ (ಕ), ಪುಟ ೧೫೪.
೧೪.      ಮಾನ ೯.೫.
೧೫.      ಮಯ ೫.೭ ಮಯಮತದಲ್ಲಿ ಈ ಸಂದರ್ಭದಲ್ಲಿ, ವಿವಿಧ ಅಳತೆಗಳ ಬಗ್ಗೆ ವಿವರವಿದೆ. (೯. ೧b-೪ಚಿ).
೧೬.      ಮಯ ೯.೪b - ೭ಚಿ.
೧೭.      ಮಯ ೯.೭b - ೮ಚಿ.
೧೮.      ‘ಗ್ರಾಮಕುಟುಂಬಾವನಿಯ ವ್ಯವಸಾಯದ ಭೂಮಿಯೇ ಹೊರತು ತಮ್ಮವರು ವಾಸವಾಗಿರುವ ವಸತಿಯ ಭಾಗವಲ್ಲ ಎಂದು ತಿಳಿದುಬರುತ್ತದೆ. (ಉದ್ಧೃತ - ಮಯ q , P.೫೯).
೧೯.      ಮಯ ೯.೪b - ೭ಚಿ.
೨೦.      ಮಯ ೯. ೮b, ೯ಚಿ.
೨೧.      ಅದೇ.
೨೨.      ಇದನ್ನೇ ಇನ್ನೊಂದೆಡೆ, ‘ನಗರದ ಬಗ್ಗೆ ಹೇಳುವಾಗ ಬೇರೆ ರೀತಿಯಾಗಿ ಹೇಳಿದೆ.
೨೩.      ಶ್ಲೋಕದ ಅನುವಾದದಲ್ಲಿ ಹೇಳಿರುವಂತೆ ಇದು ೨೬೬ ಅಲ್ಲ, ೨೫೬.
೨೪.      ಮಯ ೯.೧೦-೧೫.
೨೫.      ಮಯ ೯.೧೬ ಚಿ.
೨೬.      ಮಯ ೯ .೧೭b, ೧೮.ಚಿ ಮತ್ತು ಈಶಾನಶಿವಗುರು ದೇವಪದ್ಧತಿ, ಕ್ರಿಯಾ ೨೫.೨೮ b -೨೯ಚಿ (ಉದ್ಧೃತ ಮಯ q.೧೦,P೬೧).
೨೭.      ಮಯ ೯.೫೫.
೨೮.      ಮಯ ೯.೨೫-೨೮.
೨೯.      ಮಯ ೯.೨೯-೩೦.
೩೦.      ಮಯ ೯.೩೧; ಕಾಮಿಕಾಗಮ (ಪೂರ್ವಭಾಗ) - I. ೨೦. ೪; ಈಶಾನಶಿವಗುರು ದೇವಪದ್ಧತಿ, ಕ್ರಿಯಾ. ೨೫.೪೬ ಇಲ್ಲಿ ‘ಸುಖಾಲಯ ರೀತಿಯ ಮನೆ ಕಟ್ಟಬೇಕೆಂದು ಮಯಮತವು ಹೇಳಿದೆ.
೩೧.      ಮಯ - ೯.೨೯-೩೦.
೩೨.      ಇದರ ಅರ್ಥ ಅಸ್ಪಷ್ಟವಾಗಿದೆ. ಬಹುಶಃ ಬ್ರಾಹ್ಮಣರ ಸಂಖ್ಯೆ ೧೦ರಂತೆ ಜಾಸ್ತಿಯಾಗುತ್ತಾ ಇದ್ದರೆ, ಆ ಗ್ರಾಮವು ಬೇರೆ ಬೇರೆ ವಿಧಕ್ಕೆ ಸೇರಬೇಕೆಂದು ಇದರ ಅರ್ಥವಿರಬಹುದು.
೩೩.      ಕಾಮಿಕಾ - I. ೨೭.೧-೮.
೩೪.      ಮಯ ೯.೪೦.
೩೫.      ಕಾಮಿಕಾ I. ೨೦. ೩-೧೦; ಖೇಟ, ಖರ್ವಡ ಇತ್ಯಾದಿ ವಿವರಗಳೂ ಇವೆ.
೩೬.      ಮಾನ ೯.೬೦-೬೩.
೩೭.      ಮಾನ ೯.೧೦೭-೧೦೮.
೩೮.      ವಿಮಾನಾರ್ಚನಕಲ್ಪ, , , ಪುಟ೧೫-೧೬ ಇದರಲ್ಲೂ ಖರ್ವಡ, ಸೇನಾಮುಖ ಇತ್ಯಾದಿ ವಿವರಗಳಿವೆ.
೩೯.      ಅದರಂತೆ, ‘ನಂದ್ಯಾವರ್ತ ಗ್ರಾಮದಲ್ಲಿನ ಬ್ರಾಹ್ಮಣರ ಸಂಖ್ಯೆಯು -೫೮, ೧೮೦, ೩೦೦, ೧೦೦೮, ೩೦೦೦ ಅಥವಾ ೪೦೦೦, ಅದೇ ‘ದಂಡಕ ಗ್ರಾಮ ಪ್ರಕಾರದಲ್ಲಿ ಮನೆಗಳೂ ಅಥವಾ ಯತಿಗಳ ೧೨ ಮನೆಗಳೂ ಇರುತ್ತದೆ. (ಮಾನ - ೯.೧೦೫-೧೦೯).

ಗ್ರಂಥಋಣ
Bruno bagels (Ed & Tr.) Mayamatam; An Indian Treatise on Housing Architecture & Iconography, Indira Gandhi National center for the arts, New Delhi,1985.
Acharya, P.K (Ed & Tr) Manasara series Vol. III & iv, Munshiram Manoharlal Publishers, Pvt. Ltd., New Delhi, 1995 & 1994
ರಘುನಾಥ ಚಕ್ರವರ್ತಿ ಭಟ್ಟಾಚಾರ‍್ಯ (ಸಂ) ವಿಮಾನಾರ್ಚನಕಲ್ಪ, ಮದ್ರಾಸು, ೧೯೨೬.
ಸ್ವಾಮಿ ಶಿವಾಚಾರ್ಯಜಿ (ಸಂ) ಕಾಮಿಕಾಗಮ (ಪೂರ್ವಭಾಗ) ಮದ್ರಾಸು ೧೯೭೫.
ಕೆ.ಕೃಷ್ಣಭಟ್ಟ (ಅನು) ಕೌಟಿಲ್ಯನ ಅರ್ಥಶಾಸ್ತ್ರ - ಸಮಾಜ ಪುಸ್ತಕಾಲಯ, ಧಾರವಾಡ, ೨೦೦೦.
P.V. Kane, History of Dharmashastra, Vol III, Bhandarkar Oriental research  Institute, Poona, 1993,
D.C. Sircar, Indian Epigraphy, Motilal Banarasidas Publishers, Pvt. Ltd., Delhi, 1996.


P.

Wednesday, May 8, 2013

ನಿಟ್ಟೂರಿನ ಶಾಂತಿನಾಥ ಜಿನಾಲಯ-ಶ್ರೀನಿವಾಸ ಎ.ಜಿ.



