Tuesday, March 4, 2014

ಇತಿಹಾಸ ಅಕಾದಮಿಯ ಪ್ರವಾಸ



ಕೊಂಕಣ ಯಾತ್ರೆ.  


ಕರ್ನಾಟಕ ಇತಿಹಾಸ ಅಕಾದಮಿಯುಇತಿಹಾಸ ಪ್ರಜ್ಞೆಯನ್ನು ಜಾಗೃತ ಗೊಳಿಸುವ ಅನೇಕ ಕಾರ್ಯಕ್ರಮಗಳಲ್ಲಿ ಐತಿಹಾಸಿ ಸ್ಥಳಗಳಿಗೆ ಪ್ರವಾಸ ಏರ್ಪಡಿಸುವುದೂ ಒಂದು. ಇದು ತಕ್ಕ ಮಟ್ಟಿಗೆ ಜನ ಪ್ರಿಯವೂ ಹೌದು. ಪ್ರೇಕ್ಷಣೀಯ ಸ್ಥಳಗಳನ್ನು ಸಾಧಾರಣ ಪ್ರವಾಸಿಗಳಂತೆ ನೋಡದೆ ಅದರ ಐತಿಹಾಸಿಕ ವಿವರ,ಚಾರಿತ್ರಿಕ ಮಹತ್ವ, ಅಲ್ಲಿನ ಶಿಲಾಶಾಸನ ಸ್ಮಾರಕಗಳ ಮೂರ್ತಿ ಶಿಲ್ಪ , ವಾಸ್ತು ಶಿಲ್ಪಗಳ ನಿಖರ ಮಾಹಿತಿಯನ್ನು ತಜ್ಞರು ತಿಳಿಸಿಕೊಡುವ ಪರಿಪಾಠವಿದೆ.ಈಸಲ ಬೆಂಗಳೂರು ಜಿಲ್ಲಾ ಘಟಕವು ಕೊಂಕಣ ತೀರಕ್ಕೆ ಪ್ರವಾಸ ಹಮ್ಮಿಕೊಂಡಿತ್ತು. ಕಾಸರಗೋಡಿನಿಂದ ಹಿಡಿದು ಮಲ್ಪೆಯವರೆಗಿನ ತೀರದಲ್ಲಿನ ಕೋಟೆ ಕೊತ್ತಲ ದೇಗುಲ ,ಐತಿಹಾಸಿಕ ಸ್ಮಾರಕಗಳ ವೀಕ್ಷಣೆಯು ಪ್ರವಾಸದ ಗುರಿಯಾಗಿತ್ತು. ಪ್ರವಾಸವನ್ನು ಸಂಘಟಿಸಿದವರು ಕರಾವಳಿ ತೀರದವರೇ ಆದ ಡಾ. ಇಂದಿರಾ ಹೆಗಡೆ. ಅವರು ಬೆಂಗಳೂರು ಘಟಕದ ಅಧ್ಯಕ್ಷೆಯೂ ಹೌದು



ಮೂರು ರಾತ್ರಿ ಎರಡುಹಗಲುಗಳ ಈ  ಪ್ರವಾಸಕ್ಕೆ ೧೮ ಸದಸ್ಯರು ನೊಂದಾಯಿಸಿದ್ದರು.ರಾಜ್ಯದ್ಯಕ್ಷರಾದ ಡಾ.ದೇವರ ಕೊಂಡಾರೆಡ್ಡಿಯವರ ಮಾರ್ಗದರ್ಶನವೂ ಇದ್ದಿತು. ಆದರೆ ಅವರು ಆರೋಗ್ಯದ ಕಾರಣದಿಂದ ರಾತ್ರಿ ಪಯಣ ಮಾಡುವುದನ್ನುಕಡಿಮೆ ಮಾಡಿರುವರು. ಅವರು ಹಗಲೇ ಹೊರಟು ಮಂಜೇಶ್ವರದಲ್ಲಿ ತಂಡವನ್ನು ಕೂಡಿಕೊಂಡುಮುನ್ನೆ ಡೆಸುವವರಿದ್ದರು.ಭಾಗವಹಿಸಿದವರೆಲ್ಲ ಇತಿಹಾಸರಂಗದಲ್ಲಿ ಪಳಗಿದವರೇ. ನಾವು ಒಬ್ಬಿಬ್ಬರು ಮಾತ್ರ ಕುತೂಹಲಿಗಳಾದ ಇತಿಹಾಸ ಆಸಕ್ತರು. ನಾವೆಲ್ಲ ಶನಿವಾರಾತ್ರಿ ಎಸ್‌.ಆರ್‌.ಎಸ್‌ ಬಸ್ಸಿನಲ್ಲಿ ಕಾಸರೋಡಿಗೆ ಹೊರಟೆವು.ಎಲ್ಲರಿಗೂ ನಿದ್ರಾಸನಗಳು. ಕೆಲವರಿಗೆ ಒಂಟಿ ಶಯ್ಯೆ ದೊರೆತರೆ ಹಲವರಿಗೆ ಜಂಟಿ ಹಾಸಿಗೆಗಳು.ನಮ್ಮಲ್ಲಿರು ದಂಪತಿಗಳನ್ನು ಎಲ್ಲರೂ ಒತ್ತಾಯ ಮಾಡಿದರೂ ಅವರು ಮನೆಯಲ್ಲಂತೂ ಇದ್ದೇ ಇದೆ ಇಲ್ಲಿ ಬದಲಾವಣೆ ಇರಲಿ ಎಂದರು. ಆದರೆ ಮೂಲ ಕಾರಣ ಅನೇಕ ದಿನಗಳ ಮೇಲೆ ದೊರೆತ ಗೆಳಯರೊಡಗಿನ ಮಾತು ಕಥೆಯ ಅವಕಾಶ ಕಳೆದು ಕೊಳ್ಳಲು ಅವರು ಸಿದ್ಧರಿರಲಿಲ್ಲ. ಆದರೆ ಇಬ್ಬರು ಸೋದರಿಯರಿಬ್ಬರು,ವಾಸ್ತು ಶಿಲ್ಪ ಮತ್ತು ಮೂರ್ತಿಶಿಲ್ಪ ತಜ್ಞೆಯರಬ್ಬರೂ  ಜಂಟಿ ಹಾಸಿಗೆಯನ್ನು ಆನಂದಿಂದ ಆರಿಸಿ ಕೊಂಡರು ಏಕೆಂದರೆ ಅವರು ಜೀವದ ಗೆಳತಿಯರು. ಹೀಗೆ ಎಲ್ಲರೂ ಅಲ್ಲಲ್ಲಿ ಮಲಗಲು ಸನ್ನದ್ದರಾದರು.ನಮ್ಮ ತಂಡದ ನಾಯಕಿ ಬಲುಶಿಸ್ತಿನ ವ್ಯಕ್ತಿ.ಎಲ್ಲವೂ ಅಚ್ಚುಕಟ್ಟಾಗಿ ಜರುಗ ಬೇಕು.ಅವರ ಈ ಗುಣ ಕ್ಕೆ ಕಾರಣ ಅವರ ಮನೆಗೆ ಹೋದಾಗ ತಿಳಿಯಿತು. ಅದಕ್ಕೆ ಕಾರಣ ಅವರ ಪತಿ ಶಿವರಾಮ ಹೆಗಡೆ. ಅವರು ಮಾಜಿ ಸೈನಿಕ. ಹತ್ತೊಭತ್ತನೆಯ ವಯಸ್ಸಿನಲ್ಲಿಯೇ ಯಾರಿಗೂ ಹೇಳದೆ ಕೇಳದೇ ಸೈನ್ಯ ಸೇರಿ ಸಾಮಾನ್ಯ ಸಿಪಾಯಿಯಿಂದ ಹವಲ್ದಾರೆ ಹುದ್ದೆಗೆ ಏರಿ ನಂತರ ಸ್ವಯಂ ನಿವೃತ್ತಿ ಪಡೆದು ವಿವಿಧ ಹುದ್ದೆ ನಿರ್ವಹಿಸಿ ಅಧಿಕಾರಿಯಾಗಿ ನಿವೃತ್ತರಾದವರು. 


ಎಲ್ಲಿಯೇ ಇರಲಿ ಸೈನಿಕ ಶಿಸ್ತು ಅವರದು. ಅದು ಸಂಗಾತಿಯ ಮೇಲೂ ಅದು ಪರಿಣಾಮ ಬೀರಿತ್ತು  .ಮೇಲುನೋಟಕ್ಕೆ ತುಸು ಸಿಡುಕು ಎನಿಸಿದರು ಶಿಸ್ತು ಮತ್ತು ಶ್ರದ್ಧೇ ಯ ಪರಿಣಾಮ ಮಗ ಮತ್ತು ಮಗಳು ಕೂಡಾ ವಿದ್ಯಾವಂತರಾಗಿ ಉತ್ತಮ ಹುದ್ದೆಯಲ್ಲಿದ್ದರು.  ಜೊತೆಗೆ ತಾವೂ ಮೆಟೀರಿಯಲ್‌ಮ್ಯಾನೇಜ್‌ಮೆಂಟ್‌ನಲ್ಲಿ ಚಿನ್ನದ ಪದಕ ಗಳಿಸಿದವರು. ಹೆಂಡತಿಯ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ ಮದುವೆ ಮಕ್ಕಳ ಜಂಜಾಟದ ನಡುವೆಯೂ ಸ್ನಾತಕೋತ್ತರ ಅಧ್ಯಯನ ನಡೆಸಿ ಪಿ. ಎಚ್‌ಡಿ ಪದವಿ ಪಡೆದು ಸಂಶೋಧನೆ ಮತ್ತು ಸಾಹಿತ್ಯರಂಗದಲ್ಲಿ ಮಿಂಚಲುಕಾರಣ ಪತಿಯ ಪ್ರಭಾವ ಮತ್ತು ಸಹಕಾರ.  ಇದರಿಂದ ಅವರಿಗೆ ವಹಿಸಿದ ಯಾವುದೇ ಹೊಣೆ ಅತ್ಯಂತ ಯಶಸ್ವಿಯಾಗುವುದು.ಅವರ ಶಿಸ್ತನ್ನು ಗಮನಿಸಿದ ಗೆಳೆಯರು ಅವರನ್ನು ಇಂದಿರಾಗಾಂಧಿ ಎಂದುಪ್ರೀತಿಯಿಂದ ಕಾಲೆಳೆಯುತಿದ್ದರು.ಅದೂ ಅವರ ಬೆನ್ನ ಹಿಂದೆ.

ಆದರೆ ಆರು ಕ್ರಾಫ್‌ಇದ್ದರೂ ನಿರ್ವಹಣೆ ಕಠಿನವಲ್ಲ ಆದರೆ ಮೂರು ಜಡೆ ಒಟ್ಟಿಗೆ ಇದ್ದರೆ ಬಲು ಕಷ್ಟ ಎನ್ನುವ ಮಾತಿದೆ, ನಮ್ಮಲ್ಲಿ ಹತ್ತು ಜನ ಅವರೇ . ಒಬ್ಬೊಬ್ಬರದು ಒಂದು ಧಾಟಿ ಹೀಗಾಗಿ ಸಮಯಪಾಲನೆಗೆ ಅವರನ್ನು ಒಳ ಪಡಿಸಲು ತುಸು ಗಂಭೀರತೆ ಅಗತ್ಯವಾಗಿತ್ತು.