ನಿಟ್ಟೂರಿನ ಶಾಂತಿನಾಥ ಜಿನಾಲಯ


ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹೋಬಳಿ ಕೇಂದ್ರ ನಿಟ್ಟೂರು. ಇದು ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಥಳವಾಗಿದ್ದು ಸಂಸ್ಕೃತಿಯ ದೃಷ್ಟಿಕೋನದಲ್ಲಿ ತನ್ನದೇ ಆದಂತಹ ವಿಶಿಷ್ಟ ಸ್ಥಾನಮಾನವನ್ನು ಮೈಗೂಡಿಸಿಕೊಂಡಿದೆ.
ನಿಟ್ಟೂರು ಜಿಲ್ಲಾ ಕೇಂದ್ರದಿಂದ ೨೮ ಕಿ.ಮೀ. ತಾಲ್ಲೂಕು ಕೇಂದ್ರದಿಂದ ೮ ಕಿ.ಮೀ. ದೂರದಲ್ಲಿದೆ. ಕ್ರಿಸ್ತಶಕ ೧೨೨೬ರ ಪುರ ಗ್ರಾಮದ ಶಿಲಾಶಾಸನದಲ್ಲಿ ನಿಟ್ಟೂರನ್ನು ‘ತೆಂಕಣಯ್ಯಾವಳೆ’ ಎನಿಸಿದ ಮಹಾಪಟ್ಟಣವಾಗಿತ್ತು ಎಂದು ಉಲ್ಲೇಖಿಸಿದೆ. ಹಾಗಾಗಿ ನಿಟ್ಟೂರು ಒಂದು ಪ್ರಾಚೀನ ಪ್ರಸಿದ್ಧ ವ್ಯಾಪಾರಕೇಂದ್ರವಾಗಿದ್ದು ಇಲ್ಲಿನ ವ್ಯಾಪಾರ ವಹಿವಾಟು ಭಾರತದ ಉದ್ದಗಲಕ್ಕೂ ಹರಡಿತ್ತು.
ಈ ಪ್ರದೇಶವು ಅನೇಕ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಇಂತಹ ರಾಜಮನೆತನಗಳಲ್ಲಿ ಒಂದಾದ ಹೊಯ್ಸಳರ ಕಾಲದಲ್ಲಿ ಶೈವ ಮತ್ತು ವೈಷ್ಣವ ಧರ್ಮದ ಜೊತೆಗೆ ಜೈನಧರ್ಮ ಈ ಪ್ರದೇಶದಲ್ಲಿ ಹೆಚ್ಚು ಪ್ರಭಾವ ಬೀರಿತ್ತು ಎಂಬುದಕ್ಕೆ ನಿಟ್ಟೂರಿನಲ್ಲಿ ನಿರ್ಮಾಣಗೊಂಡಿರುವ ಶಾಂತಿನಾಥ ಜಿನಾಲಯವೇ ಪ್ರಮುಖ ಸಾಕ್ಷಿ ಆಗಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಾಂತಿನಾಥ ಜಿನಾಲಯವು ಪ್ರಸಿದ್ಧವಿದ್ದು, ನಿಟ್ಟೂರಿನ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಎತ್ತರವಾದ ವೇದಿಕೆಯ ಮೇಲೆ ಹೊಯ್ಸಳರ ವಾಸ್ತು ಮತ್ತು ಶಿಲ್ಪಕಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡು ನಿರ್ಮಾಣಗೊಂಡಿದೆ. ವಾಸ್ತುವಿನ್ಯಾಸದಂತೆ ಗರ್ಭಗುಡಿ, ಸುಖನಾಸಿ, ನವರಂಗ ಮತ್ತು ಮುಖಮಂಟಪಗಳನ್ನು ಒಳಗೊಂಡಿದೆ.
ಈ ಜಿನಾಲಯದ ಗರ್ಭಗುಡಿಯಲ್ಲಿ ಜೈನಧರ್ಮದ ಪ್ರಥಮ ತೀರ್ಥಂಕರನಾದ ಆದಿನಾಥನನ್ನು ನಿರಾಭರಣವಾಗಿ ಕುಳಿತ ಭಂಗಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆದರೆ ಈ ಮೂಲ ವಿಗ್ರಹ ಭಗ್ನಗೊಂಡಿರುವುದರಿಂದ ಜಿನಾಲಯದ ಮುಂಭಾಗದಲ್ಲಿ ಇಡಲಾಗಿದೆ. ಪ್ರಸ್ತುತ ಗರ್ಭಗೃಹದಲ್ಲಿ ಜೈನರ ೧೬ನೇ ತೀರ್ಥಂಕರನಾದ ಶಾಂತಿನಾಥನ ಮೈ ಮಣಿಸದೆ ನಿಂತ ಕಾಯೋತ್ಸರ್ಗ ಭಂಗಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಾಂತಿನಾಥನ ವಿಗ್ರಹದ ಹಿಂದೆ ಹಿತ್ತಾಳೆಯಿಂದ ಮಾಡಿರುವ ಪ್ರಭಾವಳಿಯನ್ನು ಇಡಲಾಗಿದೆ.
ಗರ್ಭಗುಡಿಗೆ ಸಮಾನಾಂತರವಾಗಿ ಸುಖನಾಸಿ ಕಂಡುಬರುತ್ತದೆ. ಸಖನಾಸಿಯನ್ನು ದಾಟಿ ಮುಂದೆ ಬಂದರೆ ಕಂಡುಬರುವುದೇ ನವರಂಗ, ನವರಂಗ ಇಡೀ ಜಿನಾಲಯದಲ್ಲೇ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದರ ಮೇಲ್ಛಾವಣಿಯ ಒಳಭಾಗದಲ್ಲಿ ಒಂಬತ್ತು ಅಂಕಣಗಳಿವೆ. ಪ್ರತಿ ಅಂಕಣದಲ್ಲಿಯೂ ಒಂದೊಂದು ಆಕರ್ಷಕ ಸೂಕ್ಷ್ಮ ಕೆತ್ತನೆಯಿಂದ ಕೂಡಿರುವ ಭುವನೇಶ್ವರಿಗಳಿವೆ. ಕಪ್ಪು ಬಳಪದ ಕಲ್ಲಿನಿಂದ ಮಾಡಿರುವ ನಾಲ್ಕು ಕಂಬಗಳಿದ್ದು, ಇಡೀ ನವರಂಗದ ಮೇಲ್ಛಾವಣಿಯನ್ನು ಒತ್ತು ನಿಂತಿವೆ. ಇವು ಸ್ಥೂಲವಾದ ನೋಟಕ್ಕೆ ಒಂದರಂತೆ ಇನ್ನೊಂದು ಕಂಡರೂ ಅವುಗಳ ಕೆತ್ತನೆ ಕೆಲಸಗಳಲ್ಲಿ ವೈವಿಧ್ಯ ಇದೆ.
ಕಂಬಗಳ ಕೆಳಭಾಗ ಚಚ್ಚೌಕವಾಗಿದ್ದು ಕಾಂಡ ಭಾಗ ತಲೆಕೆಳಗಾದ ಗಂಟೆಯಾಕಾರದಲ್ಲಿದ್ದು ಅದರ ಮೇಲೆ ವೃತ್ತಾಕಾರವನ್ನೊಳಗೊಂಡ ಭಾಗಗಳು ಅದರ ಮೇಲೆ ಚಚ್ಚೌಕಾರದ ಚಾಚುಪೀಠಗಳು, ಅದರ ಮೇಲೆ ಬೋಧಿಗೆಗಳನ್ನು ಒಳಗೊಂಡಿದೆ. ಈ ನಾಲ್ಕು ಕಂಬಗಳ ಮಧ್ಯದ ಮೇಲ್ಛಾವಣಿಯಲ್ಲಿರುವ ಭುವನೇಶ್ವರಿ ಅತ್ಯಂತ ಸುಂದರವಾಗಿದ್ದು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ. ಇದು ೭ ಅಡಿ ಉದ್ದ ೭ ಅಡಿ ಅಗಲವಾಗಿದ್ದು ೪ ಅಡಿ ಆಳವಾಗಿದೆ ಈ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕ ಮೂರ್ತಿಗಳು ಕಂಡುಬರುತ್ತವೆ. ಪೂರ್ವದಲ್ಲಿ ಇಂದ್ರ, ಆಗ್ನೇಯ ಅಗ್ನಿ, ದಕ್ಷಿಣ ಯಮ, ನೈರುತ್ಯ ನಿರುತಿ, ಪಶ್ಚಿಮ ವರುಣ, ವಾಯವ್ಯ ವಾಯು, ಉತ್ತರ ಕುಬೇರ, ಈಶಾನ್ಯ ಈಶ್ವರ ಮತ್ತು ಪರಿವಾರದವರು ಕಂಡುಬರುತ್ತಾರೆ. ಇದೇ ಭುವನೇಶ್ವರಿಯಲ್ಲಿ ಯಕ್ಷಿಯರಾದ ಕುಷ್ಮಾಂಡಿನಿ, ಪದ್ಮಾವತಿ, ಸರಸ್ವತಿ, ಜ್ವಾಲಾಮಾಲಿನಿಯರು ಇದ್ದಾರೆ. ಜ್ವಾಲಾಮುಖಿ ಉತ್ತರ ಭಾಗದಲ್ಲಿ, ದಕ್ಷಿಣಾಭಿಮುಖವಾಗಿದ್ದು ಇಂದಿಗೂ ಕೂಡ ದಿನನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ.
ನವರಂಗದ ಒಂಬತ್ತು ಭುವನೇಶ್ವರಿಗಳಲ್ಲಿ ೭೭ ಜನ ಭೂತ, ಭವಿಷ್ಯತ್, ವರ್ತಮಾನ ಕಾಲದ ತೀರ್ಥಂಕರರ ಮೂರ್ತಿಗಳಿವೆ. ವರ್ತಮಾನಕಾಲದ ತೀರ್ಥಂಕರರುಗಳನ್ನು ಗುರುತಿಸಲು ಅವರ ಲಾಂಛನಗಳು ಮೂರನೇ ಅಂಕಣದಲ್ಲಿ ಕಂಡುಬರುತ್ತದೆ. ಮಧ್ಯ ಅಂಕಣದ ಬಲಭಾಗದ ಭುವನೇಶ್ವರಿಯಲ್ಲಿ ಜೈನಮುನಿಗಳಿಗೆ ಆಹಾರ ಧಾನ್ಯಗಳನ್ನು ದಾನ ಮಾಡುತ್ತಿರುವ ಅಪೂರ್ವವಾದ ಕೆತ್ತನೆ ಇದೆ. ಇದರ ಮುಂದಿನ ಅಂಕಣದ ಭುವನೇಶ್ವರಿಯಲ್ಲಿ ವೇಣು, ವೀಣೆ, ಮೃದಂಗ ಮದ್ದಳೆಯಂತಹ ವಾದ್ಯಗಳನ್ನು ನುಡಿಸುತ್ತಿರುವ ವಾದ್ಯಗಾರರ ಮತ್ತು ನೃತ್ಯಗಳ ಶಿಲ್ಪಗಳಿವೆ. ಹೂ ಬಳ್ಳಿಗಳನ್ನು ಶಿಲ್ಪಿಯು ಸುಂದರವಾಗಿ ಕಂಡರಿಸಿದ್ದಾನೆ ನವರಂಗದ ಬಾಗಿಲಿನ ಎಡ ಮತ್ತು ಬಲಭಾಗದಲ್ಲಿ ಚಂಡ, ಮಹಾಚಂಡ, ದ್ವಾರಪಾಲಕ ವಿಗ್ರಹಗಳಿದ್ದು ಬಾಗಿಲಿನ ಮೇಲ್ಭಾಗದಲ್ಲಿ ೨೦೦೯ರಲ್ಲಿ ಶಾಂತಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ನವರಂಗದ ಮುಂದಿನ ಭಾಗವಾದ ಮಂಟಪದ ಬಲಭಾಗದಲ್ಲಿ ಬ್ರಹ್ಮಯಕ್ಷ ಮತ್ತು ಎಡಭಾಗದಲ್ಲಿ ಕಮಲಾಕಾರ ಪೀಠಸ್ಥಳಾಗಿರುವ ಪದ್ಮಾವತಿಯ ಗುಡಿಗಳು ಕಂಡುಬರುತ್ತವೆ. ಮಂಟಪ ಸಾಧಾರಣವಾಗಿದ್ದು ಮೇಲ್ಛಾವಣಿಯನ್ನು ಒತ್ತು ನಿಂತಿರುವ ಒಂಬತ್ತು ಕಂಬಗಳಿದ್ದು ಆರುಕೋನ, ಅಷ್ಠಕೋನ, ಹದಿನಾರುಕೋನ, ಮೂವತ್ತೆರಡು ಕೋನ, ನಕ್ಷತ್ರ ಕಮಲಗಳಂತೆ ಒಂದೊಂದು ಕಂಬವು ವಿಭಿನ್ನ ರೀತಿಯಲ್ಲಿ ಅಲಂಕಾರದಿಂದ ಕೂಡಿದ್ದು ಮನಮೋಹಕವಾಗಿವೆ ಕಂಬಗಳ ಪೀಠದ ಚಚ್ಚೌಕಾರದಲ್ಲಿ. ಧರ್ಮಸಂಕೇತಗಳಾದ ಸ್ವಸ್ತಿಕ್, ಅಭಯಹಸ್ತ ಮುಂತಾದ ಸಂಕೇತಗಳನ್ನು ಚಿತ್ರಿಸಿದ್ದಾರೆ. ಈ ಕಂಬಗಳ ಕೆತ್ತನೆಯಲ್ಲಿ ಶಿಲ್ಪಿಯ ಕೈ ಚಳಕ ಎದ್ದು ಕಾಣುತ್ತದೆ.
ಜಿನಾಲಯದಿಂದ ಹೊರಬಂದ ತಕ್ಷಣ ಎದುರಿಗೆ ಗೋಚರಿಸುವುದೇ ಮಾನಸ್ತಂಭ. ಇದು ಸುಮಾರು ಎರಡು ಅಡಿ ಎತ್ತರದ ಪೀಠದ ಮೇಲಿದ್ದು ಸುಮಾರು ೪೦ ಅಡಿ ಎತ್ತರವಾಗಿದೆ. ಸ್ತಂಭದ ಮೇಲ್ತುದಿಯಲ್ಲಿ ಒಂದು ಮಂಟಪ ವಿದೆ. ಅದರ ಒಳಗೆ ನಾಲ್ಕು ಕಡೆಗೂ ಅಭಿಮುಖವಾಗಿರುವ ಜಿನಮೂರ್ತಿಗಳಿವೆ. ಸ್ತಂಭದ ಕೆಳಭಾಗದಲ್ಲಿ ಬ್ರಹ್ಮದೇವನ ಮೂರ್ತಿ ಇದೆ.
ಜಿನಾಲಯದ ಹೊರಭಿತ್ತಿಯನ್ನು ಅವಲೋಕಿಸಿದಾಗ ಚಿಕ್ಕದಾದ ಪಂಜರ ಕೋಷ್ಟಗಳು ಇದ್ದು ಅವುಗಳಲ್ಲಿ ಜೈನ ತೀರ್ಥಂಕರರ ನಿಂತ ಭಂಗಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.
ಜಿನಾಲಯದ ಎಡಭಾಗ ಮತ್ತು ಬಲಭಾಗದ ಹೊರಭಿತ್ತಿಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಕೋಷ್ಟಗಳ ಮೇಲೆ ಸುಂದರವಾದ ಕಿರುಗೋಪುರಗಳು ಕಂಡುಬರುತ್ತವೆ. ಇತರ ಕೋಷ್ಟಗಳಲ್ಲಿನ ಕೆಲವು ಜಿನಮೂರ್ತಿ ಗಳು ಭಗ್ನಗೊಂಡಿವೆ. ಜಿನಾಲಯವು ವಿನಾಶದ ಅಂಚಿನಲ್ಲಿರುವುದರಿಂದ ಜಿನಾಲಯದ ಹಿಂಭಾಗದ ಗೋಡೆಗೆ ಕಲ್ಲಿನಿಂದ ಒದ್ದು ಗೋಡೆಗಳನ್ನು ಕಟ್ಟಲಾಗಿದೆ. ಈ ಜಿನಾಲಯ ಶಾಸನಾಧಾರಿತವಾಗಿದ್ದು ಮೂಲಸಂಘದ ಬಸದಿಯಾಗಿದೆ. ಅದೇ ಜಿನಾಲಯದಲ್ಲಿರುವ ಶಾಸನ ತಿಳಿಸುವಂತೆ ಮೂಲಸಂಘದ ಶಾಖೆಯಾದ ದೇಶೀಗಣ, ಗಣದ ಶಾಖೆಯಾದ ಪುಸ್ತಕಗಚ್ಛ ಇದರ ಶಾಖೆಯಾದ ಕೊಂಡಕುಂದಾನ್ವಯದ ಪ್ರಕಾರ ದೇವರಗುಡ್ಡಿ, ಮಾಳವಸೆಟ್ಟಿಕಬ್ಬೆಯರ ಮಗನಾದ ಮಲ್ಲಿಸೆಟ್ಟಿ ಕ್ರಿ.ಶ.೧೨೧೯ರಲ್ಲಿ ಈ ಜಿನಾಲಯದ (ಚೈತ್ಯಾಲಯದ) ಹೊರಗೋಡೆಯ ಸುತ್ತಾ ಪ್ರತಿಮೆಗಳನ್ನು ಪ್ರಮಾದಿ ಸಂವತ್ಸರದ ಜೇಷ್ಠ ಶುದ್ಧ ಪಂಚಮಿಯಂದು ಪ್ರತಿಷ್ಠಾಪನೆ ಮಾಡಿಸಿರುವುದನ್ನು ಉಲ್ಲೇಖಿಸುತ್ತದೆ. ಈ ಪ್ರತಿಮೆಗಳು ಜಿನಾಲಯದ ಹೊರಭಿತ್ತಿಯ ಸೌಂದರ್ಯವನ್ನು ಹೆಚ್ಚಿಸಿವೆ.
ಜಿನಾಲಯದ ಉತ್ತರ ಕಡೆಯಲ್ಲಿ ಸಲ್ಲೇಖನವ್ರತ ಕೈಗೊಂಡು. ಪ್ರಾಣ ತ್ಯಜಿಸಿರುವುದರ ನೆನಪಿಗಾಗಿ ನಿಷದಿಕಲ್ಲುಗಳಿವೆ. ಇಂತಹ ನಿಷದಿಗಳನ್ನು ನಿಸಿದಿಗೆ, ನಿಶೀದಿಗೆ, ನಿಸಿದಿ, ನಿಶೀದಿಕಾ, ನಿಶಿದಿಗೆ, ನಿಷಿದ್ಯಾಲಯ ಎಂದು ಕರೆಯುತ್ತಾರೆ. ಒಂದೇ ಕಲ್ಲಿನಲ್ಲಿ ಮೂರು ನಿಷದಿಗಳಿವೆ. ಅತ್ತೆ ಮಾಳವ್ವೆ ಮತ್ತು ಸೊಸೆ ಚೌಡಿಯಕ್ಕರ ನಿಷದಿ ಅದೇ ಕಲ್ಲಿನ ಎಡಭಾಗದಲ್ಲಿ ಭೂಚವ್ವೆಯ ನಿಷದಿ, ಅದೇ ಕಲ್ಲಿನ ಬಲಭಾಗದಲ್ಲಿ ಮಲ್ಲಿಸೆಟ್ಟಿ ಮತ್ತು ಆತನ ಪ್ರೀತಿಯ ಮಗನಾದ ಮಾಳಯ್ಯ ಎಂಬ ಇಬ್ಬರ ನಿಷದಿ ವಿಚಾರಗಳನ್ನು ತಿಳಿಸುತ್ತದೆ. ಈ ನಿಷದಿಗಳು ಜೈನರ ಪಾವಿತ್ರ್ಯತೆಯನ್ನು ತೋರಿಸುತ್ತದೆ. ಜೈನ ಮುನಿಗಳ ವ್ರತಾಚರಣೆಯು ಮರಣದ ಸಂಕೇತವಾಗಿ ಗೋಚರಿಸುತ್ತವೆ.
ಜಿನಾಲಯದ ಹೊರಭಾಗದಲ್ಲಿ ನಿಂತು ತಲೆ ಎತ್ತಿ ನೋಡಿದರೆ ಜಿನಾಲಯದ ಗರ್ಭಗೃಹದ ಮೇಲೆ ಶಿಖರವಿದೆ. ಮುಖಮಂಟಪದ ಮೇಲ್ಛಾವಣಿಯ ಮೇಲಿನ ಕೋಷ್ಠದಲ್ಲಿ ನಿಂತ ಭಂಗಿಯ ಶಾಂತಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಗಿದೆ. ಜಿನಾಲಯದ ಸುತ್ತಲು ಪ್ರಕಾರಗೋಡೆ ಇದೆ.
ಈ ಜಿನಾಲಯದಲ್ಲಿ ಬರಹವುಳ್ಳ ತಾಳೆಗರಿಯ ಒಂದು ಕಟ್ಟು ಇದ್ದು ಅನಂತನೋಂಪಿ ವ್ರತದ (ಮಂತ್ರ) ಶ್ಲೋಕವನ್ನು ಒಳಗೊಂಡಿದೆ. ಈ ಪ್ರದೇಶವನ್ನೊಳಗೊಂಡಂತೆ ಇತರ ಭಾಗದಲ್ಲಿ ಜೈನಧರ್ಮ ಪ್ರಬಲವಾಗಿತ್ತು ಎಂಬುದಕ್ಕೆ ಈ ಜಿನಾಲಯವೇ ಪ್ರಮುಖ ಆಧಾರಸ್ತಂಭವಾಗಿದೆ.