ಮಂಜೇಶ್ವರದ ಹತ್ತಿರದ  ಹೊಸ ಅಂಗಡಿ ತಲುಪಿದಾಗ ಬೆಳಗಿನ ಆರು ಗಂಟೆ.  ಅಲ್ಲಿನ ಹಿಲ್‌ವ್ಯೂ ನಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸಿ ದೆವು. ಹೆಸರು ಹಿಲ್‌ವ್ಯು ಆದರೆ ಅಲ್ಲಿ ಹಿಲ್ಲೂ ಇಲ್ಲ ವ್ಯೂ ನೂ ಇಲ್ಲ.ರೈಲು ದಾರಿಹೋಗುವ ಎತ್ತರದ ಜಾಗ ಬಿಟ್ಟು  ಉಳಿದುದನ್ನು ಕಡಿದು ಅಂಗಡಿ ನಿರ್ಮಾಣ ಮಾಡಿರುವುದು ಕಂಡುಬಂದಿತು.  ಅದುಕೇರಳ ರಾಜ್ಯದಲ್ಲಿದೆ. ಆದರೆ ಎಲ್ಲಿ ನೋಡಿದರೂ ಕನ್ನಡದ ಫಲಕಗಳು ಅಂಗಡಿ ಮುಂಗಟ್ಟು, ವೈದ್ಯರು ಹೋಟೆಲ್ ಎಲ್ಲ ನಾಮಫಲಕಗಳು ಕನ್ನಡದಲ್ಲಿ , ಜೊತೆಗೆ ಇಂಗ್ಲಿಷ್‌ನಲ್ಲಿ. ಅಲ್ಲಿಲ್ಲಿ ಮಲೆಯಾಳಿ ಅಕ್ಷರಗಳು ಕಂಡೂ ಕಾಣದಂತೆ ಇದ್ದವು.  ನಮಗಂತೂ ನಮ್ಮ ಹೆಮ್ಮೆಯ ಕನ್ನಡನಾಡಿಗಿಂತಲೂ ಅಲ್ಲಿ ಹೆಚ್ಚು ಕನ್ನಡ ಕಾಣ ಬಂದಿತು. ಬೇರೆಯಾಗಿ ೬೦ ವರ್ಷಗಳಿಗೂ ಹೆಚ್ಚಾದರೂ ಅಲ್ಲಿನವರ ಕನ್ನಡಾಭಿಮಾನ ಕಣ್ಣುಕುಕ್ಕುವಂತಿತ್ತು. ಸತೀಶ್‌ ಅಲ್ಲಿ ನಮ್ಮ ಮಾರ್ಗದರ್ಶಿ. ನಮ್ಮನ್ನು ಸ್ವಾಗತಿಸಲು ಅವರು ಮಾಡಿದ ಪುಟ್ಟ ಭಾಷಣ ಆಕರ್ಷಕವಾಗಿತ್ತು, ಕಾರಣ ಅವರು ಯಕ್ಷಗಾನ ಪಟು. ಸ್ವಾಗತ ಶೈಲಿಯೇ ಅದನ್ನು ಸಾರಿತು.ತೆಂಕುತಿಟ್ಟು ಬಡಗು ತಿಟ್ಟು ಯಕ್ಷಗಾನದ ಮಟ್ಟುಗಳನ್ನು ಹಾಡಿ ತೋರಿಸಿದರು. ಕುಣಿತಕ್ಕೂ ಸಿದ್ಧನಿದ್ದರೂ ನಮ್ಮ ವಾಹನದಲ್ಲಿ ಅದು ಸಾಧ್ಯ ವಿರಲಿಲ್ಲ.ಶೇಷಗಿರಿ ಮಂಜೇಶ್ವರಕ್ಕೆ ಬಂದರು ಎಂಬ ಸಾಹಿತ್ಯವನ್ನೇ ತಾಳಬದ್ದವಾದ ಬಡಗುತಿಟ್ಟು ಮತ್ತು ರಾಗವಾದ ತೆಂಕಣ ತಿಟ್ಟಿನಲ್ಲಿ ತಾಳ ಹಾಕುತ್ತಾ ಹಾಡಿದಾಗ.ಅವರ ಕಲಾ ಪ್ರೌಢಿಮೆಯ ಪರಿಚಯವಾಯಿತ.ನಂತರ ತಿಳಿಯಿತು 

    
                                                            ವೃತ್ತಿಯಿಂದ ಕಬ್ಬಿಣದ ಕಂಬಿ ಬೆಸೆಯುವ ಕೆಲಸಮಾಡಿದರೂ ಪ್ರವೃತ್ತಿಯಿಂದ ಕಲಾಪ್ರೇಮಿ.   ಯಕ್ಷಗಾನ ಕಲಾತಂಡವನ್ನು ಕಟ್ಟಿ ಪ್ರದರ್ಶನ ನೀಡುವವರು. ಬೆಳಗಿನ ಉಪಹಾರ ಮುಗಿಸಿ ಗೋವಿಂದ ಪೈಸ್ಮಾರಕ ಭವನಕ್ಕೆ ಹೋದಾಗ ಮಾತ್ರ ನಿರಾಶೆ ಕವಿಯಿತು    ಕನ್ನಡದ ಮೊದಲ ರಾಷ್ಟ್ರ ಕವಿ ಗೋವಿಂದ ಪೈ ಅವರು , ಹದಿನಾಲ್ಕುಭಾಷೆಗಳ ಪಂಡಿತ, ಕವಿ,ಸಂಶೋಧಕ, ಸಾಹಿತಿ ಕಟ್ಟಾ ಕನ್ನಡ ಅಭಿಮಾನಿ. ನಿರಂತರ ಕಾಸರಗೋಡು ಕರ್ನಾಟಕದ್ದು ಎಂದು ಕನವರಿಸುತ್ತಾ ಕೊನೆ ಯುಸಿರೆಳೆದ ಪವಿತ್ರತಾಣದ ಪರಿಸ್ಥಿತಿಮಾತ್ರ ಶೋಚನೀಯ. 

ಕೇರಳ ಸರ್ಕಾರಕ್ಕೆ ಬೇಕಿಲ್ಲ. ಕರ್ನಾಟಕ ಸರ್ಕಾರಕ್ಕೆ ಕಾಣುವದಿಲ್ಲ. ಪರಿಣಾಮ ಅವರ ಸ್ಮಾರಕವು ಅಳಿವಿನಂಚಿಗೆ ಬಂದಿದೆ. ನಮ್ಮ ನಾಯಕರದ್ದು ಬರಿ ಬಾಯ್ಮಾತಿನ ಬೆಡಗು. ದಕ್ಷಿಣ ಕನ್ನಡಮೂಲದ  ಮಾಜಿಮುಖ್ಯ ಮಂತ್ರಿಯೊಬ್ಬರು ಅದರ ಜೀರ್ಣೋದ್ಧಾರಕ್ಕೆ ಮೂರು ಸಲ ಕಲ್ಲು ಹಾಕಿದರು(ಶಿಲಾ ನ್ಯಾಸ) ಮಾಡಿರುವರು)  ಎಂದು ಅಲ್ಲಿನವರ ಹೇಳಿಕೆ.ಅಲ್ಲಿ ಜನಸಾಮಾನ್ಯರ ಕಳಕಳಿ ಮೆಚ್ಚುಗೆ ಪಾತ್ರ ಆದರೆ ಕನ್ನಡಿಗರ ನಿರ್ಲಕ್ಷ್ಯ ಕಣ್ಣು ಚುಚ್ಚುವಂತಿದೆ.



ಅಲ್ಲಿನ ಅವ್ಯವಸ್ಥೆಯನ್ನು  ಧೂಳು ತುಂಬಿದ ಕಪಾಟುಗಳು ಹುಳುತಿಂದ ಪುಸ್ತಕಗಳೂ ಸಾರಿ ಹೇಳುತಿದ್ದವು.    ಇದುವಿಶ್ವಾಮಿತ್ರ ಮೇನಕೆಯ ಮಗುವಿನಂತೆ ಆಗಿದೆ. ಯಾರಿಗೂ ಬೇಡದ್ದು.ಅಲ್ಲಿಂದ ನಾವು ಹೊರಟದ್ದು  ಅರಿಕ್ಕೆಕಾಡಿಯಲ್ಳಲಿರುವ  ಕೆಳದಿಯರಸರ  ಕೋಟೆ ನೋಡಲು.. ಇಕ್ಕೇರಿಯ ಶಿವಪ್ಪನಾಯಕನ ಕೋಟೆ ಗಿಂತಲು ಕೋಟೆಯ ಆಂಜನೇಯನ ಸನ್ನಿಧಿ ಸುಸ್ಥಿತಿಯಲ್ಲಿದೆ, ಕೋಟೆ ಜಂಬಿಟ್ಟಿಗೆ ಗಳಿಂದ ನಿರ್ಮಾಣವಾಗಿದ್ದು ನಾಮಾವಶೇಷವಾಗಿ ಒಂದು ಬುರುಜುಮಾತ್ರ ಎದ್ದು ಕಾಣುವಂತೆ ಮಧ್ಯದಲ್ಲಿ ನಿಂತಿದೆ.ಅದರ ಮೇಲೆ ಹತ್ತಿದರೆ ಅಳಿದುಳಿದ ಕೋಟೆ ಅರಮನೆ ಹಾಗು ಇತರೆ ಅವಶೇಷಗಳು ಕಾಣತ್ತವೆ.
ಮುಂದಿನ ತಾಣ ಬೇಕಲ್‌ಕೋಟೆ. 'ಬೇಕಲ್‌ ’ ಕೋಟೆಯು ಕೇರಳ ರಾಜ್ಯದ ಗಡಿ ಜಿಲ್ಲೆ ಕಾಸರಗೊಡಿನಲ್ಲಿದೆ. ಅದರ ವಿಸ್ತೀರ್ಣ ಸುಮಾರು ೪೦ ಎಕರೆ (160,000 m2)..ಕಡಲ ತೀರದಿಂದಲೇ ಕೋಟೆಯಭಾಗ ಶುರುವಾಗುವುದು.ಕೋಟೆಯ ಮುಕ್ಕಾಲುಭಾಗ ಅರಬ್ಬಿ ಸಮುದ್ರದ ಅಲೆಗಳಿಂದ ಆವೃತವಾಗಿದೆ.  ಇದು ಆಡಳಿತ ಕೇಂದ್ರವಾಗಿರದೆ ರಾಜ್ಯ ರಕ್ಷಣಾ ದೃಷ್ಟಿಯಿಂದ ನಿರ್ಮಾಣವಾದ ಕೋಟೆಯಾಗಿದೆ.  ಕೋಟೆಯ ಬಾಗಿಲ ಹತ್ತಿರವೇ ಇರುವ ಮುಖ್ಯ ಪ್ರಾಣನ ಮಂದಿರ ಮತ್ತು ಕೋಟೆಗೆ ಅಂಟಿಕೊಂಡಿರುವ ಮಸೀದಿ ಆ ಕಾಲದ ಕೋಮು ಸಾಮರಸ್ಯದ ಸಂಕೇತವಾಗಿವೆ.    ಕೋಟೆಯ ಭೂಭಾಗದಲ್ಲಿ ಸುತ್ತಲೂ ಕಂದಕವಿದೆ.ಕೋಟೆಯ ರಚನಾಕುಶಲತೆಯು ಮೇಲಿರುವ ರಂದ್ರಗಳಿಂದ ಗೋಚರವಾಗುವುದು.. ಎತ್ತರದಲ್ಲಿರುವ ಕಿಂಡಿಗಳಿಂದ ದೂರದಲ್ಲಿರುವ ಶತೃವಿನಮೇಲೆ ದಾಳಿ ಮಾಡಬಹುದಾದರೆ ಕೆಳಗಿರುವ ಕಿಂಡಿಗಳು ಹತ್ತಿರದ ಶತೃಗಳನ್ನು ಗುರಿಇಟ್ಟು ಗುಂಡುಹಾರಿಸಲು ಅನುಕೂಲ.ಕೊಟೆಯಲ್ಲಿನ ವಿಶೇಷವೆಂದರೆ ಮೆಟ್ಟಿಲುಗಳುರುವ ಬಾವಿಗಳು ಅಲ್ಲಿ ದೊರೆವ ಸಿಹಿನೀರು ಈಗ ಅಲ್ಲೆ ಬೆಳಸಲಾಗಿರುವ ತೋಟಕ್ಕೆ ನಿರುಣಿಸುವುದು. ಅಲ್ಲಿನ  ಮದ್ದಿ ಮನೆ ಮತ್ತು ಕಾವಲು ಬರುಜು ಕಣ್ಣು ಸೆಳೆಯುತ್ತವೆ. ಅದರ ಮೇಲೆ ನಿಂತರೆ ಸುತ್ತಮುತ್ತಲಿನ ನೆಲ ಮತ್ತು ಜಲದ ಮೇಲಿನ  ಅತಿ ಸೂಕ್ಷ್ಮ ಚಲನೆಯೂ ಮೈಲುಗಟ್ಟಲೇ ದೂರದಿಂದಲೆ ಕಿನ್ಣಿಗೆ ಬೀಳುತ್ತದೆ. ಅದರಿಂದಲೇ ಇದು ಸೈನ್ಯದ ತಂತ್ರದೃಷ್ಟಿಯಿಂದ ಅಮೂಲ್ಯವಾದುದು.
ಈ ಕೋಟೆಯ ನಿರ್ಮಾಣ  ೧೬೫೦ ರಲ್ಲಿ ಮಾಡಿದವನು ಬಿದನೂರಿನ ಅರಸ ಶಿವಪ್ಪನಾಯಕ.ಕೊದಾವಲಂ ಶಾಸನದಿಂದ ಇದು ವಿದಿತ.  ಕೆಳದಿಯ ಅರಸರು ಕ್ರಮೇಣ ದುರ್ಬಲರಾಗಿ ಹೈದರಾಲಿಗೆ ಶರಣಾದರು ಆಗ . ಬೇಕಲ್‌  ಟಿಪ್ಪೂ ಸುಲ್ತಾನ ಸೈನಿಕ ಠಾಣೆಯೂ ಆಗಿತ್ತು  ಇಲ್ಲಿನಿಂದಲೇ ಮಲಬಾರನ್ನು ವಶಪಡಿಸಿಕೊಂಡದ್ದು. ಟಿಪ್ಪುವಿನ ಮರಣಾನಂತರ ಇದು ಆಂಗ್ಲರ ವಶಕ್ಕೆ ಬಂದಿತು. ಮೊದಲುತಾಲೂಕು ಆಗಿದ್ದ ಬೇಕಲ್‌ ರಾಜ್ಯ ಪುನರ್‌ವಿಂಗಡಣೆಯಿಂದ ಕಾಸರಗೊಡು ತಾಲೂಕಿಗೆ ಸೆರಿ ತನ್ನಪ್ರಾಮುಖ್ಯತೆ  ಕಳೆದು ಕೊಂಡಿತು.. ಈಗ ಅದು ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ.


ಮುಂದಿನ ಪಯಣ  ಮಧೂರಿಗೆ ಹೊರಟೆವು. ಅಲ್ಲಿನ ಮಹಾಗಣಪತಿದೇವಾಯ ಅತಿ ಪ್ರಸಿದ್ಧವಾಗಿದೆ.ಅಲ್ಲಿನ ದೇವಾಲಯದ ವಾಸ್ತು ವಿಶಿಷ್ಟವಾಗಿದೆ.  ನಮಗೆ ಕಂಡು ಬಂದುದು ಅಲ್ಲಿನ ದೇಗುಲ ಒಂದರ ಮೇಲೆ ಇರುವ ಖಡ್ಗದ ಗುರುತು. ಅದು ಟಿಪ್ಪುವಿಮ ಖಡ್ಗದ ಗುರುತು ಎಂಬ ಫಲಕ ಹಾಕಲಾಗಿದೆ.ವಿವರ ತಿಳಿಯುವ ಪ್ರಯತ್ನ ಫಲ ನೀಡಲಿಲ್ಲ. ಒಂದಂತೂ ನಿಜ. ಐತಿಹಾಸಿಕ ದಾಖಲೆಗಳ ಪ್ರಕಾರ ಅಲ್ಲಿಗೆ ಟಿಪ್ಪು ಸುಲ್ತಾನ ದಾಳಿ ಮಾಡಿದ್ದ. ಅಲ್ಲಿನ ವಿಶೇಷವೆಂದರೆ ಬಂದ ಜನಕ್ಕೆಲ್ಲ ಭೋಜನ ವ್ಯವಸ್ಥೆ   . ಅದು ದಕ್ಷಿಣ ಕನ್ನಡದ ಅನೇಕ ಕಡೆ ಇರುವ ಪದ್ದತಿ , ಆದರೆ ಇಲ್ಲಿನ ವಿಶೇಷವೆಂದರೆ ಟೋಕನ್‌ ನೀಡಿದವರಿಗೆ ಮಾತ್ರ ಊಟ. ಅದೂ ಭಫೆ ಪದ್ದತಿ. ತಟ್ಟೆ ಹಿಡಿದು ಹೋದರೆ ಅನ್ನ, ಸಾರು ,ಸಾಂಬಾರು  ಮತ್ತು  ಪಲ್ಯ. ಹಾಕುವರು. ನಂತರ ಅಲ್ಲಿರುವ ದೊಡ್ಡ ಹಜಾರದಲ್ಲಿ ನಿಂತು ಕುಳಿತು ಊಟ ಮುಗಿಸಬಹುದು.  ಅದೆನೋ ಗೊತ್ತಿಲ್ಲ ಸಾರು ಸಾಂಬಾರಿನ ರುಚಿ ಬೆರಳು ಕಚ್ಚುವಹಾಗಿತ್ತು. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಬಡಿಸುತಿದ್ದರು

. ಅಲ್ಲಿಂದ ನಾವು  ಹೊದದ್ದು ಅನಂತೇಶ್ವರ ದೇಗುಲಕ್ಕೆ. ಅಲ್ಲಿನ ವಿಶೇಷವೆಂದರೆ ಕೊಳದ ನಡುವಿನ ಸುಂದರ ದೇಗುಲದಲ್ಲಿ ದೇವರು ಆಸೀನ ನಾಗಿರುವನು. ಅಲ್ಲಿನ ವಿಗ್ರಹ ಶಿಲೆ ಅಥವ ಲೋಹದಿಂದ ಮಾಡಿದ್ದಲ್ಲ.ಆಯುರ್ವೇದದ ೬೦ ಗಿಡ ಮೂಲಿಕೆಗಳ ಮಿಶ್ರಣದಿಂದ ಕಟು ಶರ್ಕರ ಪಾಕ ಪದ್ದತಿಯಲ್ಲಿ ರೂಪಿಸಿದ್ದು. ಅಲ್ಲಿನ ವಿಗ್ರಹಕ್ಕೆ ಅಭಿಷೇಕ ಇಲ್ಲ. ಬರಿ ಮಂತ್ರಪ್ರೋಕ್ಷಣೆ. ನಮಗೆ ದೇವರ ದರ್ಶನ ಆಗಲಿಲ್ಲ.   ಅಲ್ಲಿ ಮೊಸಳೆ ನೈವೇದ್ಯ ಎಂಬ ಸೇವೆ ನೋಡಿ ನಮಗೆ ಅಚ್ಚರಿಯಾಯಿತು. ಹತ್ತಿರದಲ್ಲೇ ಇರುವ ಕೊಳದಲ್ಲಿ ಮೊಸಳೆ ಇರುವುದಂತೆ. ಅದು ಮಾಂಸಾಹಾರಿ ಅಲ್ಲ. ಬರಿಅನ್ನ ಹಾಕುವರು. ಅದಕ್ಕೆ ಆಹಾರ ಕೊಡುವುದೇ ಮೊಸಳೆ ನೈವೇಧ್ಯ ಸೇವೆ. ಅದು ಅದೃಷ್ಟವಂತರಿಗೆ ಮಾತ್ರ ಕಾಣುವುದು. ಬಿರು ಬಿಸಿಲಲ್ಲಿ ನಾವು ಮೂರು ನಾಲ್ಕುಜನ ನೊಡಲು ಹೋದೆವು. ಆದರೆ ಅದರ ದರ್ಶನ ಯೋಗ ನಮಗೆ ಇರಲಿಲ್ಲ. ಅಲ್ಲಿ ವಿಚಾರ ವಿನಿಯಮದಲ್ಲಿ ತಿಳಿದ ಅಂಶವೆಂದರೆ ಎಲ್ಲ ಅನಂತ ಶಯನಗಳೂ ಜಲಮೂಲಕ್ಕೆ ಹತ್ತಿರದಲ್ಲೇ ಇರುವವು. ರಂಗನಾಥನೂ ಕಾವೇರಿ ತೀರದಲ್ಲಿ ಇರುವುದು ನಮಗೆ ನೆನಪು ಬಂದಿತು. ಹಾಲಕಡಲಲ್ಲಿ ಮಲಗಿದ ಮಹಾವಿಷ್ಣುವಿಗೆ  ನೀರಿನ ಕತ್ತಿರ ಮಲಗುವುದು ಸಹಜವಾಗಿದೆ.
ಹತ್ತಿರದಲ್ಲೇ ಇದ್ದ ಕುಂಬಳೆ ಅರಸರ ಅರಮನೆಗೆ ಹೋದೆವು. ಬೃಹತ್ತಾದ ಬಂಗಲೆ.ಅವರು ಹಾನಗಲ್ಲಿನ ಕದಂಬ ವಂಶಜರು.
ಕುಂಬಳೆಯ  ರಾಮಂತರು.   ಈಗಿನ ಅರಸರ ಹೆಸರು ದಾನ ಮಾರ್ತಾಂಡ ರಾಮಂತರು. ಇವರು ಬ್ರಾಹ್ಮಣರು.ಅಳಿಯ ಸಂತಾನ ಪದ್ದತಿ ಅವರಲ್ಲಿ.    ಅಲ್ಲಿನ ಸಿಂಹಾಸನ , ಮಧ್ವಾಚಾರ್ಯ ಮತ್ತು ದುರ್ಗಾ ದೇವಿಯರನ್ನು ದೂರದಿಂದಲೇ ನೋಡಲು ಅವಕಾಶ. ಸದ್ಯದ ಅರಸರು ತುಮುಕೂರಿನಲ್ಲಿ ಉಡ್‌ಲ್ಯಾಂಡ್‌ ಹೋಟಲಿನ ಮಾಲಕರು ಹಬ್ಬ ಹರಿದಿನ ಉತ್ಸವಗಳಿಗೆ ಮಾತ್ರ ಇಲ್ಲಿಗೆ ಬಂದು ಆಚರಣೆಗಳನ್ನು ವಿಧಿವತ್ತಾಗಿ ಆಚರಿಸುವರು.
ಅಲ್ಲಿಂದ ಉದ್ಯಾವರಕ್ಕೆ ಹೊರಟೆವು.ಅಲ್ಲಿನ ವೈಶಿಷ್ಟ್ಯವೆಂದರೆ ಹಿಂದೂ ಮುಸ್ಲಿಂ ಸಾಮರಸ್ಯ.ಅಲ್ಲಿರುವ ಸೋದರ ದೈವಗಳು ( ಭೂತಗಳ) ಉತ್ಸವ ಮಾಡುವಾಗ ಮಸೀದೆಗೆ ಭೇಟಿ ನೀಡುವುದು ಕಡ್ಡಾಯ. 
ಬೊಬ್ಬರ್ಯ ಮತ್ತು ಅದರ ಸೋದರ ದೈವದ ದೇಗುಲ ಮತ್ತು ರಥಗಳಿವೆ. ಅಲ್ಲಿರುವ ಶಿಲಾಸಿಂಹಾಸನದಲ್ಲಿ ಪಾತ್ರಿ ಕುಳಿತು ತೀರ್ಮಾನ ಮಾಡುವರು. ಸರ್ವಜನಾಂಗದವರೂ ಒಟ್ಟಾಗಿ ಸೇರುವರು. ಅಲ್ಲಿ ಗುಡಿ (ಧ್ವಜ) , ಖಡ್ಗ ಹಿಡಿಯುವವರು , ಪಾ
ತ್ರಿ, ಮಾತಿಗೆ  ಸಿಕ್ಕರು ಅವರ ಕೆಲಸ ವಂಶಪಾರ್ಯಪರವಾಗಿರುವುದು. ಆ ಸಮಯದಲ್ಲಿ ಜಾತಿ ಬೇಧವಿಲ್ಲದೆ ಒಟ್ಟಾಗಿ ಸೇರುವರು.ತಳ ಸಮುದಾಯದವರು ಆರಾಧಿಸುವ ದೈವವೇ ವೈದಿಕರು ಆರಾಧಿಸಿದರೆ  ದೇವರಾಗುವುದು ಉದಾಹರಣೆಗೆ ದುರ್ಗ ಪರಮೇಶ್ವರಿ ಎಂಬ ಡಾ. ಇಂದಿರಾ ಹೆಗಡೆಯವರ ವಿವರಣೆ ಸೂಕ್ತ ಎನಿಸಿತು.ಸಮುದಾಯದಲ್ಲಿನ  ಜನಸಾಮಾನ್ಯರೇ ತಮ್ಮ ಅಸೀಮ ಸಾಧನೆಯಿಂದ ದೈವದ ಮಟ್ಟಕ್ಕೆ ಏರಿರುರವರು ಎಂಬ ಅಂಶ ಗಮನಾರ್ಹ.ಕೋಲ, ಕಂಬಳ, ನಾಗಮಂಡಲ, ಭೂತಾರಾಧನೆ ತುಳು ನಾಡಿನ ಉಪ ಸಂಸ್ಕೃತಿಯ ಹೆಗ್ಗುರುತುಗಳು.
ತುಳುವರು   ದೇಶ, ವಿದೇಶದಲ್ಲಿ ಎಲ್ಲಿಯೇ ಇದ್ದರೂ ಇಲ್ಲಿನ ಉತ್ಸವಕ್ಕೆ  ಬಂದು ಸೇರುವರು. 