ಶ್ರೀನಿವಾಸ ಎ.ಜಿ.
 ಸಂಶೋಧನಾ ವಿದ್ಯಾರ್ಥಿ,
ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ-೫೮೩೨೭೬.










ಆಧಾರಸೂಚಿ
೧. ಬಿ.ಎಲ್. ರೈಸ್., ಎಪಿಗ್ರಾಫಿಯಾ ಕರ್ನಾಟಿಕಾ, ಸಂ. ೧೨.
೨. ಡಾ. ಎಂ. ಚಿದಾನಂದಮೂರ್ತಿ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೦೪.
೩. ಕವಿತಾಕೃಷ್ಣ (ಸಂ)., ಜಯಮಂಗಲಿ, ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೨.
೪. ಡಾ. ಕೆ.ಎಲ್.ಎನ್. ಮೂರ್ತಿ., ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ, ರಂಜಿತಾ ಪ್ರಕಾಶನ, ತುಮಕೂರು, ೧೯೯೮.
೫. ಡಾ. ಸೂರ್ಯನಾಥ ಕಾಮತ್., ಡಾ. ದೇವರಕೊಂಡಾರೆಡ್ಡಿ (ಸಂ)., ಇತಿಹಾಸ ದರ್ಶನ, ಸಂಪುಟ-೯, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು, ೧೯೯೪.
೬. ಕೆ. ಶಾರದ., ಕರ್ನಾಟಕದಲ್ಲಿ ಜೈನಧರ್ಮ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬.
೭. ಪ್ರಜಾವಾಣಿ ದಿನಪತ್ರಿಕೆ, ೨-೯-೨೦೧೦.