ರಾತ್ರಿಯ ವೇಳೆಗೆ ಸೂರತ್ಕಲ್‌ಗೆ ಬಂದು ಸೇರಿದೆವು ಅಲ್ಲಿ ಡಾ. ಇಂದಿರಾಅವರ ಫ್ಲಾಟ್‌ಇದೆ. ಕಡಲತೀರಕ್ಕೆ ಸಮೀಪ. ಬಾಲ್ಕನಿಯಲ್ಲಿನಿಂತರೆ ಸೂರ್ಯಾಸ್ತ ಕಾಣುವುದು.ಹೆಸರು Sea Beach Pearlಅದು ಸಮುದ್ರ ದ ತೀರದಲ್ಲಿಹಸಿರಿನ ನಡುವೆ ಇದೆ. ಅವರ ಫ್ಲಾಟ್‌ನ ಪಕ್ಕದಲ್ಲೇ ಖಾಲಿರುವ ಇನ್ನೊಂದುಫ್ಲಾಟ್‌ ಸಹಾ ನಮಗೆ ದೊರಕಿತು ಹಾಗಾಗಿ ನಮ್ಮ ವಸತಿ ಸಮಸ್ಯೆ ಪರಿಹಾರವಾಗಿತ್ತು.ಹೆಗಡೆ ದಂಪತಿಗಳ ಆತಿಥ್ಯ ನೆನಪಿನಲ್ಲಿಡುವಂತಿದ್ದಿತು.ರಾತ್ರಿ  ಭೂರಿಭೋಜನ. ನಂತರ ರಾತ್ರಿ ಬಹು ಹೊತ್ತಿನ ವರೆಗೆ ಮೂರ್ತಿ ಶಿಲ್ಪ ವಾಸ್ತು ಶಿಲ್ಪ ಮತ್ತು ಇತಹಾಸ ಕುರಿತ ಕುರಿತ ಸಂವಾದ ಬಹು ಆಸಕ್ತಿ ದಾಯಕವಾಗಿತ್ತು . ಮೈಸೂರಿನ ಡಾ. ಎಂ. ಎನ್‌ ಪ್ರಭಾಕರ ಮುರ್ತಿ ಶಿಲ್ಪ ತಜ್ಞರು. ವೃತ್ತಿಯಿಂದ ಬ್ಯಾಂಕ್‌ನ ನಿವೃತ್ತ ಅಧಿಕಾರಿ. ಮದಲ್ಲಿ ಹಸ್ತ ಪ್ರತಿ ಅಧ್ಯಯನದಲ್ಲಿ ಆಸಕ್ತಿ. ನಂತರ ಮುರ್ತಿಶಿಲ್ಪದಲ್ಲಿಆಳವಾದ ಅಧ್ಯಯನ ಮಾಡಿ ಕೃತಿ. ಡಾ. ದೇವರ ಕೊಂಡಾ ರೆಡ್ಡಿಯವರದು ಪಾಂಡಿತ್ಯ ಪೂರ್ಣ ಮಾತು.ಯಾವುದೇ ವಿಷಯವಿದ್ದರೂ ಇದಮಿಥ್ಥಂ ಎಂದು ಹೇಳಬಲ್ಲರು. ರಚನೆ ಮಾಡಿರುವರು.ಸಮುದ್ರದ ತಂಗಾಳಿಯಿಂದ ನಿದ್ದೆ ಬಂದ್ದದೇ ಗೊತ್ತಾಗಲೇ ಇಲ್ಲ. ಬೆಳಗ್ಗೆ ಕಣ್ಣು ಬಿಡುವ ಮೊದಲೆ ಬೆಡ್‌ಕಾಫಿಯೊಡನೆ ಎಸ್‌ಆರ್‌ ಹೆಗಡೆ ಯವರು ಹಾಜರು. ಅಷ್ಟೇ ಅಲ್ಲ ಯಾರಿಗೆ ಸಕ್ಕರೆ ಸಹಿತ ಮತ್ತು ಯಾರಿಗೆ ಸಕ್ಕರೆ ರಹಿತ ಎಮದು ನೆನಪಿಟ್ಟು ಕೊಂಡು ತಂದಿದ್ದರು.ಅದಕ್ಕೆ ಮೊದಲೇ ಹಿಂದಿನ ದಿನ ಇಪ್ಪತ್ತು ಜನರ ಊಟ ಉಪಚಾರದೊನಡ ಸಂಗ್ಹವಾಗಿದ್ದ ಪ್ಲಾಸ್ಟಿ ತಟ್ಟೆ ಲೋಟ ಮತ್ತು ಕಸವನ್ನುಶಿಸ್ತಾಗಿ ಚೀಲದಲ್ಲಿ ಹಾಕಿ ಚೊಕ್ಕವಾಗಿ ಚೀಲದಲ್ಲಿ ಹಾಕಿ ಕಸದ ತೊಟ್ಟಿಗೆ ಸೇರಿಸಿದ್ದರು.ಅವರ ಮಿಲಿಟರಿ ತರಬೇತಿಯ ಪರಿಣಾಮ ಅವರ ದೈನಂದಿನ ನಡೆನುಡಿಯಲ್ಲಿ ಎದ್ದು 

ಣುತಿತ್ತು.ಬೆಳಗಾಗುತ್ತಲೇ ನಮ್ಮ ಮಹಿಳಾ ಸಹಪಯಣಿಗರು ಮೊದಲು ಮಾಡಿದ ಕೆಲಸವೆಂದರೆ ಸಮುದ್ರದ ತೀರಕ್ಕೆ ಧಾವಿಸಿದ್ದು.. ಅದನ್ನು ನೋಡಿದ ರೆಡ್ಡಿಯವರು ತಾವೂ ಲಗುಬಗೆಯಿಂದ ಅವರನ್ನು ಹಿಂಬಾಲಿಸಿದರು. ಇವರಿಗೆ ಸಮುದ್ರದ ಅಪಾಯ ತಿಳಿಯದು ಜೊತೆಯಲ್ಲಿ ನಾವು ಇರಲೇಬೇಕು. ಹೊಸ ಜಾಗದಲ್ಲಿ ನೀರಿಗೆ ಇಳಿದರೆ ಅನಾಹುತವಾಗಬಹುದು ಕ್ಷಣಿಕಎನ್ನುವುದು ಅವರ ಕಳಕಳಿ. ನನಗೆ ಹಿಂದ ಶಾಲಾಮಕ್ಕಳನ್ನು ನಾವು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದಾಗ ತೆಗೆದು ಕೊಳ್ಳುತಿದ್ದ ಮುನ್ನೆಚ್ಚರಿಕೆ ನೆನಪಿಗೆ ಬಂದಿತು.  ಮಕ್ಕಳು ಮೊಮ್ಮಕ್ಕಳನ್ನು ಕಂಡಿದ್ದ ಮಹಿಳೆಯರು ಮತ್ತೆ ಬಾಲ್ಯದ ದಿನಕ್ಕೆ ಹಿಂದಿರುಗಿದವರಂತೆ ನೀರಾಟವಾಡಿದರು . ಅವರನ್ನು ನೀರಿನಿಂದ ಹೊರ ಕರೆತರಲು ಹರ ಸಾಹಸ ಮಾಡ ಬೇಕಾಯಿತು.
ನಾವೆಲ್ಲ ಪ್ರತಃ ವಿಧಿಗಳನ್ನು ಪೂರೈಸಿ ಹೊರಟೆವು ನಮ್ಮ ಗೆಳೆಯ ಗುರುಪ್ರಸಾದ್ ಶಿಸ್ತುಗಾರ . ಚಾರಣ ಪ್ರಿಯ.  ದಿನಾ ಗಲ್ಲಮಿರಿಮಿರಿಮಿಂಚವುದು. ಆಲ್ಲಿ ಕನ್ನಡಿಯೇ ಇರಲಿಲ್ಲ. ಷೇವ್‌ಮಾಡಿಕೊಳ್ಳುವ ಬಗೆ ಹೇಗೆ ಎಲ್ಲರೂ ತಲೆ ಕೆರದುಕೊಳ್ಳುತ್ತಿರುವಾಗ ಅವರು ಬಾಲ್ಕನಿಯಲ್ಲಿರುವ ಗಾಜಿನ ಬಾಗಿಲಿನೆದುರಿಗೆ ನಿಂತು ಅಲ್ಲಿ ಕಂಡ ಪ್ರತಿಬಂಬದಿಂದಲೇ ತಮ್ಮ ಕಾರ್ಯ ಮುಗಿಸಿದರು. ಅವಶ್ಯ ಕತೆಯೇ ಅನ್ವೇಷಣೆಯ ತಾಯಿ ಎಂಬ ಮಾತು ನೆನಪಿಗೆ ಬಂದಿತು
ಮಾರನೆಯದಿನ ಮಲ್ಪೆಗೆ ಹೋಗಿ ಸೆಂಟ್‌ ಮೇರಿ ದ್ವೀಪದ ವೀಕ್ಷಣೆ. ಹಾದಿಯಲ್ಲಿ ಬರುವ ಮುಲ್ಕಿಯ  ಸ್ವಾಗತ ಹೋಟೆಲ್‌ನಲ್ಲಿ ಉಪಹಾರವಾಯಿತು. ಅದರ ಮಾಲಕರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರರು. ನಮ್ಮಲ್ಲಿ  ಅನೇಕರಿಗೆ ಚಿರಪರಿಚಿತರು. ಅವರ ಜೊತೆ ಮಾತನಾಡುವಾಗ ನಮ್ಮ ಹಸ್ತ ಪ್ರತಿ ಅಭಿಯಾನದ ಕುರಿತು ಹೇಳಿದೆ. ತಕ್ಷಣ ಅವರು ತಮ್ಮ ಮನೆಯಲ್ಲಿ ಹಸ್ತ ಪ್ರತಿ ಇರುವುದು ಕೊಡುವೆ  ಎಂದರು.ಅಲ್ಲಿ ತುಳುಸಮಸ್ಕೃತಿಯ ಉಳಿವಿಗೆ ಮಾಡುತ್ತಿರವ ಪ್ರಯತ್ನ ಕಂಡು ಬಂದಿತು


 ನಮಗೆ ಹೋಗುವ ಅವಸರ. ಬರುವಾಗ ಪಡೆಯಿರಿ, ತರಿಸಿ ಇಡುವೆ ಎಂದುಆಶ್ವಾಸನೆ ನೀಡಿದರು.ನಾವು ಮೂವರು,ಶ್ರೀ ಎಂ. ಎನ್‌ಪ್ರಭಾಕರ್‌, ಗುರು ಪ್ರಸಾದ ಮತ್ತು ನಾನು ಉಡುಪಿಯಲ್ಲೇ ಉಳಿದು ಅಲ್ಲಿನ ಹಸ್ತ ಪ್ರತಿ ಸಂರಕ್ಷಣ ಕಾರ್ಯ ನೊಡಿ ಬರಲು ಹೋದೆವು. ಉಡುಪಿಯ ಮಠಕ್ಕೆ ಹೊದ ಮೇಲೆ ತಿಳಿಯಿತು. ಹಸ್ತಪ್ರತಿ ಸಂರಕ್ಷಣೆಯ ಕೆಲಸವನ್ನು ಪುತ್ತಿಗೆಯ ಮೂಲ ಮಠದಲ್ಲಿ ಮಾಡುತ್ತಿರುವರು ಎಂದು. ಅದು ಹಿರಿಯಡ್ಕದಿಂದ ಆರು ಕಿಲೋ ಮೀಟರ್‌ ದೂರದಲ್ಲಿರುವುದಾಗಿ ತಿಳಿಯಿತು. ಅಲ್ಲದೆ ಸ್ವಾಮೀಜಿಯವರು ಅಮದು ಮಠದಲ್ಲಿ ಇರಲಿಲ್ಲ. ಸಂಬಂಧಿಸಿದ ಅಧಿಕಾರಿಗಳೂ ಸಂಪರ್ಕಕ್ಕೆ ಸಿಕ್ಕಲಿಲ್ಲ. ಹಾಗಾಗಿ ಫೋನ್‌ ನಂಬರ್‌ ಪಡೆದು ವಾಪಸ್ಸು ಮಲ್ಪೆಗೆ ಬಂದೆವು. ಅಲ್ಲಿ ಸೇಂಟ್‌ ಮೇರಿ ದ್ವೀಪದ ವೀಕ್ಷಣೆ ಮುಗಿಸಿ ಬಂದ ನಮ್ಮ ತಂಡವನ್ ಸೇರಿಕೊಂಡೆವು ಮಧ್ಯಾಹ್ನದ ಭೋಜನ ಕಟ್ಟಿತಂದಿದ್ದ ಪಲಾವ್‌ ಇದ್ದಿತು.




 ವಾಪಸ್‌ ಬರುತ್ತಾ ಬೊಪ್ಪನಾಡು ಅರಮನೆಗೆ ಹೋದೆವು ಅದರ ನವೀಕರಣ ನಡೆಯುತಿತ್ತು


ಅಲ್ಲಿಂದ ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದೆವು. ಅಲ್ಲಿನ ಬೃಹತ್‌ ಡೋಲು ತುಂಬ ಹೆಸರುವಾಸಿ ಸುಮಾರು ಹತ್ತು ಅಡಿ ಉದ್ದ ಮತ್ತು ನಾಲ್ಕು ಅಡಿ ಎತ್ತರವಿರಬಹುದು. ಇದನ್ನುಬಾರಿಸಲು ಬಹ ಶಕ್ತಿಬೇಕು ಅದಕ್ಕೆ ಬರಿ ಮೈ ಬೆಳಸಿ ಬುದ್ದಿ ಬೆಳಸದ ವಿದ್ಯಾರ್ಥಿಗಳಿಗೆ ಬೊಪ್ಪನಾಡಿನ ಡೋಲು ಬಾರಿಸಲು ಲಾಯಕ್‌ ಎಂದು  ಹಂಗಿಸುವರು.ಅಲ್ಲಿ ವಿಶೇಷವೆಂದರೆ ಬೆಳಗಿನಿಂದ ರಾತ್ರಿಯವರೆಗೆ ದರ್ಶನ ಪಡೆಯಬಹುದು.ಆಮೂರ್ತಿಯು ಬೊಪ್ಪಬ್ಯಾರಿಗೆ ದೊರೆತದ್ದು ಎಂಬ ಪ್ರತಿತಿ.ಬೊಪ್ಪನಾಡಿನಲ್ಲಿ ಇದು ಪ್ರಸಿದ್ಧ ದೇವಾಲಯ.ಅಲ್ಲಿಂ ಸಿದಾ ಸೂರತ್ಕಲ್‌ಗೆ ಬಂದು ಸೂರ್ಯಾಸ್ತ ನೊಡಿ ಮನೆಗೆ ವಾಪಸ್ಸು ಬಂದೆವು ಊಟ ಮುಗಿಯುವ ಮೊದಲು ಡಾ. ಜಯಮ್ಮ ಕರಿಯಣ್ಣ ಲೆಕ್ಕಪತ್ರ ಒಪ್ಪಿಸಿದರು. ಹೆಗಡೆ ದಂಪತಿಗಳ ಆತಿಥ್ಯದಿಂದಾಗಿ ಊಟ ವಸತಿಯ ವೆಚ್ಚ ಉಳಿತಾಯವಾಗಿತ್ತು ಪ್ರತಿಯೊಬ್ಬರಿಗೂ ನಾಲ್ಕುನೂರು ರೂಪಾಯಿ ವಾಪಸ್ಸು ಬಂದಿತು. ಮೂರುದಿನ ಮೂರು ನಿಮಿಷಗಳಂತೆ ಕಳೆದುದು ಒಂದುವಿಶೇಷ ಅನುಭವವಾಗಿತ್ತು.









 




 


ಹೊರೆ ಕಾಣಿಕೆ

ದೈವದ ಶಿಲಾಸಿಂಹಾಸನ
ದೈವದ 
       






                                              



 