Sunday, May 5, 2013

ನಗರ್ಲೆಯ ಶಾಸನ ಅಧ್ಯಯನ - ಡಾ. ಎಚ್.ಚಂದ್ರಶೇಖರ್‌


ನಗರ್ಲೆಯ ಶಾಸನಗಳು ಮತ್ತು ದೇಗುಲಗಳು
ಒಂದು ಅಧ್ಯಯನ
ಡಾ. ಹೆಚ್. ಚಂದ್ರಶೇಖರ
ಪೀಠಿಕೆ
ನಗರ್ಲೆಯು, ನಂಜನಗೂಡು (ಮೈಸೂರು ಜಿಲ್ಲೆ) ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. ಇದು ನಂಜನಗೂಡು-ತಿ. ನರಸೀಪುರ ರಸ್ತೆಯ ಬಳಿ ೧೦ ಕಿ.ಮೀ. ದೂರದಲ್ಲಿದೆ. ಈ ಹಳ್ಳಿಯ ಜನಸಂಖ್ಯೆ ಸುಮಾರು ೩೫೦೦ ಎಂದು ಅಂದಾಜಿಸಲಾಗಿದೆ. ಈ ಹಳ್ಳಿ ಕ್ರಿ.ಶ.೧೦ನೆಯ ಶತಮಾನದಲ್ಲಿ ಒಂದು ಸುಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತೆಂದು ಶಾಸನಗಳಿಂದ ವ್ಯಕ್ತವಾಗುತ್ತದೆ. ಬಹುಶಃ ಆಗ ಈ ಹಳ್ಳಿ ಒಂದು ದೊಡ್ಡ ಹಳ್ಳಿಯಾಗಿರಬಹುದು. ಹಯವದನರಾಯರ ಗೆಜೆಟಿಯರ್ ಮತ್ತು ಸೂರ್ಯನಾಥ ಕಾಮತರು ಸಂಪಾದಿಸಿರುವ ಮೈಸೂರು ಜಿಲ್ಲೆಯ ಗೆಜೆಟಿಯರ್‌ನಲ್ಲಿ ಕೊಂಚ ವಿವರಣೆಗಳಿವೆ. ಈ ಹಳ್ಳಿಗೆ ಸಂಬಂಧಿಸಿದ ನಾಲ್ಕು ಶಾಸನಗಳು ಎಪಿಗ್ರಾಫಿಯ ಕರ್ನಾಟಿಕ (ಇ.ಸಿ.) (ಸಂ.೩) ದಲ್ಲಿ ಪ್ರಕಟವಾಗಿವೆ. ಈ ಅಧ್ಯಯನ ಮತ್ತು ಸಂಶೋಧನೆಗಾಗಿ ಈ ಆಕರಗಳನ್ನು ಬಳಸಿಕೊಂಡು ಮೂರು ಸಲ ಕ್ಷೇತ್ರಕಾರ್ಯಗಳನ್ನು ಕೈಗೊಂಡಿದ್ದೇನೆ. ೨೦೦೭ರ ಸೆಪ್ಟೆಂಬರ್ ೧೦ರಂದು ಪ್ರಾಥಮಿಕ ಅಧ್ಯಯನವನ್ನು ಇತಿಹಾಸ ಅಕಾಡೆಮಿಯ ಕೆಲ ಸದಸ್ಯರೊಂದಿಗೆ ಅಧ್ಯಯನ ಮಾಡಿದ್ದೇನೆ. ನಂತರ ೨೫-೩-೨೦೧೧ ಹಾಗೂ ೪-೪-೨೦೧೨ರಂದು ಸ್ವತಂತ್ರವಾಗಿ ಕ್ಷೇತ್ರಕಾರ್ಯ ಮಾಡಿದ್ದೇನೆ. ಮೂರು ಸಲವೂ ಹಲವಾರು ಚಿತ್ರಗಳನ್ನು ತೆಗೆದಿದ್ದೇನೆ. ಅವುಗಳಲ್ಲಿ ಆಯ್ದ ಸೂಕ್ತವಾದ ಫೋಟೋಗಳನ್ನು ಈ ಲೇಖನದಲ್ಲಿ ಅಳವಡಿಸಿದ್ದೇನೆ.
ಶಾಸನಗಳ ಅಧ್ಯಯನ ಮತ್ತು ಫಲಿತಾಂಶ
ಆಗಲೇ ಹೇಳಿದಂತೆ ಈ ಊರಿನಲ್ಲಿರುವ ಮಾಳಿಗೇಶ್ವರಿ ಗುಡಿ, ಸೋಮೇಶ್ವರಗುಡಿ (ಇದನ್ನು ಈಗ ನಾಶ ಮಾಡಲಾಗಿದೆ) ಮತ್ತು ಇತ್ತೀಚೆಗೆ ಕಿತ್ತು ಹೊರಗೆಡೆ ಹಾಕಲಾಗಿರುವ ದೀಪಸ್ತಂಭದ ಅಡಿಯಲ್ಲಿ ಸಿಕ್ಕಿರುವ ಒಟ್ಟು ನಾಲ್ಕು ಶಾಸನಗಳು ಮೇಲ್ಕಾಣಿಸಿದ ಇ.ಸಿ. ಸಂಪುಟದಲ್ಲಿ ಪ್ರಕಟವಾಗಿವೆ. ಅವುಗಳ ಸಾರಾಂಶವನ್ನು ಕೆಳಗಿನಂತೆ ಚರ್ಚಿಸಲಾಗಿದೆ.
ಶಾಸನ ಸಂಖ್ಯೆ ೨೩೯: ಈಗ ನೆಲಸಮವಾಗಿರುವ ಸೋಮೇಶ್ವರ ದೇವಸ್ಥಾನದ (ನನ್ನಯನ ದೇಗುಲ) ಬಾಗಿಲಿನ ದಕ್ಷಿಣ ಪಾರ್ಶ್ವದಲ್ಲಿತ್ತು ಈ ಶಾಸನ. ಈ ಶಾಸನದ ಪ್ರಕಾರ ವಿದ್ಯಾಧರನು ಗಂಗರಸ ಪೆರ್ಮಾಡಿಯ ಆಜ್ಞಾನುಸಾರ ಅಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳಿಗೂ ಸಂನ್ಯಾಸಿಗಳಿಗೂ ಅನ್ನಸಂತರ್ಪಣೆಯ ವ್ಯವಸ್ಥೆಗಾಗಿ ಭೂದಾನ ದತ್ತಿಗಳನ್ನು ನೀಡಿದ್ದ. (ವಿದ್ಯಾಧರನು ಪೆರ್ಮಾಡಿಯ ಒಬ್ಬ ಅಧಿಕಾರಿಯಾಗಿದ್ದನು) ಕ್ರಿ.ಶ.೧೦ನೆಯ ಶತಮಾನದಲ್ಲಿ ಈ ಗ್ರಾಮ ಒಂದು ವಿದ್ಯಾಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ.
ಶಾಸನಸಂಖ್ಯೆ ೨೪೦: ಈ ಶಾಸನವು ತ್ರುಟಿತಗೊಂಡಿದೆ. ಈ ಶಾಸನದಲ್ಲಿ ವಿದ್ಯಾಧರ ಮತ್ತು ಹನ್ನೆರಡು ಗೌಂಡರುಗಳ ಉಲ್ಲೇಖವಿದೆ. ಗೌಂಡರುಗಳ ಹೆಸರುಗಳನ್ನು ನಮೂದಿಸಿಲ್ಲ. ಅಂದರೆ ಗಂಗರಸನ ಅಧಿಕಾರಿ ವಿದ್ಯಾಧರನು ಈ ಸ್ಥಳದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದನೆಂಬುದು ಸ್ಪಷ್ಟವಾಗುತ್ತದೆ.
ಶಾಸನಸಂಖ್ಯೆ ೨೪೧: ಮಾರೀಚಾವಡಿಯ ಪಶ್ಚಿಮ ಗೋಡೆಗೆ ಕಟ್ಟಿರುವ ಕಲ್ಲಿನಲ್ಲಿ, ಕ್ರಿ.ಶ.೧೦೨೭-೨೮ರಲ್ಲಿ ಮಾಳಿಗೇಶ್ವರಿ ಗುಡಿಮಲ್ಲಿ (?) ಪೂಜೆ ಮಾಡುವರಿಗಾಗಿ (ಆಗ ಬಹುಶಃ ಬ್ರಾಹ್ಮಣರು) ಮತ್ತು ಸಿಂಘ ಪರಿಷೆಯ ಮಠಕ್ಕಾಗಿ ಪ್ರತಿ ವರ್ಷ ೧೦ (ಹತ್ತು) ಕೊಳಗ ಭತ್ತವನ್ನು ದಾನವಾಗಿ ನೀಡಲಾಗಿತ್ತು. ಈಗ ಈ ಗುಡಿಯ ಅರ್ಚಕರು ಲಿಂಗಾಯತ ಧರ್ಮಕ್ಕೆ ಸೇರಿದ ಶ್ರೀ ರಾಜಪ್ಪ ತಮ್ಮಡಿ ಶಾಸನದಲ್ಲಿ ಉಲ್ಲೇಖಿಸಲಾಗಿರುವ ಸಿಂಘ ಪರಿಷೆ ಮಠ ಈಗ ಇಲ್ಲ; ಬೇರೆ ಯಾವ ಮಠವೂ ಇಲ್ಲ.
ಶಾಸನ ಸಂಖ್ಯೆ ೨೪೨: ನನ್ನಯ್ಯಸ್ವಾಮಿ (ನಾರಾಯಣ ಸ್ವಾಮಿ ದೇವಸ್ಥಾನ)ಯ ಎದುರಿಗಿರುವ  ೩.೧ ಮೀ. ಎತ್ತರವಿರುವ ದೀಪಸ್ತಂಭದ ಅಡಿಯಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. ಈ ಶಾಸನದ ಪ್ರಕಾರ, ಪೆರ್ಮಾಡಿ ಮನೆವಗತಿ ನೀಲಬ್ಬೆಯ ಮಗನಾದ ರಾಚಮ್ಮನು ಧರ್ಮಕ್ಕಾಗಿ ಈ ಕಂಬವನ್ನು ಕ್ರಿ.ಶ.೯೭೦-೭೧ರಲ್ಲಿ ನಿಲ್ಲಿಸಿದನೆಂದು ತಿಳಿದುಬರುತ್ತದೆ.
ಫಲಿತಾಂಶ: ಈ ನಾಲ್ಕು ಶಾಸನಗಳನ್ನು ಒಟ್ಟಾಗಿ ಗ್ರಹಿಸಿದರೆ, ನಗರ್ಲೆಯು (ಕ್ರಿ.ಶ.೧೦ರ ಶಾಸನದಲ್ಲಿ ನಗರ್ಲಾ) ಒಂದು ಸುಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಸಿಂಘಿ ಪರಿಷೆ ಮಠ ಮತ್ತು ಪೂಜಾ ಕಾರ್ಯಗಳಿಗಾಗಿ ಪೆರ್ಮಾಡಿ ಅರಸರು ದವಸ ಧಾನ್ಯಗಳನ್ನು ದತ್ತಿಯಾಗಿ ನೀಡುತ್ತಿದ್ದರು. ಗಂಗರ ಕಾಲದಲ್ಲಿ ವೈದಿಕ ಧರ್ಮದ ಕೇಂದ್ರವೂ ಆಗಿತ್ತು. ಬಹುಶಃ ಕ್ರಿ.ಶ.೧೨-೧೩ರಲ್ಲಿ ಲಿಂಗಾಯತ ಧರ್ಮದ ಪ್ರಭಾವ ಬೆಳೆದು ಲಿಂಗಾಯತ ಧರ್ಮದ ತಮ್ಮಡಿ ಶಿವಾರ್ಚಕರಾದರು. ಅವರ ಜೊತೆಯಲ್ಲಿ ಇತರರು (ಶೂದ್ರರು) ಲಿಂಗಾಯತ ಧರ್ಮವನ್ನು ಸ್ವೀಕರಿಸಿದರು. ಈಗ ಈ ಹಳ್ಳಿಯಲ್ಲಿ ಲಿಂಗಾಯತರು, ಬೇಡನಾಯಕರು ಮತ್ತೆ ಕೆಲ ಮುಸ್ಲಿಂ ಕುಟುಂಬಗಳು ವಾಸಿಸುತ್ತವೆ. ಕ್ಷೇತಕಾರ್ಯದ ಸಂದರ್ಭದಲ್ಲಿ ಎಲ್ಲರೂ ಸಾಮರಸ್ಯವಾಗಿ ಜೀವನ ಸಾಗಿಸುತ್ತಾರೆಂದು ತಿಳಿದುಬಂತು. ಇದು ಸಂತಸದ ಸಂಗತಿ.
ದೇಗುಲಗಳು ಮತ್ತು ಪುರಾತತ್ತ್ವ ಅವಶೇಷಗಳು
ಈ ಹಳ್ಳಿಯಲ್ಲಿ ಶಾಸನಗಳ ಪ್ರಕಾರ ನನ್ನಯ್ಯನ ಗುಡಿ ಮತ್ತು ಮಾಳಿಗೇಶ್ವರಿ ಗುಡಿಗಳು ಇರಬೇಕು. ಆದರೆ ಇವುಗಳಲ್ಲದೆ, ಅರ್ಧ ಹಾಳಾಗಿರುವ ಪಾರ್ಶ್ವನಾಥ ಬಸ್ತಿ, ಊರು ಮಾರೆಮ್ಮನಗುಡಿ, ವಿಗ್ರಹ ಇರದ ಸೋಮೇಶ್ವರ ಗುಡಿ, ಇಲ್ಲಿವೆ. ಒಂದು ಲಿಂಗ ಇತ್ತು, (ಇದೇ ನನ್ನಯನಗುಡಿ, ಈಗ ಇದು ನೆಲಸಮವಾಗಿದೆ), ರಾಚಮ್ಮನ ಸ್ಥಳಾಂತರ ಗೊಂಡ ದೀಪಸ್ತಂಭ, ಒಟ್ಟು ಎಂಟು ವೀರಗಲ್ಲುಗಳು (೬+೨), ದಡಲಿಂಗಪ್ಪನ ಗುಡಿ, ಈರಣ್ಣನಗುಡಿ, ವಧಾಸ್ತಂಭ (ಕಲ್ಲು), ಬಸವಣ್ಣನಗುಡಿ (ಅದರೊಳಗೆ ಸ್ಥಳಾಂತರ ಗೊಂಡಿರುವ ಲಿಂಗಗಳನ್ನು, ನಾರಾಯಣಶಿಲ್ಪವನ್ನು ಸ್ಥಾಪಿಸಲಾಗಿದೆ) ಇವೆ. ಇವುಗಳನ್ನು ಒಂದೊಂದಾಗಿ ವಿವರಿಸುತ್ತೇನೆ.
ಪಾರ್ಶ್ವನಾಥ ಬಸದಿ: ಈ ಹಳ್ಳಿಯನ್ನು, ರಸ್ತೆಯಿಂದ ಬಲಕ್ಕೆ ಇಳಿದರೆ, ಪ್ರವೇಶದಲ್ಲಿ ಕೇವಲ ಗರ್ಭಗುಡಿ ಮಾತ್ರ ಉಳಿದಿರುವ ಪಾರ್ಶ್ವನಾಥ ಬಸ್ತಿ ಅಲ್ಲಿದೆ. ಸುಂದರ, ಹೊಯ್ಸಳ ಶೈಲಿಯ ಬಳಪದಕಲ್ಲಿನಲ್ಲಿ ಕಡೆಯಲಾದ ಪಾರ್ಶ್ವನಾಥ ಶಿಲ್ಪ ಅನಾಥವಾಗಿ ನಿಂತಿದೆ. ಪೂಜೆ ಇಲ್ಲ. ನಾನು ೨೦೦೭ರಲ್ಲಿ ಕ್ಷೇತ್ರಕಾರ್ಯಕ್ಕಾಗಿ ಬಂದಾಗ ಪಾರ್ಶ್ವನಾಥ ಶಿಲ್ಪದ ಬದಿಯಲ್ಲಿಯೇ ಸ್ಥಳಾಂತರಗೊಂಡ ಲಿಂಗವನ್ನು ನಿಲ್ಲಿಸಲಾಗಿತ್ತು. ಈಗ ಉಳಿದಿರುವ ಪಾರ್ಶ್ವನಾಥ ಬಸ್ತಿಯ ಛತ್ತಿನ ಮೇಲೆ ಹುಲ್ಲನ್ನು ಸಂಗ್ರಹಿಸಿಡಲಾಗುತ್ತದೆ ಬಸ್ತಿಯ ಉಳಿದ ಭಾಗ ನಾಮಾವಶೇಷವಾಗಿದೆ.