Wednesday, February 26, 2014

ತುಮುಕೂರು ಜಿಲ್ಲೆಯ ಕೆಲವು ಅಪ್ರಕಟಿತ ಶಾಸನಗಳು


ತುಮಕೂರು ಜಿಲ್ಲೆಯ ಕಸಾಪುರ, ಮಿಡಿಗೇಶಿ ಹಾಗೂ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಕೆಲವು ಅಪ್ರಕಟಿತ ಶಾಸನಗಳು
ಡಾ. ಎನ್. ನಂದೀಶ್ವರ
ಸಾಪುರ ಗ್ರಾಮ ತಾಲ್ಲೂಕು ಕೇಂದ್ರ ಮಧುಗಿರಿಯಿಂದ ೨೨ ಕಿ.ಮೀ. ಹಾಗೂ ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೬೩ ಕಿ.ಮೀ. ದೂರದಲ್ಲಿದೆ. ಈ ಗ್ರಾಮವು ಪ್ರಾಗೈತಿಸಿಹಾಸದ ಕಾಲದಿಂದಲೂ ಬಹಳ ಪ್ರಸಿದ್ಧವಾಗಿದೆ. ಈ ಗ್ರಾಮದ ಛಲವಾದಿ (ಆದಿದ್ರಾವಿಡರ) ಬಸಣ್ಣನ ಹತ್ತಿರ ಕಂಚಿನ ಹರೆ ಇದೆ. ಈ ಹರೆಯನ್ನು ಮಿಡಿಗೇಶಿಯ ಕುಂಚಿಟಿಗರ ಶೆಟ್ಟೇನವರ ಮನೆದೇವರಾದ ಶ್ರೀಲಕ್ಷ್ಮೀದೇವರಿಗೆ ಬಡೆಯುವ ಹರೆಯಾಗಿದ್ದು, ಇದರ ಮೇಲೆ ಅಪ್ರಕಟಿತ ಶಾಸನವಿದೆ. ಶ್ರೀಲಕ್ಷ್ಮೀದೇವತೆಗೆ ಹರೆಯನ್ನು ಮಾತ್ರ ಬಡಿಯುತ್ತಾರೆ. ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನವನ್ನು ೨ ಭಾಗಗಳಲ್ಲಿ ಬರೆಯಲಾಗಿದೆ.
ಶಾಸನದ ಪ್ರಾರಂಭದಲ್ಲಿ ಚಂದ್ರ ಎಡಭಾಗದಲ್ಲಿ ಬರೆದಿದ್ದರೆ, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವು ೬ ಸಾಲುಗಳಲ್ಲಿ ಬರೆಯಲ್ಪಟ್ಟಿದ್ದು, ಕನ್ನಡ ಭಾಷೆಯಲ್ಲಿದೆ. ಶಾಸನದ ಕಾಲ ೧೭೮೭ ಜೂನ್ ೨೯ ಗುರುವಾರವಾಗಿರುತ್ತದೆ. ಮಿಡಿಗೇಶಿಯ ಕುಂಚಿಟಿಗ ಜನಾಂಗದ ಶೆಟ್ಟೇನವರ ಕುಲದ ಮನೆದೇವರಾದ ಮಿಡಿಗೇಶಿಯ ಶ್ರೀಲಕ್ಷ್ಮೀದೇವರಿಗೆ ಬೆಂಗಳೂರಿನ ಶೆಟಿಪನ ಮಗ ಯಿರಚಿಕಂಣನು ಮಾಡಿಸಿ ಕೊಟ್ಟ ಅರೆ. ಮಿಡಿಗೇಶಿಯ ಶಾನುಭೋಗ ಅರುಣಚಲೈನವರು ಬರೆದ ಬರಹವೆಂದು ಇದೆ. ಈ ಹರೆಯನ್ನು ಬಾಳಮಂಡೆ ಬಸಪನ ಮೊಮ್ಮಗನ ಕೊರಳಿಗೆ ಲಕ್ಷ್ಮೀದೇವರಿಗೆ ದೇವರ ಉತ್ಸವ ಹಬ್ಬ ಹರಿದಿನಗಳಲ್ಲಿ ಬಡಿಯಲು ಹಾಕಿಸಿರುವ ಹರೆಯಾಗಿರುತ್ತದೆ.
ಶಾಸನ ಪಾಠ
೧        ಪ್ಲವಂಗ ಸಂವತ್ಸರದ ಅಷಾಡ ಶು ೧೪ಲ್ಲು ಮಿ
೨        ಡಿಗೇಶಿ ಶ್ರೀ ಲಕ್ಷ್ಮೀ ದೇವತಿಗೆ ಬೆಂಗಳೂರು ಶೆಟೆಪ್ಪನ
೩        ಮಗ ಯಿರ ಚಿಕಂಣ ಮಾಡಿಶಿ ಕೊಟ ಅರ್ರೆ ಮಿಡಿಗೇ
೪        ಶಿ ಶಾನುಬಾಗ ಆರುಣಚಲೈನ ಬರಹ ||
೫        ಯಿ ಹರ್ರೆ ಬಾಳಮಂಡೆ ಬಸಪನ ಮೊಮಗ
೬        ನ ಕೊರಳಿಗೆ ಹಾಕಿದ ಹರೆ ||
ಮಿಡಿಗೇಶಿಯ ಹರೆ ಶಾಸನ
ಮಿಡಿಗೇಶಿಯ ಆದಿದ್ರಾವಿಡ ಜನಾಂಗದ ಕಾವೇರಪ್ಪನ ಮಗ ಹನುಮಂತರಾಯಪ್ಪನ ಹತ್ತಿರ ಒಂದು ಹರೆ ಇದೆ. ಇದನ್ನು ಗಡಿಭಾಗದ ಆಂಧ್ರಪ್ರದೇಶದ ಗೊಟ್ಟುಗುರಿಕೆಯಿಂದ ತಂದಿಟ್ಟುಕೊಂಡಿರುತ್ತಾರೆ. ಇದನ್ನು ಇಂದು ಎಲ್ಲಾ ದೇವರಿಗೂ ಬಡಿಯುತ್ತಾರೆ. ಇದರ ಮೇಲೆ ಅಪ್ರಕಟಿತ ಶಾಸನವಿದೆ.
ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನದ ಪ್ರಾರಂಭದಲ್ಲಿ ಎಡಭಾಗದಲ್ಲಿ ಚಂದ್ರನನ್ನು, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವನ್ನು ೨ ಭಾಗಗಳಳ್ಲಿ ಬರೆಯಲಾಗಿದೆ. ಶಾಸನವು ೮ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಕಾಲ ೧೭೭೭ ಏಪ್ರಿಲ್ ೮, ಸೋಮವಾರವಾಗಿರುತ್ತದೆ.
ಗೊಟ್ಟುಗುರಿಕೆ ಏತಂಣನ ಮಗನಾದ ನಲ್ಲನಿಂಗಣ್ಣನು ಶ್ರೀ ಪಾತಪ್ಪದೇವರಿಗೆ ಹರೆ ಬಡಿಯಲು ಭಕ್ತಿಯಿಂದ ಕೊಟ್ಟಿರುವರು. ಇಂದಿಗೂ ಗೊಟ್ಟುಗುರಿಕೆಯಲ್ಲಿ ತೆರೆದ ಅಂಕಣದಲ್ಲಿ ಶ್ರೀಪಾತಪ್ಪ ದೇವಸ್ಥಾನವಿದೆ. ಇಂದು ನಾಯಕ (ತಳವಾರ) ಜನಾಂಗದವರ ಮನೆದೇವರಾಗಿದೆ. ಈ ದೇವರನ್ನು ಹಬ್ಬಹರಿದಿನಗಳಲ್ಲಿ ವಿಶೇಷವಾದ ಪೂಜೆ ಮಾಡು ತ್ತಾರೆ. ನಾಯಕ ಜನಾಂಗದವರೇ ಆರ್ಚಕರಾಗಿರುತ್ತಾರೆ. ಪಕ್ಕ ಕರ್ನಾಟಕದ ಗಡಿಯಲ್ಲಿಯಲ್ಲಿನ ಗ್ರಾಮ ರೆಡ್ಡಿಹಳ್ಳಿ. ಈ ರಡಿಅಳಿ(ರೆಡ್ಡಿಹಳ್ಳಿ)ಯ  ಹಳೆ ಮಗನಾದ ಚೆಲವಾದಿನಾಗನ ಮಗ ನರಸನ ಕೊರಳಿಗೆ ಹಾಕಿಸಿರುವರು. ರತ್ನಗಿರಿಯ ಚಿತ್ರಗಾರ ಪುಟ್ಟಲಿಂಗಪ್ಪ ಶಾಸವನ್ನು ಬರೆದಿರುವನು.
ಶಾಸನ ಪಾಠ
೧        ಶ್ರೀ
೨        ಶ್ರೀ ಹೇವಳಂಬಿ ಸಂಮತ್ಸರದ ಚೈತ್ರ ಶುದ ೧ ಯ
೩        ಲ್ಲು ಶ್ರೀ ಮತು ಗೊಟ್ಟು ಗುರಿಕೆ ಏತಂಣನ ಮಗ
೪        ನಲ್ಲ ನಿಂಗಣ ಶ್ರೀಪಾತಪ್ಪ ದೇವರಿಗೆ ಕೊಡಿಶಿದ
೫        ಆರೆ ಭಕ್ತಿ ಸದರಿ ಆರೆ ಅಳೆ ಮಗನಾದ ರಡಿ
೬        ಅಳಿ ಚೆಲವಾದಿ ನಾಗನ ಮಗ ನರಸನ ಕೊ
೭        ಳಿಗೆ ಆಕಿದ ಅರೆ
೮        || ರತ್ನಗಿರಿ ಚಿತ್ರಗಾರ
೯        ಪುಟ್ಟಲಿಂಗಪ್ಪ
ಹೇಮಾವತಿಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಯು ನೊಳಂಬರ ರಾಜಧಾನಿಯಾಗಿತ್ತು. ಇಲ್ಲಿನ ಪ್ರಸಿದ್ಧವಾದ ಸಿದ್ದೇಶ್ವರ ದೇವಸ್ಥಾನದ ದ್ವಾರಬಂಧದಲ್ಲಿ ಅಪ್ರಕಟಿತ ಶಾಸನವಿದೆ. ಬಾಗಿಲುವಾಡಕ್ಕೆ ಹಾಕಿದ್ದ ಬೆಳ್ಳಿಯ ತಗಡನ್ನು ಜೀರ್ಣೋದ್ಧಾರದ ಸಂದರ್ಭದಲ್ಲಿ ತೆಗೆದಿದ್ದರಿಂದ ಈ ಶಾಸನ ಕಂಡುಬಂದಿತು.
ಶಾಸನವು ೨ ಸಾಲುಗಳಲ್ಲಿ ಬರೆಯಲ್ಪಟ್ಟಿದ್ದು, ಕನ್ನಡ ಭಾಷೆಯಲ್ಲಿದೆ. ಲಿಪಿಯು ೧೨ನೇ ಶತಮಾನದ ಲಿಪಿಯನ್ನು ಹೋಲುತ್ತದೆ. ಗರೆಯ ಪಲೆಯ ಎಂಬುವನು ಹೂವಿನ ಕಲ್ಲುದ್ವಾರಬಂದವನ್ನು ಮಾಡಿಸಿದ ವಿಷಯ ಎಂದು ಊಹಿಸಬಹುದಾಗಿದೆ.
ಶಾಸನ ಪಾಠ
೧        ಶ್ರೀಮತು ಗರೆಯ ಪಲೆಯ ಹುವಿನ ಕಲುದರವಂದ ಮಾ
೨        ಡಿಸಿದ                    
ಪೇಲುಬಂಡೆಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಗೆ ಹತ್ತಿರದ ಗ್ರಾಮ ಪೇಲುಬಂಡೆ. ಇಲ್ಲಿನ ಪ್ರಸಿದ್ಧವಾದ ರಂಗನಾಥಸ್ವಾಮಿ ದೇವಸ್ಥಾನದ ಯಾಗಶಾಲೆಯ ದ್ವಾರಬಂಧದಲ್ಲಿ ಒಂದು ಅಪ್ರಕಟಿತ ಶಾಸನವಿದೆ.
ಶಾಸನವು ೩ ಸಾಲುಗಳಲ್ಲಿ, ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಲಿಪಿಯು ೧೮ನೇ ಶತಮಾನವನ್ನು ಹೋಲುತ್ತದೆ. ಶಾಸನವು ನಿಡಗಲ್ಲು ಮಹಾನಾಯಕಚಾರ‍್ಯರಾದ ನಿಡಗಲ್ಲು ಇಮ್ಮಡಿ ತಿಮ್ಮಣ್ಣ ನಾಯಕನು ಯಾಗಶಾಲೆಯನ್ನು ಕಟ್ಟಿಸಿದ ವಿಷಯವನ್ನು ತಿಳಿಸುತ್ತದೆ. ಆದರೆ ಈ ಯಾಗಶಾಲೆಯ ಕಂಬಗಳನ್ನು ನೋಡಿದರೆ ಇದು ಅವರ ಕಾಲದಲ್ಲಿ ನಿರ್ಮಿತವಾದಂತೆ ಕಂಡುಬರುವುದಿಲ್ಲ. ಆದರೆ ಅದಾಗಲೇ ಅಸ್ವಿತ್ವದಲ್ಲಿದ್ದ ಪೇಲುಬಂಡೆಯ ರಂಗನಾಥ ಸ್ವಾಮಿಯ (ನೊಳಂಬರ ಕಾಲದಲ್ಲಿ ರಚನೆ) ಶಿಥಿಲವಾದ ಪಳೆಯುಳಿಕೆ ಉಪಯೋಗಿಸಿ ಅಥವಾ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಉಪಯೋಗಿಸಿ ಉಳಿದ ಕಂಬಗಳಿಂದ ಈ ಯಾಗಶಾಲೆಯನ್ನು ನಿರ್ಮಿಸಿರಬಹುದು. ನಿಡಗಲ್ಲು ನಾಯಕರ ವಂಶಾವಳಿಯಲ್ಲಿ ಹಲವಾರು ಜನ ತಿಮ್ಮಣ್ಣನಾಯಕರು ಬಂದರೂ ಹರತಿ ವಂಶಾವಳಿಯ ವೀರತಿಮ್ಮಣ್ಣ ನಾಯಕನೇ ಇರಬಹುದು. ಈತನು ೧೭೫೮ ರಿಂದ ೧೭೮೫ರವರೆಗೆ ಆಳ್ವಿಕೆ ನಡೆಸಿರುವನು.
ಶಾಸನ ಪಾಠ
೧        ಶುಭಮಸ್ತು ಪಾರ್ಥಿವ ಸಂವತ್ಸರದ ಮಾಘ ಶುಧ ೫ ಲೂ ಶ್ರೀ ಮನ್ಮಹಾನಾಯಕಾಚಾರ‍್ಯರಾದ ನಿಡುಗಲ ಯಿಮಡಿ ತಿಮಣ್ಣ ನಾಯ
೨  ಕ ಅಯ್ಯನವರ ರಾಯಸದ ರಾಂಯಣನೂ ಕಟ್ಟಿಸಿದ ಪೆಯಲಬಂಡೆ ರಂಗನಾಥನ ಯಾಗಶಾಲೆಯ ಬಾಗಿಲಿ ವಾ
೩        ವಾಡದ (ಅಂಕಣ ಕ) ಮಂಗಳ ಮಹಾ ಶ್ರೀಶ್ರೀ ರಾಮಚಂದ್ರ ಸಹಾಯ
[ಶಾಸನ ಓದಲು ನೆರವಾದ ಸುಂಕಂ ಗೋವರ್ಧನ, ಡಾ. ಪಿ.ವಿ. ಕೃಷ್ಣಮೂರ್ತಿ ಹಾಗೂ ಡಾ. ಬಿ. ರಾಜಶೇಖರಪ್ಪರವರಿಗೆ ಕೃತಜ್ಞತೆಗಳು.]

­               ಪ್ರಾಂಶುಪಾಲರು, ಎಸ್.ಎಂ.ಆರ್.ಪಿ.ಯು. ಕಾಲೇಜು, ಕಳ್ಳಂಬೆಳ್ಳ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ-೫೭೨೧೨೫.







Friday, February 21, 2014

ಕಳಶೇಸ್ವರ ದೇಗುಲದ ನಿರೂಪಗಳು


ಕಳಸೇಶ್ವರ ದೇವಾಲಯದ ನಿರೂಪಗಳು
ಜಿ.ವಿ.ಕಲ್ಲಾಪುರ
‘ಕಳಸ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ೬೦ ಕಿ.ಮೀ. ದೂರದಲ್ಲಿದೆ. ಭದ್ರಾನದಿಯ ಬಲದಂಡೆಯ ಮೇಲಿನ ಈ ಗ್ರಾಮ ಇತಿಹಾಸಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ಕಳಸೇಶ್ವರ ಅಥವಾ ಕಳಸನಾಥ ದೇವಾಲಯವಿದೆ. ಈ ಪ್ರದೇಶದಲ್ಲಿ ಕೋಟಿತೀರ್ಥ, ರುದ್ರತೀರ್ಥ, ಅಂಬುತೀರ್ಥ, ನಾಗತೀರ್ಥ ಮತ್ತು ವಸಿಷ್ಠತೀರ್ಥಗಳೆಂಬ ಐದು ತೀರ್ಥಗಳಿವೆ. ಕಳಸವು ಪಂಚ ಶೈವ ಕ್ಷೇತ್ರಗಳಲ್ಲೊಂದೆಂದು ಗುರುತಿಸಲಾಗಿದೆ. ಈ ಪ್ರಾಂತವನ್ನು ಸಾಂತರ ಭೈರರಸವೊಡೆಯನು ಆಳುತ್ತಿದ್ದನೆಂದು ತಿಳಿದು ಬರುತ್ತದೆ.
ಕಳಸದ ಪೂರ್ವದಿಕ್ಕಿನ ಒಂದು ಸಣ್ಣಗುಡ್ಡದ ಮೇಲೆ ಕಳಸೇಶ್ವರ ದೇವಾಲಯವಿದೆ. ಸುತ್ತಲಿನ ಪ್ರಾಕಾರವನ್ನು ಹೊಸದಾಗಿ ನಿರ್ಮಿಸಲಾಗಿದೆ. ಮುಂದಿನ ಮಂಟಪವು ಹಳೆಯದಾಗಿದೆ. ಪ್ರಧಾನ ದೇವಾಲಯವು ವಿಜಯನಗರ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಇದನ್ನು ಸಾಂತರಸರು ಜೀರ್ಣೋದ್ಧಾರ ಮಾಡಿದ್ದಾಗಿ ತಿಳಿದು ಬರುತ್ತದೆ. ಗರ್ಭಗೃಹ, ನವರಂಗ, ಮುಖಮಂಟಪ, ಸಿಂಹಯಾಳಿಗಳಿಂದ ಕೊಡಿದೆ. ಭುವನೇಶ್ವರಿಯನ್ನು ಕಲಾತ್ಮಕವಾಗಿ ರಚಿಸಲಾಗಿದೆ. ಇಲ್ಲಿ ಗಣಪತಿ ಮತ್ತು ಅಗಸ್ತ್ಯೇಶ್ವರ ದೇವಾಲಯಗಳಿವೆ. ಗಣಪತಿ ದೇವಾಲಯವು ಹೊಯ್ಸಳ ಶೈಲಿಯಲ್ಲಿದೆ. ಶಿಖರವಿದೆ. ಕ್ಷೇತ್ರಪಾಲ ಮತ್ತು ಪಾರ್ವತಿ ದೇವಾಲಯಗಳಿಂದ ಕೂಡಿದೆ.
ಕಳಸದಲ್ಲಿ ವೆಂಕಟರಮಣ, ಆಂಜನೇಯ, ವೀರನಾರಾಯಣ, ಗೋಪಾಲಕೃಷ್ಣ, ಗಂಗಾಧರೇಶ್ವರ, ಗಣಪತಿ, ಚೆನ್ನಕೇಶವ, ಬಿಂದುಮಾಧವ, ದುರ್ಗಾ, ಕಾಲಭೈರವ, ಚಂದ್ರನಾಥ ಜೈನ ಬಸದಿಗಳಿವೆ. ಕಳಸಕ್ಕೆ ಸಮೀಪದಲ್ಲಿಯೇ ಪ್ರಸಿದ್ಧವಾದ ಅನ್ನಪೂರ್ಣೇಶ್ವರಿ ಕ್ಷೇತ್ರವಿದೆ.
ಕಳಸೇಶ್ವರ ದೇವಾಲಯದಲ್ಲಿದ್ದ ಕಡತಗಳನ್ನು ಕೆಳದಿ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಇವು ಅಪರೂಪದ ಐತಿಹಾಸಿಕ ದಾಖಲೆಗಳಾಗಿವೆ. ಈ ಕಡತಗಳಲ್ಲಿ ದೇವಾಲಯಕ್ಕೆ ಸಂಬಂಧಿಸಿದ ದಿನನಿತ್ಯದ ಲೆಕ್ಕ ಪತ್ರಗಳು, ದೇವಾಲಯಕ್ಕೆ ಬಂದ ಧಾನ್ಯಗಳ ವಿವರಗಳು, ವರ್ಷಂಪ್ರತಿ ನಡೆಯುತ್ತಿದ್ದ ವಿವಿಧ ಉತ್ಸವಗಳ ವಿವರಗಳು, ಉಪಾದಿವಂತರು ತಮ್ಮ ಉಪಾದಿಗಳನ್ನು ಬೇರೆಯವರಿಗೆ ವಹಿಸಿಕೊಟ್ಟ ನಿರೂಪಗಳು ಇತ್ಯಾದಿ ಅನೇಕ ವಿಚಾರಗಳು ದಾಖಲಾಗಿವೆ. ಅವುಗಳಲ್ಲಿ ಉಪಾದಿಗೆ ಸಂಬಂಧಿಸಿದ ಮೂರು ನಿರೂಪಗಳನ್ನು ಆಯ್ದು ಇಲ್ಲಿ ಕೊಡಲಾಗಿದೆ.
ನಿರೂಪ ೧
೧.       ಕಲಸೇಶ್ವರಸ್ವಾಮಿಯವರು
೨.       ಬಾಳೆಹೊಂನ್ನೂರು ವೆಂಕಪ್ಪಗೆ ಬರೆಶಿ ಕಳುಹಿಸಿದ ನಿರೂಪಾ ಸ್ವಸ್ತಶ್ರೀಜಯಾಭ್ಯುದಯಾ
೩.       ಶಾಲಿವಾಹನ ಶಕವರುಷ ೧೭೬೧ನೆ ಪರಿವರ್ತ ಮಾನಕೆ ಸಲ್ಲುವ ವಿಕಾರಿನಾಮಸಂವತ್ಸರದ
೪.       ಮಾಘಶು ೨ ಗುರುವಾರ್ರದಲ್ಲು ಭಂಡಾರದ ಲೇಖಕೆ ಬರೆಸಿಯಿರವದ್ದು ಲಕ್ಕವಳ್ಳಿತ್ತಾಲೂಕ್ಕೂ
೫.       ಆರುವಳಿ ಮಾಗಣೆ ಬೈಸಗಾರ್ರು ಗ್ರಾಮದಲ್ಲು ಯಿರ್ರುವ ಗದೆ ಖ೬ಕ್ಕೆ ಸಿಸ್ತು
೬.       ಗ ೩ಲೂ ಮೂರ್ರುವರಹಾಲು ಆರ್ರು ಹಣವಿನ ಭೂಮಿಯಲ್ಲೂ ನಿನೂ ಸಾಗುವಳಿಮಾ
೭.       ಡುವಗದೆ ಖ||ಂ ಹೆ ಸಿಸ್ತು ಗ ೧೬೦ ೮|= ವರಾಹಾಲು ನಾಲ್ಕು ಹಣೌ ವಂದ್ದು
೮.       ಹಾಗ ಉ ಮೂರ್ರು ವಿಸ ಕಂದಾಯ ಬರ್ರು ಹಣಕ್ಕೆ ಸಂನಿದ್ಧಿಯಲ್ಲು ನಿತ್ಯಗಂ
೯.       ಗಾ ಸ್ನಾನದ ಉಪಾದಿಗೆ ಅಡಿಗಳ ಪುಟ್ಟರಾಮಾಜೋಯಿಸಗೆ ಅಪ್ಪಣೆ ಆಗಬೆಕೆಂ
೧೦.     ದಾಗಿ ಬಿಂನ್ನವವಂ ಮಾಡಿಕೊಂಡದಕ್ಕೆ ನಿನ್ನ ಅಪೆಕ್ಷ ಪ್ರಕಾರ ಪುಟ್ಟರಾಮಾಜೋಯಿಸ
೧೧.     ಗೆ ನಿತ್ಯ ಗಂಗಾಸ್ನಾನದ ಉಪಾದಿ ಬಗೆ ಕಟಲೆ ಮಾಡಿಶಿಯಿರ್ರುತ್ತದೆ| ಯೀಗ ಸಾ
೧೨.     ಗವಳಿ ಆಗಿಯಿರ್ರುವ ಗದ್ದೆ ಸಿಸ್ತಿನ ಹಣ ಹೊರತ್ತೂ ಯಿಂನ್ನೂಯಿರ್ರುವ ಗದ್ದೈ
೧೩.     ಯುಂ ಸಾಗುವಳಿಮಾಡ್ಸಿವುದು ಯೀಗ ಬರ್ರುವ ಹಣ ಗ ೧೬೪||= ವಂದ್ದು ವರ
೧೪.     ಹ ರಾ ಹಾಗೂ ಮೂರ್ರುವೀಸ್ವನ್ನೂ ಯೀಪುಟ್ಟರಾಮಾಜೋಯಿಸ
೧೫.     ಸ್ತು ವಂಶಪಾರಂಪರ್ಯಾವಾಗಿ ಕೊಟ್ಟುಕೊಂದು  ಯಿಂನ್ನೂಯಿರ್ರುವಗದೆ ಸಾಗು
೧೬.     ಂದು ಉತ್ಸವಕೆ ಉಪಯುಕ್ತ ಆಗುವಂತೆ ನಡದ್ದು
ಈ ದಾಖಲೆಯು ಕ್ರಿ.ಶ.೧೮೩೯ರ ಡಿಸೆಂಬರ್ ೮ ಭಾನುವಾರ ತಾರೀಖಿಗೆ ಸಮಾನವಾಗುತ್ತದೆ. ಇಲ್ಲಿ ಉಲ್ಲೇಖಿತವಾಗಿರುವ ಬಾಳೆಹೊನ್ನೂರು ವೆಂಕಪ್ಪ ಎಂಬುವ ವ್ಯಕ್ತಿ ರೆವಿನ್ಯೂ ಅಧಿಕಾರಿಯಾಗಿದ್ದಾನೆ. ಇದರಲ್ಲಿ ಗಂಗಾಸ್ನಾನದ ಉಪಾದಿಯನ್ನು ಅಡಿಗಳ ಪುಟರಾಮಾಜೋಯಿಸಗೆ ವಹಿಸಿಕೊಡುವಂತೆ ಆದೇಶಿಸಲಾಗಿದೆ. ಇದರಲ್ಲಿ ಅವನಿಂದ ಪಡೆಯಬೇಕಾದ ತೆರಿಗೆಗಳ ಭೂಮಿಗಳ ವಿವರಗಳನ್ನು ದಾಖಲಿಸಿಲಾಗಿದೆ.
ನಿರೂಪ -೨
೧.       ಶ್ರೀಕಲಸೇಶ್ವರಸ್ವಮಿಯರ್ರು
೨.       ಆಡುವಳಿ ಮಾಗಣಿಸ್ತಳ ಶಾನಭಾಗವಸ್ತಾರ ಕಳಸೈನಮಗ ರಾಮೈ