ಊರು ಮಾರೆಮ್ಮನ ಗುಡಿ: ಪಾರ್ಶ್ವನಾಥ ಬಸ್ತಿಯನ್ನು ದಾಟಿ ಮುಂದಕ್ಕೆ ಹೋದರೆ, ಕೊಂಚ ದೂರದಲ್ಲಿ ಬಲಗಡೆ ಊರ ಮಾರೆಮ್ಮನ ಗುಡಿ ಇದೆ. ಇದು ತೀರ ಇತ್ತೀಚಿನ ರಚನೆ; ಬಹುಶಃ ೫೦-೬೦ ವರ್ಷಗಳ ಹಿಂದೆ ಕಟ್ಟಿರಬಹುದು. ಸುಸ್ಥಿತಿಯಲ್ಲಿದೆ. ಚೌಕಾಕಾರದ ರಚನೆ. ಮರದ ಕಂಬಗಳಿವೆ. ಚಾವಣಿಯನ್ನು ಮಂಗಳೂರು ಹೆಂಚಿನಿಂದ ರಚಿಸಲಾಗಿದೆ. ಗರ್ಭಗುಡಿಯಲ್ಲಿ, ಅಚ್ಚರಿಯ ಸಂಗತಿ ಎಂದರೆ ಮಾರೆಮ್ಮನ ವಿಗ್ರಹವಿಲ್ಲ. ಬದಲಾಗಿ ಪೀಠಗಳಿಲ್ಲದ ಎರಡು ಲಿಂಗಗಳಿವೆ. ಒಂದು ಲಿಂಗದ ಎತ್ತರ ೨೨ ಸೆ.ಮೀ. ತಳದ ವ್ಯಾಸ ೮ ಸೆ.ಮೀ. ಇನ್ನೊಂದು ಲಿಂಗದ ಎತ್ತರ ೩೦ ಸೆಂ.ಮೀ. ತಳದ ವ್ಯಾಸ ೧೦ ಸೆ.ಮೀ. ಎಣ್ಣೆ ಬಳಿಯಲಾಗಿದೆ. ಆದ್ದರಿಂದ ಕಪ್ಪಗಿವೆ. ಕುಸುರಿ ಕೆಲಸವಿಲ್ಲದ ತೀರ ಸಾಧಾರಣ ಕಂಬದಂಥ ರಚನೆಗಳಿವು.
ಮಾಳಿಗೇಶ್ವರಿ ಗುಡಿ: ಈ ಹಳ್ಳಿಯ ಭಕ್ತಿಯ ಕೇಂದ್ರ ಈ ಗುಡಿ. ನಾನು ಮೂರನೇ ಸಲ ಹೋದಾಗ ಮೈಸೂರು ಮತ್ತು ಬೆಂಗಳೂರಿನಿಂದ ೫-೬ ಜನ ಭಕ್ತರು ಬಂದಿದ್ದರು. ಕೆಲವು ವರ್ಷಗಳ ಹಿಂದೆ ಇಲ್ಲಿಂದ ವಲಸೆ ಹೋದ ಈ ಜನರು ಆಗಾಗ ಈ ದೇವರ ಪೂಜೆಗಾಗಿ ಬರುತ್ತಾರೆಂದು ತಿಳಿದುಬಂತು. ಇದು ಪೂರ್ವಾಭಿಮುಖಿಯಾಗಿರುವ ಗುಡಿ. ಚೌಕಾಕಾರದ ರಚನೆ. ಪಶ್ಚಿಮ-ಪೂರ್ವ ದಿಕ್ಕಿನಲ್ಲಿ ೧೩ ಮೀ. ಉದ್ದ ಹಾಗೂ ದಕ್ಷಿಣೋತ್ತರವಾಗಿ ೯ ಮೀ. ಅಗಲವಾಗಿದೆ. ಒಟ್ಟು ೨೦ ಕಲ್ಲಿನ ಕಂಬಗಳಿವೆ. ಕಂಬಗಳು ಗಂಗರ ಶೈಲಿಯಲ್ಲಿವೆ. ಯಾವ ಬಗೆಯ ಕುಸುರಿ ಕೆಲಸವಿಲ್ಲ. ಮುಖಮಂಟಪದ ಹೊರ ಕಂಬಗಳಿಗೆ ಮಾತ್ರ ಸುಣ್ಣ ಬಳಿಯಲಾಗಿದೆ. ಒಳಗಿರುವ ಎಲ್ಲಾ ಕಂಬಗಳಿಗೆ ವಾರ್ನಿಷ್ ಕೆಂಪು ಬಣ್ಣ ಬಳಿಯಲಾಗಿದೆ.
ಮುಖಮಂಟಪದ ಮೇಲೆ ಚಿಕ್ಕ ಮೂರು ಗೋಪುರ ಗಳನ್ನು ಕಟ್ಟಿ ಒಳಗೆ ಸಿಮೆಂಟಿನ ಸ್ತ್ರೀಶಕ್ತಿ ದೇವತೆಗಳ ಸ್ಟುಕೊ ಶಿಲ್ಪಗಳನ್ನು ನೆಡಲಾಗಿದೆ. ಈ ಗೋಪುರಗಳು ಮತ್ತು ಶಕ್ತಿ ಶಿಲ್ಪಗಳು ತೀರ ಇತ್ತೀಚಿನ ರಚನೆಗಳೆಂಬುದು ನೋಡಿದ ತಕ್ಷಣ ಹೊಳೆಯುತ್ತದೆ.
ಗರ್ಭಗುಡಿಯಲ್ಲಿ ಮಧ್ಯದಲ್ಲಿ ನಗರ್ಲೆಯ ಮಾಳಿಗೇಶ್ವರಿ ಸ್ಟುಕೋ ಶಿಲ್ಪ ಇದೆ (ಎತ್ತರ ೧.೬ ಮೀ.), ಉಳಿದ ಆರು ಮಾತೃಕೆಯರ ಶಿಲ್ಪಗಳ ಹೆಸರುಗಳು: ಮೂಗೂರು ತಿಬ್ಬಾದೇವಿ, ಸೋಸಲೆಯ ಹೊನ್ನಾದೇವಿ, ಹದ್ನಾರು ಚೌಡೇಶ್ವರಿ, ಕಳಲೆಯ ಕಲ್ಲಾದೇವಿ, ಅಂಚೆಯ ನಂಚಿಕಾದೇವಿ ಮತ್ತು ಅರಕೋಟೆಯ ಕೋಟಾದೇವಿ. ಆದರೆ ಈ ಸ್ಟುಕೋ ಶಿಲ್ಪಗಳನ್ನು ನೋಡಿದರೆ ಹಳೆಯ ಕಾಲದವುಗಳು ಎನಿಸುವುದಿಲ್ಲ. ಬಹುಶಃ ಕಾಲಕಾಲಕ್ಕೆ ಹೊಸ ಹೊಸ ಮಾತೃಕೆಯರ ಶಿಲ್ಪಗಳನ್ನು ನಿಲ್ಲಿಸಿ ಹಳ್ಳಿಗರು ತಮಗೆ ತೋಚಿದ ಹೆಸರುಗಳಿಂದ ಕರೆದಿದ್ದಾರೆ. ಹೆಸರುಗಳು ಪ್ರಾಸಬದ್ಧವಾಗಿದೆ. ಸಪ್ತಮಾತೃಕೆಯರ ಹೆಸರುಗಳು ಮತ್ತು ಮಾಳಿಗೇಶ್ವರಿ ಗುಡಿಯು ಶಾಸನಗಳಲ್ಲಿ ಉಲ್ಲೇಖಗೊಂಡಿಲ್ಲ ಎಂಬುದನ್ನು ಗಮನಿಸಬೇಕು.
ಸೋಮೇಶ್ವರ ಗುಡಿ: ಈ ಹಳ್ಳಿಯ ಜನರು ಮಾಳಿಗೇಶ್ವರಿ ಗುಡಿಯ ಬಲಗಡೆ ಇರುವ ಹಾಳು ಬಿದ್ದಿರುವ ಹಾಗೂ ವಿಗ್ರಹವಿಲ್ಲದ ಈ ರಚನೆಯನ್ನು ಈಶ್ವರಗುಡಿ ಅಥವಾ ಸೋಮೇಶ್ವರ ಗುಡಿ ಎಂದು ಕರೆಯುತ್ತಾರೆ. ಇದನ್ನು ಶಾಸನೋಕ್ತ ನನ್ನಯ ಎಂಬ ವ್ಯಕ್ತಿಯು (ಶಾಸನ ಸಂ. ೨೩೯) ಬಹುಶಃ ೯-೧೦ನೇ ಶತಮಾನದಲ್ಲಿ ಕಟ್ಟಿಸಿದನೆಂದು ಈ ಶಾಸನದ ಆಧಾರದಿಂದ ತರ್ಕಿಸಬಹುದಾಗಿದೆ. ಈ ದೇವರಿಲ್ಲದ ಗುಡಿಯನ್ನು ಕ್ರಿ.ಶ.೨೦೦೭ರಲ್ಲಿ ಮತ್ತು ೨೦೧೧ರಲ್ಲಿ ನೋಡಿದಂತೆ ಬಣ್ಣಿಸುತ್ತೇನೆ. ಇಟ್ಟಿಗೆಯ ಗೋಡೆಗಳನ್ನು ಗಚ್ಚಿನ ಗಿಲಾವು ಮಾಡಿ ಕಟ್ಟಲಾಗಿದೆ. ಮುಖಮಂಟಪ ಮತ್ತು ರಂಗಮಂಟಪದ ಗೋಡೆಯ ಕೋನಗಳಲ್ಲಿ ನಂದಿ ಶಿಲ್ಪಗಳನ್ನು ಕೂಡಿಸಲಾಗಿದೆ. ಆದ್ದರಿಂದ ನಿಶ್ಚಿತವಾಗಿಯೂ ಈಶ್ವರ ಗುಡಿ. ಆದರೆ ಕಾಮತರು (೧೯೮) ಊಹಿಸುವ ಹಾಗೆ ಇದು ನಾರಾಯಣಸ್ವಾಮಿ ಗುಡಿ ಅಲ್ಲ. ಅದು ಈಶ್ವರ ದೇವಸ್ಥಾನವಾಗಿ ಮಾರ್ಪಾಟು ಆಗಿಲ್ಲ. ಗ್ರ್ಯಾನೈಟ್ ಶಿಲೆಯಲ್ಲಿ ಕಡೆಯಲಾದ ೨೦ ಕಂಬಗಳಿವೆ ಹಾಗೂ ಸೂಕ್ತ ಬೋದಿಗೆಗಳಿವೆ. ಬಾಗಿಲು ಚೌಕಟ್ಟು ಕೂಡ ಗ್ರ್ಯಾನೈಟ್ ಶಿಲೆಯಿಂದ ನಿರ್ಮಿಸಲಾಗಿದೆ. ಆದರೆ, ೨೦೦೨ರಲ್ಲಿ ನಾನು ನೋಡಿದ ದೃಶ್ಯ (ಆಘಾತಕಾರಿಯಾಗಿತ್ತು. ಮಾಳಿಗೇಶ್ವರಿ ಗುಡಿಯ ಬಲಗಡೆ ಇರುವ ದೇವರಿಲ್ಲದ ಸೋಮೇಶ್ವರ ಗುಡಿಯನ್ನು (ನಿಜವಾಗಿಯೂ ನನ್ನಯ್ಯನ ಗುಡಿ) ಈ ಹಳ್ಳಿಯ ಜನರು ನೆಲಸಮಗೊಳಿಸಿದ್ದಾರೆ. ಎಲ್ಲಾ ತೊಲೆಗಳನ್ನು ಕಂಬಗಳನ್ನು ಇಟ್ಟಿಗೆಯ ಚೂರುಗಳನ್ನು ಸುಮಾರು ೨-೩ ಕಿ.ಮೀ. ದೂರದಲ್ಲಿರುವ ಕಪಿಲಾನದಿಯ ದಡದಲ್ಲಿ ಹಾಕಿದ್ದಾರೆ. ಕಾರಣ ಕೇಳಿದರೆ ಇದು ದೇವರಿಲ್ಲದ ಗುಡಿ, ಆದ್ದರಿಂದ ನೆಲಸಮ ಮಾಡಿರುವುದಾಗಿ ಸ್ಥಳೀಯ ಜನರು ಹೇಳಿದರು. ಇದೊಂದು ಬೇಜವಾಬ್ದಾರಿಯ ಕೆಲಸ.
ಊರ್ಧ್ವಲಿಂಗ: ೨೦೦೭ರಲ್ಲಿ ಈ ಸ್ಥಳಕ್ಕೆ ಭೇಟಿ ಕೊಟ್ಟಾಗ ಪಾರ್ಶ್ವನಾಥ ಶಿಲ್ಪದ ಬದಿಯಲ್ಲಿದ್ದ ಶಾಸ್ತ್ರೋಕ್ತವಾಗಿ ಕಡೆಯಲಾದ ೩೬ ಇಂಚು ಎತ್ತರದ, ಅಡಿಯಲ್ಲಿ ೩೫ ಸುತ್ತಳತೆಯ ಬಳಪದ ಕಲ್ಲಿನ ಊರ್ಧ್ವಲಿಂಗ ಶಿಲ್ಪ ಇತ್ತು.  ಇದು ಪುರುಷಲಿಂಗಕ್ಕೆ ತೀರ ಸಮೀಪದ ಹೋಲಿಕೆ ಇತ್ತು. ಈ ಲಿಂಗವನ್ನು ನೋಡಿದಾಗ ಸುಪ್ರಸಿದ್ಧ ಗುಡಿಮಲ್ಲಂ ಲಿಂಗ ನೆನಪಾಯಿತು. ೨೦೧೧ರಲ್ಲಿ ಈ ಲಿಂಗವನ್ನು ಸುರಕ್ಷಿತವಾಗಿ ಸೋಮೇಶ್ವರಗುಡಿಯ ಮುಖಮಂಟಪದಲ್ಲಿ ಯಾರೋ ತಂದಿಟ್ಟಿದ್ದರು. ಬಹುಶಃ ಇದನ್ನು ಇಲ್ಲಿ ಪ್ರತಿಷ್ಠಾಪಿಸುವ ಉದ್ದೇಶವಿತ್ತೆಂಬುದಕ್ಕೆ ಹೊರಗೆ ಬಿದ್ದಿರುವ ಪೀಠವೇ ಸಾಕ್ಷಿ.
ದೀಪಸ್ತಂಭ: ಶಾಸನ ೨೪೨ರಲ್ಲಿ ಹೇಳಿದಂತೆ ರಾಚಮ್ಮನ ಕಂಬ ನನ್ನಯ್ಯನ ಗುಡಿಯ ಮುಂದೆ ನಿಲ್ಲಿಸಲಾಗಿತ್ತು. ನಾನು ಮೊದಲೆರಡು ಸಲ ಭೇಟಿ ಕೊಟ್ಟಾಗ ಈ ಸ್ತಂಭ ಸುರಕ್ಷಿತವಾಗಿತ್ತು. ಈ ಸ್ತಂಭವನ್ನು ಡಾಲೋರೈಟ್ ಶಿಲೆಯಲ್ಲಿ ಕಟೆಯಲಾಗಿದೆ. ಈ ಶಿಲೆಯನ್ನು ಬಹುಶಃ ನಂಜನಗೂಡಿನ ಆಸುಪಾಸಿನ ಪ್ರದೇಶದಿಂದ ತಂದು ಇಲ್ಲಿ ಕಡೆಯಲಾಗಿದೆ. ಈ ಸ್ತಂಭದ ಎತ್ತರ ೩.೧ ಮೀ. ಆಮ್ಲಕದ ಎತ್ತರ ಸುಮಾರು ೦.೫೦ ಮೀ. ೨೦೧೨ರಲ್ಲಿ ಕ್ಷೇತ್ರಕಾರ್ಯಕ್ಕೆ ಹೋದಾಗ ಈ ಸ್ತಂಭವನ್ನು ಕಿತ್ತು ಸೋಮೇಶ್ವರ ಗುಡಿಯ ಕಂಪೌಂಡಿನಿಂದ ಒಂದು ಮರದಲ್ಲಿ ಹಾಕಲಾಗಿದೆ.
ದಡದ ಲಿಂಗಪ್ಪ ಮತ್ತು ಈರಣ್ಣನ ಗುಡಿಗಳು
ಈ ಎರಡು ಗುಡಿಗಳು ಮಾಳಿಗೇಶ್ವರಿ ಗುಡಿಯಿಂದ ಪಶ್ಚಿಮಕ್ಕೆ ಸುಮಾರು ಒಂದು ಕಿ.ಮೀ. ದೂರದಲ್ಲಿವೆ. ಸ್ಥಳೀಯರ ನಂಬಿಕೆಯ ಪ್ರಕಾರ ಈರಣ್ಣ ಮತ್ತು ದಡದ ಲಿಂಗಪ್ಪ ಮಾಳಿಗೇಶ್ವರಿಯ ತಮ್ಮಂದಿರು. ಈ ಗುಡಿಗಳು ತೀರ ಇತ್ತೀಚಿನ ರಚನೆಗಳು ಬಣ್ಣ ಬಳಿಯಲಾಗಿದೆ. ದಡದ ಲಿಂಗಪ್ಪನ ಗುಡಿಯನ್ನು ಮುಚ್ಚಲಾಗಿತ್ತು. ಈರಣ್ಣನ ಗುಡಿಯ ಬಾಗಿಲು ತೆರೆದಿತ್ತು. ಈರಣ್ಣನಗುಡಿಯು ವಾಸ್ತವವಾಗಿ ವೀರಭದ್ರನ ಗುಡಿ ಅಲ್ಲ. ಗುಡಿಯೊಳಗೆ ೬೦ ಸೆ.ಮೀ. ಮತ್ತು ೬೫ ಸೆ.ಮೀ. ಎತ್ತರವಿರುವ ವೀರಗಲ್ಲುಗಳಿವೆ. ಎರಡರ ಶೈಲಿ ಒಂದೇ ಇದೆ. ಬಹುಶಃ ಹೊಯ್ಸಳರ ಕಾಲದ ವೀರಗಲ್ಲುಗಳು. ಪೀಠದಲ್ಲಿ ಮಾತ್ರ ವ್ಯತ್ಯಾಸವಿದೆ. ಈರಣ್ಣನ ಗುಡಿಯ ಮುಂದೆ ಸುಮಾರು ೧ ಮೀ. ಎತ್ತರ ಮತ್ತು ಅದೇ ಅಗಲದ ಗ್ರ್ಯಾನೈಟ್ ಶಿಲೆಯ ಚೂಪಾದ ತುಂಡನ್ನು ನೆಡಲಾಗಿದೆ. ಈ ಶಿಲೆಯ ಮೇಲೆ ಕೋಳಿಗಳ ಮತ್ತು ಕುರಿಗಳ ಕೊರಳುಗಳನಿಟ್ಟು ಈರಣ್ಣನಿಗೆ ದಸರೆಯ ಹಬ್ಬದ ಸುಮಾರಿನಲ್ಲಿ ಬಲಿ ಕೊಡಲಾಗುತ್ತದೆ. ಈ ಬಲಿ ಪೀಠವನ್ನು ದಿನಾಲೂ ಕುಂಕುಮ ಹಚ್ಚಿ ಪೂಜಿಸಲಾಗುತ್ತದೆ.
ಬಸವೇಶ್ವರ ಗುಡಿ: ಈರಣ್ಣನ ಗುಡಿಯಿಂದ ಸುಮಾರು ೫೦೦ ಮೀ. ಮುಂದಕ್ಕೆ ಹೋದರೆ ಸ್ಥಳೀಯರು ಕರೆಯುವ ಬಸವೇಶ್ವರ (ಬಸವಣ್ಣನ ಗುಡಿ) ದೇವಾಲಯವಿದೆ. ಕಾಮತರು ಈ ಗುಡಿಯ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಾರೆ. ಇದರೊಳಗಿರುವ ಶಿಲ್ಪಗಳು ಕುತೂಹಲಕಾರಿಯಾಗಿವೆ. ಈ ಗುಡಿಯು ಇಲ್ಲಿಯ ಖಾಸಗಿ ವ್ಯಕ್ತಿಯೊಬ್ಬರ ತೋಟದಲ್ಲಿದೆ. ಸುಮಾರು ೧೦ ಮೀ. ಉದ್ದ ಹಾಗೂ ೨.೫ ಮೀ. ಅಗಲವಾಗಿರುವ ಸಾಧಾರಣ ಚೌಕಾಕಾರದ ರಚನೆ. ಒಳ ಹೊರಗಿನ ವಾತಾವರಣ ಸ್ವಚ್ಛವಾಗಿದೆ. ಗರ್ಭಗುಡಿಯಲ್ಲಿ ನಂದಿ ಶಿಲ್ಪ ಇದೆ. ಎಣ್ಣೆ ಮೆತ್ತಿಕೊಂಡಿದೆ. ಗರ್ಭಗುಡಿಯ ಹೊರಗಿನ ಚೌಕದಲ್ಲಿ ಬಲಕ್ಕೆ ಒಂದು ಚಿಕ್ಕ ಲಿಂಗ (ಇದು ಚಿತ್ರದಲ್ಲಿ ಮರೆಯಾಗಿದೆ), ಒಂದು ದೊಡ್ಡ ಲಿಂಗ ಮತ್ತು ನಾರಾಯಣ ಶಿಲ್ಪಗಳಿವೆ. ಎಡಗಡೆಯ ಸಾಲಿನಲ್ಲಿ ಒಂದು ಚಿಕ್ಕ ನಂದಿ ಮತ್ತು ಒಂದು ಆಂಜನೇಯ ಶಿಲ್ಪ ಇದೆ (೧೯). ಮೊದಲೆರಡು ಸಲ ಕಾಡಿದ ಪ್ರಶ್ನೆ ನಾರಾಯಣಗುಡಿ ಮತ್ತು ನಾರಾಯಣ ಶಿಲ್ಪ ಎಲ್ಲಿವೆ ಎಂಬುದಾಗಿತ್ತು. ೨೦೧೨ ಕ್ಷೇತ್ರಕಾರ್ಯವು ಈ ಪ್ರಶ್ನೆಗೆ ಉತ್ತರ ನೀಡಿತು. ಬಸವೇಶ್ವರ ಗುಡಿಯಲ್ಲಿ, ಸ್ಥಳಾಂತರಗೊಂಡು ಸ್ಥಾಪಿಸಲ್ಪಟ್ಟಿರುವ ನಾರಾಯಣ ಮೂರ್ತಿ ಇಲ್ಲಿದೆ. ಇದೊಂದು ಹೊಯ್ಸಳ ಶಿಲ್ಪ. ಬಳಪದ ಕಲ್ಲಿನಲ್ಲಿ ಕಡೆಯಲಾಗಿದೆ. ಈ ಶಿಲ್ಪವನ್ನು ಎಲ್ಲಿಂದ ತಂದು ಸ್ಥಾಪಿಸಿದರೋ ತಿಳಿಯದು. ಯಾರು ಇಲ್ಲಿ ಯಾವಾಗ ತಂದಿಟ್ಟರೆಂಬುದು ತಿಳಿಯದು. ಕಾಮತರು (೧೯೮೮) ನಾರಾಯಣಸ್ವಾಮಿ ಗುಡಿ ಇಲ್ಲಿತ್ತು ಎಂಬರ್ಥದ ಮಾತುಗಳನ್ನು ಹೇಳುತ್ತಾರೆ. ಆದರೆ ಅವರು ಹೇಳುವ ಗುಡಿ ಮೂಲದಲ್ಲಿಯೂ ಈಶ್ವರನ ಗುಡಿಯೇ ಆಗಿದೆ. ಈ ಶಿಲ್ಪದ ಮೂಲವನ್ನು ಮುಂದೆ ಯಾರಾದರೂ ಶೋಧಿಸಬೇಕಾಗಿದೆ. ಈ ಶಿಲ್ಪ ಸದ ಬಸವೇಶ್ವರ ಗುಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ.
ವೀರಗಲ್ಲುಗಳು: ಈ ಹಳ್ಳಿಯ ಸೋಮೇಶ್ವರ ಗುಡಿ (ನನ್ನಯ್ಯನ ಗುಡಿ)ಯ ಮುಂದೆ ಒಟ್ಟು ಆರು ವೀರಗಲ್ಲುಗಳಿವೆ. ಈ ಎಲ್ಲಾ ವೀರಗಲ್ಲುಗಳನ್ನು ಕಟೆಯಲು ಗ್ರ್ಯಾನೈಟ್ ಚಪ್ಪಡಿಗಳನ್ನು ಬಳಸಲಾಗಿದೆ. ಎಲ್ಲವೂ ಗಂಗರ ಕಾಲದ ಶೈಲಿಯವು ಎಂದು ಭಾವಿಸಿದ್ದೇನೆ. ಯಾವುದರ ಮೇಲೂ ಶಾಸನ ಇಲ್ಲ. ಎಲ್ಲ ವೀರಗಲ್ಲುಗಳು ಶೈವಧರ್ಮಕ್ಕೆ ಸೇರಿದ ವೀರನು ಹೋರಾಡಿ ಸತ್ತಾಗ ಕೈಲಾಸಕ್ಕೆ ಹೋಗುವ ಚಿತ್ರಗಳನ್ನು ಚಿತ್ರಿಸುತ್ತವೆ. ಇವುಗಳಲ್ಲದೆ ಈರಣ್ಣನ ಗುಡಿಯ ಬಳಿ ಎರಡು ನಗ್ನೀಕರಣಗೊಂಡ ವೀರಗಲ್ಲುಗಳಿವೆ.
ಅಧ್ಯಯನದಿಂದ ಹೊಮ್ಮುವ ತೀರ್ಮಾನಗಳು
ಮೇಲೆ ವಿವರಿಸಲಾದ ಶಾಸನಗಳ ಅಧ್ಯಯನ ಮತ್ತು ಪುರಾತತ್ತ್ವ ಅವಶೇಷಗಳ ವಿವರಣೆಗಳನ್ನು ಪರಸ್ಪರ ತಾಳೆ ಹಾಕಿ ಯೋಚಿಸಿದಾಗ ಈ ಕೆಳಗಿನ ತೀರ್ಮಾನಗಳಿಗೆ ತಲುಪಬಹುದಾಗಿದೆ.
೧. ಶಾಸನದಲ್ಲಿ ನಗರ್ಲಾ ಎಂದು ಹೆಸರಿಸಲಾಗಿರುವ ಈ ನಗರ್ಲೆಯು ಕ್ರಿ.ಶ.೧೦ನೇ ಶತಮಾನದಲ್ಲಿ ಗಂಗರ ಅಧೀನದಲ್ಲಿತ್ತು. ಅವರ ಅಧಿಕಾರಿ ವಿದ್ಯಾಧರನು ಈ ಹಳ್ಳಿಯ ಗುಡಿಗಳಿಗೂ, ಮಠಗಳಿಗೂ ದಾನ ದತ್ತಿಗಳನ್ನು ನೀಡುತ್ತಿದ್ದನು.
೨. ಇಲ್ಲಿ ಒಂದು ವಿದ್ಯಾಕೇಂದ್ರವಿತ್ತು. ಇಲ್ಲಿಯ ವಿದ್ಯಾರ್ಥಿಗಳ ಮತ್ತು ಸಂನ್ಯಾಸಿಗಳ ಅವಶ್ಯಕತೆಗಳನ್ನು ವಿದ್ಯಾಧರನು ಪೆರ್ಮಾಡಿಯ ಆಜ್ಞಾನುಸಾರವಾಗಿ ಪೂರೈಸುತ್ತಿದ್ದನು.
೩. ಇಲ್ಲಿ ನನ್ನಯ್ಯನು ಕಟ್ಟಿಸಿದ ಗುಡಿ ಇತ್ತು. ಇದು ಸೋಮೇಶ್ವರ ದೇವಸ್ಥಾನವಾಗಿ ಹೆಸರು ಪಡೆಯಿತು. ತೀರ ಇತ್ತೀಚೆಗೆ ನೆಲಸಮವಾಗಿ ಹೋಗಿದೆ. ಈ ನಿವೇಶನದಲ್ಲಿ ಸುಂದರ ಹೂದೋಟ ಬೆಳೆಸುವುದು ಸೂಕ್ತ.
೪. ಊರ್ಧ್ವಲಿಂಗ ಇಲ್ಲಿಗೆ ಎಲ್ಲಿಂದ ಬಂತು? ಇದಕ್ಕೆ ಸೂಕ್ತವೆನಿಸುವಂತ ದೇವಾಲಯ ಇಲ್ಲಿ ಹಿಂದೆ ಇದ್ದಿರಬಹುದು. ಈಗ ಗುಡಿ ನಾಶವಾಗಿ ಹೋಗಿ ಲಿಂಗ ಮಾತ್ರ ಉಳಿದಿದೆ. ಅದೂ ಕೂಡಾ ಕಪಿಲಾ ನದಿಯ ದಡದ ಮೇಲೆ ಇದೆ ಎಂದು ತಿಳಿದುಬಂತು.
೫. ಮಾರಮ್ಮನ ಗುಡಿಯು ಮಾರೆಮ್ಮನ ಗುಡಿ ಅಲ್ಲ. ವಾಸ್ತವವಾಗಿ ಇದು ಈಶ್ವರ ದೇವರ ಗುಡಿ. ಇಲ್ಲಿಯೇ ಊರ್ಧ್ವಲಿಂಗದ ಗುಡಿ ಹಿಂದೆ ಇತ್ತೆ? ಸದ್ಯಕ್ಕೆ ಈ ಊಹೆಗೆ ಉತ್ತರವಿಲ್ಲ.
೬. ಹಯವದನರಾವ್ ಅವರು (೧೯೩೦) ಉಲ್ಲೇಖಿಸುವ ದುರ್ಗಾ ಪರಮೇಶ್ವರಿ ಗುಡಿ ಈಗ ಇಲ್ಲ.
೭. ಇಲ್ಲಿ ಶಕ್ತಿದೇವತೆಯ ಗುಡಿಗಳನ್ನು ಗಮನಿಸಿದರೆ ಶಕ್ತಿ ಆರಾಧನೆ ಕ್ರಿ.ಶ.೧೦ನೇ ಶತಮಾನದಿಂದಲೂ ಇದೆ. ಇಂದಿಗೂ ನಡೆದುಕೊಂಡು ಬಂದಿದೆ. ಆದರೆ ಶಕ್ತಿದೇವತೆಯ ಬಲಿಗಳನ್ನು ಕೊಂಚ ದೂರದಲ್ಲಿರುವ ಈರಣ್ಣ ದೇವರ ಗುಡಿಯ ಮುಂದೆ ಕಡಿಯಲಾಗುತ್ತದೆ. ಬಹುಶಃ ಮಾಳಿಗೇಶ್ವರಿ ಪೂಜಾರಿಗಳು ಶಿವಾರ್ಚಕರ ತಮ್ಮಡಿಗಳಾದ ನಂತರ ಇಲ್ಲಿ ಬಲಿ ಕಡಿಯುವುದನ್ನು ಕೆಲ ಶತಮಾನಗಳ ಹಿಂದೆ ನಿಲ್ಲಿಸಿರಬಹುದು. ಲಿಂಗಾಯತ ಧರ್ಮ ಬಲಿಯನ್ನು ವಿರೋಧಿಸುತ್ತದೆ. ಆದ್ದರಿಂದ ಈ ಬದಲಾವಣೆಯನ್ನು ತಂದಿರಬಹುದು.
೮. ಹೊಯ್ಸಳರ ಕಾಲದಲ್ಲಿ ಇಲ್ಲಿ ಜೈನಧರ್ಮ ಕಾಲಿಟ್ಟಿರಬಹುದು. ಆದರೆ ಬಹಳ ವರ್ಷಗಳ ಕಾಲ ಬಾಳದೆ ದುರ್ಬಲವಾಗಿ ಈ ಊರಿನಿಂದಾಚೆಗೆ ಹೋಯಿತೆಂದು ಊಹಿಸಬಹುದು. ಈ ಊಹೆಗೆ ಪಾಳಾಗಿರುವ ಪಾರ್ಶ್ವನಾಥ ಬಸ್ತಿಯೇ ಸಾಕ್ಷಿ.
೯. ಈಗ ಕಿತ್ತು ಬಿಸಾಡಿರುವ ಧ್ವಜಸ್ತಂಭವನ್ನು ಸೋಮೇಶ್ವರಗುಡಿಯ (ನನ್ನಯ್ಯಗುಡಿ) ಕಂಬ ಮತ್ತು ತೊಲೆಗಳನ್ನು ಹಾಗೂ ಊರ್ಧ್ವಲಿಂಗವನ್ನು ಸಮೀಪದ ಸುತ್ತೂರಿನಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಸಾಗಿಸಿ, ಪ್ರದರ್ಶಿಸಬಹುದು.
೧೦. ಹಾಗೆಯೇ ಎಂಟು ವೀರಗಲ್ಲುಗಳನ್ನು ಸುತ್ತೂರಿಗೆ ಸಾಗಿಸಿ, ಸ್ವಚ್ಛಗೊಳಿಸಿ ಅಧ್ಯಯನಕ್ಕೊಳಪಡಿಸಬಹುದು.
[ಕೃತಜ್ಞತೆಗಳು : ನಾನು ಕ್ಷೇತ್ರಕಾರ್ಯ ಕೈಗೊಂಡಾಗ ನನಗೆ ಸುತ್ತೂರಿನಲ್ಲಿ ವಸತಿ ಸೌಕರ್ಯವನ್ನು ಒದಗಿಸಿದ ಸುತ್ತೂರು ಸಂಸ್ಥಾನಕ್ಕೂ, ಆಡಳಿತಾಧಿಕಾರಿಗಳಾದ ಶ್ರೀ ಶೇಖರಗೌಡ ಪಾಟೀಲ, ನಗರ್ಲೆಯ ಡಾ. ಕೆ.ಸಿ. ಮಹಾದೇಶ ಅವರಿಗೂ, ಶ್ರೀ ನಾಗೇಂದ್ರಸ್ವಾಮಿ ಅವರಿಗೂ ನಾನು ಕೃತಜ್ಞನಾಗಿದ್ದೇನೆ. ಊರ್ಧ್ವಲಿಂಗದ ಪರಿಕಲ್ಪನೆಯನ್ನು ನನಗೆ ವಿವರಿಸಿದ ಡಾ. ಎಂ.ಜಿ. ನಾಗರಾಜರಿಗೆ ನಾನು ಕೃತಜ್ಞ.]