೩.       ಗೆ ಬರಶಿ ಕಳುಹಿದ ನಿರೂಪ ಸ್ವಸ್ತಿಶ್ರೀಜಯಾಭ್ಯುದಯ ಶಾಲಿವಾಹನಶಕ
೪.       ವರ್ರುಷ ೧೭೬೧ನೆ ವರ್ತಮಾನಕೆ ಸಲುವ ವಿಕಾರ್ರಿ ನಾಮ ಸಂವತ್ಸರದ ಮಾಘ
೫.       ಶು ೩ಯು ಶುಕ್ರವಾರದಲ್ಲು ಭಂಡಾರದ ಲೆಖಕೆ ಬರೆಶಿಯಿರ್ರುವದೂ
೬.       ನಿಂನ ಮಾಗಣಿ ಪೈಕಿ ಬಾಳೆಹೊಂನೂರ್ರು ವೆಂಕಪ್ಪಯ್ಯನ್ನೂ ಸಾಗುಮಾಡುವ ಬೈ
೭.       ಸ ಗಾರ್ರುಗ್ರಾಮದಲ್ಲು ಉತ್ತಾರ ಗದ್ದೆ ೫೬ಕ್ಕೆ ಸಿಸ್ತು ಗ ೩| ಮೂರ್ರುವರಹಾ
೮.       ಉ ಆರ್ರುಹಣವಿನಲ್ಲು ಗದ್ದೆ ಬಿಜವರ್ರಿ ೫ ೨||೦ ಸಿಸ್ತು ಗ೧೬೪|= ವಂದು
೯.       ವರಹಾಲು ನಾಲ್ಕು ಹಣಾ ಹಾಗೂ ಮೂರ್ರು ವಿಸಕ್ಕೆ ನಿತ್ಯದಲ್ಲೂ ಗಂಗಾಸ್ನಾನದ ಬಗ್ಯೆ
೧೦.     ಅಡಿಗಳ ಪುಟರಾಮಾಜೋಯಿಸರಿಗೆ ಅಪ್ಪಣೆ ಆಗಬೆಕೂಯಂಬದಾಗಿ ಬಾಳೆ
೧೧.     ಹೊಂನ್ನೂರು ವೆಂಕಪ್ಪನು ಅಪೇಕ್ಷೆ ಉಳವನಾಗಿ ಬಿಂನಹಂ ಮಾಡಿ ಕೊಂಡವ
೧೨.     ರ್ರಿಂದ ಅವನ ಅಪೆಕ್ಸೆ ಪ್ರಕಾರ ಗಂಗಾಸ್ನಾನದ ಉಪಾದಿ ಬಗ್ಯೆ ಅಡಿಗಳ ಪುಟರಾಂ
೧೩.     ಮಾ ಜೋಯಿಸಗೆ ಕಾಲಂಪ್ರತಿಯಲ್ಲೂ ಕೊಟ್ಟು ನಡೆಶಿಬರ್ರುವಂತೆ ಕಟಳೆ
೧೪.     ಮಾಡಿಸಿಯಿರ್ರುತ್ತೆ ಯಿiಗ ಸಾಗುವಳಿಯಾಗಿರ್ರುವ ಗದ್ದೆ ಶಿಸ್ತಿನ
೧೫.     ಗಣ ಹೊರತ್ತೂಯಿಂನ್ನೂಯಿರ್ರುವಗದ್ದೆ ಸಾಗುವಳಿ ಮಾಡಿಶಿ ಭಂಡಾ
೧೬.     ರಕೆ ಹಣಬಂದು ಉತ್ಸವಕ್ಕೆ ಉಪಯುಕ್ತ ಆಗುವಂತೆ ಸಹಾ ಬಾಳವ
೧೭.     ದಾಗಿಸದಂ ಇಸ್ತಾಳ ಶ್ಯಾ|ಗು|ಲಕ್ಷ್ಮೀನರಸೈನ ಅಕ್ಷರದಲ್ಲು ಬರಕೊಟ್ಟ ಪಟಿನಕಲು
ಈ ದಾಖಲೆ ಕ್ರಿ.ಶ.೧೮೩೯ ಡಿಸೆಂಬರ್ ೯ ಸೋಮವಾರಕ್ಕೆ ಸರಿ ಹೊಂದುತ್ತದೆ. ಈ ಹಿಂದಿನ ದಾಖಲೆಯಲ್ಲಿ ಗಂಗಾಸ್ನಾನದ ಉಪಾದಿ ಬಗ್ಗೆ ಕೇಳಿಕೊಂಡಿದ್ದಕ್ಕೆ ಉತ್ತರವಾಗಿ ಈ ನಿರೂಪ ಹೊರಟಿದೆ. ಅದರಲ್ಲಿನ ಬೇಡಿಕೆಯನ್ನು ಇಲ್ಲಿ ಬದ್ದ ಆಗಿಸಲಾಗಿದೆ. ಅಡಿಗಳ ಪುಟರಾಮಾ ಜೋಯಿಸರಿಗೆ ಗಂಗಾಸ್ನಾನದ ಉಪಾದಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ವಹಿಸಿಕೊಡಲಾಗಿದೆ. ಇದಕ್ಕಾಗಿ ನೀಡಿದ ಭೂಮಿಯಿಂದ ಬರುವ ಉತ್ಪತ್ತಿಗೆ ಸಂಬಂಧಪಟ್ಟ ತೆರಿಗೆಯನ್ನು ಶ್ರೀಕಳಸೇಶ್ವರ ದೇವಾಲಯದ ಭಂಡಾರಕ್ಕೆ ಒಪ್ಪಿಸುವುದು ಹಾಗೂ ಆ ಹಣವನ್ನು ಉತ್ಸವಗಳಿಗೆ ಬಳಸುವುದು ಎಂದು ಆದೇಶಿಸಲಾಗಿದೆ.
ನಿರೂಪ - ೩
೧.       ಶ್ರೀಕಲಸೇಶ್ವರಸ್ವಾಮಿಯರ್ರು
೨.       ಶಾರ್ವರಿ ಸಂವತ್ಸರದ ಮಾಘಬ ೪ಯು ಕುಜವಾರದಲು ದೆವಸ್ತಾನ ಮಜ್ಜುರ್ರು
೩.       ಮೇಲಿನ ಅಗ್ರಗಾರದಲು ಯಿರ್ರುವ ಶಿಂಗಾಭಟನ ಮಗ ರಾಂಭಟರಿಗೆ ಬರಶಿಕೊಟ ನಿ
೪.       ರ್ರುಪಾ ಅದಾಗಿ ನಂಮ್ಮ ಉತ್ತಾರದ ಸ್ವಾಸ್ತಿವಳಗಣ ಹೊಸಕೆರ್ರೆ ಗ್ರಾಮದ ಪೈಕಿ ನಿಗ
೫.       ದಿ ಮೈಶಿರ್ರಿ ಬಾಬ್ತು ಯಡದಾಳು ಪುಟ್ಟನ ವಗಣಂಗತದಿಂದಾ ವಿರೋಧಿಸಂವ
೬.       ತ್ಸರಲಾಗ್ಯಾತ್ತು ನಾವಗಾಲು ಬಂಜರ್ರುಯಿರ್ರುವ ವಿರಕ್ತಮಠದ ಪ್ರಭುಮಾನ್ಯ ಪಾ
೭.       ಲು ಗದ್ದೆ ಖ೫ ಅಂಕೆ ಸಿಸ್ತು ಪೆಟೆಯಿಂದಾ ಗ ೨ ||||= ಯರಡುವರಹಾರ ಆರ್ರುಹಣ ಯರಡು
೮.       ಯರಡು ಹಾಗ ಯರಡುವೀಸ ಶಿವ್ಯಾ ಮಾವಿನಕೆರ್ರೆ ಗ್ರಾಮದ ಪೈಕಿಬಳಗೂಡು ಐಭಟನೂ
೯.       ಜನಾಯ ಕೊಟಬಾಬ್ತು ಯಡದಾಳಲು ಯಿರ್ರುವ ಗ** ೮||೦ಕೆ ಸಿಸ್ತು ಗ ೨೬೪ ದಿಪದ
೧೦.     ಹೊಂನಬದಿ ಬಾಬ್ತು ಗ ೧೬೦ ಉಭಯಂ ಗ ೨೬೪ ಅಂತ್ತೂ ಗದೆ ಖಂಡ ೧೩||೦ ಗೆ ಸಿಸ್ತು ಗ೫೦||
೧೧.     ದಿಪಾದ ಹೊಂನ ಬದಿ ಗ ೧೬೦ ಉಭಯಂ ಗ೬೬೦||= ಆರ್ರುವರಾಹಾಉ ಯರಡು ಹಾ
೧೨.     ಗ ಉ ಯರಡು ವಿಸದ ಭೂಮಿಯನ್ನು ನನಗೆ ಸಲತಕ ಉಪಾದಿಸಂಬಳಕೆ ಬಾಳುತ್ತಾ
೧೩.     ರಕೆ ಅಪ್ಪಣೆ ಆಗಬೆಕೆಂಬುದಾಗಿ ವಿಳಂಬಿ ಸಂವತ್ಸರದ ವೌಶಾಖ ಶು ೨ ಯು ಗು
೧೪.     ರ್ರುವಾರದಲು ಕೊಪ್ಪದ ಹೋಬಳಿ ಗಂಜಿದಾರ ಕಸ್ತೂರಿ ರಂಗೈಗೆ ಬರಕೊಡು ಅರ್ಜಿ
೧೫.     ಮೆರ್ರಿಗೆ ಯಿತ್ತಾರಿಕಿನಲು ನಿಂನಕೈಯ್ಯಲು ಕಾಣಿಕೆತ್ತೆಗೆದು ಕೊಂಡದು ಯಿಕೆರ್ರಿ ಗ ೨೬೦
೧೬.     ಯರಡು ವರಹಾತ್ತೆಗೆದು ಕೊಂಡು ಯಿಇಸ್ತಳದ ಭೂಮಿಯನ್ನೂ ನಿನಗೆ ಸಲತಕ
೧೭.     ಉಪಾದಿ ಸಂಬಳದ ಬಗ್ಗೈ ಬಾಳುತ್ತಾರಕೆ ದಯಾಪಾಲಿಶಿಯಿರ್ರುವದರ್ರಿಂದಾ ನಿನ್ನು
೧೮.     ಯೀ ಭೂಮಿಯಂನ್ನು ಚೌ ಮೂಲಗಂಧವಾಗಿ ಸಾಗುವಳಿ ಮಾಡಿಕೊಂದು ನಿಂನ
೧೯.     ಸಂತಾನ ಪಾರಂಪರ್ಯವಾಗಿ ಅನುಭವಿಸಿ ಕೊಂಡು ಬಾಹಾದುಯಮ್ದು ಬ
೨೦.     ರಶಿ ಕೊಟ ನಿರ್ರೂಪ.
          ಈ ದಾಖಲೆಯು ಕ್ರಿ.ಶ.೧೮೪೦ರ ಡಿಸೆಂಬರ್ ೧೨ರ ಶನಿವಾರಕ್ಕೆ ಸರಿಹೊಂದುತ್ತದೆ. ಕಳಸ ಅಗ್ರಹಾರದ ಶಿಂಗಾಭಟರ ಮಗ ರಾಮಭಟರಿಗೆ ಬಾಳುತ್ತಾರವನ್ನು ಕಾಣಿಕೆ ತೆಗೆದುಕೊಂಡು ಬರಕೊಟ್ಟಿರುವ ನಿರೂಪದ ಪ್ರತಿ. ಕ್ರಿ.ಶ.೧೮೩೯ರ ಹೇವಿಳಂಬಿ ಸಂವತ್ಸರದ ಏಪ್ರಿಲ್ ೧೫ ಸೋಮವಾರ ಬರೆದುಕೊಂಡ ಅರ್ಜಿಯನ್ನು ಶಾರ್ವರಿ ಸಂವತ್ರ್ಸರದ ಕ್ರಿ.ಶ.೧೮೪೦ರಲ್ಲಿ ಒಪ್ಪಿಗೆ ನೀಡಿ ಆದೇಶಿಸಲಾಗಿದೆ.

­               ಕೆಳದಿ ವಸ್ತು ಸಂಗ್ರಹಾಲಯ, ಕೆಳದಿ-೫೭೭೪೦೧.