? ‘ಸಂಗಮ, ಎಮ್.ಐ.ಜಿ.-೭೭, ೬ನೇ ಕ್ರಾಸ್, ೬ನೆಯ ಮೈನ್, ಕೆ.ಹೆಚ್.ಬಿ. ಕಾಲೋನಿ, ೨ನೇ ಹಂತ, ಬಸವೇಶ್ವರನಗರ, ಬೆಂಗಳೂರು-೭೯.
 
           ಪಾರ್ಶ್ವನಾಥ ಶಿಲ್ಪ




ಈರಣ್ಣನ ಗುಡಿಯೊಳಗಿರುವ ಒಬ್ಬ ವೀರನ ಶಿಲ್ಪ

ಪಾರ್ಶ್ವನಾಥ ಬಸ್ತಿಯಲ್ಲಿದ್ದ ಲಿಂಗ 

ಶಾಸನೋಕ್ತ ರಾಚಮ್ಮನು ನಿಲ್ಲಿಸಿದ ದೀಪಸ್ತಂಭ

ಈರಣ್ಣನ ಗುಡಿಯೊಳಗಿರುವ ಇನ್ನೊಬ್ಬ ವೀರನ ಶಿಲ್ಪ



ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಹಯವದನರಾವ್ (೧೯೩೦), ಮೈಸೂರು ಗ್ಯಾಸೆಟಿಯರ್, ಗಿI Pಚಿಡಿಣ ೧, (ಪುನರ್ ಮುದ್ರಣ ೨೦೧೧, ಪುಟ ೭೮೯).
೨.         ಸೂರ್ಯನಾಥ ಕಾಮತ್ (೧೯೮೮), ಮೈಸೂರು ಜಿಲ್ಲೆಯ ಗ್ಯಾಸೆಟಿಯರ್, ಪುಟ ೯೦೦.
೩.         ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೩, (ಪರಿಷ್ಕೃತ), ಮೈಸೂರು ವಿಶ್ವವಿದ್ಯಾನಿಲಯ, ಪುಟ ೩೭೨೬-೩೨೮, ೧೯೭೪.



Friday, May 3, 2013

ಅಮ್ಮಿನಭಾವಿ ಶಾಸನೋಕ್ತ ಷಟ್ಪದ

 ಅಮ್ಮಿನಬಾವಿ ಶಾಸನೋಕ್ತ ಅಂಶಗಣ ಷಟ್ಪದದ ಸರಿಯಾದ ಪಾಠ ಆದರೆ ವಾಸ್ತವ ವಿಭಿನ್ನ

ಎಸ್. ಕಾರ‍್ತಿಕ್
# ೬೫ [೧ ಮಹಡಿ], ೩ ನೆಯ ಅಡ್ಡರಸ್ತೆ, ಶಿಕ್ಷಕರ ಬಡಾವಣೆ, ೧ ನೆಯ ಹಂತ, ಜೆ.ಪಿ.ನಗರ ಅಂಚೆ , ಬೆಂಗಳೂರು-೭೮

    ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿರುವ ಕ್ರಿ.ಶ. ೧೦೭೧-೭೨ ರ ಅಮ್ಮಿನಬಾವಿ ಶಾಸನೋಕ್ತ ಅಂಶಗಣ ಷಟ್ಪದಕ್ಕೆ ಕನ್ನಡ ಷಟ್ಪದಿ ಛಂದಸ್ಸಿನ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಶಾಸನದಲ್ಲಿಯೇ ಷಟ್ಪದ ಎಂಬ ಸೂಚನೆಯಿರುವುದು ಗಮನಾರ್ಹ ಅಂಶವಾಗಿದೆ. ಇದರ ಬಗೆಗೆ ಹಲವಾರು ವಿಚಾರ ವಿಮರ್ಶೆಗಳು ನಡೆದಿವೆ. ಆದರೆ ಷಟ್ಪದದ ಸರಿಯಾದ ಪಾಠದ ಕಡೆಗೆ ಯಾರೊಬ್ಬರೂ ಗಮನ ಹರಿಸಿದಂತಿಲ್ಲ. ಇದರ ಪಾಠವನ್ನು ಮೊದಲು ಸಂಶೋಧಕರ ಗಮನಕ್ಕೆ ತಂದವರು ಪಿ. ಬಿ. ದೇಸಾಯಿ ಅವರು (ಕನ್ನಡ ನುಡಿ ೧೫-೨, ೧೯೫೨ ಪುಟ ೪೮). ಇವರು ಅನೇಕ ಚರ್ಚೆಗಳಾದ ನಂತರ ನೀಡಿರುವ ಪುನರ್ ವಿಮರ್ಶಿತ ಪಾಠವನ್ನೇ (ಕನ್ನಡ ನುಡಿ ೧೫-೧೧, ಪುಟ ೩೦೭-೩೧೧) ತೀ. ನಂ. ಶ್ರೀಕಂಠಯ್ಯ, ಟಿ.ವಿ. ವೆಂಕಟಾಚಲ ಶಾಸ್ತ್ರೀ ಮೊದಲಾದ ವಿದ್ವಾಂಸರು ಸಾಮಾನ್ಯವಾಗಿ ಒಪ್ಪಿಕೊಂಡು ವಿಮರ್ಶೆಗಳನ್ನು ಮಾಡಿದ್ದಾರೆ {ಇದರ ಬಗೆಗಿನ ಸಮಗ್ರ ಚರ್ಚೆಗೆ ನೋಡಿ : (ಅ) ಅಪೂರ್ವ ಷಟ್ಪದಿಯ ಲಕ್ಷಣ-ತೀ. ನಂ. ಶ್ರೀಕಂಠಯ್ಯ, ತೀ.ನಂ.ಶ್ರೀ ಸಮಗ್ರ ಗದ್ಯಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೦೬, ಪುಟ ೫೫೯-೫೬೮ (ಆ) ಕನ್ನಡ ಛಂದಃಸ್ವರೂಪ-ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಿ.ವಿ.ಕೆ. ಮೂರ್ತಿ, ಮೈಸೂರು-೧೯೭೮, ಪುಟ ೪೯೭-೪೯೮ ; ದ್ವಿತೀಯ ಮುದ್ರಣ-೧೯೯೬, ಪುಟ ೪೪೨-೪೪೩ (ಇ) ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಛಂದಸ್ಸಿನ ಚರಿತ್ರೆ, ಸಂಪುಟ-೨ (ಸಂ) ಸಿ. ಪಿ. ಕೃಷ್ಣಕುಮಾರ್, ೧೯೮೦, ಪುಟ ೧೬೩-೧೬೪ (ಈ) ಷಟ್ಪದಿ, ಲಕ್ಷಣ, ಪ್ರಭೇದ, ಇತಿಹಾಸ-ಟಿ.ವಿ. ವೆಂಕಟಾಚಲ ಶಾಸ್ತ್ರೀ, ಶಾಸ್ತ್ರೀಯ-೨, ಸಪ್ನ ಬುಕ್ ಹೌಸ್, ಬೆಂಗಳೂರು-೧೯೯೯, ಪುಟ ೩೭೬-೩೭೭} ಪಿ. ಬಿ. ದೇಸಾಯಿ ಅವರು ನೀಡಿರುವ ಪುನರ್ ವಿಮರ್ಶಿತ ಪಾಠ ಇಂತಿದೆ :

ಹರಪಾದಾಂಬುಜ ಭೃಂಗಂ
ಪರನಾರೀಜನದೂರಂ
. . . . . . . . . . . . . . . .
[ಸರಸನೂರ್ಜಿ]ತರೂಪಂ
ಸರಸತಿಗಣಭಕ್ತ
ನರಸಮಂ ನೆಗರ್ದನೀ ಧರೆಗೆಲ್ಲಂ

ಇದನ್ನು  ಎಂ. ಎಂ. ಕಲಬುರ್ಗಿ ಅವರು ಕೆಳಗಿನಂತೆ (ಧಾರವಾಡ ತಾಲ್ಲೂಕಿನ ಶಾಸನಗಳು, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೧೯೭೬, ಪ್ರಸ್ತಾವನೆ, ಪುಟ xxiii ಮತ್ತು ಪುಟ ೨) ದಾಖಲಿಸಿದ್ದಾರೆ : 

ಹರಪಾದಾಂಬುಜ ಭೃಂಗಂ
ಪರನಾರೀಜನದೂರಂ
[   -  -    -  -] ಜಾತರೂಪಂ
ಸರಸತಿಗಣಭಕ್ತಂ
ನರಸಂಮಂ ನೆಗರ್ದ್ಧನೀ
ಧರೆಗೆಲ್ಲಂ ಸಲೆ ಸ [-    -  -]
ಈ ಶಾಸನದ ಪಾಠವನ್ನು ಎಂ. ಎಂ. ಕಲಬುರ್ಗಿ ಅವರು ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್‌ನಲ್ಲಿ ಪ್ರಕಟವಾಗಿರುವಂತೆಯೇ ನೀಡಿದ್ದಾರೆ. ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್, ಸಂಪುಟ-೧೧, ಭಾಗ-೨ ರಲ್ಲಿ {ombಚಿಥಿ ಏಚಿಡಿಟಿಚಿಣಚಿಞ Iಟಿsಛಿಡಿiಠಿಣioಟಿs, ಗಿoume-, Pಚಿಡಿಣ-೨, (ಸಂ) ಎನ್. ಲಕ್ಷ್ಮೀನಾರಾಯಣರಾವ್ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ದೆಹಲಿ-೧೯೮೬ ರ ಮರುಮುದ್ರಣ, ಶಾಸನ ಸಂಖ್ಯೆ-೧೨೧, ಪುಟ ೧೪೦, ಸಾಲು ೨೩-೨೫} ಪ್ರಕೃತ ಷಟ್ಪದವು ಕೆಳಗಿನಂತೆ ಅಚ್ಚಾಗಿದೆ.

               ೨೩ . . . . . . ಧರ್ಮ್ಮಜ್ಞರ್ || ಷಟ್ಪದ|| ಹರಪಾದಾಂಬುಜ ಭೃಂಗಂ ಪರನಾರೀಜನದೂರಂ . . .
               ೨೪ . . . . . . ಜಾತರೂಪಂ ಸರಸತಿಗಣಭಕ್ತ ನರಸ[ಂ]ಮ್ಮಂ ನೆಗರ್ದ್ಧನೀ ಧರೆಗೆಲ್ಲಂ ಸಲಿ ಸ .
               ೨೫ . . . .  ಸಂಸಾರಂ

ಈ ಷಟ್ಪದವನ್ನು ಪಾದಗಳಾಗಿ ವಿಂಗಡಿಸಿ ಬರೆದರೆ ಅದರ ಸ್ವರೂಪ ಕೆಳಗಿನಂತಿರುತ್ತದೆ. ಇದೇ ಸರಿಯಾದ ಪಾಠವಾಗಿದ್ದು ಅಂಶಗಣ ಷಟ್ಪದದ ಲಕ್ಷಣಕ್ಕೆ ಸರಿಯಾಗಿದೆ. ಆದರೆ ಸ್ವಲ್ಪಮಟ್ಟಿಗೆ ಪದ್ಯ ತ್ರುಟಿತವಾಗಿರುವುದು ವಿಷಾದಕರ ಅಂಶ.
ಹರಪಾದಾಂಬುಜ ಭೃಂಗಂ
ಪರನಾರೀಜನದೂರಂ
. . . . . . . . .  ಜಾತರೂಪಂ
ಸರಸತಿಗಣಭಕ್ತ
ನರಸ[ಂ]ಮ್ಮಂ ನೆಗರ್ದ್ಧನೀ
ಧರೆಗೆಲ್ಲಂ ಸಲಿ ಸ . . . . .

 ಮೇಲಿನ ವಿಶ್ಲೇಷಣೆಯಿಂದ ತಿಳಿದು ಬರುವ ಪ್ರಮುಖ ಅಂಶವೆಂದರೆ ಕಲಬುರ್ಗಿ ಅವರು ಅಂಗೀಕರಿಸಿರುವ, ಸೌತ್ ಇಂಡಿಯನ್ ಇನ್ಸ್ಕ್ರಿಷನ್ಸ್‌ನಲ್ಲಿನ ಪಾಠವೇ ಸರಿಯಾಗಿದ್ದು {ಒಂದೆರಡು ಕಡೆ ಕಲಬುರ್ಗಿ ಅವರು ನೀಡಿರುವ ಪಾಠದಲ್ಲಿ ಬಹುಶಃ ಮುದ್ರಣ ದೋಷಗಳಿವೆ} ಪಿ. ಬಿ. ದೇಸಾಯಿ ಅವರು ನೀಡಿರುವ ಪಾಠವನ್ನೇ ನಂತರದ ಸಂಶೋಧಕರು ಅನುಸರಿಸಿರುವ ಕಾರಣ ಪ್ರಕೃತ ಅಂಶಗಣ ಷಟ್ಪದದ ಪಾಠ ದೋಷಗಳಿಂದ ಕೂಡಿವೆ. ಬಹುಶಃ ಶಾಸನ ಮೂಲವನ್ನು ನೋಡದ ಕಾರಣ ಈ ದೋಷಗಳು ಸಂಭವಿಸಿವೆ. ಇದು ಸಮರ್ಥನೀ ಯವಲ್ಲ. ಪರನಾರೀ ಜನದೂರಂ ಆದ ಮೇಲೆ ಒಂಬತ್ತು ಅಕ್ಷರಗಳು ಮಾತ್ರ ತ್ರುಟಿತವಾಗಿವೆ. ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್ ಸಂಪುಟ ಗಳಲ್ಲಿ ತ್ರುಟಿತವಾಗಿರುವ ಅಕ್ಷರಗಳ ಸಂಖ್ಯೆಯನ್ನು ಖಚಿತವಾಗಿ ಚುಕ್ಕೆಗಳನ್ನು ಇಡುವುದರ ಮೂಲಕ ಸೂಚಿಸುತ್ತಾರೆ. ನರಸ[ಂ]ಮ್ಮಂ ಎಂಬಲ್ಲಿ ಸ ನಂತರ ಚೌಕಕಂಸದೊಳಗಿರುವ ಅನುಸ್ವಾರ ಸಂಪಾದಕರ ಸೇರ್ಪಡೆಯೆಂದು ತೋರುತ್ತದೆ. ಇದರ ಅಗತ್ಯವಿರಲಿಲ್ಲ.  ಪಿ. ಬಿ. ದೇಸಾಯಿಯವರು ಶಾಸನಪಾಠದ ಪಡಿಯಚ್ಚಿನ ನೆರವಿನಿಂದ ತಮ್ಮ ಪಾಠವನ್ನು ನೀಡಿರುತ್ತಾರೆ. ಆದರೆ ದೇಸಾಯಿಯವರು ನೀಡಿರುವ ಪಾಠಕ್ಕೆ ಯಾವುದೇ ಸಮರ್ಥನೆಯಿಲ್ಲ. ಇಲ್ಲಿ ಮೂರನೆಯ ಸಾಲಿನ ತ್ರುಟಿತ ಭಾಗ [   -,  -  ,  -  -] ಎಂಬ ವಿನ್ಯಾಸದ ವಿಷ್ಣುಗಣವಾಗಿ ಇರಬೇಕೆಂದು ಕಲಬುರ್ಗಿ ಅವರು  ದಾಖಲಿಸಿದ್ದಾರೆ. ಇದು ಅಂಶಗಣ ಛಂದಸ್ಸಾದ ಕಾರಣ [-  - -,      -  -] , [     -  --  - -] , [    ] ಈ ವಿನ್ಯಾಸಗಳ ವಿಷ್ಣುಗಣಗಳಲ್ಲಿಯೂ ತ್ರುಟಿತ ಶಾಸನ ಪಾಠ ಇರಬಹುದಾದ ಸಾಧ್ಯತೆಯಿದೆ. ಆರನೆಯ ಸಾಲಿನ ತ್ರುಟಿತ ಭಾಗಕ್ಕೂ ಇದೇ ಮಾತು ಅನ್ವಯಿಸುತ್ತದೆ. ಈ ಕಾರಣದಿಂದ ಕಲಬುರ್ಗಿ ಅವರು ದಾಖಲಿಸಿರುವ ರೀತಿಯನ್ನು ಒಪ್ಪುವುದು ಕಷ್ಟ.

   ಇಂತಹ ಕಾರಣಗಳಿಂದ ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್‌ನಲ್ಲಿ ಪ್ರಕಟವಾಗಿರುವ ಪಾಠವನ್ನೇ ಅವಲಂಬಿಸುವುದು ಸೂಕ್ತವಾದು ದಾಗಿದೆ. ಪ್ರಕೃತ ವಿವೇಚನೆಯ ಹಿನ್ನೆಲೆಯಲ್ಲಿ ಮುಂದೆ ಶಾಸನಪಾಠದ ಮಾಹಿತಿಗಳು ವಸ್ತುನಿಷ್ಠವಾಗಿ ಪುನರ್ ವಿಮರ್ಶೆಗೆ ಒಳಪಡ ಬೇಕಿದೆ.


* * *